ದಾವಣಗೆರೆ: ಬೆಂಗಳೂರಿನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಶಿಕ್ಷೆ ಆಗಲೇಬೇಕು ಎಂದು ಇದೂವರೆಗೂ ಯಾವೊಬ್ಬ ಕಾಂಗ್ರೆಸ್ ನಾಯಕರೂ ಹೇಳಿಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
ದಾವಣಗೆರೆಯ ಕತ್ತಲಗೆರೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ್ರೋಹಿಗಳನ್ನು ಮುಲಾಜಿಲ್ಲದೆ ನಿಷೇಧ ಮಾಡಬೇಕು. ಈ ಪ್ರಕರಣದ ಹಿಂದೆ ಬಹುದೊಡ್ಡ ರಾಜಕೀಯ ಪಿತೂರಿ ಇದೆ. ಸ್ವ-ಪಕ್ಷದ ದಲಿತ ಶಾಸಕನ ರಕ್ಷಣೆಗೆ ಕಾಂಗ್ರೆಸ್ ನಾಯಕರು ನಿಲ್ಲುತ್ತಿಲ್ಲ. ಕಾಂಗ್ರೆಸ್ ನಾಯಕರಿಗೆ ತಮ್ಮ ಶಾಸಕರನ್ನು ಕಾಪಾಡಿಕೊಳ್ಳಲು ಆಗಿಲ್ಲ. ಆರೋಪಿಗಳನ್ನು ಅಮಾಯಕರು ಎಂಬ ಹೇಳಿಕೆ ನೀಡುತ್ತಿದ್ದಾರೆ ಎಂದು ಗರಂ ಆದರು.
ಠಾಣೆಗೆ ಶಾಸಕರ ಮನೆಗೆ ಬೆಂಕಿಬಿಟ್ಟವರು ಅಮಾಯಕರಾ?, ಅಖಂಡ ಶ್ರೀನಿವಾಸರ ಮನೆ ಮೇಲೆ ನಡೆದ ದಾಳಿ ಪೂರ್ವ ನಿಯೋಜಿತ ಸಂಚು ಆಗಿದೆ. ಇದು ರಾಜಕೀಯ ಪ್ರೇರಿತ ದಾಳಿಯಾಗಿದೆ. ಇದುವರೆಗೂ ಗಲಭೆ ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು ಎಂದು ಯಾವೊಬ್ಬ ಕಾಂಗ್ರೆಸ್ ನಾಯಕರು ಕೂಡ ಹೇಳಿಲ್ಲ ಎಂದರು.
ಈ ಗಲಭೆ ಹಿಂದಿರುವ ಸಂಘಟನೆಗಳನ್ನು ಸರ್ಕಾರ ನಿಷೇಧ ಮಾಡಬೇಕು. ಸಂಘಟನೆಗಳ ನಿಷೇಧದ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ. ಸರ್ಕಾರ ಸುಭದ್ರವಾಗಿದೆ. ದುಷ್ಟಶಕ್ತಿಗಳನ್ಮು ಸರ್ಕಾರ ಹೆಡೆಮುರಿ ಕಟ್ಟುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಯೂರಿಯಾ ಗೊಬ್ಬರ ಕೊರತೆಗೆ ಪ್ರತಿಕ್ರಿಯಿಸಿದ ಅವರು, ಯೂರಿಯಾ ಗೊಬ್ಬರ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ. ರಾಜ್ಯಕ್ಕೆ 27 ಸಾವಿರ ಟನ್ ಯೂರಿಯಾ ಗೊಬ್ಬರ ಬಂದಿದೆ. ಶಿವಮೊಗ್ಗ-ದಾವಣಗೆರೆ ಭಾಗಕ್ಕೆ 2007 ಟನ್ ಯೂರಿಯಾ ಬೇಕಿದೆ. ರೈತರಿಗೆ ಯೂರಿಯಾ ಗೊಬ್ಬರ ಕೊರತೆ ಆಗಲ್ಲ. ಮೂರ್ನಾಲ್ಕು ದಿನದಲ್ಲಿಯೇ ಯೂರಿಯಾ ಸಮಸ್ಯೆಗೆ ಮುಕ್ತಿ ಸಿಗಲಿದೆ ಎಂದರು.
ಬೆಂಗಳೂರು: ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆಯಲ್ಲಿ ಕೆಲ ಕಾಂಗ್ರೆಸ್ ನಾಯಕರ ಕೈವಾಡವೂ ಇದೆ ಎಂದು ಮಾಜಿ ಸಚಿವ ರೋಶನ್ ಬೇಗ್ ಆರೋಪಿಸಿದ್ದಾರೆ.
ಡಿಜೆ ಹಳ್ಳಿ ಗಲಭೆ ಕುರಿತು ಪ್ರತಿಕ್ರಿಯಿಸಿರುವ ಅವರು, ಗೋರಿ ಪಾಳ್ಯದ ಮೌಲಾನ ಇಲ್ಲಿಗೆ ಯಾಕೆ ಬರಬೇಕಿತ್ತು, ಕಲಾಸಿಪಾಳ್ಯದಿಂದ, ಟಿಪ್ಪು ನಗರದಿಂದ ಇಲ್ಲಿಗೆ ಯಾಕೆ ಬರಬೇಕಿತ್ತು? ಹೊರಗಿನವರು ಯಾರ್ಯಾರೋ ಬಂದಿದ್ದರು. ದಿಡೀರ್ ಗಲಾಟೆ ಮಾಡಿದರು ಎಂದು ಸ್ಥಳಿಯರೇ ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪೊಲೀಸರು ಬಂಧಿಸಿದವರಲ್ಲಿ ಕೆಲವರು ಅಮಾಯಕರೂ ಇರಬಹುದು. ಅಂತಹವರನ್ನು ಬಿಡಿ. ಆದರೆ ತಪ್ಪು ಮಾಡಿದವರಿಗೆ ಮಾತ್ರ ಶಿಕ್ಷೆ ಆಗಲೇಬೇಕು. ಜಮೀರ್ ಅಹ್ಮದ್ ಬಗ್ಗೆ ನಾನು ಜಾಸ್ತಿ ಮಾತಾಡಲ್ಲ. ಜಮೀರ್ ಏನು ಅಂತ ನಾನು ಮಾತನಾಡಲಿ. ನಾನು ವಿದ್ಯಾರ್ಥಿ ಹೋರಾಟದಿಂದ ಬಂದ ಸೀನಿಯರ್ ಲೀಡರ್. ಯಡಿಯೂರಪ್ಪನವರು ಸಿಎಂ ಆದರೆ ಜಮೀರ್ ವಾಚ್ಮನ್ ಕೆಲಸ ಮಾಡ್ತೀನಿ ಅಂದಿದ್ದರು. ಮೊದಲು ಆ ಕೆಲಸ ಮಾಡಲಿ ಎಂದು ಹರಿಹಾಯ್ದಿದ್ದಾರೆ.
ಬೆಂಗಳೂರು: ದೇವರಜೀವನಹಳ್ಳಿ ಮತ್ತು ಕಾಡುಗೊಂಡನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್, ಎಸ್ಡಿಪಿಐ ಮುಖಂಡರು ಪರಸ್ಪರ ಫೋನ್ ಸಂಪರ್ಕದಲ್ಲಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.
ಹೌದು. ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರು ಎಸ್ಡಿಪಿಐ ಸಕ್ರಿಯ ಕಾರ್ಯಕರ್ತ ಮುಜಾಮಿಲ್ ಪಾಷಾನ ಮೊಬೈಲ್ ಕರೆಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಒಂದು ನಂಬರ್ಗೆ ಪದೇ ಪದೇ ವಾಟ್ಸಪ್ ಕಾಲ್ ಹೋಗಿರುವುದು ಗೊತ್ತಾಗಿದೆ. ರಾತ್ರಿ 9:30 ರಿಂದ 11:30ರ ಅವಧಿಯಲ್ಲಿ ಒಟ್ಟು 11 ಬಾರಿ ಕರೆ ಹೋಗಿದ್ದು,ಈ ನಂಬರ್ ಯಾವುದು ಎಂದು ಪರಿಶೀಲನೆ ನಡೆಸಿದಾಗ ಅರುಣ್ ಎಂಬಾತನದ್ದು ಎಂಬುದು ತಿಳಿದು ಬಂದಿದೆ. ಇದನ್ನೂ ಓದಿ: 4 ತಿಂಗಳ ಅಂತರದಲ್ಲಿ ಎರಡು ಮಕ್ಕಳು ಹೇಗೆ ಸಾಧ್ಯ – ಪ್ರಥಮ್ ವಿರುದ್ಧ ಕೇಸ್ ದಾಖಲು
ಸಂಪತ್ ರಾಜ್ ಆಪ್ತ ಅರುಣ್
ಅರುಣ್ ಬೇರೆ ಯಾರು ಅಲ್ಲ ಈತ ಮಾಜಿ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಆಪ್ತ, ಕಾಂಗ್ರೆಸ್ನ ಸಕ್ರೀಯ ಕಾರ್ಯಕರ್ತ. ಈ ಗಲಭೆಯಲ್ಲಿ ಅರುಣ್ ಪಾತ್ರ ಇರುವುದು ತಿಳಿದು ಬರುತ್ತಿದ್ದತೆ ಸಿಸಿಬಿ ಪೊಲೀಸರು ಸೋಮವಾರ ರಾತ್ರಿಯೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಿದ್ದಾರೆ.
ತನಿಖೆಯ ವೇಳೆ ಇನ್ನೊಂದು ಟ್ವಿಸ್ಟ್ ಸಿಕ್ಕಿದ್ದು, ಫೋನಿನಲ್ಲಿ ಮುಜಾಮಿಲ್ ಪಾಷಾನೊಂದಿಗೆ ಅರುಣ್ ಮಾತನಾಡಿದರೆ ಜೊತೆಯಲ್ಲೇ ಇನ್ನೊಬ್ಬ ವ್ಯಕ್ತಿಯೂ ಮಾತನಾಡಿದ್ದಾರೆ. ಈ ವ್ಯಕ್ತಿಯ ಧ್ವನಿ ಸಂಪತ್ ರಾಜ್ ಧ್ವನಿಯಂತೆ ಹೋಲಿಕೆ ಇರುವ ಕಾರಣ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ
ತನ್ನ ಫೋನ್ ನಂಬರ್ ಬಳಸಿದ್ರೆ ತನಗೆ ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ಸಂಪತ್ ರಾಜ್ ಅರುಣ್ ಫೋನ್ ಬಳಸಿದ್ರಾ? ಇದರ ಜೊತೆ ಗಲಭೆ ಇನ್ನಷ್ಟು ದೊಡ್ಡದಾಗೋ ಸಂಪತ್ ರಾಜ್ ಮಾಡಿದ್ರಾ ಎಂಬ ಪ್ರಶ್ನೆ ಎದ್ದಿದೆ. ಧ್ವನಿ ಸಂಪತ್ ರಾಜ್ ಅವರದ್ದೇ ಎನ್ನುವುದು ಪೊಲೀಸ್ ಮೂಲಗಳ ಮಾಹಿತಿ. ಆದರೂ ಈ ಬಗ್ಗೆ ಪೂರ್ಣವಾದ ಸಾಕ್ಷ್ಯ ಸಂಗ್ರಹಿಸಲು ಸಂಪತ್ ರಾಜ್ ಅವರನ್ನು ಪೊಲೀಸರು ಈಗ ವಿಚಾರಣೆ ನಡೆಸುತ್ತಿದ್ದಾರೆ.
ವಿಚಾರಣೆ ವೇಳೆ ಸಂಪತ್ ರಾಜ್ ಬಗ್ಗೆ ಅರುಣ್ ಸ್ಫೋಟಕ ಮಾಹಿತಿಗಳನ್ನು ತಿಳಿಸಿದ್ದು, ಇಂದೇ ಸಂಪತ್ ರಾಜ್ ಬಂಧನವಾಗುವ ಸಾಧ್ಯತೆಯಿದೆ.
– ಮಾಜಿ ಮೇಯರ್ ಆಪ್ತ ವಶಕ್ಕೆ
– ಮಧ್ಯರಾತ್ರಿ ಮತ್ತೆ 30 ಮಂದಿ ಬಂಧನ
ಬೆಂಗಳೂರು: ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಕಾಂಗ್ರೆಸ್ ಕಾರ್ಪೋರೇಟರ್ ಗಳಿಗೆ ನೋಟಿಸ್ ನೀಡಿದ್ದಾರೆ. ಮಾಜಿ ಮೇಯರ್ ಸಂಪತ್ರಾಜ್ ಮತ್ತು ಪುಲಕೇಶಿನಗರ ಕಾರ್ಪೋರೇಟರ್ ಅಬ್ದುಲ್ ರಕೀಬ್ ಝಾಕೀರ್ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಶಾಸಕ ಅಖಂಡ ಶ್ರೀನಿವಾಸ್ಮೂರ್ತಿ ಮನೆ ಮೇಲಿನ ದಾಳಿ, ಡಿ ಜೆ ಹಳ್ಳಿ, ಕೆಜಿಹಳ್ಳಿ ಮತ್ತು ಕಾವಲ್ಬೈರಸಂದ್ರದಲ್ಲಿ ನಡೆದಿದ್ದ ದಳ್ಳುರಿ ಹಿಂದೆ ರಾಜಕೀಯ ದ್ವೇಷದ ಕಾರಣವಿದೆ ಎಂಬ ಕಾರಣಕ್ಕಾಗಿ ಇಬ್ಬರು ಕಾಂಗ್ರೆಸ್ ಪಾಲಿಕೆ ಸದಸ್ಯರನ್ನ ವಿಚಾರಣೆಗೆ ಕರೆಯಲಾಗಿದೆ. ಗಲಭೆ ಸಂಬಂಧ ಸಂಪತ್ರಾಜ್ ಆಪ್ತ ಅರುಣ್ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅರುಣ್ ಬಳಿ ಇದ್ದ ಮೊಬೈಲ್ನ್ನು ಸಂಪತ್ರಾಜ್ ಬಳಸುತ್ತಿದ್ದರು ಮತ್ತು ಆ ಮೊಬೈಲ್ನಲ್ಲಿ ಗಲಭೆಗೆ ಸಂಬಂಧಿಸಿದ ಮಹತ್ವದ ಸಾಕ್ಷ್ಯಗಳಿರಬಹುದು ಎಂಬ ಶಂಕೆಯಿಂದ ಖಾಕಿಗಳು ವಶಕ್ಕೆ ಪಡೆದಿದ್ದಾರೆ. ಮೊಬೈಲ್ನಲ್ಲಿರುವ ಮಾಹಿತಿಗಳನ್ನು ಪೊಲೀಸರು ಕಲೆ ಹಾಕಿದ್ದು ಅದರಲ್ಲಿನ ಸಾಕ್ಷ್ಯಗಳನ್ನ ಆಧರಿಸಿ ಕಾರ್ಪೋರೇಟರ್ ಗಳ ವಿಚಾರಣೆ ನಡೆಸಲಿದ್ದಾರೆ. ಇದನ್ನೂ ಓದಿ:ಬೆಂಗಳೂರು ಗಲಭೆ ಹಿಂದೆ ಉಗ್ರ ಸಂಘಟನೆಯ ನಂಟು – ಏನಿದು ಅಲ್ ಹಿಂದ್?
