Tag: ಬಡವರು

  • ಪ್ರತಿನಿತ್ಯ 60 ಸಾವಿರ ಜನರಿಗೆ ಊಟ ಕಲ್ಪಿಸಿದ ಮುನಿರತ್ನ

    ಪ್ರತಿನಿತ್ಯ 60 ಸಾವಿರ ಜನರಿಗೆ ಊಟ ಕಲ್ಪಿಸಿದ ಮುನಿರತ್ನ

    ಬೆಂಗಳೂರು: ಇಡೀ ಭೂಮಂಡಲವೇ ಮಹಾಮಾರಿ ಕೊರೋನಾ ವೈರಸ್‍ಗೆ ತತ್ತರಿಸಿ ಹೋಗಿದ್ದು, ದೇಶದಲ್ಲಿಯೂ ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಲಾಕ್ ಡೌನ್ ಘೋಷಿಸಲಾಗಿದೆ. ಹೀಗಾಗಿ ಕೆಲ ಬಡ ಜನತೆ ಊಟ, ಅಗತ್ಯ ವಸ್ತುಗಳಿಲ್ಲದೆ ಪರಿತಪಿಸುತ್ತಿದ್ದಾರೆ. ಇದನ್ನು ಮನಗಂಡ ಬಿಜೆಪಿ ಮುಖಂಡ ಮುನಿರತ್ನ ಅವರು ಬಡವರ ಹೊಟ್ಟೆ ತುಂಬಿಸುತ್ತಿದ್ದು, ನಿತ್ಯ 60 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

    ತಮ್ಮ ಕ್ಷೇತ್ರದ 50 ರಿಂದ 60 ಸಾವಿರ ಜನರಿಗೆ ಪ್ರತಿನಿತ್ಯ ಮೂರು ಹೊತ್ತು ಊಟದ ವ್ಯವಸ್ಥೆ ಮಾಡಿದ್ದಾರೆ. ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟ ಮತ್ತು ರಾತ್ರಿಯ ಊಟದ ವ್ಯವಸ್ಥೆ ಮಾಡಿದ್ದು, ಇದಕ್ಕಾಗಿ ಮತ್ತಿಕೆರೆಯ ಕಲ್ಯಾಣ ಮಂಟಪದಲ್ಲಿ 60 ಜನರ ಬಾಣಸಿಗರ ತಂಡ ಊಟ ತಯಾರು ಮಾಡುತ್ತಿದೆ.

    ಪ್ರತಿನಿತ್ಯ 5 ಸಾವಿರ ಕೆ.ಜಿ ಅಕ್ಕಿ ಬಳಸಿಕೊಂಡು ಆಹಾರ ತಯಾರು ಮಾಡುತ್ತಿದ್ದು, ಕ್ಷೇತ್ರದ ಬಡವರಿಗೆ, ಕೂಲಿ ಕಾರ್ಮಿಕರಿಗೆ ಊಟದ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಬಡ ಜನತೆ ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಕೇಂದ್ರ ಸರ್ಕಾರ ಎಪ್ರಿಲ್ 14ರ ವರಗೆ ದೇಶಾದ್ಯಂತ ಲಾಕ್ ಡೌನ್ ಮಾಡಿದೆ. ಜನ ಅನವಶ್ಯಕವಾಗಿ ರಸ್ತೆಗೆ ಬರದೇ ತಮ್ಮ ಮನೆಗಳಲ್ಲೇ ಇದ್ದು ಸೋಂಕು ತಗುಲದಂತೆ ಕಟ್ಟೆಚ್ಚರವಹಿಸಬೇಕಾಗಿದೆ. ದೇಶ ಲಾಕ್ ಡೌನ್ ಆಗಿ ಇವತ್ತಿಗೆ 6 ನೇ ದಿನ. ಉಳ್ಳವರು ಹೇಗೋ ಜೀವನ ಸಾಗಿಸುತ್ತಿದ್ದಾರೆ. ಅದರೆ ದಿನಗೂಲಿ ನೌಕರರು, ಕೂಲಿ ಕಾರ್ಮಿಕರು, ಬಡವರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ.

  • ಜಾತಿ-ಭೇದ ಮರೆತು ಬಡವರಿಗೆ ದಿನನಿತ್ಯದ ಸಾಮಾಗ್ರಿಗಳನ್ನು ನೀಡಿದ ಅರ್ಚಕರು

    ಜಾತಿ-ಭೇದ ಮರೆತು ಬಡವರಿಗೆ ದಿನನಿತ್ಯದ ಸಾಮಾಗ್ರಿಗಳನ್ನು ನೀಡಿದ ಅರ್ಚಕರು

    ಕೋಲಾರ: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಕೋಲಾರ ವರದರಾಜ ಸ್ವಾಮಿ ದೇವಾಲಯದ ಅರ್ಚಕರು ಹಾಗೂ ಸಿಬ್ಬಂದಿ ಹಲವೆಡೆ ಬಡವರಿಗೆ ದಿನ ನಿತ್ಯದ ಸಾಮಗ್ರಿಗಳನ್ನು ವಿತರಣೆ ಮಾಡಿದರು.

    ನಿತ್ಯ ಕೂಲಿ ಮಾಡಿ ಬದುಕುತ್ತಿದ್ದ ಜನರಿಗೆ ಲಾಕ್‍ಡೌನ್ ಹಿನ್ನೆಲೆ ನಿತ್ಯದ ಬದುಕು ಕಷ್ಟವಾಗಿದೆ. ಹೀಗಾಗಿ ಸುಮಾರು ನೂರು ಜನರಿಗೆ ಅರ್ಚಕರುಗಳು ಅಕ್ಕಿ, ಬೇಳೆ, ಎಣ್ಣೆ, ಉಪ್ಪು, ತರಕಾರಿ ಸೇರಿದಂತೆ ನಿತ್ಯದ ವಸ್ತುಗಳನ್ನ ಬ್ಯಾಗ್‍ನಲ್ಲಿ ಸಂಗ್ರಹಿಸಿ, ಕೋಲಾರ ನಗರದ ವಿನೋಭ ನಗರದ ದಲಿತ ಕಾಲೋನಿಗಳಲ್ಲಿ ಹಂಚಿಕೆ ಮಾಡಿದರು.

    ಇದೇ ವೇಳೆ ಮುಂದಿನ ದಿನಗಳಲ್ಲಿ ಸರಿ ಸುಮಾರು 1,000 ಕುಟುಂಬಗಳಿಗೆ ಹೀಗೆ ದವಸ ದಾನ್ಯಗಳನ್ನು ವಿತರಣೆ ಮಾಡುವುದಾಗಿ ಹೇಳಿದರು. ಜಾತಿ-ಭೇದ ಮರೆತು ಹಸಿದವರಿಗೆ ಅನ್ನ ಕೊಡುವ ಕೆಲಸ ಮಾಡಲಾಗುತ್ತಿದೆ ಇದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟ ಪಡಿಸಿದರು.

  • ಹಸಿವಿನಿಂದ ಬಳಲುತ್ತಿದ್ದ ಬಡವರಿಗೆ 1 ವಾರದಿಂದ ಆಹಾರ ನೀಡುತ್ತಿರುವ ಕುಮಟಾ ಯುವಕ

    ಹಸಿವಿನಿಂದ ಬಳಲುತ್ತಿದ್ದ ಬಡವರಿಗೆ 1 ವಾರದಿಂದ ಆಹಾರ ನೀಡುತ್ತಿರುವ ಕುಮಟಾ ಯುವಕ

    ಕಾರವಾರ: ಇಡೀ ಭಾರತವೇ ಲಾಕ್‍ಡೌನ್ ಆಗಿದೆ. ಹಲವು ಭಾಗದಲ್ಲಿ ದಿನದ ಮೂಲಭೂತ ಅಗತ್ಯ ವಸ್ತುಗಳೂ ಜನರಿಗೆ ಸಿಗುವುದು ಕಷ್ಟವಾಗಿದೆ. ಜಿಲ್ಲಾಡಳಿತಗಳು ಅಗತ್ಯ ವಸ್ತುಗಳ ಪೂರೈಕೆಗೆ ಪ್ರಯತ್ನ ಮಾಡುತ್ತಿದ್ದರೂ ಬೀದಿಯಲ್ಲಿರುವ ಅನಾಥರು, ಕೂಲಿ ಕಾರ್ಮಿಕರಿಗೆ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದಂತಾಗಿದೆ. ಇಂತವರಿಗೆ ಅಲ್ಲಿ ಇಲ್ಲಿ ಸಿಗುವ ನಳದ ನೀರೇ ಹಸಿವು ನೀಗಿಸಿಕೊಳ್ಳಲು ಆಧಾರವಾಗಿದೆ.

    ಆದರೆ ಇವರ ಸ್ಥಿತಿಯನ್ನು ಅರಿತ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದ ಶ್ರೀಧರ್ ಕುಮಟೇಕರ್ ಅವರು ಬೀದಿಯಲ್ಲಿರುವ ಭಿಕ್ಷುಕರಿಗೆ, ನಿರ್ಗತಿಕರಿಗೆ ಕಳೆದ ಒಂದು ವಾರದಿಂದ ತಮ್ಮ ಸ್ವಂತ ಹಣ ಖರ್ಚು ಮಾಡಿ ಮೂರು ಹೊತ್ತು ಊಟ, ತಿಂಡಿಗಳನ್ನು ನೀಡುತ್ತಾ ಹಸಿದವರಿಗೆ ನೆರವಾಗುತ್ತಿದ್ದಾರೆ.

    ಕುಮಟಾ ನಗರದಲ್ಲಿ ಕ್ಯಾಂಟೀನ್ ನಡೆಸುತ್ತಿರುವ ಶ್ರೀಧರ್ ರವರು ಲಾಕ್‍ಡೌಕ್ ಘೋಷಿಸಿದ ನಂತರ ಮನೆಯಲ್ಲಿದ್ದರು. ಆದರೆ ರಸ್ತೆ ಬದಿ ಊಟವಿಲ್ಲದೇ ಹಸುವಿನಿಂದ ಬಳಲಿ ಬೆಂಡಾಗಿದ್ದ ಭಿಕ್ಷುಕರನ್ನು, ನಿರ್ಗತಿಕರನ್ನು ನೋಡಿ ತಮ್ಮ ಮನೆಯಲ್ಲಿಯೇ ಪ್ರತಿ ದಿನ ಊಟ, ತಿಂಡಿಯನ್ನು ತಯಾರಿಸಿ ನೀಡುತ್ತಿದ್ದಾರೆ. ಇವರ ಈ ಕೆಲಸವನ್ನು ನೋಡಿದ ಸ್ಥಳೀಯ ಪತ್ರಕರ್ತರು ಸಹ ಸಾಥ್ ನೀಡಿದ್ದು, ಒಂದಿಷ್ಟು ದಿನಸಿ, ಅಗತ್ಯ ವಸ್ತುಗಳನ್ನು ಕೊಡಿಸಿ ಇವರ ಕೆಲಸಕ್ಕೆ ಸಹಕರಿಸುತ್ತಿದ್ದಾರೆ.

    ಪ್ರತಿ ದಿನ ಆಹಾರವನ್ನು ತಯಾರಿಸಿ ಬಸ್ ನಿಲ್ದಾಣ, ರಸ್ತೆಗಳಲ್ಲಿರುವ ಅನಾಥರಿಗೆ, ಕೂಲಿ ಕೆಲಸದವರಿಗೆ ನೀಡುವ ಮೂಲಕ ಮಾನವೀಯತೆ ಮೆರೆದು ಶ್ರೀಧರ್ ಎಲ್ಲರಿಗೂ ಮಾದರಿಯಾಗಿದ್ದಾರೆ.

  • ಬಡವರಿಗಾಗಿ ಈ ವರ್ಷದಲ್ಲಿ 50 ಸಾವಿರ ಮನೆಗಳ ನಿರ್ಮಾಣ – ಸೋಮಣ್ಣ ಭರವಸೆ

    ಬಡವರಿಗಾಗಿ ಈ ವರ್ಷದಲ್ಲಿ 50 ಸಾವಿರ ಮನೆಗಳ ನಿರ್ಮಾಣ – ಸೋಮಣ್ಣ ಭರವಸೆ

    ಬೆಂಗಳೂರು: ಬಡವರಿಗೆ ಸೂರು ಕಲ್ಪಿಸುವ ಸಲುವಾಗಿ ವರ್ಷಾಂತ್ಯದ ವೇಳೆಗೆ 50 ಸಾವಿರ ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

    ನೆಲಮಂಗಲ ಸಮೀಪದ ದಾಸನಪುರ ಹೋಬಳಿಯ ಅಗ್ರಹಾರಪಾಳ್ಯದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸೋಮಣ್ಣ ಅವರು ಈ ಬಗ್ಗೆ ಭರವಸೆ ನೀಡಿದರು. ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವತಿಯಿಂದ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯಡಿ ಜಿ+3 ಮಾದರಿಯಲ್ಲಿ ನಿರ್ಮಿಸುತ್ತಿರುವ ವಸತಿ ಸಮುಚ್ಚಯ ಕಾಮಗಾರಿಗೆ ಸೋಮಣ್ಣ ಅವರು ಶಂಕುಸ್ಥಾಪನೆ ನೆರವೇರಿಸಿದರು.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರದಿಂದ 600 ಕೋಟಿ ರೂ. ಅನುದಾನ ನೀಡಿದ್ದರೂ ಕಾಂಗ್ರೆಸ್ ಹಾಗೂ ಸಮ್ಮಿಶ್ರ ಸರ್ಕಾರಗಳ ಅವಧಿಯಲ್ಲಿ ಚಾಲನೆ ಸಿಗದೆ, ಈ ಯೋಜನೆಯು ಕಳೆದ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ವಸತಿ ಯೋಜನೆಯ ಭಾಗವಾಗಿ ಇಂದು 843 ಬಹುಮಹಡಿ ಮನೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಒಂದು ವರ್ಷದ ಅವಧಿಯಲ್ಲಿ ಕನಿಷ್ಟ 50 ಸಾವಿರ ಮನೆ ನಿರ್ಮಾಣ ಮಾಡಿ ಬಡವರಿಗೆ ಹಸ್ತಾಂತರ ಮಾಡಲಾಗುವುದು. ಯಲಹಂಕ ಕ್ಷೇತ್ರದಲ್ಲಿ 3 ಸಾವಿರ ಮನೆಗಳ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.

    ಸರ್ಕಾರದಿಂದ ಕಟ್ಟುತ್ತಿರುವ ಆಸ್ಪತ್ರೆ, ಆಟದ ಮೈದಾನ, ಕೊಳಚೆ ನೀರು ಸಂಸ್ಕರಣಾ ಘಟಕ ಸೇರಿ ಅಗತ್ಯ ಮೂಲಸೌಲಭ್ಯಗಳನ್ನು ಸಮುಚ್ಚಯಗಳಲ್ಲಿ ಒದಗಿಸುವ ಮೂಲಕ ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪ ಅವರ ಮಹತ್ವಾಕಾಂಕ್ಷಿ ವಸತಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು ಎಂದರು.

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ವಸತಿ ಯೋಜನೆಗಳಲ್ಲಿ ಲಭ್ಯವಿರುವ ಸುಮಾರು 4 ಲಕ್ಷ ರೂ. ಅನುದಾನ ಹಾಗೂ ಬ್ಯಾಂಕ್‍ಗಳಲ್ಲಿ 2 ಲಕ್ಷ ರೂ. ಸಾಲ ಸೌಲಭ್ಯ ಒದಗಿಸುವ ಮೂಲಕ ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಬಡವರ ಕನಸನ್ನು ನನಸು ಮಾಡಲು ಬದ್ಧವಿರುವುದಾಗಿ ತಿಳಿಸಿದರು.

    ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್ ವಿಶ್ವನಾಥ್ ಮಾತನಾಡಿ, ಯಲಹಂಕವನ್ನು ಗುಡಿಸಲು ರಹಿತ ಮಾದರಿ ಕ್ಷೇತ್ರವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಹಿಂದಿನ ಸರ್ಕಾರಗಳ ಆಡಳಿತದ ಅವಧಿಯಲ್ಲಿ ಕಾರಣಾಂತರಗಳಿಂದ ಮನೆ ಬಡವರಿಗೆ ನೀಡಲು ಸಾಧ್ಯವಾಗಿರಲಿಲ್ಲ. ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಕ್ಷೇತ್ರದ, ಕುಕ್ಕನಹಳ್ಳಿ, ತೋಟಗೆರೆ, ಪಿಳ್ಳಹಳ್ಳಿ, ಲಕ್ಷ್ಮಿಪುರ, ಬಿಳಿಜಾಜಿ, ದಾಸನಪುರ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಮನೆ ನಿರ್ಮಾಣ ಮಾಡಲಾಗುವುದು. ಕ್ಷೇತ್ರದಲ್ಲಿ 10 ಸಾವಿರ ಮನೆ ನಿರ್ಮಾಣ ಮಾಡುವ ಗುರಿ ಇದೆ. ಸರ್ಕಾರದಿಂದ ಸಿಗುವ ಎಲ್ಲಾ ಯೋಜನೆಗಳನ್ನು ಕ್ಷೇತ್ರಕ್ಕೆ ತರುವುದಾಗಿ ಭರವಸೆ ನೀಡಿದರು.

    ಜಿಲ್ಲಾಧಿಕಾರಿ ಶಿವಮೂರ್ತಿ, ರಾಜೀವ್ ಗಾಂಧಿ ವಸತಿ ನಿಗಮ ನಿ. ಎಂಡಿ ಡಾ.ರಾಮ ಪ್ರಸಾದ್ ಮನೋಹರ್, ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಅಧ್ಯಕ್ಷ ಜಿ.ಮರಿಸ್ವಾಮಿ, ಜಿ.ಪಂ ಸದಸ್ಯ ರವಿಕುಮಾರ್, ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್ ಶಿವರಾಜ್, ಗೋಪಾಲಪುರ ಗ್ರಾ.ಪಂ ಅಧ್ಯಕ್ಷ ಟಿ.ಎಂ ಬಸವೇಗೌಡ ಸೇರಿ ಯಲಹಂಕ ಕ್ಷೇತ್ರ ಬಿಜೆಪಿ ಅಧ್ಯಕ್ಷ ಹನುಮಯ್ಯ ಇನ್ನಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಮನೆಗಳು ಹೇಗಿರಲಿವೆ?
    ಸುಮಾರು 5 ಎಕ್ರೆ ಜಮೀನಿನಲ್ಲಿ ಜಿ+3 ಮಾದರಿಯಲ್ಲಿ ನಿರ್ಮಿಸುತ್ತಿರುವ ವಸತಿ ಸಮುಚ್ಚಯದಲ್ಲಿ 836 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ಮನೆಯನ್ನು 30 ಚ.ಮೀ ವಿಸ್ತೀರ್ಣದಲ್ಲಿ ಒಂದು ಹಾಲ್, ಬೆಡ್ ರೂಂ, ಅಡುಗೆಮನೆ ಸೇರಿದಂತೆ ಪ್ರತ್ಯೇಕ ಸ್ಥಾನದ ಮನೆ, ಶೌಚಾಲಯ, ಕಾಂಕ್ರೀಟ್ ಗೋಡೆಗಳು, ನೆಲಹಾಸಿಗೆಗೆ ವೆಟ್ರಿಫೈಡ್ ಟೈಲ್ಸ್, ಗ್ರಾನೈಟ್ ಬಳಸಿ ಸುಸಜ್ಜಿತವಾಗಿ ನಿರ್ಮಿಸಲಾಗುತ್ತಿದೆ. ಜೊತೆಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಕುಡಿಯುವ ನೀರು, ಪಂಪ್ ರೂಂ, ಮಳೆ ನೀರು ಕೊಯ್ಲು ಮುಂತಾದ ವ್ಯವಸ್ಥೆಯನ್ನು ಕೂಡ ಒದಗಿಸಲಾಗುತ್ತಿದೆ.

  • ಗುಡಿಸಲಿಗೆ ಆಕಸ್ಮಿಕ ಬೆಂಕಿ- ಬೀದಿಗೆ ಬಿದ್ದ ಬಡವನ ಬಾಳು

    ಗುಡಿಸಲಿಗೆ ಆಕಸ್ಮಿಕ ಬೆಂಕಿ- ಬೀದಿಗೆ ಬಿದ್ದ ಬಡವನ ಬಾಳು

    ಬೆಳಗಾವಿ: ಹೊಲದಲ್ಲಿದ್ದ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ದ್ವಿಚಕ್ರ ವಾಹನ, ರಿಕ್ಷಾ ಸೇರಿದಂತೆ ಅಪಾರ ಪ್ರಮಾಣ ಹಾನಿಯಾದ ಘಟನೆ ಬೆಳಗಾವಿ ತಾಲೂಕಿನ ಗಜಪತಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ.

    ಗಜಪತಿ ಗ್ರಾಮದ ಮಾರುತಿ ಕರಡಿ ತಮ್ಮ ಜಮೀನಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದರು. ಆದರೆ ಸೋಮವಾರ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಗೊಂಡು ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಬೆಂಕಿ ಕೆನ್ನಾಲಿಗೆ ಹೆಚ್ಚಾಗಿತ್ತು. ಇದರಿಂದಾಗಿ ಗುಡಿಸಿನಲ್ಲಿದ್ದ ದಿನನಿತ್ಯ ಉಪಯೋಗಿಸುವ ಬಟ್ಟೆ, ದವಸ ಧಾನ್ಯ, ಹಾಗೂ ಬಂಗಾರ, ನಗದು, ದ್ವಿಚಕ್ರ ವಾಹನ, ಒಂದು ರಿಕ್ಷಾ ಸೇರಿದಂತೆ ಅಪಾರ ವಸ್ತುಗಳು ಬೆಂಕಿಗೆ ಅಹುತಿಯಾಗಿವೆ.

    ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿಯನ್ನು ನಂದಿಸಿದ್ದಾರೆ. ಆದರೆ ಅಷ್ಟರಲ್ಲಿ ಗುಡಿಸಲು ಹಾಗೂ ಗುಡಿಸಲಿನಲ್ಲಿದ್ದ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದವು. ಈ ಸಂಬಂಧ ಹಿರೆಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಡವರ ಹಣವನ್ನು ತಿಂದು ತೇಗಿದ ಪೋಸ್ಟ್ ಮ್ಯಾನ್

    ಬಡವರ ಹಣವನ್ನು ತಿಂದು ತೇಗಿದ ಪೋಸ್ಟ್ ಮ್ಯಾನ್

    ಹಾಸನ: ಕಷ್ಟ ಪಟ್ಟು ದುಡಿದ ಉಳಿತಾಯದ ಹಣವನ್ನು ಪೋಸ್ಟ್ ಮಾಸ್ಟರ್ ಓರ್ವ ದುರುಪಯೋಗ ಮಾಡಿಕೊಂಡಿರುವ ಆರೋಪ ಹಾಸನದ ಸಾಲಗಾಮೆ ಅಂಚೆ ಕಚೇರಿಯಲ್ಲಿ ಕೇಳಿಬಂದಿದೆ.

