Tag: ಪ್ರಾಣಿಗಳು

  • ಅರಣ್ಯ ಇಲಾಖೆ ಮಾಹಿತಿದಾರನೇ ಬೇಟೆಗಾರ: ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಆರೋಪಿ

    ಅರಣ್ಯ ಇಲಾಖೆ ಮಾಹಿತಿದಾರನೇ ಬೇಟೆಗಾರ: ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಆರೋಪಿ

    – ಜಿಂಕೆ ಕೊಂದು ಚರ್ಮ ಸುಲಿಯುತ್ತಿದ್ದ ವೇಳೆ ಬಂಧನ

    ಚಾಮರಾಜನಗರ: ಅರಣ್ಯ ಇಲಾಖೆ ಮಾಹಿತಿದಾರನೇ ಕಳ್ಳ ಬೇಟೆಗಾರನಾಗಿ ಪ್ರಾಣಿಗಳನ್ನು ವಧೆ ಮಾಡುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

    ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಅರೇಪಾಳ್ಯದಲ್ಲಿ ಘಟನೆ ನಡೆದಿದ್ದು, ನಾಗೇಗೌಡ ಬಂಧಿತ ಬೇಟೆಗಾರ. ಈತ ಅರಣ್ಯ ಇಲಾಖೆಯ ಮಾಹಿತಿದಾರನಾಗಿದ್ದ ಎಂದು ತಿಳಿದುಬಂದಿದ್ದು, ಕಳ್ಳಬೇಟೆಯ ಕುರಿತು ಆಗಾಗ್ಗೆ ಮಾಹಿತಿ ನೀಡುತ್ತಿದ್ದನಂತೆ. ಆದರೆ ಅರಣ್ಯ ಇಲಾಖೆಯ ಮತ್ತೊಬ್ಬ ಮಾಹಿತಿದಾರನಿಂದ ಈತನ ಕುಕೃತ್ಯ ಬೆಳಕಿಗೆ ಬಂದಿದೆ. ಜಿಂಕೆಯೊಂದನ್ನು ಕೊಂದು ಅದರ ಚರ್ಮ ಸುಲಿಯುತ್ತಿದ್ದ ಖಚಿತ ಮಾಹಿತಿ ಮೇಲೆ ಆರ್‍ಎಫ್‍ಒ ಮಹಾದೇವಯ್ಯ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

    ಕೊಂದ ಜಿಂಕೆ, ಕತ್ತಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

  • ಬೀದಿ ನಾಯಿಗಳನ್ನು ಕಾಪಾಡಲು ತಂಡವನ್ನೇ ಕಟ್ಟಿದ ಸಂಯುಕ್ತಾ

    ಬೀದಿ ನಾಯಿಗಳನ್ನು ಕಾಪಾಡಲು ತಂಡವನ್ನೇ ಕಟ್ಟಿದ ಸಂಯುಕ್ತಾ

    ಬೆಂಗಳೂರು: ದೇಶವೇ ಲಾಕ್ ಡೌನ್ ಆಗಿರುವುದರಿಂದ ಜನರು ಹೊರಗೆ ಬರುವುದು ವಿರಳವಾಗಿದ್ದು, ಹೀಗಾಗಿ ಪ್ರಾಣಿ ಪಕ್ಷಿಗಳು ಅನ್ನ, ನೀರು ಇಲ್ಲದೆ ಪರದಾಡುತ್ತಿವೆ. ಹಲವು ನಟ, ನಟಿಯರು ಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರಿಗೆ ಹಾಗೂ ಬಡವರಿಗೆ ಸಹಾಯ ಮಾಡುವ ಮೂಲಕ ಸ್ಪಂದಿಸುತ್ತಿದ್ದಾರೆ. ಆದರೆ ಪ್ರಾಣಿಗಳು ಮಾತ್ರ ನರಳುತ್ತಿವೆ. ಹೀಗಾಗಿ ನಟಿ ಸಂಯುಕ್ತಾ ಹೊರನಾಡು ಪ್ರಾಣಿಗಳತ್ತ ಲಕ್ಷ್ಯ ಹರಿಸಿದ್ದಾರೆ.

    ಹೋಮ್ ಕ್ವಾರೆಂಟೈನ್‍ನಿಂದಾಗಿ ಹಲವು ನಟ, ನಟಿಯರು ಮನೆಯಲ್ಲೇ ಉಳಿದುಕೊಂಡಿದ್ದು, ಕುಟುಂಬದೊಂದಿಗೆ ಹಾಗೂ ತಮ್ಮ ಮುಂದಿನ ಸಿನಿಮಾ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಆದರೆ ಸಂಯುಕ್ತಾ ಹೊರನಾಡು ಅವರು ಇನ್ನೂ ಒಂದು ಹೆಜ್ಜೆ ಮುಂದೆ ಬೀದಿ ನಾಯಗಳಿಗೆ ಆಹಾರ ನೀಡುವುದರಲ್ಲಿ ನಿರತರಾಗಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಪ್ರಾಣಿಗಳು ಅದರಲ್ಲೂ ನಾಯಿ ಎಂದರೆ ಸಂಯುಕ್ತ ಅವರಿಗೆ ಪಂಚ ಪ್ರಾಣ, ಅವರೂ ಒಂದು ನಾಯಿಯನ್ನು ದತ್ತು ಪಡೆದಿದ್ದಾರೆ. ಅದಕ್ಕೆ ಗುಂಡ ಎಂದು ನಾಮಕರಣ ಮಾಡಿದ್ದು, ಅದರ ಜೊತೆಗೆ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಇದರ ಜೊತೆಗೆ ಇದೀಗ ಬೀದಿ ನಾಯಿಗಳನ್ನು ಕಾಪಾಡಲು ಮುಂದಾಗಿದ್ದಾರೆ.

    ಕೊರೊನಾ ಭೀತಿಯಿಂದಾಗಿ ದೇಶವೇ ಲಾಕ್‍ಡೌನ್ ಅಗಿದ್ದು, ಬಹುತೇಕರು ಸ್ವಯಂ ದಿಗ್ಬಂಧನ ವಿಧಿಸಿಕೊಂಡು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಪ್ರಾಣಿ, ಪಕ್ಷಿಗಳು ಆಹಾರ ನೀರು ಇಲ್ಲದೆ ಪರಿತಪಿಸುತ್ತಿವೆ. ಇದನ್ನು ಕಂಡ ನಟಿ ಸಂಯುಕ್ತಾ ಹೊರನಾಡು, ಬೀದಿ ನಾಯಿಗಳಿಗೆ ಬಿಸ್ಕೆಟ್ ಹಾಗೂ ತಿಂಡಿಯನ್ನು ಹಾಕಿ ಮಾನವೀಯತೆ ಮೆರೆದಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಮನೆಯಲ್ಲೇ ಕಾಲ ಕಳೆಯುತ್ತಿರುವ ಸಂಯುಕ್ತಾ ಹೊರನಾಡು ಶುಕ್ರವಾರ ಹೊರಗಡೆ ಬಂದಿದ್ದಾರೆ. ಈ ವೇಳೆ ಬೀದಿ ನಾಯಿಗಳು ಆಹಾರವಿಲ್ಲದೆ ಪರದಾಡುವುದನ್ನು ನೋಡಿದ್ದಾರೆ. ತಕ್ಷಣವೇ ಬಿಸ್ಕೆಟ್ ತಿನ್ನಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ಕಳೆದೊಂದು ವಾರದಿಂದ ನಾಯಿಗಳು ಆಹಾರವಿಲ್ಲದೆ ಪರದಾಡುತ್ತಿರುವುದನ್ನು ಕಂಡು ಹೃದಯಕ್ಕೆ ತುಂಬಾ ಘಾಸಿಯುಂಟಾಗಿತ್ತು. ಹೀಗಾಗಿ ಕೆಲವು ನಾಯಿಗಳಿಗೆ ನಾನು ಆಹಾರ ತಿನ್ನಿಸಿದೆ. ಅಲ್ಲದೆ ಟಾಸ್ಕ್ ಫೋರ್ಸ್‍ನಲ್ಲಿ ಭಾಗವಾಗಿಸಿದ್ದಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಧನ್ಯವಾದಗಳು. ಈ ನಿಟ್ಟಿನಲ್ಲಿ ನಮ್ಮ ತಂಡ ಫುಲ್ ಆ್ಯಕ್ಟಿವ್ ಆಗಿದ್ದು, ತುಂಬಾ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

    ಸಂಯುಕ್ತಾ ಹೊರನಾಡು ಲೈಫು ಇಷ್ಟೇನೆ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಗುರುತಿಸಿಕೊಂಡಿದ್ದು, ನಂತರ ಬರ್ಫಿ, ಒಗ್ಗರಣೆ, ನೀನೆ ಬರಿ ನೀನೆ, ಜಿಗರ್‍ಥಂಡ, ಸರ್ಕಾರಿ ಕೆಲಸ ದೇವರ ಕೆಲಸ, ದಯವಿಟ್ಟು ಗಮನಿಸಿ, ದಿ ವಿಲನ್ ಹಾಗೂ ಇತ್ತೀಚೆಗೆ ನಾನು ಮತ್ತು ಗುಂಡ ಸಿನಿಮಾದಲ್ಲಿ ನಟಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಕೆಲ ತಮಿಳು ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ.

  • ಜಾನುವಾರುಗಳ ದಾಹ ನೀಗಿಸಿದ ಜಲದಾತ-ಸ್ವಂತ ವೆಚ್ಚದಲ್ಲಿ ಗೋಕಟ್ಟೆ ನಿರ್ಮಿಸಿದ ಅನ್ನದಾತ

    ಜಾನುವಾರುಗಳ ದಾಹ ನೀಗಿಸಿದ ಜಲದಾತ-ಸ್ವಂತ ವೆಚ್ಚದಲ್ಲಿ ಗೋಕಟ್ಟೆ ನಿರ್ಮಿಸಿದ ಅನ್ನದಾತ

    ಚಿಕ್ಕಮಗಳೂರು: ಸ್ವಂತ ವೆಚ್ಚದಲ್ಲಿ ಗೋಕಟ್ಟೆ ನಿರ್ಮಿಸಿ ಜಾನುವಾರಗಳ ದಾಹ ನೀಗಿಸಿರುವ ಅನ್ನದಾತ ಕಾಫಿನಾಡಿನ ವೀರಣ್ಣ ಇವತ್ತಿನ ನಮ್ಮ ಪಬ್ಲಿಕ್ ಹೀರೋ.

    ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ವಿಟ್ಲಾಪುರದ ನಿವಾಸಿಯಾಗಿರುವ 63 ವರ್ಷದ ವೀರಣ್ಣ ಗೋಕಟ್ಟೆ ನಿರ್ಮಿಸಿದ್ದಾರೆ. 9ನೇ ತರಗತಿವರೆಗೆ ಮಾತ್ರ ಓದಿರುವ ವೀರಣ್ಣ, ಕೃಷಿಯೊಂದಿಗೆ ಮತ್ತು ಮೂಕ ಪ್ರಾಣಿಗಳ ಸೇವೆ ಮಾಡುತ್ತಿದ್ದಾರೆ. ಅರೆಮಲೆನಾಡಾಗಿರುವ ಚಿಕ್ಕಮಗಳೂರಲ್ಲಿ ಬೇಸಿಗೆ ವೇಳೆ ಜಾನುವಾರುಗಳಿಗೆ ನೀರು ಸಿಗೋದು ಕಷ್ಟ ಆಗಿತ್ತು. ಕುಡಿಯಲು ನೀರು ಸಿಗದೇ ದನಕರು ಪರದಾಡೋದನ್ನು ನೋಡಲಾಗದ ವೀರಣ್ಣ, ಮೂರು ವರ್ಷದ ಹಿಂದೆ ಅರಣ್ಯ ಇಲಾಖೆ ಅನುಮತಿ ಪಡೆದು ಒಂದು ಎಕರೆ ಜಾಗದಲ್ಲಿ ಐದು ಲಕ್ಷ ರೂ. ವೆಚ್ಚದಲ್ಲಿ ಗೋಕಟ್ಟೆ ನಿರ್ಮಿಸಿದ್ದಾರೆ.

