Tag: ಬಾಕ್ಸರ್

  • ಜೀವನೋಪಾಯಕ್ಕಾಗಿ ಅರ್ಜುನ ಪ್ರಶಸ್ತಿ ವಿಜೇತನಿಂದ ಕುಲ್ಫಿ ಮಾರಾಟ!

    ಜೀವನೋಪಾಯಕ್ಕಾಗಿ ಅರ್ಜುನ ಪ್ರಶಸ್ತಿ ವಿಜೇತನಿಂದ ಕುಲ್ಫಿ ಮಾರಾಟ!

    ಚಂಡೀಗಢ: ಬಾಕ್ಸಿಂಗ್ ನಲ್ಲಿ 17 ಚಿನ್ನ, 1 ಬೆಳ್ಳಿ, 5 ಕಂಚಿನ ಪದಕ ಗೆದ್ದು 2010ರ ಅರ್ಜುನ ಪ್ರಶಸ್ತಿ ಪಡೆದಿದ್ದ ಬಾಕ್ಸರ್ ಇಂದು ಜೀವನೋಪಾಯಕ್ಕಾಗಿ ಕುಲ್ಫಿ ಮಾರಾಟ ಮಾಡುತ್ತಿದ್ದಾರೆ.

    ಭಾರತದ ಪರ ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿ ಪದಕ ಗೆದ್ದಿದ್ದ ದಿನೇಶ್ ಕುಮಾರ್ ಸದ್ಯ ಕುಲ್ಫಿ ಮಾರಾಟ ಮಾಡುವ ಮೂಲಕ ಜೀವನ ನಡೆಸುತ್ತಿದ್ದಾರೆ. ಒಟ್ಟು 23 ಪದಕಗಳನ್ನು ಗೆದ್ದಿದ್ದು ಇದರಲ್ಲಿ ಅಂತರಾಷ್ಟ್ರೀಯ, ರಾಷ್ಟ್ರೀಯ ಸ್ಪರ್ಧೆಯ ಪದಕಗಳು ಸೇರಿದೆ.

    2014 ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ 30 ವರ್ಷದ ದಿನೇಶ್ ಕುಮಾರ್ ಗಾಯಗೊಂಡಿದ್ದರು. ಆ ಸಂದರ್ಭದಲ್ಲಿ ಅವರ ಚಿಕಿತ್ಸೆಗಾಗಿ ಕುಟುಂಬ ಸಾಲ ಮಾಡಿತ್ತು. ಅಪಘಾತದ ವೇಳೆ ತೀವ್ರವಾಗಿ ಗಾಯಗೊಂಡಿದ್ದ ದಿನೇಶ್ ಅವರ ಬಾಕ್ಸಿಂಗ್ ವೃತ್ತಿ ಜೀವನ ಅಲ್ಲಿಗೆ ಅಂತ್ಯವಾಗಿತ್ತು. ಆದರೆ ಇದಕ್ಕೂ ಮುನ್ನವೇ ದಿನೇಶ್ ಅವರ ತಂದೆ ಮಗನನ್ನು ತರಬೇತಿಗೊಳಿಸಿ ಉತ್ತಮ ಬಾಕ್ಸರ್ ಆಗಿ ಮಾಡಲು ಸಾಕಷ್ಟು ಹಣ ವ್ಯಹಿಸಿದ್ದರು. ಆದರೆ ಅವರ ಕನಸು ಸಂಪೂರ್ಣವಾಗಿ ನನಸಾಗುವ ಮುನ್ನವೇ ದಿನೇಶ್ ಅವರ ಜೀವನದಲ್ಲಿ ಅವಘಡ ಸಂಭವಿಸಿತ್ತು.

    https://twitter.com/ANI/status/1056582298257317888?

