Tag: ಬಿಜೆಪಿ

  • ಉತ್ತರ ಪ್ರದೇಶದಲ್ಲಿ ಲೋಕಸಭಾ ಎಲೆಕ್ಷನ್ ಫಲಿತಾಂಶ ಮತ್ತೊಮ್ಮೆ ಪ್ರಕಟವಾಯ್ತು!

    ಉತ್ತರ ಪ್ರದೇಶದಲ್ಲಿ ಲೋಕಸಭಾ ಎಲೆಕ್ಷನ್ ಫಲಿತಾಂಶ ಮತ್ತೊಮ್ಮೆ ಪ್ರಕಟವಾಯ್ತು!

    ನವದೆಹಲಿ: ಉತ್ತರ ಪ್ರದೇಶದಲ್ಲಿ 2014ರ ಲೋಕಸಭಾ ಚುನಾವಣೆಯ ಫಲಿತಾಂಶ ಮತ್ತೊಮ್ಮೆ ಮರುಕಳಿಸಿದ್ದು ಬಿಜೆಪಿ ಜಯಭೇರಿ ಬಾರಿಸಿದೆ.

    2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಜಯಭೇರಿ ಬಾರಿಸಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಮತ್ತು ಎಸ್‍ಪಿ ಮೈತ್ರಿಕೂಟದಿಂದಾಗಿ ಬಿಜೆಪಿಗೆ ಸ್ವಲ್ಪ ಮತ ಹಂಚಿಕೆ ಕಡಿಮೆಯಾಗಬಹುದು. ಆದರೆ ಅಷ್ಟೇ ಪ್ರಮಾಣದ ವೋಟ್ ಬಿಜೆಪಿಗೆ ಬಿದ್ದರೆ 300 ಕ್ಕಿಂತ ಹೆಚ್ಚಿನ ಸೀಟ್ ಬರಬಹುದು ಎನ್ನುವ ವಿಶ್ಲೇಷಣೆಯ ಸುದ್ದಿಯನ್ನು ಪಬ್ಲಿಕ್ ಟಿವಿ ಗುರುವಾರ ಪ್ರಕಟಿಸಿತ್ತು. ಈ ವಿಶ್ಲೇಷಣಾತ್ಮಕ ಸುದ್ದಿ ನಿಜವಾಗುತ್ತಿದ್ದು, 300ಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ಸಮೀಪ ಬಂದಿದೆ.

    ಎಷ್ಟು ಸ್ಥಾನಗಳಿಸಬೇಕು? 2012ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 47 ಸ್ಥಾನಗಳನ್ನು ಗೆದ್ದಿದ್ದರೆ, 2014 ಲೋಕಸಭಾ ಚುನಾವಣೆಯ 80 ಕ್ಷೇತ್ರಗಳಲ್ಲಿ 71ರಲ್ಲಿ ಜಯವನ್ನು ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಶೇ.42.6 ಮತಗಳನ್ನು ಬಿಜೆಪಿ ಪಡೆಯುವ ಮೂಲಕ ಮೋದಿ, ಅಮಿತ್ ಶಾ ರಣತಂತ್ರ ಯಶಸ್ವಿಯಾಗಿತ್ತು. ಇಷ್ಟೇ ಶೇಕಡವಾರು ಮತಗಳು ಈ ಚುನಾವಣೆಯಲ್ಲಿ ಬಿದ್ದರೆ ಬಿಜೆಪಿ 318 ಕ್ಷೇತ್ರಗಳನ್ನು ಗಳಿಸಬೇಕು.

    ಉತ್ತರ ಪ್ರದೇಶದಲ್ಲಿ 403 ವಿಧಾನಸಭಾ ಕ್ಷೇತ್ರಗಳಿದ್ದು, ಬಹುಮತಕ್ಕೆ 202 ಸ್ಥಾನಗಳು ಬೇಕು. 2012ರ ಚುನಾವಣೆಯಲ್ಲಿ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ 224 ಸ್ಥಾನವನ್ನು ಗೆದ್ದುಕೊಂಡಿತ್ತು. ಈ ಮೂಲಕ ಅಖಿಲೇಶ್ ಯಾದವ್ ಮೊದಲ ಬಾರಿಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಪಟ್ಟವನ್ನು ಆಲಂಕರಿಸಿದ್ದರು.

    ಇದನ್ನೂ ಓದಿ: ಲೋಕಸಭಾ ವೋಟ್ ನೋಡಿದ್ರೆ ಉತ್ತರ ಪ್ರದೇಶದಲ್ಲಿ ಯಾರಿಗೆ ಎಷ್ಟು ಸ್ಥಾನ ಸಿಗಬಹುದು?

  • ವಾಮಮಾರ್ಗದಿಂದ ಬಿಜೆಪಿ ಜಯಗಳಿಸಿದೆ: ವಿ.ಎಸ್.ಉಗ್ರಪ್ಪ

    ವಾಮಮಾರ್ಗದಿಂದ ಬಿಜೆಪಿ ಜಯಗಳಿಸಿದೆ: ವಿ.ಎಸ್.ಉಗ್ರಪ್ಪ

    ಶಿವಮೊಗ್ಗ: ಉತ್ತರಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ವಾಮಮಾರ್ಗದಿಂದ ಬಿಜೆಪಿ ಜಯಗಳಿಸಿದೆ ಎಂದು ಶಾಸಕ, ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನೋಟ್ ನಿಷೇಧಗೊಳಿಸಿ ಬೇರೆ ಪಕ್ಷಗಳಿಗೆ ಸಂಪನ್ಮೂಲ ಸಿಗದಂತೆ ಮಾಡಿದ್ದಾರೆ. ಅಧಿಕಾರ ದುರ್ಬಳಕೆ ಕೊಂಡು ಮೇಲುಗೈ ಸಾಧಿಸಿದ್ದಾರೆ ಎಂದು ಉಗ್ರಪ್ಪ ದೂರಿದರು.

    ಶಿವಮೊಗ್ಗ ದಲ್ಲಿ ಬಿಜೆಪಿ ವಿಜಯೋತ್ಸವ

    ಮೋದಿ ಅವರ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂಬ ಹೇಳಿಕೆಗೆ ಜನತೆ ಇಂದು ತಕ್ಕ ಉತ್ತರ ನೀಡಿದ್ದಾರೆ. ಪಂಜಾಬ್ ನಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಗೋವಾದಲ್ಲಿ ಅತೀ ಹೆಚ್ಚು ಸ್ಥಾನಗಳಿಸಿದೆ ಎಂದರು. ಲೋಕಸಭಾ ಚುನಾವಣಾ ವೇಳೆ ನೀಡಿದ್ದ ಯಾವುದೇ ಭರವಸೆ ಈಡೇರಿಸಿಲ್ಲ. ಮೂರು ವರ್ಷ ಅವಧಿಯಲ್ಲಿ ಬಡವನ ಖಾತೆಗೆ ಮೂರು ಪೈಸೆಯನ್ನೂ ಹಾಕಿಲ್ಲ. ದೇಶದಲ್ಲಿ ಸಾಮರಸ್ಯ ಕಾಪಾಡುವಲ್ಲಿ ವಿಫಲವಾಗಿದ್ದಾರೆ. ಈಗ ತಾತ್ಕಾಲಿಕವಾಗಿ ಗೆಲುವು ಗಳಿಸಿದ್ದಾರೆ ಎಂದು ವಿಶ್ಲೇಷಣೆ ಮಾಡಿದರು.

    ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನತೆ ಮೋದಿ ಮುಕ್ತ ಭಾರತ ನಿರ್ಮಾಣ ಮಾಡಲಿದ್ದಾರೆ. ಕೊನೆ ಕ್ಷಣದಲ್ಲಿ ಸೆಕ್ಯೂಲರ್ ಫೋರ್ಸ್ ಗಳು ಒಂದಾಗುವಲ್ಲಿ ಆದ ಗೊಂದಲವೂ ಬಿಜೆಪಿ ಗೆಲವಿಗೆ ಕಾರಣ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸೆಕ್ಯೂಲರ್ ಫೋರ್ಸ್ ಗಳ ಒಂದಾಗಲಿವೆ. ಇದರ ನೇತೃತ್ವವನ್ನು ಕಾಂಗ್ರೆಸ್ ವಹಿಸಲಿದೆ ಎಂದರು.

     

  • ಕಾಂಗ್ರೆಸ್ ಮುಕ್ತ ಭಾರತದಲ್ಲಿ ಕರ್ನಾಟಕದಲ್ಲಿರೋ ಕಾಂಗ್ರೆಸ್ ಅಳಿಸಿಹೋಗುತ್ತೆ: ಗೋ ಮಧುಸೂದನ್

    ಕಾಂಗ್ರೆಸ್ ಮುಕ್ತ ಭಾರತದಲ್ಲಿ ಕರ್ನಾಟಕದಲ್ಲಿರೋ ಕಾಂಗ್ರೆಸ್ ಅಳಿಸಿಹೋಗುತ್ತೆ: ಗೋ ಮಧುಸೂದನ್

    – ಗೋವಾದಲ್ಲಿ ಸಂಘ ಪರಿವಾರ, ಬಿಜೆಪಿ ಜಗಳದಿಂದ ಹಿನ್ನಡೆ – ಶೋಭಾ ಕರಂದ್ಲಾಜೆ

    ಬೆಂಗಳೂರು: ಕಾಂಗ್ರೆಸ್ ಮುಕ್ತ ಭಾರತದಲ್ಲಿ ಕರ್ನಾಟಕದಲ್ಲಿರೋ ಕಾಂಗ್ರೆಸ್ ಕೂಡ ಅಳಿಸಿಹೋಗುತ್ತೆ. ಬಿಜೆಪಿ ಖಂಡಿತ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲಿದೆ ಎಂದು ಪರಿಷತ್ ಸದಸ್ಯ ಗೋ ಮಧುಸೂದನ್ ಹೇಳಿಕೆ ನೀಡಿದ್ದಾರೆ.

    ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯ ಈ ಎಲ್ಲಾ ಸಾಧನೆಗೆ ಮೋದಿ, ಅಧ್ಯಕ್ಷರಾದ ಅಮಿತ್ ಷಾ ಅವರನ್ನ ಅಭಿನಂದಿಸಬೇಕು. ದೇಶದ ಜನ ನೋಟ್‍ಬ್ಯಾನ್ ಒಪ್ಪಿಕೊಂಡಿದ್ದಾರೆ. ಮೋದಿಯವರನ್ನ, ಅವರ ಕಾರ್ಯಕ್ರಮವನ್ನ ಒಪ್ಪಿಕೊಂಡಿದ್ದಾರೆ. 2019ರ ಚುನಾವಣೆಗೆ ಇದೊಂದು ದ್ಯೋತಕ. 2019 ರಿಂದ 2024ರವರೆಗೆ ಮತ್ತೊಂದು ಅವಧಿವರೆಗೆ ಮೋದಿ ಅವರ ಆಡಳಿತ ಭಾರತಕ್ಕೆ ಖಚಿತವಾಗಿ ದೊರಕಲಿದೆ ಎಂಬ ವಿಶ್ವಾಸವಿದೆ ಅಂದ್ರು

    ಸಂಸದೆ ಶೋಭಾ ಕರಂದ್ಲಾಜೆ ಕೂಡ ಬಿಜೆಪಿ ಮೇಲುಗೈ ಸಾಧಿಸಿರೋ ಬಗ್ಗೆ ಪ್ರತಿಕ್ರಿಯಿಸಿದ್ದು, 26 ವರ್ಷಗಳ ನಂತರ ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿಯುತ್ತಿದೆ. ಡಿಮಾನಿಟೈಸೇಷನ್ ನಂತರ ಚುನಾವಣೆ ನಡೆದಿರೋದು. ಇದ್ರಿಂದ ಗೊತ್ತಾಗುತ್ತೆ ಮೋದಿಯ ಜೊತೆ ಜನರಿದ್ದಾರೆ. ಪಂಜಾಬ್ ಫಲಿತಾಂಶದ ಬಗ್ಗೆ ಹೆಚ್ಚಿಗೆ ನಿರೀಕ್ಷಿಸಿರಲಿಲ್ಲ. ಗೋವಾದಲ್ಲಿ ಸಂಘ ಪರಿವಾರ ಮತ್ತು ಬಿಜೆಪಿ ಜಗಳ ದಿಂದ ಹಿನ್ನಡೆಯಾಗಿದೆ. ಡಿವೈಡ್ ಆದ್ರೆ ಈ ರೀತಿ ಆಗುತ್ತೆ ಎಂಬುದಕ್ಕೆ ಇದು ನಮಗೆ ಪಾಠ ಅಂತ ಹೇಳಿದ್ರು.

  • ಇವಿಎಂ ದೋಷದಿಂದ ಬಿಜೆಪಿಗೆ ಗೆಲುವು, ಬ್ಯಾಲೆಟ್ ಪೇಪರ್‍ನಲ್ಲಿ ಮತ್ತೊಮ್ಮೆ ಚುನಾವಣೆ ನಡೆಸಿ: ಮಾಯಾವತಿ

    ಇವಿಎಂ ದೋಷದಿಂದ ಬಿಜೆಪಿಗೆ ಗೆಲುವು, ಬ್ಯಾಲೆಟ್ ಪೇಪರ್‍ನಲ್ಲಿ ಮತ್ತೊಮ್ಮೆ ಚುನಾವಣೆ ನಡೆಸಿ: ಮಾಯಾವತಿ

    ಲಕ್ನೋ: ಎಲೆಕ್ಟ್ರಾನಿಕ್ ಮತ ಯಂತ್ರದಲ್ಲಿನ ದೋಷದಿಂದ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆದ್ದಿದೆ ಎಂದು ಬಿಎಸ್‍ಪಿ ನಾಯಕಿ ಮಾಯಾವತಿ ಗಂಭೀರ ಆರೋಪ ಮಾಡಿದ್ದಾರೆ.

    ಮಧ್ಯಾಹ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಹುತೇಕ ಮುಸ್ಲಿಮ್ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದೆ. ಈ ರೀತಿಯ ಫಲಿತಾಂಶ ಬರಲು ಸಾಧ್ಯವೇ ಇಲ್ಲ. ಬಿಜೆಪಿ ಹೊರತು ಬೇರೆ ಪಕ್ಷಗಳಿಗೆ ಹಾಕಿದ ಮತವನ್ನು ಇವಿಎಂ ಸ್ವೀಕರಿಸಿಲ್ಲ ಅಥವಾ ಎಲ್ಲ ಮತಗಳು ಬಿಜೆಪಿಗೆ ಬರುವಂತೆ ಇವಿಎಂ ಸಿದ್ಧಪಡಿಸಿರಬೇಕು ಎಂದು ಅವರು ಪ್ರಶ್ನೆ ಮಾಡಿದ್ದಾರೆ.

    ಬಿಎಸ್‍ಪಿ ಶೇ. 22ರಷ್ಟು ಮತಗಳನ್ನು ಗಳಿಸಿದೆ ಆದರೆ ಕೇವಲ 18 ಸ್ಥಾನಗಳನ್ನು ಮಾತ್ರ ಗಳಿಸಲು ಹೇಗೆ ಸಾಧ್ಯ ಎಂದು ಅವರು ಮತ್ತೊಂದು ಪ್ರಶ್ನೆ ಕೇಳಿದ್ದಾರೆ.

    ಇದನ್ನೂ ಓದಿ:ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಕಾರಣವಾದ 10 ಅಂಶಗಳು

    ಚುನಾವಣಾ ಆಯೋಗ ಉತ್ತರ ಪ್ರದೇಶದ ಫಲಿತಾಂಶವನ್ನು ತಡೆಹಿಡಿಯಬೇಕು. ಇವಿಎಂ ಯಂತ್ರಗಳನ್ನು ತನಿಖೆಗೆ ಒಳಪಡಿಸಿ ಫಲಿತಾಂಶ ಬರುವವರೆಗೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.

    ಈ ಫಲಿತಾಂಶವನ್ನು ರದ್ದು ಪಡಿಸಿ ಬ್ಯಾಲೆಟ್ ಪೇಪರ್‍ನಲ್ಲಿ ಮತ್ತೊಮ್ಮೆ ಚುನಾವಣೆ ನಡೆಸಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಮಾಯಾವತಿ ಪತ್ರ ಬರೆದಿದ್ದಾರೆ.

    ಇದನ್ನೂ ಓದಿ: ಬಿಹಾರ ಚುನಾವಣೆಯ ಸೋಲಿನ ಪಾಠದಿಂದಾಗಿ ಉತ್ತರಪ್ರದೇಶದಲ್ಲಿ ಜಯಭೇರಿ ಬಾರಿಸಿತು ಬಿಜೆಪಿ. ಪಕ್ಷ ಸಂಘಟನೆಯಾಗಿದ್ದು ಹೇಗೆ?

     

  • ಉತ್ತರಪ್ರದೇಶದ ಜನ ಜಾತಿ ಮತ ಮೀರಿ ಹೋಗಿದ್ದಾರೆ: ಜಾಫರ್ ಷರೀಫ್

    ಉತ್ತರಪ್ರದೇಶದ ಜನ ಜಾತಿ ಮತ ಮೀರಿ ಹೋಗಿದ್ದಾರೆ: ಜಾಫರ್ ಷರೀಫ್

    ಬೆಂಗಳೂರು: ಕಾಂಗ್ರೆಸ್‍ನಲ್ಲಿ ಹಲವರು ಜಡ್ಡುಗಟ್ಟಿದವರು ಇದ್ದಾರೆ. ಶ್ರಮಜೀವಿಗಳು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಉತ್ತರಪ್ರದೇಶ ಹಾಗು ಉತ್ತರಾಖಂಡ್‍ನಲ್ಲಿ ಬಿಜೆಪಿ ಬಹುಮತದ ಗೆಲವು ಅಚ್ಚರಿಯಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜಾಫರ್ ಷರೀಫ್ ಹೇಳಿದ್ದಾರೆ.

    ಈ ಪಂಚರಾಜ್ಯದ ಚುನಾವಣಾ ಫಲಿತಾಂಶ ಕರ್ನಾಟಕಕ್ಕೆ ಎಚ್ಚರಿಕೆ ಗಂಟೆಯಾಗಿದೆ. ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಮುಸ್ಲಿಂ ಬಾಹುಳ್ಯವುಳ್ಳ ಕ್ಷೇತ್ರಗಳು ಬಿಜೆಪಿ ತೆಕ್ಕೆಗೆ ಬಂದಿರೋದು ನೋಡಿದ್ರೆ ಉತ್ತರಪ್ರದೇಶದ ಜನ ಜಾತಿ ಮತ ಮೀರಿ ಹೋಗಿದ್ದಾರೆ ಅನ್ನೋದಕ್ಕೆ ಸ್ಪಷ್ಟ ಉದಾಹರಣೆ ಆಗಿದೆ ಎಂದು ತಿಳಿಸಿದರು.

    ಚುನಾವಣೆಗಳು ಏಕಕಾಲಕ್ಕೆ ನಡೆಯಬೇಕು. ಮೋದಿ ಅವರು ಕೂಡ ಇದನ್ನೇ ಹೇಳ್ತಾರೆ. ಇದರಿಂದ ಚುನಾವಣಾ ಖರ್ಚುಗಳು ಕಡಿಮೆ ಆಗುತ್ತವೆ. ರಾಹುಲ್ ಗಾಂಧಿಗೆ ಆದರ್ಶವಿದೆ. ಜನರು ಕೂಡಲೇ ಅದನ್ನು ಒಪ್ಪಿಕೊಳ್ಳುವುದಿಲ್ಲ. ರಾಹುಲ್ ಬೆಳೆಯಲು ಸಮಯ ಬೇಕು. ಇಂದಿರಾಗಾಂಧಿ ಅಂತಹ ನಾಯಕಿಯೂ ಸೋಲನ್ನು ನೋಡಿರುವಾಗ ರಾಹುಲ್ ನಾಯಕತ್ವ ಬಲಿಷ್ಠವಾಗಿಲ್ಲ ಅನ್ನೋದು ತಪ್ಪಾಗುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

     

  • ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಕಾರಣವಾದ 10 ಅಂಶಗಳು

    ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಕಾರಣವಾದ 10 ಅಂಶಗಳು

    ನವದೆಹಲಿ: ಉತ್ತರ ಪ್ರದೇಶದಲ್ಲಿ ಮೋದಿ ಸುನಾಮಿಗೆ ಎಸ್‍ಪಿ ಕಾಂಗ್ರೆಸ್ ಮೈತ್ರಿಕೂಟ, ಬಿಎಸ್‍ಪಿ ಧೂಳೀಪಟವಾಗಿದೆ. ಹೀಗಾಗಿ ಬಿಜೆಪಿ ಗೆಲುವಿಗೆ ಕಾರಣವಾದ 10 ಅಂಶಗಳನ್ನು ಇಲ್ಲಿ ನೀಡಲಾಗಿದೆ.

    1. ಮೋದಿ ಮುಖ:
    ಉತ್ತರ ಪ್ರದೇಶದಲ್ಲಿ ಮೋದಿ ಮುಖವನ್ನು ಇಟ್ಟುಕೊಂಡೇ ಬಿಜೆಪಿ ನಾಯಕರು ಪ್ರಚಾರ ಮಾಡಿದ್ದರು. ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಮೋದಿಗಾಗಿ ಬಿಜೆಪಿ ಮತ ನೀಡಿ ಎಂದಿದ್ದು ವರವಾಗಿದೆ. ಅಷ್ಟೇ ಅಲ್ಲದೇ ಮೋದಿ ತಮ್ಮ ಭಾಷಣದಲ್ಲಿ ಸ್ಕ್ಯಾಮ್(ಸಮಾಜವಾದಿ, ಕಾಂಗ್ರೆಸ್, ಅಖಿಲೇಶ್ ಯಾದವ್, ಮಾಯಾವತಿ), ಕಸಬ್ (ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಬಹುಜನ ಸಮಾಜವಾದಿ ಪಾರ್ಟಿ) ಹೋಲಿಸಿ ವಾಗ್ದಾಳಿ ನಡೆಸುವ ಮೂಲಕ ಮೂರು ಪಕ್ಷಗಳ ಒಂದೇ ತಟ್ಟೆಗೆ ತಂದು ಬಿಜೆಪಿ ಪರ ಅಲೆಯನ್ನು ಸೃಷ್ಟಿಸುವಲ್ಲಿ ಸಫಲರಾದರು.

    2. ನೋಟ್‍ಬ್ಯಾನ್:
    ನವೆಂಬರ್ 8ರ ನೋಟು ಬ್ಯಾನ್ ಬಳಿಕ ಬಿಜೆಪಿ ವಿವಿಧ ರಾಜ್ಯಗಳ ಸ್ಥಳೀಯ ಆಡಳಿತ ಮತ್ತು ಪಾಲಿಕೆ ಚುನಾವಣೆ ಯಶಸ್ಸನ್ನು ಗಳಿಸಿತ್ತು. ಈ ಫಲಿತಾಂಶ ಉತ್ತರ ಪ್ರದೇಶದಲ್ಲಿ ಪರಿವರ್ತನೆಯಾಗಿದೆ. ಬಿಎಸ್‍ಪಿ, ಕಾಂಗ್ರೆಸ್, ಎಸ್‍ಪಿ ನೋಟ್‍ಬ್ಯಾನ್ ವಿರುದ್ಧ ಎಷ್ಟೇ ಪ್ರತಿಭಟಿಸಿದರೂ ಜನ ಮಾತ್ರ ಬಿಜೆಪಿಗೆ ಮತ ನೀಡಿದ್ದಾರೆ.

    3. ಎಸ್‍ಪಿ ಆಂತರಿಕ ಕಿತ್ತಾಟ:
    ಅಖಿಲೇಶ್ ಯಾದವ್, ಮುಲಾಯಂ ಸಿಂಗ್ ಯಾದವ್, ಶಿವಪಾಲ್ ಜಗಳದಿಂದಾಗಿ ಜನ ರೋಸಿ ಹೋಗಿದ್ದರು. ತದ ನಂತರ ನಮ್ಮಲ್ಲಿ ಒಗ್ಗಟ್ಟು ಇದೆ ಎಂದು ಬಿಂಬಿಸಿದ್ದರು. ಆದರೆ ಇವರ ಕಿತ್ತಾಟ ನಾಟಕವನ್ನು ನೋಡುತ್ತಿದ್ದ ಜನ ಈ ಬಾರಿ ಬಿಜೆಪಿಯ ಕೈ ಹಿಡಿದಿದ್ದಾರೆ.

    4. ಕಾಂಗ್ರೆಸ್ ಮೈತ್ರಿಕೂಟ:
    ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ಕಾಂಗ್ರೆಸ್ ಬಿಹಾರದಲ್ಲಿ ಯಶಸ್ವಿಯಾದಂತೆ ಉತ್ತರ ಪ್ರದೇಶಲ್ಲಿ ಎಸ್‍ಪಿ ಜೊತೆಗೂಡಿ ಮೈತ್ರಿ ಮಾಡಿಕೊಂಡಿತ್ತು. ಆದರೆ ಪ್ರಶಾಂತ್ ಕಿಶೋರ್ ಈ ತಂತ್ರಗಾರಿಕೆ ವೈಫಲ್ಯ ಕಂಡಿದ್ದು ಮೈತ್ರಿಕೂಟಕ್ಕೆ ಹೀನಾಯ ಸೋಲಾಗಿದೆ. ಆಡಳಿತ ವಿರೋಧಿ ಅಲೆ ಇರುವಾಗಲೇ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು ಬಿಜೆಪಿ ಗೆಲ್ಲಲು ವರದಾನವಾಯ್ತು.

    5. ಮಾಯಾವತಿ ವೈಫಲ್ಯ:
    ಹಿಂದುಳಿದ ವರ್ಗಗಳ ಮತಗಳನ್ನು ಪಡೆದು ದಲಿತ ಮಹಿಳಾ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ಈ ಬಾರಿ ಚುನಾವಣಾ ನಡೆಯುವ ಮೊದಲೇ ಸೋಲನ್ನು ಒಪ್ಪಿಕೊಂಡಿದ್ದಂತೆ ಕಾಣುತಿತ್ತು. ಎಸ್‍ಪಿ ಕಾಂಗ್ರೆಸ್ ಮೈತ್ರಿ ಕೂಟ ಮತ್ತು ಬಿಜೆಪಿಯ ಅಬ್ಬರದ ಪ್ರಚಾರ ನಡುವೆ ಬಿಎಸ್‍ಪಿ ಮಂಕಾಗಿತ್ತು. ಇದರ ಜೊತೆ ಹಣ ಪಡೆದು ಟಿಕೆಟ್ ಹಂಚಿಕೆ ಮಾಡಿದ್ದರು ಎನ್ನುವ ಆರೋಪವೂ ಮಾಯಾವತಿ ವಿರುದ್ಧ ಕೇಳಿ ಬಂದಿತ್ತು.

    6. ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ:
    ಕಾಂಗ್ರೆಸ್ ಎಸ್‍ಪಿಯ ಅಖಿಲೇಶ್ ಯಾದವ್ ಮುಂದಿನ ಮುಖ್ಯಮಂತ್ರಿ ಎಂದು ಪ್ರಕಟಿಸಿದ್ದರೆ, ಬಿಎಸ್‍ಪಿಯಿಂದ ಮಾಯಾವತಿ ಮುಖ್ಯಮಂತ್ರಿ ರೇಸ್‍ನಲ್ಲಿದ್ದರು. ಆದರೆ ಈ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಪ್ರಕಟಿದೇ ಚುನಾವಣೆಗೆ ಇಳಿದಿತ್ತು. ಇದರಿಂದಾಗಿ ಬಿಜೆಪಿ ನಾಯಕರ ಆಂತರಿಕ ಜಗಳಕ್ಕೆ ಆಸ್ಪದವೇ ಇರಲಿಲ್ಲ. ಎಲ್ಲ ನಾಯಕರ ಹೋರಾಟ ಮತ್ತು ತಳ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿದ್ದು ಬಿಜೆಪಿಯ ಗೆಲುವಿಗೆ ಕಾರಣವಾಯ್ತು.

    7. ಕೈ ಹಿಡಿದ ಯುವ ಮತದಾರರು:
    ಈ ಹಿಂದಿನ ಜಾತಿ ರಾಜಕಾರಣವನ್ನು ಬಿಟ್ಟು ಬಿಜೆಪಿ ಈ ಬಾರಿ ಯುವ ಜನತೆಯನ್ನು ಗುರಿಯಾಗಿಸಿಕೊಂಡು ಪ್ರಚಾರ ನಡೆಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಐಟಿ ಸೆಲ್ ಕಾಂಗ್ರೆಸ್, ಎಸ್‍ಪಿ, ಬಿಎಸ್‍ಪಿ ವೈಫಲ್ಯಗಳನ್ನು ಪ್ರಚಾರ ಮಾಡಿತ್ತು. ಈ ಪ್ರಚಾರದಿಂದಾಗಿ ಹೊಸ ಮತದಾರರು ಬಿಜೆಪಿಗೆ ಮತ ನೀಡಿದ್ದಾರೆ ಎನ್ನುವ ವಿಶ್ಲೇಷಣೆ ಈಗ ಆರಂಭವಾಗಿದೆ.

    8. ಮೈತ್ರಿ ಲಾಭ:
    ಬಿಜೆಪಿ ಅಪ್ನಾ ದಳ(ಎಸ್) ಮತ್ತು ಸುಹಲ್ದೇವ್ ಭಾರತೀಯ ಸಮಾಜ ಪಾರ್ಟಿ (ಎಸ್‍ಬಿಎಸ್‍ಪಿ) ಜೊತೆ ಮೈತ್ರಿ ಮಾಡಿಕೊಂಡಿತ್ತು ಪೂರ್ವಾಂಚಲ ಮತ್ತು ಮಧ್ಯ ಉತ್ತರ ಪ್ರದೇಶದ ಪಟೇಲ್ ಕುಮಿ ದಳವನ್ನು ಅಪ್ನಾ ದಳ ಪ್ರತಿನಿಧಿಸಿದರೆ, ಎಸ್‍ಬಿಎಸ್‍ಪಿ 17 ಹಿಂದುಳಿದ ವರ್ಗಗಳನ್ನು ಪೂರ್ವ ಉತ್ತರ ಪ್ರದೇಶ ಪ್ರತಿನಿದಿಸುತ್ತದೆ. ಈ ಎರಡು ಪಕ್ಷಗಳ ಜೊತೆಗಿನ ಮೈತ್ರಿ ಬಿಜೆಪಿಗೆ ವರವಾಗಿದೆ.

    9. ಹಿಂದುತ್ವ ಟ್ರಂಪ್ ಕಾರ್ಡ್:
    19.98 ಕೋಟಿ ಜನ ಸಂಖ್ಯೆಯಲ್ಲಿ 14.05 ಕೋಟಿ ಮತದರಾರ ಪೈಕಿ ಹಿಂದುಳಿದ ವರ್ಗ ಶೇ.34.7, ದಲಿತರು ಶೇ. 20.5, ಮುಸ್ಲಿಮ್ ಶೇ.19, ಬ್ರಾಹ್ಮಣ ಶೇ.10.5, ಬುಡಕಟ್ಟು ಜನಾಂಗ ಶೇ.2, ವೈಶ್ಯ ಶೇ.4.3, ಠಾಕೂರ್ ಶೇ.7.6 ಮಂದಿ ಇದ್ದರು. ಆದರೆ ಬಿಜೆಪಿ ಯಾವೊಬ್ಬ ಮುಸ್ಲಿಮ್ ಧರ್ಮದ ವ್ಯಕ್ತಿಗೆ ಟಿಕೆಟ್ ಹಂಚಿಕೆ ಮಾಡಿರಲಿಲ್ಲ. ಈ ವಿಚಾರವನ್ನೇ ಇಟ್ಟುಕೊಂಡು ವಿರೋಧಿಗಳು ಬಿಜೆಪಿ ವಿರುದ್ಧ ಪ್ರಚಾರ ಮಾಡಿದ್ದರು. ಆದರೆ ಬಿಜೆಪಿ ಹಿಂದುಳಿದ ವರ್ಗ, ಮೇಲ್ವರ್ಗ, ದಲಿತರ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ವಿಜಯ ಸಾಧಿಸಿದೆ.

    10. ಕೋಮು ಗಲಾಟೆ ಇಲ್ಲ:
    ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗೆ ಮುನ್ನ ಕೋಮು ಗಲಾಟೆ ನಡೆಯುವುದು ಉತ್ತರಪ್ರದೇಶಲ್ಲಿ ಸಾಮಾನ್ಯ. ಆದರೆ ಈ ಬಾರಿ ಒಂದೇ ಒಂದು ಕೋಮು ಗಲಾಟೆಯಾಗಿಲ್ಲ. ಮಂಗಳವಾರ ಲಕ್ನೋದಲ್ಲಿ ಶಂಕಿತ ಐಸಿಸ್ ಉಗ್ರನ ಹತ್ಯೆ ಮಾಡಲಾಗಿತ್ತು. ಆದರೆ ಈ ಎನ್‍ಕೌಂಟರ್ ಫೇಕ್ ಆಗಿದ್ದು, ಅಖಿಲೇಶ್ ಯಾದವ್ ಸರ್ಕಾರ ಚುನಾವಣೆಗೂ ಮುನ್ನ ಕೋಮುಗಲಾಟೆ ಸೃಷ್ಟಿಸಲು ಉಗ್ರ ನಿಗ್ರಹ ದಳದ ಮೂಲಕ ಈ ಎನ್‍ಕೌಂಟರ್ ಮಾಡಲಾಗಿದೆ ಎಂದು ಈಗ ಅಲ್ಲಿನ ಸ್ಥಳಿಯ ಮುಸ್ಲಿಮ್ ನಾಯಕರು ಆರೋಪಿಸಿದ್ದಾರೆ.

    ಈ ಎಲ್ಲ ಕಾರಣದ ಜೊತೆಗೆ ಸರ್ಜಿಕಲ್ ಸ್ಟ್ರೈಕ್ ಎಫೆಕ್ಟ್, ಕೇಂದ್ರ ಸರ್ಕಾರದ ಯಶಸ್ವಿ ಯೋಜನೆಗಳು, ಮುಸ್ಲಿಂಯೇತರ ಓಬಿಸಿ ವರ್ಗ ಬಿಜೆಪಿಯನ್ನು ಕೈ ಹಿಡಿದ ಕಾರಣ ಬಿಜೆಪಿ ಈ ಬಾರಿ ಉತ್ತರ ಪ್ರದೇಶದಲ್ಲಿ ಜಯಭೇರಿ ಬಾರಿಸಿದೆ.

    ಮಧ್ಯಾಹ್ನ 1 ಗಂಟೆಯ ಟ್ರೆಂಡ್ಸ್ ಪ್ರಕಾರ ಬಿಜೆಪಿ 307 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಎಸ್‍ಪಿ ಕಾಂಗ್ರೆಸ್ 82, ಬಿಎಸ್‍ಪಿ 18, ಇತರರು 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

    2012ರ ಚುನಾವಣೆಯಲ್ಲಿ ಎಸ್‍ಪಿ 224, ಬಿಎಸ್‍ಪಿ 80, ಬಿಜೆಪಿ 47, ಕಾಂಗ್ರೆಸ್ 28 ಸ್ಥಾನಗಳನ್ನು ಗೆದ್ದುಕೊಂಡಿತ್ತು.

    ಇದನ್ನೂ ಓದಿ: ಬಿಹಾರ ಚುನಾವಣೆಯ ಸೋಲಿನ ಪಾಠದಿಂದಾಗಿ ಉತ್ತರಪ್ರದೇಶದಲ್ಲಿ ಜಯಭೇರಿ ಬಾರಿಸಿತು ಬಿಜೆಪಿ. ಪಕ್ಷ ಸಂಘಟನೆಯಾಗಿದ್ದು ಹೇಗೆ?

  • ಕಾಂಗ್ರೆಸ್ ಸಹವಾಸ ಮಾಡಿದವ್ರು ಧೂಳಿಪಟ ಆಗ್ತಾರೆ: ಅನಂತ್‍ಕುಮಾರ್

    ಕಾಂಗ್ರೆಸ್ ಸಹವಾಸ ಮಾಡಿದವ್ರು ಧೂಳಿಪಟ ಆಗ್ತಾರೆ: ಅನಂತ್‍ಕುಮಾರ್

    ಬೆಂಗಳೂರು: ಅಖಿಲೇಶರಿಗೆ ತಂದೆ ಮುಲಾಯಂ ಸಿಂಗ್ ಯಾದವ್ ಅವರು ಕಾಂಗ್ರೆಸ್ ಜೊತೆ ಹೋಗಬೇಡ ಅಂದ್ರು ಕೇಳಲಿಲ್ಲ. ಈಗ ಯಾರು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಸಹವಾಸ ಮಾಡುತ್ತಾರೋ ಅವರು ಧೂಳಿಪಟ ಆಗ್ತಾರೆ ಎಂದು ಅಖಿಲೇಶ್ ಯಾದವ್‍ರ ವಿಚಾರದಲ್ಲಿ ಸಾಬೀತಾಗಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅನಂತ್‍ಕುಮಾರ್ ಅವರು ಪಂಚ ರಾಜ್ಯ ಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಉತ್ತರಪ್ರದೇಶ ರಾಜ್ಯದಲ್ಲಿ ನಮ್ಮದು ಅಭೂತಪೂರ್ವ ಗೆಲವು. ಜನರು ಮೋದಿಯವರ ಆಡಳಿತವನ್ನು ಒಪ್ಪಿದ್ದಾರೆ. ಭ್ರಷ್ಟಾಚಾರ ರಹಿತ, ಜನರ ಕಲ್ಯಾಣ ನಮ್ಮ ಪಕ್ಷದ ಉದ್ದೇಶ. ಹಾಗಾಗಿ ಜನರು ಜಾತಿ- ಬೇಧ ಮರೆತು ಮೋದಿ ಅವರ ಆಡಳಿತಕ್ಕೆ ಮನಸೋತು ಮತದಾನ ಮಾಡಿದ್ದಾರೆ ಎಂದು ತಿಳಿಸಿದರು.

    ಸಮಾಜವಾದಿ ಪಾರ್ಟಿ ಹಾಗು ಬಹುಜನ ಸಮಾಜವಾದಿ ಪಾರ್ಟಿಗಳು ಗೂಂಡಾಗಿರಿಗೆ, ಭ್ರಷ್ಟಾಚಾರಕ್ಕೆ ಸಂಕೇತವಾಗಿವೆ. ನಮಗೆ ಗೂಂಡಾಗಿರಿ ಆಡಳಿತ ಹಾಗೂ ಭ್ರಷ್ಟಾಚಾರ ಆಡಳಿತ ಬೇಡ, ನಮಗೆ ಒಳ್ಳೆಯ ಆಡಳಿತ, ಜನಕಲ್ಯಾಣ ಆಡಳಿತದ ಪಕ್ಷ ಬೇಕೆಂದು ಉತ್ತರಾಖಂಡ್ ಮತ್ತು ಉತ್ತರಪ್ರದೇಶದ ಜನರು ಮೋದಿ ನೇತೃತ್ವದ ಪಕ್ಷವನ್ನು ಮುನ್ನಡಿಸುವ ಮೂಲಕ ವಿಜಯಪತಾಕೆ ಹಾರುವಂತೆ ಮಾಡಿದ್ದಾರೆ ಎಂದು ಅನಂತ್ ಕುಮಾರ್ ಪಕ್ಷದ ಗೆಲುವುನ್ನ ಹಂಚಿಕೊಂಡರು.

    2014ರಲ್ಲಿ ಮೋದಿ ಹಾಗು ಅಮೀತ್ ಶಾ ನೇತೃತ್ವದಲ್ಲಿ ಉತ್ತರಪ್ರದೇಶದ 80 ಲೋಕಸಭಾ ಸ್ಥಾನಗಳಲ್ಲಿ 71 ರಲ್ಲಿ ಗೆಲುವು ಸಾಧಿಸಿದ್ದೇವು. ಈಗ ಅದೇ ರೀತಿ ವಿಧಾನಸಭಾ ಚುನಾವಣೆಯಲ್ಲಿ ಮುನ್ನಡೆಯನ್ನು ಸಾಧಿಸಿದ್ದೇವೆ ಎಂದು ಹೇಳಿದರು.

    ಕುಟುಂಬ ರಾಜಕಾರಣ ಇಲ್ಲ: ನಮ್ಮದು ಏಕಶಿಲೆಯ ಪಾರ್ಟಿ, ಪ್ರಜಾತಾಂತ್ರಿಕ ಪಾರ್ಟಿ, ಪಕ್ಷ ಕಲೆ ನಿಯಮಗಳಿಗೆ ಬದ್ಧವಾಗಿದೆ. ಕಾಂಗ್ರೆಸ್‍ನ ಹಾಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪ್ರೈವೇಟ್ ಲಿಮೆಟೆಡ್ ಅಲ್ಲ ಮತ್ತು ಸಮಾಜವಾದಿ ಪಾರ್ಟಿ ಅಂತೆ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ ಪ್ರೈವೇಟ್ ಲಿಮಿಟೆಡ್ ಅಲ್ಲ. ನಮ್ಮಲ್ಲಿ ಕುಟುಂಬ ರಾಜಕಾರಣ ಇಲ್ಲ ಎಂದರು.

    ಬಿಎಸ್‍ವೈ ಸಿಎಂ: ಕರ್ನಾಟಕದಲ್ಲಿಯೂ ಸಹ ಮುಂದಿನ ಚುನಾವಣೆಯಲ್ಲಿ ನಾವು ಮೋದಿ ಹಾಗು ರಾಜ್ಯಧ್ಯಾಕ್ಷ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸುತ್ತೇವೆ. ಸಿದ್ದರಾಮಯ್ಯನವರು ಆಡಳಿತ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಅವರ ಪಕ್ಷದಲ್ಲಿ ಭ್ರಷ್ಟಾಚಾರ ಬೇರೂರಿದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚಿಸಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

     

  • ಬಿಹಾರ ಚುನಾವಣೆಯ ಸೋಲಿನ ಪಾಠದಿಂದಾಗಿ ಉತ್ತರಪ್ರದೇಶದಲ್ಲಿ ಜಯಭೇರಿ ಬಾರಿಸಿತು ಬಿಜೆಪಿ

    ಬಿಹಾರ ಚುನಾವಣೆಯ ಸೋಲಿನ ಪಾಠದಿಂದಾಗಿ ಉತ್ತರಪ್ರದೇಶದಲ್ಲಿ ಜಯಭೇರಿ ಬಾರಿಸಿತು ಬಿಜೆಪಿ

    ಲಕ್ನೋ: ಕಳೆದ ಬಾರಿಯ ಲೋಕಸಭಾ ಚುನಾವಣೆಯನ್ನ ಹೊರತುಪಡಿಸಿದ್ರೆ ಉತ್ತರಪ್ರದೇಶದಲ್ಲಿ ಬಿಜೆಪಿ 90ರ ದಶಕದಲ್ಲಿ ನಡೆದ ಎರಡು ಪ್ರಮುಖ ರಾಜಕೀಯ ಬೆಳವಣಿಗಳಿಂದ ಚೇತರಿಸಿಕೊಳ್ಳಲು ಈವರೆಗೆ ಸಾಧ್ಯವಾಗಿರಲಿಲ್ಲ. ಅದೆಂದರೆ 1993ರ ಮುಲಾಯಂ ಸಿಂಗ್ ಯಾದವ್ ಮತ್ತು ಕಾಶಿ ರಾಮ್ ಅವರ ನಡುವಿನ ಮೈತ್ರಿ ಹಾಗೂ ಕಲ್ಯಾಣ್ ಸಿಂಗ್ ಅವರ ದಂಗೆ.

    1991 ರಿಂದೀಚೆಗೆ ನಡೆದ ಪ್ರತಿ ಚುನಾವಣೆಯಲ್ಲೂ ಬಿಜೆಪಿ ಸ್ಥಾನಗಳನ್ನ ಕಳೆದುಕೊಳ್ಳುತ್ತಾ ಹೋಯಿತು. 2012ರಲ್ಲಂತೂ 403 ಸ್ಥಾನಗಳಲ್ಲಿ 50ಕ್ಕಿಂತ ಕೆಳಗೆ ಕುಸಿಯಿತು. ಇದೀಗ 2017ರ ಚುನಾವಣೆಯ ಮೂಲಕ ಉತ್ತರಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಏರಲು ಸಿದ್ಧವಾಗಿದೆ.

    ಕಳೆದ ಚುನವಣೆಗಳಿಂದ ಅದರಲ್ಲೂ ಬಿಹಾರದಲ್ಲಿ ಸೊಲನುಭವಿಸಿದ ನಂತರ ಪಾಠ ಕಲಿತಿರೋ ಬಿಜೆಪಿ ಒಂದು ವರ್ಷದೊಳಗೆ ತನ್ನ ವೋಟ್ ಬ್ಯಾಂಕ್ ಕ್ರೂಢೀಕರಣಕ್ಕೆ ಸಾಕಷ್ಟು ಶ್ರಮ ವಹಿಸಿತು. ರಾಜ್ಯದ ಒಟ್ಟು 1.47 ಲಕ್ಷ ಮತದಾನ ಕೇಂದ್ರಗಳಲ್ಲಿ 1.25 ಮತಗಟ್ಟೆಗಳಿಗೆ ಬೂತ್ ಸಮಿತಿ ಹಾಗೂ ಉಸ್ತುವಾರಿಗಳನ್ನು ನೇಮಿಸಿತ್ತು. ರಾಜ್ಯಾದ್ಯಂತ ಸುಮಾರು 13 ಲಕ್ಷಕ್ಕೂ ಹೆಚ್ಚಿನ ಬೂತ್ ಕಾರ್ಯಕರ್ತರನ್ನು ಕ್ರೂಢೀಕರಿಸಲಾಗಿತ್ತು. ಈ ಎಲ್ಲಾ ಪ್ರಕ್ರಿಯೆಗಳ ನೇತೃತ್ವವನ್ನು ಆರ್‍ಎಸ್‍ಎಸ್ ಪ್ರಚಾರಕರಾದ ಸುನಿಲ್ ಬನ್ಸಲ್ ನಿರ್ವಹಿಸಿದ್ದರು.

    ಬಿಜೆಪಿ ಈ ಬಾರಿ ರಾಜ್ಯದ ಸಾಮಾಜಿಕ ರಚನೆ ಹಾಗೂ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆ ಹಾಗೂ ಬ್ಲಾಕ್ ಮಟ್ಟದಲ್ಲಿ ಪದಾಧಿಕಾರಿಗಳನ್ನ ಆಯ್ಕೆ ಮಾಡಿತ್ತು. ಸುಮಾರು 20 ದಲಿತ ಅಭ್ಯರ್ಥಿಗಳು ಸೇರಿದಂತೆ ಶೇ. 40ರಷ್ಟು ಸ್ಥಾನಗಳನ್ನ ಹಿಂದುಳಿದ ವರ್ಗದವರಿಗೆ ನೀಡಲಾಗಿತ್ತು. ಟಿಕೆಟ್ ಹಂಚುವಿಕೆಯಲ್ಲೂ ಕೂಡ ಬಿಹಾರ ಚುನಾವಣೆಯಿಂದ ಪಾಠ ಕಲಿತಿದ್ದ ಬಿಜೆಪಿ, ಸುಮಾರು 10 ಯಾದವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡಿತ್ತು. ಯಾದವರಲ್ಲದ ಹಿಂದುಳಿದ ವರ್ಗ ಹಾಗೂ ಮೇಲ್ವರ್ಗದ ಮೇಲೆ ಹೆಚ್ಚು ಗಮನ ಹರಿಸಿತ್ತು. ಪಕ್ಷದ 3ರಲ್ಲಿ 1 ಅಭ್ಯರ್ಥಿಗಳು ಬ್ರಾಹ್ಮಣರು ಹಾಗೂ ರಜಪುತರಾಗಿದ್ರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮತದಾರರನ್ನ ಸೆಳೆಯಲು 130 ಯಾದವರಲ್ಲದ ಹಿಂದುಳಿದ ವರ್ಗದವರು ಹಾಗೂ ಸುಮಾರು 80ಕ್ಕೂ ಹೆಚ್ಚು ದಲಿತರನ್ನ ಬಳಸಿಕೊಂಡಿತು. ಈ ಬಾರಿಯ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳಿರಲಿಲ್ಲ. ಬಹುತೇಕ ಮೇಲ್ವರ್ಗ, ಹಿಂದುಳಿದ ವರ್ಗ ಹಾಗೂ ದಲಿತರನ್ನೇ ಗಮದಲ್ಲಿಟ್ಟುಕೊಂಡು ಅಭ್ಯರ್ಥಿಗಳನ್ನ ಆಯ್ಕೆ ಮಾಡಿದ್ದರಿಂದ ಬಿಜೆಪಿ ಗೆಲುವಿಗೆ ಪುರಕವಾಯ್ತು ಎಂಬ ಚರ್ಚೆಯೂ ಎದ್ದಿದೆ.

    ನಂತರ ಸಿಎಂ ಅಭ್ಯರ್ಥಿ ಯಾರಾಗಬೇಕೆಂಬುದೇ ಪ್ರಶ್ನೆಯಾಗಿತ್ತು. ಮೊದಲಿಗೆ ಮಾಯಾವತಿ ಹಾಗೂ ಅಖಿಲೇಶ್ ಯಾದವ್ ಅವರಿಗೆ ಸರಿಸಮಾನವಾದ ನಾಯಕನನ್ನ ಆಯ್ಕೆ ಮಾಡಿಕೊಳ್ಳಬೇಕು ಎಂದುಕೊಂಡಿತ್ತು. ಗೃಹ ಸಚಿವ ರಾಜ್‍ನಾಥ್ ಸಿಂಗ್ ಅವರ ಹೆಸರು ಕೆಲ ತಿಂಗಳು ಚಾಲ್ತಿಯಲ್ಲಿತ್ತು. ಅದರೆ ಕೊನೆಗೆ ಪ್ರಧಾನಿ ಮೋದಿ ಅವರ ಹೆಸರಲ್ಲೇ ಚುನಾವಣೆ ಎದುರಿಸುವುದು ಸೂಕ್ತ ಎಂದು ನಿರ್ಧಾರವಾಯ್ತು.

    90ರ ದಶಕದ ಕೊನೆಯಲ್ಲಿ ಅಂದಿನ ಪ್ರಧಾನಿ ವಾಜಪೇಯಿ ಅವರೊಂದಿಗೆ ಜಗಳವಾಡಿಕೊಂಡ ಕಲ್ಯಾಣ್ ಸಿಂಗ್ ಬಿಜೆಪಿ ತೊರೆಯಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು. ಇದೇ ವೇಳೆ ಪತ್ರಕರ್ತರೊಬ್ಬರು ನಿಮ್ಮ ಮುಂದಿನ ನಡೆ ಏನು ಎಂದು ಕಲ್ಯಾಣ್ ಸಿಂಗ್ ಅವರನ್ನು ಕೇಳಿದಾಗ, ಕಲ್ಯಾಣ್ ಸಿಂಗ್ ವೇಗವಾಗಿ ಮಾತನಾಡಬೇಕು ಹಾಗೂ ಕಲ್ಯಾಣ್ ಸಿಂಗ್ ಜಾತಿ ಮಾತನಾಡಬೇಕು(ಕಲ್ಯಾಣ್ ಸಿಂಗ್ ಮಸ್ಟ್ ಸ್ಪೀಕ್ ಫಾಸ್ಟ್, ಕಲ್ಯಾಣ್ ಸಿಂಗ್ ಮಸ್ಟ್ ಸ್ಪೀಕ್ ಕ್ಯಾಸ್ಟ್) ಎಂಬ ಶೀರ್ಷಿಕೆ ಹೊಂದಿದ್ದ ರಾಷ್ಟ್ರೀಯ ಪತ್ರಿಕೆಯೊಂದರ ರಾಜಕೀಯ ವಿಶ್ಲೇಷಣೆಯನ್ನ ಅವರು ಉಲ್ಲೇಖಿಸಿದ್ರು.

    ಇದೀಗ 2017ರ ಚುನಾವಣೆಯಲ್ಲಿ ಜಯಭೇರಿ ಬಾರಿಸಿರೋ ಬಿಜೆಪಿಗೆ ಉತ್ತರಪ್ರದೇಶದಲ್ಲಿ ಸಾಮಾಜಿಕವಾಗಿ ಸೂಕ್ತವಾದ ತಂತ್ರಗಾರಿಕೆ ರೂಪಿಸಲು ದಶಕಗಳೇ ಬೇಕಾಯ್ತು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

  • ಗೋವಾ ಹಾಲಿ ಸಿಎಂ ಲಕ್ಷ್ಮೀಕಾಂತ್ ಪೆರ್ಸೆಕರ್‍ಗೆ ಭಾರೀ ಮುಖಭಂಗ

    ಗೋವಾ ಹಾಲಿ ಸಿಎಂ ಲಕ್ಷ್ಮೀಕಾಂತ್ ಪೆರ್ಸೆಕರ್‍ಗೆ ಭಾರೀ ಮುಖಭಂಗ

    ನವದೆಹಲಿ: ಗೋವಾ ಹಾಲಿ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಭಾರೀ ಮುಖಭಂಗವಾಗಿದೆ.

    ಮಾಂಡ್ರೆಮ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪರ್ಸೇಕರ್ ಕಾಂಗ್ರೆಸ್ ಅಭ್ಯರ್ಥಿ ದಯಾನಂದ್ ರಘುನಾಥ್ ವಿರುದ್ಧ ಸೋಲು ಅನುಭವಿಸಿದ್ದಾರೆ.

    ಗೋವಾ ರಾಜ್ಯದ ಫಲಿತಾಂಶದಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಒಟ್ಟು 40 ಸ್ಥಾನಗಳಲ್ಲಿ ಕಾಂಗ್ರೆಸ್ 11 ರಲ್ಲಿ ಮುನ್ನಡೆ ನಡೆಯುತ್ತಿದೆ. ಇನ್ನು 8 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಪಕ್ಷೇತರ ಅಭ್ಯರ್ಥಿಗಳು 5 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿದ್ದಾರೆ. ಗೋವಾದಲ್ಲಿ ಸರ್ಕಾರ ರಚಿಸಲು ಬಹುಮತಕ್ಕೆ 21 ಕ್ಷೇತ್ರಗಳಲ್ಲಿ ಗೆಲವು ಕಾಣಬೇಕಿದೆ.

    2012 ರ ವಿಧಾನಸಭಾ ಚುನಾವಣೆಯಲ್ಲಿ ಲಕ್ಷ್ಮೀಕಾಂತ್ ಪರ್ಸೆಕರ್ ಇದೇ ಮಾಂಡ್ರೆಮ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಅಂದು ಕಾಂಗ್ರೆಸ್ ಅಭ್ಯರ್ಥಿ ದಯಾನಂದ್ ರಘುನಾಥ್ ಅವರ ವಿರುದ್ಧ 3,435 ಮತಗಳ ಅಂತರದಲ್ಲಿ ಜಯಭೇರಿ ಸಾಧಿಸಿದ್ದರು.

     

  • ಪಂಜಾಬ್‍ನಲ್ಲಿ ಶಿರೋಮಣಿ ಮೈತ್ರಿಕೂಟಕಕ್ಕೆ ಸೋಲು: ಕಾಂಗ್ರೆಸ್ ಜಯಭೇರಿ

    ಪಂಜಾಬ್‍ನಲ್ಲಿ ಶಿರೋಮಣಿ ಮೈತ್ರಿಕೂಟಕಕ್ಕೆ ಸೋಲು: ಕಾಂಗ್ರೆಸ್ ಜಯಭೇರಿ

    ನವದೆಹಲಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಎಸ್‍ಪಿ ಮೈತ್ರಿಕೂಟ ಹೀನಾಯವಾಗಿ ಸೋತರೂ ಪಂಜಾಬ್‍ನಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರುವುದು ನಿಚ್ಚಳವಾಗಿದೆ.

    ಆಡಳಿತರೂಢ ಶಿರೋಮಣಿ ಅಕಾಲಿದಳ ಬಿಜೆಪಿ ಮೈತ್ರಿಕೂಟವನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುತ್ತ ಹೆಜ್ಜೆ ಇರಿಸಿದೆ. 117 ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಶಿರೋಮಣಿ ಅಕಾಲಿ ದಳ 25, ಆಪ್ 22, ಇತರರು 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

    ಬಹುಮತಕ್ಕೆ 59 ಸ್ಥಾನಗಳು ಅಗತ್ಯವಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರುವುದು ಪಕ್ಕಾ ಆಗಿದೆ.

    2012ರಲ್ಲಿ ಶಿರೋಮಣಿ ಅಕಾಲಿದಳ 56,ಕಾಂಗ್ರೆಸ್ 46, ಬಿಜೆಪಿ 12, ಇತರರು 12 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.