Tag: ಪ್ರತಿಭಟನೆ

  • 50 ವರ್ಷಗಳ ದೇಶವನ್ನ ಲೂಟಿ ಮಾಡಿದ್ದಕ್ಕೆ ಕೈ ನಾಯಕರ ಮನೆ ಮೇಲೆ ಐಟಿ ದಾಳಿ: ಶೆಟ್ಟರ್

    50 ವರ್ಷಗಳ ದೇಶವನ್ನ ಲೂಟಿ ಮಾಡಿದ್ದಕ್ಕೆ ಕೈ ನಾಯಕರ ಮನೆ ಮೇಲೆ ಐಟಿ ದಾಳಿ: ಶೆಟ್ಟರ್

    – 37 ನೇ ದಿನಕ್ಕೆ ಕಾಲಿಟ್ಟ ಸಸಲಾಟ್ಟಿ ಏತ ನೀರಾವರಿ ಪ್ರತಿಭಟನೆ

    ಬಾಗಲಕೋಟೆ: ಐವತ್ತು ವರ್ಷಗಳ ಕಾಲ ಕಾಂಗ್ರೆಸ್‍ನವರು ಆಡಳಿತ ನಡೆಸಿ ದೇಶ ಲೂಟಿ ಹೊಡೆದಿದ್ದಾರೆ ಹಾಗಾಗಿ ಅವ್ರ ಮನೆಗಳ ಮೇಲೆಯೇ ಐಟಿ ದಾಳಿಯಾಗುತ್ತಿವೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ಹೇಳಿದ್ದಾರೆ.

    ಸಸಲಾಟ್ಟಿ ಏತ ನೀರಾವರಿ ಜಾರಿಗೆ ಆಗ್ರಹಿಸಿ ನೆಡೆಯುತ್ತಿರುವ ರೈತ ಪ್ರತಿಭಟನೆ 37ನೇ ದಿನಕ್ಕೆ ಕಾಲಿಟ್ಟಿದೆ. ಈ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಬಿಜೆಪಿ ಜಿಲ್ಲಾ ಘಟಕ ಇಂದು ಮುಧೋಳ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನ ಹಮ್ಮಿಕೊಂಡಿತ್ತು. ಸಮಾವೇಶದಲ್ಲಿ ಜಿಲ್ಲೆಯ ಬಿಜೆಪಿ ನಾಯಕರು ಸಮಾವೇಶದಲ್ಲಿ ಭಾಗವಹಿಸಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

    ಜಗದೀಶ್ ಶೆಟ್ಟರ್ ಮಾತನಾಡಿ, ಸಚಿವ ರಮೇಶ್ ಜಾರಕಿಹೊಳಿ ಮನೆ ಮೇಲೆ ಐಟಿ ದಾಳಿಯಾಗಿದೆ. ಆದರೂ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡ್ತಿಲ್ಲ, ಕೂಡಲೇ ಅವ್ರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ರು. ಇನ್ನು ಎಂಎಲ್‍ಸಿ ಗೋವಿಂದ್‍ರಾಜ್ ಅವ್ರ ಡೈರಿ ಬಗ್ಗೆ ಸೂಕ್ತ ತನಿಖೆಯಾದ್ರೆ ಸಿಎಂ ಸಿದ್ಧರಾಮಯ್ಯ ಮನೆಗೆ ಹೋಗ್ತಾರೆ. ಇನ್ನು ಡೈರಿ ಬಗ್ಗೆಯೂ ತನಿಖೆಯಾಗಲಿ, ಅನಂತ್‍ಕುಮಾರ್ ಹಾಗು ಯಡಿಯೂರಪ್ಪ ಡೈರಿ ಸಂಭಾಷಣೆ ಬಗ್ಗೆಯೂ ತನಿಖೆಯಾಗಲಿ ಎಂದು ಹೇಳಿದರು.

    ಸಿಎಂ ಸಿದ್ದರಾಮಯ್ಯ ದಾಖಲೆ ಇಲ್ಲದೇ ಬಿಎಸ್‍ವೈ ಬಗ್ಗೆ ಮಾತನಾಡ್ತಾರೆ. ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಪಕ್ಕದ ಜಿಲ್ಲೆಯವ್ರೇ ಆದ್ರೂ ಈ ಭಾಗದ ನೀರಾವರಿ ಯೋಜನೆ ಬಗ್ಗೆ ಕಿಂಚಿತ್ತೂ ಚಿಂತಿಸಿಲ್ಲ. ರಾಜ್ಯ ಸರ್ಕಾರಕ್ಕೆ ರೈತ ಪರ ಕಾಳಜಿ ಇದ್ರೆ ಈ ಯೋಜನೆಯನ್ನ ಕೂಡಲೇ ಜಾರಿಗೊಳಿಸಬೇಕು. ಜಾರಿ ಆಗದೇ ಇದ್ದರೆ ಮುಂದೆ ಬಿಜೆಪಿ ಸರ್ಕಾರಕ್ಕೆ ಅಧಿಕಾರಕ್ಕೆ ಬರುತ್ತಿದ್ದಂತೆ ಈ ಏತ ನೀರಾವರಿ ಯೋಜನೆ ಜಾರಿಗೊಳಿಸುವುದಾಗಿ ಜಗದೀಶ್ ಶೆಟ್ಟರ್ ತಿಳಿಸಿದರು.

    ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಸರ್ಕಾರ ಹಗುರವಾಗಿ ತೆಗೆದುಕೊಂಡಿದೆ. ಈ ಭಾಗದ ಜನರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದ್ರೆ ಈ ಬಾರಿಯ ಬಜೆಟ್‍ನಲ್ಲಿ 10 ಸಾವಿರ ಕೋಟಿ ರೂ. ತೆಗೆದಿಡಬೇಕು. ನೀರಾವರಿ ಯೋಜನೆಗಳ ಅಭಿವೃದ್ಧಿ ಬಗ್ಗೆ ಇರುವ ಅವಕಾಶಗಳನ್ನ ಸಚಿವ ಎಂ.ಬಿ ಪಾಟೀಲ್ ಸರಿಯಾಗಿ ಬಳಸಿಕೊಳ್ಳದಿದ್ರೆ ಮುಂದಿನ ಜನ್ಮದಲ್ಲಿ ಅವರು ನೀರಾವರಿ ಮಂತ್ರಿ ಆಗಲ್ಲ ಎಂದರು.

    ಬ್ರಿಗೇಡ್ ಸಮಾವೇಶದಲ್ಲಿ ಭಾಗವಹಿಸುವಿಕೆ ಬಗ್ಗೆ ಮಾತನಾಡಿ, ಪಕ್ಷದ ವತಿಯಿಂದ ಬ್ರಿಗೇಡ್ ಸಮಾವೇಶ ಮಾಡಲಾಗುತ್ತೆ. ಇನ್ನು ಯಡಿಯೂರಪ್ಪ ಹಾಗೂ ನಮ್ಮ ಮಧ್ಯೆ ಇದ್ದ ಸಮಸ್ಯೆ ಬಗೆಹರಿದಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿ ನಕ್ಕರು.

     

  • ಕೊಪ್ಪಳ: ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಮಸಿ, ಅಭಿಮಾನಿಗಳ ಪ್ರತಿಭಟನೆ

    ಕೊಪ್ಪಳ: ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಮಸಿ, ಅಭಿಮಾನಿಗಳ ಪ್ರತಿಭಟನೆ

    ಕೊಪ್ಪಳ: ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಮಸಿ ಬಳಿದು ಅವಮಾನ ಮಾಡಿರುವ ಘಟನೆ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ನಡೆದಿದೆ. ಇದರಿಂದ ಆಕ್ರೋಶಗೊಂಡ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

    ಯಲಬುರ್ಗಾ ಪಟ್ಟಣದ ಕುಷ್ಟಗಿ ರಸ್ತೆಯಲ್ಲಿರುವ ಟಿಪ್ಪು ಸುಲ್ತಾನ್‍ರ ಕಟೌಟ್‍ಗೆ ಕೆಲ ಕಿಡಿಗೇಡಿಗಳು ಮಸಿ ಬಳಿದಿದ್ದಾರೆ. ಆಕ್ರೋಶಗೊಂಡ ಜನರು ಟಿಪ್ಪು ಸುಲ್ತಾನ ವೃತ್ತದಿಂದ ತಹಶೀಲ್ದಾರ್ ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾಗಿದ್ದರು. ಆದರೆ ಪ್ರತಿಭಟನಾ ಮೆರವಣಿಗೆ ನಡೆಸಲು ಪೊಲೀಸರು ಒಪ್ಪಿಗೆ ನೀಡದಕ್ಕೆ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯ ಕಲೆ ಸಮಯ ಮಾತಿನ ಚಕಮಕಿ ಸಹ ನಡೆಯಿತು.

    ಪ್ರತಿಭಟನೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಸ್ಥಳದಲ್ಲಿ ಟಿಪ್ಪುಸುಲ್ತಾನ ಅಭಿಮಾನಿಗಳು ಧರಣಿ ನಡೆಸುತ್ತಿದ್ದಾರೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ.

     

  • ರಾಯಚೂರು ಕೃಷಿ ವಿವಿಗೆ ಬೀಗ ಜಡಿದು ತಾಂತ್ರಿಕ ವಿದ್ಯಾರ್ಥಿಗಳ ಪ್ರತಿಭಟನೆ

    ರಾಯಚೂರು ಕೃಷಿ ವಿವಿಗೆ ಬೀಗ ಜಡಿದು ತಾಂತ್ರಿಕ ವಿದ್ಯಾರ್ಥಿಗಳ ಪ್ರತಿಭಟನೆ

    ರಾಯಚೂರು: ಕೃಷಿ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಕೃಷಿ ಎಂಜಿನಿಯರ್‍ಗಳನ್ನು ಕಡೆಗಣಿಸಿದ್ದನ್ನ ಖಂಡಿಸಿ ರಾಯಚೂರು ಕೃಷಿ ವಿವಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ಆರಂಭಿಸಿದ್ದಾರೆ. ವಿಶ್ವವಿದ್ಯಾಲಯದ ತಾಂತ್ರಿಕ ಮಹಾವಿದ್ಯಾಲಯದ ಮುಖ್ಯ ಗೇಟ್ ಗೆ ಬೀಗ ಜಡಿದು ಹೋರಾಟ ನಡೆಸಿದ್ದಾರೆ.

    ಕೃಷಿ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 16 ,2016 ರಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ರಾಜ್ಯ ಪತ್ರದಲ್ಲಿ ಕೃಷಿ ತಾಂತ್ರಿಕ ಪದವೀಧರರನ್ನ ಕೈಬಿಡಲಾಗಿದೆ. ಈ ಮೊದಲು ಹೊರಡಿಸಿದ್ದ ಗೆಜೆಟ್ ಅಧಿಸೂಚನೆಗಳಲ್ಲಿ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಕೃಷಿ ಎಂಜಿನಿಯರಿಂಗ್ ಪದವಿಯನ್ನು ಪರಿಗಣಿಸಲಾಗಿತ್ತು. ಹಾಗೇ ಈಗಲೂ ಪರಿಗಣಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

    ತರಗತಿ ಹಾಗೂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿರುವುದರಿಂದ ಕೃಷಿ ವಿವಿ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳು ರದ್ದಾಗಿವೆ. ಅಧಿಸೂಚನೆ ಹೊರಡಿಸುವುದು ಸರ್ಕಾರ ಮಟ್ಟದ ನಿರ್ಧಾರವಾಗಿರುವುದರಿಂದ ವಿವಿ ಚಟುವಟಿಕೆಗಳಿಗೆ ಅಡ್ಡಿ ಪಡಿಸದಂತೆ ವಿವಿ ಕುಲಪತಿ ಪಿ.ಎಂ.ಸಾಲಿಮಠ್ ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ. ಆದ್ರೆ ವಿದ್ಯಾರ್ಥಿಗಳು ಸರ್ಕಾರ ತಾರತಮ್ಯ ನೀತಿ ಬಿಟ್ಟು ನಮ್ಮನ್ನ ಪರಿಗಣಿಸುವವರೆಗೂ ಹೋರಾಟ ಮುಂದುವರೆಸುವುದಾಗಿ ಹೇಳಿದ್ದಾರೆ.

  • ಗದಗ್‍ನಲ್ಲಿ 3ನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ: ಇಬ್ಬರು ಅಸ್ವಸ್ಥ

    ಗದಗ್‍ನಲ್ಲಿ 3ನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ: ಇಬ್ಬರು ಅಸ್ವಸ್ಥ

    ಗದಗ: ಕಪ್ಪತ್ತಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶ ಘೋಷಣೆಗಾಗಿ ಆಗ್ರಹಿಸಿ ಗದಗನಲ್ಲಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ 3 ನೇ ದಿನವಾದ ಇಂದು ಮುಂದುವರೆದಿದೆ. ಇಂದು ನಡೆಯುವ ಹೋರಾಟವನ್ನ ಬಸವ ಯೋಗ ಸಮೀತಿಯ ಯೋಗ ಶಿಬಿರ ಮೂಲಕ ಆರಂಭವಾಗಿದೆ. ಇಂದು ಬೆಳಗಿನಜಾವ ಅಸ್ವಸ್ಥಗೊಂಡ ಒಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

    ಇಂದು ಬೆಳಗ್ಗಿನ ಜಾವ ನಡೆದ ಉಪವಾಸ ಸತ್ಯಾಗ್ರಹದ ವೇಳೆ ಜನಸಂಗ್ರಾಮದ ಮುಖಂಡರಾದ ಪ್ರಭುಗೌಡ ಮತ್ತು ಪ್ರತಿಮಾ ನಾಯಕ್ ಎಂಬವರ ಶುಗರ್ ಲೆವಲ್ ಕಡಿಮೆ ಆಗಿ ಅಸ್ವಸ್ಥಗೊಂಡಿದ್ದು, ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತಿಮಾ ನಾಯಕ್ ಮಾತ್ರ ಕೇವಲ ನೀರು ಕುಡಿಯುವ ಮೂಲಕ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ. ಪ್ರತಿಭಟನ ನಿರರತ ಸ್ಥಳದಲ್ಲಿ ಅಂಬುಲೆನ್ಸ್, ವೈದ್ಯರು ಹಾಗೂ ಪೊಲೀಸ್ ಸಿಬ್ಬಂದಿಗಳು ಠಿಕಾಣಿ ಹೂಡಿದ್ದಾರೆ.

    ವೈದ್ಯರು ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹೀರೆಮಠರನ್ನು ಚೆಕಪ್ ಮಾಡಲು ಹೋದಾಗ ನನ್ನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿ ಚೆಕಪ್ ಬೇಡ ಎಂದು ಹೇಳಿದ್ದಾರೆ. ತೋಂಟದ ಸಿದ್ಧಲಿಂಗ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ಇಂದು ಅನೇಕ ಸ್ವಾಮಿಜುಗಳು, ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪನವರು, ಪರಿಸರ ಪ್ರೇಮಿಗಳು ಹಾಗೂ ಗದಗ ಜಿಲ್ಲಾ ವಕೀಲರ ಸಂಘದಿಂದ ಇಂದು ತಮ್ಮ ಕಾರ್ಯಕಲಾಪಗಳನ್ನ ಬಹಿಷ್ಕರಿಸಿ ಹೋರಾಟಕ್ಕೆ ಸಾಥ್ ನೀಡ್ತಿದ್ದಾರೆ.

    ಕಪ್ಪತ್ತಗುಡ್ಡ ಉಳಿಯುವಿಕೆಗೆ ಬೃಹತ್ ಪ್ರಮಾಣದಲ್ಲಿ ಇಷ್ಟೆಲ್ಲಾ ಹೋರಾಟ ನಡೆಯುತ್ತಿದ್ರೂ ಇತ್ತ ಮುಖ್ಯಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್ ಈ ಬಗ್ಗೆ ಗಮನ ಹರಿಸದೇ ಇರುವುದು ವಿಪರ್ಯಾಸ.

  • ಬಸ್ ತಳ್ಳಿದ ಪ್ರಭಾರ ಎಸ್‍ಪಿ- ಕೆಎಸ್‍ಆರ್‍ಟಿಸಿ ಡ್ರೈವರ್‍ಗೆ ಕ್ಲಾಸ್

    ಉಡುಪಿ: ಸಾಸ್ತನದಲ್ಲಿ ನಡೆಯುತ್ತಿರುವ ಟೋಲ್ ಗೇಟ್ ಪ್ರತಿಭಟನೆ ವೇಳೆ ನೂರಾರು ಪ್ರತಿಭಟನಾಕಾರರನ್ನು ಬಂಧಿಸಿ ಬಂಧಿಸಿ ಕೆಎಸ್‍ಆರ್‍ಟಿಸಿ ಬಸ್ಸಿನಲ್ಲಿ ತುಂಬಲಾಯ್ತು. ಬಸ್ ತುಂಬಿದರೂ ನಿಂತಿದ್ದ ಬಸ್ಸು ಸ್ಟಾರ್ಟ್ ಆಗ್ಲೇ ಇಲ್ಲ. ಹೈವೇ ಮಧ್ಯೆ ಬಸ್ ಇದ್ದುದರಿಂದ ರೋಡ್ ಬ್ಲಾಕ್ ಆಯ್ತು. ದಿಕ್ಕು ತೋಚದ ಪ್ರಭಾರ ಎಸ್‍ಪಿ ವಿಷ್ಣುವರ್ಧನ ಪ್ರತಿಭಟನಾಕಾರರನ್ನು ತುಂಬಿದ್ದ ಬಸ್ ತಳ್ಳಲು ಶುರು ಮಾಡಿದರು.

    ಪ್ರಭಾರ ಎಸ್‍ಪಿ ಸೇರಿದಂತೆ ಬ್ರಹ್ಮಾವರ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್- ಎಸ್‍ಐ ಮಧು ಸೇರಿದಂತೆ ಪೊಲೀಸರು ಬಸ್ಸನ್ನು ಸುಮಾರು ದೂರ ತಳ್ಳಿದರು. ವಿಪರೀತ ಜನ ಇದ್ದುದರಿಂದ ಮತ್ತಷ್ಟು ದೂರ ಬಸ್ಸನ್ನು ತಳ್ಳಿ ಜರ್ಕ್ ಹೊಡೆದು ಸ್ಟಾರ್ಟ್ ಮಾಡಿಸಬೇಕಾಯ್ತು.

    ಪೊಲೀಸರು ಬಂದೋಬಸ್ತ್ ಮಾಡುವುದರ ಜೊತೆ ಎಕ್ಸ್ಟ್ರಾ ಡ್ಯೂಟಿ ಮಾಡಬೇಕಾಗಿ ಬಂತು. ಬಂಧಿತರನ್ನು ಸ್ಥಳಾಂತರಗೊಳಿಸಿ ಬಂದ ಪೊಲೀಸರು, ಕೆಎಸ್‍ಆರ್‍ಟಿಸಿ ಚಾಲಕ ಮತ್ತು ನಿರ್ವಾಹಕನಿಗೆ ಚೆನ್ನಾಗಿಯೇ ಕ್ಲಾಸ್ ತಗೊಂಡ್ರಂತೆ. ಮೊದಲೇ ಉರಿ ಬಿಸಿಲಿನಲ್ಲಿ ಅರ್ಧ ದಿನ ನಿಂತು ಬೆಂದಿದ್ದ ಪೊಲೀಸರಿಗೆ ಬಸ್ ಚಾಲೂ ಆಗದಿದ್ದುದು ಸಿಕ್ಕಾಪಟ್ಟೆ ಗರಂ ಆಗಲು ಕಾರಣವಾಯ್ತು.

    ಉಡುಪಿಯ ಸಾಸ್ತಾನದಲ್ಲಿ ಟೋಲ್ ಗೇಟ್ ವಿಚಾರವಾಗಿ ದೊಡ್ಡ ಪ್ರತಿಭಟನೆ ನಡೆಯಿತು. ಹೈವೇ ಕಾಮಗಾರಿ ಪೂರ್ಣಗೊಳ್ಳದೆ ಸುಂಕ ವಸೂಲಿ ಮಾಡಬಾರದೆಂದು ಪ್ರತಿಭಟನಾಕಾರರು ಟೋಲ್ ಮುತ್ತಿಗೆ ಮಾಡಿದ್ರು.

     

  • ಹೈವೇ ಕಾಮಗಾರಿ ಪೂರ್ಣಗೊಳ್ಳದೇ ಟೋಲ್ ಸಂಗ್ರಹಿಸಿದ್ದಕ್ಕೆ ಪಡುಬಿದ್ರೆ, ಸಾಸ್ತಾನದಲ್ಲಿ ಪ್ರತಿಭಟನೆ

    -ಮುಂಜಾಗ್ರತ ಕ್ರಮವಾಗಿ ಗೇಟ್ 2 ಕಿಮೀ ವ್ಯಾಪ್ತಿ ನಿಷೇಧಾಜ್ಞೆ ಜಾರಿ

    ಉಡುಪಿ: ಜಿಲ್ಲೆಯ ಪಡುಬಿದ್ರೆ ಹಾಗೂ ಸಾಸ್ತಾನ ಟೋಲ್ ಗೇಟ್ ಪ್ರತಿಭಟನೆಯ ಕಾವು ಏರಿದೆ. ಮುಂಜಾಗ್ರತಾ ಕ್ರಮವಾಗಿ ಹೆಜಮಾಡಿ ಹಾಗೂ ಕೋಟ ಟೋಲ್ ಗೇಟ್ ವ್ಯಾಪ್ತಿಯ 2 ಕಿಮಿ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

    ಉಡುಪಿಯಲ್ಲಿ ಹೈವೇ ಕಾಮಗಾರಿ ಪೂರ್ಣಗೊಂಡಿಲ್ಲ. ಈ ನಡುವೆಯೇ ಟೋಲ್ ಸಂಗ್ರಹ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ. ಇದರ ವಿರುದ್ಧ ಸ್ಥಳೀಯ ಹೋರಾಟಗಾರರು ಸಿಡಿದೆದ್ದಿದ್ದಾರೆ. ಪರಿಸ್ಥಿತಿ ಕೈಮೀರಬಹುದು ಎಂಬ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿಗಳು ಸೆಕ್ಷನ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಉಡುಪಿ ಜಿಲ್ಲೆಯ ಪಡುಬಿದ್ರೆ ಠಾಣಾ ವ್ಯಾಪ್ತಿಯ ಸರಹದ್ದಿನ ಹೆಜಮಾಡಿ ಟೋಲ್ ಗೇಟ್ ಮತ್ತು ಕೋಟ ಠಾಣಾ ವ್ಯಾಪ್ತಿಯ ಸಾಸ್ತಾನ ಗುಂಡ್ಮಿ ಟೋಲ್ ಗೇಟಿನಲ್ಲಿ ಫೆಬ್ರವರಿ 9 ರಿಂದ ಟೋಲ್ ಸಂಗ್ರಹ ಮಾಡಲು ಆರಂಭಿಸಿದ್ದು, ಈ ಸಂಬಂಧ ಪ್ರತಿಭಟನೆ, ಮುಷ್ಕರ, ಬಂದ್ ಹಾಗೂ ಸಾರ್ವಜನಿಕ ನೆಮ್ಮದಿಗೆ ಭಂಗವಾಗುವ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗುವ ಸಾಧ್ಯತೆಯಿರುವುದರಿಂದ ಉಡುಪಿ ಜಿಲ್ಲೆಯ ಪಡುಬಿದ್ರೆ ಠಾಣಾ ಸರಹದ್ದಿನ ಹೆಜಮಾಡಿ ಟೋಲ್ ಗೇಟ್ ನಲ್ಲಿ ಸೆಕ್ಷನ್ ಹಾಕಿರುವುದಾಗಿ ಹೇಳಿದ್ದಾರೆ.

    ಕುಂದಾಪುರ ಸಮೀಪದ ಸಾಸ್ತಾನ ಗುಂಡ್ಮಿ ಟೋಲ್ ಗೇಟಿನ 2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಫೆಬ್ರವರಿ 10 ರ ಬೆಳಿಗ್ಗೆ 6 ರಿಂದ ಫೆಬ್ರವರಿ 15 ರ ಮಧ್ಯರಾತ್ರಿ 12 ಗಂಟೆಯವರಗೆ ಸೆಕ್ಷನ್ 144 ಅನ್ವಯ ಪ್ರತಿಬಂಧಕಾಜ್ಞೆಯನ್ನು ಜಾರಿಗೆಗೊಳಿಸುವಂತೆ ಪೊಲೀಸ್ ಅಧೀಕ್ಷಕರಿಗೆ ಮನವಿ ಮಾಡಿದ್ದಾರೆ.

    ಜಿಲ್ಲಾಧಿಕಾರಿಗಳ ಮನವಿಯಂತೆ ಹೆಜಮಾಡಿ ಮತ್ತು ಸಾಸ್ತಾನ ಟೋಲ್ ಗೇಟ್ ಪ್ರದೇಶ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಸಾರ್ವಜನಿಕ ಆಸ್ತಿ ಕಾಪಾಡುವ ಅವಶ್ಯಕತೆ ಕಂಡು ಬಂದಿರುವುದರಿಂದ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಎಸ್.ಪಿ ಕೆ.ಟಿ ಬಾಲಕೃಷ್ಣ ಹೇಳಿದ್ದಾರೆ.

     

  • ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಹಟ್ಟಿ ಚಿನ್ನದ ಗಣಿ ಕಾರ್ಮಿಕರು

    ರಾಯಚೂರು: ದೇಶದ ಏಕೈಕ ಚಿನ್ನ ಉತ್ಪಾದನಾ ಗಣಿ ಸಂಸ್ಥೆಯಾದ ರಾಯಚೂರಿನ ಹಟ್ಟಿ ಚಿನ್ನದ ಗಣಿ ಕಂಪೆನಿಯ ಕಾರ್ಮಿಕರು ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

    ಕಂಪೆನಿಯು ವಿಭಾಗೀಯ ಸ್ಟೋರ್ ಪ್ರಾರಂಭಿಸಲು ಸಹಕಾರ ಸಂಘದ ವ್ಯವಹಾರಗಳನ್ನ ನಿಲ್ಲಿಸಿದ್ದು ಸುಮಾರು ವರ್ಷಗಳಿಂದ ದುಡಿದ ಕಾರ್ಮಿಕರನ್ನ ಕೈಬಿಟ್ಟಿದೆ. ಹೀಗಾಗಿ ಹಟ್ಟಿ ಚಿನ್ನದ ಗಣಿ ಸಹಕಾರ ಸಂಘದ 37 ಜನ ಕಾರ್ಮಿಕರಿಗೆ 22 ತಿಂಗಳಿನಿಂದ ಕೆಲಸವೂ ಇಲ್ಲ ಸಂಬಳವೂ ಇಲ್ಲ. 750 ದಿನಗಳಿಂದ ಶಾಂತಿಯುತ ಹೋರಾಟ ನಡೆಸಿದರೂ ಕಾರ್ಮಿಕರ ಸಮಸ್ಯೆಗೆ ಗಣಿ ಆಡಳಿತ ಮಂಡಳಿ ಸ್ಪಂದನೆ ನೀಡಿಲ್ಲ. ಹೀಗಾಗಿ ಕಾರ್ಮಿಕರು ಗಣಿಯ ಪ್ರಧಾನ ವ್ಯವಸ್ಥಾಪಕರ ಮೂಲಕ ಉದ್ಯೋಗ ಕೊಡಿ ಇಲ್ಲವೇ 37 ಜನ ಕಾರ್ಮಿಕರ ಕುಟುಂಬಳಿಗೆ ದಯಾಮರಣಕ್ಕೆ ಅವಕಾಶ ಕೊಡಿ ಅಂತ ರಾಷ್ಟ್ರಪತಿಗೆ ಮನವಿ ಮಾಡಿದ್ದಾರೆ.

    ಫೆಬ್ರವರಿ 14 ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ಕಾರ್ಮಿಕರು ನಿರ್ಧರಿಸಿದ್ದಾರೆ. ಹೋರಾಟದಲ್ಲಿ ಯಾರಿಗೆ ಏನೇ ಆದ್ರೂ ಹಟ್ಟಿ ಚಿನ್ನದ ಗಣಿ ಆಡಳಿತ ಮಂಡಳಿಯೇ ಕಾರಣ ಅಂತ ಕಾರ್ಮಿಕರು ಎಚ್ಚರಿಸಿದ್ದಾರೆ.

    ಈಗಾಗಲೇ ಸಹಕಾರ ಸಂಘವನ್ನ ಸಮಾಪನಗೊಳಿಸಿ ಕಂಪೆನಿಯೇ ಸ್ಟೋರ್ ಪ್ರಾರಂಭಿಸಿದೆ. ಆದ್ರೆ ಕೆಲಸಗಾರರನ್ನ ಕಂಪೆನಿಯಲ್ಲಿ ಸೇರಿಸಿಕೊಳ್ಳದೇ ಸಂಬಳವನ್ನೂ ನೀಡದೆ ವೇತನ ಒಡಂಬಡಿಕೆಯ ನಿಯಮವನ್ನ ಉಲ್ಲಂಘನೆ ಮಾಡಿದೆ. ಕಾರ್ಮಿಕ ನೀತಿಯನ್ನ ಬದಿಗೊತ್ತಿ ತೆಗೆದುಕೊಂಡಿರುವ ನಿರ್ಧಾರದಿಂದ 37 ಜನ ಕಾರ್ಮಿಕ ಕುಟುಂಬಗಳು ಬೀದಿಗೆ ಬಂದಿವೆ ಎಂದು ದಿ ಕೋ-ಆಪರೇಟಿವ್ ಸ್ಟೋರ್ ಎಂಪ್ಲಾಯಿಸ್ ಅಸೋಸಿಯೇಷನ್ ಅಧ್ಯಕ್ಷ ಇಮಾಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಎತ್ತಿನಹೊಳೆ ವಿರೋಧಿಸಿ ಮಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭ

    ಮಂಗಳೂರು: ಎತ್ತಿನಹೊಳೆ ಯೋಜನೆ ವಿರುದ್ಧ ನೇತ್ರಾವತಿ ಸಂರಕ್ಷಣಾ ಸಮಿತಿಯಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಡೆಯುತ್ತಿರುವ ಸತ್ಯಾಗ್ರಹದಲ್ಲಿ ಸಂಸದ ನಳಿನ್ ಕುಮಾರ್ ಸೇರಿದಂತೆ ಸರ್ವ ಧರ್ಮದ ಪ್ರಮುಖರು ಪಾಲ್ಗೊಂಡಿದ್ದಾರೆ.

