Tag: ಬೆಂಗಳೂರು ಮಳೆ

  • ಬೆಂಗಳೂರಿನ ಮಳೆಗೆ ಮಹಿಳೆ ಬಲಿ-ಧರೆಗುರುಳಿದ ಮರಗಳು

    ಬೆಂಗಳೂರಿನ ಮಳೆಗೆ ಮಹಿಳೆ ಬಲಿ-ಧರೆಗುರುಳಿದ ಮರಗಳು

    ಬೆಂಗಳೂರು: ಇಂದು ಸಂಜೆ ಉದ್ಯಾನ ನಗರಿಯಲ್ಲಿ ಸುರಿದ ಮಳೆಗೆ ಮಹಿಳೆ ಸಾವನ್ನಪ್ಪಿದ್ದಾರೆ.

    22 ವರ್ಷದ ಶಿಲ್ಪಾ ಸಾವನ್ನಪ್ಪಿದ ಮಹಿಳೆ. ಮಳೆಯ ಅಬ್ಬರಕ್ಕೆ ನಿರ್ಮಾಣ ಹಂತದ ಕಟ್ಟಡದ ಇಟ್ಟಿಗೆ, ಕಲ್ಲುಗಳು ಪಕ್ಕದ ಮನೆಯ ಮೇಲೆ ಬಿದ್ದಿವೆ. ಪರಿಣಾಮ ಮನೆಯಲ್ಲಿದ್ದ ಶಿಲ್ಪಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದ ಧನುಷ್ ಎಂಬ ಹುಡುಗ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಬೆಂಗಳೂರಿನ ಮೆಜೆಸ್ಟಿಕ್, ಮಲ್ಲೇಶ್ವರಂ, ಯಶವಂತಪುರ, ನಾಗರಭಾವಿ, ಪೀಣ್ಯ, ಯಲಹಂಕ, ಹೆಬ್ಬಾಳ, ನಾಗವಾರ, ಕೆ.ಆರ್.ಪುರಂ, ಜಯನಗರ, ಜೆಪಿನಗರ, ಬಿಟಿಎಂ ಲೇಔಟ್ ಸೇರಿದಂತೆ ಬಹುತೇಕ ಭಾಗಗಳಲ್ಲಿ ಜೋರು ಮಳೆಯಾಗಿದೆ. ಯಶವಂತಪುರದಲ್ಲಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ ಮೇಲೆ ಮರ ಬಿದ್ದಿದೆ, ಜೊತೆಗೆ ಮರದ ಕೊಂಬೆಗಳು ಬಿದ್ದು ಎರಡು ಕಾರ್ ಗಳು ಜಖಂ ಆಗಿವೆ. ಯಲಹಂಕದಲ್ಲಿ ಎರಡು ಹಾಗೂ ಆಡುಗೋಡಿ ಹಾಗೂ ಗೊರಗೊಂಟೆಪಾಳ್ಯದಲ್ಲಿ ಒಂದು ಮರ ಬಿದ್ದಿದೆ. ಬಿಟಿಎಂ ಲೇಔಟ್ ನಲ್ಲಿ ಟ್ರಾನ್ಸಫಾರಂ ಮೇಲೆ ಮರ ಬಿದ್ದು ಇಡೀ ಬಿಟಿಎಂ ಲೇಔಟ್ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

    ಸಂಜೆ ಸುರಿದ ಭಾರೀ ಮಳೆಗೆ ವಾಹನ ಸವಾರರು ನರಕ ಅನುಭವಿಸಿದ್ರು. ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳು ಭಾರೀ ಟ್ರಾಫಿಕ್ ಜಾಮ್ ಆಗಿತ್ತು. ಮಾಗಡಿ ರೋಡ್ ಸುಂಕದ ಕಟ್ಟೆಯಲ್ಲಿ ನಾಲ್ಕು ಅಡಿಯಷ್ಟು ಮಳೆ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಆಗಿತ್ತು. ಬೆಂಗಳೂರಿನ ಡಬಲ್ ರೋಡ್, ವಿಲ್ಸನ್ ಗಾರ್ಡನ್ ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದು, ಪಕ್ಕದಲ್ಲಿರುವ ಬಿಎಂಟಿಸಿ ಕ್ವಾಟರ್ಸ್ ಗೂ ನೀರು ನುಗ್ಗಿದೆ.

    ಕೊರೊನಾದ ನಡುವೆ ಇಂದು ಸಂಜೆ ಸುರಿದ ಮಳೆಯಿಂದ ಬೆಂಗಳೂರಿನ ಜನ ತತ್ತರಗೊಂಡಿದ್ದಾರೆ. ಇನ್ನೂ ಮೂರು ದಿನ ಮಳೆ ಇದೇ ರೀತಿ ಮುಂದುವರೆಯಲಿದೆ. ಸಂಜೆ ಮೇಲೆ ಮನೆಯಲ್ಲೇ ಇರಿ ಅಂತಾ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

  • ಬೆಂಗ್ಳೂರಿನಲ್ಲಿ ಭಾರೀ ಮಳೆ: ನಿಮ್ಮ ಊರಿನಲ್ಲಿ ಹೇಗಿದೆ?

    ಬೆಂಗ್ಳೂರಿನಲ್ಲಿ ಭಾರೀ ಮಳೆ: ನಿಮ್ಮ ಊರಿನಲ್ಲಿ ಹೇಗಿದೆ?

    ಬೆಂಗಳೂರು: ಬಿಟ್ಟುಬಿಡದೇ ಸುರಿಯುತ್ತಿರುವ ಶತಮಾನದ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. ಶುಕ್ರವಾರ ರಾತ್ರಿಯಿಡಿ ಸುರಿದ ಭಾರೀ ಮಳೆಯಿಂದ ಐಟಿ ಸಿಟಿ ಈಗ ಗುಂಡಿ ಸಿಟಿಯಾಗಿದೆ. ಬೆಂಗಳೂರು ಅಲ್ಲದೇ ರಾಜ್ಯದ ಹಲವಡೆ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಜಿಲ್ಲೆಗಳಲ್ಲಿ ಮಳೆ ಹೇಗಿದೆ ಎನ್ನುವ ಮಾಹಿತಿ ಈ ವರದಿಯಲ್ಲಿದೆ.

    ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು, ಶುಕ್ರವಾರ ಇಡೀ ಜಿಲ್ಲೆಯಲ್ಲಿ ಕೇವಲ 0.2ಮಿ.ಮೀ. ಮಳೆ ಆಗಿದೆ. ಭದ್ರಾ ಅಣೆಕಟ್ಟೆ ಜಲಾನಯನ ವ್ಯಾಪ್ತಿಯಲ್ಲಿ ಮಳೆ ಕೊರತೆ ಇರುವ ಕಾರಣ ಮೋಡ ಭಿತ್ತನೆಗೆ ಭದ್ರಾ ಅಭಿವೃದ್ಧಿ ಪ್ರಾಧಿಕಾರ ಸರ್ಕಾರವನ್ನು ಕೋರಿದೆ.

    ಕಲಬುರಗಿ: ಈ ವರ್ಷವು ಸಹ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಆದರೆ ಕಳೆದ 15 ದಿನಗಳಿಂದ ಸುರಿದ ಮಳೆಯಿಂದ ತೊಗರಿ ಬೆಳೆ ನಾಶವಾಗುತ್ತಿದೆ.

    ಧಾರವಾಡ: ಜಿಲ್ಲೆಯಲ್ಲಿ ಸಂಜೆ ಹೊತ್ತಿಗೆ ಮಳೆ ಆರಂಭವಾಗುತ್ತಿದೆ. ಸಂಜೆ ಧಾರಾಕಾರವಾಗಿ ಸುರಿಯುವ ಮಳೆ ರಾತ್ರಿ ಸ್ವಲ್ಪ ಜಿಟಿಜಿಟಿಯಾಗಿ ಬರುತ್ತಿದೆ. ಹತ್ತಿ ಬೆಳೆ ಸ್ವಲ್ಪ ಮಟ್ಟಿಗೆ ಹಾನಿಯಾಗಿದೆ. ಉಳಿದಂತೆ ಕೆರೆಗಳು, ಬೆಣ್ಣಿಹಳ್ಳ, ತುಪ್ರಿ ಹಳ್ಲ ತುಂಬಿ ಹರಿಯುತ್ತಿವೆ. ಕೆಲ ಗ್ರಾಮಗಳಲ್ಲಿ ಮಳೆಯಿಂದ ನೀರು ನುಗ್ಗಿದ್ದು ರಸ್ತೆಗಳಿಗೆ ಹಾನಿಯಾಗಿದೆ.