    ಹಲವಾರು ವರ್ಷಗಳಿಂದ ಸಾಲಗಾಮೆ ಗ್ರಾಮದಲ್ಲಿ ಅಂಚೆ ಕಚೇರಿ ಕಾರ್ಯನಿರ್ವಹಿಸುತ್ತಿದ್ದು 8 ಸಾವಿರ ಉಳಿತಾಯ ಖಾತೆಗಳಿವೆ. ಇಲ್ಲಿ ಅಂಚೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತಿದ್ದ ಚಂದ್ರು ಗ್ರಾಹಕರ ಹಣದಲ್ಲಿ ಅವ್ಯವಹಾರ ಮಾಡಿರುವ ಆರೋಪ ಕೇಳಿಬಂದಿದೆ.

    ಸದ್ಯ ಚಂದ್ರ ಬೇರೆ ಪೋಸ್ಟ್ ಆಫೀಸ್ ವರ್ಗವಾಗಿದ್ದು ನಂತರ ಈ ಅವ್ಯವಹಾರ ಬೆಳಕಿಗೆ ಬಂದಿದೆ. ತಮ್ಮ ಉಳಿತಾಯ ಖಾತೆಯ ಹಣವನ್ನು ಪಡೆಯಲು ಪೋಸ್ಟ್ ಆಫೀಸ್‍ಗೆ ಬಂದ ಗ್ರಾಹಕರಿಗೆ ಖಾತೆಯಲ್ಲಿ ಹಣವೇ ಇಲ್ಲದ್ದನ್ನು ನೋಡಿ ಶಾಕ್ ಆಗಿದ್ದಾರೆ.

    ಪಾಸ್ ಬುಕ್‍ನಲ್ಲಿ ಹಣ ಜಮಾವಣೆಯಾದ ಬಗ್ಗೆ ದಾಖಲೆ ಇದ್ದರೆ ಕಂಪ್ಯೂಟರ್ ನಲ್ಲಿ ಮಾತ್ರ ಹಣವನ್ನು ಸೇರಿಸಲಾಗಿಲ್ಲ. ಹೊಸದಾಗಿ ಬಂದಿರುವ ಅಂಚೆ ಅಧಿಕಾರಿ ಗ್ರಾಹಕರ ಹಣ ಕುರಿತು ಪರಿಶೀಲನೆ ನಡೆಸಿದಾಗ ಫೇಕ್ ಪಾಸ್ ಬಳಕೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

    ಹಲವಾರು ವರ್ಷಗಳಿಂದ ಇದೇ ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತಿದ್ದ ಚಂದ್ರು ಹಲವು ಗ್ರಾಹಕರಿಗೆ ಇದೇ ರೀತಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೆ ಎಂಟು ಮಂದಿ ಗ್ರಾಹಕರ ಪಾಸ್‍ಬುಕ್‍ನಲ್ಲಿ ಎಂಟ್ರಿ ಮಾಡಲಾಗಿದ್ದು ಕಂಪ್ಯೂಟರ್ ನಲ್ಲಿ ಮಾತ್ರ ನೊಂದಣಿ ಆಗಿಲ್ಲ. ಸದ್ಯ ಅಂಚೆ ಇಲಾಖೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ಮುಂದುವರಿಸಿದ್ದಾರೆ.

  • ದ್ವೇಷ ಇರೋದು ನನ್ನ ಮೇಲೆ, ಬಡವರ ಮೇಲೆ ಕೋಪ ಯಾಕೆ- ಬಿಎಸ್‍ವೈ ವಿರುದ್ಧ ಹೆಚ್‍ಡಿಕೆ ಕಿಡಿ

    ದ್ವೇಷ ಇರೋದು ನನ್ನ ಮೇಲೆ, ಬಡವರ ಮೇಲೆ ಕೋಪ ಯಾಕೆ- ಬಿಎಸ್‍ವೈ ವಿರುದ್ಧ ಹೆಚ್‍ಡಿಕೆ ಕಿಡಿ

    ಬೆಂಗಳೂರು: ಬಡವರ ಸ್ವಾಭಿಮಾನವನ್ನು ಕೆಣಕಿದ್ದೀರಿ ಯಡಿಯೂರಪ್ಪನವರೇ ಎಂದು ಟ್ವೀಟ್ ಮಾಡುವ ಮೂಲಕ ಸಿಎಂ ಬಿಎಸ್‍ವೈಗೆ ಮಾಜಿ ಸಿಎಂ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

    ಕುಮಾರಸ್ವಾಮಿ ಅವರ ಸರ್ಕಾರ ಅವಧಿಯಲ್ಲಿ ಜಾರಿಯಾಗಿರುವ ಕೆಲ ಯೋಜನೆಗಳನ್ನು ಯಡಿಯೂರಪ್ಪ ಅವರ ಸರ್ಕಾರ ತಡೆಹಿಡಿಯಲು ಮುಂದಾಗಿದೆ. ಈ ವಿಚಾರಕ್ಕೆ ಟ್ವೀಟ್ ಮಾಡವ ಮೂಲಕ ಬೇಸರ ವ್ಯಕ್ತಪಡಿಸಿರುವ ಹೆಚ್‍ಡಿಕೆ ಬಡವರ ಬಂಧು ಯೋಜನೆಯನ್ನು ನಿರ್ಲಕ್ಷಿಸಿ ನೀವು ಬಡವರ ವಿರೋಧಿಯಾಗಿದ್ದೀರಿ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. ಇದನ್ನು ಓದಿ: ರಾಜ್ಯ ಸರ್ಕಾರದ ಮಹತ್ವದ ‘ಬಡವರು ಬಂಧು’ ಯೋಜನೆಗೆ ಚಾಲನೆ

    ಇಂದು ಬೆಳಗ್ಗೆ ಸರಣಿ ಟ್ವೀಟ್ ಮಾಡಿರುವ ಹೆಚ್‍ಡಿಕೆ, ನಿಮಗೆ ದ್ವೇಷ ಇದ್ದದ್ದು ನನ್ನ ಮೇಲಲ್ಲವೇ ಯಡಿಯೂರಪ್ಪನವರೇ? ಆದರೆ ಬಡವರ ಮೇಲೇಕೆ ನಿಮ್ಮ ಕೋಪ? ಸೇಡಿನ ರಾಜಕೀಯ ಮಾಡುವುದಿಲ್ಲ ಎಂದು ಸದನದಲ್ಲಿ ಹೇಳಿದ್ದ ನೀವು ಅಧಿಕಾರ ವಹಿಸಿಕೊಂಡ ನಂತರ ನನ್ನ ಸರ್ಕಾರದ ಕಾರ್ಯಕ್ರಮಗಳ ವಿಷಯದಲ್ಲಿ ಮಾಡಿದ್ದೆಲ್ಲವೂ ಸೇಡಿನ ಕ್ರಮ. ‘ಬಡವರ ಬಂಧು’ ಯೋಜನೆಯನ್ನು ನಿರ್ಲಕ್ಷಿಸಿ ನೀವು ಬಡವರ ವಿರೋಧಿಯಾಗಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ: ಬೀದಿ ಬದಿ ವ್ಯಾಪಾರಿಗಳಿಗೆ ಇನ್ಮುಂದೆ ಸಿಗಲಿದೆ ಬಡ್ಡಿಯೇ ಇಲ್ಲದ ದಿನದ ಸಾಲ: ಏನಿದು ಬಡವರ ಬಂಧು ಯೋಜನೆ? ಯಾರು ಅರ್ಹರು?

    ಆರ್ಥಿಕವಾಗಿ ಅಶಕ್ತರಾದವರು, ಸಣ್ಣ ವ್ಯಾಪಾರಿಗಳನ್ನು ಲೇವಾದೇವಿದಾರರ ವಿಷವರ್ತುಲದಿಂದ ಪಾರು ಮಾಡುವ ಸದುದ್ದೇಶದಿಂದ ಬಡವರ ಬಂಧು ಕಾರ್ಯಕ್ರಮವನ್ನು ಜಾರಿಗೆ ತರಲಾಗಿತ್ತು. ಅಶಕ್ತರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದ್ದ ಈ ಯೋಜನೆಯನ್ನು ಕೊಲ್ಲುತ್ತಿರುವ ನೀವು ಬಡವರ ಸ್ವಾಭಿಮಾನವನ್ನು ಕೆಣಕಿದ್ದೀರಿ ಯಡಿಯೂರಪ್ಪನವರೇ ಎಂದು ಹೇಳಿದ್ದಾರೆ.

    ಬಡವರ ಬಂಧು ಯೋಜನೆ ವಿಫಲವಾಗಬಾರದು. ಇದರಲ್ಲಿ ಜಾತಿ, ಧರ್ಮ, ಪಕ್ಷಗಳಿಲ್ಲ. ಅಶಕ್ತರನ್ನು ಸಬಲರನ್ನಾಗಿಸಿ ದೇಶದ ಅಭಿವೃದ್ಧಿಯಲ್ಲಿ ಅವರನ್ನೂ ಒಳಗೊಳ್ಳುವಂತೆ ಮಾಡುವ ಪ್ರಮುಖ ಅರ್ಥಿಕ ಚಟುವಟಿಕೆ. ಈ ಕಾರ್ಯಕ್ರಮಕ್ಕೆ ಯಡಿಯೂರಪ್ಪನವರು ಚೈತನ್ಯ ತುಂಬಬೇಕು. ಇಲ್ಲವೇ ಹೋರಾಟ ಎದುರಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

  • ಬಡವರು, ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ – ಜ್ಞಾನಗಂಗೆಯನ್ನು ಧರೆಗಿಳಿಸಿದ ದೇವರು

    ಬಡವರು, ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ – ಜ್ಞಾನಗಂಗೆಯನ್ನು ಧರೆಗಿಳಿಸಿದ ದೇವರು

    ಸಿದ್ದಗಂಗಾ ಮಠದಲ್ಲಿ ಶಿಕ್ಷಣ ಸೇವೆಯ ಬೀಜಾಂಕುರವಾಗಿದ್ದು 1913 ರಲ್ಲಿ. ಸಿದ್ದಗಂಗಾ ಶ್ರೀಗಳ ಧರ್ಮಸ್ವೀಕಾರದ ನಂತರ ಸರಸ್ವತಿ ಶಾಶ್ವತವಾಗಿ ನೆಲೆಸಿದಳು. ವಿದ್ಯಾಬಿಕ್ಷೆ ಕೊಟ್ಟ ಶ್ರೀಗಳು ಲಕ್ಷ ಲಕ್ಷ ಜನರ ಪಾಲಿಗೆ ಜ್ಞಾನ ಗಂಗೆಯನ್ನು ಧರೆಗಿಳಿಸಿದ ದೇವರಾದರು.

    ಸಂಸ್ಕೃತವೆಂದರೆ ಒಂದು ವರ್ಗದರಿಗೆ ಮಾತ್ರ ಎಂಬಂತೆ ಇದ್ದ ಸನ್ನಿವೇಶದಲ್ಲಿ ಸಿದ್ದಗಂಗೆಯಲ್ಲಿ ಎಲ್ಲಾ ವರ್ಗದ ಮಕ್ಕಳಿಗೆ ಜಾತಿ ಮತ ಧರ್ಮ ಪಂಥ ಎಲ್ಲವನ್ನು ಮೀರಿ ಸಂಸ್ಕೃತಾಭ್ಯಾಸಕ್ಕೆ ಅವಕಾಶ ಕಲಿಸಿಕೊಟ್ಟಿರುವುದು ಒಂದು ದಾಖಲೆ. 20 ವಿದ್ಯಾರ್ಥಿಗಳಿಂದ ಆರಂಭಿಸಿದ ಶ್ರೀ ಸಿದ್ದಲಿಂಗೇಶ್ವರ ಸಂಸ್ಕೃತ ಪಾಠಶಾಲೆ ಇದು ಬಹುಶಃ ದೊಡ್ಡದಾದ ಮಹಾವಿದ್ಯಾಲಯವಾಗಿ ಬೆಳೆದಿರುವುದೇ ಇದಕ್ಕೆ ಸಾಕ್ಷಿ. ಇದನ್ನೂ ಓದಿ:2011ರಲ್ಲೇ ಕಿರಿಯ ಶ್ರೀಗಳಿಗೆ ಮಠದ ಅಧಿಕಾರ ಹಸ್ತಾಂತರಿಸಿದ್ದರು ಶ್ರೀಗಳು!

    ಶ್ರೀಮಠದ ಸೇವೆಗೆ ಸಿದ್ದಗಂಗಾ ಶ್ರೀ ನಿಂತ ನಂತರ ಸಿದ್ದಗಂಗಾ ಕ್ಷೇತ್ರದ ಶಿಕ್ಷಣ ಸೇವೆ ಮಹಾ ವೃಕ್ಷವಾಗಿ ಬೆಳೆಯತೊಡಗಿತ್ತು. ಗ್ರಾಮೀಣ ಜನರ ಬದುಕಿನ ಸುಧಾರಣೆ ಆಗಬೇಕಾದರೆ ಶಿಕ್ಷಣವೊಂದೇ ತಾರಕ ಮಂತ್ರ ಅಂತ ಶ್ರೀಗಳು ಅರಿತರು. ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದ ಅವಕಾಶ ಒದಗಿಸಿದರು. ಇದನ್ನೂ ಓದಿ: ಶ್ರೇಷ್ಠ ನ್ಯಾಯಮೂರ್ತಿಗಳು – ವರ್ಷಗಟ್ಟಲೇ ನ್ಯಾಯಾಲಯದಲ್ಲಿ ಮುಗಿಯದ ಪ್ರಕರಣ ಒಂದೇ ದಿನದಲ್ಲಿ ಇತ್ಯರ್ಥ!

    ಜೋಳಿಗೆ ಹಿಡಿದು ಬಿಕ್ಷಾಟನೆಗೆ ಹೋಗುತ್ತಿದ್ದ ಶ್ರೀಗಳು ಗ್ರಾಮಾಂತರ ಭಾಗದಲ್ಲಿ ಶಾಲೆಗೆ ಹೋಗಬೇಕಾಗಿದ್ದ ಪುಟಾಣಿ ಮಕ್ಕಳು ಕೂಲಿಗೆ ಹೋಗುತ್ತಿದ್ದ ದೃಶ್ಯ ಶ್ರೀಗಳನ್ನು ಬಹುವಾಗಿ ಕಾಡಿತ್ತು. ಅಲ್ಲಿಂದಲೇ ಶಿಕ್ಷಣ ಕ್ರಾಂತಿಯ ಮಂತ್ರ ಪಠಿಸಿಯೇ ಬಿಟ್ಟರು. ಭಿಕ್ಷಾ ಜೋಳಿಗೆಯ ಬಲದಿಂದಲೇ ಶಾಲೆ ಆರಂಭಿಸಿ ಅನಾಥಲಾಯದ ಸೇವೆ ವಿಸ್ತರಿಸಿದ್ರು.

    ಶ್ರೀಮಠದ ಎಲ್ಲಾ ಶಾಲಾ ಕಾಲೇಜುಗಳಿಗೆ ಪೂಜ್ಯರೇ ಅಧ್ಯಕ್ಷರಾಗಿ ಶಿಕ್ಷಣ ಕ್ರಾಂತಿಯನ್ನು ಪಸರಿಸುವ ಕಾರ್ಯವನ್ನು ಅವಿರತವಾಗಿ ಶುರುಮಾಡಿದರು. ಈ ಶಾಲೆಗೆ ಸೇರಲು ಬಡತನವೊಂದೆ ಸರ್ಟಿಫಿಕೇಟ್. ಎಲ್ಲ ಜಾತಿ ಧರ್ಮಗಳನ್ನು ಮೀರಿದ ಶಿಕ್ಷಣ ಇಲ್ಲಿ ಲಭ್ಯ.

    ಹಿರಿಯ ಸಾಹಿತಿ ಗೊ.ರು ಚೆನ್ನಬಸಪ್ಪ ಹೇಳಿದಂತೆ ಒಂದು ಬಾರಿ ಮಠದ ಅವರಣದಲ್ಲಿ ಪುಟಾಣಿ ಬಡ ಮುಸ್ಲಿಂ ಬಾಲಕನೊಬ್ಬ ವಿದ್ಯಾಭ್ಯಾಸ ಕಲಿಯಲು ಶ್ರೀಗಳ ಅನುಮತಿಗಾಗಿ ಕಾಯುತ್ತ ನಿಂತಿದ್ದಾನಂತೆ. ಆತನ ಪೋಷಕರಿಗೆ ಒಳಗೊಳಗೆ ಭಯ. ಅಯ್ಯೋ ಶ್ರೀಗಳು ನಮ್ಮನ್ನೆಲ್ಲ ಭೇಟಿಯಾಗ್ತಾರಾ? ಯಾರ ರಾಜಕೀಯ ನಾಯಕರ ದೊಡ್ಡವರ ರೆಫರೆನ್ಸ್ ಇಲ್ಲದೇ ಶ್ರೀಗಳನ್ನು ಭೇಟಿಯಾಗೋದಾದ್ರೂ ಹೇಗೆ ಅಂತಾ ಭಯ ಪಡುತ್ತಿದ್ದರಂತೆ. ಆಗಲೇ ಅಲ್ಲೊಬ್ಬ ಪುಟಾಣಿ ಮಠದ ವಿದ್ಯಾರ್ಥಿ ಸಿಕ್ಕಾಗ ಶ್ರೀಗಳು ಭೇಟಿ ಮಾಡೋದಾದ್ರೇ ಯಾರಿಂದ ಶಿಪಾರಸ್ಸು ಮಾಡಬೇಕು ಏನಾದ್ರೂ ಗೊತ್ತಿದ್ಯಾ? ನೀವೆಲ್ಲ ಹೇಗೆ ಬಂದ್ರಿ ಇಲ್ಲಗೆ ಅಂದ್ರಂತೆ. ಇಲ್ಲಿ ವಿದ್ಯಾಭ್ಯಾಸಕ್ಕೆ ಬಡತನ, ಕಲಿಯುವ ಹಪಾಹಪಿಯೊಂದೆ ಸರ್ಟಿಫಿಕೇಟು ಶ್ರೀಗಳು ಎಲ್ಲಾ ಭಕ್ತರನ್ನು ಭೇಟಿಯಾಗ್ತಾರೆ. ಅವರ ಭೇಟಿಗೆ ಬೇರೆಯವರ ಶಿಫಾರಸು ಯಾಕೆ ಅಂತಾ ಚೋಟುದ್ಧ ಬಾಲಕ ಹೇಳಿ ಹೋದನಂತೆ.

    ಥೇಟು ಬಾಲಕ ಹೇಳಿದಂತೆ ದೈವಸ್ವರೂಪಿ ಶ್ರೀಗಳು ಈ ಬಡ ಮುಸ್ಲಿಂ ಬಾಲಕನ ಪೋಷಕರನ್ನು ಭೇಟಿಯಾಗಿ ಸುಮಾರು ಅರ್ಧಗಂಟೆ ಮಾತಾನಾಡಿ ಶಾಲೆಗೆ ಸೇರಿಸಿಕೊಂಡರಂತೆ. ಹೀಗೆ ಬಡಮಕ್ಕಳಿಗೆ , ಗ್ರಾಮೀಣ ಭಾಗದ ಮಕ್ಕಳಿಗಷ್ಟೇ ಇಲ್ಲಿ ಮೊದಲ ಆದ್ಯತೆಯನ್ನು ಗುರುಗಳು ಕೊಡುತ್ತಿದ್ದರು. ಇದನ್ನೂ ಓದಿ: ಓದುವುದರ ಜೊತೆಗೆ ಸಿದ್ದಗಂಗಾ ವಿದ್ಯಾರ್ಥಿಗಳು ಗದ್ದೆ ಕೆಲಸಕ್ಕೂ ಸೈ!

    ಸಿದ್ದಗಂಗಾ ಕ್ಷೇತ್ರ ಕನ್ನಡ ನಾಡಿನ ಬೃಹತ್ ಶೈಕ್ಷಣಿಕ ಕೇಂದ್ರಗಳಲ್ಲಿ ಒಂದಾಗಿದೆ. ಬೇಸಗೆಯ ರಜೆಯ ನಂತರ ಶಾಲೆಗಳ ಪುನಾರಾರಂಭದಲ್ಲಿ ಸಿದ್ದಗಂಗಾ ಕ್ಷೇತ್ರವನ್ನು ನೋಡಬೇಕು. ಸಿದ್ದಗಂಗಾ ಸುತ್ತಮುತ್ತಿನ ಅಷ್ಟೇ ಅಲ್ಲದೇ ದೂರದ ಬೀದರ್ ಬೆಳಗಾವಿ ನೆರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳ ಬಡಮಕ್ಕಳು ತಮ್ಮ ತಂದೆ ತಾಯಿಗಳೊಡನೆ ತಲೆಯ ಮೇಲೆ ಪುಟ್ಟ ಪೆಟ್ಟಿಗೆ ಹೊತ್ತು ಬರುವ ದೃಶ್ಯ ನಿಜಕ್ಕೂ ಹೃದಯಸ್ಪರ್ಶಿ. ಸಿದ್ದಗಂಗಾ ಮಠಕ್ಕೆ ತಮ್ಮ ಮಕ್ಕಳು ಸೇರಿದವರೆಂದರೆ ಹೆತ್ತವರಿಗೆ ಆ ಮಕ್ಕಳನ್ನು ತಾಯಿ ಮಡಿಲಲ್ಲಿ ಇಟ್ಟಷ್ಟು ನೆಮ್ಮದಿ.

    ಸಿದ್ದಗಂಗಾ ತಾಂತ್ರಿಕ ಮಹಾ ವಿದ್ಯಾಲಯ, ಆಡಳಿತ ಮಹಾವಿದ್ಯಾಲಯ, ಶಿಕ್ಷಣ ಮಹಾವಿದ್ಯಾಲಯ, ಶಿಕ್ಷಕರ ತರಬೇತಿ ಕೇಂದ್ರ, ಪಾಲಿಟೆಕ್ನಿಕ್ ಕೇಂದ್ರ, ನರ್ಸಿಂಗ್ ಕಾಲೇಜ್, ಕೈಗಾರಿಕಾ ತರಬೇತಿ ಕೇಂದ್ರ, ಅಂಧ ಮಕ್ಕಳ ಶಾಲೆ, ಸಂಸ್ಕೃತ ಪಾಠಶಾಲೆ ಫಾರ್ಮಸಿ ಕಾಲೇಜು ಹೀಗೆ ಶ್ರೀಮಠದ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಒಟ್ಟು 125 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿವೆ.

    ಶಿಕ್ಷಕರ ತರಬೇತಿ ಕೇಂದ್ರವಿರಲಿ, ಗ್ರಂಥ ಭಂಡಾರವಿರಲಿ, ಪಾಠ ಶಾಲೆಯಿರಲಿ, ಆಟದ ಮೈದಾನವಿರಲಿ, ಎಲ್ಲರೂ ಕೂಡಿ ಬದುಕುವ ಕಮ್ಮಟವಾಗಿದೆ ಸಿದ್ದಗಂಗಾ ಕ್ಷೇತ್ರ.

    https://www.youtube.com/watch?v=FbJf6G0kt3E

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv