Tag: ಬಾಮಾ ಹರೀಶ್

  • ನವೀನ್ ಸಜ್ಜು ಸಾಂಗ್ ವೈರಲ್ – ಕ್ಷಮೆಗೆ ಬಾಮಾ ಹರೀಶ್ ಒತ್ತಾಯ

    ನವೀನ್ ಸಜ್ಜು ಸಾಂಗ್ ವೈರಲ್ – ಕ್ಷಮೆಗೆ ಬಾಮಾ ಹರೀಶ್ ಒತ್ತಾಯ

    ಬೆಂಗಳೂರು: ಇತ್ತೀಚೆಗೆ ಬಿಗ್‍ಬಾಸ್ ಸ್ಪರ್ಧಿ, ಗಾಯಕ ನವೀನ್ ಸಜ್ಜು ಹಾಡಿರುವ ‘ಏನ್ ಚಂದನೋ ತಕೋ’ ಹಾಡು ಯೂಟ್ಯೂಬ್‍ನಲ್ಲಿ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆದರೆ ಈ ಹಾಡಿನ ವಿರುದ್ಧ ಗಂಭೀರ ಆರೋಪ ಕೂಡ ಕೇಳಿ ಬರುತ್ತಿದೆ.

    ನಿರ್ಮಾಪಕ ಬಾಮಾ ಹರೀಶ್ ಅವರು, ನವೀನ್ ಸಜ್ಜು ಹಾಡಿರುವ ವಿರುದ್ಧ ಗಂಭೀರವಾದ ಆರೋಪವನ್ನು ಮಾಡಿದ್ದಾರೆ. ಜೊತೆಗೆ ನವೀನ್ ಸಜ್ಜು ಕ್ಷಮೆ ಕೇಳಬೇಕು ಎಂದು ಟ್ವೀಟ್ ಮಾಡುವ ಮೂಲಕ ಒತ್ತಾಯಿಸಿದ್ದಾರೆ.

    “ನವೀನ್ ಸಜ್ಜು ಹಾಡಿರುವ ‘ಏನ್ ಚಂದನೋ ತಕಾ’ ಹಾಡಿನಲ್ಲಿ ಒಕ್ಕಲಿಗರ ಮನೆಯ ಹೆಣ್ಣು ಮಕ್ಕಳ ತೇಜೋವಧೆಯಾಗಿದ್ದು, ಹಾಡಿನಿಂದ ಇಡೀ ಒಕ್ಕಲಿಗ ಸಮುದಾಯಕ್ಕೆ ಅಪಮಾನವಾಗಿದೆ. ಈ ಕೂಡಲೇ, ಹಾಡನ್ನು ಸ್ಥಗಿತಗೊಳಿಸಿ, ಒಕ್ಕಲಿಗ ಸಮುದಾಯಕ್ಕೆ ಕ್ಷಮೆಯನ್ನು ಕೋರಬೇಕು. ಕಲಾ ಜಗತ್ತಿನಲ್ಲಿ ಯಾವುದೇ ಧರ್ಮ ಜಾತಿಗಳ ತೇಜೋವಧೆ ಆಗಬಾರದು. ಇಲ್ಲಿ ಕಲೆ ಮುಖ್ಯ” ಎಂದು ಬಾಮಾ ಹರೀಶ್ ಅವರು ಬರೆದುಕೊಂಡಿದ್ದಾರೆ.

    ‘ಏನ್ ಚಂದನೋ ತಕೋ’ ಹಾಡು ‘ಬಡ್ಡೀ ಮಗನ್ ಲೈಫು’ ಸಿನಿಮಾದ ಹಾಡಾಗಿದೆ. ಈ ಸಿನಿಮಾಗೆ ಪವನ್ ಪ್ರಸಾದ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಾಡನ್ನು ನವೀನ್ ಸಜ್ಜು ಹಾಡಿದ್ದು, ಪೂರ್ಣಚಂದ್ರ ತೇಜಸ್ವಿ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಹುಡುಗಿ ಪ್ರೀತಿ ಮಾಡಿ ಆತನ ಜೊತೆ ಓಡಿ ಹೋದರೆ ನೆರೆಹೊರೆಯ ಮನೆಯ ಹೆಂಗಸರು ಅದನ್ನು ಹೇಗೆ ಆಡಿಕೊಳ್ಳುತ್ತಾರೆ ಎನ್ನುವುದನ್ನು ಹಾಡಿನ ಮೂಲಕ ಹೇಳಲಾಗಿದೆ.

  • ‘ಜೈ ಕೇಸರಿ ನಂದನ’ ಆಡಿಯೋ ಬಿಡುಗಡೆ

    ‘ಜೈ ಕೇಸರಿ ನಂದನ’ ಆಡಿಯೋ ಬಿಡುಗಡೆ

    ಬೆಂಗಳೂರು: ಉತ್ತರ ಕರ್ನಾಟಕದ ಕಂಪ್ಲೀಟ್ ಪ್ಯಾಕೇಜ್ ಇರುವಂತಹ ಸಿನಿಮಾವೊಂದು ಈಗ ತೆರೆಗೆ ಬರುತ್ತಿದೆ. ‘ಜೈ ಕೇಸರಿ ನಂದನ’ ಎಂಬ ಈ ಚಿತ್ರದ ಹಾಡುಗಳ ಸಿಡಿ ಹಾಗೂ ಟ್ರೈಲರ್ ಅನಾವರಣ ಸಮಾರಂಭ ಇತ್ತೀಚೆಗೆ ನಡೆಯಿತು. ಹನುಮಂತ ಹಾಲಗೇರಿ ಅವರ ಊರು ಸುಟ್ಟು ಹನುಮಪ್ಪ ಹೊರಗೆ ಎಂಬ ಜನಪ್ರಿಯ ನಾಟಕವನ್ನಾಧರಿಸಿ ಈ ಚಿತ್ರವನ್ನು ಶ್ರೀಧರ್ ಜಾವೂರ್ ನಿರ್ದೇಶನ ಮಾಡಿದ್ದಾರೆ. ಈಗಾಗಲೇ 250ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿರುವ ಈ ನಾಟಕವನ್ನು ಹಲವಾರು ನಾಟಕ ತಂಡಗಳು ಅಭಿನಯಿಸಿವೆ.

    ಶ್ರೀಧರ್ ಜಾವೂರ್ ಈ ಹಿಂದೆ ಕೆಂಗುಲಾಬಿ ಚಿತ್ರವನ್ನು ನಿರ್ದೇಶಿಸಿದ್ದರು. ಜೈ ಕೇಸರಿ ನಂದನ ಅವರ 2ನೇ ಚಿತ್ರ. ಇದೇ ಏಪ್ರಿಲ್ 12 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಿದ್ಧವಾಗಿರುವ ಈ ಚಿತ್ರದಲ್ಲಿ ಗುರುರಾಜ್ ಹೊಸಕೋಟೆ, ರಾಜು ತಾಳಿಕೋಟೆ, ಶಶಿಧರ್ ದಾನಿ, ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಲ್ಲೇಶ್ ವರ್ಧನ್ ಹಾಗೂ ಅಮೃತ ಆರ್. ಹಾಗೂ ಅಮೃತ ಕಾಳ ಈ ಚಿತ್ರದ ನಾಯಕ-ನಾಯಕಿಯ ಪಾತ್ರಗಳಲ್ಲಿ ನಿರ್ವಹಿಸಿದ್ದಾರೆ. ಅಶ್ವಿನಿ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2 ಗ್ರಾಮಗಳ ನಡುವಿನ ಜಗಳದಲ್ಲಿ ಪೊಲೀಸ್ ಠಾಣೆ ಸೇರಿದ ಹನುಮಂತಪ್ಪನ ಕಥೆ ಇದಾಗಿದೆ. ಜನ ಮತ್ತು ಮೂಢನಂಬಿಕೆ ನಡುವೆ ನಡೆಯುವಂತಹ ಕಥೆ ಇದಾಗಿದೆ. ಧರಗಟ್ಟಿ ಮತ್ತು ವಜ್ರಗಟ್ಟಿ ಎಂಬ ಎರಡು ಗ್ರಾಮಗಳ ಊರುಸುಟ್ಟು ಹನುಮಪ್ಪನ ಜಾತ್ರೆ ಸಮಯದಲ್ಲಿ ನಡೆದ ಘೋರ ದುರಂತವನ್ನು ಈ ಚಿತ್ರದಲ್ಲಿ ಹೇಳಿದ್ದೇವೆ ಎಂದು ನಿರ್ದೇಶಕ ಶ್ರೀಧರ್ ಜಾವೂರ್ ಹೇಳಿದರು. ಶಶಿಧರ್ ದಾನಿ ಹಾಗೂ ಪ್ರವೀಣ್ ಕತ್ರಿ, ನಾರಾಯಾಣ್ ಷಾ, ಪವಾರ್, ಲಕ್ಷ್ಮಣ್ ಸಿಂಗ್ರಿ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಾಮಾ ಹರೀಶ್ ಹಾಗೂ ಸಿದ್ದನಕೊಳ್ಳದ ಮಠದ ಶಿವಕುಮಾರ ಸ್ವಾಮೀಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು.

    ನಾಯಕ ನಟ ಕಲ್ಲೇಶ್ ವರ್ಧನ್ ಮಾತನಾಡಿ ಗಂಭೀರವಾದ ವಿಷಯವನ್ನು ನಾಜೂಕಾಗಿ ಹೇಳುವ ಪ್ರಯತ್ನ ಇಲ್ಲಿ ನಡೆದಿದೆ. 2 ಊರುಗಳ ನಡುವೆ ಹನುಮಪ್ಪನಿಗಾಗಿ ನಡೆದ ಘಟನೆ ಈ ಚಿತ್ರದ ಕಥಾವಸ್ತು ಎಂದು ಹೇಳಿದರು. ನಾಯಕಿ ಅಮೃತ ಆರ್ ಮಾತನಾಡಿ ತುಂಗ ಎಂಬ ಪಾತ್ರವನ್ನು ನಾನು ಮಾಡಿದ್ದೇನೆ. ಉತ್ತರ ಕರ್ನಾಟಕದವಳೇ ಆಗಿದ್ದರಿಂದ ಭಾಷೆ ನನಗೆ ಸುಲಭವಾಯಿತು. ಬಾಮಾ ಹರೀಶ್ ಮಾತನಾಡಿ ಇದುವರೆಗೆ ಹನುಮಪ್ಪನನ್ನು ಇಟ್ಟುಕೊಂಡು ಮಾಡಿದ ಯಾವ ಚಿತ್ರವೂ ಫೇಲಾಗಿಲ್ಲ. ಒಳ್ಳೆ ಕಂಟೆಂಟ್ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ ಎಂದು ಹೇಳಿದರು.