Tag: ಬನ್ನಿ ಮರ

  • ವಿಜಯದಶಮಿ ವಿಶೇಷ| ನಾವು – ನೀವು ಬನ್ನಿ ತಗೊಂಡು ಬಂಗಾರದಂಗ ಇರೋಣ!

    ವಿಜಯದಶಮಿ ವಿಶೇಷ| ನಾವು – ನೀವು ಬನ್ನಿ ತಗೊಂಡು ಬಂಗಾರದಂಗ ಇರೋಣ!

    ಭಾರತವು (India) ಸಂಸ್ಕೃತಿಗಳ ನಾಡು. ಇಲ್ಲಿ ಪ್ರತಿಯೊಂದು ಹಬ್ಬವನ್ನು ತುಂಬಾ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಲ್ಲಿನ ಸಂಸ್ಕೃತಿಗೆ ಮಾರುಹೋಗದವರಿಲ್ಲ. ಆದ್ದರಿಂದ ಭಾರತವನ್ನು ಸಂಸ್ಕೃತಿಗಳ ತವರು ಎಂದು ಕರೆಯಲಾಗುತ್ತದೆ.

    ವಿಜಯದಶಮಿ (Vijayadashami) ದಿನದಂದು ಬನ್ನಿ ಮರವನ್ನು ಶುಭದ ಸಂಕೇತವಾಗಿ ಪೂಜಿಸಲಾಗುತ್ತದೆ. ಬನ್ನಿ ಮರಕ್ಕೆ (Banni Tree) ವಿಶೇಷ ಸ್ಥಾನವನ್ನು ನೀಡಲಾಗಿದೆ. ಬನ್ನಿ ಮರವನ್ನು ಶಮೀ ವೃಕ್ಷ ಎಂದು ಮತ್ತು ಅದರ ಎಲೆಗಳನ್ನು ಗಟ್ಟಿ ಚಿನ್ನ ಎಂದು ಕರೆಯುವ ಪ್ರತೀತಿ ಇದೆ.

    ಬನ್ನಿ ಮರಕ್ಕೆ ಉತ್ತರ ಕರ್ನಾಟಕದ (North Karnataka) ಭಾಗದಲ್ಲಿ ಪೂಜ್ಯನೀಯ ಸ್ಥಾನವನ್ನು ನೀಡಲಾಗಿದೆ. ವಿಜಯ ದಶಮಿಯಂದು ಸಂಜೆಯಾಗುತ್ತಿದ್ದಂತೆ ಬನ್ನಿ ಮರದ ಎಲೆಗಳನ್ನು ತಂದು ಪೂಜಿಸಲಾಗುತ್ತದೆ. ನಂತರ ಬನ್ನಿ ಮರದ ಎಲೆಗಳನ್ನು ಚಿನ್ನದ ಗಟ್ಟಿ ಎಂದು ಕೈಯಲ್ಲಿ ಹಿಡಿದು ಮನೆ-ಮನೆಗೆ ತೆರಳಿ ಗಟ್ಟಿಯನ್ನು ಪರಸ್ಪರ ಕೊಟ್ಟು- ತೆಗೆದುಕೊಂಡು ನಾವು ನೀವು ಬಂಗಾರದ ಹಾಗೆ ಇರೋಣ ಎಂದು ಶುಭಾಶಯಗಳನ್ನು ತಿಳಿಸುತ್ತಾರೆ. ಇದನ್ನೂ ಓದಿ: ಉತ್ತರ ಕರ್ನಾಟಕ ದಸರಾದ ಸಿಹಿ ‘ತರಗ’ ಮಾಡುವ ವಿಧಾನ

    ಶಮಿ ವೃಕ್ಷಕ್ಕೆ ಯಾಕೆ ಮಹತ್ವ
    ದೇವತೆಗಳು ಅಮೃತಕ್ಕಾಗಿ ಸಮುದ್ರ ಮಂಥನ ಮಾಡಿದಾಗ ಶಮಿ ವೃಕ್ಷವು ಉದ್ಭವಾಯಿತು. ತ್ರೇತಾ ಯುಗದಲ್ಲಿ ರಾವಣನು ಸೀತೆಯನ್ನು ಅಪಹರಿಸಿ ಲಂಕೆಯಲ್ಲಿ ಇಟ್ಟಿರುತ್ತಾನೆ. ಸೀತೆಯನ್ನು ಕರೆತರಲು ರಾಮನು ಲಂಕೆಗೆ ಕಡೆ ಹೋಗುವಾಗ ಶಮಿ ವೃಕ್ಷಕ್ಕೆ ಪೂಜೆ ಮಾಡಿದ್ದ. ಆದ್ದರಿಂದಲೇ ರಾವಣನನ್ನು ಗೆದ್ದು ಸೀತೆಯನ್ನು ಕರೆತಂದನು ಎಂದುಕಥೆ ಹೇಳುತ್ತದೆ.

    ಮಹಾಭಾರತದಲ್ಲಿ ಶಮಿ ವೃಕ್ಷದ ಬಗ್ಗೆ ಉಲ್ಲೇಖವಿದೆ. ಪಾಂಡವರು ವನವಾಸಕ್ಕೆ ಹೋಗುವಾಗ ತಮ್ಮ ಆಯುಧಗಳನ್ನು ಕಟ್ಟಿ ಶಮಿ ವೃಕ್ಷದ ಮೇಲೆ ಇಟ್ಟು ಹೋಗಿದ್ದರು. ಆಯುಧಗಳನ್ನು ರಕ್ಷಿಸಲು ಶಮಿ ವೃಕ್ಷವನ್ನು ಪೂಜಿಸಲಾಗಿತ್ತು ಎಂದು ಉಲ್ಲೇಖವಿದೆ. ಇದನ್ನೂ ಓದಿ: ದಸರಾ ವಿಶೇಷ: ದೇವಿಗೆ ಚಾಮುಂಡಿ, ರಕ್ತೇಶ್ವರಿ ಹೆಸರು ಬಂದಿದ್ದು ಹೇಗೆ?

    ಶ್ರೀರಾಮನ ಪಟ್ಟಾಭಿಷೇಕ ನಡೆದ ದಿನದಂದು ಪಾಂಡವರು ವನವಾಸವನ್ನು ಮುಗಿಸಿದ ಪವಿತ್ರ ದಿನವೆಂದು ಕಥೆ, ಪುರಾಣಗಳಲ್ಲಿ ಹೇಳಲಾಗುತ್ತದೆ. ಅಜ್ಞಾತ ವಾಸ ಮುಗಿಸಿ ಬರುವಾಗ ಪಾಂಡವರು ಶಮಿ ವೃಕ್ಷಕ್ಕೆ ಪೂಜಿಸಿ ಆಯುಧಗಳು ಕೆಳಗಡೆ ಇಳಿಸಿದ್ದರು.

    ವಿಜಯ ದಶಮಿಯಂದು ಪಾಂಡವರು ವನವಾಸ ಮುಗಿಸಿ ಕಾಡಿನಿಂದ ಭೂಮಿಗೆ ಮರಳಿದರು ಎಂದು ಉಲ್ಲೇಖಿತವಾಗಿದೆ. ಈ ಕಾರಣಕ್ಕೆ ಕೃಷಿಕರು ಮನೆಯಲ್ಲಿ ಆಯುಧಗಳನ್ನು ಪೂಜಿಸಿ ಬನ್ನಿ ಸಸಿಯನ್ನು ನೆಟ್ಟು ನಂತರ ಮುಡಿಯುವ ಪದ್ಧತಿ ಬಂದಿದೆ ಎಂದು ಹೇಳಲಾಗುತ್ತದೆ.

    “ಕಲ್ಲು ಕಡಬು ಮಾಡಿ, ಮುಳ್ಳು ಸಾವಿಗೆ ಮಾಡಿ, ಬನ್ನಿಯ ಎಲಿಯಾಗಿ ಎಡೆಯ ಮಾಡಿ, ಪಾಂಡವರು ಉಂಡು ಹೋಗ್ಯಾರೋ ವನವಾಸ”  ಜನಪದ ಹಾಡು ಹೀಗೆ ಬನ್ನಿ ಎಲೆಯ ಮಹತ್ವವನ್ನು ವಿವರಿಸುತ್ತದೆ. ಅಂದು ಮಕ್ಕಳು ,ತಾಯಂದಿರಿಗೆ ಬನ್ನಿ ಮೂಡಿಸುವುದರ ಮೂಲಕ ಹಾಗೂ ಹೆಂಡತಿ ಗಂಡನಿಗೆ ಬನ್ನಿ ಮೂಡಿಸುವುದರ ಮೂಲಕ ಕೃತಜ್ಞತೆಗಳನ್ನು ತಿಳಿಸಲಾಗುತ್ತದೆ.

  • ಕೋಲಾರದಲ್ಲಿ ಬನ್ನಿ ಮರ ಕಡಿದು ದಸರಾ ಆಚರಣೆ

    ಕೋಲಾರದಲ್ಲಿ ಬನ್ನಿ ಮರ ಕಡಿದು ದಸರಾ ಆಚರಣೆ

    ಕೋಲಾರ: ನಗರದ ಹೊರವಲಯದ ಕೊಂಡರಾಜನಹಳ್ಳಿ ಬಳಿ ವಿಜಯದಶಮಿ ಪ್ರಯುಕ್ತ ಬನ್ನಿ ಮರವನ್ನು ಕಡಿದು ದಸರಾವನ್ನು ಆಚರಿಸಲಾಯಿತು

    ಕೋಲಾರ ಉಪ ವಿಭಾಗಾಧಿಕಾರಿ ಸೋಮಶೇಖರ್ ಮೈಸೂರು ಪೇಟ ಧರಿಸಿ ಕೋಲಾರ ತಾಲೂಕು ಆಡಳಿತ ವಿಜಯಶಾಲಿಯಾಗಲಿ ಎಂದು ಪ್ರಾರ್ಥಿಸಿ ಬನ್ನಿ ಮರದ ಪೂಜೆಯನ್ನು ನೆರವೇರಿಸಿದರು. ಪೂಜೆಯ ನಂತರ ಬನ್ನಿ ಮರವನ್ನು ಕಡಿಯಲಾಯಿತು.

    ಈ ಹಿಂದೆ ಪ್ರತಿವರ್ಷ ಆಯುಧ ಪೂಜೆಯ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಮರವನ್ನು ಕಡಿಯಲಾಗುತಿತ್ತು. ಆದರೆ ಈಗ ಬನ್ನಿ ಮರವನ್ನು ಕಡಿಯುವುದಿಲ್ಲ. ಬದಲಾಗಿ ಬನ್ನಿ ಎಲೆಯನ್ನು ಅಲಂಕರಿಸಿರುವ ಬಾಳೆಯ ದಿಂಡನ್ನು ಕಡಿಯಲಾಗುತ್ತದೆ.

    ಈ ಬನ್ನಿ ಎಲೆಗಳಿರುವ ಬಾಳೆ ದಿಂಡನ್ನು ಕಡಿದ ನಂತರ ಮರದ ಎಲೆಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ವಿಜಯ ನಮ್ಮದಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರದ್ದಾಗಿದೆ. ಈ ವಿಶೇಷ ಪೂಜೆಯಲ್ಲಿ ನೂರಾರು ಭಕ್ತರು ಭಾಗವಹಿಸಿ ದಿಂಡನ್ನು ಕಡಿದ ನಂತರ ಎಲೆಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ.

    ಬನ್ನಿಮರದ ವಿಶೇಷತೆ ಏನು?
    ವನವಾಸಕ್ಕೆ ಹೋಗುವ ಮುನ್ನ ಪಾಂಡವರು ತಮ್ಮ ಶಸ್ತ್ರಾಸ್ತ್ರಗಳನ್ನು ಬನ್ನಿ ಮರದಲ್ಲಿ ಬಚ್ಚಿಟ್ಟಿದ್ದರು. ಅಜ್ಞಾತವಾಸ, ವನವಾಸ ಮುಗಿಸಿದ ಬಳಿಕ ಬನ್ನಿಮರಕ್ಕೆ ಪೂಜೆ ಸಲ್ಲಿಸಿ ಅಲ್ಲಿದ್ದ ಶಸ್ತ್ರಗಳನ್ನು ಇಳಿಸಿ ಮಹಾಭಾರತ ಯುದ್ಧದಲ್ಲಿ ಭಾಗವಹಿಸಿದ್ದರು. ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಯುದ್ಧ ನಡೆಸಿದ್ದರಿಂದಲೇ ಪಾಂಡವರು ಮಹಾಭಾರತ ಕದನವನ್ನು ಜಯಗಳಿಸಿದರು ಎನ್ನುವ ನಂಬಿಕೆಯಿದೆ. ಹೀಗಾಗಿ ಈ ಗ್ರಾಮಸ್ಥರು ಕೃತಕ ಬನ್ನಿ ಮರವನ್ನೇ ಕಡಿದು ವಿಶೇಷವಾಗಿ ಹಬ್ಬವನ್ನು ಆಚರಿಸುತ್ತಾರೆ.

