Tag: ಬಾಂಬ್ ಬ್ಲಾಸ್ಟ್

  • `ಕೆಲವೇ ಕ್ಷಣಗಳಲ್ಲಿ ವಿಧಾನಸೌಧ ಬ್ಲಾಸ್ಟ್’ – ಬೆದರಿಕೆ ಕರೆ ಮಾಡಿದ್ದ ಟೆಕ್ಕಿ ಅರೆಸ್ಟ್

    `ಕೆಲವೇ ಕ್ಷಣಗಳಲ್ಲಿ ವಿಧಾನಸೌಧ ಬ್ಲಾಸ್ಟ್’ – ಬೆದರಿಕೆ ಕರೆ ಮಾಡಿದ್ದ ಟೆಕ್ಕಿ ಅರೆಸ್ಟ್

    ಬೆಂಗಳೂರು: ವಿಧಾನಸೌಧಕ್ಕೆ (Vidhana Soudha) ಬಾಂಬ್ ಬೆದರಿಕೆ ಹಾಕಿದ್ದ ಬೆಂಗಳೂರಿನ ಸಾಫ್ಟ್‌ವೇರ್‌ ಎಂಜಿನಿಯರ್ (Software Engineer) ಒಬ್ಬನನ್ನು ಪೊಲೀಸರು (Bengauru Police) ಬಂಧಿಸಿದ್ದಾರೆ.

    ಸಾಫ್ಟ್‌ವೇರ್‌ ಎಂಜಿನಿಯರ್ ಪ್ರಶಾಂತ್ ಬಂಧಿತ ಆರೋಪಿ. ಶುಕ್ರವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಗೆ ಕರೆ ಮಾಡಿ, ವಿಧಾನಸೌಧದ ಎರಡು ಕಡೆ ಬಾಂಬ್ ಇರಿಸಲಾಗಿದೆ. ಸದ್ಯದಲ್ಲೇ ಸ್ಫೋಟಗೊಳ್ಳಲಿದೆ (Bomb Blast)ಎಂದು ಹೇಳಿದ್ದ. ಇದನ್ನೂ ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್‌: ಪತಿ ಜೊತೆ ದಿವ್ಯಾ ಶ್ರೀಧರ್ ಡಿಶುಂ ಡಿಶುಂ ವಿಡಿಯೋ

    ವಿಷಯ ತಿಳಿಯುತ್ತಿದ್ದಂತೆ ಪೊಲೀಸರಿಂದ (Police) ಪರಿಶೀಲನೆ ನಡೆಸಲಾಯಿತು. ಬಳಿಕ ಇದೊಂದು ಹುಸಿ ಕರೆ ಎಂದು ತಿಳಿದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಕಾರ್ಯಾಚಾರಣೆ ನಡೆಸಿ ತಡರಾತ್ರಿ ಪರಪ್ಪನ ಅಗ್ರಹಾರದ ಬಳಿ ಆರೋಪಿಯನ್ನು ಬಂಧಿಸಲಾಯಿತು ಎಂದು ಕೇಂದ್ರ ವಿಭಾಗದ ಡಿಸಿಪಿ (DCP) ಶ್ರೀನಿವಾಸ್ ಗೌಡ ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿಯಂತೆ ಬೊಮ್ಮಾಯಿ ಸಿಎಂ ಹುದ್ದೆ ಬಿಟ್ಟು ಉಳಿದೆಲ್ಲ ಖಾತೆಗಳನ್ನ ಹಂಚಿಕೆ ಮಾಡ್ಬೇಕು – ಯತ್ನಾಳ್

    ನಿನ್ನೆ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆವರೆಗೆ 3 ಬಾರಿ ಕರೆ ಮಾಡಿದ್ದ ಪ್ರಶಾಂತ್ ಇಬ್ಬರ ಜೊತೆಗೆ ಲಿವಿಂಗ್ ಟುಗೇದರ್‌ನಲ್ಲಿದ್ದಾರೆ ಎಂಬ ಮಾಹಿತಿ ಇದೆ. ಆ ವಿಚಾರದಲ್ಲಿ ಖಿನ್ನತೆಗೆ ಒಳಾಗಿದ್ದ. ಅಪರಿಚಿತರಿಂದ ನಂಗೆ ತೊಂದರೆ ಆಗ್ತಿದೆ, ಅಂತಾ ಎಲ್ಲರ ಬಳಿ ಹೇಳ್ಕೋತಿದ್ದ. ಆದ್ರೆ ಯಾರೂ ಪ್ರಶಾಂತ್ ನನ್ನು ಸಿರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಯಾರೂ ನನ್ನ ಮಾತು ಕೇಳ್ತಿಲ್ಲ ಅಂತಾ ಕೋಪಗೊಂಡು ಕೃತ್ಯವೆಸಗಿರುವುದಾಗಿ ತನಿಖೆ ವೇಳೆ ತಿಳಿದುಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಮದ್ವೆಯಾದ 16 ದಿನದಲ್ಲೇ ಬಾಂಬ್ ಬ್ಲಾಸ್ಟ್ – ಯೋಧ ಹುತಾತ್ಮ

    ಮದ್ವೆಯಾದ 16 ದಿನದಲ್ಲೇ ಬಾಂಬ್ ಬ್ಲಾಸ್ಟ್ – ಯೋಧ ಹುತಾತ್ಮ

    ಜೈಪುರ: ಮದುವೆಯಾದ 16 ದಿನದಲ್ಲೇ ರಾಜಸ್ಥಾನ ಮೂಲದ ಯೋಧರೊಬ್ಬರು ಬಾಂಬ್ ಬ್ಲಾಸ್ಟ್ ನಲ್ಲಿ ಹುತಾತ್ಮರಾದ ಘಟನೆ ಜಮ್ಮು ಹಾಗೂ ಕಾಶ್ಮೀರದಲ್ಲಿ ನಡೆದಿದೆ.

    ಸೌರಬ್ ಕಠಾರಾ ಹುತಾತ್ಮರಾದ ಯೋಧ. ಸೌರಬ್ 16 ದಿನದ ಹಿಂದೆ ಅಂದರೆ ಡಿಸೆಂಬರ್ 8ರಂದು ಪೂನಂ ಅವರನ್ನು ಮದುವೆಯಾಗಿದ್ದರು. ಸೌರಬ್ ಹುತಾತ್ಮರಾದ ವಿಷಯ ತಿಳಿದ ಪೂನಂ ಹಾಗೂ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ. ಸೌರಬ್ ಅವರ ಪಾರ್ಥಿವ ಶರೀರ ಇಂದು ಸಂಜೆ ಅವರ ಗ್ರಾಮಕ್ಕೆ ತಲುಪಲಿದೆ.

    ಮಾಹಿತಿಗಳ ಪ್ರಕಾರ ಇಂದು ಸೌರಬ್ ಅವರ ಹುಟ್ಟುಹಬ್ಬ. ಸೌರಬ್ ಹಾಗೂ ಅವರ ಸಹೋದರ ಅಕ್ಕ-ತಂಗಿಯನ್ನು ಡಿಸೆಂಬರ್ 8ರಂದು ಮದುವೆಯಾಗಿದ್ದರು. ಮದುವೆಯಾದ ಬಳಿಕ ಸೌರಬ್ ತನ್ನ 5 ದಿನದ ರಜೆಯನ್ನು ಮುಗಿಸಿ ಕೆಲಸಕ್ಕೆ ಹಾಜರಾಗಲು ಕುಪ್ವಾರಾಕ್ಕೆ ತೆರಳಿದ್ದರು. ಅಲ್ಲಿ ಅವರು ಬಾಂಬ್ ಸ್ಫೋಟಕ್ಕೆ ಹುತಾತ್ಮರಾಗಿದ್ದಾರೆ.

    ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮ ಟ್ವಿಟ್ಟರಿನಲ್ಲಿ, ಭರತಪುರದ ಕೆಚ್ಚೆದೆಯ ಸೈನಿಕರಿಗೆ ನನ್ನ ಸಲಾಂ. ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ಸೌರಬ್ ಸರ್ವೋಚ್ಚ ತ್ಯಾಗ ಮಾಡಿದ್ದಾರೆ. ಈ ಸಮಯದಲ್ಲಿ ನಾವು ಸೌರಬ್ ಅವರ ಕುಟುಂಬ ಸದಸ್ಯರೊಂದಿಗೆ ನಿಲ್ಲುತ್ತೇವೆ. ದೇವರು ಅವರಿಗೆ ಶಕ್ತಿ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.

  • ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ

    ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ

    -ಪ್ರಯಾಣಿಕರ ಸುರಕ್ಷತೆಗಾಗಿ ಕಟ್ಟೆಚ್ಚರ

    ಕಾರವಾರ: ಶ್ರೀಲಂಕಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲೆಯ ಸೂಕ್ಷ್ಮ ಪ್ರದೇಶವಾದ ಭಟ್ಕಳದ ರೈಲ್ವೆ ನಿಲ್ದಾಣದಲ್ಲಿ ರಾಜ್ಯ ಮೀಸಲು ಬಾಂಬ್ ನಿಷ್ಕ್ರಿಯ ದಳ ಇಂದು ತಪಾಸಣೆ ನಡೆಸಿದರು.

    ಮೀಸಲು ಪೊಲೀಸ್ ಪಡೆಯ ಎಎಸ್‍ಐ ಮಾದೇಗೌಡ ನೇತ್ರತ್ವದಲ್ಲಿ ಬಾಂಬ್ ಪತ್ತೆ ಶ್ವಾನವನ್ನು ಬಳಸಿ ರೈಲ್ವೆ ಫ್ಲಾಟ್‍ಫಾರಂ, ರೈಲ್ವೆ ಹಳಿ ಹಾಗೂ ಫ್ಲೈಓವರ್ ತಳಭಾಗದಲ್ಲಿ ಬಾಂಬ್ ಪತ್ತೆ ಕಾರ್ಯ ನಡೆಸಲಾಯಿತು.

    ಭಟ್ಕಳ ಸೂಕ್ಷ್ಮ ಪ್ರದೇಶ ಹಿನ್ನಲೆಯಲ್ಲಿ ಹಾಗೂ ಕೇರಳ, ಮಂಗಳೂರು, ಉಡುಪಿ ಮಾರ್ಗವಾಗಿ ಕಾರವಾರ ಗೋವಾಕ್ಕೆ ಅತಿ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಹೀಗಾಗಿ ಪ್ರಯಾಣಿಕರ ಸುರಕ್ಷತಾ ದೃಷ್ಠಿಯಿಂದ ಈ ತಪಾಸಣೆ ಕಾರ್ಯ ನಡೆದಿದ್ದು, ಪ್ರತಿದಿನ ತಪಾಸಣೆಯನ್ನು ರಾಜ್ಯ ಮೀಸಲು ಪೊಲೀಸರು ನಡೆಸಲಿದ್ದಾರೆ.

  • ಶ್ರೀಲಂಕಾದಲ್ಲಿ ಸರಣಿ ಬಾಂಬ್ ಬ್ಲಾಸ್ಟ್ – ಕೋಲಾರ ಜಿಲ್ಲೆಯಾದ್ಯಂತ ಕಟ್ಟೆಚ್ಚರ

    ಶ್ರೀಲಂಕಾದಲ್ಲಿ ಸರಣಿ ಬಾಂಬ್ ಬ್ಲಾಸ್ಟ್ – ಕೋಲಾರ ಜಿಲ್ಲೆಯಾದ್ಯಂತ ಕಟ್ಟೆಚ್ಚರ

    ಕೋಲಾರ: ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಬ್ಲಾಸ್ಟ್ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

    ಕೋಲಾರದಲ್ಲಿರುವ ಪ್ರಮುಖ ಚರ್ಚ್, ದೇವಸ್ಥಾನ, ಮಸೀದಿ, ಮಾಲ್, ಲಾಡ್ಜ್, ಸ್ಟಾರ್ ಹೋಟೆಲ್ ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ಹದ್ದಿನ ಕಣ್ಣಿಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು, ಅನುಮಾನಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಡುವಂತೆ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಜ್ ಆದೇಶ ಹೊರಡಿಸಿದ್ದಾರೆ.

    ತಮ್ಮ ಕಚೇರಿಯಲ್ಲಿ ಎಲ್ಲಾ ವರ್ಗದ ಜನರು ಹಾಗೂ ಧರ್ಮ ಗುರುಗಳೊಂದಿಗೆ ಸಭೆ ನಡೆಸಿ ತೀವ್ರ ನಿಗಾ ಇಡುವಂತೆ ಆದೇಶ ಹೊರಡಿಸಿದ್ದಾರೆ. ಚರ್ಚ್, ಮದರಸಾ, ದೇವಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕಡ್ಡಾಯವಾಗಿ ಗುರುತಿನ ಚೀಟಿ ನೀಡುವುದು, ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೋಟೇಲ್‍ಗಳು, ಡಾಬಾ, ಲಾಡ್ಜ್‍ಗಳಲ್ಲಿ ಸೆಕ್ಯೂರಿಟಿ ಗಾರ್ಡ್‍ಗಳನ್ನು ನೇಮಿಸುವುದು, ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದಾರೆ.

    ಜೊತೆಗೆ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಮಾರ್ಕೆಟ್, ಚಿತ್ರಮಂದಿರಗಳು, ಕಲ್ಯಾಣ ಮಂಟಪಗಳಲ್ಲಿ ಹೆಚ್ಚಿನ ಜನಸಂದಣಿ ಸೇರುವ ಸ್ಥಳಗಳಲ್ಲಿ ಸಂಶಯಾಸ್ಪದವಾಗಿ ಕಂಡು ಬರುವ ವ್ಯಕ್ತಿಗಳು, ವಾರಸುದಾರರಿಲ್ಲದ ಲಗೇಜ್ ಕಂಡು ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

  • ಶ್ರೀಲಂಕಾ ದಾಳಿಯಿಂದ ಎಚ್ಚೆತ್ತ ಬೆಂಗ್ಳೂರು ಮಹಾನಗರ ಸಾರಿಗೆ ಸಂಸ್ಥೆ!

    ಶ್ರೀಲಂಕಾ ದಾಳಿಯಿಂದ ಎಚ್ಚೆತ್ತ ಬೆಂಗ್ಳೂರು ಮಹಾನಗರ ಸಾರಿಗೆ ಸಂಸ್ಥೆ!

    ಬೆಂಗಳೂರು: ಶ್ರೀಲಂಕಾ ಬಾಂಬ್ ದಾಳಿ ಬೆನ್ನಲ್ಲೆ ಬೆಂಗಳೂರಿನಲ್ಲೂ ಹೈ ಅಲರ್ಟ್ ಶುರುವಾಗಿದೆ. ಬಿಎಂಟಿಸಿ ಅಧಿಕಾರಿಗಳು ಕೂಡ ಬೆಂಗಳೂರಿನ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸುರಕ್ಷತಾ ಕ್ರಮ ಅಳವಡಿಕೆಗೆ ಸಜ್ಜಾಗಿದ್ದಾರೆ.

    ಬಿಎಂಟಿಸಿ ಬಸ್ ನಿಲ್ದಾಣದ ಸಂಕೀರ್ಣ ಘಟಕಗಳಿಗೆ ಮೆಟಲ್ ಡಿಟೆಕ್ಟರ್ ಅಳವಡಿಸಲು ನಿರ್ಧರಿಸಿದ್ದಾರೆ. ಬೆಂಗಳೂರು ಉಗ್ರರ ಹಿಟ್ ಲಿಸ್ಟ್ ನಲ್ಲಿದ್ದು ಖಾಕಿ ಪಡೆ ಕೂಡ ಅಲರ್ಟ್ ಆಗಿದೆ. ಬೆಂಗಳೂರಿನಲ್ಲಿ 8 ಬಿಎಂಟಿಸಿ ಬಸ್ ನಿಲ್ದಾಣಗಳಿದ್ದು, ಇಲ್ಲಿ ಮೆಟಲ್ ಡಿಟೆಕ್ಟರ್ ಆಳವಡಿಸಲಾಗುತ್ತದೆ.

    ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿಗೆ ಬಿಎಂಟಿಸಿಯ ಭದ್ರತೆ ಮತ್ತು ಜಾಗೃತಿ ವಿಭಾಗದ ನಿರ್ದೇಶಕ ಅನುಪಮ್ ನಿರಂಜನ್ ಪ್ರತಿಕ್ರಿಯೆ ನೀಡಿದ್ದಾರೆ. ಮೆಟಲ್ ಡಿಟೆಕ್ಟರ್ ಅಳವಡಿಸಲಾಗುತ್ತದೆ. ಆದರೆ ಕೊಂಚ ಸಮಯ ಬೇಕಾಗುತ್ತದೆ. ಈಗಾಗಲೇ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾ ಮತ್ತು ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿದ್ದೇವೆ. ಪ್ಲಾನ್ ಮಾಡಿಕೊಂಡು ಬಜೆಟ್ ನೋಡಿಕೊಂಡು ಮೆಟಲ್ ಡಿಟೆಕ್ಟರ್ ಅಳವಡಿಸುತ್ತೇವೆ ಎಂದು ತಿಳಿಸಿದರು.

    ಪ್ರಮುಖ ಸ್ಥಳಗಳಲ್ಲೂ ಪೊಲೀಸ್ ಕಣ್ಗಾವಲು:
    ಶ್ರೀಲಂಕಾ ಬಾಂಬ್ ಸ್ಫೋಟದ ಹಿಂದೆ ಐಸಿಸ್ ಕೈವಾಡ ಇದೆ ಎಂಬ ಮಾಹಿತಿ ಹೊರ ಬೀಳುತ್ತಿದ್ದಂತೆಯೇ ಎಚ್ಚೆತ್ತ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ. ಮಂದಿರ, ಮಸೀದಿ, ಚರ್ಚ್, ರೈಲು, ಬಸ್, ವಿಮಾನ ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸುವಂತೆ ಖಡಕ್ ಆದೇಶ ಹೊರಡಿಸಿದ್ದಾರೆ.

    ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಎಲ್ಲ ಪಂಚತಾರ ಹೋಟೆಲ್ ಮಾಲೀಕರು, ಮಾಲ್ ಮಾಲೀಕರು, ಐಟಿ ಕಂಪನಿಗಳ ಮುಖ್ಯಸ್ಥರು ಹಾಗೂ ಸೆಕ್ಯೂರಿಟಿ ಆಫಿಸರ್ ಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅನುಸರಿಸಬೇಕಾದ ಕ್ರಮಗಳು ಹಾಗೂ ಸ್ಫೋಟಕಗಳ ಬಗ್ಗೆ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್‍ಕುಮಾರ್ ಮಾಹಿತಿ ನೀಡಿದ್ದಾರೆ. ಜನರ ರಕ್ಷಣೆಗಾಗಿ ಹೋಟೆಲ್‍ಗಳು ಯಾವ ರೀತಿ ಮುಂಜಾಗೃತಾ ಕ್ರಮಗಳನ್ನ ವಹಿಸಬೇಕು. ಮೆಟಲ್ ಡಿಟೆಕ್ಟರ್, ಲಗೇಜ್ ಸ್ಕ್ಯಾನಿಂಗ್, ಭದ್ರತೆಯ ನಿರ್ವಹಣೆ ಹೇಗೆ ಎಂದು ಪೊಲೀಸ್ ಆಯುಕ್ತರು ನಿರ್ದೇಶನ ನೀಡಿದ್ದಾರೆ.

  • ಶ್ರೀಲಂಕಾದಲ್ಲಿ ಸಿಲುಕಿದ್ದ ಬಿಜೆಪಿ ನಾಯಕ ತಾಯ್ನಾಡಿಗೆ ವಾಪಸ್

    ಶ್ರೀಲಂಕಾದಲ್ಲಿ ಸಿಲುಕಿದ್ದ ಬಿಜೆಪಿ ನಾಯಕ ತಾಯ್ನಾಡಿಗೆ ವಾಪಸ್

    ಮೈಸೂರು: ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ 350ಕ್ಕೂ ಹೆಚ್ಚು ಮಂದಿ ಅಮಾಯಕ ಜೀವಗಳು ಬಲಿಯಾಗಿದೆ. ಈ ಆತಂಕದ ವಾತಾವರಣದಲ್ಲಿ ಸಿಲುಕಿದ್ದ ಮೈಸೂರಿನ ಬಿಜೆಪಿ ಮುಖಂಡ ವೈ.ವಿ. ರವಿಶಂಕರ್ ತಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆ ಸುರಕ್ಷಿತವಾಗಿ ಊರಿಗೆ ವಾಪಸ್ ಆಗಿದ್ದಾರೆ.

