Tag: ಬದನೆಕಾಯಿ

  • ಬೆಲೆ ಏರಿಕೆ ವಿರೋಧಿಸಿ ಸದನದಲ್ಲಿ ಹಸಿ ಬದನೆಕಾಯಿ ತಿಂದ ಸಂಸದೆ

    ಬೆಲೆ ಏರಿಕೆ ವಿರೋಧಿಸಿ ಸದನದಲ್ಲಿ ಹಸಿ ಬದನೆಕಾಯಿ ತಿಂದ ಸಂಸದೆ

    ನವದೆಹಲಿ: ಬೆಲೆ ಏರಿಕೆ ವಿರೋಧಿಸಿ ತೃಣಮೂಲ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಲೋಕಸಭೆಯಲ್ಲಿ ಎದ್ದು ನಿಂತು ಹಸಿ ಬದನೆಕಾಯಿಯನ್ನು ತಿಂದಿದ್ದಾರೆ.

    ಮಳೆಗಾಲದ ಸಂಸತ್ ಅಧಿವೇಶನ ಶುರುವಾಗಿ ಎರಡು ವಾರ ಮುಗಿದ ನಂತರ ಸುಗಮ ಕಲಾಪ ನಡೆದಿದೆ. ಕಾಂಗ್ರೆಸ್‍ನ ನಾಲ್ವರು ಸಂಸದರ ಮೇಲಿನ ಅಮಾನತು ರದ್ದು ಬೆನ್ನಲ್ಲೇ ಸುಗಮ ಕಲಾಪಕ್ಕೆ ವಿಪಕ್ಷಗಳು ಅವಕಾಶ ಮಾಡಿಕೊಟ್ಟಿದೆ. ಇಂದು ಜಿಎಸ್‍ಟಿ ಹೇರಿಕೆ, ಹಣದುಬ್ಬರ ಮೇಲೆ ಚರ್ಚೆಗೆ ಕೇಂದ್ರ ಸರ್ಕಾರ ಕೊನೆಗೂ ಅವಕಾಶ ಮಾಡಿಕೊಟ್ಟಿದೆ. ಇವತ್ತು ಬೆಳಗ್ಗೆ ಕಲಾಪ ಶುರುವಾಗುತ್ತಲೇ ದರ ಏರಿಕೆ ಪ್ರಸ್ತಾಪಿಸಿ ಸಂಸತ್‍ನ ಉಭಯ ಸದನಗಳಲ್ಲೂ ವಿಪಕ್ಷಗಳು ಗದ್ದಲ ಎಬ್ಬಿಸಿದರು.

    ಹಣದುಬ್ಬರ, ತೈಲ ಬೆಲೆ ಏರಿಕೆ ಪ್ರಸ್ತಾಪಿಸಿದ ಕಾಂಗ್ರೆಸ್‍ನ ಮನೀಶ್ ತಿವಾರಿ, ಡಿಎಂಕೆಯ ಕನಿಮೋಳಿ, ಟಿಎಂಸಿಯ ಕಕೊಳಿ ಘೋಷ್ ದಸ್ತಿದಾರ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಕೊಳಿ ಘೋಷ್ ಅವರಂತೂ, ಹಸಿ ಬದನೆ ಕಚ್ಚಿ, ಜನ ಹಸಿ ತರಕಾರಿ ತಿನ್ನಬೇಕೆಂದು ಬಯಸ್ತಿದ್ಯಾ ಎಂದು ಆಕ್ರೋಶ ಹೊರಹಾಕಿದರು.

    ಇತ್ತೀಚಿಗೆ ಕಡಿಮೆ ಅವಧಿಯಲ್ಲಿಯೇ ಸಿಲಿಂಡರ್ ದರ ನಾಲ್ಕು ಬಾರಿ ಹೆಚ್ಚಾಗಿದೆ. ಒಂದೊಮ್ಮೆ 600 ರೂ. ಇದ್ದ ಗ್ಯಾಸ್ ಬೆಲೆ ಈಗ 1,100 ರೂಪಾಯಿ ದಾಟಿದೆ. ಸಾಮಾನ್ಯರಿಗೆ ಅಡುಗೆ ಮಾಡಿಕೊಳ್ಳುವುದು ಭಾರವಾಗಿದೆ. ನಾವು ಹಸಿ ತರಕಾರಿಗಳನ್ನು ತಿನ್ನಬೇಕೆಂದು ಸರ್ಕಾರ ಬಯಸುತ್ತದೆಯೇ ಎಂದು ಪ್ರಶ್ನಿಸಿದ ಅವರು, ಕಳೆದ ಕೆಲವು ತಿಂಗಳುಗಳಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆಗಳನ್ನು ನಾಲ್ಕು ಬಾರಿ ಹೆಚ್ಚಿಸಲಾಗಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

    ಬಡವರಿಗೆ ಹಾಗೂ ಸಾಮಾನ್ಯರಿಗೆ ತೊಂದರೆ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೂಡಲೇ ಸಿಲಿಂಡರ್ ದರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಪರ್ವತಮುಖಿಯಲ್ಲಿ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿದ ಐವರು – ನಾಗರಪಂಚಮಿಯಂದು ಸುಬ್ರಹ್ಮಣ್ಯಕ್ಕೆ ಪ್ರವೇಶವಿಲ್ಲ

    ಬಿಜೆಪಿಯ ನಿಶಿಕಾಂತ್ ದುಬೇ, ಕೇಂದ್ರದ ಕ್ರಮಗಳನ್ನು ಸಮರ್ಥನೆ ಮಾಡಿಕೊಂಡರು. ಶ್ರೀಲಂಕಾ, ಬಾಂಗ್ಲಾ, ಭೂತಾನ್, ಬಾಂಗ್ಲಾ ನೋಡಿ. ನಮ್ಮಲ್ಲಿನ ಬಡವರಿಗೆ ಎರಡು ಹೊತ್ತಿನ ಊಟವಾದರೂ ಸಿಗುತ್ತದೆ. ಅದಕ್ಕೆ ನಾವು ಪ್ರಧಾನಿ ಮೊದಿಗೆ ಧನ್ಯವಾದ ಹೇಳ್ಬೇಕು ಎಂದರು. ಇದನ್ನೂ ಓದಿ: ಕಸದ ಜೊತೆ ಡಂಪಿಂಗ್ ಯಾರ್ಡ್‍ಗೆ ಡಂಪ್ ಆದ ಗಾರ್ಬೇಜ್ ಆಟೋ – ಚಾಲಕ ಅಪಾಯದಿಂದ ಪಾರು

    Live Tv
    [brid partner=56869869 player=32851 video=960834 autoplay=true]

  • ದೇಶಿ ಶೈಲಿಯ ‘ಹಸಿ ಕೈ ಗೊಜ್ಜು’ ಮಾಡುವ ವಿಧಾನ

    ದೇಶಿ ಶೈಲಿಯ ‘ಹಸಿ ಕೈ ಗೊಜ್ಜು’ ಮಾಡುವ ವಿಧಾನ

    ಇಂದು ನಾವು ಹೇಳಿಕೊಡುತ್ತಿರುವ ಸಾರಿನ ಹೆಸರು ‘ಹಸಿ ಕೈ ಗೊಜ್ಜು’. ಈ ಸಾರನ್ನು ಮುದ್ದೆ, ಅನ್ನದ ಜೊತೆ ಸವಿದರೆ ಬಹಳ ರುಚಿಯಾಗಿರುತ್ತೆ. ಸಿಟಿಯಲ್ಲೆ ಇದ್ದವರಿಗೆ ಈ ಸಾರಿನ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ. ಅದಕ್ಕೆ ಇಂದು ನೀವು ನಿಮ್ಮ ಮನೆಯಲ್ಲಿ ‘ಹಸಿ ಕೈ ಗೊಜ್ಜು’ ಟ್ರೈ ಮಾಡಿ ರುಚಿ ನೋಡಿ. ಇದನ್ನು ಮಾಡುವುದು ತುಂಬಾ ಸುಲಭ.

    ಬೇಕಾಗಿರುವ ಸಾಮಾಗ್ರಿಗಳು:
    * ಬದನೆಕಾಯಿ – 2
    * ಟೊಮೊಟೊ – 1
    * ಕಟ್ ಮಾಡಿದ ಈರುಳ್ಳಿ – 1
    * ಮೆಣಸಿನಕಾಯಿ – 5
    * ಹುಣಸೆಹಣ್ಣು – 1/4 ಗ್ರಾಂ
    * ಜೀರಿಗೆ – 1/4 ಟೀಸ್ಪೂನ್
    * ಕೊತ್ತಂಬರಿ ಸೊಪ್ಪು – 1/2 ಟೀಸ್ಪೂನ್
    * ರುಚುಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಮೊದಲಿಗೆ ಹುಣಸೆಹಣ್ಣನ್ನು ನೀರಿನಲ್ಲಿ ನೆನಸಿಡಿ.
    * ಬದನೆಕಾಯಿಯನ್ನು ಚಾಕುವಿನಿಂದ ಚುಚ್ಚಿ ಅದನ್ನು ಗ್ಯಾಸ್ ಉರಿಯಲ್ಲಿ ಬೇಯಿಸಿ. ಅದೇ ರೀತಿ ಟೊಮೆಟೊ ಮತ್ತು ಮೆಣಸಿನಕಾಯಿಯನ್ನು ಬೇಯಿಸಿ ಪಕ್ಕಕ್ಕೆ ಇಡಿ.
    * ಒಂದು ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಟೊಮೆಟೊ, ಮೆಣಸಿನಕಾಯಿ ಹಾಗೂ ಬದನೆಕಾಯಿ ಹಾಕಿ ಸಂಪೂರ್ಣ ಮೆತ್ತಗೆ ಆಗುವವರೆಗೂ ಫ್ರೈ ಮಾಡಿ.
    * ಈಗ ಫ್ರೈಗೆ ಈರುಳ್ಳಿ, ಹುಣಸೆಹಣ್ಣು ಹಾಗೂ ಉಪ್ಪು ಹಾಕಿ ಅಂತಿಮವಾಗಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.

    Live Tv
    [brid partner=56869869 player=32851 video=960834 autoplay=true]

  • ಬದನೆಕಾಯಿ, ಟೊಮೆಟೊ ಬೆಳೆದಿದ್ದ ಅನ್ನದಾತ ಕಂಗಾಲು

    ಬದನೆಕಾಯಿ, ಟೊಮೆಟೊ ಬೆಳೆದಿದ್ದ ಅನ್ನದಾತ ಕಂಗಾಲು

    ಹಾವೇರಿ: ಮಹಾಮಾರಿ ಕೊರೊನಾ ವೈರಸ್ ಎರಡನೇ ಅಲೆಯಿಂದ ರೈತರೂ ಕೂಡ ಕಂಗಾಲಾಗಿದ್ದಾರೆ. ತಾವು ಬೆಳೆದಿದ್ದ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ಕಣ್ಣೀರು ಹಾಕುತ್ತಿದ್ದಾರೆ.

    ಹಾವೇರಿಯ ಕನಕಾಪುರ ಗ್ರಾಮದ ರೈತ ಪಕ್ಕೀರಗೌಡ ಅವರು ತಾವು ಬೆಳೆದಿದ್ದ ಬದನೆಕಾಯಿ, ಟೊಮೆಟೊಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ಬೇಸರ ವ್ಯಕ್ತಪಡಿಸಿದ್ದಾರೆ.

    ಫಕೀರಪ್ಪ ಅವರು ತಮ್ಮ ಒಂದು ಎಕರೆಯಲ್ಲಿ ಬೆಳೆದ ಬದನೆಕಾಯಿ ಬೆಳೆ ಫಸಲಿಗೆ ಬರುತ್ತಿದ್ದಂತೆ ಲಾಕ್ ಡೌನ್ ಘೋಷಣೆಯಾಗಿದೆ. ಹೀಗಾಗಿ ಸದ್ಯ ಬದನೆಕಾಯಿ ಹಾಗೂ ಟೊಮೆಟೊ ಗಿಡದಲ್ಲಿ ಹಣ್ಣಾಗಿ ಹಾಳಾಗುತ್ತಿದ್ದು, ಬದನೆಕಾಯಿ ಕಿತ್ತು ಬೀದಿಗೆ ಹಾಕೋ ಪರಿಸ್ಥಿತಿಗೆ ಬಂದಿದೆ. ಇತ್ತ ದಲ್ಲಾಳಿಗಳು ನೂರು ರೂಪಾಯಿಗೆ ನಾಲ್ಕು ಟ್ರೇ ಬದನೆಕಾಯಿ ಕೇಳುತ್ತಿದ್ದಾರೆ. ಆದರೆ ಈ ಹಣ ವಾಹನದ ಬಾಡಿಗೆಯೂ ಬಾರದ ಹಿನ್ನೆಲೆಯಲ್ಲಿ ರೈತ ಕಣ್ಣೀರು ಹಾಕುತ್ತಿದ್ದಾರೆ.

    ಸುಮಾರು ಮೂರು ಎಕರೆ ಜಮೀನು ಹೊಂದಿರುವ ರೈತ, 20 ರಿಂದ 30 ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದರು. ಒಂದರಿಂದ ಒಂದೂವರೆ ಲಕ್ಷ ರೂಪಾಯಿ ಅಂದಾಜು ಆದಾಯದ ನಿರೀಕ್ಷೆಯಲ್ಲಿದ್ದ ರೈತನಿಗೆ ಲಾಕ್ ಡೌನ್ ನಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಮದುವೆ, ಸಭೆ ಸಮಾರಂಭಗಳು ನಡೆಯದ ಕಾರಣ ಬೇಡಿಕೆ ಕೂಡ ಕಡಿಮೆಯಾಗಿದೆ. ಹೀಗಾಗಿ ಫಕೀರಪ್ಪ ಕಣ್ಣೀರು ಹಾಕುತ್ತಿದ್ದಾರೆ.

  • ಪಾತಾಳಕ್ಕೆ ಕುಸಿದ ಬದನೆಕಾಯಿ ಬೆಲೆ- ರೈತರಿಂದಲೇ ಬೆಳೆ ನಾಶ

    ಪಾತಾಳಕ್ಕೆ ಕುಸಿದ ಬದನೆಕಾಯಿ ಬೆಲೆ- ರೈತರಿಂದಲೇ ಬೆಳೆ ನಾಶ

    ರಾಯಚೂರು: ಏಕಾಏಕಿ ಬೆಲೆ ಇಳಿಕೆಯಾದ ಹಿನ್ನೆಲೆ ರಾಯಚೂರಿನ ಮನ್ಸಲಾಪುರದಲ್ಲಿ ರೈತ ತಾನೇ ಬೆಳೆದ ಬೆಳೆಯನ್ನ ಕಿತ್ತಿ ಹಾಕಿದ್ದಾರೆ. ಐದು ಎಕರೆ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬದನೆಗಿಡವನ್ನ ರೈತ ಶ್ರೀಧರ ಸಾಗರ್ ಕಿತ್ತು ಹಾಕಿದ್ದಾರೆ.

    ಸಂಪೂರ್ಣ 5 ಎಕರೆ ಬದನೆ ಬಿತ್ತನೆ ಮಾಡಿ, ಹನಿನೀರಾವರಿ ಅಳವಡಿಸಿ ಸುಮಾರು 4 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಆದ್ರೆ ದರ ಇಳಿಕೆ ಹಿನ್ನೆಲೆ ಬದನೆಗಿಡ ಕಿತ್ತಿದ್ದಾರೆ. ಈ ಮೊದಲು ಪ್ರತಿ ಚೀಲಕ್ಕೆ 1,500 ರೂಪಾಯಿವರೆಗೆ ಬೆಲೆ ಇತ್ತು. ಆದ್ರೆ ಈಗ 300 ರಿಂದ 600 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಈಗ ಇನ್ನಷ್ಟು ಖರ್ಚು ಮಾಡಿ ಬೆಳೆ ಬೆಳೆದರೆ ನಷ್ಟದ ಪ್ರಮಾಣವು ಹೆಚ್ಚಾಗುವುದು. ಹಾಗಾಗಿ ರೈತ ಬೆಳೆಯನ್ನ ನಾಶ ಮಾಡುತ್ತಿದ್ದಾರೆ.

    ಹದಿನೈದು ದಿನಗಳ ಹಿಂದೆ ಮಾರುಕಟ್ಟೆಯಲ್ಲಿ 60 ರೂಪಾಯಿಗೆ ಒಂದು ಕೆ.ಜಿ ಇದ್ದ, ಬದನೆಕಾಯಿ ಈಗ 15 ಗೆ ಒಂದು ಕೆ.ಜಿ ಆಗಿದೆ. ಶ್ರಾವಣಮಾಸದ ಬಳಿಕ ತರಕಾರಿ ಬೆಲೆಯಲ್ಲಿ ಏರುಪೇರಾಗಿದ್ದು ಬದನೆಕಾಯಿ ಬೆಲೆಯಂತೂ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ತರಕಾರಿ ಬೆಳೆಗಾರರು ನಷ್ಟದಲ್ಲಿದ್ದಾರೆ.

  • ಲಾಕ್‍ಡೌನ್‍ನಿಂದ ಸರಳವಾದ ಮದ್ವೆಗಳು- ಬದನೆಕಾಯಿ ಬೆಳೆದ ರೈತನಿಗೆ ನಷ್ಟ

    ಲಾಕ್‍ಡೌನ್‍ನಿಂದ ಸರಳವಾದ ಮದ್ವೆಗಳು- ಬದನೆಕಾಯಿ ಬೆಳೆದ ರೈತನಿಗೆ ನಷ್ಟ

    ರಾಯಚೂರು: ತಾಲೂಕಿನ ಪಲ್ಕಂದೊಡ್ಡಿಯ ರೈತ ಬಸವರಾಜ ಎರಡು ಎಕರೆಯಲ್ಲಿ ಬೆಳೆದಿದ್ದ ಬದನೆಕಾಯಿ ಬೆಳೆಯನ್ನು ಲಾಕ್‍ಡೌನ್ ಹಿನ್ನೆಲೆ ತಾನೇ ಕಿತ್ತು ಹಾಕುತ್ತಿದ್ದಾರೆ.

    ಮೂರು ತಿಂಗಳ ಹಿಂದೆ ರೈತ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬದನೆ ನಾಟಿಮಾಡಿದ್ದರು. ಕಳೆದೊಂದು ತಿಂಗಳಿನಿಂದ ಬದನೆಕಾಯಿ ಇಳುವರಿ ಬರುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆಯಿಲ್ಲ. ಹೀಗಾಗಿ ಬೆಳೆಯನ್ನೇ ಕಿತ್ತುಹಾಕಿದ್ದಾರೆ. ಬೇಸಿಗೆಯ ಕಾಲ ಮದುವೆಗಳ ಕಾಲ ಎನ್ನುವ ವಾಡಿಕೆ. ಆದರೆ ಈ ಬಾರಿ ಬೇಸಿಗೆಯಲ್ಲಿ ಕೊರೊನಾ ತಡೆಯಲು ಲಾಕ್‍ಡೌನ್ ಮಾಡಲಾಗಿದೆ. ಇದರಿಂದ ಕೆಲ ಮದುವೆಗಳು ಸರಳವಾಗಿ ನಡೆದರೆ, ಬಹಳಷ್ಟು ಜನ ಮುಹೂರ್ತವನ್ನು ಮುಂದೂಡಿದ್ದಾರೆ.

    ಮದುವೆಯ ಊಟಕ್ಕೆ ಬದನೆಕಾಯಿ ಸಾಕಷ್ಟು ಪ್ರಮಾಣದಲ್ಲಿ ಬಳಕೆಯಾಗುತ್ತೆ. ಇದರಿಂದ ಬೇಸಿಗೆಯಲ್ಲಿ ಇಳುವರಿ ಬರುವ ಬದನೆಕಾಯಿಯು ಲಾಭ ತರುತ್ತದೆ ಎಂಬ ಭರವಸೆಯಿಂದ ಬದನೆ ಬೆಳೆದಿದ್ದರು. ಈಗ ಮಾರುಕಟ್ಟೆಯಲ್ಲಿ 16 ಕೆಜಿಯ ಬದನೆಕಾಯಿ ಒಂದು ಚೀಲಕ್ಕೆ ಕೇವಲ 30ರೂ ದರ ನಿಗದಿಯಾಗುತ್ತಿದೆ. ಲಾಕ್‍ಡೌನ್ ಹಿನ್ನೆಲೆ ಮದುವೆ, ಇತರೆ ಕಾರ್ಯಕ್ರಮಗಳೂ ಇಲ್ಲದಿರುವುದರಿಂದ ಕೊಳ್ಳುವವರೂ ಇಲ್ಲ. ಉತ್ತಮ ಬೆಲೆ ಸಿಗುವ ಭರವಸೆಯಿಲ್ಲದ ಹಿನ್ನೆಲೆ ಬದನೆ ಗಿಡವನ್ನು ಕಿತ್ತು ಹಾಕುತ್ತಿದ್ದಾರೆ.

    ಒಂದು ವೇಳೆ ಬೆಳೆಯನ್ನು ಹಾಗೆ ಬಿಟ್ಟರೆ ಔಷಧಿ, ಗೊಬ್ಬರಕ್ಕೆ ಖರ್ಚು ಮಾಡಬೇಕಾಗುತ್ತದೆ. ಆಗ ಆಗುವ ಹಾನಿಗೆ ದೊಡ್ಡ ಸಾಲಗಾರನಾಗಬೇಕಾಗುತ್ತದೆ ಎಂದು ಈಗಲೇ ಬೆಳೆಯನ್ನು ತೆಗೆಯುತ್ತಿರುವುದಾಗಿ ರೈತ ಬಸವರಾಜ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

  • ಮಲಬದ್ಧತೆಗೆ ಬದನೆಕಾಯಿ ಬಳಸಿ ಜೀವಕ್ಕೆ ಕುತ್ತು ತಂದುಕೊಂಡ!

    ಮಲಬದ್ಧತೆಗೆ ಬದನೆಕಾಯಿ ಬಳಸಿ ಜೀವಕ್ಕೆ ಕುತ್ತು ತಂದುಕೊಂಡ!

    ಚೀನಾ: ಮಲಬದ್ಧತೆಯಿಂದ ರೋಸಿ ಹೋಗಿದ್ದ ವ್ಯಕ್ತಿಯೊಬ್ಬ ಮನೆ ಮದ್ದಿನ ಮೂಲಕ ಗುಣಪಡಿಸಕೊಳ್ಳಬಹುದೆಂದು ತಿಳಿದು, 30 ಸೆಂ.ಮೀ ಉದ್ದದ ಬದನೆಕಾಯಿಯನ್ನು ಬಳಸಿ ತೀವ್ರವಾಗಿ ಅನಾರೋಗ್ಯಕ್ಕೆ ತುತ್ತಾದ ಘಟನೆ ಚೀನಾದಲ್ಲಿ ನಡೆದಿದೆ.

    50 ವರ್ಷದ ವ್ಯಕ್ತಿಯೊಬ್ಬ ಮಲಬದ್ಧತೆಯ ಕಾಯಿಲೆಯಿಂದ ಬೇಸತ್ತಿದ್ದನು. ಹೀಗಾಗಿ ಮನೆ ಮದ್ದು ಇದಕ್ಕೆ ಪರಿಹಾರವೆಂದು ಭಾವಿಸಿ ಬದನೆಕಾಯಿಯನ್ನು ಬಳಸಿದ್ದಾನೆ. ಆದರೆ ಇದು ಅವನ ಕಾಯಿಲೆ ಗುಣಪಡಿಸುವುದಕ್ಕಿಂತ ಅವನ ಜೀವಕ್ಕೆ ಆಪತ್ತು ತಂದಿದೆ.

    ಬದನೆಕಾಯಿ ಬಳಸಿದ ಎರಡು ದಿನದ ನಂತರ ಆತನಲ್ಲಿ ಮಲಬದ್ಧತೆ ಮತ್ತು ಕಿಬ್ಬೊಟ್ಟೆಯಲ್ಲಿ ಹೆಚ್ಚಿನ ನೋವುಕಾಣಿಸಿಕೊಂಡಿದೆ. ವಿಪರೀತ ವಾಕರಿಕೆ ಮತ್ತು ವಾಂತಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆಸ್ಪತ್ರೆಯಲ್ಲಿ ಎಕ್ಸ್‍ರೇ ಮಾಡಿದ ವೇಳೆ ಸುಮಾರು 30 ಸೆಂ.ಮೀ ಬದನೆಕಾಯಿಯು ದೇಹದ ಒಳಗೆ ಸಿಕ್ಕಿಕೊಂಡಿರುವುದು ಕಂಡುಬಂದಿದೆ. ಇದು ಅವನ ಶ್ವಾಸಕೋಶಕ್ಕೆ ಹಾನಿಯುಂಟುಮಾಡಿದೆ. ಕೂಡಲೇ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಬದನೆಕಾಯಿಯನ್ನು ದೇಹದಿಂದ ಹೊರತೆಗೆದಿದ್ದಾರೆ. ಸದ್ಯ ವ್ಯಕ್ತಿಯು ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

    ನಮ್ಮಲ್ಲಿ ಅನೇಕರು ಕಾಯಿಲೆಗಳನ್ನು ಗುಣಪಡಿಸಲು ಮನೆಮದ್ದುಗಳನ್ನು ಉಪಯೋಗಿಸುವುದು ಅನಾಧಿ ಕಾಲದಿಂದಲೂ ರೂಢಿಯಲ್ಲಿದೆ. ಈ ರೀತಿ ಮನೆಮದ್ದುಗಳನ್ನು ಉಪಯೋಗಿಸುವಾಗ ಸಾಕಷ್ಟು ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಸ್ವಲ್ಪ ಎಚ್ಚರ ತಪ್ಪಿದರೂ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿರುತ್ತದೆ.