  • ಎತ್ತುಗಳಿಗೆ ಬೆತ್ತದಿಂದ ಹೊಡೆದು ಮುಳ್ಳಿನ ದಾರಿ ದಾಟಿಸಿ ಮೌಢ್ಯಾಚರಣೆ ಮೆರೆದ ಜನರು!

    ಎತ್ತುಗಳಿಗೆ ಬೆತ್ತದಿಂದ ಹೊಡೆದು ಮುಳ್ಳಿನ ದಾರಿ ದಾಟಿಸಿ ಮೌಢ್ಯಾಚರಣೆ ಮೆರೆದ ಜನರು!

    ಚಿಕ್ಕೋಡಿ: ಬೆತ್ತ ಹಿಡಿದು ನಿಂತ ಯುವಕರು ಎದುರು ಬರುವ ಎತ್ತಿನ ಮೇಲೆ ಹಲ್ಲೆ ಮಾಡಿ, ಮುಳ್ಳಿನ ದಾರಿ ತುಳಿದು ಬರುವಂತೆ ಹಿಂಸಿಸುವ ವಿಚಿತ್ರ ಮೌಢ್ಯಾಚರಣೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕಾಗವಾಡದಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ಕೆಲವು ಭಾಗದಲ್ಲಿ ಕಾರಹುಣ್ಣಿಮೆ ನಂತರದ ದಿನಗಳಲ್ಲಿ ಕರಿ ಹಾಯುವ ಆಚರಣೆ ನಡೆಯುತ್ತದೆ. ಮುಳ್ಳು ಇರುವ ಬನ್ನಿ ಮರದ ರೆಂಬೆಗಳನ್ನು ತಂದು ರಸ್ತೆಯ ಮೇಲೆ ಹರಡಲಾಗಿರುತ್ತದೆ. ಇದರ ಮೇಲೆ ಗ್ರಾಮದ ಅಥವಾ ಪಟ್ಟಣ ಗೌಡರ ಮನೆಯ ಎತ್ತುಗಳನ್ನು ಹಿಡಿದು ತಂದು ಬನ್ನಿ ಮುಳ್ಳು ಸಾಲನ್ನು ದಾಟಿಸಲಾಗುತ್ತದೆ. ಆದರೆ ಎತ್ತುಗಳು ಬೆದರಿ ಹಿಂದಕ್ಕೆ ಸರಿದಾಗ ಅವುಗಳನ್ನು ಹಕ್ಕುದಾರರು ಹೊಡೆಯುತ್ತಾರೆ. ಹಕ್ಕುದಾರನ್ನು ಮೊದಲೇ ನಿರ್ಧರಿಸಲಾಗಿರುತ್ತದೆ. ಅವರಿಗೆ ಮಾತ್ರ ಎತ್ತುಗಳನ್ನು ಹೊಡೆಯುವ ಅವಕಾಶವಿರುತ್ತದೆ.

    ಎತ್ತುಗಳು ಬನ್ನಿ ಮುಳ್ಳುಗಳನ್ನು ದಾಟಿ ಹೋದರೆ ಮಳೆ ಬೆಳೆ ಉತ್ತಮವಾಗಿ ಬರುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ನಿನ್ನೆ 100 ಕ್ಕೂ ಹೆಚ್ಚು ಜನರು ಎತ್ತುಗಳ ಮೇಲೆ ಬೆತ್ತದಿಂದ ಹೊಡೆದು ಬನ್ನಿ ಮುಳ್ಳು ದಾಟಿಸಿದರು.

    ಬುಧವಾರ ಸಂಜೆ ಕಾಗವಾಡ ಪಟ್ಟಣದಲ್ಲಿ ಜನ ಸಮೂಹವೇ ಎತ್ತುಗಳು ಕರಿ ಹಾಯುವುದನ್ನು ನೋಡಲು ಕಾದು ನಿಂತಿತ್ತು. ಸುಮಾರು ವರ್ಷಗಳಿಂದ ನಡೆದು ಬಂದ ಸಂಪ್ರದಾಯ ಇದಾಗಿದ್ದು, ಎತ್ತುಗಳಿಗೆ ಬೆತ್ತದಿಂದ ಮನ ಬಂದಂತೆ ಹಲ್ಲೆ ಮಾಡಿದ್ದು ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಯಿತು.