Tag: ಬಾಗಲಕೋಟೆ

  • ಗ್ಯಾರಂಟಿ ಭಾಗ್ಯ ಕೊಟ್ಟ ಸರ್ಕಾರದಿಂದ ಕತ್ತಲೆ ಭಾಗ್ಯ – ಸ್ಥಳೀಯರ ಆಕ್ರೋಶ

    ಗ್ಯಾರಂಟಿ ಭಾಗ್ಯ ಕೊಟ್ಟ ಸರ್ಕಾರದಿಂದ ಕತ್ತಲೆ ಭಾಗ್ಯ – ಸ್ಥಳೀಯರ ಆಕ್ರೋಶ

    ಬಾಗಲಕೋಟೆ: ಗ್ಯಾರಂಟಿ ಭಾಗ್ಯ ಕೊಟ್ಟ ಸರ್ಕಾರ ಕತ್ತಲೆ ಭಾಗ್ಯವನ್ನೂ ನೀಡಿದೆ ಎಂದು ಬಾಗಲಕೋಟೆಯ (Bagalkote) ಜನರು ಆಕ್ರೋಶ ಹೊರಹಾಕ್ತಿದ್ದಾರೆ.

    ಹೌದು ಜನಪ್ರತಿನಿಧಿಗಳು, ವಿಐಪಿ ಗಣ್ಯರಿಗೆ ಅಂತ ಇರುವ ಬಾಗಲಕೋಟೆಯ ವಿದ್ಯಾಗಿರಿಯಲ್ಲಿರುವ ಪ್ರವಾಸಿ ಮಂದಿರ(IB) ವಿದ್ಯುತ್ ಇಲ್ಲದೇ ಕತ್ತಲು ಆವರಿಸಿದೆ. ನಿರೀಕ್ಷಣಾ ಮಂದಿರಗಳ ಬಿಲ್‌ (Electricity Bill) ಕಟ್ಟದ ಹಿನ್ನೆಲೆಯಲ್ಲಿ ಐಬಿಗಳಿಗೆ ಕತ್ತಲೆ ಭಾಗ್ಯ ಪ್ರಾಪ್ತಿಯಾಗಿದೆ. ‌

    ಲೋಕೋಪಯೋಗಿ ಇಲಾಖೆ (PWD) ಹಲವು ತಿಂಗಳಿನಿಂದ ಪ್ರವಾಸಿಮಂದಿರಗಳ ವಿದ್ಯುತ್‌ ಬಿಲ್‌ ಪಾವತಿಸಿಲ್ಲ. ಹೀಗಾಗಿ ಬಾಗಲಕೋಟೆ ಪ್ರವಾಸಿಮಂದಿದಲ್ಲಿ ಕರೆಂಟ್ ಇಲ್ಲದಂತಾಗಿ ಬರಿ ಕತ್ತಲು ಆವರಿಸಿದೆ. ಇದನ್ನೂ ಓದಿ:  ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ – ಅಸಲಿ ಚಿನ್ನದ ಬಾಗಿಲು ತಾನೇ ಇಟ್ಟುಕೊಂಡು ತಾಮ್ರದ ಬಾಗಿಲನ್ನು ದೇಗುಲಕ್ಕೆ ಕೊಟ್ಟಿದ್ದ ಉನ್ನಿಕೃಷ್ಣನ್

    ಅದರಲ್ಲೂ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ (KS Eshwarappa) ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ್ದರು. ರಾತ್ರಿ ಐಬಿಯಲ್ಲಿದ್ದು ಬೆಳಗ್ಗೆ ಕಾರ್ಯಕ್ರಮ ಮುಗಿಸಿ ಹೊರಡಬೇಕಿತ್ತು. ಆದರೆ ಐಬಿಯಲ್ಲಿ ಕರೆಂಟ್ ಇಲ್ಲ ಎಂಬ ಕಾರಣಕ್ಕೆ ಈಶ್ವರಪ್ಪ ಬೇರೊಬ್ಬರ ಆಪ್ತರ ಮನೆಯಲ್ಲಿ ವಿಶ್ರಾಂತಿ ಪಡೆದು ಬೆಂಗಳೂರಿಗೆ ತೆರಳಿದ್ದಾರೆ.

    ಸರ್ಕಾರ ನಿಯಂತ್ರಣದಲ್ಲಿರುವ ಐಬಿಗಳಿಗೆ ಈ ಗತಿಯಾದರೆ ಸಾಮಾನ್ಯ ಜನರ ಪರಿಸ್ಥಿತಿ ಏನು ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

  • ದೀಪಾವಳಿ| ಬಾಗಲಕೋಟೆಯಲ್ಲಿ ಗಮನ ಸೆಳೆಯುತ್ತಿದ್ದಾರೆ ಸಗಣಿ ಪಾಂಡವರು!

    ದೀಪಾವಳಿ| ಬಾಗಲಕೋಟೆಯಲ್ಲಿ ಗಮನ ಸೆಳೆಯುತ್ತಿದ್ದಾರೆ ಸಗಣಿ ಪಾಂಡವರು!

    ಬಾಗಲಕೋಟೆ: ದೀಪಾವಳಿ (Deepavali) ಹಬ್ಬದ ಸಂಭ್ರಮದ ಮಧ್ಯೆ ಮನೆ ಮನೆ ಎದುರು ಪ್ರತಿವರ್ಷ ದೀಪಾವಳಿ ಪಾಡ್ಯ ದಿನದಂದು ಸಗಣಿ ಪಾಂಡವರ (Sagani Pandavaru) ರೂಪಕ ಗಮನ ಸೆಳೆಯುತ್ತವೆ.

    ಆಧುನಿಕತೆಯ ಭರಾಟೆಯ ಮಧ್ಯೆಯೂ ಸಾಂಪ್ರದಾಯಿಕ ಸಗಣೆ ಪಾಂಡವರ ಆಚರಣೆ ನಿಂತಿಲ್ಲ. ಹಳೇ ಬಾಗಲಕೋಟೆ, ವಿದ್ಯಾಗಿರಿ, ನವನಗರ ಸೇರಿದಂತೆ ಜಿಲ್ಲೆಯಾದ್ಯಂತ ಹೆಂಗಳೆಯರು ಬೆಳ್ಳಂಬೆಳಿಗ್ಗೆ ಮನೆ ಎದುರು ಸಗಣಿ ಪಾಂಡವರ ಪ್ರತಿಷ್ಠಾಪಿಸಿ ವನವಾಸ ಮುಗಿಸಿ ಮರಳಿದ ಪಾಂಡವರ ಇತಿಹಾಸದ ನೆನಪಿಗಾಗಿ ಪ್ರತಿಷ್ಠಾಪಿಸಿ ಪೂಜೆಯನ್ನು ಮಾಡುತ್ತಾರೆ.

    ಸಗಣಿ ಪಾಂಡವರಿಗೆ ಉತ್ತರಾಣಿ ಕಡ್ಡಿ, ಹೂವಿನೊಂದಿಗೆ ವಿಶೇಷವಾಗಿ ಶ್ಯಾವಿಗೆ ಪಾಯಸ ಮಾಡಿ ನೈವೇದ್ಯ ಇಡಲಾಗುತ್ತದೆ. ಜೊತೆಗೆ ಹೊಸ ವಾಹನಗಳಿಗೆ ಪೂಜೆಯೊಂದಿಗೆ ಪಾಡ್ಯ ಸಂಭ್ರಮಿಸುತ್ತಿದ್ದಾರೆ.

    ಏನಿದು ಸಗಣಿ ಪಾಂಡವರು?
    ಸಗಣಿ ಪಾಂಡವರು ಎಂದರೆ ಉತ್ತರ ಕರ್ನಾಟಕದಲ್ಲಿ ದೀಪಾವಳಿ ಪಾಡ್ಯದಂದು ಸಗಣಿಯಿಂದ ತಯಾರಿಸುವ ಐದು ಪಾಂಡವರ ಪ್ರತಿಕೃತಿಗಳು. ಮಹಾಭಾರತದ ಪಾಂಡವರು ಪಟ್ಟ ಕಷ್ಟಗಳು ಯಾರಿಗೂ ಬಾರದಿರಲಿ ಎಂದು ಪ್ರಾರ್ಥಿಸುತ್ತಾ, ಸಗಣಿಯ ಪಾಂಡವರನ್ನು ಪೂಜಿಸಿ, ಅವರಿಗೆ ನೈವೇದ್ಯ ಅರ್ಪಿಸುವ ಸಂಪ್ರದಾಯ ಇದಾಗಿದೆ. ಇದು ದನಗಳಿಗೆ, ದನದ ಕೊಟ್ಟಿಗೆಗೆ ರೈತಾಪಿ ಜನರು ತೋರುವ ಗೌರವವನ್ನೂ ಸೂಚಿಸುತ್ತದೆ.

    ಪಾಂಡವರನ್ನು ಮನೆ ಬಾಗಿಲಿನ ಅಕ್ಕಪಕ್ಕ ಅಥವಾ ಮೇಲ್ಛಾವಣಿಯ ಮೇಲೆ ಇಟ್ಟು, ಪೂಜೆ ಸಲ್ಲಿಸಲಾಗುತ್ತದೆ. ಮನೆಯ ಬಾಗಿಲಲ್ಲಿ ಸುಣ್ಣದಿಂದ ಆಕಳ ಹೆಜ್ಜೆಗಳನ್ನು ಬಿಡಿಸಲಾಗುತ್ತದೆ. ಉತ್ತರಾಣಿ ಕಡ್ಡಿ, ಹಳದಿ ಹೂವು, ಅನ್ನ, ಮೊಸರು, ಕಬ್ಬು, ಜೋಳದ ದಂಟಿನಿಂದ ಮಾಡಿದ ವಿಶೇಷ ಖಾದ್ಯಗಳನ್ನು ಪಾಂಡವರಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ದನಗಳ ಮೈಯಲ್ಲಿ ಸಿಗುವ ಸಗಣಿಯನ್ನು ಪವಿತ್ರವೆಂದು ಭಾವಿಸಿ ಗೌರವಿಸುವುದು ಇದರ ಉದ್ದೇಶವಾಗಿದೆ.

  • ಲಿಂಗಾಯತ ಧರ್ಮದ ಬಗ್ಗೆ ಅವಹೇಳನ; ಬಾಗಲಕೋಟೆ ತೊರೆಯುವಂತೆ ಕನ್ನೇರಿ ಶ್ರೀಗಳಿಗೆ ನೊಟೀಸ್!

    ಲಿಂಗಾಯತ ಧರ್ಮದ ಬಗ್ಗೆ ಅವಹೇಳನ; ಬಾಗಲಕೋಟೆ ತೊರೆಯುವಂತೆ ಕನ್ನೇರಿ ಶ್ರೀಗಳಿಗೆ ನೊಟೀಸ್!

    – ತಮ್ಮ ಮೂಲಮಠ ಮಹಾರಾಷ್ಟ್ರದ ಕನ್ನೇರಿಗೆ ತೆರಳಿದ ಸ್ವಾಮೀಜಿ

    ಬಾಗಲಕೋಟೆ/ವಿಜಯಪುರ: ಮಹಾರಾಷ್ಟ್ರದ ಕೊಲ್ಜಾಪುರದ ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳ (Adrushya Kadhsiddheshwar Swamiji) ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧ ವಿಚಾರ ಇದೀಗ ಮತ್ತಷ್ಟು ಜಟಿಲಗೊಂಡಿದೆ. ಜಿಲ್ಲಾಧಿಕಾರಿಗಳ ಆದೇಶ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದ ಸ್ವಾಮಿಜಿಗಳಿಗೆ ಹಿನ್ನಡೆ ಆಗಿದೆ. ಇದರ ಬೆನ್ನಲ್ಲೇ ಬಾಗಲಕೋಟೆ ಜಿಲ್ಲೆಯಲ್ಲೂ ನಿರ್ಬಂಧ ಹೇರಲಾಗಿದೆ.

    ಹೌದು. ಮಹಾರಾಷ್ಟ್ರದಲ್ಲಿ ಬಸವ ಸಂಸ್ಕೃತಿ ಉತ್ಸವದಲ್ಲಿ ಭಾಗಿಯಾಗಿದ್ದ ವೇಳೆ ಲಿಂಗಾಯತ ಧರ್ಮದ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದ್ದ ಹಿನ್ನೆಲೆಯಲ್ಲಿ ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ಬಾಗಲಕೋಟೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಬಾಗಲಕೋಟೆಯ ಬೀಳಗಿ ತಾಲೂಕಿನಲ್ಲಿರೋ ಕನ್ನೇರಿ ಶ್ರೀಗಳಿಗೆ ನಿನ್ನೆ ಜಿಲ್ಲೆ ತೊರೆಯುವಂತೆ ನೋಟಿಸ್ ನೀಡಲಾಗಿದೆ. ಈ ಬೆನ್ನೆಲ್ಲೇ ಇಂದು ನಸುಕಿನ ಜಾವವೇ ಕನ್ನೇರಿ ಸ್ವಾಮೀಜಿ. ತಮ್ಮ ಮೂಲಮಠ ಮಹಾರಾಷ್ಟ್ರದ ಕನ್ಹೇರಿಗೆ ತೆರಳಿದ್ದಾರೆ. ಇದನ್ನೂ ಓದಿ: ಬೆಳಗಾವಿ | ಪ್ರೀತಿಸಿ ಮದ್ವೆಯಾದ, ವಿಚ್ಛೇದನ ಪಡೆದು ಮಾಜಿ ಪತ್ನಿ ಕೊಂದ ಪೊಲೀಸಪ್ಪ

    ಚಿಕ್ಕಾಲಗುಂಡಿ ಗ್ರಾಮದ ಮಲ್ಲಿಕಾರ್ಜುನ ಮಠದಲ್ಲಿ ಎರಡು ದಿನದಿಂದ ವಾಸವಿದ್ದ ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗೆ ಕಾನೂನು ಸವ್ಯವಸ್ಥೆ ಹದಗೆಡುವ ಸಾಧ್ಯತೆ ಹಿನ್ನೆಲೆ. ಜಿಲ್ಲೆಯಲ್ಲಿ ಇರಬಾರದು ಎಂದು ನೊಟೀಸ್ ನೀಡಲಾಗಿತ್ತು. ಈ ಬೆನ್ನಲೇ ಶ್ರೀಗಳು ನಿಮ್ಮ ಮೂಲ ಜಾಗಕ್ಕೆ ತೆರಳಿ ಎಂದು ನೊಟೀಸ್ ನೀಡಲಾಗಿತ್ತು. ತಮ್ಮ ಮೂಲಮಠ ಮಹಾರಾಷ್ಟ್ರದ ಕನ್ನೇರಿಗೆ ಹೋಗಿದ್ದಾರೆ. ಇದನ್ನೂ ಓದಿ: ಮುಂದಿನ ಸಿಎಂ ಸತೀಶಣ್ಣನೇ ಆಗ್ಲಿ – ಜಾರಕಿಹೊಳಿ ಪರ ಬ್ಯಾಟ್ ಬೀಸಿದ ರಾಜು ಗೌಡ

  • ಆಲಮಟ್ಟಿ ಬಲದಂಡೆ ಕಾಲುವೆ ಎಂಜಿನಿಯರ್‌ ಮನೆ ಮೇಲೆ ಲೋಕಾ ದಾಳಿ

    ಆಲಮಟ್ಟಿ ಬಲದಂಡೆ ಕಾಲುವೆ ಎಂಜಿನಿಯರ್‌ ಮನೆ ಮೇಲೆ ಲೋಕಾ ದಾಳಿ

    ಬಾಗಲಕೋಟೆ: ಆದಾಯ ಮೀರಿ ಅಕ್ರಮ ಆಸ್ತಿಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬಾಗಲಕೋಟೆಯ (Bagalkote) ನವನಗರದಲ್ಲಿರುವ ಸಹಾಯಕ ಮುಖ್ಯ ಎಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು (Lokyukta Officials) ದಾಳಿ ನಡೆಸಿದ್ದಾರೆ.

    ಕೆಬಿಜೆಎನ್ಎಲ್‌ನ ಆಲಮಟ್ಟಿ (Almatti Dam) ಬಲದಂಡೆ ಕಾಲುವೆಯ ಸಹಾಯಕ ಮುಖ್ಯ ಎಂಜಿನಿಯರ್ ಚೇತನ್ ಮಾಳಜಿ ಅವರ ಮನೆ ಮತ್ತು ಕಮತಗಿಯಲ್ಲಿರುವ ಕೆಬಿಜೆಎನ್ಎಲ್ ಕಚೇರಿ ಮೇಲೆ ಲೋಕಾಯುಕ್ತ ಎಸ್.ಪಿ ಮಲ್ಲೇಶ್ ಮಾರ್ಗದರ್ಶನದಲ್ಲಿ ಡಿವೈಎಸ್.ಪಿ ನೇತೃತ್ವದ 12 ಸಿಬ್ಬಂದಿಗಳ ತಂಡ ದಾಳಿ ಮಾಡಿದೆ. ಇದನ್ನೂ ಓದಿ:  ಫೋನ್‌ ಟ್ಯಾಪಿಂಗ್‌ ಕೇಸ್;‌ ಅಲೋಕ್‌ ಕುಮಾರ್‌ ವಿರುದ್ಧದ ತನಿಖಾ ಆದೇಶ ರದ್ದು – ಸರ್ಕಾರಕ್ಕೆ ಭಾರೀ ಹಿನ್ನಡೆ

    ಚೇತನ್ ಮಾಳಜಿ ಅವರ ನವನಗರದ ಸೆಕ್ಟರ್ ನಂಬರ್ 16 ರಲ್ಲಿರುವ ಮನೆ ಹಾಗೂ ಕಮತಗಿ ಕಛೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ.

  • ಕೈಗೆ ಬಂದ ಈರುಳ್ಳಿ ಫಸಲನ್ನು ಮಣ್ಣಲ್ಲೇ ಮುಚ್ಚಿದ ರೈತ

    ಕೈಗೆ ಬಂದ ಈರುಳ್ಳಿ ಫಸಲನ್ನು ಮಣ್ಣಲ್ಲೇ ಮುಚ್ಚಿದ ರೈತ

    ಬಾಗಲಕೋಟೆ: ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡಿದ್ದಕ್ಕೆ ರೈತರೊಬ್ಬರು (Farmers)  ಕೈಗೆ ಬಂದಿದ್ದ ಈರುಳ್ಳಿ(Onion) ಫಸಲನ್ನ ಮಣ್ಣಲ್ಲೇ ಮುಚ್ಚಿದ್ದಾರೆ.

    ಬೀಳಗಿ ತಾಲೂಕಿನ ಮನ್ನಿಕೇರಿ ಗ್ರಾಮದ ಗುರಲಿಂಗಪ್ಲ ಗಡ್ಡಿ ನಾಲ್ಕು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದರು. ಈರುಳಿ ಉತ್ತಮ ಫಸಲು ಬಂದಿದ್ದರೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ ಎಂದು ಬೇಸರಗೊಂಡಿದ್ದರು.

    ಸಾಲ ಮಾಡಿ ಈರುಳ್ಳಿ ಬೆಳೆದಿದ್ದೇನೆ. ಉತ್ತಮ ಫಸಲು ಬಂದರೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ. ಒಂದು ಕ್ವಿಂಟಾಲ್ ಈರುಳ್ಳಿಗೆ 200 ರೂ. ಅಥವಾ 300 ರೂ. ಹೇಳುತ್ತಾರೆ. ಬೆಲೆ ಇಲ್ಲದ್ದಕ್ಕೆ ಈರುಳ್ಳಿಯನ್ನು ಮಣ್ಣಲ್ಲೇ ಮುಚ್ಚುತ್ತಿದ್ದೇನೆ ಎಂದು ಹೇಳಿದರು.  ಇದನ್ನೂ ಓದಿ:  ದಾವಣಗೆರೆ | ಮನೆಯಲ್ಲಿ ಬಾಯ್ಲರ್ ಸ್ಫೋಟ – 11ರ ಬಾಲಕಿ ಸಾವು, ಮೂವರಿಗೆ ಗಂಭೀರ

    ಮೊದಲೇ ಅತೀವೃಷ್ಟಿಯಿಂದ ಬೆಳೆ ಹಾಳಾಗಿತ್ತು. ಈಗ ಅಳಿದುಳಿದ ಫಸಲು ಬಂದಿದೆ. ಆದರೆ ಉತ್ತಮ ದರ ಸಿಗುತ್ತಿಲ್ಲ. ಹೀಗಾದರೆ ರೈತ ಹೇಗೆ ಬದುಕಬೇಕು? ಈರುಳ್ಳಿ ಬೆಳೆದ ರೈತರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.

  • ಬಾಗಲಕೋಟೆಯಲ್ಲಿ ನಿರಂತರ ಮಳೆ – ಮನೆಯ ಮೇಲ್ಛಾವಣಿ, ಗೋಡೆ ಕುಸಿದು ಬಾಲಕ ಸಾವು

    ಬಾಗಲಕೋಟೆಯಲ್ಲಿ ನಿರಂತರ ಮಳೆ – ಮನೆಯ ಮೇಲ್ಛಾವಣಿ, ಗೋಡೆ ಕುಸಿದು ಬಾಲಕ ಸಾವು

    ಬಾಗಲಕೋಟೆ: ಶುಕ್ರವಾರ ರಾತ್ರಿ ಸುರಿದ ನಿರಂತರ ಮಳೆಗೆ (Rain) ಮನೆಯ ತಗಡಿನ ಮೇಲ್ಛಾವಣಿ ಹಾಗೂ ಗೋಡೆ ಕುಸಿದು (Wall Collapse) ಬಾಲಕ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ (Bagalkote) ಜಿಲ್ಲೆ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರ (Mahalingapura) ಪಟ್ಟಣದಲ್ಲಿ ನಡೆದಿದೆ.

    ನಾಗಪ್ಪ ಲಾತೂರ್ ಮಗ ದರ್ಶನ್ ಲಾತೂರ್ (11) ಮೃತ ಬಾಲಕ. ಘಟನೆಯಲ್ಲಿ ಇನ್ನೊಬ್ಬ ಬಾಲಕ ಶ್ರೀಶೈಲ ಗಾಯಗೊಂಡಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ಅವಘಡ ಸಂಭವಿಸಿದೆ. ಇದನ್ನೂ ಓದಿ: ಕಲಬುರಗಿಯಲ್ಲಿ ನಿರಂತರ ಮಳೆ – ಶಾಲೆಗಳಿಗೆ ಇಂದು, ನಾಳೆ ರಜೆ ಘೋಷಣೆ

    ಮನೆಯಲ್ಲಿ ಕೋಣೆಯೊಂದರಲ್ಲಿ ಮಕ್ಕಳು ತಾಯಿಯೊಂದಿಗೆ ಮಲಗಿದ್ದರು. ಬೆಳಗ್ಗೆ ತಾಯಿ ಎದ್ದು ಬೇರೆ ಕೊಠಡಿಗೆ ಬರುತ್ತಲೇ ಮನೆಯ ಗೋಡೆ ಕುಸಿದು ಬಿದ್ದಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ರೌದ್ರರೂಪ ತಾಳಿದ ಭೀಮಾ ನದಿ – ಪ್ರವಾಹದಲ್ಲಿ ಸಿಲುಕಿದ್ದ 8 ಜನರ ರಕ್ಷಣೆ

  • 88% ಅಂಕ ಪಡೆದ್ರೂ ಹಾಸ್ಟೆಲ್‌ ಸಿಗದ್ದಕ್ಕೆ ವೇದಿಕೆಯಲ್ಲೇ ಸನ್ಮಾನ ತಿರಸ್ಕರಿಸಿ ವಿದ್ಯಾರ್ಥಿನಿಯಿಂದ ಆಕ್ರೋಶ!

    88% ಅಂಕ ಪಡೆದ್ರೂ ಹಾಸ್ಟೆಲ್‌ ಸಿಗದ್ದಕ್ಕೆ ವೇದಿಕೆಯಲ್ಲೇ ಸನ್ಮಾನ ತಿರಸ್ಕರಿಸಿ ವಿದ್ಯಾರ್ಥಿನಿಯಿಂದ ಆಕ್ರೋಶ!

    – ಸಚಿವ ತಿಮ್ಮಾಪೂರ್ ವಿರುದ್ಧ ವಿದ್ಯಾರ್ಥಿನಿ‌ ಬಹಿರಂಗ ಅಸಮಾಧಾನ
    – ಅನರ್ಹರಿಗೆ ಬಿಸಿಎಂ ಹಾಸ್ಟೆಲ್ ಸೀಟ್‌ ಸಿಕ್ಕಿದ್ದು ಹೇಗೆ?
    – ನಮಗೆ ಸನ್ಮಾನ ಬೇಡ, ಬೇಕಾದ ಸವಲತ್ತು ಕೊಡಿ ಸಾಕು

    ಬಾಗಲಕೋಟೆ: ಉತ್ತಮ ಅಂಕ ಪಡೆದರೂ ಬಿಸಿಎಂ ಹಾಸ್ಟೆಲ್‌ (BCM Hostel) ಸಿಗದ್ದಕ್ಕೆ ಸಚಿವ ಆರ್‌ಬಿ ತಿಮ್ಮಾಪುರ (RB Timmapur) ವಿರುದ್ಧ ವಿದ್ಯಾರ್ಥಿನಿಯೊಬ್ಬಳು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ಸಚಿವರ ಸ್ವಕ್ಷೇತ್ರ ಮುಧೋಳ (Mudhol) ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ.

    ಪೆಟ್ಲೂರ ಗ್ರಾಮದ ಬಡ ಕುಟುಂಬದ ಐಶ್ವರ್ಯ ಪಾಯಗೊಂಡ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ 88% ಅಂಕ ಪಡೆದಿದ್ದಳು. ನಂತರ ಪ್ರಥಮ ಪಿಯು ವಿಜ್ಞಾನ ವಿಭಾಗಕ್ಕೆ ಮುಧೋಳ ತಾಲೂಕಿನ ಯಡಹಳ್ಳಿ ಸರ್ಕಾರಿ ಕಾಲೇಜಿಗೆ ಪ್ರವೇಶ ಪಡೆದಿದ್ದಳು.

    ಮನೆಯಿಂದ ಕಾಲೇಜಿಗೆ ಹೋಗಲು ದೂರ ಇರುವ ಕಾರಣ ಬಿಸಿಎಂ ಹಾಸ್ಟೆಲ್‌ಗೆ ಅರ್ಜಿ ಹಾಕಿದ್ದಾಳೆ. ಆದರೆ ಅಧಿಕಾರಿಗಳು ಆಕೆಗೆ ಪ್ರವೇಶ ನೀಡಿರಲಿಲ್ಲ. ಹೀಗಾಗಿ ವಿದ್ಯಾರ್ಥಿನಿ ಪೆಟ್ಟೂರ್‌ನಿಂದ ನಿತ್ಯ ಬಸ್‌ನಲ್ಲಿ ಪ್ರಯಾಣ ಮಾಡಿ ಕಾಲೇಜಿಗೆ ಹೋಗುತ್ತಿದ್ದಳು.

    ಕೆಲ ದಿನಗಳ ಹಿಂದೆ ಮುಧೋಳ ತಾಲೂಕಿನ ಹೆಬ್ಬಾಳದ ಪಿಕೆಪಿಎಸ್ ವಾರ್ಷಿಕ ಸಾಧಾರಣ ಸಭೆಯಲ್ಲಿ ಐಶ್ವರ್ಯಾಗೆ ಸನ್ಮಾನವನ್ನು ಆಯೋಜಿಸಲಾಗಿತ್ತು. ಸನ್ಮಾನ ಸ್ವೀಕರಿಸುವ ಮೊದಲು ತನ್ನ ಸಾಧನೆಯ ಬಗ್ಗೆ ಮಾತನಾಡಲು ಐಶ್ವರ್ಯಾ ವೇದಿಕೆಗೆ ಆಗಮಿಸಿದ್ದಾಳೆ. ವೇದಿಕೆ ಆಗಮಿಸಿದ ಆಕೆ ಹಾಸ್ಟೆಲ್‌ ರಾಜಕೀಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಸಿಟ್ಟು ಹೊರ ಹಾಕಿದ್ದಾಳೆ. ಈಕೆಯ ಭಾಷಣದ ವಿಡಿಯೋ ಈಗ ವೈರಲ್‌ ಆಗುತ್ತಿದ್ದಂತೆ ವಿದ್ಯಾರ್ಥಿನಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿದೆ. ಇದನ್ನೂ ಓದಿ:  ವಿಜಯಪುರ| ಎಸ್‌ಬಿಐ ಬ್ಯಾಂಕ್‌ನಲ್ಲಿ ದರೋಡೆಯಾಗಿದ್ದ ಚಿನ್ನಾಭರಣ, ನಗದು ಮಹಾರಾಷ್ಟ್ರದಲ್ಲಿ ಪತ್ತೆ

     

    ವಿದ್ಯಾರ್ಥಿನಿ ಹೇಳಿದ್ದೇನು?
    ನಾನು ಅತ್ಯಂತ ಬಡಕುಟುಂಬದ ಮಗಳು, ಅಂತಹ ಬಡ ಕುಟುಂಬದಲ್ಲಿ ಓದಿ ಒಳ್ಳೆಯ ಅಂಕ ಪಡೆದಿದ್ದೇನೆ. ಆದರೂ ನನಗೆ ಹಾಸ್ಟೆಲ್‌ ಸೀಟ್ ಸಿಗಲಿಲ್ಲ. ಅಧಿಕಾರಿಗಳು ರಾಜಕೀಯ ನಾಯಕರ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ.

    ಹಾಸ್ಟೆಲ್‌ ವಿಚಾರವಾಗಿ ಅಧಿಕಾರಿಗಳನ್ನು ಕೇಳಿದರೆ ತಿಮ್ಮಾಪುರ ಸಾಹೇಬ್ರು ಹೇಳಿದ್ರೆ ಮಾತ್ರ ಆಯ್ಕೆ ಮಾಡುತ್ತೇವೆ. ತಿಮ್ಮಾಪುರ ಸಾಹೇಬರ ಆಫೀಸಿಗೆ ಹೋದರೆ ನಮ್ಮನ್ನು ಮಾತನಾಡಿಸಲೇ ಇಲ್ಲ. 50- 55% ಅಂಕ ಪಡೆದವರಿಗೆ ಹಾಸ್ಟೆಲ್‌ ಸಿಕ್ಕಿದೆ. ಆದರೆ 90-95% ಅಂಕ ಪಡೆದವರು ಬಸ್ಸಿನಲ್ಲಿ ಹೋಗುತ್ತಿದ್ದೇವೆ.

    ಇಂತಹ ಕೆಟ್ಟ ರಾಜಕೀಯ ವ್ಯವಸ್ಥೆಯಲ್ಲಿ ಸಿಕ್ಕ ನಮ್ಮಂತಹ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ನಮ್ಮ ಕನಸು ಕನಸಾಗಿಯೇ ಉಳಿಯುತ್ತಿದೆ. ನಮಗೆ ಸನ್ಮಾನ ಬೇಡ, ಬೇಕಾದ ಸವಲತ್ತು ಕೊಡಿ ಸಾಕು ಎಂದು‌ ಸನ್ಮಾನ ತಿರಸ್ಕರಿಸಿದ್ದಾಳೆ.

  • UKP 3ನೇ ಹಂತ| ಮುಳುಗಡೆ ಸಂತ್ರಸ್ತರಿಗೆ 40 ಲಕ್ಷ ಪರಿಹಾರ – ಯಾರಿಗೆ ಎಷ್ಟು ಸಿಗುತ್ತೆ?

    UKP 3ನೇ ಹಂತ| ಮುಳುಗಡೆ ಸಂತ್ರಸ್ತರಿಗೆ 40 ಲಕ್ಷ ಪರಿಹಾರ – ಯಾರಿಗೆ ಎಷ್ಟು ಸಿಗುತ್ತೆ?

    ಬೆಂಗಳೂರು: ಕೃಷ್ಣ ಮೇಲ್ದಂಡೆ ಯೋಜನೆ (Upper Krishna Project) ಮೂರನೇ ಹಂತದಲ್ಲಿ ಬಾಗಲಕೋಟೆ (Bagalkote) ಜಿಲ್ಲೆಯ ಆಲಮಟ್ಟಿ ಡ್ಯಾಂ (Almatti Dam) ಎತ್ತರ ಹೆಚ್ಚಳ ಯೋಜನೆ ಸಂಬಂಧ ರೈತರಿಗೆ ಪರಿಹಾರ ನೀಡುವ ವಿಚಾರದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಇಂದು ಮಹತ್ವದ ತೀರ್ಮಾನ ಕೈಗೊಂಡಿದೆ. ಇದಕ್ಕಾಗಿಯೆ ವಿಶೇಷ ಸಚಿವ ಸಂಪುಟ ಸಭೆ ಇಂದು ನಡೆದಿದ್ದು ಸಭೆಯಲ್ಲಿ ರೈತರ ಭೂ ಪರಿಹಾರಕ್ಕೆ ದರ ನಿಗದಿ ಮಾಡಲಾಗಿದೆ.

    ಮುಳಗಡೆ ವ್ಯಾಪ್ತಿಯಲ್ಲಿ ನೀರಾವರಿ ಜಮೀನಿಗೆ ಎಕರೆಗೆ 40 ಲಕ್ಷ ರೂ., ಒಣ ಭೂಮಿಗೆ ಎಕರೆಗೆ 30 ಲಕ್ಷ ರೂ. ನಿಗದಿ ಮಾಡಲಾಗಿದೆ. ಅದರಂತೆ ಕೆನಾಲ್ ಭಾಗದಲ್ಲಿ ನೀರಾವರಿ ಜಮೀನಿಗೆ ಎಕರೆಗೆ 30 ಲಕ್ಷ ರೂ. ಒಣ ಭೂಮಿಗೆ 25 ಲಕ್ಷ ರೂ. ದರ ನಿಗದಿ ಮಾಡಲಾಗಿದೆ.

    ಸಿಎಂ ಸಿದ್ದರಾಮಯ್ಯ ಮಾತನಾಡಿ, ಡ್ಯಾಂ ಎತ್ತರಿಸಲು 75 ಸಾವಿರ ಎಕರೆಗೂ ಹೆಚ್ಚು ಜಮೀನು ಮುಳುಗಡೆ ಆಗಲಿದೆ. 5 ಲಕ್ಷ ಹೆಕ್ಟೇರ್‌ಗೂ ಹೆಚ್ಚಿನ ಜಾಗಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ. ಬರಡು ಭೂಮಿಗೆ ನೀರು ಕೊಟ್ಟಂತೆ ಆಗಲಿದೆ ಎಂದರು. ಇದನ್ನೂ ಓದಿ: ಎಸ್‌ಟಿಗೆ ಕುರುಬ ಮಹತ್ವದ ಸಭೆ ಕರೆದ ವಾಲ್ಮೀಕಿ ಸಮುದಾಯ


    ಡಿಸಿಎಂ ಡಿಕೆ ಶಿವಕುಮಾರ್‌ ಮಾತನಾಡಿ, ಇವತ್ತು ಐತಿಹಾಸಿಕ ತೀರ್ಮಾನಕ್ಕೆ ಬಂದಿದ್ದೇವೆ. ಸುಮಾರು ಹತ್ತು ಸುತ್ತಿನ ಸಭೆಗಳು ನಡೆಸಿದ್ದೇವೆ. ಪುನರ್ವಸತಿಗಾಗಿ ಹೊಸ ಪಾಲಿಸಿ, ಪರಿಹಾರ ಪ್ಯಾಕೇಜ್ ಪರ್ಯಾಯ ವ್ಯವಸ್ಥೆಗೆ ತೀರ್ಮಾನ. ಸೆಕ್ಷನ್ 51 ಅನ್ವಯ ಪ್ರಾಧಿಕಾರ ರಚನೆ ಮಾಡಿ ಹಾಲಿ, ನಿವೃತ್ತ ನ್ಯಾಯಾಧೀಶರ ನೇಮಕ ಮಾಡಲಾಗುವುದು ಎಂದು ತಿಳಿಸಿದರು

    ಕ್ಯಾಬಿನೆಟ್ ನಿರ್ಧಾರ ಏನು?
    519.6 ಮೀಟರ್‌ನಿಂದ 524.25 ಮೀಟರ್‌ಗೆ ಆಲಮಟ್ಟಿ ಡ್ಯಾಮ್ ಎತ್ತರಕ್ಕೆ ತೀರ್ಮಾನ.
    ಯೋಜನೆಗೆ ಅಂದಾಜು ಒಟ್ಟು 70 ಸಾವಿರ ಕೋಟಿ ರೂ. ಖರ್ಚು
    3 ವರ್ಷದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಅಂತಿಮ
    ಒಟ್ಟು 5 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶಕ್ಕೆ ನೀರಾವರಿ ಸೌಲಭ್ಯ
    ಒಟ್ಟು 1.33 ಲಕ್ಷ ಎಕರೆ ಜಮೀನು ಯೋಜನೆ ಆಗಲಿದ್ದು 75,532 ಎಕರೆ ಜಾಗ ಮುಳುಗಡೆಯಾಗಲಿದೆ.
    ನಾಲೆ ನಿರ್ಮಾಣಕ್ಕೆ ಬೇಕಾದ ಜಾಗ 51,837 ಎಕರೆ
    ಪುನರ್ವಸತಿಗಾಗಿ ಬೇಕಾಗಿರುವ ಜಾಗ 6,439 ಎಕರೆ
    ಈ ಯೋಜನೆಯಿಂದ ಸ್ಥಳಾಂತರ ಆಗಲಿವೆ 20 ಗ್ರಾಮಗಳು

  • ಬಾಗಲಕೋಟೆ ನಗರದಲ್ಲಿ ಹೆಚ್ಚಾಯ್ತು ಬೀದಿ ನಾಯಿಗಳ ಹಾವಳಿ – ಒಂದೇ ದಿನ 15 ಮಂದಿ ಮೇಲೆ ದಾಳಿ

    ಬಾಗಲಕೋಟೆ ನಗರದಲ್ಲಿ ಹೆಚ್ಚಾಯ್ತು ಬೀದಿ ನಾಯಿಗಳ ಹಾವಳಿ – ಒಂದೇ ದಿನ 15 ಮಂದಿ ಮೇಲೆ ದಾಳಿ

    ಬಾಗಲಕೋಟೆ: ಕೈ,ಕಾಲುಗಳ ಮೇಲೆ ಜಿನುಗುತ್ತಿರುವ ರಕ್ತ, ಗಂಭೀರ ಗಾಯಗೊಂಡವರಿಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯರು, ಏನೋ ದುರಂತ ನಡೆದಿದೆ ಎಂದು ಗಾಬರಿಯಿಂದ ಮುಗಿಬಿದ್ದಿರುವ ಜನತೆ.

    ಅಂದ ಹಾಗೆ ಈ ದೃಶ್ಯಗಳು ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ. ಕಳೆದ ನಾಲ್ಕೈದು ದಿನಗಳ ಹಿಂದೆ ನವನಗರದ ಎಪಿಎಂಸಿ ಬಳಿ ಹುಚ್ಚು ನಾಯಿಯೊಂದು (Stray Dog) ಕೆಲಸಕ್ಕೆಂದು ಹೊರಟವರ, ಬಸ್‌ಗಾಗಿ ಕಾಯುತ್ತಿದ್ದವರ ಸುಮಾರು ಹತ್ತು ಜನರ ಮೇಲೆ ತೀವ್ರ ದಾಳಿ ನಡೆಸಿ ಗಾಯಗೊಳಿಸಿತ್ತು. ಸಾಲದು ಎಂಬಂತೆ ಪಕ್ಕದಲ್ಲೇ ಎಪಿಎಂಸಿ ಯಾರ್ಡ್‌ನಲ್ಲಿರುವ ಅಂಧ ಶಾಲಾ ಮಕ್ಕಳ ಮೇಲೂ ದಾಳಿ ನಡೆಸಿ ಕೈ, ಕಾಲು ಸೇರಿ ದೇಹದ ಬೇರೆ ಬೇರೆ ಭಾಗದಲ್ಲಿ ತೀವ್ರವಾಗಿ ಕಚ್ಚಿತ್ತು.

    ಒಟ್ಟು 15 ಜನರಿಗೆ ಗಂಭೀರವಾದ ಗಾಯಗಳಾಗಿದ್ದು ಅವರೆಲ್ಲಾ ಜಿಲ್ಲಾಸ್ಪತ್ರೆಗೆ (Bagalkote District Hospital) ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಈ ಘಟನೆಯಿಂದ ನಗರದ ಜನತೆ ಆತಂಕಕ್ಕೊಳಗಾಗಿತ್ತು. ಸಾಮಾನ್ಯ ನಾಯಿಗಳು ಬಳಿ ಬಂದರು ಸಹ ಭಯದಿಂದ ದೂರ ಸರಿಯುವ ರೀತಿಯಾಗಿತ್ತು. ಕಣ್ಣಿದ್ದವರು ಹೇಗೋ ವಾಸಿಯಾಗಿ ಬಿಡುತ್ತಾರೆ. ಆದರೆ ಜಗತ್ತೇ ಕತ್ತಲಾಗಿದ್ದವರ ಗತಿ ಏನು? ಹೀಗಾಗಿ ಹುಚ್ಚು ನಾಯಿ ಕಡಿತಕ್ಕೊಳಗಾದ ಅಂಧ ಶಾಲಾ ಶಿಕ್ಷಕಿ ಹೇಮಾವತಿ ಹಾಗೂ ಸ್ಥಳೀಯರು ಹುಚ್ಚು ನಾಯಿ, ಬೀದಿ ನಾಯಿಗಳ ಹಾವಳಿಯಿಂದ ನಮ್ಮನ್ನು ರಕ್ಷಿಸಿ, ಮೇಲಿಂದ ಮೇಲೆ ನಾಯಿ ದಾಳಿ ನಡೆಯುತ್ತಿದೆ. ಭಯದಲ್ಲೇ ಜೀವನ ಮಾಡಬೇಕಿದೆ. ಬೀದಿ ನಾಯಿಗಳಿಗೆ ಕಡಿವಾಣ ಹಾಕುವಂತೆ ಜಿಲ್ಲಾಡಳಿತ, ನಗರಸಭೆಗೆ ಮನವಿ ಮಾಡಿಕೊಂಡಿದ್ದಾರೆ.

    ಇತ್ತೀಚೆಗೆ ಬಾಗಲಕೋಟೆ ನಗರದಲ್ಲಿ ನಾಯಿ ಕಡಿತದ ಪ್ರಕರಣಗಳು ಹೆಚ್ಚಾಗಿವೆ ಎಂದು ಅಂಕಿ ಅಂಶಗಳೇ ಹೇಳುತ್ತಿವೆ.ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 1669 ಜನರಿಗೆ ನಾಯಿ ಕಡಿತವಾಗಿದೆ.ಇದನ್ನೂ ಓದಿ: Bengaluru | ಆಟೋಗೆ ಕಸ ನೀಡದ ಮನೆಗಳಿಗೆ ನೋಟಿಸ್

    ಸಾಂದರ್ಭಿಕ ಚಿತ್ರ

    ಪ್ರತಿ ತಿಂಗಳು ಸರಾಸರಿ 200 ಜನ ನಾಯಿ ಕಡಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಇಬ್ಬರೂ ನಾಯಿ ಕಡಿತದಿಂದ ಸಾವನ್ನಪ್ಪಿದ್ದು ಭಯ ಮೂಡಿಸುತ್ತದೆ. ಒಂದೇ ತಿಂಗಳಲ್ಲಿ ಬಾಗಲಕೋಟೆ ನಗರದಲ್ಲಷ್ಟೇ 30ಕ್ಕೂ ಹೆಚ್ಚು ಜನರ ಮಾರಣಾಂತಿಕ ನಾಯಿ ದಾಳಿಗೆ ಒಳಗಾಗಿದ್ದಾರೆ.

    ಬಾಗಲಕೋಟೆ ಮತ್ತು ಇಳಕಲ್‌ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಯಿ ಕಡಿತದ ಪ್ರಕರಣ ಬೆಳಕಿಗೆ ಬಂದಿದೆ. ಹುಚ್ಚು ಹಿಡಿದ ಹಿನ್ನೆಲೆ ನಾಯಿಯನ್ನು ಯಾರೋ ಬೀದಿಗೆ ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಜಿಲ್ಲಾಸ್ಪತ್ರೆ ಸರ್ಜನ್ ಡಾ.ಮಹೇಶ್ ಕೋಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೋರ್ಟ್ ಆದೇಶಿಸಿದ್ರೂ ಹಾಸಿಗೆ, ದಿಂಬು ಒದಗಿಸಿಲ್ಲ – ಮತ್ತೆ ಅರ್ಜಿ ಸಲ್ಲಿಸಿದ ದರ್ಶನ್ ಪರ ವಕೀಲರು

    ಜಿಲ್ಲಾಸ್ಪತ್ರೆಗೆ ಮೂರು ಕೆಟಗೆರಿಗೆಯಲ್ಲಿ ಪ್ರಕರಣ ದಾಖಲಾಗುತ್ತವೆ. ಕೆಟಗೆರಿ ಮೂರರ ಪ್ರಕರಣಗಳೇ ಜಿಲ್ಲಾಸ್ಪತ್ರೆಗೆ ಹೆಚ್ಚು ದಾಖಲಾಗಿವೆ. ಮೊದಲ ಕೆಟಗೆರಿಯಲ್ಲಿ ಕೇವಲ ಟಿಟಿ ಇಂಜೆಕ್ಷನ್ ಮಾತ್ರ, ಎರಡರಲ್ಲಿ ಟಿಟಿ+ಇಂಟ್ರಾ ಮಸಿಕ್ಯೂಲರ್ ಇಂಜೆಕ್ಷನ್ ಕೊಡಲಾಗುತ್ತೆ. ಕೆಟಗರಿ ಮೂರರ ವ್ಯಕ್ತಿಗಳಿಗೆ ಟಿಟಿ,ಇಂಟ್ರಾ ಮಸಿಕ್ಯೂಲರ್, ಎಆರ್ 5 ಡೋಸ್‌ ಇಂಜೆಕ್ಷನ್ ಕೊಡಲಾಗುತ್ತೆ ಎಂದು ನಾಯಿ ಕಡಿತಕ್ಕೆ ಒಳಗಾಗು ವ್ಯಕ್ತಿಗಳ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು.

    ಸದ್ಯದಲ್ಲೇ ಸ್ಥಳೀಯ ಸಂಸ್ಥೆಗಳು, ಆರೋಗ್ಯ ಇಲಾಖೆ ಮತ್ತು ಪಸು ಸಂಗೋಪನೆ ಇಲಾಖೆಯಿಂದ ತಂಡ ರಚನೆ ಮಾಡಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವುದಾಗಿ ಮಹೇಶ್ ಕೋಣಿ ತಿಳಿಸಿದರು.

  • ದೇಶ ಕಾಯೋ ಯೋಧನಿಂದಲೇ ಕೊಲೆ –  ಡೀಸೆಲ್‌ ಸುರಿದು ಸಹೋದರನ ಹತ್ಯೆಗೈದ ಮೂವರು ಅರೆಸ್ಟ್

    ದೇಶ ಕಾಯೋ ಯೋಧನಿಂದಲೇ ಕೊಲೆ – ಡೀಸೆಲ್‌ ಸುರಿದು ಸಹೋದರನ ಹತ್ಯೆಗೈದ ಮೂವರು ಅರೆಸ್ಟ್

    ಬಾಗಲಕೋಟೆ: ಕುಡುಕ ಸಹೋದರನನ್ನು ಡೀಸೆಲ್‌ ಹಾಕಿ ದೇಶ ಕಾಯುವ ಯೋಧನೇ ಕೊಲೆ ಮಾಡಿರುವ ಘಟನೆ ಬಾಗಲಕೋಟೆ (Bagalkote) ಜಿಲ್ಲೆ ಜಮಖಂಡಿ (Jamakhandi) ತಾಲ್ಲೂಕಿನ ಬಿದರಿ (Bidari) ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ.

    ಅನಿಲ್ ಪರಪ್ಪ ಕಾನಟ್ಟಿ(32) ಮೃತ ವ್ಯಕ್ತಿ. ಕುಡಿದ ಮತ್ತಲ್ಲಿ ನಿತ್ಯ ಮನೆಯಲ್ಲಿ ಜಗಳವಾಡುತ್ತಿದ್ದ. ಹೀಗಾಗಿ ಸಹೋದರ ಯೋಧ ಬಸವರಾಜ ಕಾನಟ್ಟಿ, ತಂದೆ ಪರಪ್ಪ ಕಾನಟ್ಟಿ, ತಾಯಿ ಶಾಂತಾ ಕಾನಟ್ಟಿ ಮೂವರು ಸೇರಿಕೊಂಡು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಕಲ್ಲು – ನಾಳೆ ಬೆಳಗ್ಗೆಯವರೆಗೆ ಮದ್ದೂರಿನಲ್ಲಿ ನಿಷೇಧಾಜ್ಞೆ ಜಾರಿ

    ಸೆ.5ಕ್ಕೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಹೋದರ ಬಸವರಾಜ ಕಾನಟ್ಟಿ ಯೋಧನಾಗಿದ್ದು, ರಜೆ ಮೇಲೆ ಊರಿಗೆ ಬಂದಿದ್ದ. ಈ ವೇಳೆ ಕುಡುಕ ಸಹೋದರನ ಗಲಾಟೆ ತಾಳಲಾರದೆ ಈ ಕೃತ್ಯ ಎಸಗಿದ್ದಾರೆ. ಸಹೋದರ, ತಂದೆ ಹಾಗೂ ತಾಯಿ ಮೂವರು ಸೇರಿಕೊಂಡು ಡೀಸೆಲ್‌ ಸುರಿದು ಸುಟ್ಟು ಹಾಕಿ, ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಕೆಂಪು ಸಮುದ್ರದಲ್ಲಿ ಟಾಟಾ ಫೈಬರ್‌ ಕೇಬಲ್‌ ತುಂಡು – ಭಾರತದ ಸೇರಿ ಹಲವು ದೇಶಗಳಲ್ಲಿ ಇಂಟರ್‌ನೆಟ್‌ ವ್ಯತ್ಯಯ