    ಕುಟುಂಬ ಮೇಲೆ ದಿನದಿಂದ ದಿನಕ್ಕೆ ಚಿಕಿತ್ಸೆ ಹಾಗೂ ತರಬೇತಿಗಾಗಿ ಪಡೆದ ಸಾಲದ ಮೊತ್ತದ ಒತ್ತಡ ಹೆಚ್ಚಾಗುತ್ತಿತ್ತು. ಇದನ್ನು ಮನಗಂಡ ದಿನೇಶ್ ತಂದೆಗೆ ಸಹಾಯ ಮಾಡಲು ಅವರೊಂದಿಗೆ ಬೀದಿ ಬೀದಿಯಲ್ಲಿ ಕುಲ್ಫಿ ಮಾರಾಟ ಮಾಡುತ್ತಿದ್ದಾರೆ. ಸದ್ಯ ಇವರಿಗೆ ಸರ್ಕಾರದ ವತಿಯಿಂದ ಯಾವುದೇ ಸಹಾಯಕೂಡ ಲಭ್ಯವಾಗಿಲ್ಲ. ಸರ್ಕಾರ ನನಗೆ ಸಹಾಯ ಮಾಡಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇವೆ ಎಂದು ದಿನೇಶ್ ಪ್ರತಿಕ್ರಿಯೆ ನೀಡಿದ್ದಾರೆ.

    ತನಗಾದ ಅಪಘಾತದಿಂದ ಬಾಕ್ಸಿಂಗ್ ವೃತ್ತಿ ಜೀವನ ಅಂತ್ಯವಾದರೂ ನನ್ನಲ್ಲಿರುವ ಬಾಕ್ಸಿಂಗ್ ಹಾಗೆಯೇ ಇದೆ. ತಾನು ಈಗಲೂ ಕಿರಿಯರಿಗೆ ಬಾಕ್ಸಿಂಗ್ ತರಬೇತಿ ನೀಡುವ ಸಾಮರ್ಥ್ಯ ಹೊಂದಿದ್ದೆನೆ. ಅದ್ದರಿಂದ ರಾಜ್ಯಮಟ್ಟದಲ್ಲಿ ತರಬೇತಿ ನೀಡಲು ಉದ್ಯೋಗ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ದಿನೇಶ್ ಅವರ ಕೋಚ್ ಕೂಡ ದಿನೇಶ್ ಅವರಿಗೆ ಬೆಂಬಲವಾಗಿದ್ದು, ಸರ್ಕಾರ ಈತನಿಗೆ ಒಂದು ಉತ್ತಮ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬುಲೆಟ್ ಗಾಯದ ಗುರುತುಗಳೊಂದಿಗೆ ಬಾಕ್ಸರ್ ಮೃತದೇಹ ಪತ್ತೆ

    ಬುಲೆಟ್ ಗಾಯದ ಗುರುತುಗಳೊಂದಿಗೆ ಬಾಕ್ಸರ್ ಮೃತದೇಹ ಪತ್ತೆ

    ನೋಯ್ಡಾ: ರಾಷ್ಟ್ರೀಯ ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಬಾಕ್ಸರ್‍ ವೊಬ್ಬರು ಬುಲೆಟ್ ಗಾಯದ ಗುರುತುಗಳೊಂದಿಗೆ ತನ್ನ ಫ್ಲಾಟ್‍ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಉತ್ತರ ಪ್ರದೇಶದ ನೋಯ್ಡಾ ಪೊಲೀಸರು ಹೇಳಿದ್ದಾರೆ.

    ಜಿತೇಂದ್ರ ಮನ್ (27) ಎಂಬವರ ಮೃತ ದೇಹ ನೋಯ್ಡಾದ ಅವರ ಅಪಾರ್ಟ್‍ಮೆಂಟ್ ನಲ್ಲಿ ದೊರೆತಿದೆ. ಜೂನಿಯರ್ ಲೆವೆಲ್ ಬಾಕ್ಸರ್ ಆಗಿದ್ದ ಜಿತೇಂದ್ರ 2006 ರಲ್ಲಿ ಭಾರತವನ್ನ ಪ್ರತಿನಿಧಿಸಿದ್ದರು. ಹರಿಯಾಣ ರಾಜ್ಯ ಬಾಕ್ಸರ್ ಅಸೋಸಿಯೇಷನ್ ನಲ್ಲಿ ನೋಂದಣಿಯಾಗಿದ್ದರು. ಏಳು ತಿಂಗಳ ಹಿಂದೆ ಗಾಯದ ಸಮಸ್ಯೆಯಿಂದ ಜಿತೇಂದ್ರ ಅವರು ಬಾಕ್ಸಿಂಗ್ ನಿಂದ ದೂರ ಉಳಿದು ಜಿಮ್ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದ್ರೆ ಕಳೆದ ಎರಡು ದಿನಗಳಿಂದ ಜಿಮ್ ಗೂ ಹೋಗಿರಲಿಲ್ಲ. ಜೊತೆಗೆ ಅವರ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು.

    ಜಿತೇಂದ್ರ ಅವರ ಕುಟುಂಬ ದೆಹಲಿಯಲ್ಲಿ ವಾಸವಿದ್ದು, ಕಳೆದ ಐದು ದಿನಗಳಿಂದ ಅವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಅನುಮಾನಗೊಂಡು ಆಪಾರ್ಟ್ ಮೆಂಟ್ ಬಳಿ ಬಂದು ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

    ಜಿತೇಂದ್ರ ಅವರ ಫ್ಲಾಟ್ ಹೊರಗಡೆಯಿಂದ ಲಾಕ್ ಮಾಡಲಾಗಿತ್ತು. ಹೀಗಾಗಿ ಬಾಗಿಲು ಒಡೆದು ಒಳಪ್ರವೇಶಿಸಿದ ಸಮಯದಲ್ಲಿ ಜಿತೇಂದ್ರ ರಕ್ತದ ಮಾಡುವಿನಲ್ಲಿ ಬಿದ್ದಿದ್ದನ್ನು ಕುಟುಂಬಸ್ಥರು ನೋಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸುನಿತಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಅವರ ಮೃತ ದೇಹವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದು, ತನಿಖೆಯನ್ನು ಮುಂದುವರೆಸುವುದಾಗಿ ಪೊಲೀಸ್ ಉಪ ಅಧೀಕ್ಷಕ ಅಮೀತ್ ಕಿಶೋರ್ ತಿಳಿಸಿದ್ದಾರೆ. ಘಟನೆಯ ಕುರಿತು ಐಪಿಸಿ ಸೆಕ್ಷನ್ 302(ಕೊಲೆ) ರಡಿ ಸೂರಜ್‍ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಿಕ್ ಬಾಕ್ಸರ್ ಆಗ್ಬೇಕೆಂಬ ಆಸೆ ಹೊತ್ತ ತಂಗಿಯರ ಶಿಕ್ಷಣಕ್ಕಾಗಿ ಸಹಾಯ ಹಸ್ತ ಚಾಚಿದ ಅಣ್ಣ

    ಕಿಕ್ ಬಾಕ್ಸರ್ ಆಗ್ಬೇಕೆಂಬ ಆಸೆ ಹೊತ್ತ ತಂಗಿಯರ ಶಿಕ್ಷಣಕ್ಕಾಗಿ ಸಹಾಯ ಹಸ್ತ ಚಾಚಿದ ಅಣ್ಣ

    ಬಾಗಲಕೋಟೆ: ಅವರಿಬ್ಬರೂ ಪ್ರತಿಭಾವಂತ ಯುವತಿಯರು, ಅವರಿಗೆ ಇರಲಿಕ್ಕೆ ಒಂದು ಸ್ವಂತ ಮನೆಯೂ ಇಲ್ಲ. ಸದ್ಯ ಅಜ್ಜಿಯ ಮನೆಯಲ್ಲೇ ವಾಸಿಸ್ತಿರೋ ಆ ಯುವತಿಯರು, ಫೇಮಸ್ ಕಿಕ್ ಬಾಕ್ಸರ್ ಆಗಬೇಕು, ನಂತ್ರ ಒಳ್ಳೆಯ ಕೆಲಸ ಹಿಡಿದು ತಮ್ಮ ಬದುಕಿಗಾಗಿ ಜೀವನ ಸವೆಸುತ್ತಿರೋ ಅಣ್ಣ, ಅಜ್ಜಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕೆಂಬ ಕನಸು ಹೊಂದಿದ್ದಾರೆ. ಆದ್ರೆ ಸದ್ಯ ಆ ಯುವತಿಯರ ಸಾಧನೆಗೆ ಬಡತನ ಮುಳುವಾಗಿದೆ. ತಂಗಿಯರ ಓದಿಗಾಗಿ ಕಲಿಕೆ ಬಿಟ್ಟ ಅಣ್ಣ, ಕೂಲಿ ಮಾಡ್ತಾ ಇಬ್ಬರು ತಂಗಿಯರಿಗೆ ಶಿಕ್ಷಣ ಕೊಡಿಸುತ್ತಾ ಸ್ವಾಭಿಮಾನದ ಜೀವನ ಸಾಗಿಸ್ತಿದ್ದಾರೆ. ತಂಗಿಯರ ಮುಂದಿನ ಶಿಕ್ಷಣಕ್ಕೆ ಕೊಡುವಷ್ಟು ಅಣ್ಣನ ಬಳಿ ದುಡ್ಡಿಲ್ಲ. ತಂಗಿಯರಿಬ್ಬರ ಶಿಕ್ಷಣಕ್ಕಾಗಿ ಅಣ್ಣ ಸಹಾಯ ಬೇಡ್ತಿದ್ದಾರೆ.

    ಸಾಧನೆಯ ಕನಸ್ಸುಗಳನ್ನೇ ಹೊತ್ತ ಸೋದರಿಯರಿಬ್ಬರ ಶಿಕ್ಷಣಕ್ಕಾಗಿ ಅಣ್ಣ ಕಲಿಕೆ ಬಿಟ್ಟು ಕೂಲಿ ಮಾಡಲು ಮುಂದಾಗಿದ್ದಾರೆ. ಎಳೆಯ ವಯಸ್ಸಿನಲ್ಲೇ ತಂದೆ-ತಾಯಿ ಕಳೆದುಕೊಂಡು ಅಣ್ಣ-ತಂಗಿಯರು ಅಜ್ಜಿಯ ಮನೆಯಲ್ಲೇ ವಾಸಿಸುತ್ತಿದ್ದಾರೆ. ಅಂದಹಾಗೆ ಸಾಧನೆಯ ಮೆಡಲ್ ಹಾಗೂ ಸರ್ಟಿಫೀಕೆಟ್ ಹಿಡಿದ ಈ ಸೋದರಿಯರ ಹೆಸರು ಶಿಲ್ಪಾ ಹಾಗೂ ಲಕ್ಷ್ಮಿ. ಇವರ ಸಾಧನೆಯ ಹಿಂದಿರುವ ಶಕ್ತಿಯೇ ಅಣ್ಣ ವಿಠ್ಠಲ್ ಹಣಮರ್. ಈ ಮೂವರು ಒಡಹುಟ್ಟಿದ್ದ ಅಣ್ಣ, ತಂಗಿಯರು. ಸದ್ಯ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ತುಮ್ಮರಮಟ್ಟಿ ಗ್ರಾಮದ ಅಜ್ಜಿ ಮಲ್ಲಮ್ಮ ಮನೆಯಲ್ಲಿ ವಾಸಿಸುತ್ತಿದ್ದಾರೆ.

    ಹತ್ತು ವರ್ಷದ ಹಿಂದೆ ವಿಠ್ಠಲ್ ಹನಮರ್ ತಂದೆ ತಾಯಿ ತೀರಿ ಹೋದ್ರು. ಆಗ ಸಂಸಾರದ ನೊಗ ಹೊತ್ತ ವಿಠ್ಠಲ್, ಸೆಕೆಂಡ್ ಪಿಯುಸಿಯಲ್ಲಿ ತನ್ನ ವ್ಯಾಸಂಗವನ್ನು ಅರ್ಧಕ್ಕೆ ಬಿಟ್ಟು, ತಮ್ಮ ತಂಗಿಯರಾದ ಶಿಲ್ಪಾ ಹಾಗೂ ಲಕ್ಷ್ಮಿಗೆ ಶಿಕ್ಷಣ ಕೊಡಿಸಲು, ಕೂಲಿ ಕೆಲ್ಸಕ್ಕೆ ಇಳಿದ್ರು. ಸ್ವಂತ ಮನೆಯೂ ಇಲ್ಲದ ಈ ಬಡಪಾಯಿಗಳಿಗೆ ಅಜ್ಜಿಯ ಮನೆಯೇ ಜೀವನಾಧಾರ. ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ 3ನೇ ವರ್ಷದಲ್ಲಿ ವ್ಯಾಸಂಗ ಮಾಡ್ತಿರೋ ಶಿಲ್ಪಾ ಹಾಗೂ ಲಕ್ಷ್ಮಿ, ಕಿಕ್ ಬಾಕ್ಸಿಂಗ್‍ನಲ್ಲಿ ರಾಜ್ಯ ಮಟ್ಟದಲ್ಲಿ ಸಾಕಷ್ಟು ಮೆಡಲ್ ಗಳಿಸಿ, ರಾಷ್ಟ್ರಮಟ್ಟದ ಸ್ಪರ್ಧೆಯಲ್ಲೂ ಭಾಗವಹಿಸಿ ಸಾಧನೆ ಮಾಡಿದ್ದಾರೆ. ಆದ್ರೆ ಇದೀಗ ತಂಗಿಯರ ಮುಂದಿನ ಶಿಕ್ಷಣಕ್ಕೆ ಅಣ್ಣನ ಬಳಿ ದುಡ್ಡಿಲ್ಲ.

    ಹೌದು. ಒಂದು ಕಡೆ ಬೆಂಬಿಡದೇ ಕಾಡ್ತಿರೋ ಬಡತನ, ಮತ್ತೊಂದೆಡೆ ಫೇಮಸ್ ಕಿಕ್ ಬಾಕ್ಸರ್ ಆಗಬೇಕು ನಂತ್ರ ಒಳ್ಳೆಯ ಕೆಲಸ ಹಿಡಿಯಬೇಕೆಂಬ ಕನಸು ಹೊಂದಿರುವ ತಂಗಿಯರ ಸಾಧನೆಗೆ ಹೆಗಲಾಗಬೇಕೆಂಬ ಮಹಾದಾಸೆ ಹೊಂದಿರುವ ವಿಠ್ಠಲ್, ಮದುವೆಯಾಗದೇ ಕೂಲಿ ಮಾಡಿ ಜೀವ ಸಾಗಿಸ್ತಿದ್ದಾರೆ. ಕಲಾ ವಿಭಾದ ಮೂರನೇಯ ವರ್ಷದಲ್ಲಿ ವ್ಯಾಸಂಗ ಮಾಡ್ತಿರೋ ಶಿಲ್ಪಾ ಹಾಗೂ ಲಕ್ಷ್ಮಿ ಮುಂದೆ ಬಿಪಿಎಡ್ಡ್ ಮಾಡಿ, ದೈಹಿಕ ಶಿಕ್ಷಕಿಯರಾಗಬೇಕು ಅಥವಾ ಯಾವುದಾದರೂ ಒಳ್ಳೆಯ ಕೆಲಸ ಹಿಡಿದು, ಅಣ್ಣ ಹಾಗೂ ಅಜ್ಜಿಯನ್ನ ಚೆನ್ನಾಗಿ ನೋಡಿಕೊಳ್ಬೇಕೆಂಬ ಬೆಟ್ಟದಷ್ಟು ಆಸೆ ಹೊಂದಿದ್ದಾರೆ.

    ಆದ್ರೆ ಅಣ್ಣ ವಿಠ್ಠಲ್ ಹನಮರ್ ಬಳಿ ದುಡ್ಡಿಲ್ಲ. ಹಾಗಾಗಿ ತಂಗಿಯರಿಬ್ಬರ ಮುಂದಿನ ವಿದ್ಯಾಭ್ಯಾಕ್ಕಾಗಿ ಸಹಾಯ ಮಾಡಿ ಎಂದು ಗೋಗರೆಯುತ್ತಿದ್ದಾರೆ. ಇತ್ತ ಅಜ್ಜಿ ಇರೋವರೆಗೂ ಅವರ ಮನೆಯಲ್ಲಿದ್ದೇವೆ. ಒಂದು ವೇಳೆ ಅಜ್ಜಿ ತೀರಿ ಹೋದ್ರೆ ನಾವು ಅನಾಥರಾಗುತ್ತೇವೆ. ಹಾಗಾಗಿ ಸರ್ಕಾರ ಅಥವಾ ಸಂಘ ಸಂಸ್ಥೆಯವರು ಸಹಾಯದಿಂದ ನಮಗೆ ಒಂದು ಆಶ್ರಯ ಮನೆಯನ್ನು ಒದಗಿಸಿ ಎಂದು ಮನವಿ ಮಾಡಿಕೊಳ್ತಿದ್ದಾರೆ. ಇನ್ನು ಇದೇ ತಿಂಗಳು 20ರಂದು ಶಿವಮೊಗ್ಗಾದಲ್ಲಿ ನಡೆಯೋ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಲು ಶಿಲ್ಪಾ ಹಾಗೂ ಲಕ್ಷ್ಮಿಗೆ ಆರ್ಥಿಕ ಸಹಾಯ ಮಾಡಿ ಅಂತ ಊರಿನ ಜನ ಹೇಳುತ್ತಿದ್ದಾರೆ.

    ಒಟ್ಟಿನಲ್ಲಿ ಸಾಧನೆಯ ಕನಸುಗಳನ್ನೇ ಹೊತ್ತ ಸೋದರಿಯರು, ಈ ಸೋದರಿಯರಿಬ್ಬರ ಸಾಧನೆಗೆ ಹೆಗಲಾಬೇಕೆಂಬ ಅಣ್ಣ. ಒಟ್ಟಿನಲ್ಲಿ ಈ ಮಾದರಿ ಅಣ್ಣ ತಂಗಿಯರ ಸ್ಥಿತಿಗೆ ಯಾರಾದ್ರೂ ತಕ್ಕಮಟ್ಟಿನ ಸಹಾಯಹಸ್ತ ಚಾಚಲಿ ಅನ್ನೋದು ನಮ್ಮ ಮನವಿ.

    https://www.youtube.com/watch?v=IrNmFWFRj5M

  • ಯಾವಾಗ ಮದುವೆಯಾಗ್ತೀರ ಎಂದು ಕೇಳೀದ್ದಕ್ಕೆ ರಾಹುಲ್ ಗಾಂಧಿ ಉತ್ತರಿಸಿದ್ದು ಹೀಗೆ

    ಯಾವಾಗ ಮದುವೆಯಾಗ್ತೀರ ಎಂದು ಕೇಳೀದ್ದಕ್ಕೆ ರಾಹುಲ್ ಗಾಂಧಿ ಉತ್ತರಿಸಿದ್ದು ಹೀಗೆ

    ನವದೆಹಲಿ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಯಾವಾಗ ಮದುವೆಯಾಗ್ತಾರೆ ಅನ್ನೋ ಕುತೂಹಲ ಸಾಮಾನ್ಯವಾಗಿ ಎಲ್ಲರಲ್ಲೂ ಇದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ರಾಹುಲ್ ಗಾಂಧಿ ಉತ್ತರಿಸಿದ್ದಾರೆ.

    ಗುರುವಾರದಂದು ದೆಹಲಿಯಲ್ಲಿ ನಡೆದ 112ನೇ ವಾರ್ಷಿಕ ಅಧಿವೇಶನ ಹಾಗೂ ಪಿಹೆಚ್‍ಡಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಹುಲ್ ಗಾಂಧಿಗೆ ಬಾಕ್ಸರ್ ವಿಜೇಂದರ್ ಸಿಂಗ್ ಎರಡು ಪ್ರಶ್ನೆಗಳನ್ನು ಕೇಳಿದ್ರು. ಮೊದಲನೆಯದ್ದು, ರಾಹುಲ್ ಗಾಂಧಿ ಯಾವಾಗ ಮದುವೆಯಾಗುತ್ತೀರಿ ಅಂತಾದ್ರೆ ಇನ್ನೊಂದು ನೀವು ಪ್ರಧಾನಿಯಾದ್ರೆ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡ್ತೀರಿ ಅಂತ ಕೇಳಿದ್ರು.

    ಮೊದಲು ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ನೀಡಲು ಹಿಂದೇಟು ಹಾಕಿದ ರಾಹುಲ್, ಇದು ಹಳೇ ಪ್ರಶ್ನೆ. ಆಗಾಗ ಬರುತ್ತಲೇ ಇರುತ್ತೆ ಅಂದ್ರು. ಆದ್ರೆ ವಿಜೇಂದರ್ ಸಿಂಗ್ ಉತ್ತರಕ್ಕಾಗಿ ಒತ್ತಾಯಿಸಿದ್ರು. ಅಲ್ಲದೇ ನಾನು ಮತ್ತು ನನ್ನ ಪತ್ನಿ ನಿಮ್ಮ ಮದುವೆಯ ಬಗ್ಗೆ ಸದಾ ಮಾತನಾಡುತ್ತಿರುತ್ತೇವೆ ಅಂತೆಲ್ಲಾ ಹೇಳಿದ್ರು. ಈ ವೇಳೆ ರಾಹುಲ್ ಗೆ ಉತ್ತರಿಸದೆ ಬೇರೆ ದಾರಿಯೇ ಇರಲಿಲ್ಲ.

    ಕೊನೆಗೆ `ನಾನು ವಿಧಿಯ ಮೇಲೆ ನಂಬಿಕೆ ಇಟ್ಟವನು. ನನ್ನ ಮದುವೆ ಯಾವಾಗ ಆಗಬೇಕೆಂದಿದಿಯೋ ಅಂದೇ ಆಗುತ್ತೆ’ ಅಂತ ಉತ್ತರಿಸಿದ್ರು.

    ಕ್ರೀಡೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ತಾನು ಜಪಾನಿ ಮಾರ್ಷಲ್ ಆಟ್ರ್ಸ್ ಐಕಿಡೋನಲ್ಲಿ ಬ್ಲಾಕ್ ಬೆಲ್ಟ್ ಎಂದು ಹೇಳಿದ್ರು. ಈ ಬಗ್ಗೆ ಸಾರ್ವಜನಿಕವಾಗಿ ಎಲ್ಲೂ ಮಾತನಾಡಿಲ್ಲ. ಸಾಮಾನ್ಯವಾಗಿ ದಿನಕ್ಕೆ ಒಂದು ಗಂಟೆ ಕ್ರೀಡೆಯಲ್ಲಿ ಪಾಲ್ಗೊಳ್ತೀನಿ. ಇತ್ತೀಚೆಗೆ ಕೆಲವು ತಿಂಗಳಿನಿಂದ ಸಾಧ್ಯವಾಗಿಲ್ಲ ಅಂದ್ರು.

    ನಂತರ ವಿಜೇಂದರ್, ಅದರ ವಿಡಿಯೋ ಅಪ್ಲೋಡ್ ಮಾಡಿದ್ರೆ ಜನರಿಗೆ ಸ್ಫೂರ್ತಿ ಸಿಗಬಹುದು ಎಂದು ಕೇಳಿದಾಗ ರಾಹುಲ್ ವಿಡಿಯೋ ಹಂಚಿಕೊಳ್ಳಲು ಒಪ್ಪಿಕೊಂಡ್ರು.

  • ಅಂಪೈರ್‍ ಗೆ ಕಿಕ್ ಕೊಟ್ಟ ಬಾಕ್ಸರ್- ವಿಡಿಯೋ ವೈರಲ್

    ಅಂಪೈರ್‍ ಗೆ ಕಿಕ್ ಕೊಟ್ಟ ಬಾಕ್ಸರ್- ವಿಡಿಯೋ ವೈರಲ್

    ಬರ್ಲಿನ್: ಬಾಕ್ಸಿಂಗ್ ರಿಂಗ್‍ನಲ್ಲಿ ಕೇವಲ ಎದುರಾಳಿಗಳು ಮಾತ್ರ ಹೊಡೆತ ತಿನ್ನುವುದಿಲ್ಲ, ಆಟಗಾರರ ಕೋಪಕ್ಕೆ ಕೆಲವೊಮ್ಮೆ ಅಂಪೈರ್ ಸಹ ತುತ್ತಾಗುತ್ತಾರೆ. ಇದಕ್ಕೆ ತಾಜಾ ಉದಾಹರಣೆಯಂತೆ ಆಸ್ಟ್ರೀಯಾ ಎಂಎಂಎ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಬಾಕ್ಸರ್ ಒಬ್ಬ ಅಂಪೈರ್ ಅವರಿಗೆ ಕಿಕ್ ನೀಡಿದ್ದಾರೆ.

    ಬಾಕ್ಸಿಂಗ್ ಮೈನ್ ಇವೆಂಟ್ ಪಂದ್ಯದಲ್ಲಿ ಜರ್ಮನಿಯ ನಿಹಾದ್ ನಾಸುಪೊವಿಕ್ ತನ್ನ ಎದುರಾಳಿ ವಿಲಿಯಂ ಓಟ್‍ನನ್ನು ತಮ್ಮ ಆಮೋಘ ನೆಕ್ ಚೋಕ್ ತಂತ್ರದ ಮೂಲಕ ಕೆಳಕ್ಕೆ ಉರುಳಿಸಿದ್ದರು. ಎದುರಾಳಿಯ ತಂತ್ರಕ್ಕೆ ಸಿಲುಕಿದ ವಿಲಿಯಂ ಟ್ಯಾಪ್ ಮಾಡುವ ಮೂಲಕ ತಮ್ಮ ಸೋಲನ್ನು ಒಪ್ಪಿಕೊಂಡರು. ಆದರೆ ಸರಿಯಾದ ಸಮಯಕ್ಕೆ ಮಧ್ಯ ಪ್ರವೇಶಿಸದ ಅಂಪೈರ್ ವಿರುದ್ಧ ಕೋಪಗೊಂಡ ವಿಲಿಯಂ ಮರುಕ್ಷಣದಲ್ಲಿ ಅಂಪೈರ್‍ಗೆ ಕಿಕ್ ನೀಡಿದ್ದಾರೆ.

    ಈ ದೃಶ್ಯವಾಳಿಗಳನ್ನು ಬಾಕ್ಸಿಂಗ್ ಮ್ಯಾಚ್ ಸಂಸ್ಥೆಯ ಅಧಿಕೃತ ಪೇಜ್‍ನಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನು ಯಾರು ಅನುಕರಿಸಬೇಡಿ’ ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

    ಆಟಗಾರನ ವಿರುದ್ಧ ಹೆಚ್ಚಿನ ಕಮೆಂಟ್‍ಗಳು ವ್ಯಕ್ತವಾಗಿದ್ದು. ಆಟಗಾರನ ವಿರುದ್ಧ ಕೋಡ್ ಆಫ್ ಕಂಡಕ್ಟ್ ನಿಯಮದಡಿ ಕ್ರಮ ಕೈಗೊಳ್ಳುವಂತೆ ಅಗ್ರಹಿಸಲಾಗುತ್ತಿದೆ.