Tag: ಬಿಎಸ್ ಯಡಿಯೂರಪ್ಪ

  • ಬಿಎಸ್‍ವೈ ಗಂಡಸಾಗಿದ್ರೆ ಇಲ್ಲಿ ಬಂದು ಮಾತಾಡ್ಲಿ: ಮಧು ಬಂಗಾರಪ್ಪ ವಾಗ್ದಾಳಿ

    ಬಿಎಸ್‍ವೈ ಗಂಡಸಾಗಿದ್ರೆ ಇಲ್ಲಿ ಬಂದು ಮಾತಾಡ್ಲಿ: ಮಧು ಬಂಗಾರಪ್ಪ ವಾಗ್ದಾಳಿ

    ಧಾರವಾಡ: ಶಿವಮೊಗ್ಗ ಜಿಲ್ಲೆಯಿಂದ ಮೂರು ಜನ ಮುಖ್ಯಮಂತ್ರಿಗಳು ಆಗಿದ್ದಾರೆ. ಅದರಲ್ಲಿ ಅತ್ಯಂತ ಕಚಡಾ ಮುಖ್ಯಮಂತ್ರಿ ಅಂದ್ರೆ ಅದು ಬಿಎಸ್ ಯಡಿಯೂರಪ್ಪ ಎಂದು ಸೊರಬ ಶಾಸಕ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.

    ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಜೆಡಿಎಸ್ ಆಯೋಜಿಸಿದ್ದ ರೈತ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಂ ಮೂಗನ್ನ ಹಿಡಿದು ರೈತರ ಸಾಲ ಮನ್ನಾ ಮಾಡಿಸುವದಾಗಿ ಹೇಳುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು ಪ್ರಧಾನಿ ಮೋದಿ ಮೂಗನ್ನ ಹಿಡಿದು ರೈತರ ಸಾಲ ಮನ್ನಾ ಮಾಡಿಸಲಿ ಎಂದು ಸವಾಲು ಹಾಕಿದರು. ರೈತರ ಸಾಲವನ್ನ ಮನ್ನಾ ಮಾಡದೇ ಇದ್ರೆ ರೈತರು ನಿಮ್ಮ ಮನೆಗೆ ಬರ್ತಾರೆ ಅಂದ್ರು.

    ಕಲ್ಲಡ್ಕ ಪ್ರಭಾಕರ ಅವರನ್ನ ಬಂಧಿಸಿದರೆ ಇಡೀ ಮಂಗಳೂರಿಗೆ ಬೆಂಕಿ ಹಾಕ್ತೀನಿ ಅಂತಾರೆ ಬಿಎಸ್‍ವೈ. ಗಂಡಸುತನ ಇದ್ರೆ ಅದೇ ಮಾತನ್ನ ಇಲ್ಲೇ ಬಂದು ಹೇಳಲಿ ಎಂದು ಮಧು ಬಂಗಾರಪ್ಪ ಸವಾಲು ಹಾಕಿದ್ರು. ಯಡಿಯೂರಪ್ಪನವರ ರಕ್ತ ಒಳ್ಳೆ ರಕ್ತ ಅಲ್ಲ. ಅದು ರಾಜ್ಯದ ರೈತರ ವಿರೋಧಿ ರಕ್ತ ಎಂದು ಬಿಎಸ್‍ವೈ ಮೇಲೆ ಕಿಡಿ ಕಾರಿದರು.

  • ಯಡಿಯೂರಪ್ಪ ಮನೆಯಲ್ಲಿ ಮಧ್ಯರಾತ್ರಿ ಪೊಲೀಸರ ತಲಾಶ್!

    ಯಡಿಯೂರಪ್ಪ ಮನೆಯಲ್ಲಿ ಮಧ್ಯರಾತ್ರಿ ಪೊಲೀಸರ ತಲಾಶ್!

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಧವಳಗಿರಿ ನಿವಾಸಕ್ಕೆ ಪೊಲೀಸರು ಜುಲೈ 15ರ ಮಧ್ಯರಾತ್ರಿ ಆಗಮಿಸಿ ಹುಡುಕಾಟ ನಡೆಸಿದ್ದಾರೆ.

    ಹೌದು. ಈಶ್ವರಪ್ಪ ಅವರ ಪಿಎ ವಿನಯ್ ಕಿಡ್ನಾಪ್ ಪ್ರಕರಣದಲ್ಲಿ ಬಿಎಸ್‍ವೈ ಆಪ್ತ ಸಹಾಯಕ ಸಂತೋಷ್ ಭಾಗಿಯಾಗಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯರಾತ್ರಿ ಧವಳಗಿರಿ ನಿವಾಸಕ್ಕೆ ಆಗಮಿಸಿದ್ದಾರೆ. ಈ ವೇಳೆ ಮನೆಯ ಭದ್ರತಾ ಸಿಬ್ಬಂದಿ ಪೊಲೀಸರ ಜೊತೆ ಸಂತೋಷ್ ಮನೆಯಲ್ಲಿ ಇಲ್ಲ ಎಂದು ಹೇಳಿ ಕಳುಹಿಸಿದ್ದಾರೆ.

    ತನ್ನ ಮನೆಗೆ ಪೊಲೀಸರು ಹುಡುಕಾಟ ನಡೆಸಿದ್ದನ್ನು ನೋಡಿ ಗರಂ ಆಗಿರುವ ಬಿಎಸ್‍ವೈ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದಿದ್ದಾರೆ.

    ಪತ್ರದಲ್ಲಿ ಏನಿದೆ?
    ಪತ್ರದಲ್ಲಿ ಸಂತೋಷ್ ಹುಡುಕಿಕೊಂಡು ಎಸಿಪಿ ಬಡಿಗೇರ್ ನೇತೃತ್ವದಲ್ಲಿ ತಂಡ ಬಂದಿತ್ತು. ಆ ತಂಡದವರು ನಮ್ ಸೆಕ್ಯೂರಿಟಿ ಬಳಿ ಬಂದು ಸಂತೋಷ್ ಬಗ್ಗೆ ಕೇಳಿದ್ದರು. ಸಂತೋಷ್ ಕೊಠಡಿ ಬಗ್ಗೆಯೂ ವಿಚಾರಿಸಿದ್ದರು. ಆದರೆ ಸಂತೋಷ್ ಮನೆಯಲ್ಲಿ ಇಲ್ಲ ಎಂದು ಸೆಕ್ಯೂರಿಟಿ ಹೇಳಿದ್ದರು.

    ನನ್ನ ಮಾಹಿತಿ ಪ್ರಕಾರ ಪ್ರಕರಣದಲ್ಲಿ ಸಂತೋಷ್ ಭಾಗಿಯಾಗಿಲ್ಲ. ಕಳೆದ 7 ವರ್ಷಗಳಿಂದ ಸಂತೋಷ್ ನನ್ನ ಬಳಿ ಕೆಲಸ ಮಾಡುತ್ತಿದ್ದು, ನನ್ನ ಸಂಬಂಧಿ ಕೂಡ ಹೌದು. ಸಂತೋಷ್ ವಿರುದ್ಧ ಸಾಕ್ಷಿಗಳನ್ನ ಸೃಷ್ಟಿಸಿ ಪಿತೂರಿ ನಡೆಯುತ್ತಿದೆ. ಮಧ್ಯರಾತ್ರಿ ಪೊಲೀಸರು ನನ್ನ ಮನೆಗೆ ಬಂದು ವಿಚಾರಣೆ ನಡೆಸುವ ಅವಶ್ಯಕತೆ ಇರಲಿಲ್ಲ. ನಾನು ಈಗಾಗಲೇ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್, ಡಿಜಿ ಆರ್.ಕೆ.ದತ್ತಾ ಅವರ ಜತೆ ಮಾತನಾಡಿ ಮಾಹಿತಿ ಪಡೆದಿದ್ದೇನೆ.

    ಈಗಾಗಲೇ ಆರೋಪಿ ರಾಜೇಂದ್ರ ಅರಸ್ ಎಂಬ ವ್ಯಕ್ತಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಕೂಡ ಕೊಟ್ಟಿದೆ. ಆದ್ರೆ ಪೊಲೀಸರು ರಾಜೇಂದ್ರ ಅರಸ್‍ಗೆ ಸಂತೋಷ್ ಭಾಗಿಯಾಗಿದ್ದಾನೆ ಎಂದು ಹೇಳಲು ಒತ್ತಡ ಹಾಕುತ್ತಿದ್ದಾರೆ. ಹಾಗಾಗಿ ನಾನು ಈ ಪ್ರಕರಣದ ತನಿಖೆಗೆ ಅಡ್ಡಿ ಆಗುತ್ತಿಲ್ಲ. ಆದರೆ ದುರುದ್ದೇಶಪೂರ್ವಕವಾಗಿ ಸಂತೋಷ್ ಮೇಲೆ ಆರೋಪ ಸರಿಯಲ್ಲ. ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಅವರು ಪತ್ರ ಬರೆದಿದ್ದಾರೆ.

    ದ್ವೇಷದ ರಾಜಕಾರಣ: ಸಂತೋಷ್ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ. ಸಣ್ಣ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆಸಲಾಗ್ತಿದೆ. ಸರ್ಚ್ ವಾರೆಂಟ್ ಇಲ್ಲದೇ ಪೊಲೀಸರು ನನ್ನ ಮನೆ ಸರ್ಚ್ ಮಾಡಲು ಬಂದಿದ್ದರು. ರಾತ್ರಿ 12 ಗಂಟೆಗೆ ನಮ್ಮ ಸಿಬ್ಬಂದಿಗೆ ಬೆದರಿಕೆ ಹಾಕಿ ಹೋಗಿದ್ದಾರೆ. ಕಾಂಗ್ರೆಸ್ ದ್ವೇಷದ ರಾಜಕಾರಣವನ್ನು ಕೇಂದ್ರ ಗೃಹ ಸಚಿವರ ಗಮನಕ್ಕೆ ತರುತ್ತೇನೆ ಎಂದು ಬಿಎಸ್‍ವೈ ಹೇಳಿದ್ದಾರೆ.

    ನಾನು ಪೊಲೀಸ್ ಕಮಿಷನರ್ ಜೊತೆ ಮಾತನಾಡಿದ್ದೆ. ಆದ್ರೂ ಧಿಡೀರ್ ಆಗಿ ರಾತ್ರಿ 12 ಗಂಟೆ ಮೇಲೆ ನನ್ನ ಮನೆಗೆ ಬಂದು ಹುಡುಕಾಡಿದ್ದಾರೆ. ಸರ್ಚ್ ಮಾಡುವ ಹಾಗಿದ್ರೆ ಹಗಲು ಹೊತ್ತಿನಲ್ಲಿ ಬರಬಹುದಿತ್ತು. ರಾತ್ರಿ ಹೊತ್ತಿನಲ್ಲಿ ದುರುದ್ದೇಶ ಇಟ್ಟುಕೊಂಡು ಪೊಲೀಸರು ಬಂದಿದ್ದರು. ಕಾಂಗ್ರೆಸ್ ನ ಈ ದ್ವೇಷದ ರಾಜಕಾರಣ ಬಹಳ ದಿನ ನಡೆಯುದಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಇದನ್ನೂ ಓದಿ:ವಿಡಿಯೋ ವಿಚಾರಕ್ಕೆ ಬಿಎಸ್‍ವೈ ಪಿಎಯಿಂದ ಈಶ್ವರಪ್ಪ ಪಿಎ ವಿನಯ್ ಕಿಡ್ನಾಪ್‍ಗೆ ಸುಪಾರಿ?

     

  • ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಬಿಎಸ್‍ವೈ ಮನೆಗೆ ಮುತ್ತಿಗೆ

    ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಬಿಎಸ್‍ವೈ ಮನೆಗೆ ಮುತ್ತಿಗೆ

    ಶಿವಮೊಗ್ಗ: ಭಾನುವಾರದಂದು ಬಳ್ಳಾರಿಯಲ್ಲಿ ಶ್ರೀರಾಮುಲು ನಿವಾಸಕ್ಕೆ ಮುತ್ತಿಗೆ ಹಾಕಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು ಇವತ್ತು ಶಿವಮೊಗ್ಗದ ವಿನೋಬಾ ನಗರದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮನೆಗೆ ಮುತ್ತಿಗೆ ಹಾಕಿದ್ದಾರೆ.

    ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲ ಮನ್ನಾ ಮಾಡಿಸಲು ಆಗ್ರಹಿಸಿದ ಕಾರ್ಯಕರ್ತರು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲು ಸಂಸದರು ವಿಫಲರಾಗಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು. ಆದ್ರೆ ಮುತ್ತಿಗೆ ಹಾಕ್ತಿದ್ದಂತೆ ಪೊಲೀಸರು ಸುಮಾರು 25ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಕಾರ್ಯಕರ್ತರನ್ನ ಬಂಧಿಸಿ ಬಿಡುಗಡೆ ಮಾಡಿದ್ರು.

    ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ ವೇಳೆ ಯಡಿಯೂರಪ್ಪ ಬೆಂಗಳೂರಿನ ಮನೆಯಲ್ಲಿದ್ದರು.

  • 20 ವರ್ಷದಿಂದ ಸ್ಲಂ ನೋಡಿಲ್ಲ, ಅವ್ನು ಅಸಾಮಿ: ಬಿಎಸ್‍ವೈ ವಿರುದ್ಧ ಸಿಎಂ ವಾಗ್ದಾಳಿ

    20 ವರ್ಷದಿಂದ ಸ್ಲಂ ನೋಡಿಲ್ಲ, ಅವ್ನು ಅಸಾಮಿ: ಬಿಎಸ್‍ವೈ ವಿರುದ್ಧ ಸಿಎಂ ವಾಗ್ದಾಳಿ

    ಬೆಂಗಳೂರು: ಯಡಿಯೂರಪ್ಪ ಬಿಜೆಪಿ ನಡಿಗೆ ಸ್ಲಂ ಕಡೆಗೆ ಅಂತಾರೆ. 20 ವರ್ಷದಿಂದ ಸ್ಲಂ ನೋಡಿಲ್ಲ ಅಂತ ಅನ್ನಿಸುತ್ತೆ ಅವ್ನು ಅಸಾಮಿ. ಮಾತು ಎತ್ತಿದ್ರೆ ದಲಿತರ ಮನಗೆ ಹೋಗಿ ಊಟ ಮಾಡ್ತೀನಿ ಅಂತಾರೆ. ಆದರೆ ಹೋಟೆಲ್ ನಿಂದ ತಂದ ತಿಂಡಿ ತಿಂದು ಬರುತ್ತಾರೆ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ  ವಾಗ್ದಾಳಿ ನಡೆಸಿದ್ದಾರೆ.

    ಚಿಕ್ಕಬಾಣಾವರ, ನಾಗಸಂದ್ರ, ರಾಜಾ ಕೆನಾಲ್‍ನಲ್ಲಿ 65 ಎಂಎಲ್‍ಡಿ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಏಕವಚನದಲ್ಲೆ ಬಿಎಸ್‍ವೈ ಅವರನ್ನು ಟೀಕಿಸಿದರು.

    ದಲಿತ ಮೇಲೆ ಪ್ರೀತಿ ಇದ್ದರೆ ಅವರ ಹೆಣ್ಣು ಮಕ್ಕಳನ್ನು ಇವರ ಮನೆಗೆ, ಇವರ ಹೆಣ್ಣು ಮಕ್ಕಳನ್ನು ದಲಿತರ ಮನೆಗೆ ಕೊಟ್ಟು ಮದುವೆ ಮಾಡಲಿ. ಕೇವಲ ದಲಿತರ ಬಗ್ಗೆ ಅವ್ರು ನಾಟಕ ಮಾಡ್ತಿದ್ದಾರೆ ಅಂತ ಬಿಎಸ್‍ವೈ ವಿರುದ್ಧ ಕಿಡಿಕಾರಿದರು.

    ಬೆಂಗಳೂರು ಹಾಳಾಗಲು ಬಿಜೆಪಿ ಕಾರಣ. ಬೆಂಗಳೂರಿನ ಸರ್ಕಾರದ ಆಸ್ತಿಗಳನ್ನು ಅಡ ಇಟ್ಟವರು ಬಿಜೆಪಿಯವರು. ಅವರು ಅಡ ಇಟ್ಟ ಎಲ್ಲ ಆಸ್ತಿಯನ್ನ ನಾವು ಬಿಡಿಸುತ್ತಿದ್ದೇವೆ. ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತ ಯಡಿಯೂರಪ್ಪ ಗೊತ್ತಾಗಿದೆ. ಅದಕ್ಕೆ ಬಿಜೆಪಿಯ 150 ಮಿಷನ್ ಬಗ್ಗೆ ಎಲ್ಲೂ ಮಾತಾಡುತ್ತಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತ ಗೊತ್ತಾಗಿ ಸುಮ್ಮನಿದ್ದಾರೆ ಎಂದು ಲೇವಡಿ ಮಾಡಿದರು.

    ಎಚ್‍ಡಿಕೆ ವಿರುದ್ಧ ಗರಂ: ರಾಜಕೀಯಕ್ಕಾಗಿ ಅಂದು ಕುಮಾರಸ್ವಾಮಿ ಅವರು 110 ಹಳ್ಳಿಗಳಿಗಳನ್ನು ಸೇರಿಸಿ ಹೋದ್ರು. ನೀರಿನ ಪ್ರಮಾಣ ಇದೆಯೋ ಇಲ್ಲವೋ ಎನ್ನುವುದನ್ನು ನೋಡದೇ ಹಾಗೆ ಸೇರಿಸಿಹೋದ್ರು. ಅವರು ಮಾಡಿದ ತಪ್ಪಿಗೆ ನಾವು ಇವತ್ತು ಎಲ್ಲರಿಗೂ ನೀರು ಕೊಡುತ್ತಿದ್ದೇವೆ. ಬೆಂಗಳೂರು ಅಭಿವೃದ್ಧಿಗೆ ನಮ್ಮ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ರಸ್ತೆ, ನೀರು, ಸಾರಿಗೆ ಎಲ್ಲದಕ್ಕೂ ನಮ್ಮ ಸರ್ಕಾರ ಆದ್ಯತೆ ನೀಡಿದೆ ಎಂದರು.

    ನಮ್ಮ ಸರ್ಕಾರ ಬಂದ ಮೇಲೆ ಇಂತಹ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಬೆಂಗಳೂರಿನಲ್ಲಿ 1800 ಎಂಎಲ್‍ಡಿ ನೀರು ಸರಬರಾಜು ಆಗುತ್ತೆ. 1440 ಎಂಎಲ್‍ಡಿ ನೀರು ತ್ಯಾಜ್ಯ ನೀರು ಬರುತ್ತೆ. ತ್ಯಾಜ್ಯ ನೀರು ಸಂಸ್ಕರಣೆ ಇವತ್ತು ಅವಶ್ಯಕ ಹಾಗಾಗಿ ನೀರು ಸಂಸ್ಕರಣೆ ಮಾಡದೇ ಇದ್ರೆ ಸಮಸ್ಯೆ ಆಗುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಬೆಳ್ಳಂದೂರಿನಲ್ಲಿ ಮೊದಲೇ ಮುಂಜಾಗ್ರತೆ ಕ್ರಮವಾಗಿ ಸಂಸ್ಕರಣ ಘಟಕ ತೆಗೆಯದೇ ಇರೋದ್ರಿಂದ ಇವತ್ತು ಸಮಸ್ಯೆ ಆಗಿದೆ. ಜನರಿಂದ ನಾವು ಬೈಯಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಈಗ ಅಲ್ಲೂ ಕೂಡಾ ಘಟಕ ನಿರ್ಮಾಣ ಮಾಡ್ತಿದ್ದೇವೆ. ನಮ್ಮ ಸರ್ಕಾರ ಕುಡಿವ ನೀರು, ಒಳ ಚರಂಡಿಗೆ ಹೆಚ್ಚು ಒತ್ತು ನೀಡುತ್ತಿದೆ. ಇಂದು ಬೆಂಗಳೂರು ಬೆಳೆದಿದೆ. ಹೆಚ್ಚು ಜನಸಂಖ್ಯೆ ಆಗಿದೆ. ಅವರೆಲ್ಲರಿಗೂ ನೀರು ಒದಗಿಸಬೇಕಾಗಿದೆ ಎಂದು ಸಿಎಂ ಹೇಳಿದರು.

    ಜಪಾನ್ ಅಂತರಾಷ್ಟ್ರೀಯ ಸಹಕಾರ ಸಂಸ್ಥೆ(ಜೈಕಾ)ಸಹಯೋಗದೊಂದಿಗೆ ನಿರ್ಮಿಸಿರುವ ಘಟಕ ಉದ್ಘಾಟನೆಯ ವೇಳೆ ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್, ಕೆ.ಆರ್.ಪುರ ಶಾಸಕ ಬಸವರಾಜ್, ಮೇಯರ್ ಪದ್ಮಾವತಿ ಉಪಸ್ಥಿತರಿದ್ದರು.

     

  • ವಿಧಾನಸೌಧ ಆವರಣದಲ್ಲಿ ಸಿಕ್ಕಿದ್ದ ಕೋಟಿ ರೂಪಾಯಿ ಪ್ರಕರಣಕ್ಕೆ ಹೊಸ ಟ್ವಿಸ್ಟ್

    ವಿಧಾನಸೌಧ ಆವರಣದಲ್ಲಿ ಸಿಕ್ಕಿದ್ದ ಕೋಟಿ ರೂಪಾಯಿ ಪ್ರಕರಣಕ್ಕೆ ಹೊಸ ಟ್ವಿಸ್ಟ್

    ಬೆಂಗಳೂರು: ವಿಧಾನಸೌಧ ಆವರಣದಲ್ಲಿ ಸಿಕ್ಕಿದ್ದ ಒಂದೂ ಮುಕ್ಕಾಲು ಕೋಟಿ ರೂಪಾಯಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಎದುರಾಳಿಗಳನ್ನು ಮಟ್ಟ ಹಾಕೋ ಸಲುವಾಗಿ ಸಿಎಂ ಸಿದ್ದರಾಮಯ್ಯ ಹೊಸ ಅಸ್ತ್ರವನ್ನ ರಡಿ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.

