Tag: ಬಾಬರಿ

  • ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಕೇಸ್ ದಾಖಲು

    ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಕೇಸ್ ದಾಖಲು

    – ಇತಿಹಾಸದ ಘಟನೆಯನ್ನು ತೋರಿಸುವುದರಲ್ಲಿ ತಪ್ಪೇನಿದೆ
    – ಬಾಬರ್ ವಿದೇಶಿ ದಾಳಿಕೋರ
    – ಕೇಸ್ ಬಗ್ಗೆ ಪ್ರಭಾಕರ ಭಟ್ ಪ್ರತಿಕ್ರಿಯೆ

    ಮಂಗಳೂರು: ಅಯೋಧ್ಯೆಯ ಬಾಬರಿ ಮಸೀದಿ ಘಟನೆಯನ್ನು ಮರುಸೃಷ್ಟಿಸಿದ ವಿವಾದ ಈಗ ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಕೊರಳು ಸುತ್ತಿಕೊಂಡಿದೆ.

    ಅಯೋಧ್ಯೆ ತೀರ್ಪು ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಬಾಬರಿ ಮಸೀದಿಯಾಗಲಿ ಅಥವಾ ರಾಮ ಮಂದಿರದ ವಿಚಾರದಲ್ಲಾಗಲಿ ಮಾಧ್ಯಮಗಳು ಸಂಯಮ ಕಾಪಾಡಿಕೊಳ್ಳಬೇಕು. ಬಾಬರಿ ಮಸೀದಿ ಕೆಡವಿದ ದೃಶ್ಯ ಬಿತ್ತರಿಸಿ ಕೋಮು ಪ್ರಚೋದನೆಗೆ ಕಾರಣ ಆಗಬಾರದು ಎಂದು ಪ್ರಮುಖವಾಗಿ ಸುದ್ದಿ ವಾಹಿನಿಗಳಿಗೆ ಕೇಂದ್ರ ಸರ್ಕಾರದ ಮೂಲಕ ಸೂಚನೆ ನೀಡಲಾಗಿತ್ತು. ಆದರೆ ಎರಡು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕ್ರೀಡೋತ್ಸವ ಸಂದರ್ಭದಲ್ಲಿ ಬಾಬರಿ ಮಸೀದಿ ಕೆಡವಿದ್ದನ್ನು ಮರುಸೃಷ್ಟಿ ಮಾಡಿ ತೋರಿಸಲಾಗಿತ್ತು.

    ಕಲ್ಲಡ್ಕದ ಕ್ರೀಡೋತ್ಸವದಲ್ಲಿ ಪ್ರತಿ ವರ್ಷ ಆಯಾ ಸಾಲಿನ ವಿಶೇಷ ಘಟನೆಗಳ ಬಗ್ಗೆ ಯಥಾವತ್ ಚಿತ್ರಿಸಲಾಗುತ್ತದೆ. ಈ ಬಾರಿ ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ರಾಮಮಂದಿರ ಕುರಿತ ಸಾಕ್ಷ್ಯಚಿತ್ರದ ರೂಪದಲ್ಲಿ ಇಡೀ ಘಟನಾವಳಿಗಳನ್ನು ಮಕ್ಕಳ ಮೂಲಕ ಮಾಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ, ಪಾಂಡಿಚೇರಿ ರಾಜ್ಯಪಾಲೆ ಕಿರಣ್ ಬೇಡಿ ಸೇರಿ ಪ್ರಮುಖರು ಸಾಕ್ಷಿಯಾಗಿದ್ದರು. ಆದರೆ, ಬಾಬರಿ ಮಸೀದಿ ಕೆಡವಿದ ವಿಚಾರ ಮುಸ್ಲಿಂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದವು.

    ಅಂದು ಮಸೀದಿ ಕೆಡವಿದ ಮರುಸೃಷ್ಟಿ ದೃಶ್ಯಗಳನ್ನೂ ಮೊಬೈಲಿನಲ್ಲಿ ವೈರಲ್ ಮಾಡಲಾಗಿತ್ತು. ಪರ- ವಿರೋಧ ಚರ್ಚೆ ಆಗಿರುವಾಗಲೇ ಮುಸ್ಲಿಂ ಸಂಘಟನೆಗಳು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿತ್ತು. ಇದೀಗ ಪೊಲೀಸರು ದೂರು ಆಧರಿಸಿ, ಕಲ್ಲಡ್ಕ ವಿದ್ಯಾಕೇಂದ್ರದ ಮುಖ್ಯಸ್ಥ ಪ್ರಭಾಕರ ಭಟ್ ಸೇರಿ ವಿದ್ಯಾಸಂಸ್ಥೆಯ ಐವರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

    ಇದೇ ವೇಳೆ, ಪ್ರಭಾಕರ ಭಟ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಕ್ರೀಡೋತ್ಸವದಲ್ಲಿ ನಡೆದಿರುವ ಘಟನಾವಳಿ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ. ಬಾಬರಿ ಮಸೀದಿ ಕೆಡವಿದ್ದು ಐತಿಹಾಸಿಕ ಸತ್ಯ. ಅದನ್ನು ಯಾವುದೇ ಕಾರಣಕ್ಕೂ ನಿರಾಕರಿಸುವಂತಿಲ್ಲ. ನಮ್ಮ ಕ್ರೀಡೋತ್ಸವ ಸಂದರ್ಭದಲ್ಲಿ ಪ್ರತಿ ವರ್ಷವೂ ಆಯಾ ಸಾಲಿನ ವಿಶೇಷ ಘಟನೆಗಳ ಬಗ್ಗೆ ದೃಶ್ಯ ರೂಪಕ ತೋರಿಸುತ್ತೇವೆ. ಈ ಬಾರಿ ರಾಮಜನ್ಮಭೂಮಿ ತೀರ್ಪು ಪ್ರಮುಖ ವಿಚಾರವಾದ್ದರಿಂದ ಇಡೀ ಘಟನಾವಳಿಯನ್ನು ಚಿತ್ರಿಸಿದ್ದೇವೆ. ಅದರಲ್ಲಿ ಬಾಬರಿ ಮಸೀದಿ ಕೆಡವಿದ ಘಟನೆಯೂ ಒಂದು. ಆ ಬಗ್ಗೆ ಯಾವುದೇ ಸಮುದಾಯವನ್ನು ಅಪಮಾನಿಸುವ ಪ್ರಯತ್ನ ಮಾಡಿಲ್ಲ. ಬಾಬರ್ ಒಬ್ಬ ವಿದೇಶಿ ದಾಳಿಕೋರ. ಆತನ ಬಗ್ಗೆ ಹೇಳಿದರೆ ಇಲ್ಲಿನ ಮುಸ್ಲಿಮರಿಗೆ ಯಾಕೆ ನೋವಾಗಬೇಕು. ಅಲ್ಲದೆ, ಇತಿಹಾಸದ ಘಟನೆಯನ್ನು ತೋರಿಸುವುದರಲ್ಲಿ ತಪ್ಪೇನಿದೆ ಅಂತ ಪ್ರಶ್ನೆ ಮಾಡಿದ್ದಾರೆ.