    ರವಿಶಂಕರ್ ಸೇರಿ 14 ಜನ ಸ್ನೇಹಿತರ ತಂಡ ಚುನಾವಣಾ ಪ್ರಚಾರ ಮುಗಿಸಿ ಪ್ರವಾಸಕ್ಕೆಂದು ಕೊಲಂಬೋಗೆ ತೆರಳಿದ್ದರು. ಈ ವೇಳೆ ಕೊಲಂಬೋದ ರೆಸಾರ್ಟ್ ನಲ್ಲಿ ರವಿಶಂಕರ್, ಅವರ ಸ್ನೇಹಿತರು ಮತ್ತು ಕುಟುಂಬದವರ ಜೊತೆ ತಂಗಿದ್ದರು. ಬಾಂಬ್ ಸ್ಫೋಟವಾದ ಸಮಯದಲ್ಲಿ ದಾಳಿ ನಡೆದ ಸ್ಥಳದ ಸಮೀಪವೇ ಇವರೆಲ್ಲ ಇದ್ದರು. ಆದರೆ ಅದೃಷ್ಟವಶಾತ್ ಯಾವುದೇ ಅಪಾಯವಾಗದೇ ರವಿಶಂಕರ್, ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ಬುಧವಾರ ರಾತ್ರಿ ಮೈಸೂರಿಗೆ ಮರಳಿದ್ದಾರೆ.

    ಇಷ್ಟು ದಿನ ಕೊಲಂಬೋದಿಂದ 30 ಕಿ.ಮೀ ದೂರದ ರೆಸಾರ್ಟ್ ನಲ್ಲಿ ಇವರೆಲ್ಲ ತಂಗಿದ್ದರು. ಅದೇ ರೆಸಾರ್ಟ್ ನಲ್ಲಿಯೇ ಒಟ್ಟು 50 ಮಂದಿ ಭಾರತೀಯರು ತಂಗಿದ್ದರು. ಜೆಡಿಎಸ್ ಮುಖಂಡರು ತಂಗಿದ್ದ ಶಾಂಗ್ರಿಲಾ ಹೋಟೆಲ್ ಅನ್ನು ಮೊದಲು ಬುಕ್ ಮಾಡಿದ್ದರು. ಬಳಿಕ ಕಾರಣಾಂತರಗಳಿಂದ ಸ್ಥಳವನ್ನು ಬದಲಿಸಿದ್ದರಿಂದ ಸುರಕ್ಷಿತವಾಗಿ ಮರಳಿ ಬಂದಿದ್ದಾರೆ.

  • ಶ್ರೀಲಂಕಾ ದಾಳಿ- ಕೋರಮಂಗಲದ ವ್ಯಕ್ತಿಯ ಕತ್ತಿನ ಭಾಗದಲ್ಲಿ ಸಿಲುಕಿಕೊಳ್ತು ಕಬ್ಬಿಣದ ಚೂರು!

    ಶ್ರೀಲಂಕಾ ದಾಳಿ- ಕೋರಮಂಗಲದ ವ್ಯಕ್ತಿಯ ಕತ್ತಿನ ಭಾಗದಲ್ಲಿ ಸಿಲುಕಿಕೊಳ್ತು ಕಬ್ಬಿಣದ ಚೂರು!

    – ಮಧ್ಯಾಹ್ನ ಬೆಂಗ್ಳೂರಿಗೆ ಏರ್ ಲಿಫ್ಟ್

    ಬೆಂಗಳೂರು: ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಕೋರಮಂಗಲದ ಪುರುಷೋತ್ತಮ ರೆಡ್ಡಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಇವರ ಎದೆ ಭಾಗಕ್ಕೆ ನುಗ್ಗಿದ ಕಬ್ಬಿಣದ ಸರಳು ಹೊಕ್ಕಿದ್ದು, ಕತ್ತಿನ ಭಾಗದಲ್ಲಿ ಕಬ್ಬಿಣದ ಚೂರು ಸಿಲುಕಿಕೊಂಡಿದೆ. ಕೊಲಂಬೋದ ಖಾಸಗಿ ಆಸ್ಪತ್ರೆಯಲ್ಲಿ ಪುರುಷೋತ್ತಮ್ ರೆಡ್ಡಿಗೆ ಚಿಕಿತ್ಸೆ ನೀಡಲಾಗ್ತಿತ್ತು. ಆದರೆ ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲು ನಿರ್ಧರಿಸಲಾಗಿದೆ.

    ಇಂದು ಮಧ್ಯಾಹ್ನ ಬೆಂಗಳೂರಿಗೆ ಪುರುಷೋತ್ತಮ್ ರನ್ನು ಕರೆದುಕೊಂಡು ಬರಲಾಗುತ್ತಿದ್ದು, ಝೀರೋ ಟ್ರಾಫಿಕ್‍ ಮೂಲಕ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಪುರುಷೋತ್ತಮ್ ರೆಡ್ಡಿ ಯಲಹಂಕ ಶಾಸಕ ಎಸ್ ವಿಶ್ವನಾಥ್ ಸಂಬಂಧಿ ಹಾಗೂ ಮೃತ ನಾಗರಾಜ್ ರೆಡ್ಡಿಯ ಆಪ್ತ ಸ್ನೇಹಿತರಾಗಿದ್ದರು. ಅವಘಡ ನಡೆದಂದು ಇವರು ಶ್ರೀಲಂಕಾದ ಶಾಂಗ್ರೀಲಾ ಹೋಟೆಲ್‍ನಲ್ಲಿ ತಂಗಿದ್ದರು ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಬಲಿಯಾದ ಐವರ ಮೃತದೇಹ ಬೆಂಗ್ಳೂರಿಗೆ ಶಿಫ್ಟ್

    ಏನಿದು ಘಟನೆ?: 
    ಈಸ್ಟರ್ ಶುಭ ಸಂದರ್ಭದಲ್ಲಿ ಪ್ರಾರ್ಥನೆಗೆ ಸೇರಿದ್ದವರನ್ನು ಗುರಿಯಾಗಿಸಿ ಭಾನುವಾರ ಬೆಳಗ್ಗೆ 8:45ಕ್ಕೆ ಬಾಂಬ್ ಸ್ಫೋಟಿಸಲಾಗಿದೆ. ಕೊಲಂಬೋ ಬಂದರು ಸಮೀಪದ ಸೆಬಾಸ್ಟಿಯನ್ ಚರ್ಚ್, ಸೇಂಟ್ ಅಂತೋನಿಯ ಶ್ರೈನ್, ಜಿಯಾನ್ ಚರ್ಚ್, ಸಿನ್ನಮೋನ್ ಗ್ರ್ಯಾಂಡ್, ಕೊಲಂಬೊದ ಶಾಂಗ್ರಿ-ಲಾ ಹೋಟೆಲ್, ಕಿಂಗ್ಸ್ಬರಿ ಹೋಟೆಲ್, ದೆಹಿವಾಲಾ -ಮೌಂಟ್ ಲವಿನಿಯಾದಲ್ಲಿನ ದೆಹಿವಾಲಾ ಝೂ, ಮಹವಿಲಾ ಗಾರ್ಡನ್ಸ್‍ನಲ್ಲಿ ಬಾಂಬ್ ಸ್ಫೋಟವಾಗಿದೆ. ಇದನ್ನೂ ಓದಿ: ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ – ಶತಕೋಟ್ಯಧಿಪತಿಯ ಮೂವರು ಮಕ್ಕಳು ಬಲಿ

    ಬಾಂಬ್ ಸ್ಫೋಟದ ತೀವ್ರತೆಗೆ ಚರ್ಚ್ ಗಳ ಮೇಲ್ಛಾವಣಿ ಕಿತ್ತು ಹಾರಿಹೋಗಿತ್ತು. ಚರ್ಚ್ ಒಳಗಡೆಯಿದ್ದ ಬೆಂಚ್‍ಗಳು ಮುರಿದು ಹೋಗಿತ್ತು. ಚರ್ಚ್ ಒಳಗಡೆ ಎಲ್ಲಿ ನೋಡಿದರಲ್ಲಿ ರಕ್ತವೇ, ಛಿದ್ರ ಛಿದ್ರ ಮೃತದೇಹಗಳೇ ಕಾಣಸಿಗುತಿತ್ತು.

  • ಶ್ರೀಲಂಕಾದಲ್ಲಿ ಬಲಿಯಾದ ಐವರ ಮೃತದೇಹ ಬೆಂಗ್ಳೂರಿಗೆ ಶಿಫ್ಟ್

    ಶ್ರೀಲಂಕಾದಲ್ಲಿ ಬಲಿಯಾದ ಐವರ ಮೃತದೇಹ ಬೆಂಗ್ಳೂರಿಗೆ ಶಿಫ್ಟ್

    – ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ
    – ಮೂವರ ಮೃತದೇಹ ಮಧ್ಯಾಹ್ನ ಶಿಫ್ಟ್

    ಬೆಂಗಳೂರು: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 8 ಮಂದಿ ಕನ್ನಡಿಗರು ದಾರುಣವಾಗಿ ಮೃತಪಟ್ಟಿದ್ದಾರೆ. ಇದೀಗ ಅದರಲ್ಲಿ ಒಟ್ಟು ಐವರ  ಮೃತದೇಹ ಬೆಂಗಳೂರಿಗೆ ರವಾನೆಯಾಗಿದೆ.

    ಯುಎಲ್-173 ಶ್ರೀಲಂಕಾ ಏರ್ ಲೈನ್ಸ್ ವಿಮಾನದಲ್ಲಿ ನಾಲ್ವರ ಮೃತದೇಹ ಶಿಫ್ಟ್ ಮಾಡಲಾಗಿದ್ದು, ತಡರಾತ್ರಿ 2.30ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನವಾಗಿದೆ. ಇದೇ ವೇಳೆ ನೆಲಮಂಗಲ ಶಾಸಕ ಶ್ರೀನಿವಾಸ್, ಇ.ಕೃಷ್ಣಪ್ಪ ಬೆಂಗಳೂರಿಗೆ ಆಗಮಿಸಿ ಅಂತಿಮ ದರ್ಶನ ಪಡೆದರು.

    ನೆಲಮಂಗಲ, ಕಾಚನಹಳ್ಳಿ ಜೆಡಿಎಸ್ ಮುಖಂಡ ಹನುಮಂತರಾಯಪ್ಪ, ಲಕ್ಷ್ಮೀ ನಾರಾಯಣ, ಶಿವಕುಮಾರ್, ದಾಸರಹಳ್ಳಿಯ ರಂಗಪ್ಪ ಈ ನಾಲ್ವರ ಮೃತದೇಹಗಳು ಶ್ರೀಲಂಕಾದಿಂದ ರವಾನೆಯಾಗಿದೆ. ರಂಗಪ್ಪ ಮೃತದೇಹ ದಾಸರಹಳ್ಳಿಯ ಚೊಕ್ಕಸಂದ್ರದ ನಿವಾಸಕ್ಕೆ ರವಾನೆಯಾಗಿದೆ. ಉಳಿದ ಮೂವರ ಮೃತದೇಹಗಳನ್ನು ನೆಲಮಂಗಲದ ಅವರವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಹನುಮಂತರಾಯಪ್ಪ, ಲಕ್ಷ್ಮೀನಾರಾಯಣ, ಶಿವಕುಮಾರ್ ಮೃತದೇಹಗಳನ್ನು ನೆಲಮಂಗಲದ ಜ್ಯೂನಿಯರ್ ಕಾಲೇಜಿನಲ್ಲಿ ಅಂತಿಮ ದರ್ಶನಕ್ಕೆ ಇಡುವ ಸಾಧ್ಯತೆ ಇದೆ.

    ಬಿಟಿಎಂ ಲೇಔಟ್‍ನ ನಾಗರಾಜ್ ರೆಡ್ಡಿ ಮೃತದೇಹ ಕೂಡ ಮಂಗಳವಾರ ರಾತ್ರಿಯೇ ಬೆಂಗಳೂರಿಗೆ ರವಾನೆಯಾಗಿದೆ. ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ 11.30ಕ್ಕೆ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಯ್ತು. ನಾಗರಾಜ್ ರೆಡ್ಡಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 11 ಗಂಟೆ ಬಳಿಕ ಅಂತ್ಯ ಸಂಸ್ಕಾರ ನೆರವೇರಲಿದೆ. ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೃತದೇಹಗಳು ಬರುತ್ತಿದ್ದಂತೆಯೇ ಗೃಹಸಚಿವ ಎಂ.ಬಿ ಪಾಟೀಲ್ ದರ್ಶನ ಪಡೆದ್ರು. ಪುಷ್ಪಗುಚ್ಛ ಇಟ್ಟು ಅಂತಿಮ ನಮನ ಸಲ್ಲಿಸಿದ್ರು. ಬಳಿಕ ಮಾತನಾಡಿ, ಘಟನೆಯಿಂದ ತುಂಬಾ ನೋವಾಗಿದೆ. ಇಂತಹ ಕೃತ್ಯಗಳು ನಡೆಯಬಾರದಿತ್ತು. ಆದ್ರೂ ನಡೆದು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ್ರು.

    ನೆಲಮಂಗಲ ಶಾಸಕ ಶ್ರೀನಿವಾಸ್ ಮಾತನಾಡಿ, ಘಟನೆಯಲ್ಲಿ ಮೃತಪಟ್ಟವರೆಲ್ಲರೂ ನಮ್ಮ ಆಪ್ತರೇ ಆಗಿದ್ದು, ತೀರಾ ನೋವಾಗಿದೆ ಅಂದ್ರು. ಇದೇ ವೇಳೆ ಮಾತನಾಡಿದ ಜೆಡಿಎಸ್ ಮುಖಂಡ ಇ.ಕೃಷ್ಣಪ್ಪ, ಏಳೂ ಮೃತದೇಹಗಳ ರವಾನೆಗೆ ಎಲ್ಲಾ ಪ್ರಕ್ರಿಯೆ ಮುಕ್ತಾಯವಾಗಿದೆ. ಕಳೆಬರಹ ಪತ್ತೆಗೆ ಸ್ವಲ್ಪ ಸಮಯ ಹಿಡೀತು. ಫೋಟೋ ನೋಡಿ ದೇಹ ಗುರುತು ಪತ್ತೆ ಹಚ್ಚಿದೆವು. ದುರಾದೃಷ್ಟವಶಾತ್ ಏಳೂ ಸ್ನೇಹಿತರನ್ನು ಕಳೆದುಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ರು.

    ಮೂವರ ಮೃತದೇಹ ಮಧ್ಯಾಹ್ನ ಶಿಫ್ಟ್
    ಜೆಡಿಎಸ್ ಮುಖಂಡ, ತುಮಕೂರು ನಿವಾಸಿ ರಮೇಶ್, ಅಡಕಮಾರನಹಳ್ಳಿಯ ಮಾರೇಗೌಡ ಹಾಗೂ ನೆಲಮಂಗಲ ಹಾರೋಕ್ಯಾತನಹಳ್ಳಿಯ ಪುಟ್ಟರಾಜು ಈ ಮೂವರ ಮೃತದೇಹಗಳು ಇಂದು ಮಧ್ಯಾಹ್ನ ಬೆಂಗಳೂರಿಗೆ ಶಿಫ್ಟ್ ಆಗಲಿದೆ ಎನ್ನಲಾಗಿದೆ.

  • ಸರಣಿ ಬಾಂಬ್ ಬ್ಲಾಸ್ಟ್- ಮಗು ಸಮೇತ ದಂಪತಿ ಬೆಂಗ್ಳೂರಿಗೆ ವಾಪಸ್

    ಸರಣಿ ಬಾಂಬ್ ಬ್ಲಾಸ್ಟ್- ಮಗು ಸಮೇತ ದಂಪತಿ ಬೆಂಗ್ಳೂರಿಗೆ ವಾಪಸ್

    ಚಿಕ್ಕಬಳ್ಳಾಪುರ: ದ್ವೀಪರಾಷ್ಟ್ರ ಶ್ರೀಲಂಕಾದ ಸರಣಿ ಬಾಂಬ್ ಬ್ಲಾಸ್ಟ್ ನಿಂದ ಬೆದರಿದ ಕನ್ನಡಿಗರು ಒಬ್ಬೊಬ್ಬರಾಗಿ ತಾಯ್ನಾಡು ಕರ್ನಾಟಕದತ್ತ ಅಗಮಿಸುತ್ತಿದ್ದಾರೆ.

    ಅಂದಹಾಗೆ ಶ್ರೀಲಂಕಾ ಗೆ ಪ್ರವಾಸಕ್ಕೆ ತೆರಳಿದ್ದ ಎಚ್ ಎಸ್ ಅರ್ ಲೇಔಟ್ ನಿವಾಸಿಗಳಾದ ಮಯೂರ್-ಅಮೂಲ್ಯ ದಂಪತಿ ತಮ್ಮ ಮಗು ಜೊತೆಗೆ ಕ್ಷೇಮವಾಗಿ ಬೆಂಗಳೂರಿಗೆ ಅಗಮಿಸಿದ್ದಾರೆ. ಕಳೆದ ರಾತ್ರಿ ಏರ್ ಇಂಡಿಯೂ ವಿಮಾನದ ಮೂಲಕ ಕೆಐಎಎಲ್ ಗೆ ಅಗಮಿಸಿದ ದಂಪತಿ ಶ್ರೀಲಂಕಾದ ಘಟನಾವಳಿಗಳ ಬಗ್ಗೆ ಹಂಚಿಕೊಂಡರು.

    ಬಾಂಬ್ ಬ್ಲಾಸ್ಟ್ ಆದ ಪಕ್ಕದ ಹೋಟೆಲ್ ನಲ್ಲಿ ತಂಗಿದ್ದ ದಂಪತಿ, ಅದೃಷ್ಟವಶಾತ್ ಘಟನೆ ನಡೆದ ದಿನ ನಾವು ಬೇರೋಂದು ಕಡೆ ತೆರಳಿದ್ದೆವು. ತಾವು ತಂಗಿದ್ದ ಪಕ್ಕದ ಶಾಂಗ್ರೀಲಾ ಹೋಟೆಲ್ ನಲ್ಲೇ ಘಟನೆ ನಡೆದ ವಿಷಯ ತಿಳಿದು ಅಘಾತವಾಯಿತು. ಹೇಗೋ ದೇವರ ದಯೆಯಿಂದ ಬದುಕಿ ಬೆಂಗಳೂರಿಗೆ ವಾಪಾಸ್ಸಾದೆವು ಎಂದರು. ಇದನ್ನೂ ಓದಿ: ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ ಪ್ರಕರಣ – 20ಕ್ಕೂ ಹೆಚ್ಚು ಕನ್ನಡಿಗರು ವಾಪಸ್

    ಇದಕ್ಕೂ ಮುನ್ನ ನಿತೇಶ್ ನಾಯಕ್ ತಮ್ಮ ಪತ್ನಿ ಹಾಗೂ ಮಗುವಿನೊಂದಿಗೆ ಬೆಂಗಳೂರಿಗೆ ಆಗಮಿಸಿದ್ರು. ಮತ್ತೊಂದೆಡೆ ಕೇವಲ ಕನ್ನಡಿಗರಷ್ಟೇ ಅಲ್ಲದೆ ನೆರೆಯ ರಾಜ್ಯ ಆಂಧ್ರದ ಕರ್ನೂಲು ಮೂಲದ ಮೂವತ್ತು ಮಂದಿ ಸಹ ತಡ ರಾತ್ರಿ 2.30 ರ ಏರ್ ಇಂಡಿಯಾ ವಿಮಾನದಲ್ಲಿ ಬೆಂಗಳೂರಿನ ಕೆಐಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ರು.

  • ಬಾಂಬ್ ಬ್ಲಾಸ್ಟ್ ನಲ್ಲಿ ಎರಡೂ ಕೈ ಕಳೆದುಕೊಂಡ್ರೂ ಜೀವನದಲ್ಲಿ ಗೆಲುವು ಕಂಡ ಯುವತಿಯ ಸ್ಟೋರಿ ಓದಿ

    ಬಾಂಬ್ ಬ್ಲಾಸ್ಟ್ ನಲ್ಲಿ ಎರಡೂ ಕೈ ಕಳೆದುಕೊಂಡ್ರೂ ಜೀವನದಲ್ಲಿ ಗೆಲುವು ಕಂಡ ಯುವತಿಯ ಸ್ಟೋರಿ ಓದಿ

    ಮುಂಬೈ: ಜೀವನದಲ್ಲಿ ನಡೆಯೋ ಕೆಲವೊಂದು ಕೆಟ್ಟ ಸನ್ನಿವೇಶಗಳನ್ನ ಮೆಟ್ಟಿ ನಿಂತು ನಾನು ಸಮರ್ಥವಾಗಿ ಬದುಕಬಲ್ಲೇ ಅನ್ನೋದನ್ನ ಈ ಯುವತಿಗಿಂತ ಬೇರ್ಯಾರು ಉತ್ತಮವಾಗಿ ಕಲಿಸಲು ಸಾಧ್ಯವಿಲ್ಲ ಅಂದ್ರೆ ತಪ್ಪಾಗಲ್ಲ. ತನ್ನ 13ನೇ ವಯಸ್ಸಿನಲ್ಲಿ ಬಾಂಬ್ ಬ್ಲಾಸ್ಟ್‍ನಲ್ಲಿ ಎರಡೂ ಕೈ ಕಳೆದುಕೊಂಡು, ಸದ್ಯ ಮೋಟಿವೇಷನಲ್ ಸ್ಪೀಕರ್ ಆಗಿರೋ ಮುಂಬೈನ ಮಾಳವಿಕಾ ಐಯ್ಯರ್ ಅವರ ಸಾಧನೆಯ ಕಥೆ ಇದು.

    ಬಾಂಬ್ ಬ್ಲಾಸ್ಟ್ ನಲ್ಲಿ ಎರಡೂ ಕೈ ಕಳೆದುಕೊಂಡ ಮಾಳವಿಕಾ, ಅದರಿಂದ ಚೇತರಿಸಿಕೊಳ್ಳಲು ತುಂಬಾ ಸಮಯವೇ ಬೇಕಾಯಿತು. ಆದ್ರೆ ಅವರು ಬದುಕುಳಿದಿದ್ದು ಮಾತ್ರವಲ್ಲ, ಇತರರಿಗೆ ಸ್ಫೂತಿಯಾಗುವಂತೆ ಈಗ ತಮ್ಮ ಬದುಕನ್ನೇ ಬದಲಾಯಿಸಿದ್ದಾರೆ. ಮಾಳವಿಕಾ ಬದುಕಿನ ಕಥೆಯನ್ನ ಹ್ಯೂಮನ್ಸ್ ಆಫ್ ಬಾಂಬೇ ಫೇಸ್‍ಬುಕ್ ಪೇಜ್‍ನಲ್ಲಿ ಹಂಚಿಕೊಳ್ಳಲಾಗಿದ್ದು, ಎಂಥವರಿಗೂ ಸ್ಫೂರ್ತಿಯಾಗುವಂತಿದೆ ಇವರ ಸ್ಟೋರಿ.

    ಪೋಸ್ಟ್ ನಲ್ಲಿ ಮಾಳವಿಕಾ, ತನ್ನ ಬದುಕನ್ನೇ ಬದಲಿಸಿದ ಒಂದು ಅಪಘಾತದ ಬಗ್ಗೆ ಹೇಳಿದ್ದಾರೆ. ಹತ್ತಿರದ ಯುದ್ಧಸಾಮಗ್ರಿಗಳ ಡಿಪೋದಲ್ಲಿ ಬೆಂಕಿ ಅವಘಡ ಉಂಟಾಗಿ ಅದರ ತುಣುಕುಗಳು ಎಲ್ಲಾ ಕಡೆ ಬಿದ್ದಿದ್ದವು. ನಮ್ಮ ಮನೆಯ ಗ್ಯಾರೇಜ್‍ನಲ್ಲಿ ಗ್ರೆನೇಡ್‍ವೊಂದು ಬಂದು ಬಿತ್ತು. ಅದನ್ನ ಹಿಡಿದುಕೊಂಡಾಗ ಸ್ಫೋಟಗೊಂಡಿತು. ಅದರಿಂದ ನನ್ನ ಎರಡೂ ಕೈಗಳನ್ನ ಕಳೆದುಕೊಂಡೆ. ಕಾಲುಗಳಿಗೂ ತೀವ್ರ ಗಾಯಗಳಾಗಿ ನರಗಳು ಪಾಶ್ರ್ವವಾಯುಗೆ ತುತ್ತಾದವು ಎಂದು ಹೇಳಿದ್ದಾರೆ.

    ಮೊದಲಿಗೆ ವ್ಹೀಲ್‍ ಚೇರ್‍ಗೆ ಸೀಮಿತರಾಗಿದ್ದ ಮಾಳವಿಕಾ ನಂತರ ಮತ್ತೆ ನಡೆದಾಡುವುದನ್ನ ಕಲಿತರು ಹಾಗೂ ಪ್ರಾಸ್ಥೆಟಿಕ್ ಕೈಗಳನ್ನ ಬಳಸುವುದು ಕಲಿತರು. ಅಂದಿನಿಂದ ಮಾಳವಿಕಾ ಹಿಂದೆ ತಿರುಗಿ ನೋಡಲಿಲ್ಲ. ಸಹಾಯಕರೊಬ್ಬರ ನೆರವಿನಿಂದ 10ನೇ ಕ್ಲಾಸ್ ಪರೀಕ್ಷೆ ಪೂರ್ಣಗೊಳಿಸಿದ್ರು, ನಂತರ ಸ್ಟೇಟ್ ರ‍್ಯಾಂಕ್ ಕೂಡ ಪಡೆದರು. ಅನಂತರ ತನ್ನ ವಿದ್ಯಾಭ್ಯಾಸ ಮುಂದುವರೆಸಿ ಪಿಹೆಚ್‍ಡಿ ಕೂಡ ಮಾಡಿದ್ರು. ಮನಸ್ಸು ಮಾಡಿದ್ರೆ ಯಾವುದೇ ಕೆಲಸ ಅಸಾಧ್ಯವಲ್ಲ ಎಂಬುದನ್ನ ಮಾಳವಿಕಾ ಸಾಬೀತು ಮಾಡಿದ್ದಾರೆ.

    ನಾನು ಅಪರಿಪೂರ್ಣಳು ಎಂದೆನಿಸುತ್ತಿತ್ತು. ಘಟನೆ ಬಗ್ಗೆ ಮಾತನಾಡುವುದನ್ನ ಅವಾಯ್ಡ್ ಮಾಡ್ತಿದ್ದೆ. ಈ ವೇಳೆ ನನ್ನ ಕುಟುಂಬದವರು ನನ್ನ ಜೊತೆ ನಿಂತರು. ಇದೇ ವೇಳೆ ನನ್ನ ಜೀವನ ಸಂಗಾತಿಯನ್ನ ಭೇಟಿ ಮಾಡಿದೆ. ನಾನು ಅತ್ಯಂತ ಪರಿಪೂರ್ಣ ವ್ಯಕ್ತಿ ಎಂಬಂತೆ ಅವರು ನನ್ನನ್ನು ಕಾಣುತ್ತಿದ್ದರು. ನನ್ನ ಅಂಗೈಕಲ್ಯ ಅವರಿಗೆ ದೊಡ್ಡ ವಿಚಾರವಾಗಿರಲಿಲ್ಲ. ಆದ್ರೆ ನನಗ್ಯಾಕೆ ಅದು ದೊಡ್ಡದೆನಿಸಿತ್ತು? ಹೀಗಾಗಿ ನಾನು ಬದುಕಿರುವುದೇ ಒಂದು ದೊಡ್ಡ ಪವಾಡ ಎಂಬುದನ್ನ ನನಗೆ ನಾನು ನೆನಪಿಸಲು ಶುರು ಮಾಡಿದೆ. ಅಪಘಾತದಿಂದ ಪಾರಾಗಿದ್ದೀನಿ ಅಂದ್ರೆ ನಾನು ಏನು ಬೇಕಾದರೂ ಮಾಡಬಹುದು ಎಂದು ನಂಬಲು ಶುರು ಮಾಡಿದೆ ಎಂದು ಮಾಳವಿಕಾ ಹೇಳಿಕೊಂಡಿದ್ದಾರೆ.

    ಅನೇಕ ವರ್ಷಗಳ ಅಭದ್ರತೆ, ನನ್ನ ದೇಹವನ್ನ ಮರೆಮಾಚುವುದು, ಅಪರಿಚಿತರಿಂದ ಸಾವಿರಾರು ಪ್ರಶ್ನೆಗಳನ್ನ ಎದುರಿಸಿದ ನಂತರ 2012ರಲ್ಲಿ ನನ್ನ ಅಪಘಾತದ ವಾರ್ಷಿಕೋತ್ಸವದಂದು ನಾನು ನಡೆದ ಘಟನೆಯನ್ನ ವಿವರಿಸಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದೆ. ಆ ಪೋಸ್ಟ್ ವೈರಲ್ ಆಯಿತು ಎಂದು ಅವರು ಹೇಳಿದ್ದಾರೆ.

    ಟೆಡೆಕ್ಸ್ ನಲ್ಲಿ ತನ್ನ ಮೊದಲ ಭಾಷಣ ಅನಂತರ ಸಾಕಷ್ಟು ಭಾಷಣ ಹಾಗೂ ಸಾಧನೆಗಳ ಬಗ್ಗೆ ಮಾಳವಿಕಾ ಹೇಳಿಕೊಂಡಿದ್ದಾರೆ. ಕಳೆದ ವರ್ಷ ನನಗೆ ವಿಶ್ವಸಂಸ್ಥೆ ಮುಖ್ಯ ಕಚೇರಿಯಲ್ಲಿ ಮಾತನಾಡಲು ಆಹ್ವಾನ ಬಂದಿತ್ತು. ನವದೆಹಲಿಯ ದಿ ವೆರ್ಲ್ಡ್ ಎಕಾನಾಮಿಕ್ಸ್ ಫೋರಂಸ್ ಇಂಡಿಯಾ ಎಕನಾಮಿಕ್ ಸಮಿತ್‍ನಲ್ಲಿ ಪಾಲ್ಗೊಳ್ಳುವ ಅವಕಾಶವೂ ಬಂತು ಎಂದು ಅವರು ತಿಳಿಸಿದ್ದಾರೆ.

    ಜೀವನದಲ್ಲಿ ಸಾಕಷ್ಟು ಏರಿಳಿತಗಳಾಗಿವೆ ಎಂಬುದನ್ನ ಮಾಳವಿಕಾ ಒಪ್ಪಿಕೊಳ್ತಾರೆ. ತಡೆದುಕೊಳ್ಳಲಾಗದ ನೋವಿನಿಂದ ಎಷ್ಟೋ ದಿನ ನಾನು ಬದುಕುವುದೇ ಬೇಡ ಎಂದು ಅನ್ನಿಸಿತ್ತು. ಇಂದಿಗೂ ನಾನು ಭಾರತಕ್ಕೆ ಭೇಟಿ ನೀಡಿದಾಗ ಕೃತಕ ಕೈ ಬಳಸದಿದ್ದರೆ ತರತಮ್ಯ ಎದುರಿಸುತ್ತೇನೆ. ಆದ್ರೆ ನಾನು ಅದನ್ನ ಬದಲಾಯಿಸುವ ಮಾರ್ಗದಲ್ಲಿದ್ದೇನೆ. ಸದ್ಯಕ್ಕೆ ನಾನು ನನ್ನ ಮೊಣಕೈ ಯಿಂದಲೇ ಅಡುಗೆ ಮಾಡುವುದನ್ನ ಕಲಿಯುತ್ತಿದ್ದೇನೆ ಎಂದು ಅವರು ಹೇಳ್ತಾರೆ.

    ನೀವು ನೀವಾಗಿರುವುದೇ ನಿಮ್ಮ ದೊಡ್ಡ ಶಕ್ತಿ ಎಂಬುದನ್ನ ನಾನು ಜಗತ್ತಿಗೆ ತೋರಿಸಬೇಕಿದೆ. ನನ್ನನ್ನು ನೋಡಿ, ನಾನು ಕೈಗಳಿಲ್ಲದೆ ಪಿಹೆಚ್‍ಡಿ ಮಾಡಿದ್ದೀನಿ. ಕೆಟ್ಟ ಸನ್ನಿವೇಶ ಅಥವಾ ವಿಕಲತೆ ಜೀವನದ ಒಂದು ಭಾಗವಷ್ಟೇ… ಅದೇ ನಿಮ್ಮ ಇಡೀ ಜೀವನದ ಕಥೆಯಲ್ಲ. ನಿಮ್ಮ ಜೀವನದ ಕಥೆಯ ಸುಖಾಂತ್ಯ ಬರೆಯುವವರು- ‘ನೀವು’ ಎಂದು ಮಾಳವಿಕಾ ಪೋಸ್ಟ್ ಕೊನೆಗೊಳಿಸಿದ್ದಾರೆ.

    https://www.facebook.com/humansofbombay/photos/a.188058468069805.1073741828.188056068070045/783298078545838/?type=3