Tag: ಬಂಡವಾಳ

  • ರೋಗಗ್ರಸ್ಥ ನಿಗಮ ಪುನಶ್ಚೇತನಕ್ಕೆ ವಿನೂತನ ಯೋಜನೆ: ನಿರಾಣಿ

    ರೋಗಗ್ರಸ್ಥ ನಿಗಮ ಪುನಶ್ಚೇತನಕ್ಕೆ ವಿನೂತನ ಯೋಜನೆ: ನಿರಾಣಿ

    ಬೆಂಗಳೂರು: ರೋಗಗ್ರಸ್ಥ ನಿಗಮಗಳಲ್ಲಿ ಬಂಡವಾಳವನ್ನು ಹಿಂತೆಗೆದುಕೊಂಡು ಪುನಶ್ಚೇತನಗೊಳಿಸಿ ಲಾಭದತ್ತ ಕೊಂಡೊಯ್ಯಲು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಹೇಳಿದರು.

    ವಿಧಾನಸೌಧದ ತಮ್ಮ ಕಚೇರಿಯಲ್ಲಿ ಶುಕ್ರವಾರ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗೋಷ್ಡಿಯಲ್ಲಿ ಮಾತನಾಡಿದ ಅವರು, ಕಲಬುರಗಿಯ ಸಿಮೆಂಟ್ ಕಾರ್ಪೋರೇಷನ್, ಮೈಶುಗರ್, ಮೈಸೂರು ಪೇಪರ್ ಮಿಲ್ಸ್ ಸೇರಿದಂತೆ ಹಲವಾರು ನಿಗಮಗಳು ಮತ್ತು ಸಂಸ್ಥೆಗಳು ನಷ್ಟದ ಹಾದಿಯಲ್ಲಿವೆ. ತಾವು ಎರಡು ದಿನಗಳ ಹಿಂದೆ ದೆಹಲಿಗೆ ಭೇಟಿ ನೀಡಿದ ವೇಳೆ ಸಂಬಂಧಪಟ್ಟ ಸಚಿವರ ಜೊತೆ ಚರ್ಚೆ ನಡೆಸಿ ಇವುಗಳನ್ನು ಯಾವ ರೀತಿ ಪುನಶ್ಚೇತನ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು.

    ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ಕೈಗಾರಿಕೆಗಳನ್ನು ಮುಚ್ಚಲು ಅವಕಾಶ ನೀಡುವುದಿಲ್ಲ. ಸಾಧ್ಯವಾದಷ್ಟು ಕೈಗಾರಿಕೆಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ರಾಜ್ಯದಲ್ಲಿರುವ ಎಲ್ಲ ನೈಸರ್ಗಿಕ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಕೈಗಾರಿಕಾ ಉದ್ಯೋಗ ಕ್ರಾಂತಿ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

    ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಜಮೀನನ್ನು ಉದ್ಯಮಿಗಳು ಯಾವ ಕಾರಣಕ್ಕೆ ಪಡೆದಿದ್ದಾರೋ ಅದೇ ಉದ್ದೇಶಕ್ಕೆ ಬಳಸಬೇಕು. ಒಂದು ವೇಳೆ ಇದು ಎಲ್ಲಿಯಾದರೂ ದುರುಪಯೋಗವಾಗಿದ್ದರೆ ಸಮೀಕ್ಷೆ ನಡೆಸಲು ಸೂಚನೆ ನೀಡಿರುವುದಾಗಿ ತಿಳಿಸಿದರು. ಕೆಐಎಡಿಬಿಯಿಂದ ಪಡೆದುಕೊಂಡಿರುವ ಜಮೀನನ್ನು ಯಾವುದೇ ಕಾರಣಕ್ಕೂ ಬೇರೆ ಉದ್ದೇಶಕ್ಕೆ ಬಳಸಲು ಅವಕಾಶವಿಲ್ಲ. ಅದನ್ನು ನಾವು ಸೇಲ್ ಡೀಡ್ ಮಾಡಿರುವುದಿಲ್ಲ. ಒಂದು ವೇಳೆ ಅನ್ಯ ಕಾರಣಗಳಿಗೆ ಜಮೀನನ್ನು ಬಳಸಿಕೊಂಡಿದ್ದರೆ ತನಿಖೆಗೆ ಆದೇಶಿಸುತ್ತೇನೆ ಎಂದು ನಿರಾಣಿ ಪ್ರಕಟಿಸಿದರು.

    ಕೆಜಿಎಫ್‍ನಲ್ಲಿ ಕೈಗಾರಿಕಾ ಟೌನ್‍ಶಿಪ್: ಮುಂದಿನ ದಿನಗಳಲ್ಲಿ ಉತ್ತಮವಾದ ಕೈಗಾರಿಕಾ ವಾತಾವರಣ ಮೂಡಿಸುವ ಸಂಬಂಧ ಕೇಂದ್ರ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಕೋಲಾರ ಜಿಲ್ಲೆ ಕೆಜಿಎಫ್ ಬಳಿ 3 ಸಾವಿರಕ್ಕೂ ಹೆಚ್ಚು ಎಕರೆ ಜಮೀನು ಇದೆ. ಈ ಹಿಂದೆ ಇಲ್ಲಿ ಹೆಚ್ಚಿನ ಪ್ರಮಾಣದ ಬಂಗಾರ ಚಿನ್ನ ಸಿಗುತ್ತಿತ್ತು. ಒಂದು ಟನ್ ಗಣಿಗಾರಿಕೆಗೆ 40 ಗ್ರಾಂ ಚಿನ್ನ ಸಿಗುತ್ತಿತ್ತು. ಈಗ ಅದರ ಪ್ರಮಾಣ ಕಡಿಮೆಯಾಗಿದೆ. ಸುಮಾರು 3,200 ಎಕರೆ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇಲ್ಲ ಎಂದು ಅಧಿಕಾರಿಗಳು ಸಮೀಕ್ಷೆ ನಡೆಸಿ ವರದಿ ನೀಡಿದ್ದಾರೆ. ಹೀಗಾಗಿ ಜಮೀನನ್ನು ನಮಗೆ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ಬಂದಿದೆ. ಕೈಗಾರಿಕೆ ಬಳಕೆಗೆ ನೀಡಿದರೆ ನಾವು ಕೈಗಾರಿಕಾ ಟೌನ್‍ಶಿಪ್ ಮಾಡಲಿದ್ದೇವೆ ಎಂದು ಘೋಷಿಸಿದರು.

    ಈ ಹಿಂದೆ ನಾನು ಐದು ವರ್ಷ ಕೈಗಾರಿಕಾ ಸಚಿವನಾಗಿದ್ದ ವೇಳೆ ಉತ್ತಮವಾದ ಕೆಲಸ ಮಾಡಿದ್ದೇನೆ. ದೇಶದಲ್ಲೇ ಮೊದಲ ಬಾರಿಗೆ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲಾಗಿತ್ತು. ಸುಮಾರು 11.8 ಲಕ್ಷ ಕೋಟಿ ರೂ. ಬಂಡವಾಳವನ್ನು ಹೂಡಲಾಗಿತ್ತು. ಇದರಿಂದ 15 ಲಕ್ಷ ವಿದ್ಯಾವಂತ ಯುವಕರಿಗೆ ಉದ್ಯೋಗ ನೀಡಲಾಗಿದೆ. ಮೊದಲ ಬಾರಿಗೆ ಲ್ಯಾಂಡ್ ಬ್ಯಾಂಕ್ ಸ್ಥಾಪಿಸಿ ಕೃಷಿಗೆ ಯೋಗ್ಯವಲ್ಲದ ಜಮೀನನ್ನು ವಶಪಡಿಸಿಕೊಂಡು ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತಿದ್ದೇವೆ. ಸುಮಾರು 1.25 ಲಕ್ಷ ರೂ. ಪರಿಹಾರವನ್ನು ನೀಡಲಾಗುತ್ತಿತ್ತು. ಇದರ ಪರಿಣಾಮ ಉದ್ದಿಮೆದಾರರಿಗೆ ಸುಲಭವಾಗಿ ಬಂಡವಾಳ ಹೂಡಿಕೆ ಮಾಡಲು ಅನುಕೂಲವಾಯಿತು ಎಂದು ಅಭಿಪ್ರಾಯಪಟ್ಟರು.

    ಜಿಲ್ಲಾ ಮಟ್ಟದಲ್ಲಿ ಕೈಗಾರಿಕಾ ಅದಾಲತ್ ಗಳನ್ನು ನಡೆಸಲಾಗುವುದು. ನಮ್ಮ ಸರ್ಕಾರ ಉದ್ದಿಮೆದಾರರ ಮನೆ ಬಾಗಿಲಿಗೆ ಹೋಗಲಿದೆ. ಉದ್ದಿಮೆಯಾಗಿ ಉದ್ಯೋಗ ಎಂಬ ಕೈಗನ್ನಡಿಯೊಂದಿಗೆ ಐಟಿಐ, ಬಿಎ, ಬಿಕಾಂ, ಬಿಎಸ್ಸಿ, ಎಂಸ್ಸಿ, ಎಂಕಾಮ್, ಪಿಎಚ್‍ಡಿ ವಿದ್ಯಾವಂತರಿಗೆ ಉದ್ಯೋಗ ನೀಡುವುದೇ ನನ್ನ ಮೊದಲ ಗುರಿ ಎಂದು ಹೇಳಿದರು.

    ಕೇಂದ್ರ ಸರ್ಕಾರವು ಇನ್ವೆಸ್ಟ್ ಇಂಡಿಯಾ ಎಂಬ ವಿನೂತನ ಯೋಜನೆಯನ್ನು ಆರಂಭಿಸಿದೆ. ದೇಶ, ವಿದೇಶಗಳಿಂದ ಬಂಡವಾಳ ಹೂಡಿಕೆ ಮಾಡಲು ಬರುವವರಿಗೆ ಇಲ್ಲಿ ಸಮಗ್ರವಾದ ಮಾಹಿತಿಯನ್ನು ನೀಡಲಾಗುತ್ತದೆ. ರಾಜ್ಯದಿಂದಲೂ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗುವುದು. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳು, ಇಲ್ಲಿನ ಮೂಲಭೂತ ಸೌಕರ್ಯ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಒದಗಿಸಲಾಗುವುದು. ಕರ್ನಾಟಕ ಕೂಡ ಇನ್ವೆಸ್ಟ್ ಇಂಡಿಯಾದಲ್ಲಿ ಪಾಲುದಾರ ರಾಜ್ಯವಾಗಿದೆ ಎಂದು ಮಾಹಿತಿ ಒದಗಿಸಿದರು.

    ಮೈಸೂರು ಲ್ಯಾಂಪ್ಸ್ ಬಳಿ 21 ಎಕರೆ ಜಾಗವಿದ್ದು, ಅಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಲು ತೀರ್ಮಾನ ಮಾಡಲಾಗಿದ್ದು, ಇದೇ 19ರಂದು ಭೂಮಿ ಪೂಜೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಎನ್‍ಜಿಎನಲ್ಲಿ ಜಮೀನಿದ್ದು, ಅಲ್ಲಿ ಪಾರ್ಕ್ ಮಾಡುವ ಉದ್ದೇಶವಿದೆ ಎಂದು ಹೇಳಿದರು. ಇದನ್ನೂ ಓದಿ: ಕ್ರಿಕೆಟ್ ಕಾಶಿ ಲಾರ್ಡ್ಸ್​​ನಲ್ಲಿ ಕನ್ನಡಿಗ ರಾಹುಲ್ ಅಬ್ಬರ

    ಕೈಗಾರಿಕಾ ಇಲಾಖೆಯಲ್ಲಿ ನನ್ನ ಅನುಭವದ ಜತೆಗೆ ಹಿಂದಿನ ಸಚಿವರಾದ ಜಗದೀಶ್ ಶೆಟ್ಟರ್ ಅವರ ಅನುಭವದ ಮಾರ್ಗದರ್ಶನ ಪಡೆದುಕೊಂಡು ಉತ್ತಮವಾಗಿ ನಿರ್ವಹಣೆ ಮಾಡಲಾಗುವುದು. 2008 ಮತ್ತು 2013ರಲ್ಲಿ ಇಡೀ ಜಗತ್ತು ಕರ್ನಾಟಕದತ್ತ ನೋಡುವಂತೆ ಕೈಗಾರಿಕೆಯನ್ನು ನಿರ್ವಹಣೆ ಮಾಡಿದ್ದೆವು ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಉಳಿದ 20 ತಿಂಗಳ ಅವಧಿಯಲ್ಲಿ ಉತ್ತಮ ಕೆಲಸ ಮಾಡುತ್ತೇವೆ ಎಂದು ಹೇಳಿದ ಅವರು, ಗುಡಿ ಕೈಗಾರಿಕೆಯಿಂದ ಬೃಹತ್ ಕೈಗಾರಿಕೆವರೆಗೆ ಹೆಚ್ಚು ಆದ್ಯತೆ ಕೊಡಲಾಗುತ್ತದೆ. ಪ್ರಧಾನಿ ಮೋದಿ ಅವರು ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದಾರೆ. ಸ್ಟಾರ್ಟಪ್ ಗಳಿಗೆ ಉತ್ತೇಜನ ನೀಡಿದ್ದಾರೆ. ಅದೇ ನಿಟ್ಟಿನಲ್ಲಿ ನಾವು ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದು ಶಪಥ ಮಾಡಿದರು. ಇದನ್ನೂ ಓದಿ: ಸದ್ಯದಲ್ಲೇ ಕೆಜಿಎಫ್ ಬಳಿ ತಲೆ ಎತ್ತಲಿರುವ ಬೃಹತ್ ಕೈಗಾರಿಕಾ ಟೌನ್‍ಶಿಪ್

    ಹೂಡಿಕೆದಾರರ ಸಮಾವೇಶ ಮುಂದೂಡಿಕೆ?: ರಾಜ್ಯದಲ್ಲಿ ಕೋವಿಡ್-19 ಇರುವ ಕಾರಣ ಬಹುನಿರೀಕ್ಷಿತ ಬಂಡವಾಳದಾರರ ಸಮಾವೇಶ ಮುಂದೂಡುವ ಮುನ್ಸೂಚನೆಯನ್ನು ಸಚಿವ ಮುರುಗೇಶ್ ನಿರಾಣಿ ನೀಡಿದ್ದಾರೆ. ಈಗಾಗಲೇ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಫೆಬ್ರವರಿ ತಿಂಗಳಿನಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಕೋವಿಡ್ ಸಂದರ್ಭದಲ್ಲಿ ಆರು ತಿಂಗಳ ಅವಧಿಯಲ್ಲಿ ಯಶಸ್ವಿಯಾಗಿ ಮಾಡಲು ಆಗುತ್ತದೆಯೋ ಇಲ್ಲವೋ ಎಂಬ ಅನುಮಾನುವನ್ನು ವ್ಯಕ್ತಪಡಿಸಿದರು. ಈ ಸಂಬಂಧ ಸದ್ಯದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

  • 2 ಬ್ಯಾಂಕುಗಳ ಖಾಸಗೀಕರಣಕ್ಕೆ ಮುಂದಾದ ಕೇಂದ್ರ ಸರ್ಕಾರ

    2 ಬ್ಯಾಂಕುಗಳ ಖಾಸಗೀಕರಣಕ್ಕೆ ಮುಂದಾದ ಕೇಂದ್ರ ಸರ್ಕಾರ

    ನವದೆಹಲಿ: ಸಾರ್ವಜನಿಕ ರಂಗದ ಎರಡು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ಸರ್ಕಾರ ಮುಂದಾಗಿದೆ.

    ಇಂದು ಮಂಡನೆಯಾದ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಎರಡು ಬ್ಯಾಂಕು ಮತ್ತು ವಿಮಾ ಕಂಪನಿಯಿಂದ ಬಂಡವಾಳವನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಪ್ರಕಟಿಸಿದ್ದಾರೆ.

    2022ರ ಹಣಕಾಸು ವರ್ಷದ ಒಳಗಡೆ ಎಲ್‌ಐಸಿ, ಬಿಪಿಸಿಎಲ್‌, ಪವನ್‌ ಹನ್ಸ್‌ ಮತ್ತು ಏರ್‌ ಇಂಡಿಯಾದಿಂದ ಬಂಡವಾಳವನ್ನು ಹಿಂದಕ್ಕೆ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.

    ಒಟ್ಟು 1.75 ಲಕ್ಷ ಕೋಟಿ ರೂ. ಬಂಡವಾಳವನ್ನು ಹಿಂದಕ್ಕೆ ಪಡೆಯಲು 2022ರ ಹಣಕಾಸು ವರ್ಷದಲ್ಲಿ ಗುರಿಯನ್ನು ನಿಗದಿ ಮಾಡಲಾಗಿದೆ.

    ಕಳೆದ ವರ್ಷದ ಬಜೆಟ್‌ನಲ್ಲಿ 2.11 ಲಕ್ಷ ಕೋಟಿ ರೂ. ಬಂಡವಾಳ ಹಿಂತೆಗೆದ ಮಾಡಲು ಗುರಿ ನಿಗದಿಯಾಗಿತ್ತು. ಆದರೆ ಕೋವಿಡ್‌ 19 ನಿಂದಾಗಿ ಈ ಪ್ರಕ್ರಿಯೆಗೆ ಹಿನ್ನಡೆಯಾಗಿತ್ತು.

    ಸಾರ್ವಜನಿಕ ರಂಗದ ಬ್ಯಾಂಕುಗಳಲ್ಲಿ ಅನುತ್ಪಾದಕಾ ಆಸ್ತಿಗಳು(ಎನ್‌ಪಿಎ) ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದಿನ ಬಜೆಟ್‌ಗಳಲ್ಲಿ ಬ್ಯಾಂಕುಗಳ ವಿಲೀನದ ಬಗ್ಗೆ ಘೋಷಣೆಯಾಗಿತ್ತು.

  • 15 ಸಾವಿರದಲ್ಲಿ ಸ್ಟಾರ್ಟ್ ಅಪ್, 4ನೇ ತಿಂಗಳಿನಲ್ಲಿ ಸಿಕ್ತು 15 ಲಕ್ಷ ಫಂಡಿಂಗ್- ಕಂಪನಿಯ ಮೌಲ್ಯ 2.5 ಕೋಟಿಗೂ ಅಧಿಕ

    15 ಸಾವಿರದಲ್ಲಿ ಸ್ಟಾರ್ಟ್ ಅಪ್, 4ನೇ ತಿಂಗಳಿನಲ್ಲಿ ಸಿಕ್ತು 15 ಲಕ್ಷ ಫಂಡಿಂಗ್- ಕಂಪನಿಯ ಮೌಲ್ಯ 2.5 ಕೋಟಿಗೂ ಅಧಿಕ

    – ಸಾಮಾನ್ಯ ವಿದ್ಯಾರ್ಥಿಗಳ ಅಸಾಮಾನ್ಯ ಸಾಧನೆ

    ಲವೊಂದಿದ್ದರೆ ಏನು ಬೇಕಾದ್ರೂ ಮಾಡಬಹುದು. ಛಲಗಾರನಿಗೆ ಅಸಾಧ್ಯವಾದದ್ದು ಸರಳವಾಗುತ್ತೆ. ಅಂತಹ ಇಬ್ಬರು ಯುವಕರ ಸ್ಫೂರ್ತಿದಾಯಕದ ಸಾಧನೆ ಕಥೆ ಇಲ್ಲಿದೆ. ಕೇವಲ 15 ಸಾವಿರ ರೂ.ದಲ್ಲಿ ಸ್ಟಾರ್ಟ್ ಅಪ್ ಆರಂಭಿಸಿದ್ದ ಯುವಕರಿಗೆ ನಾಲ್ಕು ತಿಂಗಳಲ್ಲಿ 15 ಲಕ್ಷ ರೂ. ಫಂಡಿಂಗ್ ಸಿಕ್ಕಿದ್ದು, ಸದ್ಯ ಕಂಪನಿಯ ಮೌಲ್ಯ ಎರಡೂವರೆ ಕೋಟಿಗೂ ಅಧಿಕ.

    22 ವರ್ಷದ ರಿಷಬ್ ಮತ್ತು 21 ವರ್ಷದ ಲಕ್ಕಿ ರೊಹಿಲ್ಲಾ ಇಬ್ಬರು ಕುರುಕ್ಷೇತ್ರದ ಎನ್‍ಐಟಿಯ ಫೈನಲ್ ಇಯರ್ ವಿದ್ಯಾರ್ಥಿಗಳು. ಕಾಲೇಜಿನ ಎರಡನೇ ವರ್ಷದಲ್ಲಿ ಇಬ್ಬರು ಜೊತೆಗೂಡಿ ಒಂದು ಆ್ಯಪ್ ಡೆವಲಪ್ ಮಾಡಿದ್ದರು. ಆದ್ರೆ ಹೆಚ್ಚು ಬಳಕೆಯಾಗದ ಹಿನ್ನೆಲೆ ನಾಲ್ಕು ತಿಂಗಳಲ್ಲೇ ಆ್ಯಪ್ ಕ್ಲೋಸ್ ಮಾಡಲಾಯ್ತು. ಮೂರನೇ ವರ್ಷದಲ್ಲಿ ಆರು ತಿಂಗಳು ಇಂಟರ್ನ್ ಶಿಪ್ ಬಂದಿತ್ತು. ಈ ಸೆಮಿಸ್ಟರ್ ನಲ್ಲಿ ಹೆಚ್ಚು ಓದೋದು ಇರಲ್ಲ. ಹಾಗಾಗಿ ಲಕ್ಕಿ ಹಾಗೂ ರಿಷಬ್ ತಮ್ಮದೇ ಹೊಸ ಸ್ಟಾರ್ಟ್ ಅಪ್ ಆರಂಭಿಸುವ ಕುರಿತು ಪ್ಲಾನ್ ಮಾಡತೊಡಗಿದರು. 2020 ಮಾರ್ಚ್ ನಲ್ಲಿ ಕೆಲವು ಐಡಿಯಾಗಳ ಕೆಲಸ ಮಾಡಲು ಆರಂಭಿಸಿದ ಗೆಳೆಯರು ಕೆಲವೇ ದಿನಗಳಲ್ಲಿ quantel.in (ಕ್ವಾಂಟೆಲ್.ಇನ್) ಹೆಸರಿನ ಪ್ಲಾಟ್‍ಫಾರಂ ನಿರ್ಮಿಸಿದರು. ಈ ವೇದಿಕೆಯಲ್ಲಿ ತಜ್ಞರ ಜೊತೆ ವಿದ್ಯಾರ್ಥಿಗಳು ಫೇಸ್ ಟು ಫೇಸ್ ಮಾತಾಡಬಹುದು. ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಮತ್ತು ತಜ್ಞರಿಂದ ನೇರವಾಗಿ ಭವಿಷ್ಯದ ಕುರಿತ ಸಲಹೆಗಳನ್ನ ಪಡೆಯಬಹುದಾಗಿದೆ.

    ಹೂಡಿಕೆ ಮಾಡಿದ್ದು 15 ಸಾವಿರ ರೂಪಾಯಿ!: ಹೌದು ರಿಷಬ್ ಮತ್ತು ಲಕ್ಕಿ ಆ್ಯಡ್‍ಟೆಕ್ ಸ್ಟಾರ್ಟ್ ಅಪ್‍ಗಾಗಿ ಆರಂಭದಲ್ಲಿ 15 ಸಾವಿರ ರೂಪಾಯಿ ಹೂಡಿಕೆ ಮಾಡಿದ್ದರು. ಕಂಪನಿಯ ನೋಂದಣಿಗಾಗಿ ತಮ್ಮ ಸೇವಿಂಗ್ಸ್ ಹಣ ಬಳಸಿದ್ದರು. ಸ್ಟಾರ್ಟ್ ಅಪ್ ಆರಂಭಿಸಿದ ನಾಲ್ಕು ತಿಂಗಳಲ್ಲಿಯೇ ಕ್ಯಾಲಿಫೋರ್ನಿಯಾದ ಕಂಪನಿ ಬಂಡವಾಳ ಹೂಡಿಕೆಗೆ ಮುಂದೆ ಬಂದು 15 ಲಕ್ಷ ರೂ. ಫಂಡಿಂಗ್ ಮಾಡಿದೆ. ಸದ್ಯ ಋಷಬ್ ಮತ್ತು ಲಕ್ಕಿ ಕಂಪನಿಯ ಒಟ್ಟು ಮೌಲ್ಯ 2.5 ಕೋಟಿ ರೂ.ಗೆ ತಲುಪಿದೆ.

    ತಜ್ಞರಿಂದ ಸಲಹೆ, ಮಾರ್ಗಸೂಚಿ, ಆಯ್ಕೆಯ ಮಾಹಿತಿ: 12ನೇ ತರಗತಿ ಬಳಿಕ ಪದವಿಯಲ್ಲಿ ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕು? ಪದವಿ ನಂತರ ಏನು ಮತ್ತು ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳು ಪಡೆದುಕೊಳ್ಳುವ ತರಬೇತಿಯ ಗುಣಮಟ್ಟ ಹೇಗಿರಬೇಕು ಎಂಬಿತ್ಯಾದಿ ಎಲ್ಲ ಪ್ರಶ್ನೆಗಳಿಗೆ ನಮ್ಮ ಕ್ವಾಂಟೆಲ್.ಇನ್ ಉತ್ತರ ನೀಡುತ್ತದೆ ಎಂದು ರಿಷಬ್ ಹೇಳ್ತಾರೆ. ಕ್ವಾಂಟೆಲ್ ವೇದಿಕೆಯಲ್ಲಿ ಬೇರೆ ಬೇರೆ ಕ್ಷೇತ್ರದ ತಜ್ಞರನ್ನ ನೇರವಾಗಿ ಸಂಪರ್ಕಿಸಿ ಸಲಹೆ ಪಡೆಯಬಹುದು. ವಿದ್ಯಾರ್ಥಿಗಳು ಯಾವುದೇ ಹಿಂಜರಿಕೆಯಿಲ್ಲದೇ ನೇರವಾಗಿ ಪ್ರಶ್ನೆ ಕೇಳಬಹುದಾಗಿದೆ. ನಿಮ್ಮ ಶಿಕ್ಷಣ, ಉದ್ಯೋಗ ಮತ್ತು ಭವಿಷ್ಯದ ಕುರಿತ ಪ್ರಶ್ನೆಗಳನ್ನ ಕೇಳಿ ವಿದ್ಯಾರ್ಥಿಗಳು ಉತ್ತರ ಪಡೆದುಕೊಳ್ಳಬಹುದು ಎಂದು ಹೇಳ್ತಾರೆ ರಿಷಬ್.

    200 ರೂ. ಪಾವತಿಸಿ ಉತ್ತರ ಕಂಡುಕೊಳ್ಳಿ: ಕ್ವಾಂಟೆಲ್ ಪ್ಲಾಟ್‍ಫಾರಂನಲ್ಲಿರುವ ತಜ್ಞರ ಮಾಹಿತಿ ನೀಡಲಾಗಿರುತ್ತದೆ. ಪ್ರತಿ ತಜ್ಞರ ಕ್ಷೇತ್ರ, ಅನುಭವವನ್ನ ಅವರ ಪ್ರೊಫೈಲ್ ನಲ್ಲಿ ತಿಳಿಸಲಾಗಿರುತ್ತದೆ. ವಿದ್ಯಾರ್ಥಿಗಳೇ ತಮ್ಮ ಸಮಸ್ಯೆಗೆ ಯಾರಿಂದ ಪರಿಹಾರ ಸಿಗುತ್ತೆ ಅಂತ ನಿರ್ಧರಿಸಬಹುದು. ವಿದ್ಯಾರ್ಥಿಗಳಿಗೆಯೇ ತಜ್ಞರನ್ನ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡಲಾಗುತ್ತದೆ. 30 ರಿಂದ 40 ನಿಮಿಷ ವರ್ಚುವಲ್ ಸೆಷನ್ ಏರ್ಪಡಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರತಿ ಸೆಷನ್ ಗೆ 200 ರೂಪಾಯಿ ಪಾವತಿಸಬೇಕು. ಅತ್ಯಧಿಕ ಶುಲ್ಕವೇ ಆರು ನೂರು ರೂಪಾಯಿ ಇದೆ.

    ತಜ್ಞರ ಜೊತೆಗೆ ನೇರವಾಗಿ ಮಾತನಾಡಲು ಯಾವುದೇ ಕಂಪನಿ ನಮಗಿಂತ ಕಡಿಮೆ ಮೊತ್ತ ಚಾರ್ಜ್ ಮಾಡಲಾರದು. ಸದ್ಯ ಅತಿ ಕಡಿಮೆ ಶುಲ್ಕಕ್ಕೆ ಸೇವೆಯನ್ನ ನೀಡಲಾಗುತ್ತಿದೆ. ಇದುವರೆಗೂ ಕಾಲೇಜು ಮತ್ತು ವಿಶ್ವವಿದ್ಯಾಲಯದ ಸುಮಾರು 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿ ನಮ್ಮ ವೇದಿಕೆ ತಲುಪಿದ್ದಾರೆ ಎಂದು ರಿಷಬ್ ಸಂತೋಷ ವ್ಯಕ್ತಪಡಿಸಿದ್ದಾರೆ. ಅವಶ್ಯವಿರುವ ಎಲ್ಲ ವಿದ್ಯಾರ್ಥಿಗೂ ಸೂಕ್ತ ಮಾರ್ಗದರ್ಶನ ಸಿಗಬೇಕು ಎಂಬುವುದು ನಮ್ಮ ಸ್ಟಾರ್ಟ್ ಅಪ್ ಉದ್ದೇಶ ಎಂದು ಹೇಳ್ತಾರೆ ಲಕ್ಕಿ. ಸದ್ಯ ಟಯರ್-1, 2 ಮತ್ತು ಮೂರನೇ ಹಂತದ ನಗರಗಳ ವಿದ್ಯಾರ್ಥಿಗಳತ್ತ ನಮ್ಮ ಗಮನವಿದೆ. ವ್ಯವಹಾರ ಒಂದೆಡೆ ಇರಬಹುದು, ನಮ್ಮ ಸ್ಟಾರ್ಟ್ ಅಪ್ ಮೂಲಕ ಸೋಶಿಯಲ್ ಇಂಪ್ಯಾಕ್ಟ್ ಕ್ರಿಯೇಟ್ ಮಾಡಲು ಪ್ರಯತ್ನಿಸುತ್ತಿದ್ದೇವೆ. ಕೈಗೆಟುಕುವ ದರದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಮತ್ತು ಮೆಂಟರ್ ಶಿಪ್ ಸಿಗುವಂತಾಗಬೇಕು ಎಂದು ಸ್ಟಾರ್ಟ್ ಅಪ್ ಆರಂಭದ ಉದ್ದೇಶವನ್ನ ಲಕ್ಕಿ ತಿಳಿಸಿದರು.

    ಬಂಡವಾಳ ಹೂಡಿಕೆಗೆ 35 ಹೂಡಿಕೆದಾರರು ಹಿಂದೇಟು: ಸ್ಟಾರ್ಟ್ ಅಪ್ ಆರಂಭಿಸಿದ ಬಳಿಕ ಲಕ್ಕಿ ಮತ್ತು ರಿಷಬ್ ಫಂಡಿಂಗ್ ಗಾಗಿ ಇನ್ವೆಸ್ಟರ್ಸ್ ಗಳನ್ನ ಹುಡುಕಾಡಿದ್ದಾರೆ. ನೀವಿನ್ನೂ ಕಾಲೇಜಿನ ವಿದ್ಯಾರ್ಥಿಗಳು. ಒಂದು ದಿನದ ಜೋಶ್ ಕೆಲವೇ ದಿನಗಳಲ್ಲಿ ಮುಗಿದು ಹೋಗುತ್ತೆ ಎಂದು 35 ಹೂಡಿಕೆದಾರರು ಫಂಡಿಂಗ್ ಮಾಡಲು ಮುಂದೆ ಬರಲಿಲ್ಲ. ಆದ್ರೆ 36ನೇ ಹೂಡಿಕೆದಾರರಿಗೆ ರಿಷಬ್ ಮತ್ತು ಲಕ್ಕಿಯ ಐಡಿಯಾ ಇಷ್ಟವಾಗಿದೆ. ನಮ್ಮ ಇನ್ವೆಸ್ಟರ್ ದೆಹಲಿಯಲ್ಲಿಯೇ ಶಿಕ್ಷಣ ಪಡೆದಿದ್ದು, ಉದ್ಯೋಗ ಅರಸಿ ಯುಎಸ್ ಗೆ ತೆರಳಿದ್ದು, ಅಲ್ಲಿಯೇ ಸೆಟಲ್ ಆಗಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿರುವ ಅವರು ಅಲ್ಲಿಂದಲೇ 15 ಲಕ್ಷ ರೂ. ಫಂಡಿಂಗ್ ಮಾಡಿದರು. ಇದೇ ಹಣದಿಂದ ಪ್ರೊಜೆಕ್ಟರ್, ಮಾರ್ಕೆಟ್ ಖರ್ಚು, ನೌಕರರ ಸಂಬಳ, ಪೀಠೋಪಕರಣ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನ ಮಾಡಿಕೊಳ್ಳಲಾಯ್ತು ಎಂದು ಲಕ್ಕಿ ಕಂಪನಿ ಆರಂಭದಲ್ಲಿ ಎದುರಾದ ಸವಾಲುಗಳನ್ನ ಹಂಚಿಕೊಂಡರು.

    ರಿಷಬ್ ಮತ್ತು ಲಕ್ಕಿ ಒಂದೇ ಕೋಚಿಂಗ್ ಸೆಂಟರ್ ನಿಂದ ಜೆಇಇ ಯ ತಯಾರಿ ನಡೆಸಿದ್ದರು. ಆದ್ರೆ ಅಲ್ಲಿ ಇಬ್ಬರಿಗೂ ಪರಿಚಯವಿರಲಿಲ್ಲ. ಕುರುಕ್ಷೇತ್ರದ ಎನ್‍ಐಟಿಯಲ್ಲಿ ರಿಷಬ್ ಮೆಕ್ಯಾನಿಕಲ್ ಇಂಜಿನೀಯರಿಂಗ್ ಬ್ರ್ಯಾಂಚ್ ಮತ್ತು ಲಕ್ಕಿ ಸಿವಿಲ್ ಇಂಜಿನೀಯರಿಂಗ್ ಬ್ರ್ಯಾಂಚ್ ಸೇರಿಕೊಂಡಿದ್ದರು. ಒಂದೇ ಕಾಲೇಜಿನಲ್ಲಿ ಓದುತ್ತಿದ್ದರಿಂದ ಇಬ್ಬರ ಸ್ನೇಹ ಬೆಳೆದಿತ್ತು. ಇಬ್ಬರ ಆಲೋಚನೆಗಳು ಒಂದೇ ಆಗಿದ್ದರಿಂದ ರಿಷಬ್ ಮತ್ತು ಲಕ್ಕಿ ಸ್ನೇಹ ಗಾಢವಾಗಿತ್ತು. ಯಾವುದೋ ಕಂಪನಿಯಲ್ಲಿ ನೌಕರನಾಗಿ ಕೆಲಸ ಮಾಡುವ ಬದಲಾಗಿ ಇಬ್ಬರು ತಮ್ಮದೇ ಬ್ಯುಸಿನೆಸ್ ಆರಂಭಿಸಬೇಕೆಂದು ಪ್ಲಾನ್ ಮಾಡಿಕೊಂಡಿದ್ದರು.

    ಹೊಸ ಬ್ಯುಸಿನೆಸ್ ಆರಂಭಕ್ಕೂ ಇಬ್ಬರ ಕುಟುಂಬಸ್ಥರು ಸಪೋರ್ಟ್ ಮಾಡಿದ್ದಾರೆ. ನಂತರ ಕಾಲೇಜಿನ ಕ್ಯಾಂಪಸ್ ನಲ್ಲಿಯೇ ಕುಳಿತು ತಮ್ಮ ಸ್ಟಾರ್ಟ್ ಅಪ್ ಹೇಗಿರಬೇಕು? ಫಂಡಿಂಗ್, ಕಚೇರಿ, ಉದ್ಯೋಗಿಗಳ ಆಯ್ಕೆ ಸೇರಿದಂತೆ ಎಲ್ಲ ವಿಷಯಗಳ ಕುರಿತು ಚರ್ಚೆ ನಡೆಸಿ, ಕ್ವಾಂಟೆಲ್ ಪ್ಲಾಟ್‍ಫಾರಂ ಸೆಟಪ್ ಮಾಡುವಲ್ಲಿ ಯಶಸ್ಸು ಕಂಡಿದ್ದಾರೆ.

    ಸದ್ಯ 24 ಜನರ ಟೀಂ, ಎಲ್ಲರೂ 18ರಿಂದ 22 ವಯಸ್ಸಿನವರೇ: ಇಬ್ಬರಿಂದ ಆರಂಭವಾದ ತಂಡದಲ್ಲಿ ಸದ್ಯ 24 ಜನರಿದ್ದಾರೆ. ಕೋರ್ ಟೀಂನಲ್ಲಿ ಎಂಟು ಜನ ಮತ್ತು 15 ಇಂಟರ್ನ್ ಗಳಿದ್ದಾರೆ. ರಿಷಬ್, ಆತನಿಬ್ಬರು ಗೆಳೆಯರೇ 22 ವರ್ಷದವರು. ಡಿಸೈನಿಂಗ್ ಕೆಲಸ ಮಾಡುವ ಉದ್ಯೋಗಿಯ ವಯಸ್ಸು 18 ವರ್ಷ. 24 ಜನರು 18 ರಿಂದ 22 ವಯಸ್ಸಿನ ಒಂದೇ ವಯೋಮಾನದವರು ಎಂಬುವುದು ಮತ್ತೊಂದು ವಿಶೇಷ.

    ಲಕ್ಕಿಗೆ 2019ರಲ್ಲಿ ಬಿಡುಗಡೆಯಾದ ಅಪ್‍ ಸ್ಟಾರ್ಟ್ಸ್ ಸಿನಿಮಾ ಪ್ರೇರಣೆಯಾದ್ರೆ, ರಿಷಬ್ ಗೆ ಸ್ಟಾರ್ಟ್ ಅಪ್ ಮತ್ತು ಮೋಟಿವೇಷನಲ್ ಕಂಪನಿಯ ಕಥೆಗಳನ್ನು ಓದೋದು ಇಷ್ಟ. ಓಯೋ ಫೌಂಡರ್ ರಿತೇಶ್ ಅಗರ್‍ವಾಲ್ ಯಶಸ್ಸಿನ ಕಥೆ ಸ್ಟಾರ್ಟ್ ಅಪ್ ಆರಂಭಿಸಲು ಪ್ರೇರಣೆ ನೀಡಿದೆ. ಇಬ್ಬರು ಟಿವಿಎಫ್ ವೆಬ್ ಸಿರೀಸ್ ಪೀಚರ್ಸ್ ನಿಂದ ಪ್ರಭಾವಿತರಾಗಿದ್ದಾರೆ.