Tag: ಬಾಬ್ರಿ ಮಸೀದಿ ಧ್ವಂಸ

  • ಗುಜರಾತ್‌ ಗಲಭೆ, ಬಾಬ್ರಿ ಮಸೀದಿ ಧ್ವಂಸದ ಬಗ್ಗೆ ಶಾಲೆಗಳಲ್ಲಿ ಬೋಧಿಸುವ ಅಗತ್ಯವಿಲ್ಲ: NCERT ನಿರ್ದೇಶಕ

    ಗುಜರಾತ್‌ ಗಲಭೆ, ಬಾಬ್ರಿ ಮಸೀದಿ ಧ್ವಂಸದ ಬಗ್ಗೆ ಶಾಲೆಗಳಲ್ಲಿ ಬೋಧಿಸುವ ಅಗತ್ಯವಿಲ್ಲ: NCERT ನಿರ್ದೇಶಕ

    ನವದೆಹಲಿ: ಬಾಬ್ರಿ ಮಸೀದಿ ಧ್ವಂಸ, 2002ರ ಗುಜರಾತ್‌ ಗಲಭೆಗಳ (Gujarat Riots And Babri Masjid) ಬಗ್ಗೆ ಶಾಲೆಗಳಲ್ಲಿ ಬೋಧಿಸುವ ಅಗತ್ಯವಿರಲಿಲ್ಲ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ನಿರ್ದೇಶಕ ದಿನೇಶ್‌ ಪ್ರಸಾದ್‌ ಸಕ್ಲಾನಿ (Dinesh Prasad Saklani) ಹೇಳಿದ್ದಾರೆ.

    ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತಮಾಡಿದ ಅವರು, ನಾವು ನಮ್ಮ ವಿದ್ಯಾರ್ಥಿಗಳನ್ನು ಆಕ್ರಮಣಕಾರಿಗಳನ್ನಾಗಿ ಮಾಡಬೇಕೇ? ಸಮಾಜದಲ್ಲಿ ದ್ವೇಷ ಬಿತ್ತಬೇಕೆ? ದ್ವೇಷಕ್ಕೆ ಮಕ್ಕಳು ಬಲಿಯಾಗಬೇಕೇ? ಇದು ಶಿಕ್ಷಣದ ಉದ್ದೇಶವೇ? ಅಂತಹ ಚಿಕ್ಕ ಮಕ್ಕಳಿಗೆ ನಾವು ಗಲಭೆಗಳ ಬಗ್ಗೆ ಕಲಿಸಬೇಕೇ? ಪ್ರಶ್ನೆಗಳ ಮಳೆ ಸುರಿಸಿದರಲ್ಲದೇ ಪ್ರತಿ ವರ್ಷ ನಡೆಸುವ ಪರಿಷ್ಕರಣೆ ಭಾಗವಾಗಿ ಪಠ್ಯಪುಸ್ತಕಗಳಲ್ಲಿ ಬದಲಾವಣೆ ಮಾಡಲಾಗಿದ್ದು, ವಿವಾದ ಎಬ್ಬಿಸುವಂತಹ ವಿಷಯವೇ ಇದಲ್ಲ ಎಂದಿದ್ದಾರೆ.

    ಎನ್‌ಸಿಇಆರ್‌ಟಿ 12ನೇ ತರಗತಿ ರಾಜ್ಯಶಾಸ್ತ್ರ ಪುಸ್ತಕದಲ್ಲಿ ಅಯೋಧ್ಯೆ ಪಠ್ಯ ವಿಭಾಗವನ್ನು 2 ಪುಟಗಳಿಗೆ ಇಳಿಸಲಾಗಿದೆ. ಗಲಭೆಗಳ ಕುರಿತ ಬೋಧನೆಯು ಆವೇಶಭರಿತ ಮತ್ತು ಖಿನ್ನತೆಯಿಂದ ಬಳಲುವ ನಾಗರಿಕರನ್ನು ಸೃಷ್ಟಿಸುತ್ತದೆ. ಈ ಕಾರಣಕ್ಕಾಗಿಯೇ, ಗುಜರಾತ್ ಗಲಭೆಗಳು, ಬಾಬ್ರಿ ಮಸೀದಿ ಧ್ವಂಸ ಕುರಿತು ಶಾಲೆಗಳಲ್ಲಿ ಬೋಧಿಸುವ ಅಗತ್ಯ ಇಲ್ಲ. ವಿದ್ಯಾರ್ಥಿಗಳು ಬೆಳೆದು ದೊಡ್ಡವರಾದಾಗ ಅದರ ಬಗ್ಗೆ ಕಲಿಯಬಹುದು ಶಾಲೆಯ ಪಠ್ಯಪುಸ್ತಕಗಳು ಏಕೆ? ಅವರು ಬೆಳೆದಾಗ ಏನಾಯಿತು ಮತ್ತು ಏಕೆ ಸಂಭವಿಸಿತು ಎಂಬುದನ್ನು ಅವರು ಅರ್ಥಮಾಡಿಕೊಳ್ಳಲಿ ಎಂದು ಅವರು ಪ್ರತಿಪಾದಿಸಿದ್ದಾರೆ.

    ಶಾಲಾ ಪಠ್ಯಕ್ರಮದಲ್ಲಿ ಕೇಸರಿಕರಣದ ಆರೋಪವನ್ನು ತಳ್ಳಿಹಾಕಿರುವ ಅವರು, ನಮ್ಮ ಶಿಕ್ಷಣದ ಉದ್ದೇಶ ಹಿಂಸಾತ್ಮಕ ಪ್ರವೃತ್ತಿಯ, ಖಿನ್ನತೆಗೆ ಒಳಗಾದ ನಾಗರಿಕರನ್ನು ಸೃಷ್ಟಿಸುವುದಲ್ಲ. ದ್ವೇಷ ಮತ್ತು ಹಿಂಸೆ ಬೋಧನೆಯ ವಿಷಯಗಳಲ್ಲ. ಅವು ನಮ್ಮ ಪಠ್ಯಪುಸ್ತಕಗಳ ಕೇಂದ್ರಬಿಂದುವಾಗಿರಬಾರದು ಎಂದು ಸಕ್ಲಾನಿ ಹೇಳಿದ್ದಾರೆ.

  • ತೀರ್ಪು ಬಹಳ ಸಂತಸ ತಂದಿದೆ – ಅಡ್ವಾಣಿ

    ತೀರ್ಪು ಬಹಳ ಸಂತಸ ತಂದಿದೆ – ಅಡ್ವಾಣಿ

    ನವದೆಹಲಿ: ಈ ತೀರ್ಪು ಬಹಳ ಸಂತಸ ತಂದಿದೆ ಎಂದು ಬಿಜೆಪಿಯ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಪ್ರತಿಕ್ರಿಯೆ ನೀಡಿದ್ದಾರೆ.

    ಸಿಬಿಐ ವಿಶೇಷ ನ್ಯಾಯಾಲಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿದ ಬಳಿಕ ಪ್ರತಿಕ್ರಿಯಿಸಿದ ಅವರು, ಈ ತೀರ್ಪು ರಾಮ ಜನ್ಮಭೂಮಿ ಚಳವಳಿಯ ಬಗ್ಗೆ ನನ್ನ ವೈಯಕ್ತಿಕ ಮತ್ತು ಬಿಜೆಪಿಯ ನಂಬಿಕೆ ಮತ್ತು ಬದ್ಧತೆಯನ್ನು ಸಮರ್ಥಿಸುತ್ತದೆ ಎಂದು ಹೇಳಿದ್ದಾರೆ.

    ಮತ್ತೊಬ್ಬ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ಪ್ರತಿಕ್ರಿಯಿಸಿ, ನ್ಯಾಯಾಲಯದಿಂದ ಐತಿಹಾಸಿಕ ನಿರ್ಧಾರ ಪ್ರಕಟವಾಗಿದೆ. ಅಯೋಧ್ಯೆಯಲ್ಲಿ ಡಿಸೆಂಬರ್ 6ರ ಘಟನೆಗೆ ಯಾವುದೇ ಪಿತೂರಿ ನಡೆದಿಲ್ಲ ಎಂಬುದು ಈ ತೀರ್ಪಿನಿಂದ ಸಾಬೀತಾಗಿದೆ. ಅಂದು ನಡೆಸಿದ ಕಾರ್ಯಕ್ರಮ ಪಿತೂರಿಯ ಭಾಗವಾಗಿರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂದು ಭಾರತ ನ್ಯಾಯಾಂಗ ವ್ಯವಸ್ಥೆಯ ಕರಾಳ ದಿನ: ಓವೈಸಿ

    28ವರ್ಷಗಳ ಹಳೆಯ ಬಾಬ್ರಿ ಮಸೀದಿ ಧ್ವಂಸ ಪೂರ್ವನಿಯೋಜಿತ ಕೃತ್ಯ ಅಲ್ಲ. ಇದೊಂದು ಆಕಸ್ಮಿಕ ಘಟನೆ ಎಂದು ಅಭಿಪ್ರಾಯ ಪಟ್ಟ ಸಿಬಿಐ ವಿಶೇಷ ಕೋರ್ಟ್ ಎಲ್ಲ 32 ಆರೋಪಿಗಳನ್ನು ಖುಲಾಸೆಗೊಳಿಸಿದೆ.

    ನ್ಯಾ.ಸುರೇಂದ್ರ ಕುಮಾರ್ ಯಾದವ್‌ ಅವರು 2,000ರ ಪುಟಗಳು ಇರುವ ತೀರ್ಪನ್ನು ಬರೆದಿದ್ದಾರೆ. ಈ ತೀರ್ಪಿನಿಂದಾಗಿ ಮೂಲಕ ಎಲ್‌ಕೆ ಅಡ್ವಾಣಿ ಅವರಿಗಿದ್ದ ಎಲ್ಲ ಕಂಟಕ ಈಗ ದೂರವಾಗಿದೆ. ಇದನ್ನೂ ಓದಿ: ಬಿಜೆಪಿ ಭೀಷ್ಮನಿಗೆ ಬಿಗ್‌ ರಿಲೀಫ್‌ – ಅಡ್ವಾಣಿ ಖುಲಾಸೆಯಾಗಿದ್ದು ಹೇಗೆ? ಕೋರ್ಟ್‌ ಹೇಳಿದ್ದು ಏನು?

    ಈ ಆರೋಪಿಗಳು ಮಸೀದಿಯನ್ನು ಧ್ವಂಸಗೊಳಿಸಲು ಕರ ಸೇವಕರಿಗೆ ಪ್ರಚೋದನೆ ನೀಡಿದ್ದರು ಎಂದು ಸಿಬಿಐ ವಾದಿಸಿದ್ದರೆ ಆರೋಪಿಗಳು ತಮ್ಮ ವಿರುದ್ಧ ಯಾವುದೇ ಸಾಕ್ಷ್ಯಗಳು ಇಲ್ಲ. ಕಾಂಗ್ರೆಸ್‌ ಸರ್ಕಾರ ಉದ್ದೇಶಪೂರ್ವಕವಾಗಿ ನಮ್ಮನ್ನು ಸಿಕ್ಕಿ ಹಾಕಿಸಲು ರೂಪಿಸಿದ ರಾಜಕೀಯ ಸಂಚು ಎಂದು ವಾದಿಸಿದ್ದರು.

    ಅಂದಿನ ಉತ್ತರ ಪ್ರದೇಶ ಸರ್ಕಾರ ಬಿಜೆಪಿ ನಾಯಕರು ಮತ್ತು ಕರ ಸೇವಕರ ವಿರುದ್ಧ ಐಪಿಸಿ ಸೆಕ್ಷನ್ 120, 153, 295, 149, 395ರ ಅಡಿ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಿತ್ತು.

  • ಬಾಬ್ರಿ ಮಸೀದಿ ಧ್ವಂಸ ಕೇಸ್‍ನಲ್ಲಿ ಅಡ್ವಾಣಿ, ಜೋಷಿ ವಿಚಾರಣೆಗೆ ಹಾಜರಾಗಬೇಕು: ಸುಪ್ರೀಂ

    ಬಾಬ್ರಿ ಮಸೀದಿ ಧ್ವಂಸ ಕೇಸ್‍ನಲ್ಲಿ ಅಡ್ವಾಣಿ, ಜೋಷಿ ವಿಚಾರಣೆಗೆ ಹಾಜರಾಗಬೇಕು: ಸುಪ್ರೀಂ

    ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಸೇರಿದಂತೆ 13 ವಿವಿಧ ಮುಖಂಡರು ವಿಚಾರಣೆಗೆ ಹಾಜರಾಗಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ.

    ಈ ಪ್ರಕರಣದ ವಿಚಾರಣೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯಬೇಕು, ಅಷ್ಟೇ ಅಲ್ಲದೇ ಎರಡು ವರ್ಷದ ಒಳಗಡೆ ವಿಚಾರಣೆ ಪೂರ್ಣಗೊಳಿಸಬೇಕೆಂದು ಸೂಚಿಸಿದೆ.

    ಮಾರ್ಚ್ 6ರಂದು ನಡೆದಿದ್ದ ವಿಚಾರಣೆ ವೇಳೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಹಾಗೂ ಕೇಂದ್ರ ಸಚಿವೆ ಉಮಾಭಾರತಿ ಸೇರಿದಂತೆ ಬಿಜೆಪಿ ಪ್ರಮುಖ ಮುಖಂಡರ ವಿರುದ್ಧದ ಆರೋಪಗಳನ್ನು ತಾಂತ್ರಿಕ ಕಾರಣ ಹೇಳಿ ಕೈ ಬಿಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿತ್ತು. ಅಷ್ಟೇ ಅಲ್ಲದೇ ಪ್ರಕರಣದ ವಿಚಾರಣೆ ತಡವಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿತ್ತು.

    ಏನಿದು ಪ್ರಕರಣ?
    ಬಾಬ್ರಿ ಮಸೀದಿ ದ್ವಂಸ ಪ್ರಕರಣದಲ್ಲಿ ಅಡ್ವಾಣಿ ಸೇರಿದಂತೆ 20 ಮಂದಿ ಬಿಜೆಪಿ ಮುಖಂಡರ ಮೇಲಿದ್ದ ಆರೋಪವನ್ನು ಅಲಹಾಬಾದ್ ಹೈಕೋರ್ಟ್ 2010ರ ಮೇ 20 ರಂದು ತಾಂತ್ರಿಕ ಕಾರಣ ಹೇಳಿ ಕೈಬಿಟ್ಟಿದ್ದನ್ನು ಹಾಜಿ ಮೆಹಬೂಬ್ ಅಹಮ್ಮದ್ ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ಸಿಬಿಐ ಕೂಡ ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಬಿಜೆಪಿ ಹಾಗೂ ಸಂಘ ಪರಿವಾರದ ಮುಖಂಡರಾದ ಅಶೋಕ್ ಸಿಂಘಾಲ್, ಗಿರಿರಾಜ್ ಕಿಶೋರ್, ಉಮಾ ಭಾರತಿ, ಮಹಂತ ಅವೈದ್ಯನಾಥ್, ವಿನಯ್ ಕಟಿಯಾರ್, ವಿಷ್ಣು ಹರಿ ದಾಲ್ಮಿಯಾ, ಸಾಧ್ವಿ ರಿತಂಬರಾ, ಕಲ್ಯಾಣ್ ಸಿಂಗ್ ಅವರು ಈ ಪಟ್ಟಿಯಲ್ಲಿ ಸೇರಿದ್ದಾರೆ.

    ಬಿಜೆಪಿಗೆ ಹಿನ್ನಡೆ: ರಾಷ್ಟ್ರಪತಿ ಹುದ್ದೆಗೆ ಬಿಜೆಪಿ ಎಲ್‍ಕೆ ಅಡ್ವಾಣಿ ಅವರನ್ನು ಬಿಜೆಪಿ ಆಯ್ಕೆ ಮಾಡುತ್ತದೆ ಎನ್ನುವ ಒಂದು ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈಗ ಸುಪ್ರೀಂ ಕೋರ್ಟ್  ವಿಚಾರಣೆಗೆ ಹಾಜರುಗುವಂತೆ ಆದೇಶ ಪ್ರಕಟಿಸಿರುವುದು ಬಿಜೆಪಿ ಮತ್ತು ಎಲ್‍ಕೆ ಅಡ್ವಾಣಿ ಅವರಿಗೆ ಹಿನ್ನಡೆಯಾಗಿದೆ.