Tag: ಬಿ.ಕೆ.ಶಿವಕುಮಾರ್

  • ಲಕ್ಷ್ಮಿ ಹೆಬ್ಬಾಳ್ಕರನ್ನ ಕಿತ್ತೂರು ರಾಣಿ ಚೆನ್ನಮ್ಮರಿಗೆ ಹೋಲಿಸಿದ ಭದ್ರಾವತಿ ಶಾಸಕ

    ಲಕ್ಷ್ಮಿ ಹೆಬ್ಬಾಳ್ಕರನ್ನ ಕಿತ್ತೂರು ರಾಣಿ ಚೆನ್ನಮ್ಮರಿಗೆ ಹೋಲಿಸಿದ ಭದ್ರಾವತಿ ಶಾಸಕ

    – ಮಲೆನಾಡಿನ ಹುಡುಗಿಗೆ ವಜ್ರದ ಉಂಗುರ ತೊಡಿಸಿದ ಶಾಸಕಿ ಪುತ್ರ

    ಶಿವಮೊಗ್ಗ: ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಶಿವಮೊಗ್ಗದ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಕುಟುಂಬ ಇಂದು ಸಂಬಂಧದ ಬಾಂಧವ್ಯದೊಂದಿಗೆ ಒಂದಾಗಿವೆ. ಜಿಲ್ಲೆಯಲ್ಲಿ ಈ ಕುಟುಂಬದ ಕುಡಿಗಳ ನಿಶ್ಚಿತಾರ್ಥ ನೆರವೇರಿದ್ದು, ಸಂಪ್ರದಾಯದಂತೆ ಈ ಕಾರ್ಯಕ್ರಮ ನೆರವೇರಿದೆ.

    ನಗರದ ಸರ್ಜಿ ಕನ್ವೆನ್ಷನ್ ಹಾಲ್‍ನಲ್ಲಿ ಸಂಗಮೇಶ್ ಸಹೋದರ ಬಿ.ಕೆ.ಶಿವಕುಮಾರ್ ಪುತ್ರಿ ಹಿತಾ ಹೊತೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ನಿಶ್ಚಿತಾರ್ಥ ನೆರವೇರಿತು. ನಿಶ್ಚಿತಾರ್ಥಕ್ಕೆ ಜಿಲ್ಲೆಯ ಮತ್ತು ಹೊರ ಜಿಲ್ಲೆಯ ಮುಖಂಡರೆಲ್ಲರೂ ಪಾಲ್ಗೊಂಡಿದ್ದರು. ವಧು-ವರ ಇಬ್ಬರು ಪರಸ್ಪರ ವಜ್ರದ ಉಂಗುರ ಬದಲಾಯಿಸಿಕೊಂಡಿದ್ದು, ಆಹ್ವಾನಿತ ಗಣ್ಯರು ಮತ್ತು ಹಿರಿಯರಿಂದ ಆಶೀರ್ವಾದ ಪಡೆದರು.

    ಈ ವೇಳೆ ಮಾತನಾಡಿದ ಸಂಗಮೇಶ್, ಲಕ್ಷ್ಮಿ ಹೆಬ್ಬಾಳ್ಕರ್ ಮನೆಗೆ ಸೊಸೆಯಲ್ಲ, ಮಗಳಾಗಿ ನಮ್ಮ ಮಗಳನ್ನು ಕಳುಹಿಸುತ್ತಿದ್ದೇವೆ ಎಂದು ಸಂತಸ ಹಂಚಿಕೊಂಡರು. ಅಲ್ಲದೇ ಬೆಳಗಾವಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮರಾಗಿ ಹೋರಾಟ ಮಾಡಿಕೊಂಡು ಸಮಾಜ ಸೇವೆ ಮಾಡುತ್ತಿದ್ದಾರೆ. ಅವರ ಕುಟುಂಬಂದೊಂದಿಗೆ ಬಾಂಧವ್ಯ ಬೆಸೆದಿರುವುದು ಸಂತಸವಾಗಿದೆ ಎಂದರು.

    ನವೆಂಬರ್ ತಿಂಗಳಲ್ಲಿ ಇವರಿಬ್ಬರ ಮದುವೆ ಗೋವಾದಲ್ಲಿ ನಿಶ್ಚಯವಾಗಿದೆ. ಈ ಮೂಲಕ ರಾಜಕೀಯ ಕುಟುಂಬವೊಂದು ನೆಂಟಸ್ತನ ಬೆಸೆದಂತಾಗಿದೆ. ಮಲೆನಾಡಿನ ಭದ್ರಾ ದಂಡೆಯ ಮಗಳು, ನಮ್ಮ ಮನೆಯ ಸೊಸೆಯಾಗುತ್ತಿರುವುದಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಂತಸ ವ್ಯಕ್ತಪಡಿಸಿದರು.

    ಇದೊಂದು ಋಣಾನುಬಂಧವಾಗಿದ್ದು ಹುಡುಗ-ಹುಡುಗಿ ಒಪ್ಪಿಕೊಂಡು ಈ ಮದುವೆ ನಿಶ್ಚಯವಾಗಿತ್ತು. ನಂತರ ಎರಡೂ ಕುಟುಂಬಗಳು ಸಂತೋಷದಿಂದ ಒಪ್ಪಿ ನಿಶ್ಚಿತಾರ್ಥ ನೆರವೇರಿಸಿವೆ. ನಿಶ್ಚಿತಾರ್ಥದಲ್ಲಿ ಬಂದ ಅತಿಥಿಗಳು ಮತ್ತು ಆಹ್ವಾನಿತರಿಗೆಲ್ಲರಿಗೂ ಸಂಗಮೇಶ್ ಕುಟುಂಬ ಮೈಸೂರು ಪೇಟ ತೊಡಿಸಿ, ಬರಮಾಡಿಕೊಂಡಿದ್ದಲ್ಲದೇ ಆತಿಥ್ಯ ಕೂಡ ಭರ್ಜರಿಯಾಗಿಯೇ ನೀಡಿದ್ದಾರೆ.