Tag: ಬಿಸಿಎಂ ಹಾಸ್ಟೆಲ್

  • ಲಾ ಕಾಲೇಜ್‌ಗೆ ಸೇರಿಸದಿದ್ದರೇ ಆಸ್ತಿಯಲ್ಲಿ ಭಾಗ ಕೊಡು ಅಂತ ನಮ್ಮಪ್ಪನನ್ನ ಕೇಳಿದ್ದೆ: ಸಿಎಂ

    ಲಾ ಕಾಲೇಜ್‌ಗೆ ಸೇರಿಸದಿದ್ದರೇ ಆಸ್ತಿಯಲ್ಲಿ ಭಾಗ ಕೊಡು ಅಂತ ನಮ್ಮಪ್ಪನನ್ನ ಕೇಳಿದ್ದೆ: ಸಿಎಂ

    ನಾನು ಲಾ ಓದದಿದ್ದರೇ ಇವತ್ತು ಸಿಎಂ ಆಗುತ್ತಿರಲಿಲ್ಲ

    ಮೈಸೂರು: ನಮ್ಮ ಅಪ್ಪ ನನಗೆ ಲಾ ಓದಿಸಲು ತಯಾರಿರಲಿಲ್ಲ. ಅದಕ್ಕೆ ಲಾ ಕಾಲೇಜ್ ಸೇರಿಸದಿದ್ದರೆ ನನ್ನ ಆಸ್ತಿ ಭಾಗ ನನಗೆ ಕೊಡು ಎಂದು ನಮ್ಮ ಅಪ್ಪನನ್ನು ಕೇಳಿದ್ದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

    ನಗರದಲ್ಲಿ ಬಿಸಿಎಂ ಹಾಸ್ಟೆಲ್ (BCM Hostel) ವಿದ್ಯಾರ್ಥಿಗಳ ಸಂಘ ಉದ್ಘಾಟಸಿ ಮಾತನಾಡಿದ ಅವರು, ನಮ್ಮ ಅಪ್ಪ ನನಗೆ ಲಾ (Law) ಓದಿಸಲು ತಯಾರಿರಲಿಲ್ಲ. ಅದಕ್ಕಾಗಿ ಲಾ ಕಾಲೇಜ್ ಸೇರಿಸದಿದ್ದರೆ ನನ್ನ ಆಸ್ತಿ ಭಾಗ ನನಗೆ ಕೊಡು ಎಂದು ನಮ್ಮ ಅಪ್ಪನನ್ನು ಕೇಳಿದ್ದೆ. ನಮ್ಮ ಊರಿನ ಶಾನಭೋಗ ಕುರುಬರೆಲ್ಲಾ ಲಾ ಓದುತ್ತಾರಾ ಅಂತಾ ಹೇಳುತ್ತಿದ್ದರು. ನಮ್ಮ ಅಪ್ಪ ಅದನ್ನೇ ಕೇಳಿಕೊಂಡು ಲಾ ಓದೋದು ಬೇಡ ಅಂತಿದ್ದ. ನಾನು ಲಾ ಓದದಿದ್ದರೆ ಇವತ್ತು ಸಿಎಂ ಆಗುತ್ತಿರಲಿಲ್ಲ. ಹಿಂದೆ ಗುರು, ಮುಂದೆ ಗುರಿ ಇರಬೇಕು. ಈಗ ಹಿಂದೆ ಗುರುವು ಇಲ್ಲ ಮುಂದೆ ಗುರಿಯೂ ಇಲ್ಲ. ಓದಿದವರು ಜಾತಿ ಮಾಡುವುದನ್ನು ಮೊದಲ ಬಿಡಬೇಕು. ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಳ್ಳಿ ಎಂದರು.ಇದನ್ನೂ ಓದಿ: ದೊಡ್ಮನೆ ಶೋಗೂ ಮೊದಲೇ ಸ್ವರ್ಗ, ನರಕದ ಲುಕ್ ರಿವೀಲ್- ಸ್ಪರ್ಧಿಗಳು ಶಾಕ್

    ಕರ್ಮ ಸಿದ್ಧಾಂತ, ಹಣೆಬರಹ ಅನ್ನುವುದೆಲ್ಲಾ ಸುಳ್ಳು. ಯಾವ ಧರ್ಮ, ಯಾವ ದೇವರು ಕರ್ಮ ಸಿದ್ಧಾಂತವನ್ನು ಬೆಂಬಲಿಸಲ್ಲ. ಮನುಷ್ಯನಿಗೆ ಅವಕಾಶ ಸಿಕ್ಕರೆ ಒಳ್ಳೆಯ ಶಿಕ್ಷಣ ಪಡೆದು ಒಳ್ಳೆಯ ಜೀವನ ಮಾಡುತ್ತಾನೆ. ನಾನು ಓದುವಾಗ ಹಿಂದುಳಿದವರಿಗೆ ಮೀಸಲಾತಿ ಇರಲಿಲ್ಲ. ಹೀಗಾಗಿ ನನಗೆ ಎಂಬಿಬಿಎಸ್ ಸೀಟು ಸಿಗಲಿಲ್ಲ. ಎಂಎಸ್ಸಿ ಸೀಟು ಸಿಗಲಿಲ್ಲ. ಸೀಟು ಸಿಗದೇ ಒಂದು ವರ್ಷ ಹೊಲ ಉಳುವ ಕೆಲಸ ಮಾಡಿದ್ದೆ. ಮೈಸೂರಿನಲ್ಲಿ ನಮ್ಮಪ್ಪ ಹಾಸ್ಟೆಲ್‌ಗೆ ಸೇರಿಸಲಿಲ್ಲ. ಇದರಿಂದ ನಾನೇ ರೂಂ ಮಾಡಿಕೊಂಡಿದ್ದೆ. ರೂಂನಲ್ಲಿ ಅಡುಗೆ ಮಾಡಿಕೊಂಡು ಊಟ ಮಾಡ್ತಿದ್ದೆ ಎಂದು ಹೇಳಿದರು.

    ಇದೇ ವೇಳೆ ಜಾತಿಗಣತಿ ಕುರಿತು ಮಾತನಾಡಿದ ಅವರು, ಜಾತಿಗಣತಿ ವರದಿ ನನ್ನ ಕೈ ಸೇರಿದೆ. ನಾನು ಇನ್ನೂ ಅದನ್ನು ಪರಿಪೂರ್ಣವಾಗಿ ನೋಡಿಲ್ಲ. ಮುಂದಿನ ದಿನಗಳಲ್ಲಿ ಅದನ್ನು ಕ್ಯಾಬಿನೆಟ್‌ಗೆ ಇಟ್ಟು ಜಾರಿಗೆ ತರುತ್ತೇನೆ. ಜಾತಿಗಣತಿ ಜಾರಿಗೆ ತರುವುದು ನಮ್ಮ ಪಕ್ಷದ ಅಜೆಂಡಾ. ಜಾರಿ ಮಾಡೇ ಮಾಡುತ್ತೇನೆ ಎಂದು ಖಡಕ್ಕಾಗಿ ಉತ್ತರಿಸಿದ್ದಾರೆ.ಇದನ್ನೂ ಓದಿ: ಜಮ್ಮು-ಕಾಶ್ಮೀರ: ಕಥುವಾ ಎನ್‌ಕೌಂಟರ್‌ನಲ್ಲಿ ಓರ್ವ ಭಯೋತ್ಪಾದಕನ ಹತ್ಯೆ – ಉಗ್ರರಿಗಾಗಿ ಮುಂದುವರಿದ ಶೋಧ

  • ಬಿಸಿಎಂ ಹಾಸ್ಟೆಲ್‌ನಲ್ಲಿ ಕೋವಿಡ್ ಕೇರ್ ಸೆಂಟರ್ – ಮಂಡ್ಯ ವಿದ್ಯಾರ್ಥಿಗಳ ವಿರೋಧ

    ಬಿಸಿಎಂ ಹಾಸ್ಟೆಲ್‌ನಲ್ಲಿ ಕೋವಿಡ್ ಕೇರ್ ಸೆಂಟರ್ – ಮಂಡ್ಯ ವಿದ್ಯಾರ್ಥಿಗಳ ವಿರೋಧ

    ಮಂಡ್ಯ: ಕೆರೆ ಅಂಗಳದಲ್ಲಿರುವ ಬಿಸಿಎಂ ಹಾಸ್ಟೆಲ್‌ನಲ್ಲಿ ಕೋವಿಡ್ ಸೆಂಟರ್ ತೆರೆಯಲು ಮುಂದಾದ ಕ್ರಮಕ್ಕೆ ಮಂಡ್ಯ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

    ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿದ್ದು ಮುಂದಿನ ತಿಂಗಳು ನಮಗೆ ಪರೀಕ್ಷೆ ಇದೆ. ಆದರೆ ಈಗ ಹಾಸ್ಟೆಲ್ ಬಿಟ್ಟು ಕೊಡುವಂತೆ ಹೇಳಿದ್ದಾರೆ. ಬೇರೆ ಹಾಸ್ಟೆಲ್‌ನಲ್ಲಿ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಅಲ್ಲಿಗೆ ನಮ್ಮನ್ನು ಕಳುಹಿಸುವುದರಿಂದ ನಮಗೆ ಓದಿಕೊಳ್ಳಲು ತೊಂದರೆಯಾಗುತ್ತದೆ ಎಂದು ಕಷ್ಟವನ್ನು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಉಡುಪಿ ಹಿಜಬ್ ವಿವಾದ – NSUI ಭೇಟಿ ನಿರಾಕರಿಸಿದ ಕಾಲೇಜು ಆಡಳಿತ ಮಂಡಳಿ

    ಇನ್ನೊಂದೆಡೆ ಸ್ಥಳೀಯರು ಇಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಿದರೆ ನಮಗೂ ತೊಂದರೆಯಾಗುತ್ತೆ, ನಮ್ಮನ್ನು ದಿನಗೂಲಿ ಕೆಲಸಕ್ಕೆ ಎಲ್ಲಿಯೂ ಕರೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕ್ಷೇತ್ರದ ಸಮಸ್ಯೆ ಹೇಳಲು ಫೋನ್ ಮಾಡಿದ್ದ ಮಹಿಳೆಗೆ ಅನಿಲ್ ಬೆನಕೆ ಅವಾಜ್

    ಪ್ರತಿಭಟನಾ ಸ್ಥಳಕ್ಕೆ ಹಿಂದುಳಿದ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಹರೀಶ್ ಭೇಟಿ ನೀಡಿ ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದ್ದಾರೆ. ಜಿಲ್ಲಾಧಿಕಾರಿ ಸೂಚನೆಯಂತೆ ವಿದ್ಯಾರ್ಥಿಗಳನ್ನು ಸೂಕ್ತ ಸ್ಥಳಕ್ಕೆ ವರ್ಗಾಯಿಸುವುದಾಗಿ ತೀರ್ಮಾನಿಸಲಾಗಿದೆ. ಆದರೆ ಇಲ್ಲಿ ಕ್ವಾರಂಟೈನ್ ಕೇಂದ್ರ ಬೇಡ ಎಂದು ಸ್ಥಳೀಯರು ಪಟ್ಟು ಹಿಡಿದಿದ್ದು, ಅಧಿಕಾರಿಗಳೊಂದಿಗೆ ತರಾಟೆ ನಡೆಸಿದ್ದಾರೆ.

  • ಏಕಾಏಕಿ ಹಾಸ್ಟೆಲ್ ಲಾಡ್ಜ್‌ಗೆ ಶಿಫ್ಟ್- ಅಧಿಕಾರಿ ವಿರುದ್ಧ ವಿದ್ಯಾರ್ಥಿನಿಯರು ಕಿಡಿ

    ಏಕಾಏಕಿ ಹಾಸ್ಟೆಲ್ ಲಾಡ್ಜ್‌ಗೆ ಶಿಫ್ಟ್- ಅಧಿಕಾರಿ ವಿರುದ್ಧ ವಿದ್ಯಾರ್ಥಿನಿಯರು ಕಿಡಿ

    ಕಲಬುರಗಿ: ಬಿಸಿಎಂ ಹಾಸ್ಟೆಲ್‍ನಲ್ಲಿ ಆರಾಮಾಗಿ ಓದಿಕೊಂಡಿದ್ದ ವಿದ್ಯಾರ್ಥಿನಿಯರನ್ನು ಇದ್ದಕ್ಕಿದ್ದ ಹಾಗೆ ಲಾಡ್ಜ್ ಗೆ ಶಿಫ್ಟ್ ಮಾಡುವಂತೆ ಒತ್ತಡ ಹಾಕಲಾಗಿದೆ. ರೊಚ್ಚಿಗೆದ್ದ ವಿದ್ಯಾರ್ಥಿನಿಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹೌದು. ಕಲಬುರಗಿಯ ದೇವರಾಜ್ ಅರಸು ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ಇಷ್ಟು ದಿನ ಸುಸಜ್ಜಿತವಾಗಿರೋ ಹಾಸ್ಟೆಲ್‍ನಲ್ಲಿ ಆರಾಮಾಗಿ ಓದಿಕೊಂಡಿದ್ದರು. ಆದರೆ ಇದೀಗ ವಿದ್ಯಾರ್ಥಿನಿಯರನ್ನು ಏಕಾಏಕಿಯಾಗಿ ಬಿಸಿಎಂ ಇಲಾಖೆ ಅಧಿಕಾರಿ ಮೆಹಬೂಬ್ ಪಾಷಾ, ಲಾಡ್ಜ್ ಗೆ ಶಿಫ್ಟ್ ಆಗುವಂತೆ ಒತ್ತಡ ಹೇರಿದ್ದಾನೆ. ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿನಿಯರು ವಸತಿ ನಿಲಯಕ್ಕೆ ಬೀಗ ಹಾಕಿ ಹಾಸ್ಟೆಲ್ ಬಿಟ್ಟು ಬರಲ್ಲ ಎಂದು ಪಟ್ಟು ಹಿಡಿದಿದ್ದಾರೆ.

    ಪಂಚಶೀಲ ಮತ್ತು ಶಾಸ್ತ್ರಿನಗರದಲ್ಲಿರುವ ಎರಡು ಬಿಸಿಎಂ ಹಾಸ್ಟೆಲ್‍ಗಳಲ್ಲಿ ಸುಮಾರು 200 ವಿದ್ಯಾರ್ಥಿನಿಯರಿದ್ದಾರೆ. ಇಲ್ಲಿ ಯಾವುದೇ ಪುಂಡ ಪೋಕರಿಗಳ ಕಾಟ ಕೂಡ ಇಲ್ಲ. ಆದರೆ ಕಲಬುರಗಿ ಲಾಡ್ಜ್ ಮಾಲೀಕರ ಹಣದಾಸೆಗೆ ಗುರಿಯಾದ ಬಿಸಿಎಂ ಇಲಾಖೆ ಅಧಿಕಾರಿ ಮೆಹಬೂಬ್ ಪಾಷಾ ಮಹಿಳಾ ವಸತಿ ನಿಲಯವನ್ನೇ ಲಾಡ್ಜ್ ಗೆ ಶಿಫ್ಟ್ ಮಾಡಿದ್ದಾನೆ. ಈ ಕುರಿತು ವಾಟ್ಸಪ್ ವಾಯ್ಸ್ ರೆಕಾರ್ಡ್‍ನ್ನು ಹಾಸ್ಟೆಲ್ ವಾರ್ಡನ್‍ಗಳಿಗೆ ಕಳುಹಿಸಿದ್ದಾನೆ. ಇದಕ್ಕೆ ವಿರೋಧ ಮಾಡಿದರೆ ವಾರ್ಡನ್ ವಿರುದ್ಧ ಕ್ರಮ ಜರುಗಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾನೆ.

    ಸರ್ಕಾರ ಕೊಟ್ಟಿರೋ ವಸತಿ ನಿಲಯವನ್ನು ಹಣದಾಸೆಗಾಗಿ ಸ್ವತಃ  ಅಧಿಕಾರಿಯೇ ಸೇಲ್‍ಗಿಟ್ಟಿದ್ದಾನೆ. ಸಂಬಂಧಪಟ್ಟ ಅಧಿಕಾರಿಗಳು ಭ್ರಷ್ಟ ಬಿಸಿಎಂ ಅಧಿಕಾರಿ ಮೆಹಬೂಬ್ ಪಾಷಾ ವಿರುದ್ಧ ಕ್ರಮ ಜರುಗಿಸಿ ವಿದ್ಯಾರ್ಥಿನಿಯರ ರಕ್ಷಣೆಗೆ ಮುಂದಾಗಬೇಕಿದೆ.

  • ಹಾಸ್ಟೆಲ್ ನಲ್ಲಿ ಸ್ನಾನಕ್ಕೆ ನೀರಿಲ್ಲ ಎಂದು ಕಾಲುವೆಗೆ ಹೋದ ವಿದ್ಯಾರ್ಥಿ ನೀರು ಪಾಲು

    ಹಾಸ್ಟೆಲ್ ನಲ್ಲಿ ಸ್ನಾನಕ್ಕೆ ನೀರಿಲ್ಲ ಎಂದು ಕಾಲುವೆಗೆ ಹೋದ ವಿದ್ಯಾರ್ಥಿ ನೀರು ಪಾಲು

    ಬಳ್ಳಾರಿ: ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಲ್ಲಿ ನೀರು ಇಲ್ಲದೇ ಇರುವದರಿಂದ ಕಾಲುವೆಯಲ್ಲಿ ಸ್ನಾನ ಮಾಡಲು ಹೋದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.

    ಮೊದನ್ ಸಾಬ್(21) ಮೃತ ವಿದ್ಯಾರ್ಥಿ. ಬಳ್ಳಾರಿಯ ಗೌತಮ್ ನಗರದ ಬಿಸಿಎಂ ಹಾಸ್ಟೆಲ್ ನಲ್ಲಿರುವ ಭಾಷಾ ಇಂದು ಮುಂಜಾನೆ ಎಚ್‍ಎಲ್‍ಸಿ ಕಾಲುವೆಯಲ್ಲಿ ಸ್ನಾನ ಮಾಡಲು ಹೋಗಿದ್ದಾರೆ. ನೀರು ಜೋರಾಗಿ ಹರಿಯುತ್ತಿದ್ದರಿಂದ ಸ್ನಾನ ಮಾಡುವ ವೇಳೆಯಲ್ಲಿ ಸುಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.

    ಬಿಸಿಎಂ ಹಾಸ್ಟೆಲ್‍ನಲ್ಲಿ ಸರಿಯಾಗಿ ಮೂಲಭೂತ ಸೌಲಭ್ಯಗಳು ಇಲ್ಲದ ಪರಿಣಾಮ ವಿದ್ಯಾರ್ಥಿಗಳು ಕಾಲುವೆ ನೀರಿನಲ್ಲೆ ಸ್ನಾನ ಮಾಡಬೇಕಾಗಿದೆ. ಹೀಗಾಗಿ ಸ್ನಾನ ಮಾಡಲು ಹೋಗಿದ್ದ ಭಾಷಾ ನೀರುಪಾಲಾಗಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಹಾಸ್ಟೆಲ್ ಮುಂಭಾಗದಲ್ಲಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

    ವಿಷಯ ತಿಳಿದು ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಮೃತ ದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಈ ಸಂಬಂಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.