ಅವಹೇಳನಕಾರಿ ಪೋಸ್ಟ್ ಹಾಕಿದ್ದ ನವೀನ್ ವಿರುದ್ಧ ದೂರು ನೀಡಿದ್ದ ಫಿದೋಸ್ ಪಾಷಾ ಅನ್ನೋರ ಸ್ಕೂಟರ್ಗೂ ಡಿಜೆ ಹಳ್ಳಿ ಠಾಣೆ ಎದುರು ಬೆಂಕಿ ಹಚ್ಚಲಾಗಿತ್ತು. ದಂಗೆ ಸಂಬಂಧ ಮಧ್ಯರಾತ್ರಿ ಮತ್ತೆ 30 ಮಂದಿಯನ್ನು ಡಿಜೆ ಹಳ್ಳಿ ಮತ್ತು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಗಲಭೆಯಲ್ಲಿ ಬಂಧಿತರಾದವರ ಸಂಖ್ಯೆ 380ಕ್ಕೆ ಏರಿಕೆ ಆಗಿದೆ. ಇದನ್ನೂ ಓದಿ: ಕೊತ್ತಂಬರಿ, ಕರಿಬೇವಿನ ಸೊಪ್ಪು ತರೋಕೆ ಹೋದವ್ರ ಲಿಸ್ಟ್ ಇದೆ: ಅಶೋಕ್
ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಇಡೀ ಪ್ರಕರಣಕ್ಕೆ ಹೊಸ ಆಯಾಮ ಸಿಕ್ಕಿದ್ದು, ಗಲಭೆಯ ಹಿಂದೆ ಉಗ್ರಗಾಮಿ ಸಂಘಟನೆಯ ಪಾತ್ರವಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್ ಭೈರಸಂದ್ರದ ಗಲಭೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಮೀವುದ್ದೀನ್ ಎಂಬಾತನನ್ನು ಭಾನುವಾರ ರಾತ್ರಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಸಮೀವುದ್ದೀನ್ಗೆ ಆಲ್ ಹಿಂದ್ ಭಯೋತ್ಪಾದಕ ಸಂಘಟನೆಯ ನಂಟು ಇರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: 4 ತಿಂಗಳ ಅಂತರದಲ್ಲಿ ಎರಡು ಮಕ್ಕಳು ಹೇಗೆ ಸಾಧ್ಯ – ಪ್ರಥಮ್ ವಿರುದ್ಧ ಕೇಸ್ ದಾಖಲು
ಡಿಜೆ ಹಳ್ಳಿ ಗಲಭೆ ವೇಳೆ ಸಮೀವುದ್ದೀನ್ ಸ್ಥಳದಲ್ಲೇ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಸಮೀವುದ್ದೀನ್ನನ್ನು ಕಸ್ಟಡಿಗೆ ತೆಗೆದುಕೊಂಡಿರುವ ಪೊಲೀಸರು, ಗಲಭೆ ಹಿಂದೆ ಉಗ್ರಗಾಮಿ ಸಂಘಟನೆ ಆಲ್ ಹಿಂದ್ ಪಾತ್ರವಿದೆಯಾ ಎಂಬ ಬಗ್ಗೆ ತನಿಖೆ ತೀವ್ರಗೊಳಿಸಿದ್ದಾರೆ.
ಶಿವಾಜಿನಗರದಲ್ಲಿ ನಡೆದಿದ್ದ ಬಿಜೆಪಿ ಮುಖಂಡ ರುದ್ರೇಶ್ ಕೊಲೆ ಆರೋಪಿಗಳ ಜೊತೆಗೂ ಸಮೀವುದ್ದೀನ್ಗೆ ನಿಕಟ ನಂಟಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಪಿಗಳು ಉಗ್ರ ಸಂಘಟನೆಗಳ ಜೊತೆಗೂ ಲಿಂಕ್ ಇಟ್ಕೊಂಡಿದ್ದಾರಾ ಅಂತ ಪರಿಶೀಲನೆ ನಡೆಸಲಾಗ್ತಿದೆ. ಪ್ರಕರಣ ತನಿಖೆ ಹಂತದಲ್ಲಿರುವ ಕಾರಣ ಈ ಬಗ್ಗೆ ಈಗಲೇ ಏನು ಹೇಳಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ.
ಏನಿದು ಅಲ್ ಹಿಂದ್?
ಐಸಿಸ್ ಸಂಘಟನೆಯಿಂದ ಪ್ರೇರಣೆಗೊಂಡು ಸ್ಥಾಪನೆಯಾದ ಸಂಘಟನೆಯೇ ಅಲ್ ಹಿಂದ್. ಉಗ್ರರಾದ ಮೆಹಬೂಬ್ ಪಾಷಾ, ಮೊಯಿದ್ದೀನ್ ಕ್ವಾಜಾ ಈ ಸಂಘಟನೆಯನ್ನು ಸ್ಥಾಪಿಸಿದ್ದು, ದಕ್ಷಿಣ ಭಾರತದಲ್ಲಿ (ಕರ್ನಾಟಕ, ಕೇರಳ) ಸಕ್ರಿಯವಾಗಿದೆ. 200-250 ಉಗ್ರರು ಈ ಸಂಘಟನೆಯಲ್ಲಿ ಇರುವ ಶಂಕೆ ವ್ಯಕ್ತವಾಗಿದ್ದು, ತಿಂಗಳ ಹಿಂದಷ್ಟೇ ಅಲ್ ಹಿಂದ್ ಬಗ್ಗೆ ವಿಶ್ವಸಂಸ್ಥೆ ಎಚ್ಚರಿಕೆ ನೀಡಿತ್ತು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಉಗ್ರರು ಹರಡಿರುವ ಶಂಕೆ ವ್ಯಕ್ತವಾಗಿದ್ದು, 2019ರಲ್ಲಿ ಬೆಂಗಳೂರಿನ ಗುರಪ್ಪನ ಪಾಳ್ಯದಲ್ಲಿ ನಡೆದಿದ್ದ ಹಲವು ಸಭೆಯಲ್ಲಿ ಭಾಗವಹಿಸಿದ್ದಾರೆ ಎನ್ನಲಾಗುತ್ತಿದೆ. ತಮಿಳುನಾಡಿನ ಹಿಂದೂ ನಾಯಕರ ಹತ್ಯೆಯಲ್ಲಿ ಅಲ್ ಹಿಂದ್ ಪಾತ್ರವಿದೆ. ರಾಷ್ಟ್ರೀಯ ತನಿಖಾ ದಳ(ಎನ್ಐಎ) ಅಲ್ ಹಿಂದ್ನ ಉಗ್ರ ಶಿವಮೊಗ್ಗದ ಅಬ್ದುಲ್ ಮತೀನ್ ಬಗ್ಗೆ ಮಾಹಿತಿ ನೀಡಿದರೆ 3 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದೆ. ಇದನ್ನೂ ಓದಿ: ತೀರ್ಥಹಳ್ಳಿ ಉಗ್ರನ ಪತ್ತೆ ಮಾಡ್ಕೊಟ್ಟರೆ 3 ಲಕ್ಷ ಬಹುಮಾನ- ಎನ್ಐಎ ಘೋಷಣೆ
– ಭದ್ರತೆ ಹೆಚ್ಚಳಕ್ಕೂ ಸಿಎಂ ಬಳಿ ಮನವಿ
– ಕಾಂಗ್ರೆಸ್ ಬಿಡೋ ಮಾತೇ ಇಲ್ಲ
ಬೆಂಗಳೂರು: ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಅವರನ್ನು ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಭೇಟಿ ಮಾಡಿದ್ದಾರೆ.
ಘಟನೆಯ ಬಳಿಕ ಮೊದಲ ಬಾರಿಗೆ ಶಾಸಕ ಅರವಿಂದ ಲಿಂಬಾವಳಿ ಜೊತೆ ಬಂದು ಕಾವೇರಿ ನಿವಾಸದಲ್ಲಿ ಸಿಎಂ ಭೇಟಿಯಾದ ಅಖಂಡ, ಗಲಭೆ ಕುರಿತು ಬಿಎಸ್ವೈ ಜೊತೆ ಚರ್ಚೆ ನಡೆಸಿದ್ದಾರೆ. ಪ್ರಕರಣದ ಬಗ್ಗೆ ಸಿಎಂ ಬಿಎಸ್ವೈಗೆ ಅಖಂಡ ವಿವರಣೆ ನೀಡಿದ್ದಾರೆ.
ಈ ಗಲಭೆ ಪ್ರಮುಖ ಕಾರಣ ಯಾರು, ಗಲಭೆ ನಡೆದ ದಿನದಿಂದ ಇಲ್ಲಿವರೆಗೂ ಆಗಿರುವ ಬೆಳವಣಿಗೆ, ಪ್ರಕರಣದ ಕುರಿತು ತನಿಖೆ ಬಗ್ಗೆ ಚರ್ಚೆ ಮಾಡಿದ್ದಾರೆ. ಎಸ್ಡಿಪಿಐ ಸಂಘಟನೆಯ ಕೈವಾಡ ಹಾಗೂ ಸ್ಥಳೀಯ ನಾಯಕರ ಆಂತರಿಕ ಭಿನ್ನಾಭಿಪ್ರಾಯ ಸೇರಿದಂತೆ ಹಲವು ವಿಷಯಗಳ ಗಳ ಬಗ್ಗೆ ಸಿಎಂಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಮುಂದೆ ಯಾವ ರೀತಿ ತನಿಖೆ ನಡೆಸಬೇಕು ಎಂಬುದರ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಖಂಡ, ಭದ್ರತೆ ಹೆಚ್ಚಳಕ್ಕೆ ಮನವಿ ಮಾಡಿದ್ದೇನೆ. ಸಿಬಿಐ ತನಿಖೆ ಮಾಡಿಸುವಂತೆ ಕೇಳಿಕೊಂಡಿದ್ದೇನೆ. ತನಿಖೆ ಬಳಿಕ ಪರಿಶೀಲಿಸಿ ನೋಡೋದಾಗಿ ಸಿಎಂ ಹೇಳಿದ್ದಾರೆ. ಯಾರೇ ಇದ್ರೂ ತಪ್ಪಿತಸ್ಥರನ್ನು ಬಂಧಿಸಲು ಮನವಿ ಮಾಡಿದ್ದೇನೆ ಎಂದರು.
ನನಗೆ ಸರ್ಕಾರ ಇನ್ನೂ ಪೊಲೀಸ್ ಭದ್ರತೆ ಕೊಟ್ಟಿಲ್ಲ. ನನ್ನ ಮನೆಗೆ ಭದ್ರತೆ ಕೊಟ್ಟಿದ್ದಾರೆ. ಭದ್ರತೆ ವಿಚಾರದಲ್ಲಿ ಸರ್ಕಾರ ಸ್ಪಂದಿಸಿಲ್ಲ ಎಂದು ಇದೇ ವೇಳೆ ಅಖಂಡ ಆರೋಪ ಮಾಡಿದರು. ಮೊನ್ನೆ ಸಿಎಂ ಜೊತೆ ಫೋನಲ್ಲಿ ಮಾತಾಡಿದ್ದೆ. ನಮ್ಮನೆ ಅಕ್ಕ-ಪಕ್ಕ ಮನೆ, ವಾಹನಗಳನ್ನು ಸುಟ್ಟಿದ್ದಾರೆ. ಇವರಿಗೆಲ್ಲ ಪರಿಹಾರ ಕೊಡಲು ಸಿಎಂಗೆ ಮನವಿ ಮಾಡಿಕೊಂಡಿದ್ದೇನೆ. ಅಪರಾಧಿಗಳು ಯಾರೇ ಇರಲಿ, ಎಷ್ಟೇ ಪ್ರಭಾವಿಗಳಿದ್ರೂ ಶಿಕ್ಷೆ ಆಗಲೇಬೇಕು ಎಂದು ಕಟುವಾಗಿ ಹೇಳಿದರು.
ಇದೇ ವೇಳೆ ಮಾಜಿ ಶಾಸಕ ಪ್ರಸನ್ನಕುಮಾರ್ ಮತ್ತೆ ಕಾಂಗ್ರೆಸ್ ಸೇರೋ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅಖಂಡ,ಪ್ರಸನ್ನಕುಮಾರ್ ಕಾಂಗ್ರೆಸ್ ಸೇರೋ ವಿಷಯ ನನಗೆ ಗೊತ್ತೇ ಇಲ್ಲ. ನನ್ನ ಗಮನಕ್ಕೂ ಬಂದಿಲ್ಲ. ಪ್ರಸನ್ನಕುಮಾರ್ ಸೇರ್ಪಡೆಯಿಂದ ನನಗೆ ತೊಂದರೆ ಇಲ್ಲ. ಕಾಂಗ್ರೆಸ್ಸಿಗೆ ಯಾರು ಬೇಕಾದರೂ ಬರಬಹುದು. ಪ್ರಸನ್ನಕುಮಾರ್ ಕಾಂಗ್ರೆಸ್ ಸೇರೋ ವಿಷಯ ಅಧ್ಯಕ್ಷರಿಗೆ ಬಿಟ್ಟಿದು ಎಂದು ತಿಳಿಸಿದರು.
ಆದರೆ ಪ್ರಸನ್ನಕುಮಾರ್ ಅವರು ಕಾಂಗ್ರೆಸ್ ಸೇರಲು ಬಯಸಿರುವ ವಿಷಯ ಅಖಂಡ ಶ್ರೀನಿವಾಸ್ ಗಮನಕ್ಕೆ ತಂದಿರೋದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಈ ಹಿಂದೆ ತಿಳಿಸಿದ್ದರು. ಪ್ರಸನ್ನಕುಮಾರ್ ಸೇರ್ಪಡೆಗೆ ಅಖಂಡ ವಿರೋಧ ಇಲ್ಲ ಅಂದಿದ್ದರು. ಆದರೆ ಈಗ ಪ್ರಸನ್ನಕುಮಾರ್ ಮತ್ತೆ ಬರೋ ವಿಷಯ ನನಗೆ ಗೊತ್ತಿಲ್ಲ ಎಂದು ಅಖಂಡ ಹೇಳುತ್ತಿದ್ದಾರೆ. ಇದನ್ನು ಗಮನಿಸಿದರೆ ಡಿಕೆಶಿ ಸುಳ್ಳು ಹೇಳಿದ್ರಾ?, ಸುಳ್ಳೇ ಹೇಳಿದ್ರೂ ಯಾಕೆ ಹೇಳಿದ್ರು ಎಂಬ ಪ್ರಶ್ನೆ ಮೂಡಿದೆ.
ನಾನು ಕಾಂಗ್ರೆಸ್ ಬಿಡಲ್ಲ. ನಮ್ಮ ತಂದೆಯೂ ಕಾಂಗ್ರೆಸ್ಸಿನಲ್ಲೇ ಇದ್ದಿದ್ದು. ಹೀಗಾಗಿ ನಾನು ಕಾಂಗ್ರೆಸ್ ಪಕ್ಷ ಬಿಡೋ ಮಾತೇ ಇಲ್ಲ. ನನ್ನ ರಕ್ತದಲ್ಲಿ ಇರೋದು ಕಾಂಗ್ರೆಸ್. ನನ್ನ ರಕ್ಷಣೆಗೆ ಸರ್ಕಾರ ಸೇರಿದಂತೆ ನಮ್ಮ ಪಕ್ಷದ ನಾಯಕರು ಬರಬೇಕು. ಸಿಎಲ್ಪಿ ನಾಯಕ ಸಿದ್ದರಾಮಯ್ಯ ಸೇರಿದಂತೆ ಡಿಕೆ ಶಿವಕುಮಾರ್ ನನ್ನ ರಕ್ಷಣೆಗೆ ಬರಬೇಕು. ನನ್ನ ಮೇಲೆ ಯಾರಿಂದಲೂ ಒತ್ತಡ ಇಲ್ಲ, ಯಾವ ಒತ್ತಡವೂ ಇಲ್ಲ ಎಂದರು.
ಬಿಜೆಪಿ ಶಾಸಕರ ಜೊತೆ ಸಿಎಂ ಭೇಟಿಗೆ ಬಂದ ವಿಚಾರದ ಕುರಿತು ಸ್ಪಷ್ಟನೆ ನೀಡಿದ ಅವರು, ನಮ್ಮ ಭೋವಿ ಸಮಾಜದ ಮುಖಂಡರ ಜೊತೆ ನಾನು ಸಿಎಂ ಭೇಟಿಗೆ ಆಗಮಿಸಿದೆ. ನಮ್ಮ ಸಮಾಜದ ಮುಖಂಡರು ಇದ್ದರು. ಅರವಿಂದ ಲಿಂಬಾವಳಿ ಭೋವಿ ಜನಾಂಗದ ಶಾಸಕರು. ನಮ್ಮ ಜನಾಂಗದ ಶಾಸಕರ ಜೊತೆ ನಾನು ಬಂದಿದ್ದೇನೆ. ಭೋವಿ ಜನಾಂಗದ ಅಧ್ಯಕ್ಷ ಮಾಕಳಿ ರವಿಯವರು ಬಂದಿದ್ದಾರೆ. ಅವರ ಜೊತೆಯಲ್ಲಿ ನಾನು ಬಂದು ಸಿಎಂ ಭೇಟಿ ಮಾಡಿದ್ದೇನೆ ಅಷ್ಟೇ ಎಂದರು.
ಬೆಂಗಳೂರು: ದೇವರಜೀವನಹಳ್ಳಿ ಹಾಗೂ ಕಾಡುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ಈಗ ಮುಸ್ಲಿಮ್ ರಾಜಕೀಯ ನಾಯಕರಾದ ಜಮೀರ್ ಮತ್ತು ರೋಷನ್ ಬೇಗ್ ಮಧ್ಯೆ ಕಿತ್ತಾಟ ಆರಂಭಗೊಂಡಿದೆ.
The recent riots in Bengaluru has shed light on the dark underbelly of local politics. Here is my detailed statement on how the tacit political understanding between Congress and SDPI is now ruining the social harmony on a large scale. #Bengaluru#BangaloreViolencepic.twitter.com/VALJHhFh9q
ಮಾಜಿ ಸಚಿವ ಜಮೀರ್ ಅಹಮದ್ ಅವರು ಇಂದು 5 ಟ್ವೀಟ್ ಮಾಡಿ ರೋಷನ್ ಬೇಗ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಟ್ವೀಟ್ನಲ್ಲಿ ಏನಿದೆ?
ಮೂರು ದಶಕಗಳಿಗಿಂತ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದು ಮುಸ್ಲಿಮರ ಬಡತನ, ಅನಕ್ಷರತೆ, ನಿರುದ್ಯೋಗದಂತಹ ಮೂಲಭೂತ ಸಮಸ್ಯೆಗಳ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳದೆ, ಅಮಾಯಕ ಮುಸ್ಲಿಮರನ್ನು ರಾಜಕೀಯ ಸ್ವಾರ್ಥಕ್ಕಷ್ಟೇ ಬಳಸಿಕೊಂಡಿದ್ದ ರೋಷನ್ ಬೇಗ್ ಅವರು ಈಗ ಮುಸ್ಲಿಮರ ಪರ ಕಣ್ಣೀರು ಹಾಕುತ್ತಿರುವುದು ತಮಾಷೆಯಾಗಿದೆ.
ಶಿವಾಜಿನಗರದಲ್ಲಿ ಬೇಗ್ ಅವರು ಸ್ಪರ್ಧಿಸುತ್ತಿದ್ದಾಗ ಎಂದೂ ಸ್ಪರ್ಧಿಸದಿದ್ದ ಎಸ್ಡಿಪಿಐ ಇತ್ತೀಚಿನ ಶಿವಾಜಿ ನಗರ ವಿಧಾನಸಭಾ ಉಪಚುನಾವಣೆಯಲ್ಲಿ ಕಣಕ್ಕಿಳಿದದ್ದು ಯಾಕೆ? ಕಾಂಗ್ರೆಸ್ ಬೆಂಬಲಿಸುವ ಮುಸ್ಲಿಮ್ ಮತಗಳನ್ನು ವಿಭಜಿಸುವ ದುರುದ್ದೇಶದಿಂದ ಎಸ್ಡಿಪಿಐ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಯಾರು ಎನ್ನುವುದನ್ನು ಬೇಗ್ ಸಾಹೇಬರು ತಿಳಿಸಬೇಕು.
