Tag: ಬಿಡಿಎ

  • ಬೆಂಗಳೂರಲ್ಲಿ ಅಕ್ರಮವಾಗಿ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್

    ಬೆಂಗಳೂರಲ್ಲಿ ಅಕ್ರಮವಾಗಿ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್

    ಬೆಂಗಳೂರು: ಮಹಾನಗರದಲ್ಲಿ ಬಿಡಿಎ ಕಾಯಿದೆ ಉಲ್ಲಂಘನೆ ಮಾಡಿ ಮನೆ ಕಟ್ಟಿಕೊಂಡಿರುವ ಮಂದಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ನಿಯಮ ಉಲ್ಲಂಘಿಸಿನೆ ಮನೆ ಕಟ್ಟಿದ್ದರೆ ದಂಡ ಕಟ್ಟಿಸಿಕೊಂಡು ಕಾನೂನು ಬದ್ಧ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.

    ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೇ ಬಿಡಿಎ 38 ಜ ಕಾಯಿದೆ ತಿದ್ದುಪಡಿ ಸುಗ್ರೀವಾಜ್ಞೆಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ.

    ತಿದ್ದುಪಡಿ ಅನ್ವಯ 12 ವರ್ಷದ ಹಿಂದೆ ಮನೆ ಕಟ್ಟಿಕೊಂಡಿದ್ದವರಿಗೆ ಮಾತ್ರ ಈ ಸೌಲಭ್ಯ ಲಭ್ಯವಾಗಲಿದೆ. 20*30 ನಿವೇಶನದಲ್ಲಿ ಮನೆ ಕಟ್ಟಿಕೊಂಡಿರುವವರು ಮಾರುಕಟ್ಟೆ ಮೌಲ್ಯದ ಶೇ.10ರಷ್ಟು ದಂಡ ಕಟ್ಟಬೇಕಿದೆ. 30*40 ನಿವೇಶನದಲ್ಲಿ ಮನೆ ಕಟ್ಟಿಕೊಂಡಿರುವವರು ಮಾರುಕಟ್ಟೆ ಮೌಲ್ಯದ ಶೇ.20ರಷ್ಟು ದಂಡ ಪಾವತಿಸಬೇಕು. 40*50 ಹಾಗೂ 50*80 ನಿವೇಶನದಲ್ಲಿ ಮನೆ ಕಟ್ಟಿಕೊಂಡಿರುವವರು ಶೇ.40 ರಷ್ಟು ಮಾರುಕಟ್ಟೆ ಮೌಲ್ಯದ ದಂಡ ಕಟ್ಟ ಬೇಕಿದೆ.

    ಉಳಿದಂತೆ 50*80 ನಂತರದ ಕಟ್ಟಡಗಳಿಗೆ ಯಾವುದೇ ಸಕ್ರಮ ಮಾಡಲ್ಲ. ಖಾಲಿ ನಿವೇಶನ ಮತ್ತು ಹೊಸದಾಗಿ ಮನೆ ಕಟ್ಟಿಕೊಂಡಿರುವವರಿಗೆ ಈ ಸೌಲಭ್ಯ ಅನ್ವಯ ಆಗುವುದಿಲ್ಲ. ಇದರಿಂದ ಅಂದಾಜು 50 ಸಾವಿರ ಮಂದಿಗೆ ಲಾಭ ಆಗಲಿದೆ.

  • ಬಿಡಿಎ ಮುಂದೆ ರೈತರ ಅಹೋರಾತ್ರಿ ಧರಣಿ

    ಬಿಡಿಎ ಮುಂದೆ ರೈತರ ಅಹೋರಾತ್ರಿ ಧರಣಿ

    ಬೆಂಗಳೂರು: ಬಿಡಿಎಯು ಪೆರಿಪೆರಲ್ ರಿಂಗ್ ರಸ್ತೆ ಯೋಜನೆಗೆ ಸ್ವಾಧೀನ ಪಡೆಸಿಕೊಳ್ಳುತ್ತಿರುವ ರೈತರ ಭೂಮಿಗೆ ನ್ಯಾಯಯುತವಾದ ಪರಿಹಾರಕ್ಕೆ ಆಗ್ರಹಿಸಿ, ನೂರಾರು ರೈತರು ಬಿಡಿಎ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ.

    ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಈ ಸತ್ಯಾಗ್ರಹ ನಡೆಯುತ್ತಿದೆ. 15 ವರ್ಷದ ಹಿಂದಿನ ಯೋಜನೆಗೆ ತ್ವರಿತಗತಿಯಲ್ಲಿ ಸರ್ಕಾರ ಪರಿಹಾರ ನೀಡಬೇಕು. 65 ಕಿಲೋ ಮೀಟರ್ ಯೋಜನೆಗಾಗಿ ರೈತರ ಭೂಮಿಯನ್ನು ಬಿಡಿಎ ವಶಪಡಿಸಿಕೊಂಡಿತ್ತು. ಆದರೆ ಸ್ವಾಧೀನ ಮಾಡಿಕೊಂಡಿರುವ ರೈತರ ಭೂಮಿಗೆ ಸರ್ಕಾರ ನಿಗದಿತ ಬೆಲೆ ನೀಡಿಲ್ಲ. ರೈತರ ಭೂಮಿಗೆ ಎಕರೆಗೆ 5 ಕೋಟಿ ಪರಿಹಾರ ನೀಡಬೇಕು ಎಂಬುದು ಭೂಮಿ ಕಳೆದುಕೊಳ್ಳುತ್ತಿರುವ ರೈತರ ಆಗ್ರಹವಾಗಿದೆ.

    ರೈತರ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬಂದ ಸಿಎಂ ರಾಜಕೀಯವ ಕಾರ್ಯದರ್ಶಿ ಎಸ್. ಆರ್ ವಿಶ್ವನಾಥ್ ರೈತರನ್ನು ಮನವೊಲಿಸುವ ಪ್ರಯತ್ನ ಮಾಡಿದರು. ಈ ಬಗ್ಗೆ ಸರ್ಕಾರದ ಅಡ್ವಕೇಟ್ ಜನರಲ್ ಜೊತೆ ಮಾತನಾಡುತ್ತೇನೆ. ಅದಕ್ಕೂ ಮುನ್ನ ನಿಮ್ಮ ರೈತ ಮುಖಂಡರ ಜೊತೆ ಮಾತನಾಡಿ, ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಚರ್ಚೆ ಮಾಡಿದ ಬಳಿಕ ನೇರವಾಗಿ ಸಿಎಂ ಜೊತೆ ಮಾತನಾಡುತ್ತೇನೆ. ಈ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಕಲ್ಪಿಸಿಕೊಡಬೇಕು ಎಂಬುದು ನನ್ನ ಅಪೇಕ್ಷೆ ಕೂಡ ಎಂದು ಹೇಳಿದ್ರು.

    ರೈತರ ಜೊತೆ ಮಾತನಾಡುವ ವೇಳೆ, ಎಸ್ ಆರ್ ವಿಶ್ವನಾಥ್ ಅವರನ್ನು ಕೆಲ ರೈತರು ತರಾಟೆಗೆ ತೆಗೆದುಕೊಂಡ ಪ್ರಸಂಗವು ನಡೆಯಿತು. ಯಾವುದೇ ಕಾರಣಕ್ಕೂ ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈ ಬಿಡಲ್ಲ ಎಂದು ಹೇಳಿ ರೈತರು ಬಿಡಿಎ ಮುಂದೆಯೇ ಅಡುಗೆ ಮಾಡುತ್ತಾ ಪ್ರತಿಭಟಿಸಿದರು.

  • ಬಿಡಿಎ ಒತ್ತುವರಿ ತೆರವು ಕಾರ್ಯಚರಣೆ ಚುರುಕು

    ಬಿಡಿಎ ಒತ್ತುವರಿ ತೆರವು ಕಾರ್ಯಚರಣೆ ಚುರುಕು

    ಬೆಂಗಳೂರು: ಉಪಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತೆ ಒತ್ತುವರಿ ತೆರವು ಕಾರ್ಯಚರಣೆ ಆರಂಭಿಸಿದೆ.

    ನಾಗವಾರ ಗ್ರಾಮದ ಸರ್ವೆ ನಂಬರ್ 75ರಲ್ಲಿ ಹೆಚ್‍ಬಿಆರ್ 2ನೇ ಹಂತ ಬಡಾವಣೆ ನಿರ್ಮಾಣಕ್ಕಾಗಿ ಪ್ರಾಧಿಕಾರ ನೋಟಿಫಿಕೇಶನ್ ಹೊರಡಿಸಿದ್ದ ಜಾಗದ ಒತ್ತುವರಿಯಾಗಿತ್ತು. ಈ ಒತ್ತುವರಿಯಲ್ಲಿ 3 ಅಂತಸ್ತಿನ ಕಟ್ಟಡ, ಹಲವು ಶೆಡ್‍ಗಳ ನಿರ್ಮಾಣವಾಗಿತ್ತು. ಎಲ್ಲವನ್ನ ಇಂದು ಬಿಡಿಎ ತನ್ನ ವಶಕ್ಕೆ ಪಡೆದಿದೆ. ಸುಮಾರು 6 ಎಕ್ರೆ 3 ಗುಂಟೆ ಬಿಡಿಎಗೆ ಸೇರಬೇಕಾದ ಜಾಗ ಒತ್ತುವರಿಯಾಗಿದ್ದು, ಎಲ್ಲಾ ಜಾಗವನ್ನ ವಶಕ್ಕೆ ಪಡೆಯಲಾಗಿದೆ. ಸುಮಾರು 320 ಕೋಟಿ ರೂ. ಬೆಲೆ ಬಾಳುವ ಜಾಗವನ್ನು ಒತ್ತುವರಿ ಮಾಡಿಕೊಂಡಿರೋ ಸ್ಥಳೀಯರಿಂದ ಜಾಗವನ್ನು ವಶಕ್ಕೆ ಪಡೆಯಲಾಯಿತು.

    ಈ ವೇಳೆ ಮಾತನಾಡಿದ ಬಿಡಿಎ ಆಯುಕ್ತ ಪ್ರಕಾಶ್, ಇಷ್ಟು ದಿನ ನೀತಿ ಸಂಹಿತೆ ಇತ್ತು. ಆದ್ದರಿಂದ ಇಷ್ಟು ದಿನ ಒತ್ತುವರಿ ತೆರವಿಗೆ ಮುಂದಾಗಿರಲಿಲ್ಲ. ಒಟ್ಟು ನಗರದಲ್ಲಿ 5 ಸಾವಿರ ಕೋಟಿ ರೂ. ಮೊತ್ತದ ಜಾಗ ಒತ್ತುವರಿಯಾಗಿದೆ. ಇನ್ನು 6 ತಿಂಗಳೊಳಗೆ ಬಿಡಿಎಗೆ ಸೇರಬೇಕಾದ ಎಲ್ಲಾ ಜಾಗವನ್ನು ವಶಕ್ಕೆ ಪಡೆಯುತ್ತೇವೆ. ಇಂದಿನಿಂದ ಒತ್ತುವರಿ ತೆರವು ಆರಂಭ ಮಾಡಿದ್ದೇವೆ. ನಾಗಾವಾರದಲ್ಲಿ 6 ಎಕ್ರೆ 17 ಗುಂಟೆ ಜಾಗ ಒತ್ತುವರಿಯಾಗಿದೆ. ಸುಮಾರು 320 ಕೋಟಿ ರೂ. ಬೆಲೆಬಾಳುವ ಜಾಗ ಇದಾಗಿದೆ. ಈ ಜಾಗವನ್ನು ಇಂದು ಇದನ್ನು ವಶಕ್ಕೆ ಪಡೆದಿದ್ದೇವೆ. ಸುಮಾರು 20 ವರ್ಷಗಳಿಂದಲೂ ಈ ಜಾಗ ಹೀಗೇ ಇತ್ತು. ಈ ಹಿನ್ನೆಲೆ ಇಂದು ಜಾಗವನ್ನು ನಮ್ಮ ವಶಕ್ಕೆ ಪಡೆದಿದ್ದೇವೆ ಎಂದರು.

  • ಬಿಡಿಎ ನಿರ್ಲಕ್ಷ್ಯ, ಒಡೆದ ಹುಳಿಮಾವು ಕೆರೆ-ಸಾವಿರಾರು ಮನೆಗಳಿಗೆ ನುಗ್ಗಿದ ನೀರು

    ಬಿಡಿಎ ನಿರ್ಲಕ್ಷ್ಯ, ಒಡೆದ ಹುಳಿಮಾವು ಕೆರೆ-ಸಾವಿರಾರು ಮನೆಗಳಿಗೆ ನುಗ್ಗಿದ ನೀರು

    ಬೆಂಗಳೂರು: ನಗರ ಹೊರವಲಯದ ಹುಳಿಮಾವು ಕೆರೆ ಒಡೆದು ದೊಡ್ಡ ಅವಾಂತರ ಸೃಷ್ಟಿಯಾಗಿದೆ. ಸುಮಾರು 3 ಸಾವಿರಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, ಶಾಂತಿನಿಕೇತನ, ಕೃಷ್ಣನಗರ, ಸೇರಿ ಹಲವು ಲೇಔಟ್‍ಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು, ಬೈಕ್‍ಗಳು ನೀರಿನಲ್ಲಿ ಮುಳುಗಿ ಹೋಗಿವೆ. ಬಿಳೇಕಳ್ಳಿ ಬಳಿಯ ನ್ಯಾನೋ ಆಸ್ಪತ್ರೆಗೂ ನೀರು ನುಗ್ಗಿದ್ದು, ರೋಗಿಗಳು ಪರದಾಡುತ್ತಿದ್ದಾರೆ.

    140 ಎಕರೆ ವಿಸ್ತೀರ್ಣದಲ್ಲಿರುವ ಹುಳಿಮಾವು ಕೆರೆಯನ್ನು ಬಿಡಿಎ ವತಿಯಿಂದ ಸ್ವಚ್ಛಗೊಳಿಸಲಾಗುತ್ತಿತ್ತು. ಈ ವೇಳೆ ಜೆಸಿಬಿಯಿಂದ ಕೆರೆಯ ಕಟ್ಟೆಗೆ ಡ್ಯಾಮೇಜ್ ಆಗಿದ್ದರಿಂದ ನೀರು ಜನವಸತಿ ಪ್ರದೇಶಕ್ಕೆ ನುಗ್ಗಿದೆ. ಬಿಬಿಎಂಪಿ ಗಮನಕ್ಕೆ ತರದೇ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.

    ಬಿಡಿಎದವರು ನಮ್ಮ ಗಮನಕ್ಕೂ ತರದೇ ಈ ಕೆಲಸ ಮಾಡಿದ್ದಾರೆ ಎಂದು ಸ್ಥಳೀಯ ಕಾರ್ಪೊರೇಟರ್ ಭಾಗ್ಯಲಕ್ಷ್ಮಿ ಹೇಳುತ್ತಾರೆ. ಆದರೆ ಮೇಯರ್ ಗೌತಮ್ ಕುಮಾರ್, ಇದು ಕಿಡಿಗೇಡಿಯ ಕೃತ್ಯ ಅಂತ ಆರೋಪಿಸಿದ್ದಾರೆ. ಅಲ್ಲದೇ ಹಾನಿಯಾದ ಮನೆಗಳಿಗೆ ಅಗತ್ಯ ಪರಿಹಾರ ನೀಡುವದಾಗಿ ಭರವಸೆ ನೀಡಿದ್ದಾರೆ.

    ಸದ್ಯ ನೀರಿನಲ್ಲಿ ಸಿಲುಕಿದ ಜನರನ್ನ ಬೇರೆಡೆಗೆ ಸ್ಥಳಾಂತರ ಮಾಡಲಾಗಿದ್ದು, ಬಿಬಿಎಂಪಿ ವತಿಯಿಂದ ಊಟ ಹಾಗೂ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಡಿಸಿಪಿ, ಎಸಿಪಿ, ಕೆಎಸ್‍ಆರ್‍ಪಿ, ಎನ್‍ಡಿಆರ್‍ಎಫ್, ಸಿಆರ್ ಪಿಎಫ್‍ನಿಂದ ಕೆರೆ ಒಡೆದು ಹೋದ ಸ್ಥಳದಲ್ಲಿ ಮಣ್ಣು ಹಾಕಿ ಹರಿಯುವ ನೀರನ್ನ ತಡೆಯುವ ಕಾರ್ಯಚರಣೆ ನಡೆಯುತ್ತಿದೆ. ಬಿಡಿಎ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಲು ಪಾಲಿಕೆ ಮುಂದಾಗಿದೆ.

  • ಸುಮನಹಳ್ಳಿ ಫ್ಲೈಓವರ್ 10 ದಿನ ಬಂದ್ – ಅಧಿಕಾರಿಗಳ ತಪ್ಪನ್ನು ಒಪ್ಪಿಕೊಂಡ ಬಿಬಿಎಂಪಿ ಆಯುಕ್ತ

    ಸುಮನಹಳ್ಳಿ ಫ್ಲೈಓವರ್ 10 ದಿನ ಬಂದ್ – ಅಧಿಕಾರಿಗಳ ತಪ್ಪನ್ನು ಒಪ್ಪಿಕೊಂಡ ಬಿಬಿಎಂಪಿ ಆಯುಕ್ತ

    ಬೆಂಗಳೂರು: ನಾಯಂಡಹಳ್ಳಿಯಿಂದ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಹೊರ ವರ್ತುಲ ರಸ್ತೆಯಲ್ಲಿರುವ ಸುಮನಹಳ್ಳಿ ಫ್ಲೈ ಓವರ್ 10 ದಿನ ಬಂದ್ ಆಗಲಿದೆ. ಮೇಲ್ಸೇತುವೆಯ ರಸ್ತೆಯಲ್ಲಿ ಸುಮಾರು 6 ಅಡಿ ಅಗಲದಷ್ಟು ಗುಂಡಿ ಬಿದ್ದ ಹಿನ್ನೆಲೆಯಲ್ಲಿ ಸಂಚಾರವನ್ನು ನಿಷೇಧಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.

    ಈ ಗುಂಡಿ ಅಲ್ಲದೇ ಮೇಲ್ಸೇತುವೆ ಹಲವು ಗುಂಡಿಗಳು ಎದ್ದಿದೆ. ಈ ಹಿನ್ನೆಲೆಯಲ್ಲಿ ದುರಸ್ತಿ ಮಾಡಲು 10 ದಿನಗಳ ಕಾಲ ಮೇಲ್ಸೇತುವೆ ಮೇಲೆ ಒಂದು ಬದಿಯ ಸಂಚಾರವನ್ನು ಬಂದ್ ಮಾಡಲಾಗುತ್ತದೆ. ಗೊರಗುಂಟೆಪಾಳ್ಯದಿಂದ ನಾಯಂಡಹಳ್ಳಿ ಕಡೆ ಹೋಗುವ ವಾಹನಗಳು ಎಂದಿನಂತೆ ಫ್ಲೈಓವರ್ ಮೇಲೆ ಸಂಚರಿಸಬಹುದಾಗಿದೆ.

    ಸುಮನಹಳ್ಳಿ ಸಿಗ್ನಲ್‍ನಲ್ಲಿ ವಿಜಯನಗರ, ಮಾರುಕಟ್ಟೆ ಕಡೆಯಿಂದ ಸುಂಕದಕಟ್ಟೆ, ನಾಯಂಡಹಳ್ಳಿ ಕಡೆಯಿಂದ ತುಮಕೂರು ರಸ್ತೆಗೆ ವಾಹನಗಳು ಸಂಚರಿಸುತ್ತವೆ. ಭಾರೀ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ 2007ರಲ್ಲಿ ಬಿಡಿಎ ಫ್ಲೈಓವರ್ ಕಾಮಗಾರಿಯ ಗುತ್ತಿಗೆಯನ್ನು ಚೆನ್ನೈ ಮೂಲದ ಇಸಿಸಿಐ ಕಂಪನಿಗೆ ನೀಡಿತ್ತು. 2010ರಲ್ಲಿ ಉದ್ಘಾಟನೆಯಾದ ಬಳಿಕ 2016ರವರೆಗೆ ಬಿಡಿಎ ನಿರ್ವಹಣೆ ಮಾಡಿ ನಂತರ ಬಿಬಿಎಂಪಿಗೆ ನೀಡಿತ್ತು. ಆದರೆ ಬಿಬಿಎಂಪಿ ಅಧಿಕಾರಿಗಳು ನಿರ್ವಹಣೆ ಸರಿ ಮಾಡದ ಪರಿಣಾಮ ರಸ್ತೆ ಗುಂಡಿ ಬಿದ್ದಿದೆ. ಇದನ್ನು ಓದಿ: ಸುಮನಹಳ್ಳಿ ಬ್ರಿಡ್ಜ್‌ನಲ್ಲಿ ಗುಂಡಿ- ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರೀ ದುರಂತ

    ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸ್ವತಃ ಅಧಿಕಾರಿಗಳ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಮೇಲ್ಸೇತುವೆಯನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುರಿಂದ ಸಮಸ್ಯೆ ಸೃಷ್ಟಿಯಾಗಿದೆ. ಸೇತುವೆ ಮೇಲೆ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಇರುವುದರಿಂದ ಗುಂಡಿ ಬಿದ್ದಿದೆ. ಬಿಬಿಎಂಪಿ ಅಧಿಕಾರಿಗಳು ಕಳೆದ 4 ವರ್ಷಗಳಿಂದ ಸೇತುವೆ ನಿರ್ವಹಣೆ ಮಾಡಿರಲಿಲ್ಲ. ಈ ಬ್ರಿಡ್ಜ್ ನಿರ್ಮಾಣ ಮಾಡಿದ ಚೆನ್ನೈ ಮೂಲದ ಖಾಸಗಿ ಸಂಸ್ಥೆ ಇಸಿಸಿಐ 3 ರಾಜ್ಯಗಳಲ್ಲಿ ಕಪ್ಪು ಪಟ್ಟಿಯಲ್ಲಿದೆ. ಈ ಸೇತುವೆ ಹಾಳಾಗಳು ಅಧಿಕಾರಿಗಳ ಬೇಜಾವಾಬ್ದಾರಿ ಕಾರಣ ಎಂದು ನೇರವಾಗಿ ಹೇಳಿದ್ದಾರೆ.

    ಶುಕ್ರವಾರ ರಾತ್ರಿ ಗುಂಡಿ ಬಿದ್ದಿದ್ದರೂ ವಾಹನ ದಟ್ಟನೆ ಹೆಚ್ಚಿದ್ದ ಕಾರಣ ಬ್ಯಾರಿಕೇಡ್ ಹಾಕಿ ರಸ್ತೆಯ ಒಂದು ಬದಿಯಲ್ಲಿ ಸಂಚಾರ ನಡೆಸಲು ಕಾಮಾಕ್ಷಿ ಪಾಳ್ಯ ಸಂಚಾರಿ ಪೊಲೀಸರು ಅನುಮತಿ ನೀಡಿದ್ದರು. ವಾಹನಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಫ್ಲೈ ಓವರ್ ಮೇಲಿನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು. ಈಗ ವಾಹನಗಳು ಸೇತುವೆಯ ಅಡಿ ಭಾಗದಿಂದ ಸಂಚರಿಸುತ್ತಿವೆ.

  • ಮಾರ್ಚಿನಲ್ಲೇ  ಮುಗಿಯಬೇಕಿತ್ತು – ಇನ್ನೂ ಮುಗಿದಿಲ್ಲ ಬಿಡಿಎ ಆಡಿಟ್

    ಮಾರ್ಚಿನಲ್ಲೇ ಮುಗಿಯಬೇಕಿತ್ತು – ಇನ್ನೂ ಮುಗಿದಿಲ್ಲ ಬಿಡಿಎ ಆಡಿಟ್

    – ಮಂದಗತಿಯಲ್ಲಿ ಬಿಡಿಎ ಲ್ಯಾಂಡ್ ಆಡಿಟ್
    – 5 ಸಾವಿರ ಕೋಟಿ ನಷ್ಟ ಸಾಧ್ಯತೆ

    ಬೆಂಗಳೂರು: ಮಾರ್ಚ್ ತಿಂಗಳಿನಲ್ಲೇ ಮುಗಿಯಬೇಕಿದ್ದ ಬಿಡಿಎ ಆಡಿಟ್ ಮಂದಗತಿಯಲ್ಲಿ ಸಾಗುತ್ತಿದ್ದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ(ಬಿಡಿಎ) ಒಟ್ಟು 5 ಸಾವಿರ ಕೋಟಿ ನಷ್ಟವಾಗಿರುವ ಸಾಧ್ಯತೆಯಿದೆ.

    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆರಂಭಗೊಂಡ ಬಳಿಕ ಇಲ್ಲಿಯವರೆಗೆ 64 ಬಡಾವಣೆಗಳನ್ನು ನಿರ್ಮಾಣ ಮಾಡಿದೆ. ಬಿಡಿಎಯ ಆಸ್ತಿ ಬಗ್ಗೆ ನಿಖರವಾದ ಮಾಹಿತಿ ಬಿಡಿಎ ಬಳಿಯೇ ಇಲ್ಲದೇ ಇರುವುದರಿಂದ ಲ್ಯಾಂಡ್ ಆಡಿಟ್ ಮಾಡಲು ಖಾಸಗಿ ಸಂಸ್ಥೆಯೊಂದಕ್ಕೆ ಟೆಂಡರ್ ನೀಡಲಾಗಿತ್ತು.

    ದಾಖಲೆಗಳ ಪ್ರಕಾರ ಮಾರ್ಚ್ ತಿಂಗಳಿಗೇ ಲ್ಯಾಂಡ್ ಆಡಿಟ್ ಮುಗಿಯಬೇಕಾಗಿತ್ತು. ಆದರೆ ಅಕ್ಟೋಬರ್ ಆದರೂ ಲ್ಯಾಂಡ್ ಆಡಿಟ್ ಅಪೂರ್ಣವಾಗಿದೆ. ಇಲ್ಲಿಯವರೆಗೆ ಕೇವಲ 20 ಬಡಾವಣೆಗಳ ಆಡಿಟ್ ಮುಗಿದಿದೆ ಎಂದು ದಾಖಲೆಗಳು ತಿಳಿಸಿವೆ. ಲ್ಯಾಂಡ್ ಆಡಿಟ್ ನಿಧಾನವಾಗಲು, ಬಿಡಿಎ ನಲ್ಲಿ ಸಿಬ್ಬಂದಿ ಕೊರತೆಯ ಜೊತೆಗೆ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯೂ ಕಾರಣ ಎಂದು ಹೇಳಲಾಗ್ತಿದೆ.

    ಲ್ಯಾಂಡ್ ಆಡಿಟ್ ಸಂಪೂರ್ಣಗೊಂಡರೆ ಬೆಲೆಬಾಳುವ ಆಸ್ತಿಯನ್ನು ಒತ್ತುವರಿ ತೆರವು ಮಾಡಬೇಕಿದೆ. ಅಲ್ಲದೆ ದುರ್ಬಳಕೆಮಾಡಿಕೊಂಡವರ ಹೆಸರೂ ಬಹಿರಂಗವಾಗಲಿದ್ದು, ತಪ್ಪಿತ್ತಸ್ಥ ಮಾಲೀಕರು ಹಾಗೂ ಅಧಿಕಾರಿಗಳಿಗೂ ಶಿಕ್ಷೆಯಾಗಲಿದೆ. ಈಗಾಗಲೇ 2,500 ಸಾವಿರ ಎಕರೆ ಜಾಗ ನಗರದ ಹೃದಯ ಭಾಗ ಹಾಗೂ ಸುತ್ತಮುತ್ತ ಖಾಸಗಿ ವ್ಯಕ್ತಿಗಳು, ಪ್ರಭಾವಿಗಳ ಪಾಲಾಗಿವೆ. ಇದರಿಂದ ಐದು ಸಾವಿರ ಕೋಟಿ ರುಪಾಯಿಗೂ ಹೆಚ್ಚು ಬಿಡಿಎಗೆ ನಷ್ಟವಾಗಿದೆ ಎಂಬ ಲೆಕ್ಕಾಚಾರವಿದೆ.

    ಲ್ಯಾಂಡ್ ಆಡಿಟ್ ಸಂಪೂರ್ಣವಾದರೆ ಇದರ ಪಕ್ಕಾ ಲೆಕ್ಕ ಸಿಗಲಿದ್ದು, ನಷ್ಟದಲ್ಲಿರುವ ಬಿಡಿಎಗೂ ಆರ್ಥಿಕ ಬಲ ಬರಕಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಪ್ರತಿಕ್ರಿಯಿಸಿದ್ದಾರೆ.

    ಬಿಡಿಎ ಆರಂಭದಿಂದ 64 ಬಡಾವಣೆಗಳನ್ನು ನಿರ್ಮಾಣ ಮಾಡಿದೆ. ಇದಕ್ಕಾಗಿ 38 ಸಾವಿರ ಎಕರೆ ಜಮೀನನ್ನು ಭೂಮಾಲೀಕರಿಂದ ವಶಪಡಿಸಿಕೊಂಡಿದೆ. 38 ಸಾವಿರ ಎಕರೆ ಜಮೀನಿನನಲ್ಲಿ ನಿವೇಶನ ನಿರ್ಮಾಣಕ್ಕಾಗಿ 19,000 ಎಕರೆ ಬಳಸಲಾಗಿದೆ. ಜಾಗದ ಮಾಲೀಕರಿಗೆ ಪರಿಹಾರ ನೀಡಿಯೂ, 2500 ಎಕರೆ ದುರ್ಬಳಕೆಯಾಗಿರುವ ಸಾಧ್ಯತೆ ಇದೆ. ಬಿಡಿಎಯ 38 ಸಿ ಬಿಡಿಎ ತಿದ್ದುಪಡಿ ಪ್ರಕಾರ, ನಿಗದಿತ ಶುಲ್ಕವನ್ನು ಭೂಮಾಲೀಕರಿಂದ ಪಡೆದರೆ, ಮಾಲೀಕರಿಗೆ ರೆವೆನ್ಯೂ ದಾಖಲೆಗಳು ಕೂಡಾ ಪಕ್ಕಾ ಆಗಲಿದೆ. ಬಿಡಿಎಗೂ ಆದಾಯ ಬರಲಿದೆ. ಆದರೂ ಲ್ಯಾಂಡ್ ಆಡಿಟ್ ಆಮೆಗತಿಯಲ್ಲಿ ಸಾಗುತ್ತಿದ್ದು, ವರ್ಷ ಕಳೆದರೂ ಆಡಿಟ್ ಸಂಪೂರ್ಣವಾಗುವುದು ಅನುಮಾನ ಎನ್ನುವ ಮಾತು ಕೇಳಿ ಬಂದಿದೆ.

  • ಆರ್ಥಿಕವಾಗಿ ಕುಸಿದ ಬಿಡಿಎ- ಬಿಲ್ ಪಾವತಿಸದ್ದಕ್ಕೆ ಇಂಟರ್ನೆಟ್‌ ಕಡಿತ

    ಆರ್ಥಿಕವಾಗಿ ಕುಸಿದ ಬಿಡಿಎ- ಬಿಲ್ ಪಾವತಿಸದ್ದಕ್ಕೆ ಇಂಟರ್ನೆಟ್‌ ಕಡಿತ

    ಬೆಂಗಳೂರು: ಬಿಡಿಎ ಆರ್ಥಿಕವಾಗಿ ಕುಸಿದಿದ್ದು, ಕಂಪ್ಯೂಟರ್ ಗಳಿಗೆ ಇಂಟರ್ ನೆಟ್ ಸಂಪರ್ಕ ಸಹ ಇಲ್ಲದೆ ಇ-ಆಡಳಿತ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ.

    ಬಿಡಿಎ ಆರ್ಥಿಕ ಕುಸಿತ ಕಂಡಿದೆ ಎಂದು ಈ ಹಿಂದಿನಿಂದಲೂ ಹೇಳಲಾಗುತ್ತಿತ್ತು. ಆದರೆ ಅದಕ್ಕೆ ಸೂಕ್ತ ಪುರಾವೆ ಸಿಕ್ಕಿರಲಿಲ್ಲ. ಇದೀಗ ಆರ್ಥಿಕ ಕುಸಿತ ಕಂಡಿರುವುದು ಜಗಜ್ಜಾಹೀರಾಗಿದ್ದು, ಇದಕ್ಕೆ ತಾಜಾ ನಿದರ್ಶನ ಎಂಬಂತೆ ಬಿಡಿಎ ಕಚೇರಿಯಲ್ಲಿನ ಕಂಪ್ಯೂಟರ್ ಗಳು ಇಂಟರ್‍ನೆಟ್ ಸಂಪರ್ಕ ಕಳೆದುಕೊಂಡಿವೆ.

    ಬಿಡಿಎ ಈ ವರ್ಷದ ಏಪ್ರಿಲ್ ತಿಂಗಳಿನಿಂದ ಇ-ಆಡಳಿತ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಆದರೆ ಕಳೆದ 4 ದಿನಗಳಿಂದ ಇ-ಆಡಳಿತ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕಾರಣ 2019-20ನೇ ಸಾಲಿನ ಮುಂಗಡ ಬಿಲ್ ಕಟ್ಟಿಲ್ಲ ಎಂದು ಬಿಎಸ್‍ಎನ್‍ಎಲ್ ಸಂಸ್ಥೆ ಕಳೆದ ನಾಲ್ಕು ದಿನಗಳಿಂದ ಇಂಟರ್ ನೆಟ್ ಸಂಪರ್ಕ ಕಡಿತಗೊಳಿಸಿದೆ.

    ಮಾರ್ಚ್ ನಲ್ಲೇ ಬಿಡಿಎ 13 ಲಕ್ಷ ರೂಪಾಯಿಯಷ್ಟು ಇಂಟರ್‍ನೆಟ್ ಶುಲ್ಕವನ್ನು ಬಿಎಸ್‍ಎನ್‍ಎಲ್‍ಗೆ ಕಟ್ಟಬೇಕಿತ್ತು. ಸೆಪ್ಟೆಂಬರ್ ತಿಂಗಳಾಂತ್ಯ ಬಂದರೂ ಬಿಲ್ ಪಾವತಿಸದ ಕಾರಣ ಬಿಎಸ್‍ಎನ್‍ಎಲ್ ಇಂಟರ್ ನೆಟ್ ಸೇವೆಯನ್ನು ಕಡಿತಗೊಳಿಸಿದೆ. ಇದರಿಂದ ಬಿಡಿಎ ಕಚೇರಿಯಲ್ಲಿ ದೈನಂದಿನ ಕೆಲಸ ಕಾರ್ಯಗಳು ಹಳಿ ತಪ್ಪಿದಂತಾಗಿವೆ.

    ಈ ಬಗ್ಗೆ ಬಿಡಿಎ ಕಾರ್ಯದರ್ಶಿ ಡಾ.ವಾಸಂತಿ ಅಮರ್ ಪ್ರತಿಕ್ರಿಯಿಸಿ, ಬಿಎಸ್‍ಎನ್‍ಎಲ್ ಸದ್ಯ 30 ಎಂಬಿಪಿಎಸ್ (ಮೆಗಾಬೈಟ್ ಪರ್ ಸೆಕೆಂಡ್) ಸ್ಪೀಡ್‍ನಲ್ಲಿ ಇಂಟರ್ ನೆಟ್ ಒದಗಿಸುತ್ತಿದೆ. ಆದರೆ ಆಕ್ಟ್ ಫೈಬರ್ ನೆಟ್ 100 ಎಂಬಿಪಿಎಸ್ ಸ್ಪೀಡ್‍ನಲ್ಲಿ ವರ್ಷಕ್ಕೆ ಕೇವಲ 2.75 ಲಕ್ಷದಲ್ಲಿ ಸೇವೆ ಕೊಡುತ್ತಿದೆ. ಈ ಸೇವೆ ಪಡೆಯಲು ಬಿಡಿಎ ಚಿಂತನೆ ನಡೆಸಿದೆ. ಬಿಎಸ್‍ಎನ್‍ಎಲ್ ಸೇವೆ ಸುರಕ್ಷತೆ ಎಂಬ ಕಾರಣಕ್ಕೆ ಮುಂದುವರಿಸುತ್ತೇವೆ. ಅವರಿಗೂ ಇದೇ ಸ್ಪೀಡ್‍ನಲ್ಲಿ ಇಂಟರ್ ನೆಟ್ ಸೇವೆ ನೀಡಲು ಕೋರಿದ್ದೇವೆ. ಇಂದಿನಿಂದ ಎಲ್ಲ ಸೇವೆಗಳು ಯಥಾಪ್ರಕಾರ ಮುಂದುವರಿಯುತ್ತಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.

  • ಬೋಗಸ್ ಪ್ರಕರಣ ತಡೆಗೆ ಇ – ಆಫೀಸ್ ತರಲು ಮಂದಾದ ಬಿಡಿಎ

    ಬೋಗಸ್ ಪ್ರಕರಣ ತಡೆಗೆ ಇ – ಆಫೀಸ್ ತರಲು ಮಂದಾದ ಬಿಡಿಎ

    ಬೆಂಗಳೂರು: ಬಿಡಿಎನಲ್ಲಿ ನಿವೇಶನಗಳ ಹಂಚಿಕೆ ಮತ್ತು ಮಾರಾಟದಲ್ಲಿ ಬೋಗಸ್ ಪ್ರಕರಣಗಳು ಹೆಚ್ಚಾಗಿರುವ ಹಿನ್ನಲೆ, ಖಚಿತ ಅಳತೆ (ಕರೆಕ್ಟ್ ಡೈಮೆನ್ಶನ್) ವರದಿಯನ್ನು ಇ- ಆಫೀಸ್ ಮೂಲಕವೇ ವಿತರಿಸಲು ಬಿಡಿಎ ಮುಂದಾಗಿದೆ.

    ಬಿಡಿಎನಲ್ಲಿ ಆಡಳಿತ ಪಾರದರ್ಶಕವಾಗಿರಬೇಕು ಎಂಬ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ ಮೇರೆಗೆ ಈ ಹೊಸ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಬಿಡಿಎ ಭೂಸ್ವಾಧೀನಪಡಿಸಿಕೊಂಡು ರಚಿಸಿರುವ ಬಡಾವಣೆಗಳಲ್ಲಿ ನಿವೇಶನಗಳನ್ನು ರಚಿಸಿ, ಅರ್ಹರಿಂದ ಕಾಲ ಕಾಲಕ್ಕೆ ಅರ್ಜಿ ಆಹ್ವಾನಿಸಿ ವಸತಿ ನಿವೇಶನಗಳನ್ನು ಕೊಡುವ ಉದ್ದೇಶದಿಂದ ಇ-ಆಫೀಸ್ ರಚಿಸಲಾಗಿದೆ.

    ಇದುವರೆಗೆ ಬಿಡಿಎ ಕಡತಗಳನ್ನು ಲಿಖಿತ ರೂಪದಲ್ಲಿ ನಿವೇಶನಗಳ ಖಚಿತ ಅಳತೆ ವರದಿ, ಆಯವ್ಯಯ ಅಂದಾಜು ವೆಚ್ಚಗಳ ಮಾಹಿತಿಯನ್ನು ಮಂಡಿಸಲಾಗುತ್ತಿತ್ತು. ಆದರೆ ಇದಕ್ಕೆ ಡಿಜಿಟಲ್ ಸ್ಪರ್ಶ ನೀಡಿದ್ದು, ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ದಾಖಲಿಕರಣ ಮಾಡಲಾಗುತ್ತದೆ. ಈ ಮೂಲಕವಾಗಿ ಯಾವುದೇ ದಾಖಲೆಗಳು ಬೇಕು ಅಂದಾಗ ಇ-ಆಫೀಸ್ ಮೂಲಕ ಪಡೆಯಬಹುದು.

    ಆರ್ಥಿಕ ನಷ್ಟದಲ್ಲಿ ಬಿಡಿಎ
    ಪ್ರಸ್ತುತ ಬಿಡಿಎ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಬಿಡಿಎ ಖಾತೆಯಲ್ಲಿ ಕೇವಲ 5 ಕೋಟಿ ರೂಪಾಯಿ ಮಾತ್ರ ಇದೆ. 400 ಕೋಟಿ ಹಲವು ಕಡೆಗಳಿಂದ ಬರಬೇಕಿದ್ದು, 250 ಕೋಟಿ ಸಾಲವಿದೆ. ಪ್ರಾಧಿಕಾರದ ಆರ್ಥಿಕ ಸುಧಾರಣೆಗೆ ಕ್ರಮಕೈಗೊಳ್ಳಲಾಗಿದ್ದು, ಮಾರಾಟವಾಗದೇ ಉಳಿದಿರುವ ಸುಮಾರು 2 ಸಾವಿರ ಫ್ಲ್ಯಾಟ್‍ಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಬಿಡಿಎ ಚಿಂತನೆ ನಡೆಸಿದೆ.

  • ಬ್ಲಾಕ್‌ಲಿಸ್ಟ್‌ನಲ್ಲಿದ್ರೂ ಅದೇ ಕಂಪನಿಗೆ ಟೆಂಡರ್ ಕೊಡುವಂತೆ ಶಾಸಕ ಒತ್ತಾಯ

    ಬ್ಲಾಕ್‌ಲಿಸ್ಟ್‌ನಲ್ಲಿದ್ರೂ ಅದೇ ಕಂಪನಿಗೆ ಟೆಂಡರ್ ಕೊಡುವಂತೆ ಶಾಸಕ ಒತ್ತಾಯ

    -ಇದು 600 ಕೋಟಿ ರಿಲೀಸ್ ರಹಸ್ಯ!

    ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಂಪನಿ ಬ್ಲಾಕ್‍ಲಿಸ್ಟ್ ನಲ್ಲಿ ಇದ್ದರೂ ಅದೇ ಕಂಪನಿಗೆ ಟೆಂಡರ್ ಕೊಡುವಂತೆ ಶಾಸಕರೊಬ್ಬರು ಬಿಡಿಎ ಕಮಿಷನರ್ ಮೇಲೆ ಒತ್ತಡದ ಮೇಲೆ ಒತ್ತಡ ಹೇರುತ್ತಿರುವ ಘಟನೆ ಬೆಳಕಿಗೆ ಬಂದಿದೆ.

    ಭಾರೀ ಮೊತ್ತದ ಕೋನದಾಸಪುರದ ಉದ್ದೇಶಿತ ವಸತಿ ಸಮುಚ್ಚಯದ ಟೆಂಡರ್ ಗಾಗಿ ಬಿಡಿಎ ಕಮಿಷನರ್ ಮೇಲೆ ಒತ್ತಡ ಹೇರುತ್ತಿದ್ದು, ಶಾಸಕ ಸೋಮಶೇಖರ್ ರಾಮಲಿಂಗಂ ಕನ್ಸ್‌ಸ್ಟ್ರಕ್ಷನ್‌ ಕಂಪನಿಗೆ ನೀಡುವಂತೆ ವಕಾಲತ್ತು ವಹಿಸುತ್ತಿದ್ದಾರೆ. ಚಂದ್ರಕಾಂತ್ ರಾಮಲಿಂಗಂ ಕನ್ಸ್‌ಸ್ಟ್ರಕ್ಷನ್‌ ಕಂಪನಿಯ ಮಾಲೀಕನಾಗಿದ್ದು, ಇವರ ಕಂಪನಿಗೆ ಯಾವುದೇ ಟೆಂಡರ್ ಕೊಡಬಾರದು ಎಂದು ಕಂಪನಿಯನ್ನು ಬ್ಲಾಕ್‍ಲಿಸ್ಟ್ ಗೆ ಸೇರಿಸಲಾಗಿದೆ. ಆದರೂ ಅವರಿಗಾಗಿ ಶಾಸಕ ಸೋಮಶೇಖರ್ ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.

    ಚಂದ್ರಕಾಂತ್

    ಶಾಸಕ ಸೋಮಶೇಖರ್ ಮತ್ತು ಚಂದ್ರಕಾಂತ್ ಆಪ್ತರಾಗಿದ್ದಾರೆ. ಹೀಗಾಗಿ ರಾಮಲಿಂಗಂಗೆ ಕಾಮಗಾರಿ ಕೈಗೆತ್ತಿಕೊಳ್ಳಲು ವರ್ಕ್ ಆರ್ಡರ್ ನೀಡುವಂತೆ ಬಿಡಿಎ ಕಮಿಷನರ್ ರಾಕೇಶ್ ಸಿಂಗ್‍ಗೆ ಒತ್ತಡ ಹಾಕುತ್ತಿದ್ದರು. ಸರಿ ಸುಮಾರು 600 ಕೋಟಿ ಮೊತ್ತದ ಪ್ರಾಜೆಕ್ಟ್ ಇದಾಗಿದೆ. ಇತ್ತ ಬಿಡಿಎ ಅಧ್ಯಕ್ಷ ಸೋಮಶೇಖರ್ ಒತ್ತಡಕ್ಕೆ ರಾಕೇಶ್‍ಸಿಂಗ್ ಮಣಿಯಲಿಲ್ಲ. ಕೊನೆಗೆ ಗುತ್ತಿಗೆ ನೀಡದೆ ಇದ್ದುದಕ್ಕೆ ರಾಕೇಶ್ ಸಿಂಗ್ ಮೇಲೆ ಆರೋಪಗಳನ್ನು ಮಾಡಿ ವರ್ಗಾವಣೆ ಮಾಡುವಂತೆ ಸಿಎಂ ಕುಮಾರಸ್ವಾಮಿಗೆ ಸೋಮಶೇಖರ್ ದೂರು ಸಲ್ಲಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ರಾಕೇಶ್ ಸಿಂಗ್ ವರ್ಗಾವಣೆ ಮಾಡದೇ ಹೋದರೆ ಬೆಂಗಳೂರು ಉತ್ತರ ಗೆಲ್ಲೋದು ಕಷ್ಟವಾಗುತ್ತದೆ. ಎಲೆಕ್ಷನ್ ಫಂಡ್ ಬೇಕು ಅಂದರೆ ನಾನು ಹೇಳುವ ಗುತ್ತಿಗೆದಾರನಿಗೆ ಗುತ್ತಿಗೆ ಕೊಡಬೇಕು. ಒಂದು ವೇಳೆ ರಾಕೇಶ್ ಸಿಂಗ್ ಅವರನ್ನು ವರ್ಗಾವಣೆ ಮಾಡದೇ ಹೋದರೆ ನಾವ್ಯಾರು ಜೆಡಿಎಸ್‍ಗೆ ಸಪೋರ್ಟ್ ಮಾಡುವುದಿಲ್ಲ ಎಂದು ಬೆದರಿಕೆ ಕೂಡ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ರಾಕೇಶ್ ಸಿಂಗ್‍

    ಈಗಾಗಲೇ ಕೆಂಪೇಗೌಡ ಲೇಔಟ್‍ನಲ್ಲಿ ಕಾಮಗಾರಿಯನ್ನು ಸೋಮಶೇಖರ್ ಬೆಂಬಲಿಗರು ಸ್ಥಗಿತಗೊಳಿಸಿದ್ದಾರೆ. ಬೇಕಾದವರಿಗೆ ಗುತ್ತಿಗೆ ನೀಡಿಲ್ಲವೆಂದು ಕಾಮಗಾರಿ ಸ್ಥಗಿತಗೊಳಿಸಿದ್ದು, ಇಬ್ಬರ ಜಗಳದಿಂದ ಸೈಟ್ ಮಾಲೀಕರಿಗೆ ಸಮಸ್ಯೆ ಎದುರಾಗಿದೆ. ಇತ್ತ ಮನೆ ಕಟ್ಟುವುದಕ್ಕೂ ಆಗದೆ, ಅತ್ತ ಸೈಟ್ ಹತ್ತಿರ ಹೋಗುವುದಕ್ಕೂ ಆಗದೆ ಮಾಲೀಕರು ಸಂದಿಗ್ಧ ಸ್ಥಿತಿಯಲ್ಲಿದ್ದಾರೆ.

  • 3 ಬಾರಿ ಗೆದ್ದ ಶಾಸಕರಿಗಿಂತ ಪವರ್ ಫುಲ್ ಆದ್ರು ನಟಿ ಪೂಜಾಗಾಂಧಿ..!

    3 ಬಾರಿ ಗೆದ್ದ ಶಾಸಕರಿಗಿಂತ ಪವರ್ ಫುಲ್ ಆದ್ರು ನಟಿ ಪೂಜಾಗಾಂಧಿ..!

    ಬೆಂಗಳೂರು: ಶಾಸಕರಿಗಿಂತ ಸ್ಯಾಂಡಲ್‍ವುಡ್‍ನ ನಟಿ ನಗರದಲ್ಲಿ ಪವರ್ ಫುಲ್ ಆಗಿದ್ದು, ಬೆಂಗಳೂರಿನ ಶಾಸಕರುಗಳು ಬಿಡಿಎಯಲ್ಲಿ ಕೆಲಸ ಆಗ್ತಿಲ್ಲ ಅಂತ ಹೇಳಿದ್ರೂ ಕೆಲಸ ಮಾತ್ರ ಆಗುತ್ತಿರಲಿಲ್ಲ. ಆದರೆ ಈ ನಟಿಯ ಕಡೆಯ ಫೈಲ್ ಬಂದರೆ ಬಿಡಿಎಯಲ್ಲಿ ನೀರು ಕುಡಿದಷ್ಟೆ ಸಲಿಸಾಗಿ ಕೆಲಸ ಆಗುತ್ತದೆ ಎಂದು ಕಾಂಗ್ರೆಸ್ ಶಾಸಕರು ಗರಂ ಆಗಿದ್ದಾರೆ.

    ನಟಿ ಪೂಜಾ ಗಾಂಧಿ, 2-3 ಬಾರಿ ಗೆದ್ದ ಶಾಸಕರಿಗಿಂತ 5 ವರ್ಷದಲ್ಲಿ 3 ಪಕ್ಷ ಬದಲಿಸಿದ್ದಾರೆ. ನಟಿ ಮಣಿಯ ಕೆಲಸ ಬಿಡಿಎಯಲ್ಲಿ ನಡೆಯುತ್ತದೆ. ನಮ್ಮ ಕೆಲಸ ನಡೆಯಲ್ಲ ಎಂದು ನಗರದ ಕಾಂಗ್ರೆಸ್ ಶಾಸಕರು ಮಾತನಾಡಿಕೊಳ್ಳುತ್ತಿದ್ದಾರೆ.

     

    ನಾವು ಶಾಸಕರಾಗುವ ಬದಲು ಬಣ್ಣ ಹಚ್ಚಿಕೊಂಡರೆ ಕೆಲಸ ಆಗುತ್ತಾ ಅಂತ ನಗರದ ಕಾಂಗ್ರೆಸ್ ಶಾಸಕರು ಗರಂ ಆಗಿ ಡಿಸಿಎಂ ಪರಮೇಶ್ವರ್ ರನ್ನ ಕೇಳಿದ್ದಾರೆ. ಅಷ್ಟೇ ಅಲ್ಲದೇ ಏನು ಮಾಡುತ್ತೀರೋ ಗೊತ್ತಿಲ್ಲ ಸರ್ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ರನ್ನ ಬದಲಿಸಿ ಅಂತ ಶಾಸಕರಾದ ಬೈರತಿ ಬಸವರಾಜು ಹಾಗೂ ಸೋಮಶೇಖರ್ ನೇತೃತ್ವದ ಕಾಂಗ್ರೆಸ್ ಶಾಸಕರ ತಂಡ ಡಿಸಿಎಂ ಪರಮೇಶ್ವರ್ ಗೆ ದೂರು ನೀಡಿದ್ದಾರೆ.

    ಸಮ್ಮಿಶ್ರ ಸರ್ಕಾರ ಬಂದು 5 ತಿಂಗಳು ಕಳೆದರೂ ಬಿಡಿಎಯಲ್ಲಿ ಮೊದಲಿನ ವೇಗದಲ್ಲಿ ಕೆಲಸ ಆಗುತ್ತಿಲ್ಲ ಎಂಬುದು ಕಾಂಗ್ರೆಸ್ ಶಾಸಕರ ದೂರಾಗಿದೆ. ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರನ್ನ ಬದಲಿಸಿ ಅಂತ ನಗರದ ಕಾಂಗ್ರೆಸ್ ಶಾಸಕರು ಮೊದಲೇ ಡಿಸಿಎಂ ಪರಮೇಶ್ವರ್  ದೂರು ನೀಡಿದ್ದರು. ಎರಡು ಮೂರು ಬಾರಿ ಗೆದ್ದ ಶಾಸಕರುಗಳಾದ ನಮ್ಮ ಕೆಲಸವೇ ಬಿಡಿಎಯಲ್ಲಿ ಆಗುತ್ತಿಲ್ಲ. ಆದರೆ ನಟಿ ಪೂಜಾ ಗಾಂಧಿ ಕೆಲಸ ಮಾತ್ರ ಬಿಡಿಎಯಲ್ಲಿ ಸಲಿಸಾಗಿ ಆಗುತ್ತೆ ಅಂತ ಕಾಂಗ್ರೆಸ್ ಶಾಸಕರು ಡಿಸಿಎಂ ಪರಮೇಶ್ವರ್ ಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

    ರಾಕೇಶ್ ಸಿಂಗ್

    ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯರಿಗೂ ದೂರು ನೀಡಿ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಬದಲಿಸಿ ಅಂತ ಒತ್ತಡ ಹೇರಿದ್ದರು. ಒಂದೇ ಕೆಲಸಕ್ಕೆ ನಾವು ಹತ್ತಾರು ಬಾರಿ ಬಿಡಿಎ ಮೆಟ್ಟಿಲು ಹತ್ತಿ ಇಳಿಯಬೇಕು. ಆದರೆ ನಟಿ ಪೂಜಾ ಗಾಂಧಿ ಕಡೆಯಿಂದ ಬರುವ ಫೈಲ್‍ ಗೆ ಮಾತ್ರ ಕೂಡಲೆ ಪ್ರತಿಕ್ರಿಯೆ ಸಿಗುತ್ತದೆ ಯಾಕೆ ಅನ್ನೋದು ಶಾಸಕರ ಪ್ರೆಶ್ನೆ ಆಗಿದೆ.

    ರಾಜಕೀಯದಲ್ಲಿ ಏನೂ ಅಲ್ಲದೆ 3-4 ಪಕ್ಷ ಬದಲಿಸಿದ ಪೂಜಾಗಾಂಧಿಗೆ ಇರುವ ಬೆಲೆ, ಮೂರು ಮೂರು ಬಾರಿ ಗೆದ್ದು ಶಾಸಕರಾದ ನಮ್ಮ ಮಾತಿಗೆ ಇಲ್ವಾ ಅಂತ ಗರಂ ಆಗಿ ಪ್ರಶ್ನಿಸಿದ್ದಾರೆ. ಏನು ಮಾಡುತ್ತೀರೋ ಗೊತ್ತಿಲ್ಲ, ನಮ್ಮ ಸಮಸ್ಯೆ ಬಗೆ ಹರಿಸಿ. ಬಿಡಿಎ ಆಯುಕ್ತ ರಾಕೇಶ್ ಸಿಂಗ್ ರನ್ನ ಮೊದಲು ಬದಲಿಸಿ ಅಂತ ಪಟ್ಟು ಹಿಡಿದಿದ್ದರು ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

    ಶಾಸಕರ ಒತ್ತಾಯಕ್ಕೆ ಮಣಿದು ಸ್ವಲ್ಪ ಸಮಯಾವಕಾಶ ಕೊಡಿ ಎಲ್ಲವನ್ನು ಸರಿಪಡಿಸುತ್ತೀನಿ ಅಂತ ಪರಮೇಶ್ವರ್ ಶಾಸಕರನ್ನ ಸಮಾಧಾನ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews