Tag: ಫಲಪುಷ್ಪ ಪ್ರದರ್ಶನ

  • ಮಂಜಿನ ನಗರಿ ಮಡಿಕೇರಿಗೆ ಪುಷ್ಪರಾಣಿಯರ ಆಗಮನ

    ಮಂಜಿನ ನಗರಿ ಮಡಿಕೇರಿಗೆ ಪುಷ್ಪರಾಣಿಯರ ಆಗಮನ

    – ಮೇಳೈಸಲಿದೆ ಕೊಡಗಿನ ವಿಶೇಷತೆ
    – ಫೆ 7ರಿಂದ ಫಲಪುಷ್ಪ ಪ್ರದರ್ಶನ

    ಮಡಿಕೇರಿ: ಹೂವಿನ ರಾಣಿಯರ ಆಗಮನಕ್ಕೆ ಮಡಿಕೇರಿ ಸಂಪೂರ್ಣ ಸಿದ್ಧವಾಗಿದ್ದು, ವಿವಿಧ ರೀತಿಯ ಪುಷ್ಪಗಳ ಪ್ರದರ್ಶನಕ್ಕೆ ರಾಜಾಸೀಟ್ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.

    ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಪ್ರವಾಸಿ ತಾಣವಾದ ರಾಜಾಸೀಟ್ ನ ಉದ್ಯಾನವನದಲ್ಲಿ ತೋಟಗಾರಿಕಾ ಇಲಾಖೆಯ ವತಿಯಿಂದ ವಾರ್ಷಿಕವಾಗಿ ಆಯೋಜಿಸುವ ಫಲಪುಷ್ಪ ಪ್ರದರ್ಶನ ಕಳೆದ ಒಂದೆರಡು ವರ್ಷಗಳಿಂದ ಕಾರಣಾಂತರಗಳಿಂದ ವಿಳಂಬವಾಗುತ್ತಿತ್ತು. ಇದರಿಂದಾಗಿ ಪುಷ್ಪ ಪ್ರಿಯರಿಗೆ ನಿರಾಸೆಯ ಭಾವ ಎದುರಾಗುತ್ತಿತ್ತು. ಆದರೆ ಈ ವರ್ಷ ಫಲಪುಷ್ಪ ಪ್ರದರ್ಶನವನ್ನು ಬೇಸಿಗೆ ಆರಂಭದ ಈ ಸನ್ನಿವೇಶದಲ್ಲೇ ಆಯೋಜಿಸಲು ತೋಟಗಾರಿಕಾ ಇಲಾಖೆ ಮುಂದಾಗಿದೆ.

    ಈ ನಿಟ್ಟಿನಲ್ಲಿ ಈಗಾಗಲೇ ದಿನಾಂಕವೂ ನಿಗಿದಿಗೊಂಡಿದ್ದು, ಸಿದ್ಧತೆ ಭರದಿಂದ ಸಾಗಿದೆ. ಪ್ರಸಕ್ತ ವರ್ಷದ ಫೆ.7 ರಿಂದ 10ರ ವರೆಗೆ ನಾಲ್ಕು ದಿನಗಳ ಕಾಲ ಉದ್ಯಾನವನ ಪುಷ್ಪರಾಣಿಯರಿಂದ, ಮತ್ತಿತರ ಹಲವು ಆಕರ್ಷಣೆಗಳಿಂದ ಕಂಗೊಳಿಸಲಿದೆ. ರಾಜಾಸೀಟ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಸಲಹೆ-ಸೂಚನೆಯಂತೆ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್, ಸಹಾಯಕ ನಿರ್ದೇಶಕರಾದ ಸಿ.ಎಂ. ಪ್ರಮೋದ್ ನೇತೃತ್ವದಲ್ಲಿ ಸಮಿತಿ ಮೂಲಕ ಅಗತ್ಯ ಸಿದ್ಧತೆಗಳು ಉದ್ಯಾನವನದಲ್ಲಿ ನಡೆಯುತ್ತಿವೆ. ಇದರಿಂದಾಗಿ ಪುಷ್ಪ ಪ್ರಿಯರು ಮತ್ತು ಪ್ರವಾಸಿಗರು ಮತ್ತಷ್ಟು ಸಂತಸಗೊಂಡಿದ್ದಾರೆ.

  • ರಾಜಾಸೀಟ್ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ

    ರಾಜಾಸೀಟ್ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ

    ಮಡಿಕೇರಿ: ಪ್ರವಾಸಿಗರ ನೆಚ್ಚಿನ ತಾಣ ರಾಜಾಸೀಟ್ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಬಳಸುವುದು ಮತ್ತು ಪುಷ್ಪಗಳನ್ನು ಕೀಳುವುದು ಕಂಡು ಬಂದಲ್ಲಿ 100 ರೂ. ದಂಡ ವಿಧಿಸಲು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ರಾಜಾಸೀಟ್ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅನೀಸ್, ಫೆಬ್ರವರಿ 07 ರಿಂದ 10 ರವರೆಗೆ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಈ ಮೂಲಕ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.

    ಇದರ ಜೊತೆಗೆ ರಾಜಾಸೀಟಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಪಾದಚಾರಿ ಮಾರ್ಗವನ್ನು ಮತ್ತಷ್ಟು ವಿಸ್ತಾರಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ರಾಜಾಸೀಟ್ ಬಳಿ ಹೆಚ್ಚಿನ ವಿದ್ಯುತ್ ದೀಪಗಳ ಅಳವಡಿಕೆಗೆ ಮತ್ತು ನಿರ್ವಹಣೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ರಾಜಾಸೀಟ್ ಪ್ರವೇಶ ಶುಲ್ಕದಿಂದ ರೂ. 70 ಲಕ್ಷ ಆದಾಯ ಬಂದಿರುವುದನ್ನು ಅಧಿಕಾರಿಗಳ ಗಮನಕ್ಕೆ ತಂದರು. ಅಲ್ಲದೇ ಬರುವ ತಿಂಗಳು ರಾಜಾಸೀಟ್ ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

  • ಮೂರೇ ದಿನದಲ್ಲಿ ಲಕ್ಷ ದಾಟಿದ ಪ್ರವಾಸಿಗರು

    ಮೂರೇ ದಿನದಲ್ಲಿ ಲಕ್ಷ ದಾಟಿದ ಪ್ರವಾಸಿಗರು

    ಮೈಸೂರು: ವರ್ಷಾಂತ್ಯದ ಸಂಭ್ರಮಕ್ಕಾಗಿ ಮೈಸೂರಿನ ಅರಮನೆ ಆವರಣದಲ್ಲಿ ಅರಳಿರುವ ಫಲ ಪುಷ್ಪ ಪ್ರದರ್ಶನಕ್ಕೆ ಮೂರೇ ದಿನಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಜನ ಭೇಟಿ ನೀಡಿದ್ದಾರೆ.

    ಅರಮನೆ ಆಡಳಿತ ಮಂಡಳಿಯಿಂದ ಅರಮನೆ ಆವರಣದಲ್ಲಿ ಮಾಗಿ ಉತ್ಸಾವದ ಅಂಗವಾಗಿ ಈ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಬೆಂಗಳೂರು ಅರಮನೆ, ಚಂದ್ರಯಾನ-2, ಜಯಚಾಮರಾಜ ಒಡೆಯರ್ ಸೇರಿ ನಾನಾ ಮಾದರಿಗಳು ಫಲಪುಷ್ಪದಲ್ಲಿ ಅರಳಿವೆ. ಇದು ನೋಡುಗರ ಕಣ್ಮನ ಸೆಳೆಯುತ್ತಿದೆ.

    ಫಲಪುಷ್ಪ ಪ್ರದರ್ಶನದ ಮೊದಲ ದಿನ 37 ಸಾವಿರ ಮಂದಿ ಪ್ರದರ್ಶನಕ್ಕೆ ಭೇಟಿ ನೀಡಿದ್ದಾರೆ. ಎರಡನೇ ದಿನ 45 ಸಾವಿರ ಜನ ಭೇಟಿ ಕೊಟ್ಟಿದ್ದಾರೆ. ಮೂರನೇ ದಿನವೂ 40 ಸಾವಿರ ಜನ ಭೇಟಿ ಕೊಟ್ಟಿದ್ದಾರೆ. ಅಲ್ಲಿಗೆ ಪ್ರದರ್ಶನ ಮುಗಿಯುವ ವೇಳೆಗೆ ಈ ಸಂಖ್ಯೆ ದುಪ್ಪಟ್ಟಾ ಆಗುವುದರಲ್ಲಿ ಅನುಮಾನಗಳೇ ಇಲ್ಲ.

  • ಏಷ್ಯಾದ ಅತಿ ದೊಡ್ಡ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ

    ಏಷ್ಯಾದ ಅತಿ ದೊಡ್ಡ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ

    ದಾವಣಗೆರೆ: ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಯು ಏಷ್ಯಾದ ಅತಿ ದೊಡ್ಡ ಗಾಜಿನ ಮನೆಯಲ್ಲಿ 5 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡಿದೆ. ವಿವಿಧ ಹೂಗಳಿಂದ ರಚಿಸಿರುವ ಕಲಾಕೃತಿಗಳು ಎಲ್ಲರನ್ನು ಆಕರ್ಷಿಸುತ್ತಿವೆ. ಕೆಂಪು, ಬಿಳಿ ರೋಸ್ ಬಳಸಿ ಐಫೆಲ್ ಟವರ್ ರಚಿಸಲಾಗಿದೆ.

    ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಇಲಾಖೆಯಿಂದ ಒಮ್ಮೆ ಮಾತ್ರ ಆಯೋಜನೆ ಮಾಡಲಾಗುತ್ತಿತ್ತು. ಆದರೆ ಈ ವರ್ಷದಲ್ಲಿ ಎರಡನೇ ಬಾರಿಗೆ ಫಲಪುಪ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ಫಲಪುಷ್ಪ ಪ್ರದರ್ಶನದಲ್ಲಿ ಐಫೆಲ್ ಟವರ್ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. 30 ಅಡಿ ಎತ್ತರ, 23 ಅಡಿ ಅಗಲದಲ್ಲಿ ಕೆಂಪು, ಬಿಳಿ ಗುಲಾಬಿ ಹೂವುಗಳಿಂದ ಐಫೆಲ್ ಟವರ್ ನಿರ್ಮಾಣ ಮಾಡಲಾಗಿದೆ. ಗಾಜಿನ ಮನೆಯ ಮಧ್ಯ ಭಾಗದಲ್ಲಿ ಈ ಐಫೆಲ್ ಟವರ್ ತಲೆ ಎತ್ತಿದ್ದು ಜನರು ಫೋಟೋ ಕ್ಲಿಕ್ಕಿಸಿಕೊಂಡು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇದನ್ನೂ ಓದಿ: ದಾವಣಗೆರೆಯಲ್ಲಿ ದೇಶದ ಅತ್ಯಂತ ದೊಡ್ಡ ಗಾಜಿನ ಅರಮನೆ ಇಂದು ಲೋಕಾರ್ಪಣೆ

    ಐಫೆಲ್ ಟವರ್ ಜೊತೆಗೆ ಆರು ಅಡಿ ಎತ್ತರ, ನಾಲ್ಕು ಅಡಿ ಅಗಲದ ಅಣಬೆ ಆಕಾರದ ಹೂವಿನ ಕಲಾಕೃತಿಯನ್ನು ಎರಡು ಸಾವಿರ ಗುಲಾಬಿ, ಸೇವಂತಿಗೆ ಬಳಸಿ ನಿರ್ಮಿಸಲಾಗಿದೆ. ಇದರ ಜೊತೆ ಫೋಟೋ ಫ್ರೇಮ್, ವಿದೇಶಿ ಹೂವುಗಳನು ಜನರನ್ನು ಆಕರ್ಷಿಸಿತು. ಅಲ್ಲದೆ ಹಣ್ಣಿನೊಳಗೆ ಮಾಡಿದ್ದ ಕಲಾಕೃತಿಗಳು ಮಕ್ಕಳ ಅಚ್ಚುಮೆಚ್ಚಿಗೆ ಕಾರಣವಾದವು. ಇದನ್ನು ನೋಡಿ ಜನರು ಫುಲ್ ಖುಷಿಯಾದರು. ಗ್ಲಾಸ್ ಹೌಸ್‍ನಲ್ಲಿ ಹೂ, ಹಣ್ಣಿನ ಅಲಂಕಾರಕ್ಕೆ ಬಂದ ಜನರು ಮನಸೋತು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

  • ಕೋಟೆನಾಡಿನಲ್ಲಿ ಸೃಷ್ಟಿಯಾಗಿದೆ ಅದ್ಭುತ ಲೋಕ- ಭಕ್ತರನ್ನು ಆಕರ್ಷಿಸ್ತಿದ್ದಾರೆ ಸಿದ್ದಗಂಗಾ ಶ್ರೀಗಳು

    ಕೋಟೆನಾಡಿನಲ್ಲಿ ಸೃಷ್ಟಿಯಾಗಿದೆ ಅದ್ಭುತ ಲೋಕ- ಭಕ್ತರನ್ನು ಆಕರ್ಷಿಸ್ತಿದ್ದಾರೆ ಸಿದ್ದಗಂಗಾ ಶ್ರೀಗಳು

    ಚಿತ್ರದುರ್ಗ: ವಿವಿಧ ತರಕಾರಿಗಳು ಹಾಗು ಹಣ್ಣುಗಳಲ್ಲಿ ಕಣ್ಮನ ತಣಿಸುವ ಹೂಗಳ ಉದ್ಯಾನವನದಲ್ಲಿ, ಭಕ್ತರನ್ನು ಆಕರ್ಷಿಸುತ್ತಿರೋ ಸಿದ್ದಗಂಗಾ ಶ್ರೀಗಳು ಹಾಗು ಭೂಮಿತಾಯಿಯ ಕಲಾಕೃತಿಗಳನ್ನು ನೋಡಲು ಎರಡು ಕಣ್ಣುಗಳು ಸಾಲದು. ಅಂಥದ್ದೊಂದು ಅದ್ಭುತ ಲೋಕ ಕೋಟೆನಾಡು ಚಿತ್ರದುರ್ಗದಲ್ಲಿ ಸೃಷ್ಟಿಯಾಗಿದೆ.

    ಹೌದು. ಚಿತ್ರದುರ್ಗದ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು 28ನೇ ಫಲಪುಷ್ಪ ಪ್ರದರ್ಶನವನ್ನು ವಿಶೇಷವಾಗಿ ಆಯೋಜಿಸಿದ್ದಾರೆ. ಬಗೆಬಗೆಯ ಕಲರ್ ಫುಲ್ ಹೂಗಳ ಲೋಕವೇ ಇಲ್ಲಿ ಅನಾವರಣಗೊಂಡಿದೆ. ಇಂತಹ ಬರಗಾಲದಲ್ಲೂ ಎಲ್ಲಿಂದ ಇಷ್ಟೊಂದು ಹೂವು, ಹಣ್ಣುಗಳನ್ನು ಬೆಳೆದರು ಎಂಬಂತೆ ಎಲ್ಲರನ್ನು ಅಚ್ಚರಿಗೊಳಿಸುವ ಸುಮಾರು 1ಲಕ್ಷಕ್ಕೂ ಅಧಿಕ ಕಲರ್‍ಫುಲ್ ಹೂವಿನ ಗಿಡಗಳಲ್ಲಿವೆ.

    ವಿಶೇಷ ಕುಬ್ಜ ಗಿಡಗಳು, ವಿವಿಧ ಬಗೆಯ ತರಕಾರಿಗಳು ರೈತರಿಗೆ ಅಗತ್ಯ ಮಾಹಿತಿ ನೀಡುವುದರ ಜೊತೆಗೆ ಅದ್ಭುತವಾದ ದೀಪಾಲಂಕಾರ ಹಾಗೂ ಅಪರೂಪದ ಚಿತ್ರಕಲೆ ಪ್ರದರ್ಶನ ಜನಸಾಗರವನ್ನೇ ಕೈಬೀಸಿ ಕರೆಯುತ್ತಿದ್ದು, ವಿಶೇಷ ಆಕರ್ಷಣೆಯಾಗಿ ತ್ರಿವಿಧ ಧಾಸೋಹಿ ಡಾ. ಶಿವಕುಮಾರ ಶ್ರೀಗಳ ಆಕರ್ಷಕ ಕಲಾಕೃತಿ ಫಲಪುಷ್ಪ ಪ್ರದರ್ಶನದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ವಿವಿಧ ರೂಪಗಳಲ್ಲಿ ಕಲ್ಲಂಗಡಿಯಲ್ಲಿ ದರ್ಶನ ನೀಡ್ತಿರೋ ನಡೆದಾಡುವ ದೇವರ ಆಶೀರ್ವಾದ ಇಲ್ಲಿ ಲಭಿಸುವಂತೆ ಭಾಸವಾಗುವ ವಿಶೇಷ ಪ್ರದರ್ಶನ ಇಲ್ಲಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಸವಿತಾ ಹೇಳಿದ್ದಾರೆ.

    ಈ ಜಿಲ್ಲೆಯ ಪ್ರಗತಿಪರ ರೈತರು ಬೆಳೆದ ಅಪರೂಪದ ಹಣ್ಣು, ತರಕಾರಿ, ತೋಟದ ಬೆಳೆಗಳ ಆಕರ್ಷಕ ಪ್ರದರ್ಶಿಕೆಯೂ ಇಲ್ಲಿ ಇದೆ. ಅಲ್ಲದೆ ಬರದನಾಡಲ್ಲಿ ಬೆಳೆಯಬಹುದಾದ ಅಣಬೆ ಹಾಗು ಹುಲ್ಲು ಬೆಳೆಯ ಮಾಹಿತಿ ಕೂಡ ಇಲ್ಲಿ ಲಭ್ಯವಾಗುತ್ತಿದ್ದು, ಶೈಕ್ಷಣಿಕವಾಗಿಯೂ ಉಪಯುಕ್ತವೆನಿಸಿ, ಝಗಝಗಿಸೋ ವಿದ್ಯುತ್ ದೀಪಗಳ ಅಲಂಕಾರದಲ್ಲಿ ಮಿನುಗುತ್ತಿರೋ ಕಲಾಕೃತಿಗಳು ಹಾಗೂ ಫಲಪುಷ್ಪಗಳನ್ನು ವೀಕ್ಷಿಸಲು ಜನಸಾಗರವೇ ಹರಿದು ಬರುತ್ತಿದೆ. ಮೂರು ದಿನಗಳ ಕಾಲ ನಡೆಯುವ ಈ ಪ್ರದರ್ಶನ ಯಶಸ್ವಿಯತ್ತ ಹೆಜ್ಜೆ ಹಾಕ್ತಿದೆ ಎಂದು ಸ್ಥಳೀಯರಾದ ರಶ್ಮಿ ಹೇಳುತ್ತಾರೆ.

    ಒಟ್ಟಾರೆಯಾಗಿ ಕೋಟೆನಾಡಿನಲ್ಲಿ ತೋಟಗಾರಿಕಾ ಇಲಾಖೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ದುರ್ಗದ ಜನರ ಕಣ್ಮನ ತಣಿಸುತ್ತಿದೆ. ಮಳೆಯಿಲ್ಲದೆ ಬಿಸಿಲಿನಿಂದ ಬಸವಳಿದ ಬರದನಾಡಿನ ಜನರಿಗೆ ಫಲ ಪುಷ್ಪದ ರಸದೌತಣ ನೀಡುವ ಮೂಲಕ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಸ್ಫೂರ್ತಿ ತುಂಬ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಘಮ ಘಮ ಸುಮಗಳಿಂದ ಕಂಗೊಳಿಸುತ್ತಿದೆ ಸಸ್ಯಕಾಶಿ – 6.4 ಲಕ್ಷ ಹೂಗಳಿಂದ ಸಬರಮತಿ ಆಶ್ರಮ ನಿರ್ಮಾಣ

    ಘಮ ಘಮ ಸುಮಗಳಿಂದ ಕಂಗೊಳಿಸುತ್ತಿದೆ ಸಸ್ಯಕಾಶಿ – 6.4 ಲಕ್ಷ ಹೂಗಳಿಂದ ಸಬರಮತಿ ಆಶ್ರಮ ನಿರ್ಮಾಣ

    ಬೆಂಗಳೂರು: ಸಿಲಿಕಾನ್ ಸಿಟಿಗೆ ಬರುವ ಪ್ರವಾಸಿಗರ ಹಾಟ್ ಫೇವರೇಟ್ ಸ್ಥಳವೆಂದರೆ ಲಾಲ್‍ಬಾಗ್. ಈ ಸಸ್ಯಕಾಶಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಇಂದಿನಿಂದ ಫಲಪುಷ್ಪ ಪ್ರದರ್ಶನ ಶುರುವಾಗುತ್ತಿದೆ.

    ಗಣರಾಜ್ಯೋತ್ಸವ ಅಂಗವಾಗಿ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಫ್ಲವರ್ ಶೋ ಆರಂಭಗೊಳ್ಳಲಿದ್ದು, ಸಿಎಂ ಕುಮಾರಸ್ವಾಮಿ ಅವರು ಚಾಲನೆ ನೀಡಲಿದ್ದಾರೆ. ಇದು 209ನೇ ಫಲಪುಷ್ಪ ಪ್ರದರ್ಶನವಾಗಿದ್ದು, ಗಾಂಧೀಜಿಯವರಿಗೆ ಪುಷ್ಪನಮನ ಸಲ್ಲಿಸಲಾಗುತ್ತಿದೆ. ಬಾಪೂಜಿಯವರ 150ನೇ ಜನ್ಮ ದಿನಾಚರಣೆಯ ಸವಿನೆನಪಿಗಾಗಿ ಅವರು ಬದುಕಿನ ಪ್ರಮುಖ ಘಟನೆಗಳನ್ನು ಹೂಗಳಲ್ಲಿ ಚಿತ್ರೀಕರಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್ ಹೇಳಿದ್ದಾರೆ.

    ಗುಲಾಬಿ, ಸೇವಂತಿಗೆ ಸೇರಿದಂತೆ ಬಗೆ ಬಗೆಯ ಒಟ್ಟು 6 ಲಕ್ಷದ 4 ಸಾವಿರ ಹೂಗಳಿಂದ ಸಬರಮತಿ ಆಶ್ರಮವನ್ನು ನಿರ್ಮಿಸಲಾಗಿದೆ. ಚರಕ, ಗಾಂಧಿ ಕನ್ನಡಕ, ಧ್ಯಾನಸ್ಥ ಗಾಂಧಿ ಸಸ್ಯಕಾಶಿಯೊಳಗೆ ಬಂದೊಡನೇ ಜನರನ್ನು ಸ್ವಾಗತಿಸುತ್ತದೆ. ಸಿರಿಧಾನ್ಯಗಳಿಂದ ಗಾಂಧಿ ಹಾಗೂ ಮೊಮ್ಮಗ ಕೋಲು ಹಿಡಿದಿರುವಂತೆ ಪ್ರತಿಮೆಯನ್ನು ರೂಪಿಸಲಾಗಿದೆ.

    ಮೂರು ಕೋತಿಗಳು ನೀತಿ ಪಾಠ ಹೇಳುತ್ತವೆ. ಈ ಪ್ರರ್ದಶನಕ್ಕೆ ಒಟ್ಟು 1.8 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಈ ಸಲ ವಯಸ್ಕರಿಗೆ 70 ರೂಪಾಯಿ, ಮಕ್ಕಳಿಗೆ 20 ರೂಪಾಯಿ ಪ್ರವೇಶ ಶುಲ್ಕ ನಿಗದಿ ಮಾಡಿದ್ದು, ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ

    ಇಂದಿನಿಂದ ಅಂದರೆ ಜನವರಿ 18 ರಿಂದ ಇದೇ 27ರವರೆಗೆ ಈ ಫಲಪುಷ್ಪ ಪ್ರದರ್ಶನ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಫಲಪುಷ್ಪ ಪ್ರದರ್ಶನಕ್ಕೆ ಪ್ರವಾಸಿಗರು ಫಿದಾ – 8 ಕೋಟಿಯಲ್ಲಿ ಗಾಜಿನ ಮನೆ

    ಫಲಪುಷ್ಪ ಪ್ರದರ್ಶನಕ್ಕೆ ಪ್ರವಾಸಿಗರು ಫಿದಾ – 8 ಕೋಟಿಯಲ್ಲಿ ಗಾಜಿನ ಮನೆ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ದಿನೇ ದಿನೇ ಕಳೆಗಟ್ಟುತ್ತಿದೆ. ಅದರಲ್ಲೂ ದಸರಾ ಪ್ರಮುಖ ಆಕರ್ಷಣೆಯಾದ ಫಲಪುಷ್ಪ ಪ್ರದರ್ಶನ ಎಲ್ಲರ ಕಣ್ಮನಸೆಳೆಯುತ್ತಿದೆ.

    ಮೈಸೂರಿನ ಕುಪ್ಪಣ್ಣ ಪಾರ್ಕ್ ನಲ್ಲಿ ದಸರಾ ಹಿನ್ನೆಲೆಯಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ. ಇಲ್ಲಿ ಗುಲಾಬಿ ರಂಗಿನಲ್ಲಿ ಅನಾವರಣಗೊಂಡಿರುವ ಬಲರಾಮ ದ್ವಾರ, ಕೈ ಬೀಸಿ ಕರೀತಿರುವ ಆನೆ ಗಾಡಿ, ಕಣ್ಣುಕುಕ್ಕುತ್ತಿರುವ ಡಾಲ್ಫಿನ್ ಗೆ ಸಾಥ್ ನೀಡಿರುವ ಮಶ್ರೂಮ್ ಕಲಾಕೃತಿ, ಪುಷ್ಪನಮನ ಸ್ವೀಕರಿಸುತ್ತಾ ಇರುವ ನಾಲ್ವಡಿ ಕೃಷ್ಣರಾಜ ಒಡೆಯರ್, ಇವುಗಳ ನಡುವೆ ಚೆಲುವಿನ ನಗೆ ಬೀರುತ್ತಿರುವ ಗ್ಲಾಸ್ ಹೌಸ್, ಗಾಜಿನ ಮನೆಗೆ ಕಳೆ ತುಂಬಿರುವ ದೆಹಲಿಯ ಲೋಟಸ್ ಟೆಂಪಲ್ ಕಲಾಕೃತಿ ಇದೆಲ್ಲವನ್ನು ಫಲಪುಷ್ಪ ಪ್ರದರ್ಶನದಲ್ಲಿ ಕಾಣಬಹುದಾಗಿದೆ.

    ದಸರಾ ಹಿನ್ನೆಲೆಯಲ್ಲಿ ಫ್ಲವರ್ ಶೋ ಆಯೋಜನೆ ಮಾಡಲಾಗಿದೆ. ಶೋನಲ್ಲಿ ಡಿಫರೆಂಟ್ ಟೈಪ್ ಆಫ್ ಫ್ಲವರ್ಸ್ ಲಗ್ಗೆ ಇಟ್ಟಿದ್ದು, ಉದ್ಯಾನವನಕ್ಕೆ ಕಳೆ ತುಂಬಿದ್ದಾರೆ. ಡಿಫರೆಂಟ್ ಡಿಫರೆಂಟ್ ಕಲಾಕೃತಿಗಳಿಗೆ ಸಿಟಿ ಮಂದಿ ಫಿದಾ ಆಗಿದ್ದಾರೆ. ಇಡೀ ಉದ್ಯಾನವನ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಫಿದಾ ಆಗಿರೋದಾಗಿ ಪ್ರವಾಸಿಗರು ಹೇಳಿದ್ದಾರೆ.

    ಬಣ್ಣ ಬಣ್ಣದ ದೇಶ-ವಿದೇಶಿಯ ಹೂಗಳಿಂದ ಕುಪ್ಪಣ್ಣ ಪಾರ್ಕ್ ಸಿಂಗಾರಗೊಂಡಿದೆ. ಅಮರ್ ಜವಾನ್, ರೊಮಿಯೋ ಜೂಲಿಯಟ್ ಸೇರಿದಂತೆ ವಿಭಿನ್ನ ಕಲಾಕೃತಿ ಪ್ರವಾಸಿಗರ ಮನಸೊರೆಗೊಳಿಸುತ್ತಿವೆ. 8 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಗಾಜಿನ ಮನೆ ಎಲ್ಲರ ಗಮನ ಸೆಳೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಫಿನಾಡಿನಲ್ಲಿ ಅತ್ಯದ್ಭುತ ಫಲಪುಷ್ಪ ಪ್ರದರ್ಶನ- ಕಣ್ಮನ ಸೆಳೆಯುತ್ತಿದೆ ನಾಟ್ಯ ಮಯೂರಿ

    ಕಾಫಿನಾಡಿನಲ್ಲಿ ಅತ್ಯದ್ಭುತ ಫಲಪುಷ್ಪ ಪ್ರದರ್ಶನ- ಕಣ್ಮನ ಸೆಳೆಯುತ್ತಿದೆ ನಾಟ್ಯ ಮಯೂರಿ

    ಚಿಕ್ಕಮಗಳೂರು: ಕಾಫಿಯ ಸುವಾಸನೆಯಲ್ಲೇ ಕಳೆದೋಗಿದ್ದ ಮಲೆನಾಡಿಗರು ವಿವಿಧ ಹೂಗಳ ಸುವಾಸನೆಯಲ್ಲಿ ಮುಳುಗಿದ್ದಾರೆ. ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನ ಸಾರ್ವಜನಿಕರನ್ನ ಕೈಬೀಸಿ ಕರೆಯುತ್ತಿದೆ.

    ಮೂರು ದಿನಗಳ ಕಾಲ ವಿವಿಧ ಜಾತಿ ಹಾಗೂ ಬಣ್ಣದ ಹೂಗಳನ್ನು ಒಂದೆಡೆ ಸೇರಿಸಿ ಪ್ರದರ್ಶನಕ್ಕಿಟ್ಟಿರೋದು ಮಲೆನಾಡಿಗರನ್ನ ಮಂತ್ರಮುಗ್ಧರನ್ನಾಗಿಸಿದ್ದು, ಕಣ್ಮನ ಸೆಳೆಯೋ ಹೂಗಳ ರಾಶಿ, ಮೈಮರೆಸೋ ಸುವಾಸನೆ ನೋಡುಗರ ಮನ ಸೂರೆಗೊಳಿಸುತ್ತಿದೆ. ಕಣ್ಣು ಹಾಯಿಸಿದಲ್ಲೆಲ್ಲಾ ಹೂಗಳ ಚಿತ್ತಾರ. ತರಕಾರಿಗಳಿಂದ್ಲೇ ಮೂಡಿರುವ ಸುಂದರ ಕಲಾಕೃತಿ. ಗುಲಾಬಿ, ಲಿಲ್ಲಿ, ಸೇವಂತಿಯಿಂದಲೇ ಶೃಂಗಾರಗೊಂಡಿರುವ ಬೆಡಗಿ ನಾಟ್ಯ ಮಯೂರಿ, ಜಿಲ್ಲೆಯ ಪ್ರವಾಸಿಗರ ನೆಚ್ಚಿನ ತಾಣ ದೇವಿರಮ್ಮ ಬೆಟ್ಟ, ಬಿಂಡಿಗ ದೇವೀರಮ್ಮ, ಸಂಗೀತದ ಪರಿಕರಗಳು ಹಾಗೂ ತರಕಾರಿ ಹಣ್ಣುಗಳಲ್ಲಿ ಮೂಡಿರುವ ಸುಂದರ ಕಲಾಕೃತಿಗಳು ನೋಡುಗರಿಗೆ ಮತ್ತಷ್ಟು ಖುಷಿ ತಂದಿದೆ.

    ಈ ಬಾರಿ ತೋಟಗಾರಿಕೆ ಹಾಗೂ ಕೃಷಿ ಇಲಾಖೆ ವತಿಯಿಂದ ವಿಶೇಷವಾಗಿ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಆಧುನಿಕ ಕೃಷಿಯ ಬಗ್ಗೆ ರೈತರಿಗೆ ವಿಶೇಷ ತರಬೇತಿಯನ್ನೂ ನೀಡಲಾಗುತ್ತಿದೆ. ತರಕಾರಿಗಳಿಂದ ತಯಾರಾಗಿರೋ ಈಶ್ವರನ ದೇವಾಲಯ ಎಲ್ಲರ ಗಮನ ಸೆಳೆಯಿತು. ಈ ಬಾರಿ ಲಿಲ್ಲಿ, ಗುಲಾಬಿ, ಸೇವಂತಿ, ಆಂಥೋರಿಯಂ, ಆಸ್ಟ್ರೋ, ಪಿಟೋನೊಯಾ, ದೈನಥನ್, ಜೀನಿಯಾ ಸೇರಿದಂತೆ 20ಕ್ಕೂ ಹೆಚ್ಚು ದೇಶಿಯ ಹಾಗೂ ವಿದೇಶಿಯ ಪುಷ್ಪಗಳು ಪುಷ್ಪಪ್ರಿಯರನ್ನ ಮಂತ್ರಮುಗ್ಧರನ್ನಾಗಿಸಿದೆ. ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನ ವಿದ್ಯಾರ್ಥಿಗಳು, ಮಹಿಳೆಯರು, ಸಣ್ಣಮಕ್ಕಳು ಸೇರಿದಂತೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಪುಷ್ಪ ಪ್ರೀಯರು ಹೂಗಳ ಅಂದಕಂಡು ಪುಳಕಿತರಾಗೋದಲ್ಲದೆ ಫ್ರೆಂಡ್ಸ್ ಜೊತೆ ಸೆಲ್ಫಿ ತೆಗೆದುಕೊಂಡು ಎಂಜಾಯ್ ಮಾಡುತ್ತಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಸಿಬ್ಬಂದಿ ಪೂಜಿತಾ ಹೇಳಿದ್ದಾರೆ.

    30ಕ್ಕೂ ಅಧಿಕ ಬಗೆಯ ಸ್ಟಾಲ್‍ಗಳಲ್ಲಿನ ಸುಂದರ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆದಿದೆ. ತರಕಾರಿಯಲ್ಲಿ ಅರಳಿರೋ ಕಲಾಕೃತಿ ಅತ್ಯದ್ಭುತವಾಗಿತ್ತು. ಬೆಂಗಳೂರು, ಮೈಸೂರಿನಂತಹ ಮಹಾನಗರಗಳಿಗೆ ಹೋಗಿ ಫಲಪುಷ್ಪ ಪ್ರದರ್ಶನ ನೋಡುತ್ತಿದ್ದ ಚಿಕ್ಕಮಗಳೂರಿಗರಿಗೆ ಇದೀಗ ತಮ್ಮೂರಲ್ಲೇ ಬಗೆಬಗೆಯ ಫಲಪುಷ್ಪಗಳ ಜೊತೆ ಬಣ್ಣ ಬಣ್ಣದ ಹೂಗಳ ಪ್ರದರ್ಶನ ನೋಡಿ ಖುಷಿಪಡುತ್ತಿದ್ದಾರೆ. ಜಿಲ್ಲಾದ್ಯಂತ ಎಲ್ಲಾ ಊರುಗಳಿಂದಲೂ ಬಂದು ಈ ಸೌಂದರ್ಯವನ್ನ ನೋಡಿ ಖುಷಿ ಪಡುತ್ತಿದ್ದಾರೆ.

  • ಕಣ್ಮನ ಸೆಳೆಯುತ್ತಿದೆ ಕನಕೋತ್ಸವದ ಫಲಪುಷ್ಪ ಪ್ರದರ್ಶನ

    ಕಣ್ಮನ ಸೆಳೆಯುತ್ತಿದೆ ಕನಕೋತ್ಸವದ ಫಲಪುಷ್ಪ ಪ್ರದರ್ಶನ

    ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ತೋಟಗಾರಿಕೆ ಇಲಾಖೆ ಕನಕೋತ್ಸವದ ಅಂಗವಾಗಿ ನಾಲ್ಕು ದಿನಗಳ ಕಾಲ ಫಲಪುಷ್ಪ ಪ್ರದರ್ಶನವನ್ನ ಹಮ್ಮಿಕೊಂಡಿದೆ. ಕನಕೋತ್ಸವದ ಫಲಪುಷ್ಪ ಪ್ರದರ್ಶನ ಕಣ್ಮನ ಸೆಳೆಯುತ್ತಿದೆ.

    ನಗರದ ಮುನ್ಸಿಪಾಲ್ ಕಾಲೇಜು ಬಳಿ ನಡೆದ ಕಾರ್ಯಕ್ರಮವನ್ನು ಸಂಸದ ಡಿ.ಕೆ ಸುರೇಶ್ ಉದ್ಘಾಟಿಸಿದರು. ಫಲಪುಷ್ಪ ಪ್ರದರ್ಶನದಲ್ಲಿ ಸುಮಾರು 30 ಸಾವಿರ ವಿವಿಧ ಬಗೆಯ ಪುಷ್ಪಗಳಿಂದ ತಾಲೂಕಿನ ಶಕ್ತಿದೇವತೆ ಕಬ್ಬಾಳಮ್ಮ ದೇವಿಯ ದೇವಾಲಯವನ್ನು ನಿರ್ಮಿಸಲಾಗಿದ್ದು, ಅತ್ಯಂತ ಆಕರ್ಷಣಿಯವಾಗಿ ನೋಡುಗರ ಮನ ಸೆಳೆದಿದೆ.

    ರೈತರ ಕ್ಯಾಪ್ಸಿಕಂ ನಿಂದ ಮಾಡಿದ ಗೋಪುರದಾಕಾರದ ಮಾದರಿ, ಜೊತೆಗೆ ಹಸು ಹಾಗೂ ಕರುವಿನ ಪುಷ್ಪಗಳಿಂದಾದ ಮಾದರಿ ನೋಡುಗರ ಕಣ್ಮನ ಸೆಳೆಯುತ್ತಿದೆ. ಇದಲ್ಲದೇ ಪುಷ್ಪದಲ್ಲಿ ವಿವಿಧ ಆಕಾರಗಳು, ರೈತರ ತರಕಾರಿ ಬೆಳೆಗಳ ವಸ್ತು ಪ್ರದರ್ಶನ, ತಾರಸಿ ಕೈ ತೋಟ, ಮಾದರಿ ತೋಟ ನೋಡುಗರಿಗೆ ಮುದ ನೀಡಿತು. ವಿಶೇಷವಾಗಿ ರೈತ ಉತ್ಪಾದಕರ ಸಂಸ್ಥೆಯ ಮಾದರಿಯನ್ನು ರೈತರಿಗಾಗಿ ಸಿದ್ಧಪಡಿಸಿ ಮಾಹಿತಿಯನ್ನು ನೀಡಲಾಯಿತು.

    ಫಲಪುಷ್ಪ ಪ್ರದರ್ಶನದಲ್ಲಿ ಕೇವಲ ಅಲಂಕಾರಿಕ ವಸ್ತುಗಳಿಗೆ ಆದ್ಯತೆ ನೀಡದೆ ರೈತರಿಗೆ ಅಗತ್ಯ ಮಾಹಿತಿಯನ್ನು ಒದಗಿಸುವ ಸಲುವಾಗಿ ರೈತರು ಬೆಳೆದ ಬೆಳೆಗಳ ಪ್ರದರ್ಶನ ಹಾಗೂ ಮಾಹಿತಿ ನೀಡುವ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದೆ. ತೋಟಗಾರಿಕೆ ಮತ್ತು ಕೃಷಿ ಕ್ಷೇತ್ರದಲ್ಲಾಗಿರುವ ಹೊಸ ಆವಿಷ್ಕಾರಗಳು, ತಾಂತ್ರಿಕತೆಯ ಸದ್ಬಳಕೆ ಬಗ್ಗೆ ರೈತರಿಗೆ ಸಾಕಷ್ಟು ಮಾಹಿತಿ ಜೊತೆಗೆ ಮಾರ್ಗದರ್ಶನ ನೀಡಿ ಸವಾಲನ್ನ ಎದುರಿಸುವ ಅರಿವನ್ನು ಪ್ರದರ್ಶನದಲ್ಲಿ ಅಧಿಕಾರಿಗಳು ನೀಡಿದ್ದಾರೆ. ರೇಷ್ಮೆ ಚಾಕಿ ಸಾಕಾಣಿಕೆಯಲ್ಲಿ ಹಂತಕ್ಕೊಂದು ಸೊಪ್ಪು ಪದ್ದತಿ ರೈತರ ಮನ ಮುಟ್ಟುವಂತಿದ್ದವು. ಫಲಪುಷ್ಪ ಪ್ರದರ್ಶನ ಕೇವಲ ಅಲಂಕಾರಿಕೆ ವಸ್ತುಗಳಿಗೆ ಸೀಮಿತವಾಗದೆ ರೈತಾಪಿ ವರ್ಗಕ್ಕೆ ಅರಿವು ಮೂಡಿಸುವ ಕಾರ್ಯಾಗಾರವಾಗಿತ್ತು.

    ಅಧಿಕ ಸಾಂದ್ರತೆಯಲ್ಲಿ ಮಾವು, ಹಸಿರು ಮನೆ ತಂತ್ರಜ್ಞಾನ, ಎರೆಹುಳು ಘಟಕ, ಅಂಗಾಂಶ ಕೃಷಿ, ಅಣಬೆ ಬೇಸಾಯ, ತೋಟಗಾರಿಕೆಯಲ್ಲಿ ಬಳಸುವ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಗಳನ್ನು ಈ ಪ್ರದರ್ಶನದಲ್ಲಿ ಏರ್ಪಡಿಸಲಾಗಿತ್ತು. ಅಷ್ಟೇ ಅಲ್ಲದೇ ಕುಂಬಳಕಾಯಿಯಲ್ಲಿ ಕೆತ್ತನೆ ಮಾಡಿದ ವಿವೇಕಾನಂದ, ಗಾಂಧೀಜಿ, ಅಂಬೇಡ್ಕರ್, ಹಾಗೂ ವಿವಿಧ ಪಕ್ಷಿಗಳ ಕಲಾಕೃತಿಗಳನ್ನು ಸಹ ಪ್ರದರ್ಶನಕ್ಕೆ ಇಡಲಾಗಿತ್ತು.

  • ಗವಿಸಿದ್ದೇಶ್ವರ ಜಾತ್ರೆಯಲ್ಲಿ ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ

    ಗವಿಸಿದ್ದೇಶ್ವರ ಜಾತ್ರೆಯಲ್ಲಿ ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ

    ಕೊಪ್ಪಳ: ಜಿಲ್ಲೆಯ ಗವಿಸಿದ್ದೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ಫಲಪುಷ್ಪ ಪ್ರದರ್ಶವನ್ನು ಏರ್ಪಡಿಸಿದ್ದು, ಕಲರ್ ಫುಲ್ ಹೂವುಗಳು ಕಣ್ಮನ ಸೆಳೆದಿವೆ.

    ಗವಿಸಿದ್ದೇಶ್ವರ ಜಾತ್ರೆಯಲ್ಲಿ ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಿತ್ತು. ಪ್ರತಿವರ್ಷ ಜಾತ್ರೆಯಲ್ಲಿ ವಿಭಿನ್ನವಾಗಿ ಫಲಪುಷ್ಪ ಪ್ರದರ್ಶನ ನಡೆಯುತ್ತದೆ. ಈ ಬಾರಿಯೂ ಫಲಪುಷ್ಪ ಪ್ರದರ್ಶನ ಜನರ ಗಮನ ಸೆಳೆಯಿತು.

    ತೆಪೋತ್ಸವ ಮಾದರಿ, ತಾಜ್‍ಮಹಲ್, ಅಣಬೆ ಕೃಷಿ, ಜೊತೆಗೆ ತೋಟಗಾರಿಕೆ ಇಲಾಖೆಯ ಯೋಜನೆ ಕುರಿತು ಜನರಲ್ಲಿ ಅರಿವು ಮೂಡಿಸುವ ನಾಮಫಲಕ ಅಳವಡಿಸಲಾಗಿತ್ತು. ಹಣ್ಣುಗಳಲ್ಲಿ ಜ್ಞಾನಪೀಠ ಪುರಸ್ಕೃತರ ಕೆತ್ತನೆ ಗಮನಸೆಳೆಯಿತು. ಜೊತೆಗೆ ಬಗೆಬಗೆಯ ಹೂವಿನ ಕಲಾಕೃತಿ ಕಣ್ಮನ ಸೆಳೆಯಿತು.

    ಪ್ರತಿ ವರ್ಷ ಜಾತ್ರೆಯಲ್ಲಿ ಫಲಪುಷ್ಪ ಪ್ರದರ್ಶನ ಮೂರುದಿನ ನಡೆಯುತ್ತಿತ್ತು. ಆದರೆ ಈ ಬಾರಿ ಜನರ ರೆಸ್ಪಾನ್ಸ್ ಉತ್ತಮವಾಗಿರುವುದರಿಂದ ಐದು ದಿನ ಪ್ರದರ್ಶನ ನಡೆಯುತ್ತದೆ. ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ತೋಟಗಾರಿಕೆ ಇಲಾಖೆ ಯೋಜನೆ ಮಾಹಿತಿ ನೀಡಲು ಅನುಕೂಲವಾಗಿದೆ. ಇದರಿಂದ ಪ್ರೇರಿತರಾದ ರೈತರು ತೋಟಗಾರಿಕೆ ಬೆಳೆ ಬೆಳೆಯಲು ಪ್ರೋತ್ಸಾಹ ಸಿಗುತ್ತದೆ. ಈ ಮೇಳದಲ್ಲಿ ರೈತರಿಗೆ ಅಧಿಕಾರಿಗಳು ತಾಂತ್ರಿಕ ಮಾಹಿತಿ ಕೂಡ ನೀಡುತ್ತಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ನಜೀರ್ ಅಹ್ಮದ್ ಹೇಳಿದ್ದಾರೆ.

    ಗವಿಸಿದ್ದೇಶ್ವರ ಜಾತ್ರೆಯಲ್ಲಿ ಫಲಪುಷ್ಪ ಪ್ರದರ್ಶನ ಭಕ್ತರನ್ನ ಆಕರ್ಷಿಸುತ್ತಿದ್ದು, ಪ್ರದರ್ಶನ ನೋಡಿರುವ ಭಕ್ತರು ತುಂಬಾ ಖುಷಿಪಡುತ್ತಿದ್ದಾರೆ.