    ಯಾದಗಿರಿ: ಜಿಲ್ಲೆಯಲ್ಲಿ ಈ ತಿಂಗಳು ವಾಡಿಕೆ ಮಳೆಗಿಂತ ಶೇ.43 ಹೆಚ್ಚಾಗಿದೆ. ಜೀವ ನದಿಗಳಾದ ಭೀಮಾ, ಕೃಷ್ಣಾ ನದಿಗಳು ಮೈದುಂಬಿ ಹರಿಯುತ್ತಿದೆ. ಬಸವಸಾಗರ ಜಲಾಶಯವು ಸಂಪೂರ್ಣ ಭರ್ತಿಯಾಗಿದೆ. ಮಳೆಗೆ ಹತ್ತಿ, ಭತ್ತ ಹಾಗೂ ತೂಗರಿ ಬೆಳೆ ಹಾನಿಯಾಗಿದೆ.

    ಹಾವೇರಿ: ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಉತ್ತಮ ಮಳೆಯಾಗಿದೆ. ಜಿಲ್ಲೆಯ ತುಂಗಾಭದ್ರ, ವರದಾ ನದಿ ಸೇರಿದಂತೆ ಕೆರೆಗಳು ತುಂಬುತ್ತಿವೆ. ಜಿಲ್ಲೆಯಲ್ಲಿ ಮಳೆ ಹೆಚ್ಚಾದ ಹಿನ್ನೆಲೆ ಮೆಕ್ಕೆಜೋಳ ಮತ್ತು ಹತ್ತಿ ಬೆಳೆ ವಿವಿಧ ರೋಗ ಬಂದಿದ್ದು ಬೆಳೆ ನಷ್ಟವಾಗುತ್ತಿವೆ.

    ಕೊಪ್ಪಳ: ಹಳ್ಳದ ನೀರು ಹೊಲಕ್ಕೆ ನುಗ್ಗಿ ಅಂದಾಜು 5 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ, ಈರುಳ್ಳಿ, ಮತ್ತಿತರ ಬೆಳೆ ಚಿಕ್ಕಸಿಂದೋಗಿ, ಹಿರೇಸಿಂದೋಗಿಯಲ್ಲಿ ಜಲಾವೃತವಾಗಿ ಭಾರಿ ನಷ್ಟವಾಗಿದೆ. ಇನ್ನೊಂದೆಡೆ ಕೊಪ್ಪಳದ ಗಣೇಶನಗರದಲ್ಲಿ ಮನೆಗಳು ಜಲಾವೃತವಾಗಿದ್ದು, ರೈಲು ನಿಲ್ದಾಣದ ಬಳಿಯ ಹುಲಿಗಿ ಆಚಾರ್ಯ ಎಂಬವರ ಮನೆ ಮೇಲ್ಛಾವಣೆ ಕುಸಿದುಬಿದ್ದಿದೆ. ಜಿಲ್ಲೆಯ ಹೇಮಗುಡ್ಡ, ಮುಕ್ಕುಂಪಿ ಕೆರೆ ಸೇರಿದಂತೆ ಬಹುತೇಕ ಕೆರೆಕಟ್ಟೆಗಳು ತುಂಬಿದೆ. ಕಿರು ಜಲಪಾತಗಳು ಸೃಷ್ಟಿಯಾಗುತ್ತಿವೆ.

    ರಾಯಚೂರು: ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗಿದೆ. ಕಳೆದ ಮೂರು ವರ್ಷಗಳಿಂದ ಬರಗಾಲ ಅನುಭವಿಸಿದ್ದ ರೈತರು ಈಗ ಮಳೆಯಿಂದ ತತ್ತರಿಸಿದ್ದಾರೆ. ಬಹುತೇಕ ಹಳ್ಳಗಳು ತುಂಬಿ ರಸ್ತೆ ಸಂಪರ್ಕ ಕಡಿತಗೊಂಡಿವೆ. ಹೊಲಗದ್ದೆಗಳಿಗೆ ನೀರು ನುಗ್ಗಿ ನೂರಾರು ಕೋಟಿ ರೂಪಾಯಿ ಬೆಳೆ ಹಾನಿಯಾಗಿದೆ.

    ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಾಂತ ಈ ಭಾರೀ ಉತ್ತಮ ಮಳೆಯಾಗಿದೆ. ಜಿಲ್ಲೆಯಾದ್ಯಾಂತ ಹಳ್ಳ-ಕೊಳ್ಳಗಳು ತುಂಬಿದರೆ, ಕೆರೆಗಳು ಕೋಡಿ ಹರಿದಿದ್ದು ನದಿ ಪಾತ್ರಗಳು ಮರು ಜೀವ ಪಡೆದುಕೊಂಡಿವೆ. ಜಿಲ್ಲೆಯ ಕುಡಿಯುವ ನೀರಿನ ಮೂಲಗಳಾದ ಜಲಾಶಯಗಳು ಕೆರೆಗಳು ತುಂಬಿ ಕುಡಿಯುವ ನೀರಿನ ಅಭಾವ ನೀಗುವುದರ ಜೊತೆಗೆ ಅಂತರ್ಜಲದ ಅಭಿವೃದ್ಧಿ ಆಗಿದೆ. ಸತತ 7 ವರ್ಷಗಳಿಂದ ಬರಪೀಡಿತ ಜಿಲ್ಲೆಯಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಈ ಬರದ ಶಾಪದಿಂದ ವಿಮೋಚನೆ ಸಿಕ್ಕಿದೆ.

     

    ಮಂಡ್ಯ: ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿಂದ ಉತ್ತಮ ಮಳೆಯಾಗುತ್ತಿದೆ. ಆದರೆ ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದೆ. ಅಲ್ಲಲ್ಲಿ ಕೆಲ ಊರುಗಳಲ್ಲಿ ಮಳೆಯಾಗಿದೆ. ಆದ್ರೆ ಮಂಡ್ಯ ನಗರ ಸೇರಿದಂತೆ ಹಲವೆಡೆ ನಾಲ್ಕು ದಿನಗಳಿಂದ ಮಳೆಯಾಗಿಲ್ಲ.

    ಬಳ್ಳಾರಿ: ಜಿಲ್ಲೆಯಲ್ಲಿ ಕಳೆದ ರಾತ್ರಿ ಮೂರು ಗಂಟೆಗಳ ಕಾಲ ಮಳೆಯಾಗಿದೆ. ಬಳ್ಳಾರಿ ಗ್ರಾಮೀಣ ಕ್ಷೇತ್ರ. ಸಂಡೂರು. ಹಗರಿಬೊಮ್ಮನಹಳ್ಳಿ ಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿದೆ. ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ. ಕೆಲವಡೆ ಹಳೆಯ ಮನೆಗಳ ಗೋಡೆ ಕುಸಿದಿವೆ. ಯಾವೂದೇ ಪ್ರಾಣ ಹಾನಿ ಸಂಭವಿಸಿಲ್ಲ ಜಲಾಶಯ ತುಂಬಲು 5 ಅಡಿ ಮಾತ್ರ ಬಾಕಿ ಇದೆ.

    ಚಾಮರಾಜನಗರ: ಕಳೆದ 6 ವರ್ಷಗಳಿಂದ ಭೀಕರ ಬರಗಾಲಕ್ಕೆ ತುತ್ತಾಗಿದ್ದ ಚಾಮರಾಜನಗರದಲ್ಲಿ ಕಳೆದ ಎರಡು ತಿಂಗಳಿಂದ ಉತ್ತಮ ಮಳೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ 10 ವರ್ಷಗಳಿಂದ ತುಂಬದ ಜಲಾಶಯಗಳು ಹಾಗೂ ಕೆರೆ ಕಟ್ಟೆಗಳು ಭರ್ತಿಯಾಗಿವೆ.

    ದಕ್ಷಿಣ ಕನ್ನಡ: ದಕ್ಷಿಣ ಕನ್ನಡದಲ್ಲಿ ಮಳೆ ಕಡಿಮೆಯಾಗಿದ್ದು, ಕೆಲವೊಮ್ಮೆ ಚದುರಿದಂತೆ ಮಳೆಯಾಗುತ್ತಿದೆ.

    ಚಿಕ್ಕಬಳ್ಳಾಪುರ ಮಳೆಯ ದೃಶ್ಯಗಳು:

    ಬಳ್ಳಾರಿ ಮಳೆಯ ದೃಶ್ಯಗಳು:

    ಹಾವೇರಿ ಮಳೆಯ ದೃಶ್ಯಗಳು:

     

    ಧಾರವಾಡ ಮಳೆಯ ದೃಶ್ಯಗಳು:

    ರಾಯಚೂರು ಮಳೆಯ ದೃಶ್ಯಗಳು:

  • ಬೆಂಗ್ಳೂರಿನಲ್ಲಿ ಭಾರೀ ಮಳೆ: ರಾಜಕಾಲುವೆಯಲ್ಲಿ ಕೊಚ್ಚಿ ಹೋದ್ರು ಯುವಕರು – ಎಲ್ಲೆಲ್ಲಿ ಏನಾಗಿದೆ?

    ಬೆಂಗ್ಳೂರಿನಲ್ಲಿ ಭಾರೀ ಮಳೆ: ರಾಜಕಾಲುವೆಯಲ್ಲಿ ಕೊಚ್ಚಿ ಹೋದ್ರು ಯುವಕರು – ಎಲ್ಲೆಲ್ಲಿ ಏನಾಗಿದೆ?

    ಬೆಂಗಳೂರು: ರಾಜ್ಯದಲ್ಲಿ ಮಳೆಯ ಅಬ್ಬರ ಕಡಿಮೆ ಆಗುತ್ತಿಲ್ಲ.  ಸಿಲಿಕಾನ್ ಸಿಟಿಯಲ್ಲಿ ಮಳೆಯ ಅಬ್ಬರ ಹೇಳತೀರದಾಗಿದೆ. ಸಂಜೆಯಿಂದ ಬೆಂಗಳೂರಲ್ಲಿ ಧೋ ಎಂದು ಮಳೆ ಸುರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದ್ದು ನೀರಿನಲ್ಲಿ ಇಬ್ಬರು ಕೊಚ್ಚಿಹೋಗಿದ್ದಾರೆ.

    ಕುರುಬರಹಳ್ಳಿ ಸರ್ಕಲ್ ವೆಂಕಟೇಶವರ ದೇವಾಲಯ ಬಳಿ ರಾಜಕಾಲುವೆ ನೀರಿನಲ್ಲಿ ಇಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಸಂಜೆ 6 ಗಂಟೆಗೆ ಶುರುವಾದ ಭಾರೀ ಮಳೆ ಇಲ್ಲಿ ತನಕ ಮೋಡವೇ ಕುಸಿದು ಬಿದ್ದ ಹಾಗೆ ಸುರಿಯುತ್ತಿದೆ. ಹೆಬ್ಬಾಳ, ಮತ್ತೀಕೆರೆ, ಶಿವಾನಂದ, ಚಂದ್ರಲೇಔಟ್, ಗೊರಗುಂಟೆಪಾಳ್ಯ, ಯಶವಂತಪುರ, ರಾಜ್‍ಕುಮಾರ್ ಸಮಾಧಿ, ಲಗ್ಗೆರೆ ಸುತ್ತಮುತ್ತ ಭಾರೀ ಮಳೆಯಾಗಿದೆ.

    ಶಿವಾನಂದ ಸರ್ಕಲ್‍ನ ರೈಲ್ವೆ ಅಂಡರ್‍ಪಾಸ್ ನೀರಿನಿಂದ ಜಲಾವೃತವಾಗಿದ್ದು, 2 ಕಾರುಗಳು ನೀರಿನಲ್ಲಿ ಮುಳುಗಿ ಹೋಗಿತ್ತು. ನದಿಯಂತೆ ಹರಿಯುತ್ತಿದ್ದ ನೀರಿನಲ್ಲಿ ಸಂಚರಿಸಲಾಗದೆ ವಾಹನಸವಾರರು ಪರದಾಡುವ ದೃಶ್ಯ ಸಾಮಾನ್ಯವಾಗಿದೆ.

    ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದ ನೆಲಮಾಳಿಗೆ ಜಲಾವೃತವಾಗಿದೆ. ಬಸ್‍ಗಳು ನಿಂತಲ್ಲೇ ನಿಂತಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ನೂರಾರು ಮನೆಗಳಿಗೆ ನೀರು ನುಗ್ಗಿದೆ. ಆರ್‍ಎಂಸಿ ಯಾರ್ಡ್ ಜಲಾವೃತವಾಗಿದೆ.

    ಹೆಬ್ಬಾಳ, ಹೆಣ್ಣೂರು ಕೆರೆಗಳು ಕೋಡಿ ಬಿದ್ದಿದ್ದು, ಹೆಬ್ಬಾಳ, ನಾಗವಾರ ಪ್ರದೇಶಗಳು ಅಕ್ಷರಶಃ ನದಿಗಳಾಗಿವೆ. ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆ ಸುರಿಯಲಿದೆ ಅಂತಾ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ನಗರವಾಸಿಗಳ ಜನಜೀವನ ಅಯೋಮಯವಾಗುವ ಲಕ್ಷಗಳು ಗೋಚರಿಸುತ್ತಿವೆ.

  • ಅರ್ಧಕ್ಕೆ ಮುಕ್ತಾಯಗೊಳಿಸಿ ಕಾಟಾಚಾರಕ್ಕೆ ಬೆಂಗ್ಳೂರು ರೌಂಡ್ಸ್ ಹೊಡೆದ ಸಿಎಂ!

    ಅರ್ಧಕ್ಕೆ ಮುಕ್ತಾಯಗೊಳಿಸಿ ಕಾಟಾಚಾರಕ್ಕೆ ಬೆಂಗ್ಳೂರು ರೌಂಡ್ಸ್ ಹೊಡೆದ ಸಿಎಂ!

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಕೊನೆಗೂ ಎಚ್ಚೆತ್ತುಕೊಂಡು ಸತತ ಮಳೆಯಿಂದ ತತ್ತರಿಸಿದ್ದ ಬೆಂಗಳೂರಿನ ಹಲವೆಡೆ ಇವತ್ತು ಕಾಟಾಚಾರಕ್ಕೆ ಎಂಬಂತೆ ರೌಂಡ್ಸ್ ಹೊಡೆದಿದ್ದಾರೆ. ಕೊನೆಗೆ ಅರ್ಧದಲ್ಲೇ ಸಿಟಿ ರೌಂಡ್ಸ್ ಮುಗಿಸಿ ಬೇರೊಂದು ಕಾರ್ಯಕ್ರಮಕ್ಕೆ ತೆರಳಿದ್ದಾರೆ.

    ಮಧ್ಯಾಹ್ನ 2.30ರ ವೇಳೆಗೆ ನಗರದ ಗೃಹ ಕಚೇರಿ ಕೃಷ್ಣಾದಿಂದ ಎರಡು ವೋಲ್ವೋ ಬಸ್ಸಿನಲ್ಲಿ ಸಿಟಿ ರೌಂಡ್ಸ್ ಆರಂಭಿಸಿದರು. ಸಚಿವ ಕೆ.ಜೆ.ಜಾರ್ಜ್, ಗೃಹ ಸಚಿವ ರಾಮಲಿಂಗರೆಡ್ಡಿ, ಮೇಯರ್ ಪದ್ಮಾವತಿ, ಆಯುಕ್ತ ಮಂಜುನಾಥ್ ಪ್ರಸಾದ್, ನಗರದ ಶಾಸಕರುಗಳು ಹಾಗೂ ಅಧಿಕಾರಿಗಳು ಸಿಎಂಗೆ ಸಾಥ್ ನೀಡಿದರು. ಆರಂಭದಲ್ಲಿ ಜೆಸಿ ರಸ್ತೆಯ ಕುಂಬಾರ್ ಗುಂಡಿ ಪ್ರದೇಶದಲ್ಲಿ ಕಾಮಗಾರಿ ವೀಕ್ಷಿಸಿ, ರಾಜಕಾಲುವೆ ಭೇಟಿ ಪರಿಶೀಲನೆ ನಡೆಸಿದರು.

    ಈ ವೇಳೆ ಕೆಎ- 57 ಎಫ್- 1348 ವೋಲ್ವೋದಲ್ಲಿ ಎಸಿ ಕಡಿಮೆ ಇದೆ ಎನ್ನುವ ಕಾರಣಕ್ಕೆ ಸಿಎಂ ಅವರು ಪ್ರಯಾಣಿಸುತ್ತಿದ್ದ ಬಸ್ಸನ್ನು ಬದಲಿಸಲು ಬಿಎಂಟಿಸಿ ಅಧ್ಯಕ್ಷ ನಾಗರಾಜ ಯಾದವ್ ಮುಂದಾದರು. ಈ ಬಸ್ಸಿನಲ್ಲಿ ಎಸಿ ಕಡಿಮೆ ಇದೆ ಸರ್, ಜಾಸ್ತಿ ಎಸಿ ಇರುವ ಬಸ್ಸಿಗೆ ಬನ್ನಿ ಎಂದು ನಾಗರಾಜ್ ಯಾದವ್ ಒತ್ತಾಯ ಮಾಡಿದರು. ಇದಕ್ಕೆ ಒಪ್ಪದ ಸಿಎಂ ಮೊದಲು ಬಂದ ಬಸ್ಸಿನಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಹೇಳಿ ಪ್ರಯಾಣ ಮುಂದುವರಿಸಿದರು.

    ನಂತರ ಭಾರೀ ಮಳೆಗೆ ನೀರು ತುಂಬಿ ಮುಳುಗಡೆಯಾಗಿದ್ದ ಬಿಎಂಟಿಸಿ ವರ್ಕ್ ಶಾಪ್‍ಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ನೀರು ಯಾಕೆ ನಿಲ್ಲುತ್ತಿದೆ ಎಂದು ಪ್ರಶ್ನಿಸಿದ ಸಿಎಂ ಜಾಸ್ತಿ ಮಳೆ ಬಂದಾಗ ಏನು ಮಾಡುವುದು ಎಂದು ತಲೆಯಲ್ಲಿ ಇಟ್ಟುಕೊಂಡು ಪ್ಲಾನ್ ಮಾಡಿ ಎಂದು ಹೇಳಿ ಎಂಜಿನಿಯರ್ ಗಳನ್ನು ತರಾಟೆಗೆ ತೆಗೆದುಕೊಂಡರು.

    ಬೇರೆ ಬಸ್: ಎಸಿ ಕೈಕೊಟ್ಟ ಹಿನ್ನೆಲೆಯಲ್ಲಿ ಶಾಂತಿನಗರ ಡಿಪೋದಲ್ಲಿ ಸಿಎಂ ಬಸ್ ಬದಲಾಯಿಸಿದರು. ಈ ವೇಳೆ ಶಾಸಕ ಬೈರತಿ ಬಸವರಾಜ್, ಉತ್ತಮ ಬಸ್ ವ್ಯವಸ್ಥೆ ಯಾಕೆ ಮಾಡಲಿಲ್ಲ. ಸಿಎಂ ಅಂದ್ರೆ ಎಂಥ ಬಸ್ಸು ಮಾಡ್ಬೇಕು ಅಂಥ ಗೊತ್ತಾಗಲ್ವಾ? ಎದುರು ಮಾತಾಡಿದ್ರೆ ನೋಡು ಅಂಥ ಬಿಎಂಟಿಸಿ ಸಿಬ್ಬಂದಿಗೆ ಏಕವಚನದಲ್ಲೇ ಗರಂ ಆಗಿ ತರಾಟೆಗೆ ತೆಗೆದುಕೊಂಡರು.

    ಟ್ರಾಫಿಕ್ ಜಾಮ್: ಶಾಂತಿನಗರದಿಂದ ಎಚ್‍ಎಸ್‍ಆರ್ ಲೇಔಟ್ ಕಡೆಗೆ ತೆರಳುತ್ತಿದ್ದಾಗ ವಿಲ್ಸನ್ ಗಾರ್ಡನ್ ಟ್ರಾಫಿಕ್ ನಲ್ಲಿ ಸಿಎಂ ಸಿಕ್ಕಿಹಾಕಿಕೊಂಡರು. ಟ್ರಾಫಿಕ್ ಜಾಮ್‍ನಲ್ಲಿ ಮೂರು ಅಂಬುಲೆನ್ಸ್ ಗಳು ಸಿಕ್ಕಿಹಾಕಿಕೊಂಡಿತ್ತು. ಸುಮಾರು ಕಿಲೋ ಮೀಟರ್‍ವರೆಗೂ ಟ್ರಾಫಿಕ್ ಜಾಮ್ ಆಗಿತ್ತು.

     

    ನಿಮಾನ್ಸ್ ರಸ್ತೆಯಲ್ಲಿ ಸಿಎಂ ಹೋಗುವ ದಾರಿಯಲ್ಲಿ ಬಿಎಂಟಿಸಿ ಬಸ್ ಕೆಟ್ಟು ನಿಂತಿದ್ದರಿಂದ ಸುಮಾರು 20 ನಿಮಿಷ ಟ್ರಾಫಿಕ್ ನಲ್ಲಿ ಸಿಎಂ ಸಿಲುಕಿದ್ದರು. ಎಚ್‍ಎಸ್‍ಆರ್ ಲೇಔಟ್ ಗೆ ಭೇಟಿ ನೀಡಿ ಪರಿಶೀಲಿಸಿದ ಸಿಎಂ, ಹಿಂದೆ ಇದ್ದವರು ಯಾರೂ ಏನು ಮಾಡಲಿಲ್ಲ. ಮಾಡಿದ್ದರೆ ಈ ತೊಂದರೆ ಆಗುತ್ತಿರಲಿಲ್ಲ. ತೊಂದರೆ ಆಗಿದ್ದಕ್ಕೆ ವಿಷಾಧಿಸುತ್ತೇವೆ ಎಂದು ಹೇಳಿದರು. ಈ ವೇಳೆ ಬೆಂಗಳೂರು ಜಲಮಂಡಳಿಯ ಅಧಿಕಾರಿಗಳ ವಿರುದ್ಧ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದರು.

    ಫುಲ್ ಟ್ರಾಫಿಕ್ ಜಾಮ್: ಸಿಎಂ ಸಿಟಿ ರೌಂಡ್ಸ್ ನಿಂದಾಗಿ ಇಬ್ಬಲೂರು ಜಂಕ್ಷನ್‍ನಿಂದ ಅಗರ ಕೆರೆ ಬಳಿಯ ರಸ್ತೆವರೆಗೆ ಟ್ರಾಫಿಕ್ ಜಾಂ ಆಗಿತ್ತು. ಝೀರೋ ಟ್ರಾಫಿಕ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಟೀಂ ತೆರಳುತ್ತಿರುವ ಹಿನ್ನಲೆ ಸಂಚಾರ ದಟ್ಟಣೆಯಲ್ಲಿ ವಾಹನ ಸವಾರರು ಸಿಲುಕಿಕೊಂಡರು. ಮಾರತ್ ಹಳ್ಳಿ ಔಟರ್ ರಿಂಗ್ ರೋಡ್ ಫುಲ್ ಟ್ರಾಫಿಕ್ ಜಾಮ್ ಆಗಿ ಕಿಲೋಮೀಟರ್‍ಗಟ್ಟಲೇ ವಾಹನಗಳು ಸಾಲು ಸಾಲಾಗಿ ನಿಂತುಕೊಂಡಿತ್ತು.

    ಕೈ ಕೊಟ್ಟ ಬಸ್: ರಾಮಮೂರ್ತಿನಗರದ ಅಂಬೇಡ್ಕರ್ ನಗರಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದರು. ವೀಕ್ಷಣೆ ಮುಗಿಸಿದ ಬಳಿಕ ಸಿಎಂ ಹತ್ತಿದರೂ ಬಸ್ ಸ್ಟಾರ್ಟ್ ಮಾತ್ರ ಆಗುತ್ತಿರಲಿಲ್ಲ. ಇಲ್ಲಿಗೆ ಸಿಟಿ ರೌಂಡ್ಸ್ ಮುಕ್ತಾಯಗೊಳಿಸಿ ಅಧಿಕಾರಿಗಳಿಗೆ ಮಧ್ಯದಲ್ಲೇ ಕೈ ಕೊಟ್ಟು ಸಂಜೆ 6.45ಕ್ಕೆ ಆಪ್ತ ಹಾಗು ಶಾಸಕ ಎಂ.ಟಿ.ಬಿ.ನಾಗರಾಜ್ ನೂತನ ಶಾಲೆ ಉದ್ಘಾಟನೆಗೆ ಸಿಎಂ ತೆರಳಿದರು.

    ಚಾಲಕನಿಗೆ ನೋಟಿಸ್: ಸಿಎಂ ಸಿಟಿ ರೌಂಡ್ಸ್ ವೇಳೆ ಬಸ್ಸಿನಲ್ಲಿ ಎಸಿ ಕೈಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಟಿಸಿಯಿಂದ ಚಾಲಕ ಸೈಯದ್ ನೂರುಲ್ಲ ಗೆ ನೋಟಿಸ್ ಜಾರಿಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

    https://youtu.be/MvBZ-ntaK7A