Tag: ಪ್ರಾಕೃತಿಕ ವಿಕೋಪ

  • ಕೊಡಗು ಸಂತ್ರಸ್ತರಿಗೆ ಪಿಎಫ್‍ಐ ವತಿಯಿಂದ 18 ಲಕ್ಷ ಧನಸಹಾಯ

    ಕೊಡಗು ಸಂತ್ರಸ್ತರಿಗೆ ಪಿಎಫ್‍ಐ ವತಿಯಿಂದ 18 ಲಕ್ಷ ಧನಸಹಾಯ

    ಮಡಿಕೇರಿ: ಕಳೆದ ಆಗಸ್ಟ್ ನಲ್ಲಿ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ವತಿಯಿಂದ ನೆರವು ನೀಡಲಾಯಿತು.

    180 ಕುಟುಂಬಗಳಿಗೆ 18 ಲಕ್ಷ ರೂ. ಧನಸಹಾಯವನ್ನು ಸಂಘಟನೆಯಿಂದ ವಿತರಿಸಲಾಯಿತು. ಮುಖ್ಯವಾಗಿ ಮಳೆಯಿಂದ ಹಾನಿಯಾದ ಮನೆಗಳ ರಿಪೇರಿಗೆ ಹಣ ಬಳಸಿಕೊಳ್ಳುವಂತೆ ಸಂತ್ರಸ್ತರಿಗೆ ಸಂಘಟನೆ ಮನವಿ ಮಾಡಿದೆ.

    ಕಳೆದ ಆಗಸ್ಟ್ ನಲ್ಲಿ ಸುರಿದ ಭಾರೀ ಮಳೆ ಹಾಗೂ ಜಲಸ್ಫೋಟದಿಂದ ಸಾವಿರಾರು ಜನರು ಸಂತ್ರಸ್ತರಾಗಿದ್ದರು. 900ಕ್ಕೂ ಹೆಚ್ಚು ಮಂದಿ ಮನೆಯನ್ನು ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆಯ್ದ 180 ಕುಟುಂಬಗಳಿಗೆ ಪಿಎಫ್‍ಐ ಸಂಘಟನೆ ನೆರವನ್ನು ನೀಡಿದೆ.

    ಮಡಿಕೇರಿಯ ಕಮ್ಯೂನಿಟಿ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಅಮೀನ್ ಮೊಹಿಸೀನ್ ಸೇರಿದಂತೆ ಅನೇಕರು ಫಲಾನುಭವಿಗಳಿಗೆ ಸಹಾಯಧನ ವಿತರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಯಾತ್ರಿಕರ ಸಂಖ್ಯೆಯಲ್ಲಿ ಗಣನೀಯ ಕುಸಿತ – ಕಾವೇರಿ ಜಾತ್ರೆಯ ಮೇಲೆ ಪ್ರಾಕೃತಿಕ ವಿಕೋಪದ ಛಾಯೆ

    ಯಾತ್ರಿಕರ ಸಂಖ್ಯೆಯಲ್ಲಿ ಗಣನೀಯ ಕುಸಿತ – ಕಾವೇರಿ ಜಾತ್ರೆಯ ಮೇಲೆ ಪ್ರಾಕೃತಿಕ ವಿಕೋಪದ ಛಾಯೆ

    ಮಡಿಕೇರಿ: ಪ್ರಮುಖ ಯಾತ್ರಾಸ್ಥಳ, ಪವಿತ್ರ ಕ್ಷೇತ್ರ ಕೊಡಗಿನ ತಲಕಾವೇರಿಯ ಕಾವೇರಿ ಜಾತ್ರೆಗೂ ಪ್ರಾಕೃತಿಕ ವಿಕೋಪದ ಕರಾಳ ಛಾಯೆ ಆವರಿಸಿದೆ. ಹೊರ ಭಾಗದ ಯಾತ್ರಿಗಳಿಂದ ತುಂಬಿರಬೇಕಾಗಿದ್ದ ಕ್ಷೇತ್ರ ಈ ಬಾರಿ ಜಿಲ್ಲೆಯ ಯಾತ್ರಿಗಳಿಗೆ ಮಾತ್ರ ಸೀಮಿತವಾಗಿದೆ.

    ತುಲಾಮಾಸದಲ್ಲಿ ಕಾವೇರಿ ದರ್ಶನ ಮಾಡಿ ಪವಿತ್ರ ಸ್ನಾನ ಮಾಡಿದರೆ ಪುಣ್ಯ ಬರುತ್ತದೆ ಎನ್ನುವುದು ಕೋಟ್ಯಂತರ ಕಾವೇರಿ ಭಕ್ತರ ನಂಬಿಕೆ. ಈ ಹಿನ್ನೆಲೆಯಲ್ಲಿ ತುಲಾಮಾಸದಲ್ಲಿ ತಲಕಾವೇರಿ ಭಾಗಮಂಡಲ ಕ್ಷೇತ್ರದಲ್ಲಿ ಒಂದು ತಿಂಗಳ ಕಾಲ ಕಾವೇರಿ ಜಾತ್ರೆ ನಡೆಯುತ್ತದೆ. ಜಾತ್ರೆಗೆ ಪ್ರತೀ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಬರುತ್ತಿದ್ದರು. ಆದರೆ ಈ ವರ್ಷದ ತುಲಾಮಾಸದ ಕಾವೇರಿ ಜಾತ್ರೆಯ ಮೇಲೆ ಪ್ರಾಕೃತಿಕ ವಿಕೋಪ ಹೊಡೆತ ನೀಡಿದ್ದು, ಜಾತ್ರೆಗೆ ಆಗಮಿಸುವ ಯಾತ್ರಾರ್ಥಿಗಳ ಸಂಖ್ಯೆ ಗಣನೀಯವಾಗಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.

    ಈ ಹಿಂದೆ ಜಾತ್ರಾ ಸಮಯದಲ್ಲಿ ಪ್ರತಿದಿನ 50 ರಿಂದ 60 ಸಾವಿರಕ್ಕೂ ಹೆಚ್ಚು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದರು. ಆದರೆ ಈಗ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ 10 ಸಾವಿರವನ್ನೂ ದಾಟುತ್ತಿಲ್ಲ. ತೀರ್ಥೋದ್ಭವದ ದಿನ ಕೂಡಾ ಇದಕ್ಕೆ ಸಾಕ್ಷಿಯಾಗಿದ್ದು, ಹೆಚ್ಚಿನ ಭಕ್ತರು ಭೇಟಿ ನೀಡಿರಲಿಲ್ಲ. ಈಗಲೂ ಅದು ಮುಂದುವರಿದಿದ್ದು, ಭಕ್ತರ ಸಂಖ್ಯೆ ಇಳಿಮುಖವಾಗಿರುವುದರಿಂದ ಕ್ಷೇತ್ರ ಭಕ್ತರಿಲ್ಲದೇ ಬಿಕೋ ಎನ್ನುತ್ತಿದೆ ಎಂದು ದೇವಾಲಯದ ಮುಖ್ಯಸ್ಥರಾದ ಮೋಟ್ಟಯ್ಯ ಅವರು ತಿಳಿಸಿದ್ದಾರೆ.

    ಎರಡೂವರೆ ತಿಂಗಳ ಹಿಂದೆ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಹಿನ್ನೆಲೆ ಹೊರಭಾಗದ ಭಕ್ತರು ಜಿಲ್ಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರ ಎಫೆಕ್ಟ್ ಎಂಬಂತೆ ಯಾತ್ರಾಸ್ಥಳ ತಲಕಾವೇರಿ ಭಾಗಮಂಡಲದಲ್ಲಿ ಭಕ್ತರ ಸಂಖ್ಯೆ ಕುಸಿದಿದೆ. ಕೊಡಗಿನ ಭಕ್ತರು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವುದದನ್ನ ಹೊರತುಪಡಿಸಿದರೆ ಇನ್ಯಾವ ಕಡೆಯಿಂದಲೂ ಹೆಚ್ಚಿನ ಭಕ್ತರು ಕ್ಷೇತ್ರಕ್ಕೆ ಬರುತ್ತಿಲ್ಲ. ಕೇಶಮುಂಡನ ಹಾಗೂ ಪಿಂಡ ಪ್ರಧಾನ ಮೊದಲಾದ ಕಾರ್ಯಗಳಿಗೂ ಹೆಚ್ಚಿನವರು ಬರುತ್ತಿಲ್ಲ.

    ಭಕ್ತರ ಸಂಖ್ಯೆ ಕುಸಿದಿದ್ದು ಇದರ ನೇರ ಪರಿಣಾಮ ವರ್ತಕರ ಮೇಲೆ ತಟ್ಟಿದ್ದು, ಗ್ರಾಹಕರಿಲ್ಲದೆ ಅಂಗಡಿ ಮಳಿಗೆಗಳು ಬಿಕೋ ಎನ್ನುತ್ತಿವೆ. ಕೆಲವರಂತೂ ಅಂಗಡಿಗೆ ಬೀಗ ಹಾಕಿ ಹೋಗಿದ್ದಾರೆ. ಪ್ರಾಕೃತಿಕ ವಿಕೋಪ ತಲಕಾವೇರಿ, ಭಾಗಮಂಡಲದಲ್ಲಿ ಸಂಭವಿಸದೇ ಇದ್ದರೂ ಅದರ ಪರಿಣಾಮವನ್ನು ಎದುರಿಸಬೇಕಾದ ಅನಿವಾರ್ಯ ಕ್ಷೇತ್ರಕ್ಕೆ ಬಂದಿರುವುದು ಸತ್ಯ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv