Tag: ಬೀಗ

  • ಪ್ರವಾಸಿಗರ ಆಕರ್ಷಣೆಯ ಕೇಂದ್ರ, ಐತಿಹಾಸಿಕ ಜಗನ್ಮೋಹನ ಅರಮನೆಗೆ ಬೀಗ!

    ಪ್ರವಾಸಿಗರ ಆಕರ್ಷಣೆಯ ಕೇಂದ್ರ, ಐತಿಹಾಸಿಕ ಜಗನ್ಮೋಹನ ಅರಮನೆಗೆ ಬೀಗ!

    ಮೈಸೂರು: ಜಿಲ್ಲೆಗೆ ಬರುವ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ ಐತಿಹಾಸಿಕ ಜಗನ್ಮೋಹನ ಅರಮನೆಗೆ ಬೀಗ ಬಿದ್ದಿದೆ. ಅರಮನೆ ದುರಸ್ತಿಯಲ್ಲಿದೆ ಎಂದು ಅರಮನೆಯ ಮುಖ್ಯ ದ್ವಾರಕ್ಕೆ ಫಲಕ ಹಾಕಲಾಗಿದೆ.

    ಎರಡು ತಿಂಗಳ ಕಾಲ ಜಗನ್ಮೋಹನ ಅರಮನೆ ನೋಡಿ ಆನಂದಿಸುವ ಭಾಗ್ಯ ಪ್ರವಾಸಿಗರಿಗೆ ಇಲ್ಲವಾಗಿದೆ. ಅದರಲ್ಲೂ ದಸರಾ ವೇಳೆ ಮೈಸೂರಿಗೆ ಬರುವ ಪ್ರವಾಸಿಗರಿಗೆ ಅರಮನೆ ನೋಡುವ ಭಾಗ್ಯ ಸಿಗುವುದಿಲ್ಲ. ಆರ್ಟ್ ಗ್ಯಾಲರಿಯ ಮೇಲ್ಛಾವಣಿಯ ಒಂದು ಭಾಗ ಕುಸಿದ ಕಾರಣ ಕಾಮಗಾರಿ ನಡೆಯುತ್ತಿದೆ. ಇದರಿಂದ ಜಗನ್ಮೋಹನ ಅರಮನೆ ವೀಕ್ಷಿಸಲು ಬರುವ ಪ್ರವಾಸಿಗರಿಗೆ ನಿರಾಸೆಯಾಗುತ್ತಿದೆ.

    ಅಂಬಾ ವಿಲಾಸ ಅರಮನೆ ಬೆಂಕಿಗೆ ಆಹುತಿಯಾದಾಗ ಇದೇ ಅರಮನೆಯಲ್ಲಿ ರಾಜ ಮನೆತನದವರು ವಾಸ ಮಾಡಿದ್ದರು. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪಟ್ಟಾಭಿಷೇಕ ಮಹೋತ್ಸವ ಇದೇ ಅರಮನೆಯಲ್ಲಿ ನಡೆದಿತ್ತು. 1861 ಸಾಂಪ್ರದಾಯಿಕ ಹಿಂದೂ ಶೈಲಿಯಲ್ಲಿ ನಿರ್ಮಾಣಗೊಂಡ ಅರಮನೆಯಲ್ಲಿ ಅಂದಿನಿಂದಲೂ ದಸರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಒಂದು ಭಾಗದಲ್ಲಿ ವೇದಿಕೆ ಸಭಾಂಗಣ ಮತ್ತೊಂದು ಭಾಗದಲ್ಲಿ ಆರ್ಟ್ ಗ್ಯಾಲರಿ ಹೊಂದಿದ್ದ ಅರಮನೆಗೆ ಈಗ ಬೀಗ ಬಿದ್ದಿದೆ.

    ರಾಜ ಮನೆತನದ ಆಡಳಿತಾವಧಿಯನ್ನು ನೆನಪಿಸುವಂತಹ ಸನ್ನಿವೇಶಗಳು ಜಗನ್ಮೋಹನ ಅರಮನೆಯ ಪ್ರಮುಖ ಆಕರ್ಷಣೆಯಾಗಿತ್ತು. ಶಸ್ತ್ರಾಸ್ತ್ರಗಳು, ತೈಲ ವರ್ಣದ ಚಿತ್ರಗಳು, ಪರಂಪರೆಯನ್ನ ಬಿಂಬಿಸುವ ವಸ್ತುಗಳು, ರಾಜಮಹಾರಾಜರ ಚಿತ್ರಗಳು ಆರ್ಟ್ ಗ್ಯಾಲರಿಯ ವಿಶೇಷವಾಗಿತ್ತು. ಮೈಸೂರಿಗೆ ಬರುವ ಪ್ರವಾಸಿಗರು ಜಗನ್ಮೋಹನ ಅರಮನೆ ವೀಕ್ಷಿಸದೆ ವಾಪಸ್ ಹೋಗುತ್ತಿರಲಿಲ್ಲ. ಇಂತಹ ಪ್ರವಾಸಿ ಕೇಂದ್ರಕ್ಕೆ ದಸರಾ ವೇಳೆ ಬೀಗ ಬಿದ್ದಿರುವುದು ವಿಪರ್ಯಾಸವಾಗಿದೆ.

    ಪ್ರವಾಸಿಗರನ್ನೇ ನೆಚ್ಚಿಕೊಂಡಿರುವ ಇಲ್ಲಿನ ವ್ಯಾಪಾರಸ್ಥರ ಹೊಟ್ಟೆಗೂ ತಣ್ಣೀರು ಬಟ್ಟೆ ಹಾಕಿಕೊಳ್ಳುವ ಪರಿಸ್ಥಿತಿ ಬಂದಿದೆ. ಹೀಗಾಗಿ ಜಗನ್ಮೋಹನ ಅರಮನೆ ದುರಸ್ತಿ ಕಾರ್ಯ ತ್ವರಿತವಾಗಿ ಮುಗಿಸಿ ದಸರಾ ವೇಳೆಗೆ ಪ್ರವಾಸಿಗರ ವೀಕ್ಷಣೆಗೆ ಅನುಕೂಲ ಕಲ್ಪಿಸಬೇಕು ಎಂದು ಸಾರ್ವಜನಿಕರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೀರಿನ ದರೋಡೆ ತಪ್ಪಿಸಲು ಗ್ರಾಮಸ್ಥರಿಂದ ಡ್ರಮ್‍ಗಳಿಗೆ ಬೀಗ!

    ನೀರಿನ ದರೋಡೆ ತಪ್ಪಿಸಲು ಗ್ರಾಮಸ್ಥರಿಂದ ಡ್ರಮ್‍ಗಳಿಗೆ ಬೀಗ!

    ಜೈಪುರ: ಭಾರತದ ಹಲವು ರಾಜ್ಯಗಳಲ್ಲಿ ನೀರಿನ ಸಮಸ್ಯೆ ಅಧಿಕವಾಗಿದ್ದು, ರಾಜಸ್ಥಾನದ ಹಲವು ಗ್ರಾಮಗಳಲ್ಲಿ ಸಂಗ್ರಹಿಸಿರುವ ನೀರಿನ ದರೋಡೆ ತಪ್ಪಿಸಲು ಅಲ್ಲಿನ ಗ್ರಾಮಸ್ಥರು ಡ್ರಮ್ ಗಳಿಗೆ ಬೀಗ ಹಾಕಿ ರಕ್ಷಣೆ ಮಾಡುತ್ತಿದ್ದಾರೆ.

    ರಾಜಸ್ಥಾನದ ಹಲವು ಪ್ರದೇಶಗಳಲ್ಲಿ ಬಿಸಿಲಿನ ತಾಪಮಾನ 45 ಡಿಗ್ರಿ ದಾಟಿದ್ದು, ನೀರಿನ ಕೊರತೆ ಅಧಿಕವಾಗಿದೆ. ಈ ವೇಳೆ ತಮ್ಮ ಮನೆ ಅಂಗಳದಲ್ಲಿ ಸಂಗ್ರಹಿಸಿರುವ ನೀರನ್ನು ರಕ್ಷಿಸಿಕೊಳ್ಳುವುದು ಮತ್ತೊಂದು ಸಮಸ್ಯೆಯಾಗಿದ್ದು, ಅದಕ್ಕಾಗಿ ಹಲವು ಗ್ರಾಮಗಳಲ್ಲಿ ಡ್ರಮ್ ಗಳಿಗೆ ಬೀಗ ಹಾಕಿರುವ ದೃಶ್ಯಗಳು ಕಾಣಸಿಗುತ್ತದೆ.

    ಸ್ಥಳೀಯ ಪರಸರಾಂಪುರ ಗ್ರಾಮಕ್ಕೆ ವಾರಕ್ಕೆ ಒಮ್ಮೆ ಮಾತ್ರ ನೀರನ್ನು ಹಿಂದೂಸ್ತಾನ್ ಜಿಂಕ್ ಲಿಮಿಟೆಡ್ ಸಂಸ್ಥೆ ಪೂರೈಸುತ್ತಿದ್ದು, ಈ ನೀರನ್ನು ಸಹ ದರೋಡೆಕೋರರು ಲೂಟಿ ಮಾಡುತ್ತಿರುವ ಪ್ರಕರಣಗಳು ಹೆಚ್ಚಿದೆ. ಅದ್ದರಿಂದ ಮನೆ ಹೊರಾಂಗಣದಲ್ಲಿರುವ ಡ್ರಮ್ ಗಳಿಗೆ ಬೀಗ ಹಾಕಿ ನೀರನ್ನು ರಕ್ಷಣೆ ಮಾಡುತ್ತಿರುವುದಾಗಿ ಸ್ಥಳೀಯ ಮಾಧ್ಯಮವೊಂದಕ್ಕೆ ಗ್ರಾಮಸ್ಥರು ತಿಳಿಸಿದ್ದಾರೆ.

    ಯಾವ ಸಮಯದಲ್ಲಿ ಬಂದು ಕಳ್ಳತನ ಮಾಡುತ್ತಾರೆ ಎಂನ್ನುವುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಹಲವು ವೇಳೆ ರಾತ್ರಿ ಸಮಯದಲ್ಲಿ ದರೋಡೆಕೋರರು ಬಂದು ನೀರನ್ನು ಲೂಟಿ ಮಾಡಿದ್ದಾರೆ. ಇದರಿಂದ ಕುಡಿಯಲು ನೀರಲ್ಲದೆ ಸಮಸ್ಯೆ ಎದುರಿಸಬೇಕಾಗುತ್ತದೆ. ಕಳ್ಳತನವಾಗದೇ ಇರಲು ಈ ಮಾರ್ಗ ಕಂಡುಕೊಂಡಿರುವುದಾಗಿ ಮತ್ತೊಬ್ಬ ಗ್ರಾಮಸ್ಥರು ತಿಳಿಸಿದ್ದಾರೆ.

    ಸ್ಥಳೀಯ ಪಂಚಾಯಿತಿ ನೀರಿನ ಮಿತ ಬಳಕೆಗೆ ಸಲಹೆ ನೀಡಿದೆ. ಹಲವರು ನೀರಿಗಾಗಿ ಹೋರಾಟ ಮಾಡುತ್ತಾರೆ. ಮೂರು ದಿನಕ್ಕೆ ಒಮ್ಮೆಯಾದರೂ ನೀರು ಪೂರೈಕೆ ಮಾಡಬೇಕು ಎಂದು ಗ್ರಾಮದ ಮಹಿಳೆ ತಿಳಿಸಿದ್ದಾಗಿ ವರದಿಯಾಗಿದೆ. ಇನ್ನು ಮಧ್ಯಪ್ರದೇಶ, ಉತ್ತರಾಖಂಡ, ಛತ್ತೀಸ್‍ಗಢ ರಾಜ್ಯಗಳ ಹಲವು ಪ್ರದೇಶಗಳಲ್ಲೂ ಇದೇ ಪರಿಸ್ಥಿತಿ ಇರುವುದಾಗಿ ವರದಿಯಾಗಿದೆ.