ಡಿಜೆಹಳ್ಳಿ ಗಲಭೆ ಬಗ್ಗೆ ಇಲ್ಲಿಯ ವರೆಗೆ ಮೌನವಹಿಸಿದ್ದ ರೋಷನ್ಬೇಗ್ ಅವರು ಇದ್ದಕ್ಕಿದ್ದ ಹಾಗೆ ಎಸ್ಡಿಪಿಐ ಯಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನ ಪಡುತ್ತಿರುವುದು ಮತ್ತು ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವುದನ್ನು ಕಂಡಾಗ ಪೊಲೀಸರ ತನಿಖೆಯ ಸುಳಿವು ಅವರಿಗೆ ಸಿಕ್ಕ ಹಾಗೆ ಕಾಣುತ್ತಿದೆ. ಇದನ್ನೂ ಓದಿ: ಬೆಂಗಳೂರು ಪುಂಡರ ಮೇಲೆ ಗೂಂಡಾ ಕಾಯ್ದೆ ಪ್ರಯೋಗ – ಈ ಕಾಯ್ದೆಯ ವಿಶೇಷತೆ ಏನು?
ಮೂರು ದಶಕಗಳಿಗಿಂತ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದು ಮುಸ್ಲಿಮರ ಬಡತನ, ಅನಕ್ಷರತೆ, ನಿರುದ್ಯೋಗದಂತಹ ಮೂಲಭೂತ ಸಮಸ್ಯೆಗಳ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳದೆ, ಅಮಾಯಕ ಮುಸ್ಲಿಮರನ್ನು ರಾಜಕೀಯ ಸ್ವಾರ್ಥಕ್ಕಷ್ಟೇ ಬಳಸಿಕೊಂಡಿದ್ದ @rroshanbaig ಅವರು ಈಗ ಮುಸ್ಲಿಮರ ಪರ ಕಣ್ಣೀರು ಹಾಕುತ್ತಿರುವುದು ತಮಾಷೆಯಾಗಿದೆ. 1/5
ಪ್ರವಾದಿಯವರನ್ನು ಅವಹೇಳನ ಮಾಡಿರುವ ನವೀನ್ ಎಂಬ ಆರೋಪಿಯ ಕುಕೃತ್ಯವನ್ನು ಕನಿಷ್ಠ ಖಂಡಿಸುವ ಧೈರ್ಯ ತೋರದ ರೋಷನ್ ಬೇಗ್ ಅವರು ಕಾಂಗ್ರೆಸ್ ಮತ್ತು ಎಸ್ಡಿಪಿಐ ಸಂಬಂಧದ ಕತೆ ಹೆಣೆಯುತ್ತಿರುವುದು ಅವರ ಆತ್ಮವಂಚಕ ನಡವಳಿಕೆಗೆ ಸರಿಯಾಗಿ ಹೊಂದಿಕೊಳ್ಳುತ್ತಿದೆ.
ಮಾನ್ಯ ರೋಷನ್ ಬೇಗ್ ಅವರೇ, ಕಾಂಗ್ರೆಸ್ ಬಗ್ಗೆ ಸುಳ್ಳು ಆರೋಪ ಮಾಡಿ ಸಂಘಿ ನಿಷ್ಠೆ ಸಾಬೀತು ಮಾಡುವ ಬದಲು ಈಶ್ವರಪ್ಪನವರು ಹೇಳಿದಂತೆ ಬಿಜೆಪಿ ಕಚೇರಿ ಕಸ ಗುಡಿಸಿ, ನಿಮ್ಮ ಹಿರಿತನಕ್ಕೆ ಗೌರವ ಕೊಟ್ಟು 10 ವರ್ಷದ ಷರತ್ತು ಸಡಿಲಿಸಿ 2023ರ ಚುನಾವಣೆಯಲ್ಲಾದರೂ ಬಿಜೆಪಿ ಟಿಕೆಟ್ ನೀಡಬಹುದು. ಈ ದಿಸೆಯಲ್ಲಿ ಇಂದಿನಿಂದಲೇ ಕಾರ್ಯಪ್ರವೃತ್ತರಾಗಿ.
– ರಾಜ್ಯದಲ್ಲಿ ಸಾರಾ ಮಹೇಶ್ ಒಬ್ರೇ ಮೇಧಾವಿ ಅಂದ್ಕೊಂಡಿದ್ದಾರೆ
ಕೊಪ್ಪಳ: ಬೆಂಗಳೂರಿನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ಸಿನವರು ಪ್ರೂವ್ ಮಾಡಿದ್ರೆ, ಆರೋಪಿಗಳು ಬಿಜೆಪಿ ಪಕ್ಷದವರಾಗಿದ್ದರೂ ಅವರನ್ನು ಒಳಗೆ ಹಾಕ್ತೀವಿ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಡೇಕೊಪ್ಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್ಸಿವರು ಅವರ ಪಕ್ಷದ ಶಾಸಕರಿಗೆ ಸಾಂತ್ವನ ಹೇಳೋದು ಬಿಟ್ಟು, ನಮ್ಮ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಘಟನೆಗೆ ಬಿಜೆಪಿಯವರು ಕಾರಣ ಅನ್ನೋದೇ ಆದರೆ ಅವರು ಅದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನೀಡಲಿ. ಒಂದು ವೇಳೆ ಗಲಭೆಯಲ್ಲಿ ಬಿಜೆಪಿಯವರು ಇದ್ದರೂ ನಾವು ಅವರನ್ನು ಒಳಗೆ ಹಾಕ್ತೀವಿ ಎಂದರು.
ಶಾಸಕರನ್ನು ದಲಿತ ಅದು ಇದು ಎಂದು ವಿಂಗಡಣೆ ಮಾಡಬಾರದು. ಶಾಸಕರಿಗೆ ಅಂತ ಶೋಷಣೆಗಳು ಆಗೋ ಸ್ಥಿತಿ ಇರಲ್ಲ. ಅವರು ಎಲ್ಲರಿಗೂ ಸಮಾನರು, ಅವರು ದಲಿತರು ಹೌದ ಅಲ್ವೋ, ಆದರೆ ಕಾಂಗ್ರೆಸ್ಸಿನವರು ಮುಂದೆ ಬಂದು ಮಾತಾಡಬೇಕಿತ್ತು. ಅವರಿಗೆ ಸಾಂತ್ವನ ಹೇಳೋದು ಬಿಟ್ಟು, ನಮ್ಮ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಎಸ್ಡಿಪಿಐ, ಪಿಎಫ್ಐ ಸಂಘಟನೆ ಬ್ಯಾನ್ ಮಾಡಲಿ ಎಂದ ರಾಮಲಿಂಗಾರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿರುವ ಪೊಲೀಸರು ಎರಡು ಸಂಘಟನೆಯಿಂದ ಇಂತಹ ಪರಿಸ್ಥಿತಿ ಬಂದಿದೆ ಎಂದು ವರದಿ ಕೊಟ್ಟರೆ ನಾವು ಬ್ಯಾನ್ ಮಾಡುತ್ತೇವೆ. ನಮ್ಮ ಪೊಲೀಸರು ತನಿಖೆ ಮಾಡಿ ಯಾರಿಂದ ಆಗಿದೆ ಅನ್ನೋ ಬಗ್ಗೆ ವರದಿ ಕೊಡೋವರೆಗೂ ಮಾತಾಡೋದು ಬಾಲಿಶ ಎಂದು ತಿರುಗೇಟು ನೀಡಿದರು.