    ಸಮೀಪದ ಕಾಡಲ್ಲಿ ಅನಾವಶ್ಯಕವಾಗಿ ಹರಿದು ಹೋಗುತ್ತಿದ್ದ ನೀರನ್ನು ಗೋಕಟ್ಟೆಗೆ ತಿರುಗಿಸಿದ್ದಾರೆ. ಈಗ ಗೋಕಟ್ಟೆ ನೀರಿನಿಂದ ತುಂಬಿದ್ದು, ಜಾನುವಾರುಗಳಲ್ಲದೇ ಕಾಡುಪ್ರಾಣಿಗಳ ದಾಹವೂ ನೀಗುತ್ತಿದೆ. ಗೋಕಟ್ಟೆ ನಿರ್ಮಿಸಲು ಇವರು ಬೇರೆಯವರಿಂದ ಚಿಕ್ಕಾಸು ಕೇಳಿರಲಿಲ್ಲ. ಆದರೆ ಸ್ವಾಮೀಜಿಯೊಬ್ಬರು ಸ್ವಂತ ಹಣದಲ್ಲಿ ಕೆರೆ ನಿರ್ಮಿಸಿದ್ರೆ ಸಾರ್ವಜನಿಕರದ್ದು ಅನ್ನಿಸಿಕೊಳ್ಳಲ್ಲ. ಹಾಗಾಗಿ ಜನರು ನೀಡುವ ಹಣ ಪಡೆದುಕೊಳ್ಳಬೇಕು ಎಂದು ಹೇಳಿದ್ದರು. ಸ್ವಾಮೀಜಿಗಳ ಸಲಹೆ ಮೇರೆಗೆ ಜನ ನೀಡಿದಷ್ಟು ಹಣ ಪಡೆದುಕೊಂಡಿದ್ದರು.

    ವೀರಣ್ಣ ಅವರು ಅಪ್ಪಟ ಸಾವಯವ ಕೃಷಿಕ. 20 ವರ್ಷಗಳಿಂದ ಸುತ್ತಮುತ್ತಲ ಹಳ್ಳಿಗರಿಗೆ ಇವ್ರೇ ಕೃಷಿ ಸಂಪನ್ಮೂಲ ವ್ಯಕ್ತಿಯಾಗಿ ಸಲಹೆ ನೀಡುತ್ತಿದ್ದಾರೆ. ಈ ಕಾಲದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕೆಲಸ ಮಾಡೋರು ಕಡಿಮೆ. ದನಕರುಗಳಿಗಾಗಿ ಗೋಕಟ್ಟೆ ನಿರ್ಮಿಸಿದ ವೀರಣ್ಣ ನಿಜಕ್ಕೂ ಇತರರಿಗೆ ಮಾದರಿಯಾಗಿದ್ದಾರೆ.

  • ಒಂದು ಜಿಲ್ಲೆ ಹಲವು ಜಗತ್ತಿಗೆ ಸಾಕ್ಷಿಯಾದ ಕಾಫಿನಾಡು

    ಒಂದು ಜಿಲ್ಲೆ ಹಲವು ಜಗತ್ತಿಗೆ ಸಾಕ್ಷಿಯಾದ ಕಾಫಿನಾಡು

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾಡಂಚಿನ ಗ್ರಾಮ ಬಿದಿರುತಳದಲ್ಲಿ ಕಣ್ಣು ಹಾಯಿಸದಲೆಲ್ಲಾ ಕಾಡು ಪ್ರಾಣಿಗಳ ಹಿಂಡು ಗೋಚರವಾಗುತ್ತಿದೆ.

    ಗ್ರಾಮದ ಸತೀಶ್ ಎಂಬವರು ತಮ್ಮ ತೋಟಕ್ಕೆ ಹೋಗುವಾಗ ದಾರಿಯುದ್ದಕ್ಕೂ ಪ್ರಾಣಿಗಳು ಕಾಣಿಸಿಕೊಂಡಿದೆ. ಈ ಪ್ರಾಣಿಗಳನ್ನು ನೋಡಿದ ಅವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ಈ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾದ ಕಾಫಿನಾಡು ಒಂದು ಜಿಲ್ಲೆ ಹಲವು ಜಗತ್ತು ಎನ್ನುವ ಮಾತಿಗೆ ಪೂರಕವಾಗಿದೆ.

    ಒಂದೆಡೆ ನರಿ, ಮತ್ತೊಂದೆಡೆ ಆನೆ, ಮಗದೊಂದು ಕಡೆ ಜಿಂಕೆ, ಇನ್ನೊಂದೆಡೆ ಕಡವೆಗಳ ಗುಂಪು ಕಾಣಿಸಿಕೊಂಡಿದೆ. ಕಾಡು ಪ್ರಾಣಿಗಳನ್ನು ನೋಡಿ ಸ್ಥಳೀಯರಿಗೆ ಒಂದೆಡೆ ಖುಷಿ ಆದರೆ ಹಾಗೂ ಮತ್ತೊಂದೆಡೆ ಆತಂಕ ಶುರುವಾಗಿದೆ. ಗ್ರಾಮದಂಚಿನಲ್ಲಿ ಹೀಗೆ ಪ್ರಾಣಿಗಳ ಗುಂಪನ್ನು ಕಂಡ ಸ್ಥಳೀಯರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ.

    ಸದ್ಯ ಸ್ಥಳೀಯರು ಸ್ಥಳಾಂತರ ಮಾಡಿ ಎಂದು ಹೇಳುತ್ತಿದ್ದಾರೆ. ಈಗಾಗಲೇ ಬಿದಿರುತಳ ಗ್ರಾಮದ ಸ್ಥಳಾಂತರದ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿ ಇದೆ. ಸ್ಥಳೀಯರು ಕೂಡಲೇ ನಮ್ಮನ್ನು ಸ್ಥಳಾಂತರ ಮಾಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

  • ಕೇಕ್ ತಯಾರಿಸಿ ಪ್ರಾಣಿಗಳಿಗಾಗಿ ದೇಣಿಗೆ ಸಂಗ್ರಹಿಸಲಿರುವ ಆಲಿಯಾ ಭಟ್

    ಕೇಕ್ ತಯಾರಿಸಿ ಪ್ರಾಣಿಗಳಿಗಾಗಿ ದೇಣಿಗೆ ಸಂಗ್ರಹಿಸಲಿರುವ ಆಲಿಯಾ ಭಟ್

    ಮುಂಬೈ: ಕೆಲವು ನಟ-ನಟಿಯರಂತೆ ಆಲಿಯಾ ಭಟ್ ಕೂಡ ವಿಭಿನ್ನ ರೀತಿಯಲ್ಲಿ ಸಮಾಜ ಸೇವೆಗೆ ಮುಂದಾಗಿದ್ದಾರೆ. ಅರ್ಜುನ್ ಕಪೂರ್ ಸಹೋದರಿ ಅಂಶುಲಾ ಕಪೂರ್ ಅವರ ಆನ್‍ಲೈನ್ ಫಂಡ್ ರೈಸಿಂಗ್ `ಫ್ಯಾನ್ ಕೈಂಡ್’ ಮೂಲಕ ಪ್ರಾಣಿಗಳಿಗಾಗಿ ದೇಣಿಗೆ ಸಂಗ್ರಹಿಸಲು ಆಲಿಯಾ ಮುಂದಾಗಿದ್ದಾರೆ.

    ವಿಶೇಷವೆಂದರೆ ಆಲಿಯಾ ಅವರು ಪ್ರಾಣಿಗಳಿಗಾಗಿ ದೇಣಿಗೆ ಸಂಗ್ರಹಿಸಲು ಕೇಕ್ ಬೇಕ್ ಮಾಡಲಿದ್ದಾರೆ. `ಫ್ಯಾನ್ ಕೈಂಡ್’ ಸಂಸ್ಥೆಯ ಸಹಯೋಗದೊಂದಿಗೆ ಪಾಕತಜ್ಞೆ ಪೂಜಾ ಧಿಂಗ್ರಾ ಮಾರ್ಗದರ್ಶನದಲ್ಲಿ ಅಭಿಮಾನಿಗಳಿಗೆ ಕೇಕ್ ತಯಾರಿಸಲು ಅವಕಾಶ ಮಾಡಿ ಕೊಡಲಿದೆ.

    ಇದರಲ್ಲಿ ಭಾಗವಹಿಸುವವರು ಕನಿಷ್ಠ 300 ರೂ. ಅಥವಾ ಅದಕ್ಕಿಂತ ಹೆಚ್ಚು ಹಣವನ್ನೂ ಕೂಡ ನೀಡಬಹುದಾಗಿದೆ. ಅಂತಿಮವಾಗಿ ಓರ್ವ ಅಭಿಮಾನಿಗೆ ಆಲಿಯಾ ಜೊತೆ ಕೇಕ್ ತಯಾರಿಸುವ ಅವಕಾಶ ಸಿಗಲಿದೆ. ಈ ವಿಶೇಷ ಪ್ರಯತ್ನದ ಮೂಲಕ ಸಂಗ್ರಹವಾಗುವ ಹಣವನ್ನು ಪ್ರಾಣಿಗಳನ್ನು ನೋಡಿಕೊಳ್ಳುವ ಸರ್ಕಾರೇತರ ಸಂಸ್ಥೆಗೆ ನೀಡಲಾಗುತ್ತದೆ.

    ಈ ಬಗ್ಗೆ ಆಲಿಯಾ ಭಟ್ ಅವರು ಮಾತನಾಡಿ, ಪ್ರಾಣಿಗಳಿಗಾಗಿ ದೇಣಿಗೆ ಸಂಗ್ರಹ ಮಾಡಿವುದನ್ನು ನಾನು ನಿಜವಾಗಿಯೂ ನಂಬುತ್ತೇನೆ. ಈ ವಿನೂತನ ಪ್ರಯತ್ನಕ್ಕೆ ‘ವರ್ಡ್ ಫಾರ್ ಆಲ್’ ಜೊತೆ ಕೈಜೋಡಿಸಿದ್ದೇನೆ. ಮುಂಬೈ ಮೂಲದ ಎನ್‍ಜಿಒ ‘ವರ್ಡ್ ಫಾರ್ ಆಲ್’ ಬೀದಿಯಲ್ಲಿರುವ ನಾಯಿಗಳು, ಬೆಕ್ಕುಗಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಿಕೊಡುವ ಒಳ್ಳೆಯ ಕೆಲಸ ಮಾಡುತ್ತಿದೆ. ಇದು ಒಳ್ಳೆಯ ವಿಚಾರ ಎಂದು ಹೇಳಿದ್ದಾರೆ.

    ಕಾರ್ಯಕ್ರಮದಲ್ಲಿ ಸಂಗ್ರಹವಾಗುವ 70% ದೇಣಿಗೆಯನ್ನು ‘ವರ್ಡ್ ಫಾರ್ ಆಲ್’ ಎನ್‍ಜಿಒಗೆ ನೀಡಲಾಗುತ್ತದೆ. ವರ್ಡ್ ಫಾರ್ ಆಲ್ ಸಂಸ್ಥೆ ಬೀದಿ ನಾಯಿಗಳನ್ನು, ಇತರೆ ಪ್ರಾಣಿಗಳನ್ನು ದತ್ತು ಪಡೆದು ಅದನ್ನು ನೋಡಿಕೊಳ್ಳುವ ಕೆಲಸ ಮಾಡುತ್ತದೆ. ಆದ್ದರಿಂದ ಈ ಸಂಸ್ಥೆ ಜೊತೆ ಆಲಿಯಾ ಒಳ್ಳೆಯ ಒಡನಾಟ ಹೊಂದಿದ್ದಾರೆ.

    ಈ ಬಗ್ಗೆ ಅಂಶುಲಾ ಕಪೂರ್ ಅವರು ಪ್ರತಿಕ್ರಿಯಿಸಿ, ಇಂತಹ ಒಳ್ಳೆಯ ಕೆಲಸಕ್ಕೆ ಆಲಿಯಾ ಜೊತೆ ಕೈ ಜೋಡಿಸಿರುವುದಕ್ಕೆ ಖುಷಿಯಾಗಿದೆ. ನಾನು ಕೂಡ ಪ್ರಾಣಿಯನ್ನು ಸಾಕುತ್ತಿದ್ದೇನೆ. ಹೀಗಾಗಿ ಪ್ರಾಣಿ ಪ್ರೇಮಿಯಾಗಿರುವ ನನಗೆ ಪ್ರಾಣಿಗಳಿಗಾಗಿ ದೇಣಿಗೆ ಸಂಗ್ರಹಿಸುವುದು ಖುಷಿ ನೀಡುತ್ತಿದೆ. ಹೀಗಾಗಿ ಫ್ಯಾನ್ ಕೈಂಡ್ ಪ್ರಾಣಿಗಳ ಸಂರಕ್ಷಣೆ ಹಾಗೂ ವರ್ಡ್ ಫಾರ್ ಆಲ್ ಸಂಸ್ಥೆಗೆ ಸಹಾಯ ಮಾಡಲು ಸಾಧ್ಯವಾಯ್ತು ಎಂದು ಹೇಳಿಕೊಂಡಿದ್ದಾರೆ.

  • ಭೀಕರ ಪ್ರವಾಹಕ್ಕೆ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ ಜಲಾವೃತ – ಜೀವ ರಕ್ಷಣೆಗೆ ಪ್ರಾಣಿಗಳ ಪರದಾಟ

    ಭೀಕರ ಪ್ರವಾಹಕ್ಕೆ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ ಜಲಾವೃತ – ಜೀವ ರಕ್ಷಣೆಗೆ ಪ್ರಾಣಿಗಳ ಪರದಾಟ

    ಬಿಸ್ಪುರ್: ಭೀಕರ ಪ್ರವಾಹದಿಂದಾಗಿ ಅಸ್ಸಾಂ ತತ್ತರಿಸಿ ಹೋಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ. ಈ ಮಧ್ಯೆ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ ಮತ್ತು ಅದರ 95 ಶಿಬಿರಗಳು ಶೇ.70 ರಷ್ಟು ಜಲಾವೃತಗೊಂಡಿದೆ.

    ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ ಪ್ರಾಣಿಗಳು ಜೀವ ರಕ್ಷಣೆಗಾಗಿ ಪರದಾಟ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಅರಣ್ಯ ಅಧಿಕಾರಿಗಳ ರಜೆಯನ್ನು ರದ್ದುಗೊಳಿಸಲಾಗಿದ್ದು, ಕರ್ತವ್ಯದಲ್ಲಿ ಹಾಜರಿರುವಂತೆ ಇಲಾಖೆ ಸೂಚನೆ ರವಾನಿಸಿದೆ ಎನ್ನಲಾಗಿದೆ.

    ರಾಷ್ಟ್ರೀಯ ಉದ್ಯಾನವನದ ಮುಕ್ಕಾಲು ಭಾಗದಷ್ಟು ಪ್ರದೇಶ ಜಲಾವೃತಗೊಂಡಿದ್ದು, ಇಲ್ಲಿದ್ದ ಪ್ರಾಣಿಗಳನ್ನು ಎತ್ತರದ, ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಕಾರ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತೊಡಗಿದ್ದಾರೆ. ಈ ಮಧ್ಯೆ ಬೇಟೆಗಾರರು ಪ್ರಾಣಿಗಳ ಬೇಟೆಯಾಡುವ ಸಂಭವ ಹೆಚ್ಚಾಗಿದ್ದು, ಇದನ್ನು ತಪ್ಪಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ 37ರಲ್ಲಿ ಅರಣ್ಯ ಇಲಾಖೆ ಸಂಪೂರ್ಣ ಎಚ್ಚರಿಕೆ ವಹಿಸಿದೆ. ಉದ್ಯಾನವನದ ಪ್ರದೇಶದ ಸುತ್ತಾಮುತ್ತ ರಾತ್ರಿ ವೇಳೆಯೂ ಸಹ ಭದ್ರತಾ ದೃಷ್ಟಿಯಿಂದ ಅರಣ್ಯ ಕಾವಲುಗಾರರನ್ನು ನಿಯೋಜಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

    ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಗೆ ಅಸ್ಸಾಂನ ಬಹುತೇಕ ನದಿಗಳು ತುಂಬಿ ಹರಿಯುತ್ತಿದೆ. ಬಾಲಿಪುರ್ ಚಾರ್ ಪ್ರದೇಶದಲ್ಲಿ ಇರುವ ಬೇಕಿ ನದಿಯೂ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿಯ ಸುತ್ತಮುತ್ತ ಪ್ರದೇಶದ ಜನರು ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

    ಹೀಗಾಗಿ ಭಾರತೀಯ ಸೇನೆ, ಎನ್‍ಡಿಆರ್‍ಎಫ್ ಮತ್ತು ಸಿವಿಲ್ ಅಡ್ಮಿನಿಸ್ಟ್ರೇಷನ್ ಪಡೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಬಾಲಿಪುರ್ ಚಾರ್ ನಲ್ಲಿ ಪ್ರವಾಹಕ್ಕೆ ಸಿಲುಕಿದ್ದ 55 ಮಹಿಳೆಯರು, 40 ಪುರುಷರು, 25 ಹಿರಿಯ ನಾಗರಿಕರು ಮತ್ತು 30 ಮಕ್ಕಳು ಸೇರಿದಂತೆ ಸುಮಾರು 150 ಗ್ರಾಮಸ್ಥರನ್ನು ರಕ್ಷಿಸಿ ಸ್ಥಳಾಂತರಿಸಿಸಲಾಗಿದೆ.

    ಬ್ರಹ್ಮಪುತ್ರ ನದಿಯು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಲಕ್ಷಾಂತರ ಮಂದಿ ಆತಂಕದಲ್ಲಿದ್ದಾರೆ. ಧೆಮಾಜಿ, ಲಖಿಂಪುರ್, ಬಿಸ್ವಾನಾಥ್, ಜೋರ್ಹತ್, ದಾರಂಗ್, ಬಾರ್ಪೆಟಾ, ನಲ್ಬಾರಿ, ಮಜುಲಿ, ಚಿರಾಂಗ್, ದಿಬ್ರುಗರ್ ಮತ್ತು ಗೋಲಘಾಟ್ ಸೇರಿದಂತೆ ಒಟ್ಟು 17 ಜಿಲ್ಲೆಗಳ 700 ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದೆ. ಸುಮಾರು ನಾಲ್ಕು ಲಕ್ಷ ಜನರ ಮೇಲೆ ಪ್ರವಾಹ ಪರಿಣಾಮ ಬೀರಿದೆ ಎನ್ನಲಾಗಿದೆ.

  • ಬೆಂಕಿಯಿಂದ ಬೆಂದಿದ್ದ ಅರಣ್ಯದಲ್ಲಿ ಪ್ರಾಣಿಗಳ ಕಲರವ

    ಬೆಂಕಿಯಿಂದ ಬೆಂದಿದ್ದ ಅರಣ್ಯದಲ್ಲಿ ಪ್ರಾಣಿಗಳ ಕಲರವ

    ಚಾಮರಾಜನಗರ: ಕಳೆದ ಎರಡು ತಿಂಗಳ ಹಿಂದೆ ಬೆಂಕಿಗೆ ಆಹುತಿಯಾಗಿದ್ದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇದೀಗ ವನ್ಯಜೀವಿಗಳ ಕಲರವ ಆರಂಭವಾಗಿದೆ.

    ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯ ಪ್ರದೇಶಕ್ಕೆ ಎರಡು ತಿಂಗಳ ಹಿಂದೆ ಬೆಂಕಿ ಬಿದ್ದ ಕಾರಣ ಸಾವಿರಾರು ಹೆಕ್ಟರ್ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ಇದರಿಂದ ಇಲ್ಲಿದ್ದ ಪ್ರಾಣಿಗಳು ಬಂಡೀಪುರ ಉದ್ಯಾನವನ್ನು ಬಿಟ್ಟು ಬೇರೆ ಅರಣ್ಯ ಪ್ರದೇಶಕ್ಕೆ ವಲಸೆ ಹೋಗಿದ್ದವು. ಹೀಗಾಗಿ ಬಂಡಿಪುರ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳು ಕಾಣದೇ ಅರಣ್ಯ ಪ್ರದೇಶ ಬಿಕೋ ಎನ್ನುತ್ತಿತ್ತು.

    ಕಳೆದ 15 ದಿನಗಳಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತಣ್ಣನೆಯ ಹಾಗೂ ಚಿಗುರೊಡೆಯುತ್ತಿರುವ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ತಮ್ಮ ಗೂಡನ್ನು ಬಿಟ್ಟು ಹೋಗಿದ್ದ ವನ್ಯಜೀವಿಗಳು ಮತ್ತೆ ತಮ್ಮ ಗೂಡನ್ನು ಸೇರಿಕೊಂಡಿವೆ. ಇದರಿಂದ ಪ್ರತಿ ನಿತ್ಯ ಪ್ರಾಣಿಗಳು ಸಫಾರಿಗೆ ಹೋದ ಪ್ರವಾಸಿಗರಿಗೆ ಕಾಣ ಸಿಗುತ್ತಿವೆ.

    ಹುಲಿ, ಚಿರತೆ, ಚಿಂಕೆ, ಆನೆ, ಕಾಡೆಮ್ಮೆ ಸೇರಿದಂತೆ ಇತರೆ ಪ್ರಾಣಿಗಳು ಪ್ರವಾಸಿಗರ ಕ್ಯಾಮರಾಗಳಿಗೆ ಫೋಸ್ ನೀಡುತ್ತಿವೆ. ಇದರಿಂದ ಪ್ರವಾಸಿಗರು ಫುಲ್ ಖುಷ್ ಆಗಿದ್ದು, ವನ್ಯಜೀವಿ ಪ್ರಿಯರಲ್ಲೊಂತು ಸಂತಸ ಮನೆ ಮಾಡಿದೆ.

  • ಝೂನಲ್ಲಿ ಪ್ರಾಣಿಗಳು ಕೂಲ್ ಕೂಲ್!- ಬೇಸಿಗೆಗೆ ಮೃಗಾಲಯದ ಸಿಬ್ಬಂದಿಯಿಂದ ಹೊಸ ಪ್ಲಾನ್

    ಝೂನಲ್ಲಿ ಪ್ರಾಣಿಗಳು ಕೂಲ್ ಕೂಲ್!- ಬೇಸಿಗೆಗೆ ಮೃಗಾಲಯದ ಸಿಬ್ಬಂದಿಯಿಂದ ಹೊಸ ಪ್ಲಾನ್

    ಮೈಸೂರು: ಬೇಸಿಗೆ ಬಿಸಿಲಿಗೆ ತತ್ತರಿಸುತ್ತಿರುವ ಪ್ರಾಣಿಗಳನ್ನು ತಂಪಾಗಿಸಲು ಜಿಲ್ಲೆಯ ಚಾಮರಾಜೇಂದ್ರ ಮೃಗಾಲಯದ ಸಿಬ್ಬಂದಿ ಹೊಸ ಪ್ಲಾನ್ ಮಾಡಿದ್ದಾರೆ. ಬಿಸಿಲಿನ ಬೇಗೆಯಿಂದ ಪ್ರಾಣಿಗಳನ್ನು ಕೂಲ್ ಆಗಿ ಇಡಲು ಸಿಬ್ಬಂದಿಗಳು ಪ್ರಯತ್ನಿಸುತ್ತಿದ್ದಾರೆ.

    ಹೌದು, ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಒಂದು ಪ್ರಸಿದ್ಧ ಸ್ಥಳ. ಇಲ್ಲಿ ಪ್ರತಿ ದಿನವು ಸಾವಿರಾರು ಪ್ರವಾಸಿಗರು ಆಗಮಿಸಿ, ಪ್ರಾಣಿಗಳನ್ನು ನೋಡಿ ಖುಷಿ ಪಡುತ್ತಾರೆ. ಸದ್ಯ ಬೇಸಿಗೆ ಬೀಸಿಲು ತುಸು ಜೋರಾಗಿಯೇ ಇರುವುದರಿಂದ ಪ್ರಾಣಿಗಳಿಗೆ ಬಿಸಿಲಿನ ತಾಪ ತಪ್ಪಿಸಲು ಮೃಗಾಲಯ ಸಿಬ್ಬಂದಿ ನೂತನ ಪ್ಲಾನ್ ಮಾಡಿದ್ದಾರೆ. ಸ್ಪ್ರಿಂಕ್ಲರ್ ಮೂಲಕ ಪ್ರಾಣಿಗಳಿಗೆ ನೀರು ಸಿಂಪಡಣೆ ಮಾಡುತ್ತಿದ್ದು, ನೀರಿನಲ್ಲಿ ಚಿನ್ನಾಟವಾಡ್ತಾ ಪ್ರಾಣಿಗಳು ಕೊಂಚ ಬೇಸಿಲಿನ ಬೇಗೆಯಿಂದ ರಿಲ್ಯಾಕ್ಸ್ ಪಡೆಯುತ್ತಿವೆ.

    ನೀರು ಸಿಂಪಡಣೆ ಜೊತೆಗೆ ಪ್ರಾಣಿಗಳಿಗೆ ದ್ರವ ಆಹಾರಗಳನ್ನು ಸಿಬ್ಬಂದಿ ನೀಡುತ್ತಿದ್ದಾರೆ. ಕರಡಿಗಳಿಗೆ ಐಸ್‍ಬಾಕ್ಸ್ ನಲ್ಲಿ ಕಲ್ಲಂಗಡಿ ವಿತರಣೆ, ಚಿಂಪಾಜಿಗಳಿಗೆ ಎಳನೀರು ವಿತರಣೆ, ಹೀಗೆ ಎಲ್ಲಾ ಪ್ರಾಣಿಗಳಿಗು ನೀರಿನ ಅಂಶ ಇರುವ ಆಹಾರವನ್ನು ಇಲ್ಲಿ ನೀಡಲಾಗುತ್ತಿದೆ. ಈ ಮೂಲಕ ಪ್ರಾಣಿಗಳು ಕೂಲ್ ಆಗಿರುವಂತೆ ಮೃಗಾಲಯ ಸಿಬ್ಬಂದಿ ನೋಡಿಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸ್ವಲ್ಪ ದಿನದಲ್ಲಿ ಪ್ರಾಣಿಗಳು ಹಳ್ಳಿಗಳಿಗೆ ನುಗ್ಗುತ್ತವೆ, ಎಲ್ಲರು ತಯಾರಾಗಿರಿ: ದರ್ಶನ್

    ಸ್ವಲ್ಪ ದಿನದಲ್ಲಿ ಪ್ರಾಣಿಗಳು ಹಳ್ಳಿಗಳಿಗೆ ನುಗ್ಗುತ್ತವೆ, ಎಲ್ಲರು ತಯಾರಾಗಿರಿ: ದರ್ಶನ್

    ಬೆಂಗಳೂರು: ಬಂಡೀಪುರ ಹುಲಿರಕ್ಷಿತಾರಣ್ಯ ಉಂಟಾಗಿರುವ ಕಾಡ್ಗಿಚ್ಚಿನಿಂದ ಸಾಕಷ್ಟು ವನ್ಯಜೀವಿ ಸಂಕುಲಕ್ಕೆ ತೊಂದರೆಯಾಗಿದ್ದು, ಇನ್ನೂ ಸ್ವಲ್ಪ ದಿನದಲ್ಲಿ ಪ್ರಾಣಿಗಳು ಹಳ್ಳಿಗಳಿಗೆ ನುಗ್ಗುತ್ತೆ, ಎಲ್ಲರು ತಯಾರಾಗಿರಿ ಎಂದು ದರ್ಶನ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಬಂಡೀಪುರದಲ್ಲಿ ಬೆಂಕಿ ಬಿದ್ದು 42 ಸಾವಿರ ಎಕ್ರೆ ಕಾಡು ಸುಟ್ಟು ಹೋಗಿದೆ. 42 ಸಾವಿರ ಕಾಡು ಎಕ್ರೆ ಕಾಡು ಬೆಳೆಯೋಕೆ ಎಷ್ಟು ಕಷ್ಟ. ಕಾಡಿಗೆ ಬೆಂಕಿ ಬಿದ್ದಾಗ ಪ್ರಾಣಿಗಳು ಓಡಿ ಹೋಗುತ್ತೆ. ಒಂದು ಗಂಡು ಹುಲಿ 12 ಕಿ.ಮೀ ಓಡುತ್ತೆ. ಅದರಲ್ಲಿ ನಾಲ್ಕು ಹೆಣ್ಣು ಹುಲಿಗಳು ಇರುತ್ತೆ. ಹುಲಿ ಓಡುವಾಗ ಮತ್ತೊಂದು ಹುಲಿ ಎದುರಿಗೆ ಬಂದರೆ ಅದು ಜಗಳವಾಡುತ್ತೆ. ಆಗ ಕಾಡು ಕೂಡ ನಾಶವಾಗುತ್ತೆ ಹಾಗೂ ಹುಲಿ ಕೂಡ ಸಾವನ್ನಪ್ಪುತ್ತದೆ. ಇದಕ್ಕೆ ಯಾರು ಹೊಣೆ ಎಂದು ದರ್ಶನ್ ಪ್ರಶ್ನಿಸಿದ್ದಾರೆ.

    ಕಾಡು ಹೋಯಿತು ಎಂದು ಎಲ್ಲರು ಯೋಚನೆ ಮಾಡಿ. ಇನ್ನೂ ಸ್ವಲ್ಪ ದಿನದಲ್ಲಿ ಪ್ರಾಣಿಗಳು ಹಳ್ಳಿಗಳಿಗೆ ನುಗ್ಗುತ್ತೆ. ಎಲ್ಲರು ತಯಾರಾಗಿರಿ. ಏಕೆಂದರೆ ಹುಲಿಗಳಿಗೆ ತಿನ್ನಲು ಏನು ಇಲ್ಲ. ಆಗ ನಾವು ಅರಣ್ಯ ಸಿಬ್ಬಂದಿಯನ್ನು ಕರೆಸಬೇಕು. ಆಗ ಅವರು ಪ್ರಾಣಿಗಳನ್ನು ಶೂಟ್ ಮಾಡುತ್ತಾರೆ, ಇಲ್ಲ ನಾವು ಶೂಟ್ ಮಾಡಬೇಕಾಗುತ್ತೆ. ಅರಣ್ಯ ಸಿಬ್ಬಂದಿಯವರು ಪ್ರಾಣಿಗಳನ್ನು ಸ್ಥಳಾಂತರಿಸೋಕ್ಕೆ ಆಗಲ್ಲ. ಸ್ಥಳಾಂತರಗೊಂಡರೆ ಪ್ರಾಣಿಗಳು ಬದುಕುವುದಿಲ್ಲ ಎಂದರು.

    ಈ ಹಿಂದೆ ಕೂಡ ದರ್ಶನ್ ಅವರು ಟ್ವಿಟ್ಟರಿನಲ್ಲಿ, “ಬಂಡೀಪುರ ಅಭಯಾರಣ್ಯದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನಿಂದ ಸಾಕಷ್ಟು ವನಜೀವಿ ಸಂಕುಲಕ್ಕೆ ತೊಂದರೆಯುಂಟಾಗಿದೆ. ಸರ್ಕಾರ, ಅರಣ್ಯ ಇಲಾಖೆ ಹಾಗೂ ಹಲವಾರು ಸ್ವಯಂಸೇವಕರು ಜೊತೆಗೂಡಿ ಈ ಅವಘಡವನ್ನು ಶಮನ ಮಾಡಲು ಯತ್ನಿಸುತ್ತಿದ್ದಾರೆ. ಆಸಕ್ತಿಯುಳ್ಳ ಸ್ವಯಂಸೇವಕರು ದಯಮಾಡಿ ಈ ಅಭಿಯಾನದಲ್ಲಿ ನೆರವಾಗಬೇಕಾಗಿ ವಿನಂತಿ” ಎಂದು ಟ್ವೀಟ್ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಾಣಿಗಳು ಕಾಡಿನಿಂದ ನಾಡಿಗೆ ಬರದಂತೆ ಗೋಡೆಗೆ ಮೊಳೆ ಹೊಡೆದ ಇಲಾಖೆ!

    ಪ್ರಾಣಿಗಳು ಕಾಡಿನಿಂದ ನಾಡಿಗೆ ಬರದಂತೆ ಗೋಡೆಗೆ ಮೊಳೆ ಹೊಡೆದ ಇಲಾಖೆ!

    – ತೆರವಿಗೆ ಸುಪ್ರೀಂ ಆದೇಶವಿದ್ರೂ ನಿರ್ಲಕ್ಷ್ಯ

    ಮೈಸೂರು: ಕಾಡು ಪ್ರಾಣಿಗಳ ಕಾಡಿನಿಂದ ಹೊರಬರದಂತೆ ತಡೆಯಲು ಅರಣ್ಯ ಇಲಾಖೆ ಅನುಸರಿಸಿರೋ ಕ್ರಮ ಕಾಡು ಪ್ರಾಣಿಗಳ ಪ್ರಾಣಕ್ಕೆ ಕುತ್ತು ತಂದಿದ್ದು, ಕಬ್ಬಿಣದ ಮೊಳೆಗಳನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದರೂ ನಿರ್ಲಕ್ಷ್ಯವನ್ನು ತೋರುತ್ತಿದೆ.

    ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ದೊಡ್ಡ ದೊಡ್ಡ ಚೂಪಾದ ಕಬ್ಬಿಣದ ಮೊಳೆಗಳ ಗೋಡೆಯನ್ನು ಅರಣ್ಯ ಇಲಾಖೆ ನಿರ್ಮಿಸಿದೆ. ಈ ಚೂಪಾದ ಕಬ್ಬಿಣದ ಮೊಳೆಗಳ ಗೋಡೆ ಶುದ್ಧ ಅವೈಜ್ಞಾನಿಕ. ಇದು ಪ್ರಾಣಿಗಳ ಜೀವಕ್ಕೆ ಕುತ್ತು ತರುತ್ತಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಅರಣ್ಯ ಇಲಾಖೆಗೆ ಛೀಮಾರಿ ಹಾಕಿ ತಕ್ಷಣವೇ ಚೂಪಾದ ಮೊಳೆಗಳ ಗೋಡೆ ತೆರವು ಮಾಡುವಂತೆ ಆದೇಶಿಸಿದೆ. ಆದರೂ, ಅರಣ್ಯ ಇಲಾಖೆ ಮಾತ್ರ ಕಬ್ಬಿಣದ ಮೊಳೆಗಳ ಗೋಡೆ ತೆರವಿಗೆ ಮೀನಾಮೇಷ ಎಣಿಸುತ್ತಿದೆ.

    ಈ ಚೂಪಾದ ಕಬ್ಬಿಣದ ಮೊಳೆ ಮೇಲೆ ಅಪ್ಪಿ-ತಪ್ಪಿ ಚಿರತೆ, ಹುಲಿ, ಚಿಂಕೆ ಹೀಗೆ ಯಾವುದಾದರೂ ಕಾಡು ಪ್ರಾಣಿಗಳು ಕಾಲಿಟ್ಟರೆ ಅವುಗಳ ಜೀವ ಹೋಗುವುದು ನಿಶ್ಚಿತ. ಇದನ್ನು ಗಮನಿಸಿಯೇ ಸುಪ್ರೀಂ ಕೋರ್ಟ್ ಗೋಡೆ ತೆರವಿಗೆ ಇಲಾಖೆಗೆ ನಿರ್ದೇಶಿಸಿದೆ. ಆದರೂ ಅರಣ್ಯ ಇಲಾಖೆ ಕಾಡು ಪ್ರಾಣಿಗಳ ಬಲಿಗಾಗಿ ಕಾದಿದೆ ಏನೋ ಎಂಬಂತೆ ವರ್ತಿಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv