Tag: ಪ್ಲಾಸ್ಟಿಕ್ ಬಾಟಲಿ

  • ಡ್ಯಾಂನಲ್ಲಿ ಪ್ಲಾಸ್ಟಿಕ್ ಬಾಟಲ್ ತರುವ ಚಾಲೆಂಜ್- ನೀರು ಪಾಲದ ಇಬ್ಬರು ವಿದ್ಯಾರ್ಥಿಗಳು

    ಡ್ಯಾಂನಲ್ಲಿ ಪ್ಲಾಸ್ಟಿಕ್ ಬಾಟಲ್ ತರುವ ಚಾಲೆಂಜ್- ನೀರು ಪಾಲದ ಇಬ್ಬರು ವಿದ್ಯಾರ್ಥಿಗಳು

    ಚಿಕ್ಕಬಳ್ಳಾಪುರ: ಡ್ಯಾಂ ನಲ್ಲಿ ಈಜಲು ತೆರಳಿದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿದ್ದು ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಬಳಿಯ ದಂಡಿಗಾನಹಳ್ಳಿ ಡ್ಯಾಂನಲ್ಲಿ ನಡೆದಿದೆ.

    23 ವರ್ಷದ ಅಭಿಲಾಷ್ ಹಾಗೂ ಸತೀಶ್ ಶಿವಕುಮಾರ್ ಮೃತರು. ಬೆಂಗಳೂರಿನ ಕೆ. ನಾರಾಯಣಪುರ ಬಳಿಯ ಕ್ರಿಸ್ತು ಜಯಂತಿ ಕಾಲೇಜಿನ ವಿದ್ಯಾರ್ಥಿಗಳಾದ ಇವರು ಕಾರಿನಲ್ಲಿ ಓರ್ವ ಯುವತಿ ಸೇರಿ ನಾಲ್ವರು ಯುವಕರು ದಂಡಿಗಾನಹಳ್ಳಿ ಡ್ಯಾಂಗೆ ಆಗಮಿಸಿದ್ದರು. ಘಟನೆಯಲ್ಲಿ ಕೆವಿನ್ ಮೆಂಡೋಸ್ ಹಾಗೂ ಬುವಾಜ್ ಇಬ್ಬರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

    ಇನ್ನೂ ಡ್ಯಾಂನ ಕೊನೆಯಲ್ಲಿ ಈಜಾಡುತ್ತಿದ್ದ ರಕ್ಷಿತಾ ಘಟನೆಯಿಂದ ಬೆಚ್ಚಿಬಿದ್ದು ನೀರಿನಿಂದ ಹೊರಬಂದಿದ್ದಾಳೆ. ನೀರಿನಲ್ಲಿ ಈಜಾಡುತ್ತಾ ಆಡವಾಡುತ್ತಿದ್ದ ನಾಲ್ವರು ಯುವಕರು ಡ್ಯಾಂನಲ್ಲಿ ಎಲ್ಲಿಂದಲೋ ತೇಲಿ ಬಂದ ಪ್ಲಾಸ್ಟಿಕ್ ಬಾಟಲಿಯನ್ನು ನಾನು ತರುತ್ತೇನೆ ಎಂದು ಚಾಲೆಂಜ್ ಹಾಕಿಕೊಂಡಿದ್ದಾರೆ. ಈ ವೇಳೆ ಡ್ಯಾಂ ಆಳ ಅರಿಯದ ಯುವಕರು ಪ್ಲಾಸ್ಟಿಕ್ ಬಾಟಲಿ ತರುವ ಭರದಲ್ಲಿ ಮೊದಲು ಸತೀಶ್ ಶಿವಕುಮಾರ್ ನೀರಿನಲ್ಲಿ ಮುಳುಗಿದ್ರೇ ಅವನನ್ನ ಹುಡುಕಿಕೊಂಡು ಹೋದ ಅಭಿಲಾಷ್ ಸಹ ನೀರಿನಲ್ಲಿ ಮುಳುಗಿದ್ದಾನೆ.

    ಅಷ್ಟರಲ್ಲೇ ಸ್ಥಳದಲ್ಲಿದ್ದ ಸ್ಥಳೀಯರು ಉಳಿದ ಇಬ್ಬರು ಯುವಕರನ್ನು ದಡಕ್ಕೆ ಕರೆತಂದಿದ್ದಾರೆ. ಸದ್ಯ ಇಬ್ಬರು ಯುವಕರು ನೀರುಪಾಲಾಗಿದ್ದು ಉಳಿದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಮಂಚೇನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತ್ತೊಂದೆಡೆ ಆಗ್ನಿಶಾಮಕ ದಳ ಸಿಬ್ಬಂದಿ ಸಹ ಸ್ಥಳಕ್ಕೆ ಭೇಟಿ ನೀಡಿದ್ದು ನೀರಿನಲ್ಲಿ ಮುಳುಗಡೆ ಆಗಿರುವ ಇಬ್ಬರು ಯುವಕರ ಮೃತದೇಹಗಳಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ. ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮನೆಯಲ್ಲಿನ ವೇಸ್ಟ್ ನೀರನ್ನೇ ಕೃಷಿಗೆ ಬಳಕೆ- ರೈತನ ಸ್ಮಾರ್ಟ್ ಐಡಿಯಾಗೆ ಜನ ಫಿದಾ

    ಮನೆಯಲ್ಲಿನ ವೇಸ್ಟ್ ನೀರನ್ನೇ ಕೃಷಿಗೆ ಬಳಕೆ- ರೈತನ ಸ್ಮಾರ್ಟ್ ಐಡಿಯಾಗೆ ಜನ ಫಿದಾ

    ಚಿಕ್ಕಬಳ್ಳಾಪುರ: ನದಿ, ಕೊಳವೆಬಾವಿ ನೀರು ಇಲ್ಲದಿದ್ದರೇನು ನಾನು ಕೃಷಿ ಮಾಡೇ ಮಾಡುತ್ತೀನಿ ಎಂದು ಪಣ ತೊಟ್ಟ ರೈತರೊಬ್ಬರು ಮನೆಯಲ್ಲಿ ವೇಸ್ಟ್ ಆಗುವ ನೀರನ್ನೇ ಕೃಷಿಗೆ ಬಳಸಿ ಬೇಷ್ ಅನಿಸಿಕೊಂಡಿದ್ದಾರೆ.

    ಹೌದು, ಒಂದು ಕಡೆ ಜಮೀನ ಬಳಿ ಯಾವುದೇ ನದಿ ನಾಲೆಗಳಿಲ್ಲ, ಮತ್ತೊಂದೆಡೆ ಸಾವಿರ ಅಡಿ ಬಗೆದರೂ ಭೂ ತಾಯಿಯ ಓಡಲಲ್ಲೂ ನೀರಿಲ್ಲ. ಕೊರೆದ ಕೊಳವೆಬಾವಿಯಲ್ಲಿ ನೀರು ಸಿಗಲ್ಲ, ಅಪ್ಪಿ ತಪ್ಪಿ ಸಿಕ್ಕರೂ ಯಾವಾಗ ನೀರು ನಿಂತು ಹೋಗುತ್ತೋ ಹೇಳೋಕಾಗಲ್ಲ. ಆದರೆ ಇಂತಹ ಪರಿಸ್ಥಿತಿಯಲ್ಲೂ ಚಿಕ್ಕಬಳ್ಳಾಪುರ ತಾಲೂಕು ಕುಪ್ಪಹಳ್ಳಿ ಗ್ರಾಮದ ರೈತ ಮುನಿಯಪ್ಪನ ಸ್ಮಾರ್ಟ್ ಐಡಿಯಾ ಮಾಡಿ ಕೃಷಿ ಮಾಡುತ್ತಿದ್ದಾರೆ.

    ಮುನಿಯಪ್ಪನವರು ಸ್ಮಾರ್ಟ್ ಐಡಿಯಾ ಮಾಡಿ ಮನೆಯಲ್ಲಿ ಪಾತ್ರೆ, ಬಟ್ಟೆ ತೊಳೆದು ವ್ಯರ್ಥವಾಗುವ ನೀರನ್ನೇ ಬಳಸಿ ರೇಷ್ಮೆ ಸೊಪ್ಪು ಬೆಳೆಯುತ್ತಿದ್ದಾರೆ. ಇವರು ತಮ್ಮ ಬಳಿ ಇರುವ 30 ಗುಂಟೆ ಮಳೆಯಾಧಾರಿತ ಕೃಷಿ ಭೂಮಿಯಲ್ಲಿ ಮರಕಡ್ಡಿ ಮೂಲಕ 330 ರೇಷ್ಮೇ ಸೊಪ್ಪಿನ ಮರಗಳನ್ನ ಬೆಳೆಸಿದ್ದಾರೆ. ಕಳೆದ 3 ವರ್ಷಗಳ ಹಿಂದೆ ಉದ್ಯೋಗ ಖಾತರಿ ಯೋಜನೆಯ ಲಾಭ ಪಡೆದ ರೈತ ಮುನಿಯಪ್ಪ ಮರಕಡ್ಡಿ ಪದ್ಧತಿ ಮೂಲಕ ರೇಷ್ಮೆ ಸೊಪ್ಪು ಬೆಳೆಯೋ ಕಾಯಕ ಶುರುಮಾಡಿದರು. ಆದರೆ ನೀರೇ ಇಲ್ಲದ ಕೇವಲ ಮಳೆ ಆಧಾರಿತ ಭೂಮಿಯಲ್ಲಿ ಬೆಳೆ ಬೆಳೆಯೋದು ಹೇಗೆ ಎಂದು ರೈತ ಹಿಂಜರಿಯಲಿಲ್ಲ. ಮೊದ ಮೊದಲು ಟ್ಯಾಂಕರ್ ಮೂಲಕ ನೀರುಣಿಸೋ ಉಪಾಯ ಮಾಡಿ, ತದನಂತರ ಟ್ಯಾಂಕರ್ ನೀರು ಬಲು ದುಬಾರಿ ಅಗಿದ್ದೇ ತಡ ಕಸದಿಂದ ರಸ ಅನ್ನೋ ಹಾಗೆ ವೇಸ್ಟ್ ಪ್ಲಾಸ್ಟಿಕ್ ಬಾಟಲಿಗಳನ್ನ ಬಳಸಿಕೊಂಡು ರೇಷ್ಮೆ ಮರಗಳಿಗೆ ನೀರುಣಿಸೋ ಕೆಲಸ ಮಾಡುತ್ತಿದ್ದಾರೆ.

    ಮುನಿಯಪ್ಪ ತಮ್ಮ ಮನೆಯಲ್ಲಿ ಪಾತ್ರೆ, ಬಟ್ಟೆ ತೊಳೆದು, ಸ್ನಾನ ಮಾಡಿ ವ್ಯರ್ಥವಾಗುವ ಪೋಲಾಗುವ ನೀರನ್ನ ಒಂದು ಕಡೆ ಶೇಖರಣೆ ಮಾಡಿ ಆ ನೀರನ್ನೇ ರೇಷ್ಮೆ ಸೊಪ್ಪು ಬೆಳೆಯೋಕೆ ಬಳಸುತ್ತಿದ್ದಾರೆ. ಪ್ರತಿ ದಿನ ತಮ್ಮ ಟಿವಿಎಸ್ ಎಕ್ಸ್‍ಎಲ್ ಗಾಡಿ ಮೂಲಕ 20 ಲೀಟರ್ ಪ್ಲಾಸ್ಟಿಕ್ ಕ್ಯಾನಿನಲ್ಲಿ ನೀರು ತಂದು ಪ್ಲಾಸ್ಟಿಕ್ ಬಾಟಲಿಗಳಿಗೆ ತುಂಬುತ್ತಾರೆ, ದಿನಕ್ಕೆ ಎರಡು ಬಾರಿ ಸರದಿಯಂತೆ ಎಲ್ಲಾ ಬಾಟಲಿಗಳಿಗೆ ನೀರು ತುಂಬಿ, ರೇಷ್ಮೆ ಸೊಪ್ಪು ಸೊಂಪಾಗಿ ಬೆಳೆದು ನಿಲ್ಲುವಂತೆ ಶ್ರಮವಹಿಸಿದ್ದಾರೆ. ರೈತ ಮುನಿಯಪ್ಪನ ಐಡಿಯಾ ಕಂಡ ಪಕ್ಕದ ತೋಟದ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸೊಂಪಾಗಿ ಬೆಳೆದು ನಿಂತಿರೋ ರೇಷ್ಮೆ ಸೊಪ್ಪನ್ನ ಎರಡು-ಮೂರು ತಿಂಗಳಿಗೊಮ್ಮೆ ರೈತ ಮುನಿಯಪ್ಪ ಮಾರಾಟ ಮಾಡುತ್ತಿದ್ದು, ಪ್ರತಿ ಬಾರಿ 3 ರಿಂದ 4 ಸಾವಿರ ರೂಪಾಯಿ ಕೈಗೆ ಸಿಗುತ್ತಿದೆಯಂತೆ. ಹೀಗಾಗಿ ಸುಮ್ಮನೆ ಕೂರದೆ ಎಷ್ಟೇ ಕಷ್ಟ ಬಂದರೂ ಇಷ್ಟಪಟ್ಟು ವಿಭಿನ್ನ ಆಲೋಚನೆ ಮಾಡಿ ಕೆಲಸ ಮಾಡಿದರೇ ಪ್ರತಿಫಲ ಸಿಕ್ಕೆ ಸಿಗುತ್ತೆ ಎಂದು ಮುನಿಯಪ್ಪ ಹೇಳಿದ್ದಾರೆ.

  • 10 ವರ್ಷಗಳಿಂದ ನದಿಯಲ್ಲಿನ ಪ್ಲಾಸ್ಟಿಕ್ ಬಾಟಲಿಗಳನ್ನ ಹೊರತೆಗೆಯುತ್ತಿದೆ ಈ ನಾಯಿ!

    10 ವರ್ಷಗಳಿಂದ ನದಿಯಲ್ಲಿನ ಪ್ಲಾಸ್ಟಿಕ್ ಬಾಟಲಿಗಳನ್ನ ಹೊರತೆಗೆಯುತ್ತಿದೆ ಈ ನಾಯಿ!

    ಬೀಜಿಂಗ್: ಪರಿಸರ ಸಂರಕ್ಷಣೆಗಾಗಿ, ಸ್ವಚ್ಛತೆಗಾಗಿ ದುಡಿಯುವ ಅನೇಕ ಪರಿಸರಪ್ರೇಮಿಗಳ ಬಗ್ಗೆ ಕೇಳಿರ್ತೀರ. ಹಾಗೇ ಇಲ್ಲೊಬ್ಬ ಪರಿಸರಪ್ರೇಮಿ ಬಗ್ಗೆ ನೀವು ಕೇಳಲೇಬೇಕು. ಅದು ಬೇರೆ ಯಾರೂ ಅಲ್ಲ, ಕಳೆದ 10 ವರ್ಷಗಳಿಂದ ನದಿಯೊಂದರ ತ್ಯಾಜ್ಯವನ್ನು ಸ್ವಚ್ಛ ಮಾಡ್ತಿರೋ ಈ ಗೋಲ್ಡನ್ ರಿಟ್ರೀವರ್ ನಾಯಿ.

    ಚೀನಾದ ಜಿಯಾಂಗ್ಸು ಪ್ರಾಂತ್ಯದ ಸುಝೌನಲ್ಲಿರುವ ನದಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನ ಹೆಕ್ಕಿ ತಂದು ಸ್ವಚ್ಛತೆ ಕಾಪಾಡುತ್ತಿದೆ ಈ ನಾಯಿ. ಈ ಬಗ್ಗೆ ಇಲ್ಲಿನ ಪತ್ರಿಕೆಯೊಂದು ವರದಿ ಮಾಡಿದ್ದು, ಈ ನಾಯಿ ಕಳೆದ 10 ವರ್ಷಗಳಲ್ಲಿ ನದಿಯಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಪ್ಲಾಸ್ಟಿಕ್ ಬಾಟಲಿಗಳನ್ನ ಹೊರತೆಗೆದಿದೆ ಎಂದು ಹೇಳಿದೆ. ಕೆಲವೊಮ್ಮೆ ದಿನಕ್ಕೆ 20 ರಿಂದ 30 ಬಾಟಲಿಗಳನ್ನ ಹೊರತೆಗೆದಿದೆ. ಇದಕ್ಕಾಗಿ ಈ ನಾಯಿಗೆ ಇದರ ಮಾಲೀಕ ತರಬೇತಿ ನೀಡಿದ್ದಾರೆ.

    ತನ್ನ ನಿಸ್ವಾರ್ಥ ಸೇವೆಯಿಂದ ಈ ನಾಯಿ ಸ್ಥಳೀಯರಿಗೆ ಸೆಲೆಬ್ರಿಟಿಯಾಗಿದೆ. ಟ್ವಿಟ್ಟರ್‍ನಲ್ಲಿ ಅನೇಕ ಮಂದಿ ಈ ನಾಯಿಯ ಸೇವೆಯನ್ನ ಶ್ಲಾಘಿಸಿದ್ದಾರೆ.