    ಹೌದು. ಇನ್ನೇನು ಚಾರ್ಜ್‍ಶೀಟ್ ದಾಖಲಾಗಿದೆ, ಈ ಪ್ರಕರಣದ ಕಥೆ ಮುಗಿದೇ ಹೋಯ್ತು ಅನ್ನುವಾಗ ಉಳಿದಿರೋ ತನಿಖೆ ಪಕ್ಕಾ ನಡೆಸಿ ಅಂತ ಹೊಸ ಪೊಲೀಸ್ ಟೀಂ ಅಖಾಡಕ್ಕೆ ಇಳಿಸಿದ್ದಾರೆ. ಐದಾರು ತಿಂಗಳ ಬಳಿಕ ಎಸಿಪಿಯೊಬ್ಬರ ನೇತೃತ್ವದಲ್ಲಿ ವಿಶೇಷ ತಂಡ ರಚನೆಯಾಗಿದೆ.

    ಅಖಾಡದಲ್ಲಿರೋ ಎಂಟತ್ತು ಮಂದಿ ಅಧಿಕಾರಿಗಳ ತಂಡ ಲಾಯರ್ ಬಳಿ ಇದ್ದ ಕೋಟ್ಯಂತರ ರುಪಾಯಿ ದುಡ್ಡು ಯಾರದ್ದು ಎಂಬ ಬಗ್ಗೆ ಪತ್ತೆ ಹಚ್ಚುತ್ತಿದೆ. ಕಾರಿನಲ್ಲಿ ಸಿಕ್ಕಿದ್ದ ಕರೆನ್ಸಿ ನಂಬರ್ ಹಿಡಿದುಕೊಂಡು ಪೊಲೀಸ್ ಅಧಿಕಾರಿಗಳು ಬ್ಯಾಂಕ್‍ಗಳಿಗೆ ಸುತ್ತುತ್ತಿದ್ದಾರೆ.

    ಹೆಚ್ಚು ಕಮ್ಮಿ 100 ಬ್ಯಾಂಕ್‍ಗಳ ಪಟ್ಟಿ ಸಿದ್ಧಪಡಿಸಿರೋ ಪೊಲೀಸರ ತಂಡ ಈಗಾಗಲೇ 50ಕ್ಕೂ ಹೆಚ್ಚು ಬ್ಯಾಂಕ್‍ಗಳಿಂದ ಮಾಹಿತಿ ಸಂಗ್ರಹಿಸಿದೆ. ಆರೋಪಿ ವಕೀಲ ಸಿದ್ಧಾರ್ಥ್ ಹೈಕೋರ್ಟ್ ನಲ್ಲಿ ಪಡೆದುಕೊಂಡಿರೋ ಸ್ಟೇ ತೆರವಿಗೆ ವಿಶೇಷ ಪೊಲೀಸ್ ಟೀಂ ಮುಂದಾಗಿದೆ.

    ಇನ್ನು ದುಡ್ಡು ಸಿಕ್ಕಿದ್ದಾಗ ಕಾಂಗ್ರೆಸ್ಸಿಗರು ಬಿಜೆಪಿ ಕಡೆ ಬೊಟ್ಟು ಮಾಡಿದ್ರು. ಆದರೆ ಆ ದುಡ್ಡಿನ ಬಗ್ಗೆ ಬಿಎಸ್‍ವೈ ಅವರನ್ನು ಕೇಳಿದ್ರೆ ಹೆಚ್ಚಿನ ಮಾಹಿತಿ ಸಿಗುತ್ತೆ ಅಂತ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ರು.

    ಇದು ಎದುರಾಳಿಗಳನ್ನು ಹೆಣೆಯಲು ಸಿಎಂ ಅಂಡ್ ಟೀಂ ಹೂಡಿರೋ ಹೊಸ ಅಸ್ತ್ರ ಎನ್ನಲಾಗಿದ್ದು, ಮುಂದಿನ ಚುನಾವಣೆಯಲ್ಲಿ ಈ ಅಸ್ತ್ರ ಬಳಸಿಕೊಳ್ಳಲು ಸಿದ್ಧತೆ ನಡೆದಿದೆ ಎಂದು ಹೇಳಲಾಗಿದೆ.

    ಏನಿದು ಪ್ರಕರಣ?: 2016ರ ಅಕ್ಟೋಬರ್‍ನಲ್ಲಿ ವಿಧಾನಸೌಧದ ಗೇಟ್ ಬಳಿ ತಪಾಸಣೆ ಮಡುವ ವೇಳೆ ವಕೀಲ ಸಿದ್ಧಾರ್ಥ್ ಅವರ ವೋಕ್ಸ್ ವೇಗನ್ ಕಾರಿನಲ್ಲಿ ಸಾಗಿಸಲಾಗ್ತಿದ್ದ ದಾಖಲೆಯಿಲ್ಲದ ಸುಮಾರು 1.97 ಕೋಟಿ ರೂ. ಹಣ ಪತ್ತೆಯಾಗಿತ್ತು. ಈ ಹಣವನ್ನು ಪೊಲೀಸರು ಜಪ್ತಿ ಮಾಡಿ ಸಿದ್ಧಾರ್ಥ್‍ರನ್ನು ವಿಚಾರಣೆಗೆ ಒಳಪಡಿಸಿದ್ದರು.

     

  • ಹೆಚ್‍ಡಿಕೆ ದೊಡ್ಡ ನಾಯಕ, ನಾನು ಜನಸಾಮಾನ್ಯ ಅವರ ಬಗ್ಗೆ ಮಾತನಾಡಲ್ಲ: ಯಡಿಯೂರಪ್ಪ

    ಹೆಚ್‍ಡಿಕೆ ದೊಡ್ಡ ನಾಯಕ, ನಾನು ಜನಸಾಮಾನ್ಯ ಅವರ ಬಗ್ಗೆ ಮಾತನಾಡಲ್ಲ: ಯಡಿಯೂರಪ್ಪ

    – ಹಳ್ಳಿಗಳಿಗೆ ಹೋಗಿ ಮಲಗುವಾಗ ಹಾಸಿಗೆ, ದಿಂಬು, ಹೊದಿಕೆ ತೆಗೆದುಕೊಂಡು ಹೋಗೋ ಕೆಲಸ ಮಾಡಲ್ಲ

    ಚಿಕ್ಕಮಗಳೂರು: ಹೆಚ್.ಡಿ.ಕುಮಾರಸ್ವಾಮಿ ದೊಡ್ಡ ನಾಯಕರು, ನಾವು ಸಾಮಾನ್ಯ ಜನ ಅವರ ಬಗ್ಗೆ ನಾನು ಮಾತನಾಡೋದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ಜನಸಂಪರ್ಕ ಅಭಿಯಾನದ ಬಳಿಕ ಚಿಕ್ಕಮಗಳೂರಿನ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯಡಿಯೂರಪ್ಪ, ನಿಮ್ಮ ಜನಸಂಪರ್ಕ ಅಭಿಯಾನ ರಾಜಕೀಯ ಗಿಮಿಕ್ ಎಂದು ಹೆಚ್‍ಡಿಕೆ ಹೇಳಿದ್ದಾರೆ ಎಂದಿದ್ದಕ್ಕೆ, ಅವರು ದೊಡ್ಡವರು ನಾನು ಅವರ ಬಗ್ಗೆ ಮಾತನಾಡೋದಿಲ್ಲ. ಆದ್ರೆ ಅವರು ಹಳ್ಳಿಗಳಿಗೆ ಹೋಗಿ ಮಲಗುವಾಗ ಹಾಸಿಗೆ, ದಿಂಬು, ಹೊದಿಕೆ, ಮಂಚ, ಒಂದು ದಿನದ ಮಟ್ಟಿಗೆ ಟಾಯ್ಲೆಟ್ ರೂಂ ಕಟ್ಟಿಸಿದ್ದು, ಮರು ದಿನ ಬೆಳಗ್ಗೆ ಬರುವಾಗ ಎಲ್ಲವನ್ನೂ ತೆಗೆದುಕೊಂಡು ಬರುವಂತಹ ಕೆಲಸವನ್ನ ನಾನು ನನ್ನ ಜೀವನದಲ್ಲಿ ಮಾಡೋದಿಲ್ಲ ಎಂದರು.

    ಇದಕ್ಕೂ ಮುಂಚೆ ಚಿಕ್ಕಮಗಳೂರಿನ ಕೊಪ್ಪಾದಲ್ಲಿ ಮಾತನಾಡಿದ್ದ ಮಾಜಿ ಸಿಎಂ ಹೆಚ್‍ಡಿಕೆ, ಬಿಜೆಪಿ ರಾಜ್ಯಾಧ್ಯಕ್ಷರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡ್ತಾ, ದಲಿತರ ಮನೆಯಲ್ಲಿ ಉಪಹಾರವನ್ನ ಸೇವನೆ ಮಾಡೋ ಮುಖಾಂತರ ಅವರ ಕಷ್ಟಗಳ ಅರಿವು ಮೂಡಿಸಿಕೊಳ್ಳೋಕೆ ಈಗ ಪ್ರಯತ್ನ ಮಾಡ್ತಿದ್ದಾರೆ. ಐದು ವರ್ಷಗಳ ಕಾಲ ಆಡಳಿತ ನಡೆಸಬೇಕಾದ್ರೆ ಅವರ ಕಣ್ಣಿಗೆ ದಲಿತರು ಕಾಣಲಿಲ್ಲ. ದಲಿತರ ಮನೆಯಲ್ಲಿ ಊಟ, ತಿಂಡಿ ಮಾಡೋದ್ರಿಂದ ಅವರ ಸಮಸ್ಯೆಯನ್ನ ಅರಿಯೋಕೆ ಸಾಧ್ಯವಾಗುತ್ತಾ ಅಂತಾ ಅವರೇ ಒಂದ್ ಸಾರಿ ಆತ್ಮ ಮುಟ್ಟಿಕೊಂಡು ವಿಮರ್ಶೆ ಮಾಡಿಕೊಳ್ಳಲಿ ಎಂದು ಹೇಳಿದ್ರು.

    ದಲಿತರ ಸಮಸ್ಯೆಯನ್ನ ಅರಿಯಬೇಕಾದ್ರೆ ಅವರ ಕೇರಿಗಳಿಗೆ ಹೋಗಿ ಬದುಕುಬೇಕು. ಆಗ ಸಮಸ್ಯೆಯ ಅರಿವಾಗುತ್ತೆ. ಪಕ್ಷದ ದಲಿತ ಕಾರ್ಯಕರ್ತನ ಮನೆಗೆ ಹೋಗಿ ಊಟ ಮಾಡಿದ ಕೂಡಲೇ ಅವರ ಸಮಸ್ಯೆಯನ್ನೆಲ್ಲಾ ತಲೆಯಲ್ಲಿ ತುಂಬಿಕೊಳ್ಳೋಕೆ ಸಾಧ್ಯವಿಲ್ಲ ಅಂದ್ರು.

  • ಧಿಮಾಕು, ಸೊಕ್ಕಿನ ಸಿದ್ರಾಮಯ್ಯಗೆ ಜನರೇ ಪಾಠ ಕಲಿಸ್ತಾರೆ: ಬಿಎಸ್‍ವೈ

    ಧಿಮಾಕು, ಸೊಕ್ಕಿನ ಸಿದ್ರಾಮಯ್ಯಗೆ ಜನರೇ ಪಾಠ ಕಲಿಸ್ತಾರೆ: ಬಿಎಸ್‍ವೈ

    ಚಿಕ್ಕಮಗಳೂರು: ರಾಷ್ಟ್ರದ ಪ್ರಥಮ ಪ್ರಜೆ ರಾಜ್ಯಕ್ಕೆ ಬಂದರೂ ಉಡುಪಿಯಂತಹ ಪವಿತ್ರ ಸ್ಥಳಕ್ಕೆ ಹೋಗಿ ರಾಷ್ಟ್ರಪತಿ ಹಾಗೂ ಉಡುಪಿಯ ಪೇಜಾವರ ಶ್ರೀಗಳನ್ನ ಭೇಟಿ ಮಾಡದೆ ಸೊಕ್ಕು, ಧಿಮಾಕು ತೋರಿದ ಸಿಎಂ ಸಿದ್ದರಾಮಯ್ಯಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿಡಿ ಕಾರಿದ್ದಾರೆ.

    ಜನಸಂಪರ್ಕ ಅಭಿಯಾನಕ್ಕೆಂದು ಚಿಕ್ಕಮಗಳೂರಿಗೆ ಆಗಮಿಸಿದ್ದ ಬಿ.ಎಸ್.ಯಡಿಯೂರಪ್ಪ, ತಾಲೂಕಿನ ಮರ್ಲೆ ಗ್ರಾಮದ ಸಣ್ಣತಮ್ಮಯ್ಯರ ಮನೆಯಲ್ಲಿ ಅಕ್ಕಿ ರೊಟ್ಟಿ, ಉಪ್ಪಿಟ್ಟು, ಚಟ್ನಿ ತಿಂದು ತಿಂಡಿಯನ್ನ ಹಾಡಿ ಹೊಗಳಿದ್ರು.

    ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಬಿಎಸ್‍ವೈ, ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ರು. ನಾಲ್ಕು ವರ್ಷದ ಅವಧಿಯಲ್ಲಿ ಸರ್ಕಾರ ಒಬ್ಬನೇ ಒಬ್ಬ ದಲಿತರ ಮನೆ ಬಾಗಿಲಿಗೆ ಹೋಗಿ ಅವರ ಜೀವನ ಶೈಲಿ ಹೇಗಿರುತ್ತೆ, ಅವರ ಕಷ್ಟನಷ್ಟ ಏನೆಂದು ವಿಚಾರಿಸಲಿಲ್ಲ. ಈಗ ನನ್ನ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ರಾಜ್ಯದ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಸಿಎಂ ಹಾಗೂ ಮಂತ್ರಿಗಳ ವಿರುದ್ಧ ಕಿಡಿ ಕಾರಿದ್ರು.

    ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಅರಣ್ಯ ಸಚಿವ ರಮಾನಾಥ್ ರೈ ಹಾಗೂ ದಕ್ಷಿಣ ಕನ್ನಡ ಎಸ್‍ಪಿ ವಿಡಿಯೋ ತುಣುಕಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಎಸ್‍ವೈ, ಕಲ್ಲಡ್ಕ ಪ್ರಭಾಕರ್ ಭಟ್ ಓರ್ವ ಹೋರಾಟಗಾರ. ಎಲ್ಲಾ ಸಮಾಜದವನ್ನ ಒಂದುಗೂಡಿಸಿ ಯುವಕರೊಂದಿಗೆ ಸೇರಿ ಒಳ್ಳೆ ಕೆಲಸ ಮಾಡ್ತಿರುವಂತಹವರ ಮೇಲೆ ಈ ರೀತಿ ಮಾತನಾಡಿ, ಎಲ್ಲರೆದುರು ಅವರನ್ನ ಒಳ ಹಾಕಬೇಕು, ಅವರ ಮೇಲೆ ಕೇಸ್ ಹಾಕಬೇಕೆಂದು ಹೇಳಿರುವುದು ಅಕ್ಷಮ್ಯ ಅಪರಾಧ. ನಾನು ಇನ್ನು ಎರಡು ಮೂರು ದಿನಗಳ ಬಳಿಕ ಮಂಗಳೂರಿಗೆ ಹೋಗುತ್ತೇನೆ. ಇಪ್ಪರಿಂದ ಇಪ್ಪತ್ತೈದು ಸಾವಿರ ಜನ ಸೇರಿಸಿ ದೊಡ್ಡ ಪ್ರತಿಭಟನಾ ಸಭೆಯನ್ನೂ ಮಾಡ್ತಿದ್ದೇವೆ. ಕಲ್ಲಡ್ಕ ಪ್ರಭಾಕರ್ ಭಟ್ಟರ ಬಗ್ಗೆ ಅರಣ್ಯ ಸಚಿವ ರಮಾನಾಥ್ ರೈ ಮಾತನಾಡಿರೋದು ಅಕ್ಷಮ್ಯ ಅಪರಾಧ. ಹದ್ದು ಮೀರಿ ವರ್ತನೆ ಮಾಡ್ತಿರೋ ರಮಾನಾಥ್ ರೈರನ್ನ ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕೆಂದು ವಾಗ್ದಾಳಿ ನಡೆಸಿದ್ರು.

  • ಮಂಡ್ಯ: ಪಕ್ಷದವ್ರಿಗೆ ಕಿರುಕುಳ ಕೊಟ್ರೆ ಸುಮ್ಮನಿರಲ್ಲ, ಅಧಿಕಾರಕ್ಕೆ ಬಂದ್ಮೇಲೆ ಜಾಗ ತೋರಿಸ್ತೀವಿ- ಪೊಲೀಸರಿಗೆ ಬಿಎಸ್‍ವೈ ಧಮ್ಕಿ

    ಮಂಡ್ಯ: ಪಕ್ಷದವ್ರಿಗೆ ಕಿರುಕುಳ ಕೊಟ್ರೆ ಸುಮ್ಮನಿರಲ್ಲ, ಅಧಿಕಾರಕ್ಕೆ ಬಂದ್ಮೇಲೆ ಜಾಗ ತೋರಿಸ್ತೀವಿ- ಪೊಲೀಸರಿಗೆ ಬಿಎಸ್‍ವೈ ಧಮ್ಕಿ

    ಮಂಡ್ಯ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪೊಲೀಸ್ ಅಧಿಕಾರಿಗಳಿಗೆ ಮುಂದೆ ಅಧಿಕಾರಕ್ಕೆ ಬಂದಾಗ ನೋಡ್ಕೊತೀವಿ ಅಂತಾ ಅವಾಜ್ ಹಾಕಿದ್ದಾರೆ.

    ಗುರುವಾರದಂದು ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಬಿಜೆಪಿಯ ಜನ ಸಂಪರ್ಕ ಅಭಿಯಾನ-ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಬಿಎಸ್‍ವೈ, ಸ್ಥಳೀಯ ಪೊಲೀಸ್ ಅಧಿಕಾರಿಗಳು ಬಿಜೆಪಿ ಕಾರ್ಯಕ್ರಮಗಳಿಗೆ ಸ್ಥಳಾವಕಾಶ ನೀಡಲು ನಿರಾಕರಿಸಿದ್ದಲ್ಲದೇ ಬಿಜೆಪಿ ಮುಖಂಡರಿಗೆ ಕಿರುಕುಳ ನೀಡುತ್ತಿದ್ದಾರೆ. ಸಾರ್ವಜನಿಕ ಸಭೆಗೆ ಸಬ್ ಇನ್ಸ್ ಪೆಕ್ಟರ್ ಯೋಗಾನಂಜಪ್ಪ ಅನುಮತಿ ನೀಡದೇ ಕಿರುಕುಳ ನೀಡಿದ್ದಾರೆ. ಅಂತಹ ಅಧಿಕಾರಿಗಳ ಪಟ್ಟಿಯನ್ನು ನಾವು ಸಿದ್ಧಪಡಿಸ್ತೇವೆ. ಕಾಲ ಬಂದಾಗ ತೋರಿಸಬೇಕಾದ ಜಾಗ ತೋರಿಸ್ತೇವೆ. ಅದಕ್ಕೆ ಅವಕಾಶ ಕೊಡದೆ ನಿಮ್ಮ ನಡವಳಿಕೆ ತಿದ್ದುಕೊಳ್ಳಿ ಎಂದು ಬಹಿರಂಗ ಎಚ್ಚರಿಕೆ ನೀಡಿದ್ದಾರೆ.

    ಸರ್ಕಾರಗಳು ಬರುತ್ತೆ, ಹೋಗುತ್ತೆ. ಆದ್ರೆ ಪೊಲೀಸರು ಎಲ್ಲರಿಗೂ ಒಂದೇ ರೀತಿ ನಡೆದುಕೊಳ್ಳಬೇಕು. ಬಿಜೆಪಿಗರನ್ನ ಲಘುವಾಗಿ ಕಾಣೋದು ತರವಲ್ಲ. ಅದು ಖಾಕಿ ಬಟ್ಟೆ ತೊಟ್ಟವರಿಗೆ ಶೋಭೆ ತರುವಂತದ್ದಲ್ಲ ಅಂದ್ರು. ಎಲ್ಲರನ್ನ ಸಮಾನವಾಗಿ ಪರಿಗಣಿಸಬೇಕು ಎಂದು ಪೊಲೀಸರಿಗೆ ಯಡಿಯೂರಪ್ಪ ಎಚ್ಚರಿಕೆ ನೀಡಿದ್ರು.

  • ಬಿಎಸ್‍ವೈಗೆ ಮತ್ತೆ ಸಂಕಷ್ಟ – 257 ಎಕರೆ ಅಕ್ರಮ ಡಿನೋಟಿಫಿಕೇಷನ್ ಆರೋಪ, ಎಸಿಬಿಗೆ ದೂರು ದಾಖಲು

    ಬಿಎಸ್‍ವೈಗೆ ಮತ್ತೆ ಸಂಕಷ್ಟ – 257 ಎಕರೆ ಅಕ್ರಮ ಡಿನೋಟಿಫಿಕೇಷನ್ ಆರೋಪ, ಎಸಿಬಿಗೆ ದೂರು ದಾಖಲು

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಮತ್ತೆ ಸಂಕಷ್ಟ ಎದುರಾಗಿದೆ.

    ಬೆಂಗಳೂರು ಉತ್ತರ ತಾಲೂಕಿನ ಶಿವರಾಮಕಾರಂತ ಬಡಾವಣೆಯಲ್ಲಿ ಅಕ್ರಮವಾಗಿ 257 ಎಕರೆ ವಿಸ್ತೀರ್ಣದ ಜಮೀನು ಡಿನೋಟಿಫಿಕೇಷನ್ ಮಾಡಿದ್ದಾರೆ ಅಂತ ಆರೋಪಿಸಿ ಎಸಿಬಿ ಎಡಿಜಿಪಿಗೆ ದೂರು ನೀಡಲಾಗಿದೆ.

    ಜನಸಾಮಾನ್ಯರ ವೇದಿಕೆ ಸಂಚಾಲಕರಾದ ಅಯ್ಯಪ್ಪ ಎಂಬವರು ಬಿಎಸ್‍ವೈ ವಿರುದ್ಧ ದೂರು ದಾಖಲಿಸಿದ್ದಾರೆ. ಯಡಿಯೂರಪ್ಪನವರ ವಿರುದ್ಧ ಸಿಎಂ ಸಿದ್ದರಾಮಯ್ಯ ಕ್ರಮಕೈಗೊಳ್ಳಬೇಕು ಅಂತ ಅಯ್ಯಪ್ಪ ಹೇಳಿದ್ದಾರೆ. ಇದೇ ಹಿನ್ನೆಲೆಯಲ್ಲಿ ಮೌರ್ಯ ಸರ್ಕಲ್ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಜನಸಾಮಾನ್ಯರ ವೇದಿಕೆ ಪ್ರತಿಭಟನೆ ನಡೆಸಿತು. ಯಡಿಯೂರಪ್ಪ ಕರಪ್ಶನ್ ಕಾ ಕಿಂಗ್ ಅಂತಾ ಘೋಷಣೆ ಕೂಗಿದ್ರು.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಯಡಿಯೂರಪ್ಪ, ದೂರುದ್ದೇಶದಿಂದ ಈ ರೀತಿ ಆರೋಪ ಮಾಡ್ತಿದ್ದಾರೆ. ಅದ್ಯಾವುದೇ ಇದ್ರೂ ಸರ್ಕಾರ ವಾಪಸ್ ತೆಗೆದುಕೊಳ್ಳಬಹುದು. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದಿದ್ದಾರೆ.

  • 75 ವರ್ಷ ತುಂಬಿದವರಿಗೆ ಬಿಜೆಪಿಯಲ್ಲಿ ಅಧಿಕಾರವಿಲ್ಲವೆಂಬ ಪ್ರಶ್ನೆಗೆ ಬಿಎಸ್‍ವೈ ಉತ್ತರಿಸಿದ್ದು ಹೀಗೆ

    75 ವರ್ಷ ತುಂಬಿದವರಿಗೆ ಬಿಜೆಪಿಯಲ್ಲಿ ಅಧಿಕಾರವಿಲ್ಲವೆಂಬ ಪ್ರಶ್ನೆಗೆ ಬಿಎಸ್‍ವೈ ಉತ್ತರಿಸಿದ್ದು ಹೀಗೆ

    ಬೆಂಗಳೂರು: ಬಿಎಸ್ ಯಡಿಯೂರಪ್ಪ ಅವರೇ ಕರ್ನಾಟಕದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸುದ್ಧಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಆದ್ರೆ ಬಿಜೆಪಿಯಲ್ಲಿ 75 ವರ್ಷ ವಯಸ್ಸು ತುಂಬಿದವರಿಗೆ ಅಧಿಕಾರವಿಲ್ಲವೆಂಬ ಪ್ರಶ್ನೆಗೆ ಬಿಎಸ್ ಯಡಿಯೂರಪ್ಪ ಇಂದು ಉತ್ತರಿಸಿದ್ದಾರೆ.

    ಬೆಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಬಿಎಸ್‍ವೈ, ನನಗೆ ಈಗ 73 ವರ್ಷ ತುಂಬಿ 74 ವರ್ಷಕ್ಕೆ ಕಾಲಿಡುತ್ತಿದ್ದೇನೆ. ನಾವು ಅಧಿಕಾರಕ್ಕೆ ಬರುವಾಗ 75ನೇ ವರ್ಷಕ್ಕೆ ಕಾಲಿಡುತ್ತೇನೆ. ಯಾವ ಸಮಸ್ಯೆ, ಗೊಂದಲ ನಮ್ಮಲ್ಲಿ ಇಲ್ಲ. 2018ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಹೆಸರು ಮುಂದಿಟ್ಟುಕೊಂಡೇ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದ್ರು.

    ನಾನು ಶಿಕಾರಿಪುರದಿಂದಲೇ ಸ್ಪರ್ಧಿಸುತ್ತೇನೆ. ಎಲ್ಲರ ಆಪೇಕ್ಷೆಯೂ ಅದೇ ಇದೆ. 150 ಸ್ಥಾನ ಗೆಲ್ಲುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ. ಹಾಗಾಗಿ ಯಾರೊಂದಿಗೂ ಹೊಂದಾಣಿಕೆ ಪ್ರಶ್ನೆ ಉದ್ಭವಿಸಲ್ಲ. ನಾವು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲ್ಲ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು.

    ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಮಾತನಾಡಿ, ಅಮಿತ್ ಶಾ ಅವರ ಸ್ಟ್ರ್ಯಾಟಜಿಯಿಂದಲೇ ಉತ್ತರಪ್ರದೇಶದಲ್ಲಿ ಜಯ ಗಳಿಸಿದ್ದು. ಇಲ್ಲಿಯೂ ಅದೇ ಸ್ಟ್ರಾಟಜಿ ಮಾಡುತ್ತಿದ್ದಾರೆ. ಇಬ್ಬರೂ ಕುಳಿತೇ ಅಭ್ಯರ್ಥಿಗಳನ್ನ ಫೈನಲ್ ಮಾಡ್ತೇವೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಎಲ್ಲರ ಸಲಹೆ ಪಡೆಯುತ್ತೇನೆ. ಮೂರ್ನಾಲ್ಕು ಮಂದಿಯಿದ್ದರೆ ಸರ್ವೆ ಮಾಡಿಸಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಈಗಾಗಲೇ 150 ಅಭ್ಯರ್ಥಿಗಳನ್ನ ಗುರುತಿಸಿದ್ದೇವೆ. ಉಳಿದ ಕಡೆ ಜಿಲ್ಲಾ ನಾಯಕರ ಸಲಹೆ ಪಡೆದು ಅಭ್ಯರ್ಥಿ ಹಾಕುತ್ತೇವೆ. ಮಿಷನ್ 150 ಗುರಿ ನಮ್ಮದು. ಆ ಗುರಿಯನ್ನ ನಾವು ತಲುಪುತ್ತೇವೆ. ನಾವು ಅಧಿಕಾರಕ್ಕೆ ಬಂದ ನಂತರ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಬಿಎಸ್‍ವೈ ಹೇಳಿದ್ರು.

    ಇದೇ ವೇಳೆ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ಸರ್ಕಾರಕ್ಕೆ ನಾಲ್ಕು ವರ್ಷ. ನಾಲ್ಕು ವರ್ಷದ ಸಾಧನೆ ಭ್ರಷ್ಟಾಚಾರದಲ್ಲಿ ನಂ.1. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರಲ್ಲಿ 2ನೇ ಸ್ಥಾನ. ಲೋಕಾಯುಕ್ತ ನಿಷ್ಕ್ರಿಯ ಮಾಡಿದ್ದೊಂದು ಸಾಧನೆ. ಸೇಡು ತೀರಿಸಿಕೊಳ್ಳಲು ಎಸಿಬಿ ರಚನೆ ಮಾಡಿದ್ರು. ಪ್ರಾಮಾಣಿಕ ಅಧಿಕಾರಿಗಳಿಗೆ ಉಸಿರುಗಟ್ಟುವ ಸ್ಥಿತಿ ಇದೆ. ಐಎಎಸ್ ಅಧಿಕಾರಿಗಳ ಸಾವಿನ ಪ್ರಕರಣಗಳು ನಡೆದಿವೆ. ಆಹಾರ ಇಲಾಖೆಯಲ್ಲಿ ಅಕ್ಕಿ ಖರೀದಿಯಲ್ಲಿ ದುರ್ಬಳಕೆಯಾಗಿ ಕೋಟ್ಯಾಂತರ ರೂ. ಲೂಟಿಯಾಗಿದೆ ಅಂತ ಆರೋಪಿಸಿದ್ರು.

    ಸಿಎಂ ಅಧಿಕಾರ ದುರ್ಬಳಕೆ ಮಾಡಿಕೊಂಡ್ರು. ಪುತ್ರನಿಗೆ ವಿಕ್ಟೋರಿಯಾ ಆವರಣದಲ್ಲಿ ಪಾಲುದಾರಿಕೆ ಸಂಸ್ಥೆಗೆ ಲ್ಯಾಬ್ ಸ್ಥಾಪನೆಗೆ ಅವಕಾಶ ಕೊಟ್ಟರು. ವಿಧಾನಸೌಧದಲ್ಲಿ ಕಡತಗಳು ನಾಪತ್ತೆಯಾದ್ವು
    ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣದಲ್ಲಿ ಅಕ್ರಮ ನಡೆದಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಅಂದ್ರು.

    ನಾನು ಸದ್ಯ 6 ಜಿಲ್ಲೆಯ ಪ್ರವಾಸ ಮುಗಿಸಿದ್ದೇನೆ. ಮತ್ತೆ ನಾಳೆಯಿಂದ ಪ್ರವಾಸ ಮುಂದುವರಿಸುತ್ತೇನೆ. ನಿತ್ಯ ಬೆಳಿಗ್ಗೆ ದಲಿತರ ಮನೆ ಕಾಲೋನಿಗೆ ಹೋಗ್ತಿದ್ದೇನೆ. ಬಹಳ ದಯನೀಯ ಸ್ಥಿತಿಯಲ್ಲಿ ಕಾಲೋನಿಗಳು ಇವೆ. ಸಿಎಂ ಹೆಲಿಕಾಪ್ಟರ್ ಬಿಟ್ಟು ಕೆಳಗೆ ಇಳಿದು ಅಲ್ಲಿಗೆ ಹೋಗಿ ಬನ್ನಿ. ಗೋಶಾಲೆಗಳಿಗೆ ಹೋದ್ರೆ ಸಾಕಷ್ಟು ಮೇವಿಲ್ಲ. ಏನು ಬಂದಿದೆ ನಿಮಗೆ ದರಿದ್ರ? ಎಂದು ಸಿದ್ದರಾಮಯ್ಯ ವಿರುದ್ಧ ಬಿಎಸ್ ವೈ ವಾಗ್ದಾಳಿ ನಡೆಸಿದ್ರು.

    ಬರಗಾಲದ ವಿಚಾರದಲ್ಲಿ ರಾಜಕೀಯ ಮಾಡ್ತಾರೆ. ಪ್ರತಿಯೊಂದಕ್ಕೂ ಕೇಂದ್ರದ ಕಡೆ ಬೆರಳು ತೋರಿಸುತ್ತಾರೆ. 5,224 ಕೋಟಿ ರೂ. ಹಣ ಇಲ್ಲಿಯವರೆಗೆ ಕೇಂದ್ರದಿಂದ ಬಿಡುಗಡೆಯಾಗಿದೆ.
    ಆದರೂ ಕೇಂದ್ರದ ವಿರುದ್ಧ ಹಗುರವಾಗಿ ಟೀಕೆ ಮಾಡುತ್ತಿದ್ದಾರೆ. ದಲಿತ ಕಾಲೋನಿಗೆ ಹೋಗಿದ್ದನ್ನೇ ರಾಜಕಾರಣ ಮಾಡುತ್ತಿದ್ದಾರೆ. ದಲಿತ ಸಮುದಾಯದ ಬಗ್ಗೆ ಮಾತನಾಡುವ ಹಕ್ಕು ಕಾಂಗ್ರೆಸ್ ನವರಿಗೆ ಇಲ್ಲ. ಹಿಂದೆ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಏನು ಮಾಡ್ತು ಅನ್ನೋದು ಗೊತ್ತು. ಜಗಜೀವನ್ ರಾಂ ಅವರಿಗೆ ಏನ್ ಮಾಡಿದ್ರು ಅನ್ನೋದು ಗೊತ್ತು. ಅದನ್ನೆಲ್ಲ ಜನರಿಗೆ ಹೇಳುತ್ತಿದ್ದೇನೆ ಅಂದ್ರು.

    ರೈತರ ಸಾಲ ಮನ್ನಾ ಮಾಡಬೇಕು. ಜುಲೈ ವೇಳೆಗೆ ರೈತರ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ 4 ಲಕ್ಷ ರೈತರನ್ನ ಕರೆಸಿ ಪ್ರತಿಭಟನೆ ಮಾಡುತ್ತೇನೆ ಅಂತ ಎಚ್ಚರಿಕೆ ನೀಡಿದ್ರು. ಇನ್ನು ಕಸಾಯಿಖಾನೆಗಳಿಗೆ ಗೋವುಗಳ ಮಾರಾಟ ನಿಷೇಧ ವಿಚಾರದಲ್ಲಿ ಮೋದಿಯವರ ನಿರ್ಧಾರ ಸ್ವಾಗತಿಸುತ್ತೇನೆ ಅಂದ್ರು.

    ಜಂತಕಲ್ ಮೈನಿಂಗ್ ಹಗರಣ ಪ್ರಕರಣದಲ್ಲಿ ಬಿಎಸ್‍ವೈ ನನ್ನ ಮೇಲೆ ಕೇಸ್ ಹಾಕಿಸಿದ್ದು ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಎಸ್‍ವೈ, ನಾನು ಸಿಎಂ ಆಗಿದ್ದಾಗಲೇ ಹಗರಣದ ಬಗ್ಗೆ ಪುಸ್ತಕ ಮಾಡಿ ಹಂಚಿದ್ದೆ. ಅದು ಈಗ ಮಾಡಿದ್ದಲ್ಲ. ಕುಮಾರಸ್ವಾಮಿ ಆರೋಪಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅವರ ಮೇಲೆ ಆರೋಪದ ಪ್ರತಿ ನಮ್ಮ ಆಫೀಸ್‍ನಲ್ಲಿ ರೆಡಿ ಆಗಿದೆ ಅನ್ನೋದು ಸುಳ್ಳು. ಅಂದು ರೈತರ ಸಾಲ ಮನ್ನಾಕ್ಕೆ ವಿರೋಧಿಸಿದ್ದು ನಿಜ. ಆಗ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಆ ಬಳಿಕ ಎರಡೆರಡು ಬಾರಿ ರೈತರ ಸಾಲ ಮನ್ನಾ ಮಾಡಿದ್ದೇವೆ ಅಂದ್ರು.