ಕಾನೂನು ಸಚಿವನಾಗಿ ನಾನು ಬ್ಯಾನ್ ಮಾಡ್ತೀನಿ, ಮಾಡಲ್ಲ ಅಂತ ಹೇಳಾಕಗಲ್ಲ. 1981ರಲ್ಲಿ ಕಾನೂನು ಇದೆ. ಇದರ ಹಿಂದೆ ಯಾರೇ ಇದ್ದರೂ ಅವರ ಅಸ್ತಿ ಮುಟ್ಟಗೋಲು ಹಾಕ್ತೀವಿ. ಮುಟ್ಟಗೋಲು ಹಾಕಿ ನಷ್ಟ ಭರಿಸ್ತೀವಿ. ಬೆಂಗಳೂರಿನಲ್ಲಿ ಇಂತಹ ಪರಸ್ಥಿತಿ ನಿರ್ಮಾಣ ಆಗತ್ತೆ ಎಂದು ಯಾರೂ ನೀರಿಕ್ಷೆ ಮಾಡಿರಲಿಲ್ಲ. ಗುಪ್ತಚರ ಇಲಾಖೆಯಲ್ಲಿ ಇರೋದು ಮನುಷ್ಯರೇ. ಒಂದೇ ಸಲ 3-4 ಸಾವಿರ ಬರ್ತಾರೆ ಅನ್ನೋದು ಗೊತ್ತಾಗಲ್ಲ. ಯಾವನೋ ಪೋಸ್ಟ್ ಮಾಡಿದ್ರೆ, 4 ಸಾವಿರ ಜನ ಬರುತ್ತಾರೆ ಅನ್ನೋದು ಗೊತ್ತಾಗಲ್ಲ. ಸಾರಾ ಮಹೇಶ್ ಏನ್ ಮಾಡಿದ್ರೂ ದೂರುತ್ತಾರೆ. ರಾಜ್ಯದಲ್ಲಿ ಇವರೊಬ್ಬರೇ ಮೇಧಾವಿ ಅಂದುಕೊಂಡಿದ್ದಾರೆ. ಇದಕ್ಕೆ ನಾವೇನ್ ಮಾಡೋಕೆ ಆಗಲ್ಲ ಎಂದರು.
ಬೆಂಗಳೂರು: ದೇವರಜೀವನಹಳ್ಳಿ ಹಾಗೂ ಕಾಡುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ಹಾಕಿ ಬಂಧಿಸಿ ಎಂದು ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ.
ಭಾರೀ ಪ್ರಮಾಣದ ಅಪರಾಧ ಕೃತ್ಯಗಳನ್ನು ಎಸಗಿದ ಆರೋಪಿಗಳನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಿಲಾಗುತ್ತದೆ. ಈ ಕಾಯ್ದೆ ಬಿದ್ದರೆ ಆರೋಪಿಗಳಿಗೆ ಜಾಮೀನು ಸಿಗುವುದಿಲ್ಲ. ಗೂಂಡಾ ಕಾಯ್ದೆ ಅಲ್ಲದೇ ಕಾನೂನು ಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆಯ ಅಡಿಯೂ ಕ್ರಮ ಕೈಗೊಳ್ಳಲು ಸಿಎಂ ಸೂಚಿಸಿದ್ದಾರೆ. ಹೀಗಾಗಿ ಇಲ್ಲಿ ಗೂಂಡಾ ಕಾಯ್ದೆ ಯಾವಾಗ ಬಂದಿತ್ತು? ವಿಶೇಷತೆ ಏನು ಇತ್ಯಾದಿ ಮಾಹಿತಿಗಳನ್ನು ನೀಡಲಾಗಿದೆ.
ಏನಿದು ಗೂಂಡಾ ಕಾಯ್ದೆ?
ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಬೆಂಗಳೂರಿನಲ್ಲಿ ರೌಡಿಗಳ ಹಾವಳಿ ಮೀತಿ ಮೀರಿತ್ತು. ಈ ರೌಡಿಗಳನ್ನು ಮಟ್ಟ ಹಾಕಲು 1985ರಲ್ಲಿ ಜನತಾ ಸರ್ಕಾರ ಗೂಂಡಾ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಗೆ ತಂದಿತು.
ಯಾರ ವಿರುದ್ಧ ಕ್ರಮ ಕೈಗೊಳ್ಳಬಹುದು?
ತಿದ್ದು ಪಡಿಯಾದ ಕಾಯ್ದೆ ವ್ಯಾಪ್ತಿಗೆ ಆಸಿಡ್ ದಾಳಿಕೋರರು, ಅಕ್ರಮ ಮರಳು ಗಣಿಗಾರಿಕೆ ಸೇರಿದಂತೆ ಪರಿಸರಕ್ಕೆ ಹಾನಿ ಮಾಡುವವರು, ಡಿಜಿಟಲ್ ಮೀಡಿಯಾದಲ್ಲಿ (ವೆಬ್ಸೈಟ್) ವಂಚಿಸುವವರು, ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ಎಸಗುವವರು, ಕಾನೂನು ಬಾಹಿರ ಹಣಕಾಸು ವ್ಯವಹಾರ ನಡೆಸುವವರನ್ನು ಸೇರಿಸಲಾಗಿದೆ.
ನೇರವಾಗಿ ಜೈಲಿಗೆ:
ಈ ಕಾಯ್ದೆಯಲ್ಲಿ ಬಂಧನಕ್ಕೆ ಒಳಗಾದ ಆರೋಪಿಯನ್ನು ಇತರ ಪ್ರಕರಣಗಳ ಮಾದರಿಯಲ್ಲಿ 24 ಗಂಟೆಗಳ ಒಳಗೆ ನ್ಯಾಯಾಧೀಶರ ಎದುರು ಹಾಜರುಪಡಿಸಬೇಕಾದ ಅಗತ್ಯ ಇಲ್ಲ. ಪೊಲೀಸ್ ಕಸ್ಟಡಿ ಅಥವಾ ನ್ಯಾಯಾಂಗ ಬಂಧನವನ್ನು ಪದೇ ಪದೇ ವಿಸ್ತರಿಸಿಕೊಳ್ಳುವ ಪ್ರಕ್ರಿಯೆಯ ಅಗತ್ಯವೂ ಇಲ್ಲದೇ ನೇರವಾಗಿ ಜೈಲಿಗೆ ಕಳುಹಿಸಬಹುದಾಗಿದೆ. ಈ ಕಾಯ್ದೆಯ ಅಡಿ ಬಂಧನಕ್ಕೆ ಒಳಗಾದರೆ ಒಂದು ವರ್ಷ ಜಾಮೀನು ಸಿಗುವುದಿಲ್ಲ. ಮುನ್ನಚ್ಚರಿಕಾ ಕ್ರಮವಾಗಿ ಬಂಧಿಸಿ ಗಡೀಪಾರು ಆದೇಶವನ್ನೂ ಹೊರಡಿಸಲು ಅವಕಾಶವಿದೆ. ಇದನ್ನೂ ಓದಿ: ಯೋಗಿ ಸರ್ಕಾರದ ಎನ್ಕೌಂಟರ್ ಎಫೆಕ್ಟ್- ಸೈಕಲ್ ಶಾಪ್, ಹಣ್ಣಿನ ವ್ಯಾಪಾರ, ರಿಕ್ಷಾ ಚಾಲನೆ ಆರಂಭಿಸಿದ ರೌಡಿಶೀಟರ್ ಗಳು
– ಗೃಹ ಇಲಾಖೆಯ ಜೊತೆ ಸಿಎಂ ಬಿಎಸ್ವೈ ಸಭೆ – 3 ಮಂದಿ ಸರ್ಕಾರಿ ಅಭಿಯೋಜಕರನ್ನು ನೇಮಿಸಿ
ಬೆಂಗಳೂರು: ದೇವರಜೀವನಹಳ್ಳಿ ಹಾಗೂ ಕಾಡುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೂಂಡಾ ಕಾಯ್ದೆಯ ಅಡಿ ಯಾರನ್ನು ಬಂಧಿಸಬಹುದು ಅವರನ್ನು ಬಂಧಿಸಿ ಎಂದು ಸಿಎಂ ಯಡಿಯೂರಪ್ಪ ಗೃಹ ಇಲಾಖೆಗೆ ಸೂಚಿಸಿದ್ದಾರೆ.
ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಬೊಮ್ಮಾಯಿ, ಸಂಪೂರ್ಣ ಮಾಹಿತಿಯನ್ನು ಸಿಎಂಗೆ ನೀಡಿದ್ದೇವೆ. ದಂಗೆಯಲ್ಲಿ ಭಾಗವಹಿಸಿದವರಿಂದ ನಷ್ಟ ಭರ್ತಿಗೆ ಸಿಎಂ ಸೂಚಿಸಿದ್ದಾರೆ. ಗಲಭೆಯಲ್ಲಿ ಪಾಲ್ಗೊಂಡವರ ಹಿನ್ನೆಲೆ ಪರಿಶೀಲಿಸಿ ಗೂಂಡಾ ಕಾಯ್ದೆಯಡಿ ಬಂಧಿಸುವುದಕ್ಕೆ ಸಿಎಂ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಮೂರು ಜನ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಗಳನ್ನು ನೇಮಿಸಲು ಸಿಎಂ ಸೂಚನೆ ಕೊಟ್ಟಿದ್ದಾರೆ. ಕಾನೂನು ಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆಯ ಅಡಿಯೂ ಕ್ರಮ ಕೈಗೊಳ್ಳಲು ಸಿಎಂ ಸೂಚಿಸಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಗೃಹ ಸಚಿವ @BSBommai, ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ಗೃಹ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಡಿಜಿ-ಐಜಿಪಿ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಉಪಸ್ಥಿತರಿದ್ದರು. (2/2) pic.twitter.com/qKAPpxEzvO
ಗಲಭೆಕೋರರಿಗೆ ಉಗ್ರರ ನಂಟಿನ ಬಗ್ಗೆ ಕೇಳಲಾದ ಪ್ರಶ್ನೆಗೆ, ಇನ್ನೂ ತನಿಖೆ ಹಂತದಲ್ಲಿ ಇದೆ. ಯಾವ ಸಂಘಟನೆಯ ಜೊತೆ ಸಂಪರ್ಕದಲ್ಲಿದೆ ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಇದರ ಬಗ್ಗೆ ಹೇಳಲು ಆಗುವುದಿಲ್ಲ ಎಂದು ಉತ್ತರಿಸಿದರು.
ಸಭೆಯಲ್ಲಿ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ಗೃಹ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಡಿಜಿ-ಐಜಿಪಿ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಉಪಸ್ಥಿತರಿದ್ದರು.
ಸಿಎಂ ಸಭೆಯ ಹೈಲೈಟ್ಸ್: 1. ಆರೋಪಿಗಳ ತ್ವರಿತ ವಿಚಾರಣೆಗಾಗಿ, ಕಾನೂನು ಪ್ರಕ್ರಿಯೆಗಳಿಗಾಗಿ ಮೂವರು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಗಳ ನೇಮಕ. 2. ಗಲಭೆಯಡಿ ಬಂಧಿಸಿರುವ ಆರೋಪಿಗಳ ಜತೆ ಉಗ್ರ ಸಂಘಟನೆಗಳ ಲಿಂಕ್ ಇದ್ಯಾ ಅನ್ನೋ ಬಗ್ಗೆ ಬಗ್ಗೆ ಪರಿಶೀಲನೆಗೆ ನಿರ್ಧಾರ. 3. ಘಟನೆಯಿಂದ ಆಗಿರುವ ಆಸ್ತಿಪಾಸ್ತಿ ನಷ್ಟ ವಸೂಲಿಗೆ ಕ್ಲೇಂ ಕಮೀಷನರ್ ನೇಮಕ ಮಾಡುವಂತೆ ಹೈಕೋರ್ಟ್ ಗೆ ಮನವಿ ಸಲ್ಲಿಕೆಗೆ ನಿರ್ಧಾರ.
4. ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಹಿಂದೆ ಕೇಸ್ ಇದ್ದರೆ ಪರಿಶೀಲಿಸಿ ಅಂತಹವರ ಮೇಲೆ ಗೂಂಡಾ ಕಾಯ್ದೆಯ ಅಡಿ ಹಾಕಲು ನಿರ್ಧಾರ. 5. ಪ್ರಕರಣದಲ್ಲಿ ಭಾಗಿಯಾದವರು ಇತರೇ ಸಂಘಟನೆಗಳ ಜೊತೆ ಗುರ್ತಿಸಿಕೊಂಡಿರುವ ಬಗ್ಗೆ ಪರಿಶೀಲನೆ. 6. ಪ್ರಕರಣದ ಹಿಂದಿರುವ ರಾಜಕೀಯ ಕಾರಣಗಳ ಬಗ್ಗೆಯೂ ಪರಿಶೀಲನೆ.
7. ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ಒಂದೇ ತನಿಖಾ ತಂಡದಿಂದ ಮಾತ್ರ ಸದ್ಯಕ್ಕೆ ತನಿಖೆ. ಇದರಲ್ಲೂ ಸದ್ಯಕ್ಕೆ ಬದಲಾವಣೆ ಇಲ್ಲ. 8. ಗೋಲಿಬಾರ್ ಪ್ರಕರಣವೂ ಜಿಲ್ಲಾ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆ. ಇದರಲ್ಲಿ ಬದಲಾವಣೆ ಇಲ್ಲ. 9. ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆಯಡಿಯೂ ಕ್ರಮ ಕೈಗೊಳ್ಳಲು ಸಿಎಂ ಸೂಚನೆ