Tag: ಫೇಸ್‍ಬುಕ್

  • ರಿಲಯನ್ಸ್‌ AI ಕಂಪನಿಯಲ್ಲಿ 30% ಪಾಲನ್ನು ಪಡೆದ ಫೇಸ್‌ಬುಕ್‌

    ರಿಲಯನ್ಸ್‌ AI ಕಂಪನಿಯಲ್ಲಿ 30% ಪಾಲನ್ನು ಪಡೆದ ಫೇಸ್‌ಬುಕ್‌

    ಮುಂಬೈ: ಮುಕೇಶ್‌ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಆರಂಭಿಸಿದ ಹೊಸ ಕೃತಕ ಬುದ್ದಿಮತ್ತೆ (Artificial Intelligence) ಕಂಪನಿ ರಿಲಯನ್ಸ್ ಎಂಟರ್‌ಪ್ರೈಸ್ ಇಂಟೆಲಿಜೆನ್ಸ್ ಲಿಮಿಟೆಡ್‌ನಲ್ಲಿ (REIL) ಫೇಸ್‌ಬುಕ್‌ (Facebook) ಮಾತೃಸಂಸ್ಥೆ ಮೆಟಾ ಶೇ.30 ರಷ್ಟು ಪಾಲನ್ನು ಪಡೆದುಕೊಂಡಿದೆ.

    REIL ಉದ್ಯಮವು AI ಸೇವೆಗಳನ್ನು ಅಭಿವೃದ್ಧಿಪಡಿಸುತ್ತದೆ, ಮಾರುಕಟ್ಟೆ ಮಾಡುತ್ತದೆ ಮತ್ತು ವಿತರಿಸಲಿದೆ. ಜಂಟಿ ಉದ್ಯಮದ ಒಪ್ಪಂದ ಪ್ರಕಾರ ರಿಲಯನ್ಸ್ ಇಂಟೆಲಿಜೆನ್ಸ್ REIL ನಲ್ಲಿ ಶೇ.70 ರಷ್ಟು ಮತ್ತು ಮೆಟಾ (META) ಉಳಿದ ಶೇ.30 ರಷ್ಟು ಪಾಲನ್ನು ಹೊಂದಿರುತ್ತದೆ ಎಂದು ಅದು ಹೇಳಿದೆ.

    ಭಾರತದಾದ್ಯಂತ ಎಂಟರ್‌ಪ್ರೈಸ್ AI ಸೇವೆಗಳನ್ನು ಅಭಿವೃದ್ಧಿಪಡಿಸುವುದು, ಮಾರಾಟ ಮಾಡುವುದು ಮತ್ತು ವಿತರಿಸುವುದರ ಮೇಲೆ ಕೇಂದ್ರೀಕರಿಸುವ REIL ನಲ್ಲಿ ಎರಡೂ ಕಂಪನಿಗಳು 855 ಕೋಟಿ ರೂ.ಗಳ ಆರಂಭಿಕ ಸಂಯೋಜಿತ ಹೂಡಿಕೆಯನ್ನು ಮಾಡಿವೆ.  ಇದನ್ನೂ ಓದಿ:  ನೀವು ಬೆಂಗಳೂರಿಗೆ ಹೋದರೆ, ಕನ್ನಡ ಕಲಿಯಿರಿ: ಝೋಹೊ ಸಂಸ್ಥಾಪಕ ಶ್ರೀಧರ್ ವೆಂಬು

    ಆಗಸ್ಟ್ 2025 ರಲ್ಲಿ RIL ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಂಟಿ ಉದ್ಯಮದ ಬಗ್ಗೆ ಘೋಷಣೆಯಾಗಿತ್ತು. ಮೇಟಾದ ಓಪನ್‌ಸೋರ್ಸ್‌ ಲಾಮಾ ಆಧಾರಿತ ಮಾದರಿಗಳನ್ನು ನಿರ್ಮಿಸುವಲ್ಲಿ ತಾಂತ್ರಿಕ ಪರಿಣತಿಯನ್ನು ಒದಗಿಸುತ್ತದೆ.

    ರಿಲಯನ್ಸ್‌ ಮತ್ತು ಫೇಸ್‌ಬುಕ್‌ ಜೊತೆಯಾಗುವುದು ಇದೇ ಮೊದಲಲ್ಲ. ಏಪ್ರಿಲ್‌ 2020 ರಲ್ಲಿ ಫೇಸ್‌ಬುಕ್ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ 5.7 ಬಿಲಿಯನ್ ಡಾಲರ್‌ (43,574 ಕೋಟಿ ರೂ.) ಹೂಡಿಕೆ ಮಾಡಿತ್ತು ಜೂನ್ 2020 ರಲ್ಲಿ ಭಾರತದ ಸ್ಪರ್ಧಾ ಆಯೋಗವು ಆ ಹೂಡಿಕೆಯನ್ನು ಅನುಮೋದಿಸಿದ್ದು ಈಗ ಜಿಯೋ (Jio) ಪ್ಲಾಟ್‌ಫಾರ್ಮ್‌ಗಳಲ್ಲಿ 9.99% ಪಾಲನ್ನು ಫೇಸ್‌ಬುಕ್‌ ಹೊಂದಿದೆ.

  • ನೇಪಾಳದಲ್ಲಿ ಫೇಸ್‌ಬುಕ್‌, ಯೂಟ್ಯೂಬ್‌, ಎಕ್ಸ್‌ ನಿಷೇಧ – ಸರ್ಕಾರದ ವಿರುದ್ಧ ಸಿಡಿದೆದ್ದ ಜನರು; ಹಿಂಸಾಚಾರಕ್ಕೆ 9 ಬಲಿ

    ನೇಪಾಳದಲ್ಲಿ ಫೇಸ್‌ಬುಕ್‌, ಯೂಟ್ಯೂಬ್‌, ಎಕ್ಸ್‌ ನಿಷೇಧ – ಸರ್ಕಾರದ ವಿರುದ್ಧ ಸಿಡಿದೆದ್ದ ಜನರು; ಹಿಂಸಾಚಾರಕ್ಕೆ 9 ಬಲಿ

    – ಬೀದಿಗಿಳಿದು ಬೃಹತ್‌ ಪ್ರತಿಭಟನೆ

    ಕಠ್ಮಂಡು: ಭ್ರಷ್ಟಾಚಾರ ಹಾಗೂ ಫೇಸ್‌ಬುಕ್‌, ಯೂಟ್ಯೂಬ್‌, ಎಕ್ಸ್‌ ಆ್ಯಪ್‌ಗಳನ್ನು ಬ್ಯಾನ್‌ ಮಾಡಿದ ಸರ್ಕಾರದ ವಿರುದ್ಧ ನೇಪಾಳದ (Nepal) ಜನತೆಗೆ ತಿರುಗಿಬಿದ್ದಿದ್ದಾರೆ. ದೇಶಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ.

    ಪ್ರತಿಭಟನಾಕಾರರು ಬೀದಿಗಿಳಿದಾಗ ನಡೆದ ಹಿಂಸಾತ್ಮಕ ಘರ್ಷಣೆಗಳಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಕೋಪಗೊಂಡ ಪ್ರತಿಭಟನಾಕಾರರು ಕರ್ಫ್ಯೂ ನಿರ್ಬಂಧಗಳನ್ನು ಮುರಿದು ಸಂಸತ್ತಿನ ಬಳಿಯ ನಿರ್ಬಂಧಿತ ವಲಯಗಳನ್ನು ಪ್ರವೇಶಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ, ನೇಪಾಳ ರಾಜಧಾನಿಯಲ್ಲಿ ಸೈನ್ಯವನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ನೇಪಾಳದಲ್ಲಿ ಫೇಸ್ಬುಕ್, ಎಕ್ಸ್, ಯೂಟ್ಯೂಬ್ ಸೇರಿ 26 ಸೋಷಿಯಲ್ ಮೀಡಿಯಾಗಳಿಗೆ ನಿಷೇಧ

    ಪ್ರತಿಭಟನಾಕಾರರು ಮರದ ಕೊಂಬೆಗಳು ಮತ್ತು ನೀರಿನ ಬಾಟಲಿಗಳನ್ನು ಎಸೆದು ಸರ್ಕಾರದ ವಿರೋಧಿ ಘೋಷಣೆಗಳನ್ನು ಕೂಗಿದರು. ಪೊಲೀಸರು ಜಲಫಿರಂಗಿ, ಅಶ್ರುವಾಯು ಮತ್ತು ರಬ್ಬರ್ ಗುಂಡು ಸಿಡಿಸಿದರು. ಕೆಲವು ಪ್ರತಿಭಟನಾಕಾರರು ಸಂಸತ್ತಿನ ಆವರಣವನ್ನು ಪ್ರವೇಶಿಸುವಲ್ಲಿ ಯಶಸ್ವಿಯಾದರು, ಇದು ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಿದೆ.

    ಮುಖ್ಯ ಜಿಲ್ಲಾ ಅಧಿಕಾರಿ ಛಬಿಲಾಲ್ ರಿಜಾಲ್ ಪ್ರಕಾರ, ಕರ್ಫ್ಯೂ ಮಧ್ಯಾಹ್ನ 12:30 ರಿಂದ ರಾತ್ರಿ 10:00 ರವರೆಗೆ (ಸ್ಥಳೀಯ ಸಮಯ) ಜಾರಿಯಲ್ಲಿದೆ. ಈ ವಲಯಗಳಲ್ಲಿ ಸಾರ್ವಜನಿಕರ ಓಡಾಟ, ಸಭೆ ಸೇರುವುದು, ಪ್ರತಿಭಟನೆಗಳು ಅಥವಾ ಸುತ್ತುವರಿದ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದನ್ನೂ ಓದಿ: ಇಸ್ರೇಲಿನ ಜೆರುಸಲೇಂನಲ್ಲಿ ಉಗ್ರರ ದಾಳಿ – ಕನಿಷ್ಠ 5 ಬಲಿ, ಹಲವು ಮಂದಿಗೆ ಗಾಯ

    ನೇಪಾಳ ಸರ್ಕಾರ ನೋಂದಾಯಿತ 26 ಪ್ಲಾಟ್‌ಫಾರ್ಮ್‌ಗಳನ್ನು ನಿರ್ಬಂಧಿಸಿದೆ. ಇಲ್ಲಿನ ಜನತೆಗೆ ಯೂಟ್ಯೂಬ್‌, ಎಕ್ಸ್‌, ಫೇಸ್‌ಬುಕ್‌ ಸೈಟ್‌ಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಇದು ಬಳಕೆದಾರರ ಆಕ್ರೋಶ ಕಾರಣವಾಗಿದೆ. ಇನ್‌ಸ್ಟಾಗ್ರಾಮ್‌ನಂತಹ ಜನಪ್ರಿಯ ಪ್ಲಾಟ್‌ಫಾರ್ಮ್‌ಗಳು ನೇಪಾಳದಲ್ಲಿ ಲಕ್ಷಾಂತರ ಬಳಕೆದಾರರನ್ನು ಹೊಂದಿದೆ.

    ಸರ್ಕಾರದ ಕ್ರಮವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಾವಿರಾರು ಯುವ ನೇಪಾಳಿಗಳು ಕಠ್ಮಂಡುವಿನಲ್ಲಿ ಮೆರವಣಿಗೆ ನಡೆಸಿ, ಸರ್ಕಾರವು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲಿನ ನಿಷೇಧವನ್ನು ತೆಗೆದುಹಾಕಬೇಕು. ದೇಶವನ್ನು ವ್ಯಾಪಿಸಿರುವ ಭ್ರಷ್ಟಾಚಾರದ ಸಂಸ್ಕೃತಿಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

  • ನೇಪಾಳದಲ್ಲಿ ಫೇಸ್ಬುಕ್, ಎಕ್ಸ್, ಯೂಟ್ಯೂಬ್ ಸೇರಿ 26 ಸೋಷಿಯಲ್ ಮೀಡಿಯಾಗಳಿಗೆ ನಿಷೇಧ

    ನೇಪಾಳದಲ್ಲಿ ಫೇಸ್ಬುಕ್, ಎಕ್ಸ್, ಯೂಟ್ಯೂಬ್ ಸೇರಿ 26 ಸೋಷಿಯಲ್ ಮೀಡಿಯಾಗಳಿಗೆ ನಿಷೇಧ

    ಕಠ್ಮಂಡು: ನೇಪಾಳದಲ್ಲಿ (Nepal) ಫೇಸ್ಬುಕ್‌, ಎಕ್ಸ್‌, ಯೂಟ್ಯೂಬ್‌ ಸೇರಿದಂತೆ 26 ಸೋಷಿಯಲ್‌ ಮೀಡಿಯಾಗಳಿಗೆ ನಿಷೇಧ ವಿಧಿಸಲಾಗಿದೆ.

    ನೇಪಾಳದಲ್ಲಿ ಅಧಿಕೃತವಾಗಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ ಮಾತ್ರ ಬಳಕೆಗೆ ಅವಕಾಶ ನೀಡಲಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸರ್ಕಾರ ನಿರ್ಧಾರ ಕೈಗೊಂಡಿದೆ.

    ಸ್ಥಳೀಯ ಮಟ್ಟದಲ್ಲಿ ನೋಂದಣಿಯಾಗಿರಲಿಲ್ಲ. ಜಾಹೀರಾತುಗಳ ಮೇಲೆ ಸರ್ಕಾರದ ನಿಯಂತ್ರಣ ಇರಲಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದಿತ್ತು. ಸ್ಥಳೀಯ ನೋಂದಣಿವರೆಗೂ ಬಳಕೆಗೆ ತಡೆ ಹಾಕುವಂತೆ ಕೋರ್ಟ್‌ ಸೂಚಿಸಿತ್ತು.

    ಇದರ ಬೆನ್ನಲ್ಲೇ ಸರ್ಕಾರದಿಂದ ದೂರಸಂಪರ್ಕ ಪ್ರಾಧಿಕಾರಕ್ಕೆ ಪತ್ರ ರವಾನೆಯಾಗಿದೆ. ಈ ಪ್ಲಾಟ್‌ಫಾರ್ಮ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲು ಸರ್ಕಾರ ನಿರ್ದೇಶಿಸಿದೆ.

  • ಭಾರತ ಸೇರಿ ವಿಶ್ವಾದ್ಯಂತ ಫೇಸ್‌ಬುಕ್‌, ವಾಟ್ಸಪ್‌ ಡೌನ್‌

    ಭಾರತ ಸೇರಿ ವಿಶ್ವಾದ್ಯಂತ ಫೇಸ್‌ಬುಕ್‌, ವಾಟ್ಸಪ್‌ ಡೌನ್‌

    ನವದೆಹಲಿ: ಭಾರತ (India), ಅಮೆರಿಕ ಸೇರಿದಂತೆ ವಿಶ್ವಾದ್ಯಂತ ವಾಟ್ಸಪ್‌ ಮತ್ತು ಫೇಸ್‌ಬುಕ್‌ ಮೆಸೇಂಜರ್‌ (Whatsapp, Facebook) ಸೇವೆಯಲ್ಲಿ ವ್ಯತ್ಯಯವಾಗಿದೆ.

    ಹಲವು ಮಂದಿ ಬಳಕೆದಾರರು ವಾಟ್ಸಪ್‌ನಲ್ಲಿ ಮೆಸೇಜ್‌ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಪೋಸ್ಟ್‌ ಮಾಡುತ್ತಿದ್ದಾರೆ.

    ಫೇಸ್‌ಬುಕ್‌, ವಾಟ್ಸಪ್‌ ಡೌನ್‌ ಆಗಿದ್ದಕ್ಕೆ ಇಲ್ಲಿಯವರೆಗೆ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  • ಜುಕರ್‌ಬರ್ಗ್‌ ಹೇಳಿಕೆಗೆ ಕ್ಷಮೆ ಕೇಳಿದ ಮೆಟಾ – ಈ ವಿಚಾರ ಇಲ್ಲಿಗೆ ಮುಕ್ತಾಯ: ನಿಶಿಕಾಂತ್‌ ದುಬೆ

    ಜುಕರ್‌ಬರ್ಗ್‌ ಹೇಳಿಕೆಗೆ ಕ್ಷಮೆ ಕೇಳಿದ ಮೆಟಾ – ಈ ವಿಚಾರ ಇಲ್ಲಿಗೆ ಮುಕ್ತಾಯ: ನಿಶಿಕಾಂತ್‌ ದುಬೆ

    ನವದೆಹಲಿ: ಫೇಸ್‌ಬುಕ್‌ (Facebook) ಕಂಪನಿಯ ಮಾತೃಸಂಸ್ಥೆ ಮೆಟಾ (Meta) ಕ್ಷಮೆಯಾಚನೆ ಮಾಡಿದ ಬೆನ್ನಲ್ಲೇ ಈ ವಿಚಾರವನ್ನು ಇಲ್ಲಿಗೆ ಮುಗಿಸುತ್ತೇವೆ ಎಂದು ಬಿಜೆಪಿ ಸಂಸದ ಮತ್ತು ಮಾಹಿತಿ ತಂತ್ರಜ್ಞಾನ ಸಂಸದೀಯ ಸಮಿತಿ ಅಧ್ಯಕ್ಷ ನಿಶಿಕಾಂತ್ ದುಬೆ (Nishikant Dubey) ಹೇಳಿದ್ದಾರೆ.

    ಪಾಡ್‌ಕಾಸ್ಟ್ ಒಂದರಲ್ಲಿ ಮಾತನಾಡಿದ್ದ ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ (Mark Zuckerberg) ಅವರು ಕೋವಿಡ್ ಸಾಂಕ್ರಾಮಿಕದ ಬಳಿಕ ಭಾರತ ಸೇರಿದಂತೆ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಸರ್ಕಾರಗಳು 2024ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಹೇಳಿದ್ದರು.

    ಈ ಹೇಳಿಕೆಗೆ ಭಾರತದಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆ ಮೆಟಾ ಇಂಡಿಯಾದ ಉಪಾಧ್ಯಕ್ಷ ಶಿವನಾಥ್ ಥುರ್ಕಲ್‌ ಅವರು ಮಾಹಿತಿ ತಂತ್ರಜ್ಞಾನ ಖಾತೆಯ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnav) ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿ ಉದ್ದೇಶಪೂರ್ವಕವಲ್ಲದ ಈ ತಪ್ಪಿಗಾಗಿ ಕ್ಷಮೆಯಾಚಿಸುತ್ತೇವೆ ಎಂದು ಹೇಳಿದ್ದಾರೆ.

    2024 ರ ಚುನಾವಣೆಯಲ್ಲಿ ಅನೇಕ ಅಧಿಕಾರದಲ್ಲಿರುವ ಪಕ್ಷಗಳು ಮರು ಆಯ್ಕೆಯಾಗಲಿಲ್ಲ ಎಂಬ ಮಾರ್ಕ್ ಜುಕರ್‌ಬರ್ಗ್‌ ಅವರ ಅಭಿಪ್ರಾಯವು ಹಲವಾರು ದೇಶಗಳಿಗೆ ನಿಜವಾಗಿದೆ. ಆದರೆ ಈ ಹೇಳಿಕೆ ಭಾರತಕ್ಕೆ ಅಲ್ಲ. ಈ ಅಜಾಗರೂಕ ತಪ್ಪಿಗೆ ನಾವು ಕ್ಷಮೆಯಾಚಿಸುತ್ತೇವೆ ಎಂದು ಹೇಳಿದ್ದಾರೆ.

    ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ ನಿಶಿಕಾಂತ್‌ ದುಬೆ, ಕೊನೆಗೂ ಮೆಟಾ ಇಂಡಿಯಾದ ಅಧಿಕಾರಿಗಳು ತಮ್ಮ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ. ಇದು ಭಾರತದ ಸಾಮಾನ್ಯ ನಾಗರಿಕರ ಗೆಲುವು. ಗೌರವಾನ್ವಿತ ಪ್ರಧಾನಿ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡುವ ಮೂಲಕ ಜನರು ದೇಶದ ಬಲಿಷ್ಠ ನಾಯಕತ್ವವನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಈಗ ನಮ್ಮ ಸಮಿತಿಯ ಜವಾಬ್ದಾರಿ ಈ ವಿಷಯದ ಮೇಲೆ ಕೊನೆಗೊಳ್ಳುತ್ತದೆ. ಭವಿಷ್ಯದಲ್ಲಿ ನಾವು ಇತರ ವಿಷಯಗಳ ಬಗ್ಗೆ ಈ ಸಾಮಾಜಿಕ ವೇದಿಕೆಗಳನ್ನು ಕರೆಯುತ್ತೇವೆ ಎಂದು ಪೋಸ್ಟ್‌ ಮಾಡಿದ್ದಾರೆ.

    ಜುಕರ್‌ಬರ್ಗ್‌ ತಪ್ಪು ಮಾಹಿತಿ ನೀಡಿದ್ದಾರೆ. ಈ ತಪ್ಪಿಗಾಗಿ ಆ ಸಂಸ್ಥೆ ಭಾರತೀಯ ಸಂಸತ್ತಿನಲ್ಲಿ ಮತ್ತು ಸಾರ್ವಜನಿಕರಲ್ಲಿ ಕ್ಷಮೆಯಾಚಿಸಬೇಕು. ಮೆಟಾಗೆ ಸಮನ್ಸ್‌ ಜಾರಿ ಮಾಡಲಾಗುವುದು ಎಂದು ಮಂಗಳವಾರ ನಿಶಿಕಾಂತ್ ದುಬೆ ತಿಳಿಸಿದ್ದರು.

     

  • ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾಗೆ 7,100 ಕೋಟಿ ದಂಡ ವಿಧಿಸಿದ ಯುರೋಪ್‌

    ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾಗೆ 7,100 ಕೋಟಿ ದಂಡ ವಿಧಿಸಿದ ಯುರೋಪ್‌

    ಬ್ರಸೆಲ್ಸ್: ಯುರೋಪಿಯನ್‌ ಯೂನಿಯನ್‌ (European Union) ಫೇಸ್‌ಬುಕ್‌ (Facebook) ಕಂಪನಿಯ ಮಾತೃಂಸ್ಥೆ ಮೆಟಾಗೆ (Meta) 800 ಮಿಲಿಯನ್‌ ಯೂರೋ (ಅಂದಾಜು 7,100 ಕೋಟಿ ರೂ) ದಂಡವನ್ನು ವಿಧಿಸಿದೆ.

    ಆನ್‌ಲೈನ್ ವರ್ಗೀಕೃತ ಜಾಹೀರಾತುಗಳ ಸೇವೆಯಾದ Facebook Marketplace ಅನ್ನು ಅದರ ವೈಯಕ್ತಿಕ ಸಾಮಾಜಿಕ ನೆಟ್‌ವರ್ಕ್ ಫೇಸ್‌ಬುಕ್‌ಗೆ ಜೋಡಿಸಿದೆ. ಅಷ್ಟೇ ಅಲ್ಲದೇ ಇತರ ಆನ್‌ಲೈನ್ ವರ್ಗೀಕೃತ ಜಾಹೀರಾತುಗಳ ಸೇವಾ ಪೂರೈಕೆದಾರರ ಮೇಲೆ ವ್ಯಾಪಾರದ ಷರತ್ತನ್ನು ವಿಧಿಸುವ ಮೂಲಕ ತನ್ನ ಆಂಟಿಟ್ರಸ್ಟ್ ನಿಯಮವನ್ನು ಉಲ್ಲಂಘಿಸಿದೆ ಎಂದು ಯುರೋಪಿಯನ್‌ ಯೂನಿಯನ್‌ ಹೇಳಿದೆ.

    ಎಲ್ಲಾ ಫೇಸ್‌ಬುಕ್‌ ಬಳಕೆದಾರರು ಇಷ್ಟವಿಲ್ಲದಿದ್ದರೂ ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ಗೆ ಭೇಟಿ ನೀಡುವಂತೆ ರೂಪಿಸಲಾಗಿದೆ. ಯುರೋಪಿಯನ್‌ ಯೂನಿಯನ್‌ ನಿಯಮದ ಪ್ರಕಾರ ಒಂದೇ ವೇದಿಕೆಯಲ್ಲಿ ಎರಡು ಸೇವೆಗಳನ್ನು ನೀಡುವಂತಿಲ್ಲ. ಇದನ್ನೂ ಓದಿ: ಐಫೋನ್‌ 16 ಆಯ್ತು ಈಗ ಇಂಡೋನೇಷ್ಯಾದಲ್ಲಿ ಗೂಗಲ್‌ ಪಿಕ್ಸೆಲ್‌ ಮಾರಾಟಕ್ಕೆ ನಿಷೇಧ

    ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಮೆಟಾ ತಿಳಿಸಿದೆ. ಫೇಸ್‌ಬುಕ್‌ ತನ್ನ ಮಾರ್ಕೆಟ್‌ಪ್ಲೇಸ್‌ ಸೇವೆಯನ್ನು 2016ರಲ್ಲಿ ಆರಂಭಿಸಿತ್ತು. ಒಂದು ವರ್ಷದ ಬಳಿಕ ಹಲವಾರು ಯುರೋಪ್‌ ರಾಷ್ಟ್ರಗಳಲ್ಲಿ ಈ ಸೇವೆಯನ್ನು ನೀಡತೊಡಗಿದೆ.

    27 ರಾಷ್ಟ್ರಗಳ ಯುರೋಪಿಯನ್ ಯೂನಿಯನ್  ಆಯೋಗವು ಇತ್ತೀಚಿನ ವರ್ಷಗಳಲ್ಲಿ ದೊಡ್ಡ ದೊಡ್ಡ ಟೆಕ್‌ ಕಂಪನಿಗಳ ಮೇಲೆ ಭಾರೀ ದಂಡವನ್ನು ವಿಧಿಸುತ್ತಿದೆ. ಕಳೆದ ವರ್ಷ ಮೆಟಾ ಒಟ್ಟು125 ಬಿಲಿಯನ್ ಯುರೋ ಆದಾಯ ಗಳಿಸಿತ್ತು.

     

  • ಚೆನ್ನೈ ರಿಲಯನ್ಸ್‌ ಕ್ಯಾಂಪಸ್‌ನಲ್ಲಿ ಫೇಸ್‌ಬುಕ್‌ ಡೇಟಾ ಸೆಂಟರ್‌!

    ಚೆನ್ನೈ ರಿಲಯನ್ಸ್‌ ಕ್ಯಾಂಪಸ್‌ನಲ್ಲಿ ಫೇಸ್‌ಬುಕ್‌ ಡೇಟಾ ಸೆಂಟರ್‌!

    ಚೆನ್ನೈ: ಫೇಸ್‌ಬುಕ್‌ (Facebook) ಕಂಪನಿಯ ಮಾತೃ ಸಂಸ್ಥೆ ಮೆಟಾ (META) ಭಾರತದಲ್ಲಿ ತನ್ನ ಮೊದಲ ಡೇಟಾ ಸೆಂಟರ್ (Data Center) ಅನ್ನು ಚೆನ್ನೈನ ರಿಲಯನ್ಸ್ ಇಂಡಸ್ಟ್ರೀಸ್ ಕ್ಯಾಂಪಸ್‌ನಲ್ಲಿ ಸ್ಥಾಪನೆ ಮಾಡಲಿದೆ.

    ಮಾರ್ಚ್ ಆರಂಭದಲ್ಲಿ ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮದಲ್ಲಿ ನಡೆದ ಚರ್ಚೆಯ ಬಳಿಕ ಮಾರ್ಕ್ ಜುಕರ್‌ಬರ್ಗ್ (Mark Zuckerberg) ನೇತೃತ್ವದ ಕಂಪನಿಯು ರಿಲಯನ್ಸ್‌ (Reliance Industries) ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ವರದಿಯಾಗಿದೆ.

    ಅಂಬತ್ತೂರ್ ಇಂಡಸ್ಟ್ರಿಯಲ್ ಎಸ್ಟೇಟ್‌ 10-ಎಕರೆ ಕ್ಯಾಂಪಸ್ ಹೊಂದಿದೆ. ಬ್ರೂಕ್‌ಫೀಲ್ಡ್ ಅಸೆಟ್‌ ಮ್ಯಾನೇಜ್‌ಮೆಂಟ್‌, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಡಿಜಿಟಲ್ ರಿಯಾಲ್ಟಿ ಜಂಟಿಯಾಗಿ ಈ ಕ್ಯಾಂಪಸ್‌ನಲ್ಲಿ ಹೂಡಿಕೆ ಮಾಡಿದೆ.

    ಭಾರತದಲ್ಲಿ ಫೇಸ್‌ಬುಕ್ 31.46 ಕೋಟಿ, ಇನ್‌ಸ್ಟಾಗ್ರಾಮ್ 35 ಕೋಟಿ, ವಾಟ್ಸಪ್‌ಗೆ 48 ಕೋಟಿ ಬಳಕೆದಾರರಿದ್ದಾರೆ. ಅಮೆರಿಕಕ್ಕೆ ಹೋಲಿಸಿದರೆ ಭಾರತದಲ್ಲಿ ಬಳಕೆದಾರರ ಸಂಖ್ಯೆ ದುಪ್ಪಟ್ಟು ಇರುವುದರಿಂದ ಈಗ ಇಲ್ಲೇ ಡೇಟಾ ಸೆಂಟರ್‌ ತೆರೆಯಲು ಮೆಟಾ ಮುಂದಾಗಿದೆ. ಇದನ್ನೂ ಓದಿ: Taiwan Earthquake – 7.4 ತೀವ್ರತೆಯ ಪ್ರಬಲ ಭೂಕಂಪ – ಸುನಾಮಿ ಎಚ್ಚರಿಕೆ

    ಗೂಗಲ್ ದೇಶದಲ್ಲಿ ತನ್ನ ಮೊದಲ ಡೇಟಾ ಸೆಂಟರ್ ಸ್ಥಾಪಿಸಲು ಮುಂದಾಗಿದೆ. ನವಿ ಮುಂಬೈನಲ್ಲಿ 22.5 ಎಕರೆ ಭೂಮಿಯನ್ನು ಖರೀದಿ ಸಬಂಧ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.

     

  • ವಕೀಲರು Vs ಪೊಲೀಸರು – ಫೇಸ್‌ಬುಕ್‌ ಪೋಸ್ಟ್‌ನಿಂದ ಅಹೋರಾತ್ರಿ ಧರಣಿಯವರೆಗೆ: ರಾಮನಗರದಲ್ಲಿ ಪ್ರತಿಭಟನೆ ಯಾಕೆ?

    ವಕೀಲರು Vs ಪೊಲೀಸರು – ಫೇಸ್‌ಬುಕ್‌ ಪೋಸ್ಟ್‌ನಿಂದ ಅಹೋರಾತ್ರಿ ಧರಣಿಯವರೆಗೆ: ರಾಮನಗರದಲ್ಲಿ ಪ್ರತಿಭಟನೆ ಯಾಕೆ?

    ರಾಮನಗರ: ವಕೀಲರು (Lawyers) ಮತ್ತು ಪೊಲೀಸರ (Police) ಮಧ್ಯೆ ವಾರದಿಂದ ನಡೆಯುತ್ತಿರುವ ಪ್ರತಿಭಟನೆ (Protest) ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಪ್ರತಿಭಟನೆಗೆ ಮೂಲ ಕಾರಣವಾಗಿದ್ದು ಒಂದು ಫೇಸ್‌ಬುಕ್‌ ಪೋಸ್ಟ್‌

    ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ (Gyanvapi Mosque) ನೆಲಮಹಡಿಯಲ್ಲಿ ಪೂಜೆ ಸಲ್ಲಿಸಲು ತೀರ್ಪು ನೀಡಿದ ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಎಸ್​ಡಿಪಿಐ ಕಾರ್ಯಕರ್ತ, ವಕೀಲ ಚಾಂದ್ ಪಾಷಾ ಅವಹೇಳನಕಾರಿಯಾಗಿ ಪೋಸ್ಟ್‌ ಹಾಕಿದ್ದ.

    ನ್ಯಾಯಾಧೀಶರ ವಿರುದ್ಧವೇ ಪೋಸ್ಟ್‌ ಹಾಕಿದ್ದಕ್ಕೆ ಹಿಂದೂಪರ ಕಾರ್ಯಕರ್ತರು ಎಸ್‌ಪಿ ಹಾಗೂ ವಕೀಲರ ಸಂಘಕ್ಕೆ ದೂರು ನೀಡಿದ್ದರು. ಈ ಸಂಬಂಧ ವಕೀಲ ಚಾನ್ ಪಾಷಾ ಮೇಲೆ ಎಫ್‌ಐಆರ್‌ ದಾಖಲಾಗಿ ಬಂಧಿಸಲಾಗಿತ್ತು.  ಇದನ್ನೂ ಓದಿ: ಕರ್ನಾಟಕ, ಜಮ್ಮು- ಕಾಶ್ಮೀರ ಸೇರಿ ದೇಶದ ವಿವಿಗಳ ಅಭಿವೃದ್ಧಿಗೆ 3600 ಕೋಟಿ ರೂ. ಬಿಡುಗಡೆ

    ನ್ಯಾಯಾಂಗ ನಿಂದನೆ ಮಾಡಿದ ಹಿನ್ನೆಲೆಯಲ್ಲಿ ಚಾನ್ ಪಾಷಾ ಮೇಲೆ ವಕೀಲರ ಸಂಘ ಕ್ರಮ ಕೈಗೊಳ್ಳಲು ಮುಂದಾಗಿತ್ತು. ಈ ವೇಳೆ ಚಾನ್ ಪಾಷಾ ಬೆಂಬಲಿಗರು ವಕೀಲರ ಸಂಘಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳದಂತೆ ಮನವಿ ಮಾಡಿದ್ದರು.

     

    ಮನವಿ ನೀಡುವ ವೇಳೆ ವಕೀಲರ ಸಂಘದ ಆವರಣದಲ್ಲಿ ಚಾನ್ ಪಾಷಾ ಬೆಂಬಲಿಗರು ಹಾಗೂ ವಕೀಲರ ನಡುವೆ ಗಲಾಟೆ ನಡೆದಿದೆ. ಗಲಾಟೆ ಬಳಿಕ ಚಾನ್ ಪಾಷಾ ಬೆಂಬಲಿಗರ ವಿರುದ್ಧ ವಕೀಲರು ದೂರು ನೀಡಿದ್ದರು. ಈ ಸಂಬಂಧ ಎಫ್ಐಆರ್ ದಾಖಾಲಾಗಿತ್ತು. ನಂತರ ಚಾನ್ ಪಾಷಾ ಬೆಂಬಲಿಗರಿಂದ ಪ್ರತಿ ದೂರು ದಾಖಲಾಯಿತು.

    ವಕೀಲರ ಸಂಘಕ್ಕೆ ನಾವು ಮನವಿ ಮಾಡಿಕೊಡಲು ಹೋದ ವೇಳೆ ನಮ್ಮ‌ ಮೇಲೆ ಹಲ್ಲೆ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ರಫೀಕ್‌ ಖಾನ್‌ ಎಂಬವರು ದೂರು ನೀಡಿದ್ದರು. ದೂರು ಸ್ವೀಕರಿಸಿ 40 ವಕೀಲರ ಮೇಲೆ ಐಜೂರು ಪಿಎಸ್ ಐ ತನ್ವೀರ್ ಎಫ್ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ಪಿಎಸ್‌ಐ ಅಮಾನತಿಗೆ ಆಗ್ರಹಿಸಿ ರಾಮನಗರದಲ್ಲಿ ಅಹೋರಾತ್ರಿ ಡಿಸಿ ಕಚೇರಿ ಮುಂದೆ ವಕೀಲರ ಪ್ರತಿಭಟನೆ

    ಗಲಾಟೆ ವೇಳೆ ಸ್ಥಳದಲ್ಲಿ ಇಲ್ಲದ ವಕೀಲರ ಮೇಲೂ ಸುಳ್ಳು ಎಫ್‌ಐಆರ್‌ ದಾಖಲು ಮಾಡಲಾಗಿದೆ ಎನ್ನುವುದು ವಕೀಲರ ವಾದ. ನಂತರ ಸುಳ್ಳು ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಆರೋಪಿಸಿ ಪಿಎಸ್‌ಐ ಅಮಾನತಿಗೆ ಆಗ್ರಹಿಸಿ ಪ್ರತಿಭಟಿಸಿದ್ದರು. ಈ ಪ್ರತಿಭಟನೆಗೆ ಸರ್ಕಾರದಿಂದ ಯಾವುದೇ ಸ್ಪಂದನೆ ದೊರೆಯದೇ ಇದ್ದಾಗ ಈಗ ಅಹೋರಾತ್ರಿ ಡಿಸಿ ಕಚೇರಿ ಮುಂದೆ ವಕೀಲರು ಪ್ರತಿಭಟನೆ ನಡೆಸುತ್ತಿದ್ದಾರೆ.

     

  • ಸೋಮಾರಿ ಸಿದ್ದ ಪದ ಬಳಸಿದ್ದು ಸಿದ್ದರಾಮಯ್ಯರಿಗೆ ಅಲ್ಲ: ಪ್ರತಾಪ್ ಸಿಂಹ ಸ್ಪಷ್ಟನೆ

    ಸೋಮಾರಿ ಸಿದ್ದ ಪದ ಬಳಸಿದ್ದು ಸಿದ್ದರಾಮಯ್ಯರಿಗೆ ಅಲ್ಲ: ಪ್ರತಾಪ್ ಸಿಂಹ ಸ್ಪಷ್ಟನೆ

    ಮೈಸೂರು: ಸೋಮಾರಿ ಸಿದ್ದ ಎಂಬ ಪದ ಬಳಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಬಳಕೆ ಮಾಡಿದ್ದು ಎಂದು ಭಾರೀ ಆಕ್ರೋಶ ಹೊರಬಂದ ಬೆನ್ನಲ್ಲೇ ಸಂಸದ ಪ್ರತಾಪ್ ಸಿಂಹ (Pratap Simha) ಅವರು ಸ್ಪಷ್ಟನೆ ನೀಡಿದ್ದಾರೆ.

    ಫೇಸ್ ಬುಕ್ ಲೈವ್ ನಲ್ಲಿ (Facebook Live) ಮಾತನಾಡಿದ ಸಂದದರು, ಸೋಮಾರಿ ಸಿದ್ದ ಅಂತಾ ನಾನು ಬಳಸಿದ್ದು ಸಿದ್ದರಾಮಯ್ಯ ಅವರಿಗೆ ಅಲ್ಲ. ಸೋಮಾರಿ ಸಿದ್ದ ಅನ್ನೋದು ನಾಮ ಪದವಲ್ಲ. ಅದು ಒಂದು ಸಂದರ್ಭ ವಿವರಿಸುವ ನಾಣ್ನುಡಿ ಅಷ್ಟೇ ಎಂದು ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದರು.

    ಕಲ್ಲು ಬಿಸಾಡಿದರೆ ಹಣ್ಣು ಕೊಡೋಕೆ ನಾನು ಮಾವಿನ ಮರ ಅಲ್ಲ, ನಾನು ಪ್ರತಾಪ್ ಸಿಂಹ. ನೀವು ಕಲ್ಲು ಬಿಸಾಕಿದರೆ ನಾನು ಕೂಡ ಕಲ್ಲೇ ಬಿಸಾಕುತ್ತೇನೆ ಎಂದು ಹೇಳುವ ಮೂಲಕ ಸಿಎಂಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‍ಐಆರ್

    ಸಿದ್ದರಾಮಯ್ಯ ಅವರೇ ನೀವು ಮಹಾರಾಜರನ್ನ, ಪ್ರಧಾನಿ ಮೋದಿ, ದೇವೇಗೌಡರು ಮತ್ತು ಯಡಿಯೂರಪ್ಪ ಅವರನ್ನು ಏಕವಚನದಲ್ಲೇ ಸಂಬೋಧನೆ ಮಾಡುತ್ತಿರಿ. ಕಾಂಗ್ರೆಸ್ ಸೇರುವ ಮುನ್ನಾ ಸೋನಿಯಾ ಗಾಂಧಿಯವರನ್ನು ಏಕವಚನದಲ್ಲಿ ಕರೆದವರು ನೀವು. ನಿಮ್ಮಿಂದ ನನಗೆ ಬಹುವಚನ – ಏಕವಚನದ ಪಾಠ ಬೇಡ ಎಂದು ಗರಂ ಆದರು.

    ಮಂಗಳವಾರ ನಾನು ಬಳಸಿದ್ದ ನಾಣ್ನುಡಿಯನ್ನು ನಿಮಗೆ ಬಳಸಿದ್ದು ಅಂತಾ ತಿರುಚುವ ಯತ್ನ ನಡೆದಿದೆ. ಮೈಸೂರಿನಲ್ಲಿನ ನಿಮ್ಮ ಹಿಂಬಾಲಕರಿಗೆ ಎಂಪಿ ಟಿಕೆಟ್, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಗ ಕೊಡಿ. ನಿಮ್ಮನ್ನು ಓಲೈಸಲು ನಿಮ್ಮ ಹಿಂಬಾಲಕರು ನನ್ನ ಮೇಲೆ ವಿನಾಕಾರಣ ಸುಳ್ಳು ಸೃಷ್ಟಿ ಮಾಡುತ್ತಾರೆ, ಅವರಿಗೆ ಬೇಗ ಅಧಿಕಾರ ಕೊಡಿ ಎಂದು ಸಂಸದರು ಕಿಡಿಕಾರಿದರು.