Tag: ಬಿಜೆಪಿ ಸರ್ಕಾರ

  • ಕುಂಟುತ್ತಾ ಸಾಗಿದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ

    ಕುಂಟುತ್ತಾ ಸಾಗಿದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ

    – ಸಿದ್ದು ಬಜೆಟ್‍ಗೆ ಮನ್ನಣೆ ನೀಡದ ರಾಜ್ಯ ಸರ್ಕಾರ

    ಬೆಳಗಾವಿ: ಎರಡನೇ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಳಗಾವಿಯ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಸುಮಾರು 140 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ಕುಂಟುತ್ತಾ ಸಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

    2015ರ ರಾಜ್ಯ ಬಜೆಟ್ ನಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಬೆಳಗಾವಿ ಜಿಲ್ಲೆಗೆ 219 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಘೋಷಣೆ ಮಾಡಿದರು. ಬಳಿಕ ಹಂತ ಹಂತವಾಗಿ ಅನುದಾನ ಬಿಡುಗಡೆಯಾದ ಬಳಿಕ ಈ ಯೋಜನೆ ಸಂಪೂರ್ಣ ನನೆಗುದಿಗೆ ಬಿದ್ದಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 2018ರ ಬಜೆಟ್ ನಲ್ಲಿ ಮತ್ತೆ ಸಿದ್ದರಾಮಯ್ಯ ಬೆಳಗಾವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅನುದಾನ ಬಿಡುಗಡೆ ಮಾಡಿದ್ದರು.

    2018ರ ಅಕ್ಟೋಬರ್ ನಲ್ಲಿ ಕಾಮಗಾರಿಗೆ ಬಿಮ್ಸ್ ಅಧಿಕಾರಿಗಳು ಚಾಲನೆ ನೀಡಿದರು. ಆದರೆ ಕಾಮಗಾರಿ ಪ್ರಾರಂಭವಾಗಿ ಒಂದೂವರೆ ವರ್ಷ ಕಳೆದರೂ ಇಲ್ಲಿಯವರೆಗೂ ಪೂರ್ಣಗೊಳ್ಳದಿರುವುದಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ನೀಡಿದ ಅವಧಿಯೂ ಮುಕ್ತಾಯವಾಗಿದೆ. ಈ ಕಾಮಗಾರಿಗೆ ಪೂರ್ಣಗೊಳ್ಳಲು ಇನ್ನೂ ಎರಡು ವರ್ಷ ಕಾಯಬೇಕು. ಆದರೆ ಬಿಜೆಪಿ ಸರ್ಕಾರ ಸಿದ್ದರಾಮಯ್ಯನವರ ಬಜೆಟ್ ನಲ್ಲಿ ಘೋಷಣೆ ಮಾಡಿರುವ ಉದ್ದೇಶದಿಂದ ಈ ಕಾಮಗಾರಿಗೆ ಅನುದಾನ ನೀಡುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

    ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಹಾಗೂ ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿದ್ದ ಸತೀಶ್ ಜಾರಕಿಹೊಳಿ ಅವರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ವೀಕ್ಷಣೆ ಮಾಡಿ ಕಾಲ ಮಿತಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದರು.

    ಬೆಳಗಾವಿ ಜಿಲ್ಲಾಸ್ಪತ್ರೆ ಅವ್ಯವಸ್ಥೆಯ ಆಗರವಾಗಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಿದ್ಧವಾದರೆ ಜಿಲ್ಲೆಯ ರೋಗಿಗಳಿಗೆ ಹೆಚ್ಚಿನ ಅನಕೂಲವಾಗಲಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯೋಜನೆಯಲ್ಲಿ ಹೈಟೆಕ್ ಹೆರಿಗೆ ವಿಭಾಗವನ್ನು ಸೇರಿಸಿಲ್ಲ. ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗ ಹದಗೆಟ್ಟು ಹೋಗಿದ್ದು, ಈ ಯೋಜನೆಯಲ್ಲಿ ಹೈಟೆಕ್ ಹೆರಿಗೆ ವಿಭಾಗವನ್ನು ಸೇರಿಸಬೇಕೆನ್ನುವುದು ಜಿಲ್ಲೆಯ ಜನರ ಒತ್ತಾಯವಾಗಿದೆ.

  • ಬಿಜೆಪಿ ವಕ್ತಾರನಾಗಿದ್ದೇ ರಂಗಾಯಣ ನಿರ್ದೇಶಕನಾಗಲೂ ಕಾರಣ ಇರಬಹುದು: ಅಡ್ಡಂಡ ಕಾರ್ಯಪ್ಪ

    ಬಿಜೆಪಿ ವಕ್ತಾರನಾಗಿದ್ದೇ ರಂಗಾಯಣ ನಿರ್ದೇಶಕನಾಗಲೂ ಕಾರಣ ಇರಬಹುದು: ಅಡ್ಡಂಡ ಕಾರ್ಯಪ್ಪ

    ಮೈಸೂರು: ಮೈಸೂರಿನ ರಂಗಾಯಣ ಸಂಸ್ಥೆಯ ನೂತನ ನಿರ್ದೇಶಕರಾಗಿ ನಾಡಿನ ಹಿರಿಯ ರಂಗಕರ್ಮಿ ಹಾಗೂ ಸಾಹಿತಿ ಅಡ್ಡಂಡ ಕಾರ್ಯಪ್ಪ ಇಂದು ಮೈಸೂರಿನ ಕಲಾಮಂದಿರದ ರಂಗಾಯಣದ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.

    ಕೊಡಗು ಮೂಲದ ಹಿರಿಯ ರಂಗಕರ್ಮಿ ಹಾಗೂ ಸಾಹಿತಿಯಾಗಿರುವ ಅಡ್ಡಂಡ ಕಾರ್ಯಪ್ಪ, ಕಳೆದ ಮೂರು ತಿಂಗಳಿನಿಂದ ಖಾಲಿ ಇದ್ದ ರಂಗಾಯಣದ ನಿರ್ದೇಶಕ ಹುದ್ದೆ ಅಲಂಕರಿಸಿದರು. ಅಧಿಕಾರ ಸ್ವೀಕಾರ ಮಾಡಿದ ವೇಳೆ ಹಿರಿಯ ರಂಗಕರ್ಮಿಗಳು ಹಾಗೂ ರಂಗಾಯಣದ ಕಲಾವಿದರು ಪುಷ್ಪಗುಚ್ಚ ನೀಡಿ ಶುಭ ಹಾರೈಸಿದರು.

    ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಡ್ಡಂಡ ಕಾರ್ಯಪ್ಪ, ರಂಗಾಯಣದ ನಿರ್ದೇಶಕನಾಗಿ ಅಧಿಕಾರ ವಹಿಸಿಕೊಂಡಿದ್ದು ಸಂತಸ ತಂದಿದೆ. ರಂಗಾಯಣದ ಏಳಿಗೆಗಾಗಿ ಸಾಕಷ್ಟು ಕನಸುಗಳನ್ನು ಕಂಡಿದ್ದೇನೆ. ಹಿರಿಯ ರಂಗಕರ್ಮಿ ಬಿ. ವಿ ಕಾರಂತರು ಸ್ಥಾಪಿಸಿರುವ ರಂಗಾಯಣವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತೇನೆ. ಪ್ರತಿವರ್ಷ ಸಂಕ್ರಾತಿಯ ದಿನ ಆರಂಭವಾಗುತ್ತಿದ್ದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಈ ಬಾರಿ ಮುಂದೂಡಿಕೆ ಆಗಲಿದೆ. ನಿಧಾನವಾಗಿಯಾದರೂ ಪ್ರಧಾನವಾಗಿ ಬಹುರೂಪಿ ನಾಟಕೋತ್ಸವನ್ನು ಆಯೋಜನೆ ಮಾಡುತ್ತೇವೆ ಎಂದರು.

    ಸಾಂಸ್ಕೃತಿಕ ಸಂಸ್ಥೆಗಳಿಗೆ ನಿರ್ದೇಶಕರನ್ನು ಆಯ್ಕೆ ಮಾಡುವ ಸರ್ಕಾರಗಳು, ನಿರ್ದೇಶಕರು ಅಧಿಕಾರವನ್ನು ಪೂರೈಸಲು ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ಪರಿಗಣಿಸಬೇಕು. ಸರ್ಕಾರಗಳು ಬದಲಾದಾಗ ಸಾಂಸ್ಕೃತಿಕ ಸಂಸ್ಥೆಗಳ ನಿರ್ದೇಶಕರನ್ನು ಬದಲಾವಣೆ ಮಾಡುವುದು ಸರಿಯಾದ ಕ್ರಮವಲ್ಲ. ಇದರಿಂದ ಸಂಬಂಧಪಟ್ಟ ಸಾಂಸ್ಕೃತಿಕ ಸಂಸ್ಥೆಯ ಮೇಲೂ ಪರಿಣಾಮ ಬೀರುತ್ತದೆಯಲ್ಲದೆ ಅದರ ಚಟುವಟಿಕೆಗಳಿಗೆ ಹಿನ್ನಡೆ ಆಗುತ್ತದೆ. ಯಾವುದೇ ಸಾಂಸ್ಕೃತಿಕ ಸಂಸ್ಥೆಯ ನಿರ್ದೇಶಕರನ್ನು ಮೂರು ವರ್ಷ ಪೂರ್ತಿ ಅಧಿಕಾರ ಪೂರೈಸಲು ಅನುವು ಮಾಡಿಕೊಡಬೇಕು ಎಂದು ಹೇಳಿದರು.

    ರಂಗಾಯಣದ ನಿರ್ದೇಶಕರಾಗಿರುವುದಕ್ಕೆ ನಾನು ಬಿಜೆಪಿ ವಕ್ತಾರನಾಗಿದ್ದು ಕಾರಣವಾಗಿರಲೂಬಹುದು. ನಾನು ರಂಗಾಯಣದ ನಿರ್ದೇಶಕನಾಗಬೇಕೆಂದು ಪ್ರಯತ್ನ ಪಟ್ಟಿದ್ದೆ. ಆದರೆ ಈ ಹುದ್ದೆ ನಿರೀಕ್ಷೆಯಲ್ಲಿ ಇರಲಿಲ್ಲ. ಆದರೂ ಕೂಡ ಸರ್ಕಾರ ನನ್ನ ಮೇಲೆ ನಂಬಿಕೆಯಿಟ್ಟು ಈ ಹುದ್ದೆ ನೀಡಿದೆ. ನನಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.

  • ಕೆರೆಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಸಿದ್ಧ: ವಿಶ್ವನಾಥ್ ಭರವಸೆ

    ಕೆರೆಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಸಿದ್ಧ: ವಿಶ್ವನಾಥ್ ಭರವಸೆ

    ನೆಲಮಂಗಲ: ಬೆಂಗಳೂರಿನ ಕೊಳಚೆ ನೀರು ಗ್ರಾಮೀಣ ಭಾಗದ ಕೆರೆಗಳಿಗೆ ಹರಿದು ಬರದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಸ್.ಆರ್ ವಿಶ್ವನಾಥ್ ತಿಳಿಸಿದ್ದಾರೆ.

    ದಾಸನಪುರ ಹೋಬಳಿಯ ಕಾಚೋಹಳ್ಳಿ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲುಷಿತ ನೀರು ಸೇರದಂತೆ ಮೂರು ಕೆರೆಗಳನ್ನು ಅಭಿವೃದ್ಧಿಪಡಿಸಲು ಮುಖ್ಯಮಂತ್ರಿಗಳು ವಿಶೇಷ ಅನುದಾನ ನೀಡಿದ್ದಾರೆ. ನಗರದಿಂದ ಯಥೇಚ್ಛವಾಗಿ ಕೊಳಚೆ ನೀರು ಹರಿದು ಬರುತ್ತಿರುವ ಪರಿಣಾಮ ಯಲಹಂಕ ಕ್ಷೇತ್ರ ವ್ಯಾಪ್ತಿಯ ಕಾಚೋಹಳ್ಳಿ, ಮಾಚೋಹಳ್ಳಿ ಹಾಗೂ ಗಂಗೊಂಡನಹಳ್ಳಿ ಕೆರೆಗಳು ಮಲಿನಗೊಂಡಿದ್ದು ಪುನರುಜ್ಜೀವನಗೊಳಿಸಲು ಪ್ರತಿ ಕೆರೆಯ ಅಭಿವೃದ್ಧಿಗೆ ತಲಾ ಎರಡು ಕಾಲು ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.

    ಜಲಮೂಲಗಳ ರಕ್ಷಣೆಗೆ ಬಿಜೆಪಿ ಸರ್ಕಾರ ವಿಶೇಷ ಒತ್ತು ನೀಡಿದ್ದು, ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಶುದ್ಧೀಕರಿಸಿದ ನೀರನ್ನು ಮಾತ್ರ ಹರಿಸುವ ಬೃಹತ್ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

    ಇದೇ ವೇಳೆ ದಾಸನಪುರ ಹೋಬಳಿ ಸೇರಿದಂತೆ ಕ್ಷೇತ್ರದ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿ ಹಾಗೂ ಗ್ರಾಮಸ್ಥರ ಜೀವನಮಟ್ಟ ಸುಧಾರಣೆಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು. ಕಾಚೋಹಳ್ಳಿ ಹಾಗೂ ಕಿತ್ತನಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಶುದ್ಧ ನೀರಿನ ಘಟಕ, ಅಂಗನವಾಡಿ ನಿರ್ಮಾಣ ಸೇರಿದಂತೆ ಇಪ್ಪತ್ತೈದು ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

  • ಮೈತ್ರಿ ಸರ್ಕಾರದಲ್ಲಿ ಘೋಷಣೆಯಾಗಿದ್ದ ಸಕ್ಕರೆ ಕಾರ್ಖಾನೆ ಕೈಬಿಟ್ಟ ಬಿಜೆಪಿ ಸರ್ಕಾರ

    ಮೈತ್ರಿ ಸರ್ಕಾರದಲ್ಲಿ ಘೋಷಣೆಯಾಗಿದ್ದ ಸಕ್ಕರೆ ಕಾರ್ಖಾನೆ ಕೈಬಿಟ್ಟ ಬಿಜೆಪಿ ಸರ್ಕಾರ

    ಮಂಡ್ಯ: ಸಮ್ಮಿಶ್ರ ಸರ್ಕಾರದಲ್ಲಿ ಜಾರಿಗೆ ತಂದ ಯೋಜನೆಗಳನ್ನು ಬಿಜೆಪಿ ಸರ್ಕಾರ ಕೈ ಬಿಡುತ್ತಿದೆ ಎಂದು ದಳಪತಿಗಳು ಮಾಡುತ್ತಿದ್ದ ಆರೋಪಗಳು ಸತ್ಯವಾಗುತ್ತಿದ್ಯಾ ಎಂಬ ಪ್ರಶ್ನೆಗಳು ಈಗ ಮಂಡ್ಯ ಜಿಲ್ಲೆಯಲ್ಲಿ ಎದ್ದಿದೆ.

    ಮಂಡ್ಯದ ಪ್ರಮುಖ ಸಕ್ಕರೆ ಕಾರ್ಖಾನೆಗಳಾದ ಮೈಶುಗರ್ ಮತ್ತು ಪಾಂಡಪುರ ಸಕ್ಕರೆ ಕಾರ್ಖಾನೆಗಳು ಮುಚ್ಚಿರುವ ಹಿನ್ನೆಯಲ್ಲಿ ಜಿಲ್ಲೆಯ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿ ಇದ್ದಾರೆ. ಹೀಗಾಗಿ ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಮೈಶುಗರ್ ಕಾರ್ಖಾನೆಯನ್ನು ಹೊಸದಾಗಿ ನಿರ್ಮಾಣ ಮಾಡುವುದಾಗಿ ಬಜೆಟ್‍ನಲ್ಲಿ ಹಣವನ್ನು ಸಹ ಘೋಷಣೆ ಮಾಡಿತ್ತು. ಆದರೆ ಈಗ ಸಚಿವ ಆರ್.ಅಶೋಕ್ ನನ್ನ ಮುಂದೆ ಹೊಸ ಕಾರ್ಖಾನೆ ನಿರ್ಮಾಣ ಮಾಡುವ ಪ್ರಸ್ತಾಪ ಇಲ್ಲ ಎನ್ನುವ ಮೂಲಕ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಘೋಷಣೆ ಮಾಡಿದ ಯೋಜನೆಗೆ ಎಳ್ಳುನೀರು ಬಿಟ್ಟಂತೆ ಕಾಣುತ್ತಿದೆ.

    ಮಂಡ್ಯದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಕೆಡಿಪಿ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತಾನಾಡಿದ ಸಚಿವ ಆರ್.ಅಶೋಕ್, ನನ್ನ ಮುಂದೆ ಇರೋದು ಪಿಎಸ್‍ಎಸ್‍ಕೆ ಕಾರ್ಖಾನೆ ಹಾಗೂ ಮೈಶುಗರ್ ಕಾರ್ಖಾನೆಗಳನ್ನು ಲೀಸ್‍ಗೆ ಕೊಡುವ ಪ್ರಸ್ತಾವನೆ. ಅದರಂತೆ ನಾವು ಈ ಎರಡು ಕಾರ್ಖಾನೆಗಳನ್ನು ಖಾಸಗಿ ಅವರಿಗೆ ಲೀಸ್‍ಗೆ ಕೊಡಲು ಮುಂದಾಗಿದ್ದೇವೆ. ಟೆಂಡರ್ ಕರೆದು ರೈತರು ಬೆಳೆದ ಕಬ್ಬಿಗೆ ಯಾರು ಸರಿಯಾದ ಬೆಲೆ ನೀಡುತ್ತಾರೋ ಅವರಿಗೆ ಮಾತ್ರ ಲೀಸ್‍ಗೆ ಕೊಡುತ್ತೇನೆ. ಮುಂದಿನ ಕಟಾವಿನ ಒಳಗೆ ಈ ಕೆಲಸ ಪ್ರಗತಿಯ ಹಂತಕ್ಕೆ ಬರುತ್ತದೆ. ಆದರೆ ಹೊಸ ಕಾರ್ಖಾನೆ ಕಟ್ಟುವ ಗಮನ ನನಗೆ ಇಲ್ಲ ಎಂದಿದ್ದಾರೆ.

    ಈ ಎರಡು ಕಾರ್ಖಾನೆಗಳು ಸದ್ಯ ಕಬ್ಬನ್ನು ಅರೆಯದೆ ಪಾಳು ಬಿದ್ದಿವೆ. ಇಂದು ನಡೆದ ಕೆಡಿಪಿ ಸಭೆಯಲ್ಲಿ ಶಾಸಕರುಗಳ ಅಭಿಪ್ರಾಯವನ್ನು ಸಂಗ್ರಹ ಮಾಡಿಕೊಂಡಿದ್ದೇವೆ. ಲೀಸ್‍ಗೆ ಕೊಡಲು ಎಲ್ಲರೂ ಒಪ್ಪಿದ್ದಾರೆ. ಹೀಗಾಗಿ ಎರಡು ಕಾರ್ಖಾನೆಗಳನ್ನು ಲೀಸ್‍ಗೆ ಕೊಡುತ್ತೇವೆ. ಕೇವಲ ಕಾರ್ಖಾನೆಯನ್ನು ಮಾತ್ರ ಖಾಸಗಿ ಅವರಿಗೆ ನೀಡುತ್ತೇವೆ. ಕಾರ್ಖಾನೆಯ ಆಸ್ತಿಯನ್ನು ಸರ್ಕಾರವೇ ನಿರ್ವಹಣೆ ಮಾಡುತ್ತದೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರೊಂದಿಗೆ ಹಾಗೂ ಸಿ.ಟಿ.ರವಿ ಅವರೊಂದಿಗೆ ಮಾತನಾಡಿದ್ದೇನೆ. ಆದಷ್ಟು ಬೇಗ ಕಾರ್ಖಾನೆಗಳು ಪ್ರಾರಂಭವಾಗುತ್ತವೆ ಎಂದು ತಿಳಿಸಿದರು.

  • ಅನುದಾನಕ್ಕಾಗಿ ಕಣ್ಣೀರು ಹಾಕಿ ಸಚಿವರನ್ನು ಬೇಡಿಕೊಂಡ ಶಾಸಕ

    ಅನುದಾನಕ್ಕಾಗಿ ಕಣ್ಣೀರು ಹಾಕಿ ಸಚಿವರನ್ನು ಬೇಡಿಕೊಂಡ ಶಾಸಕ

    ತುಮಕೂರು: ಡಿಕೆ ಸಹೋದರರ ಸಂಬಂಧಿ, ಕುಣಿಗಲ್ ಶಾಸಕ ಡಾ.ರಂಗನಾಥ್ ತಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಗದ್ಗದಿತರಾಗಿ ಕೈ ಮುಗಿದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಮಾಧುಸ್ವಾಮಿ ಬಳಿ ಬೇಡಿಕೊಂಡ ಘಟನೆ ಇಂದು ಕೆಡಿಪಿ ಸಭೆಯಲ್ಲಿ ನಡೆದಿದೆ.

    ಕುಣಿಗಲ್ ಕ್ಷೇತ್ರದ ರಸ್ತೆ ಅಭಿವೃದ್ಧಿಗಾಗಿ ಬಿಡುಗಡೆ ಮಾಡಿದ್ದ 14 ಕೋಟಿ ರೂ ಸರ್ಕಾರದಿಂದ ತಡೆಹಿಡಿಯಲಾಗಿದೆ. ಇದರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದ್ದು ನನಗೆ ತುಂಬಾ ನೋವಾಗಿದೆ ಎಂದು ಶಾಸಕರು ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ. ಅಲ್ಲದೆ ಆದಷ್ಟು ಬೇಗ ಅನುದಾನ ಬಿಡುಗಡೆ ಮಾಡುವಂತೆ ಕೆಡಿಪಿ ಸಭೆಯಲ್ಲಿ ಇದ್ದಂತಹ ಉಸ್ತುವಾರಿ ಸಚಿವ ಮಾಧುಸ್ವಾಮಿ ಬಳಿ ಕೈ ಮುಗಿದು ಕೇಳಿಕೊಂಡಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಸಲುವಾಗಿ ಕೆಲ ಕ್ಷೇತ್ರಗಳ ಅನುದಾನಗಳನ್ನು ತಡೆಹಿಡಿಯಲಾಗಿದೆ. ಮುಂದಿನ ಕೆಲ ದಿನದಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಶಾಸಕ ಡಾ.ರಂಗನಾಥ್‍ಗೆ ಭರವಸೆ ನೀಡಿದ್ದಾರೆ.

  • ಬೆಳ್ಳಂಬೆಳಗ್ಗೆ ಭರಚುಕ್ಕಿ ವೀಕ್ಷಿಸಿದ ಸುರೇಶ್ ಕುಮಾರ್- ಜಲಪಾತೋತ್ಸವ ನಡೆಸಲು ಚಿಂತನೆ

    ಬೆಳ್ಳಂಬೆಳಗ್ಗೆ ಭರಚುಕ್ಕಿ ವೀಕ್ಷಿಸಿದ ಸುರೇಶ್ ಕುಮಾರ್- ಜಲಪಾತೋತ್ಸವ ನಡೆಸಲು ಚಿಂತನೆ

    ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರು ಇಂದು ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತವನ್ನು ವೀಕ್ಷಿಸಿ ಅಲ್ಲಿನ ಕುಂದು ಕೊರತೆಯನ್ನು ಪರಿಶೀಲಿಸಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಭರಚುಕ್ಕಿ ಜಲಪಾತೋತ್ಸವ ನಡೆಸುವ ಬಗ್ಗೆ ಚಿಂತಿಸಿದ್ದಾರೆ.

    ಈ ಹಿಂದೆ ಪ್ರವಾಸೋದ್ಯಮ ಅಭಿವೃದ್ಧಿಗೆ ಭರಚುಕ್ಕಿ ಉತ್ಸವ ನಡೆಸಲು ಪ್ರವಾಸಿಗರು, ಸ್ಥಳೀಯರು ಆಗ್ರಹಿಸಿದ್ದರು. ಹೀಗಾಗಿ ಜನರ ಆಗ್ರಹದ ಬೆನ್ನಲ್ಲೇ ಸಚಿವರು ಬೆಳ್ಳಂಬೆಳಗ್ಗೆ ಜಲಪಾತ ವೀಕ್ಷಣೆ ಆಗಮಿಸಿದ್ದರು. ಕಳೆದ 3 ತಿಂಗಳಿಂದ ದುಮ್ಮಿಕ್ಕಿ ಹರಿಯುತ್ತಿರೋ ಭರಚುಕ್ಕಿ ಜಲಪಾತದ ನೀರಿನ ಪ್ರಮಾಣವನ್ನು ಸಚಿವರು ವೀಕ್ಷಿಸಿದರು. ಹಾಗೆಯೇ ಅಲ್ಲಿನ ಕುಂದು ಕೊರತೆ ಬಗ್ಗೆ ಪರಿಶಿಲನೆ ನಡೆಸಿ, ಮಾಹಿತಿ ಪಡೆದರು.

    ಜೊತೆಗೆ ಭರಚುಕ್ಕಿ ಜಲಪಾತೋತ್ಸವ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ. ನವೆಂಬರ್ ತಿಂಗಳಲ್ಲಿ ಜಲಪಾತೋತ್ಸವ ನಡೆಸುವಂತೆ ಸಚಿವರು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸುರೇಶ್ ಕುಮಾರ್ ಅವರು, ಬಿಜೆಪಿ ಸರ್ಕಾರಕ್ಕೆ ನೂರು ದಿನ, ಆದರೆ ಸಾಧನೆ ಶೂನ್ಯ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು. ಕೇವಲ ಸಿಟ್ಟು, ಸೇಡು, ಕಹಿ ಭಾವನೆಗಳೇ ತುಂಬಿರುವವರಿಂದ ನೈಜ ಮೌಲ್ಯ ಮಾಪನ ಅಸಾಧ್ಯ ಎಂದು ವಿಪಕ್ಷ ನಾಯಕನ ವಿರುದ್ಧ ಹರಿಹಾಯ್ದರು.

    100 ದಿನಗಳ ಆಡಳಿತದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದೇವೆ. ವಿಶೇಷವಾಗಿ ನೆರೆ ಮತ್ತು ಮಳೆ ನಮಗೆ ದೊಡ್ಡ ಸವಾಲಾಗಿತ್ತು. ನೆರೆಸಂತ್ರಸ್ತರಿಗೆ ನೆರವಾಗಲು ಸಾಕಷ್ಟು ಶ್ರಮಿಸಿದ್ದೇವೆ. ನಮಗೆ ಕೊಟ್ಟಿರುವ ಖಾತೆಗಳಲ್ಲಿ ಸಾಕಷ್ಟು ಹೆಜ್ಜೆ ಮುಂದಿಟ್ಟಿದ್ದೇವೆ. ನಾವು ಏನೋ ಒಂದು ಸಾಧಿಸಿದ್ದೇವೆ ಎನ್ನುವುದಕ್ಕಿಂತ ಮುಂದಿನ ದಿನಗಳ ಸಾಧನೆಗೆ ಇದು ಸ್ಪೂರ್ತಿ ಕೊಟ್ಟಿರುವ ಅವಧಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  • ಸರ್ಕಾರ ಪತನದ ಮುನ್ಸೂಚನೆ ನೀಡಿದ್ರಾ ಶ್ರೀರಾಮುಲು

    ಸರ್ಕಾರ ಪತನದ ಮುನ್ಸೂಚನೆ ನೀಡಿದ್ರಾ ಶ್ರೀರಾಮುಲು

    ಗದಗ: ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರದ ಅವಧಿ ಇನ್ನು ಕೇವಲ ಮೂರು ತಿಂಗಳು ಮಾತ್ರನಾ ಅನ್ನೋ ಪ್ರಶ್ನೆ ರಾಜ್ಯದ ಜನತೆಯಲ್ಲಿ ಕಾಡುತ್ತಿದೆ.

    ಯಾಕಂದರೆ ಗದಗದಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು ಅವರು ನಾಳೆ ಏನಾದರು ಆದ್ರೆ ನಾನು ಆರೋಗ್ಯ ಮಂತ್ರಿಯಾಗಿರಲ್ಲ, 3 ತಿಂಗಳಲ್ಲಿ ಸರ್ಕಾರದ ಅನುದಾನ ಎಷ್ಟಿದೆಯೋ ಅಷ್ಟನ್ನೂ ಬಳಸಿ ಅಂತಾ ಅಧಿಕಾರಿಗಳಿಗೆ ಆದೇಶ ಹೊರಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ನನ್ನ ರಾಜಕೀಯದಲ್ಲೂ ಕೂಡ ಸುಧಾರಣೆ ಆಗುತ್ತಿಲ್ಲ. ಎಲ್ಲೋ ಒಂದು ಕಡೆ ವ್ಯವಸ್ಥೆ ಕೆಟ್ಟುಹೋಗಿದೆ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಸ್ವತಃ ರಾಮುಲು ಅವರೇ 3 ತಿಂಗಳ ಬಳಿಕ ಸರ್ಕಾರ ಪತನದ ಮುನ್ಸೂಚನೆ ನೀಡಿದ್ದಾರಾ ಅನ್ನೋ ಪ್ರಶ್ನೆ ಎಲ್ಲರ ತಲೆಕೆಡಿಸಿದೆ. ಈ ಹೇಳಿಕೆ ರಾಜಕೀಯ ಪಾಳಯದಲ್ಲಿ ತಲ್ಲಣ ಮೂಡಿಸಿದೆ.

    ನಾವು ಯಾವುದೇ ಕೆಲಸ ಮಾಡಲಿ ಭಗವಂತ ನೋಡುವ ಕೆಲಸ ಮಾಡಬೇಕು. ಮನುಷ್ಯರು ನೋಡೋದು ಬೇಕಾಗಿಲ್ಲ. ಇಲ್ಲಿ ಯಾರೂ ಶಾಶ್ವತ ಅಲ್ಲ. ರಾಜ್ಯದಲ್ಲಿ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞರು ಹಾಗೂ ವೈದ್ಯರ ಕೊರತೆಯಿದೆ. ಆ ಕೊರತೆಯನ್ನು ನೀಗಿಸುವಂತೆ ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸರ್ಕಾರಿ ಆಸ್ಪತ್ರೆಗಳ ಅನುದಾನದಲ್ಲಿ 20 ಕೋಟಿ ರೂ. ಉಳಿದಿದೆ. ಇದನ್ನು ಮೂರು ತಿಂಗಳೊಳಗೆ ಖರ್ಚು ಮಾಡಿ. ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು 2 ಸಾವಿರ ಕೋಟಿ ಅನುದಾನವನ್ನು ಕೊಡುತ್ತಾರೆ ಎಂದಾದರೆ ಅಧಿಕಾರಿಗಳು ಅದನ್ನು ಎನ್‌ಆರ್‌ಎಚ್‌ಎಂನಲ್ಲಿ ಖರ್ಚು ಮಾಡಿದರೆ ಮಾತ್ರ ಪೂರ್ಣ ಅನುದಾನವನ್ನು ಕೇಳಲು ಸಾಧ್ಯವಾಗುತ್ತೆ ಎಂದು ಶ್ರೀರಾಮುಲು ತಿಳಿಸಿದರು.

    ಹಾಗೆಯೇ ಒಂದು ಜಿಲ್ಲೆಯಲ್ಲಿ 20 ಕೋಟಿವರೆಗೆ ಹಣ ಹಾಗೆಯೇ ಉಳಿದಿದೆ ಎಂದರೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಎಷ್ಟೆಷ್ಟು ಉಳಿದಿರಬಹುದು? ಮೂರು ತಿಂಗಳೊಳಗೆ ಈ ಹಣವನ್ನು ಖರ್ಚು ಮಾಡಿ. ಆಸ್ಪತ್ರೆಗಳಿಗೆ ಆಧುನಿಕ ತಂತ್ರಜ್ಞಾನ ಹೊಂದಿರುವ ಯಂತ್ರಗಳನ್ನು ತೆಗೆದುಕೊಂಡು ಬನ್ನಿ, ಅಭಿವೃದ್ಧಿ ಮಾಡಿ ನಾವೇನು ಬೇಡ ಅನ್ನೋದಿಲ್ಲ. ನಿಮಗೆ ಪೂರ್ಣ ಸ್ವತಂತ್ರ್ಯ ನೀಡುತ್ತೇನೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಎಲ್ಲರೂ ಎಲ್ಲಾ ರೀತಿಯಲ್ಲೂ ಸುಧಾರಣೆ ಆಗಬೇಕು. ನಾನೂ ಕೂಡ ಸುಧಾರಣೆ ಆಗಬೇಕು, ಆದರೆ ರಾಜಕೀಯ ಒತ್ತಡ ಇರುವುದರಿಂದ ನಾನು ಸುಧಾರಣೆ ಆಗಲು ಆಗುತ್ತಿಲ್ಲ. ಒಂದು ಕಡೆ ವ್ಯವಸ್ಥೆ ಕೆಟ್ಟುಹೋಗಿದೆ ಅದನ್ನು ಸರಿಪಡಿಸಬೇಕಾದರೆ, ಎಲ್ಲರೂ ಒಟ್ಟಿಗೆ ಕೆಲಸ ಮಾಡಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದರು.

  • ಕನ್ನಡ ರಾಜ್ಯೋತ್ಸವ ವಿರೋಧಿಸಿ ಮಕ್ಕಳ ಕೈಯಲ್ಲಿ ವ್ಯಂಗ್ಯ ಚಿತ್ರಕೊಟ್ಟು ಎಂಇಎಸ್ ಪುಂಡಾಟ

    ಕನ್ನಡ ರಾಜ್ಯೋತ್ಸವ ವಿರೋಧಿಸಿ ಮಕ್ಕಳ ಕೈಯಲ್ಲಿ ವ್ಯಂಗ್ಯ ಚಿತ್ರಕೊಟ್ಟು ಎಂಇಎಸ್ ಪುಂಡಾಟ

    – ಕರ್ನಾಟಕ ಸರ್ಕಾರವನ್ನು ದುಶ್ಯಾಸನಿಗೆ ಹೋಲಿಸಿ ಟೀಕೆ

    ಬೆಳಗಾವಿ: ಕುಂದಾನಗರಿಯಲ್ಲಿ ಒಂದೆಡೆ ಮಧ್ಯರಾತ್ರಿಯೇ ಕನ್ನಡಿಗರು, ಕನ್ನಡ ಅಭಿಮಾನಿಗಳು 64ನೇ ಕನ್ನಡ ರಾಜ್ಯೋತ್ಸವ ಆಚರಿಸಿ ಸಂಭ್ರಮಿಸಿದ್ದಾರೆ. ಆದರೆ ಇನ್ನೊಂದೆಡೆ ರಾಜ್ಯೋತ್ಸವವನ್ನು ವಿರೋಧಿಸಿ, ಮಕ್ಕಳ ಕೈಯಲ್ಲಿ ವ್ಯಂಗ್ಯ ಚಿತ್ರಗಳನ್ನ ಕೊಟ್ಟು ಎಂಇಎಸ್(ಮಹಾರಾಷ್ಟ್ರ ಏಕಿಕರಣ ಸಮಿತಿ) ಪುಂಡಾಟ ಮೆರೆದಿದೆ.

    ರಾಜ್ಯೋತ್ಸವ ವಿರುದ್ಧ ಎಂಇಎಸ್ ಇಂದು ಬೆಳಗಾವಿಯಲ್ಲಿ ಕರಾಳ ದಿನ ಆಚರಣೆ ಮಾಡುತ್ತಿದೆ. ನಗರದ ಸಂಭಾಜಿ ವೃತ್ತದಿಂದ ಬಸವೇಶ್ವರ ಸರ್ಕಲ್‍ವರೆಗೆ ಸೈಕಲ್ ರ‍್ಯಾಲಿಯನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮನೋಹರ ಕಿಣೇಕರ್, ದೀಪಕ್ ದಳವಿ ಹಾಗೂ ಅನೇಕ ಎಂಇಎಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಮೆರವಣಿಗೆಯಲ್ಲಿ ಕಿಡಿಕೇಡಿಗಳು ಕರ್ನಾಟಕ ಹಾಗೂ ಕರ್ನಾಟಕ ಸರ್ಕಾರದ ವಿರುದ್ಧ ವ್ಯಂಗ್ಯ ಚಿತ್ರ ಪ್ರದರ್ಶನ ಮಾಡಿದ್ದಾರೆ. ಕರ್ನಾಟಕ ಸರ್ಕಾರವನ್ನು ದುಶ್ಯಾಸನಿಗೆ ಹೋಲಿಸಿ, ಕೇಂದ್ರ ಸರ್ಕಾವನ್ನು ದೃತರಾಷ್ಟ್ರನಿಗೆ ಹೋಲಿಸಿದ ವ್ಯಂಗ್ಯ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ಇದನ್ನೂ ಓದಿ:ರಂಗೇರಿದ ಕರುನಾಡ ಹಬ್ಬ – ಕನ್ನಡ ಹಾಡಿಗೆ ಊರುಗೋಲು ಹಿಡಿದು ಅಂಗವಿಕಲನ ಸ್ಟೆಪ್

    ಅಷ್ಟೇ ಅಲ್ಲದೆ ಮರಾಠಿ ಭಾಷಿಕರ ಮಾನ ಹರಣ ಮಾಡಿದ ಕರ್ನಾಟಕ ಸರ್ಕಾರ, ಅನ್ಯಾಯವನ್ನು ನೋಡುತ್ತಿರುವ ಮಹಾರಾಷ್ಟ್ರ ಸರ್ಕಾರ, ಗಡಿ ವಿಚಾರದಲ್ಲಿ ಕೃಷ್ಣನ ಪಾತ್ರ ಯಾರದ್ದು ಎಂದು ಪ್ರಶ್ನೆ ಮಾಡಿರುವ ವ್ಯಂಗ್ಯ ಬರಹ ಹಾಗೂ ಚಿತ್ರಗಳನ್ನು ಮಕ್ಕಳ ಕೈಯಲ್ಲಿ ಕೊಟ್ಟು ಎಂಇಎಸ್ ನಾಯಕರು ಕರ್ನಾಟವನ್ನು, ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಇದನ್ನೂ ಓದಿ:ಕುಂದಾನಗರಿಯಲ್ಲಿ 64ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ

    ಇವೆಲ್ಲರ ನಡುವೆ ಮೆರವಣಿಗೆಯಲ್ಲಿ ಎಂಇಎಸ್ ಕಾರ್ಯಕರ್ತರ ಸಂಖ್ಯೆ ಕ್ಷೀಣಿಸಿರುವುದು ಎಂಇಎಸ್ ಮುಖಂಡರಿಗೆ ಮುಖಭಂಗವಾಗಿದೆ. ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಮರಾಠಿ ಮತದಾರರ ಒಗ್ಗೂಡಿಸುವ ಎಂಇಎಸ್ ಯತ್ನ ವಿಫಲವಾಗಿದ್ದು, ಮಹಾರಾಷ್ಟ್ರದ ನಾಯಕರು ಎಂಇಎಸ್‍ಗೆ ಕೈಕೊಟ್ಟಿದ್ದಾರೆ. ಪ್ರತಿ ಕರಾಳ ದಿನ ಆಚರಣೆಗೆ ಬರುತ್ತಿದ್ದ ಮಹಾರಾಷ್ಟ್ರ ನಾಯಕರು ಈ ವರ್ಷ ಎಂಇಎಸ್ ಮನವಿಗೆ ಸ್ಪಂದಿಸಿಲ್ಲ.

  • ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ: ಸಿಎಂ ಇಬ್ರಾಹಿಂ

    ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ: ಸಿಎಂ ಇಬ್ರಾಹಿಂ

    – ಮಂತ್ರಾಲಯಕ್ಕೆ ಜಾಗ ಕೊಟ್ಟಿದ್ದು ನವಾಬರು
    – ಶಾರದಾ ಪೀಠವನ್ನು ಮರಸ್ಥಾಪನೆ ಮಾಡಿದ್ದು ಟಿಪ್ಪು

    ವಿಜಯಪುರ: ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

    ಇಂದು ನಗರದಲ್ಲಿ ಮಾತನಾಡಿದ ಅವರು, ಮುಸ್ಲಿಮರಲ್ಲಿ ಜಯಂತಿ ಸಂಪ್ರದಾಯವಿಲ್ಲ. ನಮ್ಮ ಸಂಪ್ರದಾಯದಲ್ಲಿ ಮೂರ್ತಿ ಪೂಜೆಯೂ ಇಲ್ಲ. ಈ ಹಿಂದೆ ಸರ್ಕಾರ ಟಿಪ್ಪು ಜಯಂತಿ ಮಾಡಿದ ರೀತಿಯೇ ತಪ್ಪು. ಮುಸ್ಲಿಮರಲ್ಲಿ ಈ ಸಂಪ್ರದಾಯವೇ ಇಲ್ಲ ಎಂದು ಹೇಳಿದರು.

    ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ. ಟಿಪ್ಪು ಜನ್ಮದಿನ ಆಚರಣೆಯನ್ನು ಮುಸ್ಲಿಮರಿಗೆ ಬಿಟ್ಟು ಬಿಡಿ. ನಾವು ಟಿಪ್ಪು ಜಯಂತಿಯನ್ನು ಆಚರಣೆ ಮಾಡಿಕೊಳ್ಳುತ್ತೇವೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಟಿಪ್ಪು ಜಯಂತಿಯ ಆಚರಣೆಯನ್ನು ಮಾಡಲಾಯಿತು. ಆದರೆ ಈಗ ಬಿಜೆಪಿ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಣೆ ಮಾಡುವುದು ಬೇಡ ಎಂದು ಹೇಳಿದೆ ಎಂದರು.

    ಟಿಪ್ಪು ಸುಲ್ತಾನ್ ಒಬ್ಬ ಹುತಾತ್ಮ ರಾಜ, ಮಹಾರಾಷ್ಟ್ರದ ಪೇಶ್ವೆಗಳು ಬಂದು ಶೃಂಗೇರಿಯ ಶಾರದಾ ಮಠವನ್ನು ನಾಶ ಮಾಡಿದಾಗ ಅದರ ವಿರುದ್ಧ ಹೋರಾಡಿ ಕಾರ್ಕಳದಲ್ಲಿ ಇದ್ದ ಸ್ವಾಮೀಜಿಯನ್ನು ವಾಪಾಸ್ ಕರೆದುಕೊಂಡು ಬಂದು ಮತ್ತೆ ಶಾರದಾ ಪೀಠವನ್ನು ಮರು ಸ್ಥಾಪನೆ ಮಾಡಿದರು. ಪತ್ರಿ ದಿನ ಆ ಜಾಗದಲ್ಲಿ ಟಿಪ್ಪು ಸಾವಿರಕ್ಕೂ ಹೆಚ್ಚು ಬ್ರಾಹ್ಮಣ ಸಮುದಾಯದವರಿಗೆ ಅನ್ನ ದಾಸೋಹ ಮಾಡುತ್ತಿದ್ದರು. ಈ ಚರಿತ್ರೆ ಶೃಂಗೇರಿ ಮಠದಲ್ಲಿ ಇನ್ನೂ ಇದೆ ಎಂದು ಹೇಳಿದರು. ಇದನ್ನು ಓದಿ: ಟಿಪ್ಪು ಜಯಂತಿಯನ್ನು ನಾವೇ ಮುಂದೆ ನಿಂತು ಮಾಡ್ತೀವಿ: ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ

    ಇದರ ಜೊತೆಗೆ ಗುರುರಾಘವೇಂದ್ರ ಸ್ವಾಮಿ ಅವರಿಗೆ ಮಂತ್ರಾಲಯ ಮಠ ಸ್ಥಾಪಿಸಲು ಜಾಗ ಕೊಟ್ಟಿದ್ದು, ಅದೋನಿ ನವಾಬರು. ಆ ಜಾಗವನ್ನು ಆ ಊರಿನ ಖಾಜಿ ಸಾಹೇಬರಿಗೆ ಕೊಟ್ಟಿದ್ದರು. ಆದರೆ ಅಂದು ನವಾಬರು ಗುರುರಾಘವೇಂದ್ರ ಸ್ವಾಮಿ ಅವರು ದೈವ ಮಾನವರು ಅವರು ನಮ್ಮ ರಾಜ್ಯಕ್ಕೆ ಬಂದಿದ್ದಾರೆ ಎಂದು ಹೇಳಿ ಖಾಜಿ ಸಾಹೇಬರಿಗೆ ಕೊಟ್ಟಿದ್ದ ಭೂಮಿಯನ್ನು ವಾಪಾಸ್ ಪಡೆದುಕೊಂಡರು. ನಂತರ ಆ ಭೂಮಿಯನ್ನು ಗುರುರಾಘವೇಂದ್ರ ಸ್ವಾಮಿ ಅವರಿಗೆ ನೀಡಿದರು. ಇದರ ಚರಿತ್ರೆಯೂ ಕೂಡ ಮಂತ್ರಾಲಯದಲ್ಲಿದೆ. ಈ ಸಂಬಂಧ ಸಾವಿರಾರು ವರ್ಷದಿಂದ ನಡೆದುಕೊಂಡು ಬಂದಿದೆ. ಕೆಲವರು ಈಗ ಬಂದ ಹಾಳು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

  • ಅಲ್ಲಿ ನೆರೆ ಹಾನಿಯಿಂದ ಜನ ತತ್ತರ – ಇಲ್ಲಿ ಶತದಿನದ ಸಂಭ್ರಮಕ್ಕೆ ಮುಂದಾದ ಸರ್ಕಾರ

    ಅಲ್ಲಿ ನೆರೆ ಹಾನಿಯಿಂದ ಜನ ತತ್ತರ – ಇಲ್ಲಿ ಶತದಿನದ ಸಂಭ್ರಮಕ್ಕೆ ಮುಂದಾದ ಸರ್ಕಾರ

    ಬೆಂಗಳೂರು: ನವೆಂಬರ್ 2ಕ್ಕೆ ಅಧಿಕಾರಕ್ಕೆ ಬಂದು 100 ದಿನವಾಗಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಶತದಿನದ ಸಂಭ್ರಮ ಆಚರಿಸಲು ಸಿದ್ಧತೆ ನಡೆಸುತ್ತಿದೆ.

    ಹೌದು. ಶತದಿನದ ಸಂಭ್ರಮಾಚರಣೆ ಸಂಬಂಧ ಸಿಎಂ ಯಡಿಯೂರಪ್ಪನವರು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನೂರು ದಿನದ ಸಾಧನೆ ತಿಳಿಸಲು ಭಾನುವಾರ ತರಹೇವಾರಿ ಪೋಸ್‍ಗಳನ್ನು ನೀಡಿ ಸಿಎಂ ಫೋಟೋಶೂಟ್ ಮಾಡಿಸಿದ್ದಾರೆ.

    ಸರ್ಕಾರದ ಈ ಸಂಭ್ರಮಾಚರಣೆಗೆ ಮುಂದಾಗುತ್ತಿರುವುದಕ್ಕೆ ಈಗ ಭಾರೀ ಟೀಕೆ ವ್ಯಕ್ತವಾಗಿದೆ. ಉತ್ತರ ಕರ್ನಾಟಕದಲ್ಲಿ ಇನ್ನೂ ನೆರೆ ಪರಿಹಾರ ಕಾರ್ಯಗಳು ನಿಂತಿಲ್ಲ. ಈ ನಡುವೆ ಮತ್ತೊಮ್ಮೆ ನೆರೆ ಉಂಟಾಗಿದ್ದು ಈ ನೋವಿನಲ್ಲಿ ಸಂಭ್ರಮಾಚರಣೆ ಅಗತ್ಯ ಇದೆಯೇ ಎನ್ನುವ ಪ್ರಶ್ನೆ ಎದ್ದಿದೆ.

    ನೆರೆ, ಅತಿವೃಷ್ಟಿ ಹಾನಿಯಿಂದ ಜನ ತತ್ತರಿಸುತ್ತಿದ್ದರೆ ಇತ್ತ ಸರ್ಕಾರ ಶತದಿನಗಳ ಸಂಭ್ರಮಾಚರಣೆಗೆ ತಯಾರಿ ಮಾಡಿಕೊಳ್ಳುತ್ತಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಎದ್ದಿದೆ.

    ಮತ್ತೆ ನೆರೆ: ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯದಿಂದ ರಾತ್ರಿ ಬರೋಬ್ಬರಿ 3.25 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ. ಯಾದಗಿರಿ ಜಿಲ್ಲೆಯ ಸುರಪುರದಲ್ಲಿರುವ ಡ್ಯಾಂನಿಂದ ಇಷ್ಟೊಂದು ಪ್ರಮಾಣದಲ್ಲಿ ನೀರು ಬಿಟ್ಟಿರುವ ಕಾರಣ ಕೊಳ್ಳೂರು ಸೇತುವೆ, ಲಿಂಗಸುಗೂರಿನ ಶೀಲಹಳ್ಳಿ ಸೇತುವೆ, ದೇವದುರ್ಗದ ಹೂವಿನಹೆಡಗಿ ಸೇತುವೆ ಮುಳುಗಡೆಯಾಗಿದ್ದು ಯಾದಗಿರಿ, ರಾಯಚೂರು ಜಿಲ್ಲೆಗಳ ಕೃಷ್ಣಾ ನದಿ ಪಾತ್ರದ ಗ್ರಾಮಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.

    ಇತ್ತ ಮಳೆಯಬ್ಬರಕ್ಕೆ ಗೋಕಾಕ್ ಫಾಲ್ಸ್ ಬಳಿ ಇರುವ ಗುಡ್ಡ ಮತ್ತೆ ಕುಸಿಯುತ್ತಿದ್ದು, ರಸ್ತೆಗೆ ಬೃಹತ್ ಗಾತ್ರದ ಕಲ್ಲುಗಳು ಉರುಳಿ ಬಿದ್ದಿವೆ. ಬೆಳಗಾವಿ-ಗೋಕಾಕ್ ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸವಾರರು ಆತಂಕದಲ್ಲೇ ಓಡಾಡುತ್ತಿದ್ದಾರೆ. ಉರುಳಿ ಬಿದ್ದಿರುವ ಬಂಡೆಗಲ್ಲುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಬೆಳಗ್ಗೆ 7 ಗಂಟೆಯಿಂದ ಮತ್ತೆ ಆರಂಭವಾಗಿದೆ. ಉರುಳಿರುವ ಎರಡು ಬೃಹತ್ ಬಂಡೆಗಳನ್ನು ಮೊದಲು ಬ್ಲಾಸ್ಟ್ ಮಾಡಿ ಅವುಗಳನ್ನು ಅಲ್ಲಿಂದ ಸಾಗಿಸಲಾಗುತ್ತದೆ. ಎನ್‍ಡಿಆರ್‍ಎಫ್ ಸಿಬ್ಬಂದಿ ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ.

    ಮಳೆಯ ಅಬ್ಬರಕ್ಕೆ ನಾಡದೇವತೆ ಚಾಮುಂಡಿ ದರ್ಶನಕ್ಕೆ ಹೋಗುವ ಚಾಮುಂಡಿ ಬೆಟ್ಟದಲ್ಲೂ ಭೂ ಕುಸಿತವಾಗಿದೆ. ಚಾಮುಂಡಿ ಬೆಟ್ಟದ ವ್ಯೂವ್ ಪಾಯಿಂಟ್ ಬಳಿಯಲ್ಲಿ ಭೂಮಿ ಕುಸಿದಿದ್ದರಿಂದ ರಸ್ತೆಯೂ ಕುಸಿತವಾಗಿದೆ. ನಂದಿ ವಿಗ್ರಹದ ಕಡೆಗೆ ಸಾಗುವ ಮಾರ್ಗದ ಸನಿಹದಲ್ಲಿಯೇ ಈ ವ್ಯೂವ್ ಪಾಯಿಂಟ್ ಇದೆ. ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಿದ್ದಾರೆ.

    ತುಂಗಭದ್ರಾ ಜಲಾಶಯದಿಂದ ಮಂಗಳವಾರ ಒಂದೂವರೆ ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಜಂತಕಲ್‍ನಲ್ಲಿ ಸೇತುವೆ ಮುಳುಗಡೆ ಆಗಿತ್ತು. ಇತ್ತ ಮಳೆ ಇಲ್ಲದೇ ಕಂಗೆಟ್ಟಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ ವರುಣ ರೌದ್ರಾವತಾರ ತಾಳಿದ್ದಾನೆ. ಹೊಸದುರ್ಗ ತಾಲೂಕಿನ ಕೆಲ್ಲೋಡುವಿನಲ್ಲಿ ವೇದಾವತಿ ನದಿ ಪ್ರವಾಹಕ್ಕೆ ತೆಂಗಿನ ಮರಗಳೇ ಉರುಳಿ ಬಿದ್ದಿದ್ದು, ಕೆಲ್ಲೋಡು ಸೇತುವೆ ಬಳಿ ಮಣ್ಣು ಕುಸಿದಿದೆ.

    ಕರಾವಳಿಯ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಇಂದು ರೆಡ್ ಅಲರ್ಟ್ ಘೋಷಿಸಿರುವ ಹವಾಮಾನ ಇಲಾಖೆ, ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಹೀಗಾಗಿ ಸದ್ಯಕ್ಕೆ ನೆರೆಯಬ್ಬರ ತಗ್ಗುವ ಲಕ್ಷಣಗಳಿಲ್ಲ. ಬೆಳಗಾವಿ, ಧಾರವಾಡ, ಕಲಬುರಗಿ, ವಿಜಯಪುರ, ಯಾದಗಿರಿಯಲ್ಲಿ ಕಿತ್ತಳೆ ಬಣ್ಣದ ಎಚ್ಚರಿಕೆ ನೀಡಲಾಗಿದೆ. ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದಲ್ಲೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಜಾರಿಯಲ್ಲಿದೆ. ಬೆಂಗಳೂರಲ್ಲಿ ಶುಕ್ರವಾರದ ಬೆಳಗ್ಗಿನವರೆಗೂ ಯೆಲ್ಲೋ ಅಲರ್ಟ್ ಜಾರಿಯಲ್ಲಿದೆ. ಇಲ್ಲಿವರೆಗೆ ಕರ್ನಾಟಕದಲ್ಲಿ ಪ್ರವಾಹಕ್ಕೆ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.