    ಸ್ವಾಮೀಜಿಗಳಾದ ಒಡಿಯೂರು ಮಠದ ಗುರುದೇವಾನಂದ ಸ್ವಾಮೀಜಿ, ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ, ಮೂಡುಬಿದಿರೆಯ ಚಾರುಕೀರ್ತಿ ಸ್ವಾಮೀಜಿ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದಾರೆ.

    ಅವೈಜ್ಞಾನಿಕ ಎತ್ತಿನಹೊಳೆ ಯೋಜನೆಯನ್ನು ನಿಲ್ಲಿಸಬೇಕು, ಅಧ್ಯಯನ ಸಮಿತಿಯನ್ನು ನೇಮಿಸಬೇಕೆಂದು ಒತ್ತಾಯಿಸಿ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ್ದಾರೆ. ಅಧಿವೇಶನ ನಡೆಯುತ್ತಿರುವುದರಿಂದ ಶಾಸಕರು ಯೋಜನೆ ವಿರುದ್ಧ ನಿಲುವಳಿ ಸೂಚನೆ ಮಂಡಿಸುವಂತೆ ಆಗ್ರಹಿಸಿದ್ದಾರೆ.

    ಉಪವಾಸ ಆರಂಭಕ್ಕೂ ಮುನ್ನ ಗಾಂಧಿ ಪ್ರತಿಮೆ ಬಳಿಯಿಂದ ಬೃಹತ್ ಮೆರವಣಿಗೆ ನಡೆಯಿತು. ಹೋರಾಟಗಾರರು, ಸ್ವಾಮೀಜಿಗಳು, ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ಹೋರಾಟಗಾರರ ಬಂಧನ: ಎತ್ತಿನಹೊಳೆ ಯೋಜನೆ ವಿರೋಧಿ ಪ್ರತಿಭಟನೆ ನಡೆಸಿದ್ದಕ್ಕೆ ಸಂಸದ ನಳಿನ್ ಕುಮಾರ್ ಸೇರಿದಂತೆ 50 ಮಂದಿಯನ್ನು ಬಲವಂತವಾಗಿ ಪೊಲೀಸರು ಬಂಧಿಸಿದ್ದಾರೆ.

    ಬಜೆಟ್ ದಿನ ಬಂದ್: ರಾಜ್ಯ ಸರಕಾರ ಸ್ಪಂದಿಸದಿದ್ದರೆ ಕರ್ನಾಟಕದ ಬಜೆಟ್ ಮಂಡನೆ ದಿವಸವೇ ದಕ್ಷಿಣಕನ್ನಡ ಜಿಲ್ಲೆಯನ್ನು ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ನೇತ್ರಾವತಿ ಸಂರಕ್ಷಣಾ ಸಮಿತಿ ಎಚ್ಚರಿಕೆ ನೀಡಿದೆ.

  • ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ರೂ ಗಾಯಾಳು ದಂಪತಿಯನ್ನ ದಾರಿಯಲ್ಲೇ ಬಿಟ್ಟು ಹೋದ ಪೊಲೀಸರು

    – ಮಾನವೀಯತೆ ಮರೆತ ಪಣಂಬೂರು ಪೊಲೀಸರು

    ಮಂಗಳೂರು: ಎರಡು ಕುಟುಂಬಗಳ ಜಗಳದಲ್ಲಿ ತೀವ್ರ ಹಲ್ಲೆಗೊಳಗಾದ ದಂಪತಿಯನ್ನ ಪೊಲೀಸರು ಆಸ್ಪತ್ರೆಗೆ ಒಯ್ಯುವ ಬದಲು ನಡು ರಸ್ತೆಯಲ್ಲಿ ಬಿಟ್ಟು ಹೋದ ಘಟನೆ ಮಂಗಳೂರಿನ ಬೆಂಗ್ರೆ ಎಂಬಲ್ಲಿ ನಡೆದಿದೆ.

    ಮೆಹಮೂದ್ ಮತ್ತು ಅವರ ಪತ್ನಿ ಫಮೀನಾ ಎಂಬವರ ಮೇಲೆ ಯುವಕರ ತಂಡವೊಂದು ಹಲ್ಲೆ ನಡೆಸಿತ್ತು. ಈ ಬಗ್ಗೆ ಸುದ್ದಿ ತಿಳಿದ ಪಣಂಬೂರು ಪೊಲೀಸರು ಸ್ಥಳಕ್ಕೆ ಆಗಮಿಸಿ, ಮನೆಯಲ್ಲಿ ಬಿದ್ದಿದ್ದ ದಂಪತಿಯನ್ನು ಆಸ್ಪತ್ರೆಗೆ ಒಯ್ಯುವುದಾಗಿ ಹೇಳಿ ಜೀಪಿನಲ್ಲಿ ಕರೆದೊಯ್ದಿದ್ದರು. ಆದರೆ ದಾರಿ ಮಧ್ಯೆ ಕುಳೂರು ಎಂಬಲ್ಲಿ ಪೊಲೀಸರು ಗಾಯಾಳು ದಂಪತಿ ಮತ್ತು ಮಗುವನ್ನು ಜೀಪಿನಿಂದ ಇಳಿಸಿ ಹೋಗಿದ್ದರು.

    ವಿಷಯ ತಿಳಿದ ಡಿವೈಎಫ್‍ಐ ಕಾರ್ಯಕರ್ತರು ತೆರಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. 20 ನಿಮಿಷ ಕಾಲ ಹೆದ್ದಾರಿ ತಡೆದು ಪ್ರತಿಭಟಿಸಿದರೂ ಪೊಲೀಸರು ಆಗಮಿಸಿರಲಿಲ್ಲ. ಬಳಿಕ ದಂಪತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಣಂಬೂರು ಪೊಲೀಸರ ಅಮಾನವೀಯತೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

     

  • ಪರಿಹಾರಕ್ಕಾಗಿ ಹೈಟೆನ್ಷನ್ ವಿದ್ಯುತ್ ತಂತಿಗೆ ಜೋತು ಬಿದ್ದ ರೈತರು

    ಅನಂತಪುರ: ಹೆಚ್ಚಿನ ಪರಿಹಾರಕ್ಕಾಗಿ ಆಗ್ರಹಿಸಿ ರೈತರು ಹೈಟೆನ್ಷನ್ ವಿದ್ಯುತ್ ವಯರ್‍ಗೆ ಜೋತು ಬಿದ್ದ ಪ್ರತಿಭಟನೆ ನಡೆಸಿದ ಘಟನೆ ಆಂಧ್ರದ ಅನಂತಪುರದ ಮಡಕಶಿರಾ ತಾಲೂಕಿನ ಮಳವಾಯಿ ಗ್ರಾಮದಲ್ಲಿ ನಡೆದಿದೆ.

    ಕರ್ನಾಟಕಕ್ಕೆ ವಿದ್ಯುತ್ ಸರಬರಾಜು ಮಾಡಲು ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ನಡೆಸುತ್ತಿರುವ ಹೈಟೆನ್ಷನ್ ವಿದ್ಯುತ್ ಕಂಬ ಆಳವಡಿಕೆ ಕಾಮಗಾರಿಗೆ ರೈತರು ಅಡ್ಡಿಪಡಿಸಿ ಹೈಟೆನ್ಷನ್ ವಯರ್‍ಗೆ ಜೋತು ಬೀಳುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.

    ಹುನ್ನಾರ ಸಾಬ್ ಹಾಗೂ ಅವರ ಮಗ ನಬೀರ್ ವಯರ್ ಹಿಡಿದು ಪ್ರತಿಭಟನೆ ನಡೆಸಿದವರು. ಪಾವಗಡದಿಂದ ಮಧುಗಿರಿಗೆ 220 ಕೆವಿ ವಿದ್ಯುತ್ ಲೈನ್ ಕಾಮಗಾರಿಗೆ ರೈತರ ಜಮೀನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಹುನ್ನಾರ್ ಸಾಬ್ ಎಂಬವರ ಒಂದು ಎಕರೆ ಜಮೀನಿನಲ್ಲಿ ಲೈನ್ ಹಾದು ಹೋಗಿದೆ. ಇದಕ್ಕಾಗಿ ಸರ್ಕಾರ 90 ಸಾವಿರ ರೂ. ಪರಿಹಾರ ನೀಡಿದೆ.

    ಜಮೀನು ಸಂಪೂರ್ಣವಾಗಿ ವಿದ್ಯುತ್ ಲೈನ್ ಆವರಿಸಿಕೊಂಡಿದ್ದು ಯಾವುದೇ ಬೆಳೆ ಬೆಳೆಯಲು ಆಗುವುದಿಲ್ಲ. ಇದರಿಂದ ಜಮೀನಿಗೆ ಇನ್ನೂ ಹೆಚ್ಚಿನ ಪರಿಹಾರ ನೀಡುವಂತೆ ಆಗ್ರಹಿಸಿ ಕಾಮಗಾರಿ ತಡೆದು ಹುನ್ನಾರ್ ಸಾಬ್ ಮತ್ತು ಅವರ ಮಗ ನಬೀರ್ ಪ್ರತಿಭಟಿಸಿದ್ದಾರೆ. ಹುನ್ನಾರ್ ಸಾಬ್ ಅವರು ಮೂಲತಃ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ಮಂಡಲದ ನೆಲವಾಯಿಲು ಗ್ರಾಮದ ನಿವಾಸಿಗಳಗಿದ್ದಾರೆ.

    ಪ್ರತಿಭಟನೆ ಸಂದರ್ಭದಲ್ಲಿ ಲೈನ್ ಮೇಲೆ ಎಳೆದಿದ್ದರಿಂದ ಹುನ್ನಾರ್ ಸಾಬ್ 50 ಅಡಿ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ. ಇದರಿಂದ ಹುನ್ನಾರ್ ಸಾಬ್ ಅವರಿಗೆ ಬೆನ್ನು ಮೂಳೆ ಮುರಿದಿದೆ. ಹುನ್ನಾರ್ ಸಾಬ್‍ರನ್ನು ಆಸ್ಪತ್ರೆಗೂ ಸೇರಿಸದೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಅಮಾನವೀಯತೆ ತೋರಿದ್ದಾರೆ. ಹುನ್ನಾರ್ ಸಾಬ್ ಇದೀಗ ಮಡಕಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    https://www.youtube.com/watch?v=u1BilsUayeY