Tag: ಬಿಜೆಪಿ. ಅಮಿತ್ ಶಾ

  • ‘ಆಪರೇಷನ್ ಡಜನ್’ಗೆ ಅಮಿತ್ ಶಾ ಮಾಸ್ಟರ್ ಪ್ಲ್ಯಾನ್!

    ‘ಆಪರೇಷನ್ ಡಜನ್’ಗೆ ಅಮಿತ್ ಶಾ ಮಾಸ್ಟರ್ ಪ್ಲ್ಯಾನ್!

    – ದೆಹಲಿಗೆ ಬರುವಂತೆ ರಾಜ್ಯದ ಎಲ್ಲ ಬಿಜೆಪಿ ಶಾಸಕರಿಗೆ ಸೂಚನೆ
    – ಸೋಮವಾರವೇ ರಾಜೀನಾಮೆ ನೀಡಲಿದ್ದಾರಂತೆ ಕಾಂಗ್ರೆಸ್‍ನ 12 ಶಾಸಕರು

    ಬೆಂಗಳೂರು: ಕಾಂಗ್ರೆಸ್‍ನ ಅತೃಪ್ತ 12 ಜನ ಶಾಸಕರನ್ನು ಬಿಜೆಪಿ ಸೇರ್ಪಡೆ ಮಾಡುವುದು ಹೇಗೆ, ಯಾವ ಸಮಯದಲ್ಲಿ ಏನು ಮಾಡಬೇಕು ಅಂತ ಬಿಜೆಪಿ
    ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಪ್ಲ್ಯಾನ್ ಪ್ರಕಾರ ಸಂಕ್ರಾಂತಿಗೂ ಮುನ್ನವೇ ರಾಜ್ಯ ಬಿಜೆಪಿಯ 104 ಶಾಸಕರನ್ನು ದೆಹಲಿಗೆ ಕರೆಸಿಕೊಳ್ಳುತ್ತಿದ್ದಾರಂತೆ.

    ‘ಆಪರೇಷನ್ ಡಜನ್’ಗೆ ಸೋಮವಾರ ಮುಹೂರ್ತ ಫಿಕ್ಸ್ ಮಾಡಲಾಗಿದ್ದು, ಸಿಎಂ ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸಂಕ್ರಾಂತಿಯ ಶಾಕ್ ಕೊಡಲು ಅಮಿತ್ ಶಾ ನಿರ್ಧರಿಸಿದ್ದಾರಂತೆ. ಇದರಿಂದಾಗಿ ರಾಜ್ಯ ಬಿಜೆಪಿ ಶಾಸಕರು ಈ ಬಾರಿ ಸಂಕ್ರಾಂತಿ ಆಚರಣೆಯನ್ನು ಮನೆಯಲ್ಲಿ ಮಾಡಲ್ಲ. ಬದಲಾಗಿ ದೆಹಲಿ ಅಥವಾ ಮುಂಬೈನಲ್ಲಿ ಆಚರಿಸಲಿದ್ದಾರೆ. ಈ ವೇಳೆ ಅಮಿತ್ ಶಾ ಎಲ್ಲ ಶಾಸಕರಿಗೂ ಫುಲ್ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಎಲ್ಲ ಶಾಸಕರನ್ನು ಬರಹೇಳಿದ್ದು ಯಾಕೆ?:
    ಕಾಂಗ್ರೆಸ್‍ನ 12 ಜನ ಶಾಸಕರಿಂದ ರಾಜೀನಾಮೆ ಕೊಡಿಸುತ್ತಿದ್ದಂತೆ, ಸಿಎಂ ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ನಮ್ಮ ಶಾಸಕರಿಗೆ ಬಲೆ ಬೀಸುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಆಪರೇಷನ್ ಡಜನ್ ಪೂರ್ಣವಾಗುವವರೆಗೂ ನಮ್ಮ ಶಾಸಕರು ದೆಹಲಿಯಲ್ಲಿಯೇ ಇರಬೇಕು. ಒಂದು ವೇಳೆ ಅಗತ್ಯ ಬಿದ್ದರೆ ಶಾಸಕರನ್ನು ಮುಂಬೈಗೆ ಕಳುಹಿಸಲಾಗುತ್ತದೆ ಎಂದು ಅಮಿತ್ ಶಾ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರಂತೆ.

    ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿಂದಂತೆ ಪಕ್ಷದ 104 ಜನ ಶಾಸಕರು ಶುಕ್ರವಾರ ಬೆಳಗ್ಗೆ ದೆಹಲಿಗೆ ಬರಬೇಕು. ಯಾವುದೇ ಶಾಸಕರು ತಪ್ಪಿಸಿಕೊಳ್ಳುವಂತಿಲ್ಲ, ಎಲ್ಲರೂ ದೆಹಲಿಯಲ್ಲೇ ಮೂರು ದಿನ ಇರಬೇಕು. ಎಲ್ಲ ಶಾಸಕರನ್ನು ದೆಹಲಿಗೆ ಕರೆದುಕೊಂಡು ಬರುವ ಜವಾಬ್ದಾರಿಯನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶಾಸಕರಾದ ಅರವಿಂದ್ ಲಿಂಬಾವಳಿ ಹಾಗೂ ಉಮೇಶ್ ಕತ್ತಿ ಅವರು ವಹಿಸಿಕೊಳ್ಳಬೇಕು ಎಂದು ಅಮಿತ್ ಶಾ ಆದೇಶ ಹೊರಡಿಸಿದ್ದಾರಂತೆ.

    ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆಯ ನೆಪದಲ್ಲಿ ಶಾಸಕರಿಗೆ ಬುಲಾವ್ ನೀಡಲಾಗಿದ್ದು, ಶುಕ್ರವಾರ, ಶನಿವಾರ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆ ನಡೆಯಲಿದೆ. ಈ ಎರಡು ದಿನಗಳ ಸಭೆಯ ಬಳಿಕ ಭಾನುವಾರ ರಾಜ್ಯ ಶಾಸಕರು ಅಮಿತ್ ಶಾ ಅವರ ನಿರೀಕ್ಷಣೆಯಲ್ಲಿ ಶಾಸಕರು ಇರಲಿದ್ದಾರೆ. ಇತ್ತ ಕಾಂಗ್ರೆಸ್ ಅತೃಪ್ತ 12 ಜನ ಶಾಸಕರು ಕೂಡ ದೆಹಲಿಯಲ್ಲಿಯೇ ಇದ್ದಾರೆ. ಅವರು ರಾಜ್ಯಕ್ಕೆ ಮರಳಿ ಸೋಮವಾರ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ನೀಡಲಿದ್ದಾರೆ. ಈ ಎಲ್ಲ ಪ್ಲ್ಯಾನ್ ವಿಫಲವಾಗದಂತೆ ಎಚ್ಚರ ವಹಿಸಬೇಕು ಎಂದು ಅಮಿತ್ ಶಾ ಅವರು ರಾಜ್ಯ ನಾಯಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಳಗಾವಿ, ಬಾಗಲಕೋಟೆಯಲ್ಲಿ ಅಮಿತ್ ಶಾ ಪ್ರಚಾರ – ಮೊಳಕಾಲ್ಮೂರಲ್ಲಿ ರಾಮುಲು ಮೊದಲ ಸಂಚಾರ

    ಬೆಳಗಾವಿ, ಬಾಗಲಕೋಟೆಯಲ್ಲಿ ಅಮಿತ್ ಶಾ ಪ್ರಚಾರ – ಮೊಳಕಾಲ್ಮೂರಲ್ಲಿ ರಾಮುಲು ಮೊದಲ ಸಂಚಾರ

    ಬೆಳಗಾವಿ, ಬಳ್ಳಾರಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇಂದು ಬೆಳಗಾವಿ, ಬಾಗಲಕೋಟೆಯಲ್ಲಿ ಪ್ರಚಾರ ಮಾಡಲಿದ್ದಾರೆ.

    ಬೆಳಗ್ಗೆ 9 ಗಂಟೆ ಸುಮಾರಿಗೆ ಹುಬ್ಬಳ್ಳಿ ಖಾಸಗಿ ಹೊಟೇಲ್‍ನಿಂದ ಹೊರಡುವ ಅಮಿತ್ ಶಾ ಅವರು ಬೆಳಗಾವಿಯ ಕಿತ್ತೂರು ನಗರದಲ್ಲಿರುವ ರಾಣಿ ಚೆನ್ನಮ್ಮಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ನಂತರ ಸಂಗೋಳ್ಳಿ ರಾಯಣ್ಣ ಅವರ ಸಮಾಧಿ ಸ್ಥಳ ನಂದಗಡಕ್ಕೆ ಭೇಟಿ ನೀಡಿ ಅಲ್ಲಿ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ತದನಂತರ ಬಾಗಲಕೋಟೆಯ ಮುಧೋಳ ನಗರಕ್ಕೆ ಪ್ರಯಾಣ ಬೆಳೆಸಿ, ನಗರದ ದಾನಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

    ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ಶಕ್ತಿ ಸಮಾವೇಶ ನಡೆಯಲಿದ್ದು, 3 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಮಧ್ಯಾಹ್ನ 3.25ಕ್ಕೆ ಗೋಕಾಕ್ ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಅಲ್ಲಿಂದ ಬೆಳಗಾವಿಯ ಕೆಎಲ್‍ಇ ಯ ಜೀರಗೆ ಭವನದಲ್ಲಿ ವಿಧ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ 9 ಘಂಟೆಗೆ ಬೆಳಗಾವಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮುಖಾಂತರ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ರಾಮುಲು ಪ್ರಚಾರ: ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಸದ ಶ್ರೀರಾಮುಲು ಇಂದಿನಿಂದ ಅಧಿಕೃತವಾಗಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಅಭ್ಯರ್ಥಿಯಾದ ನಂತರ ಮೊದಲ ಬಾರಿಗೆ ಮೊಳಕಾಲ್ಮೂರು ಕ್ಷೇತ್ರಕ್ಕೆ ಭೇಟಿ ಕೊಡ್ತಿದ್ದು, ಬೆಳಗ್ಗೆ ಇಲ್ಲಿನ ನಾಯಕನಹಟ್ಟಿ ತಿಪ್ಪೇಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

    ನಾಯಕನಹಟ್ಟಿ, ನೆಲಗತ್ತನಹಟ್ಟಿ, ಗೌರಿಪುರ, ತಳಕು ಸೇರಿದಂತೆ ಇಂದು 15 ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ದೇವಾಲಯಗಳಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಸ್ಥಳಿಯ ಮುಖಂಡರ ಜೊತೆ ಮಾತುಕತೆ ನಡೆಸಲಿದ್ದಾರೆ. ಇನ್ನು ಈ ಕ್ಷೇತ್ರದ ಟಿಕೆಟ್ ವಂಚಿತ ಹಾಲಿ ಶಾಸಕ ತಿಪ್ಪೇಸ್ವಾಮಿ ಬೆಂಬಲಿಗರು ರಾಮುಲು ಆಗಮನದ ವೇಳೆ ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ ಎಂಬುದಾಗಿ ತಿಳಿದುಬಂದಿದೆ.