Tag: ಪ್ರತಿಭಟನೆ

  • ನೀರು ಬಿಡದ್ದಕ್ಕೆ ಅಧಿಕಾರಿಗಳನ್ನು ಕೂಡಿ ಹಾಕಿ ಪಂಚಾಯತ್‍ಗೆ ಬೀಗ ಜಡಿದ ಮಹಿಳೆಯರು!

    ನೀರು ಬಿಡದ್ದಕ್ಕೆ ಅಧಿಕಾರಿಗಳನ್ನು ಕೂಡಿ ಹಾಕಿ ಪಂಚಾಯತ್‍ಗೆ ಬೀಗ ಜಡಿದ ಮಹಿಳೆಯರು!

    ಚಿಕ್ಕಬಳ್ಳಾಪುರ: ಕುಡಿಯುವ ನೀರು ನೀಡದ ಕಾರಣಕ್ಕೆ ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಗ್ರಾಮದ ಮಹಿಳೆಯರು ಬೀಗ ಜಡಿದ ಘಟನೆ ತಾಲೂಕಿನ ಆವಲಗುರ್ಕಿ ಗ್ರಾಮದಲ್ಲಿ ನಡೆದಿದೆ.

    ಆವಲಗುರ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಡ್ಡರಪಾಳ್ಯ ಗ್ರಾಮದಲ್ಲಿ ಕೊಳವೆ ಬಾವಿ ವೈಫಲ್ಯ ಹಿನ್ನೆಲೆ ಕಳೆದ ಒಂದು ವರ್ಷದಿಂದಲೂ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿತ್ತು. ಗ್ರಾಮ ಪಂಚಾಯತ್ ಅಧಿಕಾರಿಗಳು ವಾರಕ್ಕೊಮ್ಮೆ ಟ್ಯಾಂಕರ್ ಮೂಲಕ ಗ್ರಾಮಕ್ಕೆ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಿದ್ದರು.

    ಈ ಗ್ರಾಮದಲ್ಲಿ ಒಟ್ಟು 1200 ಜನಸಂಖ್ಯೆ ಇದೆ. ಇಡೀ ಗ್ರಾಮದ ಜನರಿಗೆ ಒಂದು ಟ್ಯಾಂಕರ್ ನೀರು ಸಾಕಾಗದ ಹಿನ್ನೆಲೆಯಲ್ಲಿ ಮಹಿಳೆಯರು, ಗ್ರಾಮಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಖಾಲಿ ಕೊಡ ಹಿಡಿದು ಗ್ರಾಮ ಪಂಚಾಯತಿ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳನ್ನ ಕಚೇರಿಯಲ್ಲಿ ಕೂಡಿ ಹಾಕಿ ಬೀಗ ಜಡಿದು, ಕುಡಿಯುವ ನೀರು ಕೊಡುವವರೆಗೂ ಬೀಗ ತೆಗೆಯಲ್ಲ ಅಂತ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.

    ಪ್ರತಿಭಟನೆಗೆ ಮಣಿದ ಗ್ರಾಮ ಪಂಚಾಯತ್ ಅಧಿಕಾರಿಗಳು ದಿನಕ್ಕೆ ನಾಲ್ಕು ಟ್ಯಾಂಕರ್ ನೀರು ಬಿಡುತ್ತೇವೆ ಎಂದರು. ಅಲ್ಲದೇ ಮುಂಬರುವ ದಿನಗಳಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಹೊಸ ಬೋರ್ ವೆಲ್ ಕೊರೆಸಿಕೊಡಲಾಗುವುದು ಎಂದು ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

  • ಬಿಜೆಪಿ ಶಾಸಕ ರಾಮ್‍ದಾಸ್ ಕಚೇರಿ ಎದುರು ಪ್ರೇಮಾಕುಮಾರಿ ಪ್ರತ್ಯಕ್ಷ

    ಬಿಜೆಪಿ ಶಾಸಕ ರಾಮ್‍ದಾಸ್ ಕಚೇರಿ ಎದುರು ಪ್ರೇಮಾಕುಮಾರಿ ಪ್ರತ್ಯಕ್ಷ

    – ಪೊಲೀಸರ ಮಧ್ಯಪ್ರವೇಶ ಬಳಿಕ ಜಾಗ ಖಾಲಿ

    ಮೈಸೂರು: ಕೆ.ಆರ್.ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಎಸ್.ಎ.ರಾಮದಾಸ್ ಕಚೇರಿ ಮುಂದೆ ಇಂದು ಪ್ರೇಮ ಕುಮಾರಿ ಪ್ರತ್ಯಕ್ಷವಾಗಿದ್ದಾರೆ.

    ಏಕಾಏಕಿ ಮೈಸೂರು ನಗರದ ವಿದ್ಯಾರಣ್ಯಪುರದಲ್ಲಿರೋ ಶಾಸಕ ರಾಮದಾಸ್‍ರ ಕಚೇರಿ ಮುಂಭಾಗ ಆಗಮಿಸಿದ ಪ್ರೇಮಾಕುಮಾರಿ, ಕಚೇರಿಯ ಮುಂಭಾಗ ಕೆಲ ಹೊತ್ತು ಕುಳಿತು ನನಗೆ ನ್ಯಾಯ ಬೇಕು ಅಂತ ಧರಣಿ ನಡೆಸಿದರು. ಆದರೆ ಈ ವೇಳೆ ಶಾಸಕರ ಕಚೇರಿಯಲ್ಲಿ ಯಾರೂ ಇಲ್ಲದ ಕಾರಣ ಕಚೇರಿಗೆ ಬೀಗ ಹಾಕಲಾಗಿತ್ತು.

    ಪೇಮಾಕುಮಾರಿ ಅವರು ಏಕಾಏಕಿ ಆಗಮಿಸಿ ಧರಣಿ ನಡೆಸುತ್ತಿರುವ ಮಾಹಿತಿ ಪಡೆದ ಪೊಲೀಸರು ತಕ್ಷಣ ರಾಮದಾಸ್ ಅವರ ಕಚೇರಿ ಬಳಿ ಆಗಮಿಸಿದರು. ಬಳಿಕ ಪ್ರೇಮಾ ಕುಮಾರಿ ಅವರ ಜೊತೆ ಮಾತುಕತೆ ನಡೆಸಿದ ಪೊಲೀಸರು ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ವೇಳೆ ಈ ರೀತಿ ಪ್ರತಿಭಟನೆ ನಡೆಸುವುದು ಮುಖ್ಯವಲ್ಲ ಎಂದು ತಿಳಿಹೇಳಿದ್ದಾರೆ. ಬಳಿಕ ಪೊಲೀಸರ ಮಧ್ಯ ಪ್ರವೇಶದಿಂದ ಪ್ರೇಮಾ ಕುಮಾರಿ ಅವರು ಸ್ಥಳದಿಂದ ತೆರಳಿದ್ದಾರೆ.

    https://www.youtube.com/watch?v=CTih6IweDE0

  • ಬೀದಿ ದೀಪಗಳಿಲ್ಲದೇ ಕತ್ತಲಲ್ಲಿ ಮುಳುಗಲಿದೆ ಬೆಂಗಳೂರು!

    ಬೀದಿ ದೀಪಗಳಿಲ್ಲದೇ ಕತ್ತಲಲ್ಲಿ ಮುಳುಗಲಿದೆ ಬೆಂಗಳೂರು!

    ಬೆಂಗಳೂರು: ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಬುಧವಾರ ರಾತ್ರಿ ಬೀದಿ ದೀಪ ಉರಿಯುವುದು ಅನುಮಾನ.

    ಬಿಬಿಎಂಪಿ ವಿರುದ್ದ ಮುನಿಸಿಕೊಂಡಿರುವ ಬೀದಿ ದೀಪ ನಿರ್ವಹಣೆಯ ಗುತ್ತಿಗೆದಾರರು ಪ್ರತಿಭಟನೆಗೆ ಇಳಿದಿದ್ದಾರೆ. ಹೀಗಾಗಿ ಬುಧವಾರ ನಗರದ ದೀಪಗಳನ್ನು ಬಂದ್ ಮಾಡಿ ಮುಷ್ಕರ ನಡೆಸಲು ವಿದ್ಯುತ್  ಗುತ್ತಿಗೆದಾರರ ಸಂಘ ನಿರ್ಧರಿಸಿದೆ.

    2016 ರಿಂದ ಒಟ್ಟು 40 ಕೋಟಿ ರೂ. ಹಣವನ್ನು ಬಿಬಿಎಂಪಿ ಬೀದಿದೀಪ ನಿರ್ವಹಣೆಗಾರರಿಗೆ ನೀಡಬೇಕಿತ್ತು. ಆದರೆ ಇಲ್ಲಿಯವರೆಗೆ ಈ ಹಣವನ್ನು ಪಾವತಿ ಮಾಡದ ಕಾರಣ ಇಂದು ರಾತ್ರಿಯಿಂದಲೇ 4 ಲಕ್ಷ ಬೀದಿ ದೀಪಗಳನ್ನು ಬಂದ್ ಮಾಡಿ ಪ್ರತಿಭಟಿಸಲು ಗುತ್ತಿಗೆದಾರರು ನಿರ್ಧರಿಸಿದ್ದಾರೆ.

    ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ವಾಹನಗಳೊಂದಿಗೆ ಗುತ್ತಿಗೆದಾರರು ಜಮಾಯಿಸಿದ್ದು, ಬಿಬಿಎಂಪಿ ಹಣವನ್ನು ಪಾವತಿ ಮಾಡುವ ಬಗ್ಗೆ ಭರವಸೆ ನೀಡಿದರೆ ಬುಧವಾರ ಬೆಂಗಳೂರು ನಗರದಲ್ಲಿ ಬೀದಿದೀಪ ಉರಿಯಲಿದೆ.

  • ರಸ್ತೆಗೆ ಹಾಲು ಸುರಿದು ಪ್ರತಿಭಟಿಸಿದ ಬೆಳಗಾವಿ ರೈತರು

    ರಸ್ತೆಗೆ ಹಾಲು ಸುರಿದು ಪ್ರತಿಭಟಿಸಿದ ಬೆಳಗಾವಿ ರೈತರು

    ಬೆಳಗಾವಿ: ದುಪ್ಪಟ್ಟು ದರ ನೀಡಿ ಹಾಲು ಖರೀದಿಸುತ್ತಿದ್ದ ಮಹಾರಾಷ್ಟ್ರದ ಗೋಕುಲ ಡೈರಿಯು ಏಕಾಏಕಿ ಹಾಲು ಖರೀದಿಯನ್ನು ನಿಲ್ಲಿಸಿದ್ದಕ್ಕೆ ರೊಚ್ಚಿಗೆದ್ದ ರೈತರು ಹಾಲನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ ಘಟನೆ ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದಲ್ಲಿ ನಡೆದಿದೆ.

    ಮಹಾರಾಷ್ಟ್ರದ ಗೋಕುಲ ಡೈರಿಯು ಕಳೆದ 8 ವರ್ಷಗಳಿಂದ ಹಾಲು ಖರೀದಿ ಮಾಡುತ್ತಿದ್ದು, ಪ್ರತಿ ಲೀಟರ್‍ಗೆ ಕರ್ನಾಟಕ್ಕಿಂತ ಹೆಚ್ಚಿನ ದರ ನೀಡುತ್ತಿದ್ದರಿಂದ ರೈತರು ಗೋಕುಲ ಡೈರಿಗೆ ಹಾಲನ್ನು ನೀಡುತ್ತಿದ್ದರು. ಪ್ರತಿದಿನ ಸರಾಸರಿ 10 ಸಾವಿರ ಲೀಟರ್ ಹಾಲನ್ನು ಡೈರಿ ಖರೀದಿಸುತ್ತಿತ್ತು. ಈಗ ಏಕಾಏಕಿ ಡೈರಿಯು ಹಾಲು ಖರೀದಿಯನ್ನು ಸ್ಥಗಿತಗೊಳಿಸಿದೆ. ಡೈರಿಯ ಈ ನಿರ್ಧಾರಕ್ಕೆ ಮುಗಳಿ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿ, ಟೈರ್‍ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ, ಹಾಲನ್ನು ರಸ್ತೆಗೆ ಸುರಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಗ್ರಾಮದ ಹಾಲು ಉತ್ಪಾದಕರಾದ ಮಹಾಂತೇಶ್ ಬಡಿಗೇರ್ ಮಾತನಾಡಿ, ಕಳೆದ 8 ವರ್ಷಗಳಿಂದ ಮನೆಗೆ ಬಂದು ಗೋಕುಲ ಡೈರಿಯು ಹಾಲು ಖರೀದಿಸುತ್ತಿತ್ತು. ಈಗ ಏಕಾಏಕಿ ಹಾಲು ಖರೀದಿಯನ್ನು ಸ್ಥಗಿತಗೊಳಿಸಿದೆ. ಬೇರೆ ಡೈರಿಗೆ ಹಾಲನ್ನು ಮಾರಲು ಹೋದರೆ, ಅವರೂ ಸ್ವೀಕರಿಸುತ್ತಿಲ್ಲ. ದಿನಕ್ಕೆ ಸಾವಿರಾರು ಲೀಟರ್ ಉತ್ಪಾದನೆಯಾಗುತ್ತಿದ್ದು ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಸರ್ಕಾರ ಕೂಡಲೇ ಇತ್ತ ಗಮನಕೊಡಬೇಕು ಎಂದು ಕೇಳಿಕೊಂಡಿದ್ದಾರೆ.

    ಕರ್ನಾಟಕದಲ್ಲಿ ಪ್ರಲೀಟರ್ ಹಾಲಿಗೆ 18-23 ರೂ. ದರ ನಿಗದಿಯಾಗಿದ್ದರೆ, ಮಹಾರಾಷ್ಟ್ರದ ಗೋಕುಲ್ ಡೈರಿಯು ಮೊದಲು ಹಾಲಿನ ಫ್ಯಾಟ್ ನೋಡಿಕೊಂಡು ಪ್ರತಿ ಲೀಟರ್‍ಗೆ 22-27 ರೂ. ನೀಡುತ್ತಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದ ಹಾಲನ್ನು ರೈತರು ಗೋಕುಲ್ ಡೈರಿಗೆ ನೀಡುತ್ತಿದ್ದರು. ಇತ್ತೀಚೆಗೆ ಲೀಟರ್ ಹಾಲಿಗೆ 18 ರೂ. ನಿಗದಿ ಪಡಿಸಿದ್ದ ಡೈರಿಯು ಈಗ ಏಕಾಏಕಿ ಹಾಲು ಖರೀದಿಯನ್ನು ಸ್ಥಗಿತಗೊಳಿಸಿದೆ.

  • ಗಂಡ ಬೇಕು, ಗಂಡ ಬೇಕು ಅಂತ ಪತಿ ಮನೆ ಮುಂದೆ ಪತ್ನಿ ಧರಣಿ!

    ಗಂಡ ಬೇಕು, ಗಂಡ ಬೇಕು ಅಂತ ಪತಿ ಮನೆ ಮುಂದೆ ಪತ್ನಿ ಧರಣಿ!

    ಕೋಲಾರ: ಗಂಡ ಬೇಕು ಗಂಡ ಅಂತ ಗಂಡನ ಮನೆ ಎದುರು ಹೆಂಡತಿ ಎರಡು ದಿನಗಳಿಂದ ಧರಣಿ ನಡೆಸುತ್ತಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಜಿಲ್ಲೆಯ ಮಾಲೂರು ತಾಲೂಕು ಭಂಟಹಳ್ಳಿ ಗ್ರಾಮದಲ್ಲಿ ಶಶಿ ಕುಮಾರ್ ಹಾಗೂ ಪ್ರತಿಮಾ ಇಬ್ಬರು ಪ್ರೀತಿಸಿ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದರು. ಪ್ರತಿಮಾ ಗಂಡನಿಗಾಗಿ ತನ್ನ ಪತಿ ಶಶಿಕುಮಾರ್ ಮನೆ ಎದುರು ಶನಿವಾರ ಸಂಜೆಯಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಬೇಕೇ ಬೇಕು ಗಂಡ ಬೇಕೆಂದು ಪ್ರತಿಭಟನೆ ಕುಳಿತ ಪತ್ನಿ

    ನಾಲ್ಕು ತಿಂಗಳ ಹಿಂದೆ ಶಶಿಕುಮಾರ್ ಹಾಗೂ ಪ್ರತಿಮಾಗೆ ಪೊಲೀಸರ ಸಮಕ್ಷಮದಲ್ಲಿ ಮದುವೆಯಾಗಿತ್ತು. ಮದುವೆಯಾದ ನಂತರ ನಾಪತ್ತೆಯಾಗಿರುವ ಶಶಿಕುಮಾರ್ ಗಾಗಿ ಹೆಂಡತಿ ಪ್ರತಿಮಾ ಪ್ರತಿಭಟನೆ ನಡೆಸುತ್ತಿದ್ದಾರೆ. ತನ್ನ ಪತಿಯನ್ನು ಹುಡುಕಿಕೊಡುವಂತೆ ಪತಿ ಮನೆ ಮುಂದೆ ಪತ್ನಿ ಧರಣಿ ಆರಂಭಸುತ್ತಿದ್ದಂತೆ ಶಶಿಕುಮಾರ್ ತಂದೆ-ತಾಯಿ ಕೂಡಾ ಮನೆಗೆ ಬೀಗ ಜಡಿದು ಗ್ರಾಮದಿಂದ ನಾಪತ್ತೆಯಾಗಿದ್ದಾರೆ. ಇದನ್ನು ಓದಿ: ಪತಿ ಬೇಕೆಂದು ಮನೆಯ ಮುಂದೆ ಧರಣಿ ಕುಳಿತ ಪತ್ನಿ!

    ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕಾರ್ಯಕರ್ತರ ಪ್ರತಿಭಟನೆ ಬಗ್ಗೆ ಸ್ಪಷ್ಟನೆ ನೀಡಿದ ಜಿ.ಟಿ ದೇವೇಗೌಡ

    ಕಾರ್ಯಕರ್ತರ ಪ್ರತಿಭಟನೆ ಬಗ್ಗೆ ಸ್ಪಷ್ಟನೆ ನೀಡಿದ ಜಿ.ಟಿ ದೇವೇಗೌಡ

    ಬೆಂಗಳೂರು: ಕಾರ್ಯಕರ್ತರಿಗೆ ನಾವು ಮೊದಲು ನಮ್ಮ ಕ್ಷೇತ್ರವನ್ನು ನೋಡಿಕೊಳ್ಳೋಣ ಹಾಗೂ ನಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡೋಣ. ನಂತರ ಮಂತ್ರಿ, ಮಂತ್ರಿ ಆದ್ಮೇಲೆ ಖಾತೆಯನ್ನು ನೋಡಿಕೊಳ್ಳೋಣ. ಈಗ ಇಡೀ ಮೈಸೂರು ಹಾಗೂ ನಮ್ಮ ಕ್ಷೇತ್ರ ಅಭಿವೃದ್ಧಿ ಆಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಹೇಳಿದ್ದಾರೆ.

    ಉನ್ನತ ಶಿಕ್ಷಣ ಖಾತೆ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಕಂದಾಯ ಹಾಗೂ ನೀರಾವರಿ ಖಾತೆಗಳನ್ನು ನೀಡುವಂತೆ ಕೇಳಿದ್ದೆ. ಆದರೆ ಆ ಖಾತೆಗಳು ಕಾಂಗ್ರೆಸ್‍ಗೆ ಹೋಗಿದೆ. ನಂತರ ನನಗೆ ಸಾರಿಗೆ ಖಾತೆ ಕೊಡಲು ನಿರ್ಧರಿಸಿದ್ದರು. ಆಗ ನನಗೆ ಕೋಪ ಬಂದಿತ್ತು. ಏಕೆಂದರೆ ನಾನು ಕುಮಾರಸ್ವಾಮಿ ಹಾಗೂ ಹಿರಿಯ ನಾಯಕರೊಂದಿಗೆ ಈ ಬಗ್ಗೆ ಮೊದಲೇ ಮಾತನಾಡಿದೆ. ಇನ್ನೂ ಎರಡು ದಿನದಲ್ಲಿ ಕುಮಾರಸ್ವಾಮಿ ಅವರ ಜೊತೆ ಮಾತಾಡಿ ವಿಷಯ ತಿಳಿಸುತ್ತೇನೆ ಎಂದರು.

    ಕಾರ್ಯಕರ್ತರ ಪ್ರತಿಕ್ರಿಯೆ ಬಗ್ಗೆ ಮಾತನಾಡಿದ ಅವರು, ಉನ್ನತ ಶಿಕ್ಷಣ ಖಾತೆ ಶಿಕ್ಷಣಕ್ಕೆ ಸಂಬಂಧಪಟ್ಟಿದ್ದು. ಆ ಕ್ಷೇತ್ರದ ಪರಿಚಯವಿಲ್ಲದ ವ್ಯಕ್ತಿ ನಾನು. ಏಕೆಂದರೆ ನಾನು ಕಾಲೇಜಿಗೆ ಹೋಗಿ ಓದಿಲ್ಲ. ಪದವಿ ಕೂಡ ಪಡೆದುಕೊಂಡಿಲ್ಲ. ಬಹಳ ಎತ್ತರವಿರುವಂತಹ ಕ್ಷೇತ್ರ ಉನ್ನತ ಶಿಕ್ಷಣ ಆಗಿದ್ದು, ಅಂತಹವರು ನಮಲ್ಲಿ ಇದ್ದಾರೆ. ಅಂತವರಿಗೆ ಈ ಖಾತೆ ನೀಡಲಿ ಎಂಬುದು ಕಾರ್ಯಕರ್ತರ ಆಸೆ ಎಂದು ತಿಳಿಸಿದರು.

    ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದರು ಕೂಡ ಜಿಲ್ಲೆಯಲ್ಲಿ ಬಹಳಷ್ಟು ಅಭಿವೃದ್ಧಿ ಆಗಲಿಲ್ಲ ಎಂದು ಜನರು ಕೊರಗುತ್ತಿದ್ದಾರೆ. ಈಗ ನಾವು ಮೈಸೂರು ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕೆಂದು ನಾವು ಚುನಾವಣೆ ಎದುರಿಸಿದ್ದೇವೆ. ಈಗ ಅವರು ನನಗೆ ಉನ್ನತ ಶಿಕ್ಷಣ ಖಾತೆ ನೀಡಿದ್ದಾರೆ ಎಂದು ಹೇಳಿದರು.

    ಸಚಿವರಿಗೆ ಖಾತೆ ಹಂಚಿಕೆ ನಡೆದ ಬಳಿಕ ದೇವೇಗೌಡರಿಗೆ ಉನ್ನತ ಶಿಕ್ಷಣ ಖಾತೆ ನೀಡಿದ್ದು ಯಾಕೆ? ಅವರಿಗೆ ಬೇರೆ ಖಾತೆಗಳನ್ನು ನೀಡಬಹುದಿತ್ತು. ಅಂತಹ ಖಾತೆಗಳು ಸಂಬಂಧಪಟ್ಟ ವ್ಯಕ್ತಿಗಳಿಗೆ ನೀಡಲಿ ಎಂದು ಕಾರ್ಯಕರ್ತರು ತಮ್ಮ ಅಭಿಪ್ರಾಯವನ್ನು ಆಕ್ರೋಶದ ಮೂಲಕ ಹೊರಹಾಕುತ್ತಿದ್ದಾರೆ.

  • ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟ – ಎಐಸಿಸಿ ಕಾರ್ಯದರ್ಶಿ ಹುದ್ದೆಗೆ ಜಾರಕಿಹೊಳಿ ರಾಜೀನಾಮೆ

    ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟ – ಎಐಸಿಸಿ ಕಾರ್ಯದರ್ಶಿ ಹುದ್ದೆಗೆ ಜಾರಕಿಹೊಳಿ ರಾಜೀನಾಮೆ

    ಬೆಂಗಳೂರು: ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ಶಾಸಕ ಸತೀಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ.

    ಸತೀಶ್ ಜಾರಕಿಹೊಳಿ ಇ-ಮೇಲ್ ಮೂಲಕ ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ರವಾನಿಸಿದ್ದಾರೆ. ಇವರು ಬೆಳಗಾವಿ ಜಿಲ್ಲೆಯ ಯಮಕನಮರಡಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು.

    ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಯಮಕನಮರಡಿ ಮತ್ತು ಮೈಸೂರನಲ್ಲಿ ಜಾರಕಿಹೊಳಿ ಬೆಂಬಲಿಗರು ರಸ್ತೆಯಲ್ಲಿ ಟಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಇತ್ತ ಜಾರಕಿಹೊಳಿ ಬೆಂಬಲಿಗರಾಗಿರುವ ಜಿಲ್ಲಾಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸದಸ್ಯರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.

    ಈ ಹಿಂದೆ ಕೂಡ ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗಲಿಲ್ಲ, ಅವರ ಕುಟುಂಬದ ಸಹೋದರನಿಗೆ ಸಚಿವ ಸ್ಥಾನ ದೊರೆತಿತ್ತು. ಈಗಲೂ ಕೂಡ ಸಚಿವ ಸ್ಥಾನ ಕೈ ತಪ್ಪಿದೆ ಎಂದು ಬೆಂಬಲಿಗರು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ನಾಗರಹಾವು ಕೊರಳಲ್ಲಿ ಹಾಕಿಕೊಂಡು ತಹಶೀಲ್ದಾರ್ ಕಚೇರಿಗೆ ಎಂಟ್ರಿಕೊಟ್ಟು ಪ್ರತಿಭಟನೆ!

    ನಾಗರಹಾವು ಕೊರಳಲ್ಲಿ ಹಾಕಿಕೊಂಡು ತಹಶೀಲ್ದಾರ್ ಕಚೇರಿಗೆ ಎಂಟ್ರಿಕೊಟ್ಟು ಪ್ರತಿಭಟನೆ!

    ಗದಗ: ಜೀವಂತ ನಾಗರ ಹಾವನ್ನು ಕೊರಳಿಗೆ ಸುತ್ತಿಕೊಂಡು ವ್ಯಕ್ತಿಯೊಬ್ಬರು ರೋಣ ತಾಲೂಕು ಅಧಿಕಾರಿಗಳ ಕಚೇರಿಯನ್ನು ಪ್ರವೇಶಿಸಿ ಪ್ರತಿಭಟಿಸಿದ್ದಾರೆ.

    ಮಕ್ತುಮಸಾಬ್ ರಾಜೇಖಾನ್ (65) ನಿಂದ ವಿಭಿನ್ನ ಪ್ರತಿಭಟನೆ ನಡೆಸಿದ ವ್ಯಕ್ತಿ. ರಾಜೇಖಾನ್ ಅವರಿಗೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಮನೆಯಿಂದ ಅವರನ್ನು ಹೊರ ಹಾಕಿದ್ದಾರೆ. ಅದ್ದರಿಂದ ಅಂಗವಿಕಲರಾದ ಕಾರಣ ಸರ್ಕಾರದಿಂದ ಬರುವ ಸಹಾಯದ ಹಣವನ್ನು ಪಡೆಯಲು ಕಳೆದ ಆರು ತಿಂಗಳ ಹಿಂದೆ ಅರ್ಜಿ ಸಲ್ಲಿಸಿ ಅಧಿಕಾರಿಗಳ ಹಿಂದೆ ಸುತ್ತುತ್ತಿದ್ದಾರೆ.

    ಸದ್ಯ ರಾಜೇಖಾನ್ ಮನೆಯ ಬಳಿಯ ಪ್ರತ್ಯೇಕ ಕೊಣೆಯೊಂದರಲ್ಲಿ ವಾಸವಿದ್ದು, ಯಾವುದೇ ಕೆಲಸ ಮಾಡಿ ಹಣ ಸಂಪಾದನೆ ಮಾಡಲು ಆಗದೇ ಊಟಕ್ಕಾಗಿ ಸಮಸ್ಯೆ ಎದುರಿಸುತ್ತಾರೆ. ಈ ಕುರಿತು ಅಧಿಕಾರಿಗಳ ಬಳಿ ತಮ್ಮ ಸಮಸ್ಯೆ ಹೇಳಿಕೊಂಡು ಪರಿಹಾರಕ್ಕಾಗಿ ವಿನಂತಿ ಮಾಡಿದ್ದಾರೆ. ಆದರೆ ಅಧಿಕಾರಿಗಳು ನಿರ್ಲಕ್ಷವಹಿಸಿ ಮಾತನಾಡಿದ್ದು ಇದರಿಂದ ಬೇಸತ್ತ ರಾಜೇಖಾನ್ ಇಂದು ಜೀವಂತ ಹಾವು ಕೊರಳಿಗೆ ಸುತ್ತಿಕೊಂಡು ನೇರ ತಹಶೀಲ್ದಾರ್ ಹಾಗೂ ಉಪಖಜಾನೆ ಅಧಿಕಾರಿಗಳ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ.

  • ಸಚಿವ ಸ್ಥಾನಕ್ಕಾಗಿ ಶಕ್ತಿ ಪ್ರದರ್ಶನ – ಡಾ ಕೆ ಸುಧಾಕರ್ ಬೆಂಬಲಿಗರ ಬೃಹತ್ ಪ್ರತಿಭಟನೆ

    ಸಚಿವ ಸ್ಥಾನಕ್ಕಾಗಿ ಶಕ್ತಿ ಪ್ರದರ್ಶನ – ಡಾ ಕೆ ಸುಧಾಕರ್ ಬೆಂಬಲಿಗರ ಬೃಹತ್ ಪ್ರತಿಭಟನೆ

    ಚಿಕ್ಕಬಳ್ಳಾಪುರ: ಕ್ಷೇತ್ರದ ಶಾಸಕ ಡಾ ಕೆ ಸುಧಾಕರ್ ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ, ಶಾಸಕರ ಬೆಂಬಲಿಗರು ಇಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶನ ನಡೆಸಿದ್ದಾರೆ.

    ಚಿಕ್ಕಬಳ್ಳಾಪುರ ನಗರದ ಪಿಎಲ್‍ಡಿ ಬ್ಯಾಂಕ್ ಆವರಣದಿಂದ ಬಿಬಿ ರಸ್ತೆ ಮೂಲಕ ಬಲಮುರಿ ವೃತ್ತದವರೆಗೂ ಸಾಗಿ ಬಳಿಕ ಬಿಬಿ ರಸ್ತೆಯ ಮೂಲಕವೇ ಶಿಡ್ಲಘಟ್ಟ ವೃತ್ತದವರೆಗೂ ಮೆರವಣಿಗೆ ನಡೆಸಿದರು. ಈ ವೇಳೆ ಬೃಹತ್ ಸಂಖ್ಯೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ಈ ವೇಳೆ ಶಾಸಕ ಸುಧಾಕರ್ ಅವರಿಗೆ ಸಚಿವ ಸ್ಥಾನ ಕೊಡುವಂತೆ ಆಗ್ರಹಿಸಿದ ಅವರು ನಗರದಲ್ಲಿ ಶಕ್ತಿ ಪ್ರದರ್ಶನ ನಡೆಸಿದರು. ಮೊದಲು ಶಾಸಕ ಸುಧಾಕರ್ ಅವರಿಗೆ ಸಚಿವ ಸ್ಥಾನ ಸಿಗುವ ನೀರಿಕ್ಷೆಯಿತ್ತು. ಆದರೆ ಕೆಲವರ ಪಿತೂರಿಯಿಂದ ಈಗ ಸಚಿವ ಸ್ಥಾನ ಕೈ ತಪ್ಪಿದೆ. ಹೀಗಾಗಿ ಸದ್ಯ ಜಿಲ್ಲೆಯ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಶಾಸಕ ಸುಧಾಕರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಶಾಸಕರ ಬೆಂಬಲಿಗರು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.

  • ರಾಯಚೂರು, ಬಳ್ಳಾರಿಯಲ್ಲಿ ‘ಕಾಳಾ’ನಿಗೆ ಬಿಡುಗಡೆ ಭಾಗ್ಯ!

    ರಾಯಚೂರು, ಬಳ್ಳಾರಿಯಲ್ಲಿ ‘ಕಾಳಾ’ನಿಗೆ ಬಿಡುಗಡೆ ಭಾಗ್ಯ!

    ರಾಯಚೂರು/ಬಳ್ಳಾರಿ: ಬಳ್ಳಾರಿಯಲ್ಲಿ ಕಾಳಾ ಚಿತ್ರ ಬಿಡುಗಡೆಯಾಗಿದ್ದು, ಕರ್ನಾಟಕ ಜನಶಕ್ತಿ ಸಂಘದಿಂದ ಪ್ರತಿಭಟನೆ ನಡೆಸಿದಾರೆ. ರಾಧಿಕಾ ಚಿತ್ರಮಂದರಕ್ಕೆ ನುಗ್ಗಿ ಚಿತ್ರ ಪ್ರದರ್ಶನ ಮಾಡದಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.

    ಈ ಪ್ರತಿಭಟನೆ ಮಧ್ಯೆಯೇ ಥಿಯೇಟರ್ ಮಾಲೀಕರು ಚಿತ್ರ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಬೆಳಗ್ಗೆ 10:30ರಿಂದ ಚಿತ್ರದ ಮೊದಲ ಶೋ ಆರಂಭವಾಗಿದೆ. ಇನ್ನೂ ಕಾಳಾ ಚಿತ್ರಕ್ಕೆ ಅಡ್ಡಿಪಡಿಸಿದ ಕರ್ನಾಟಕ ಜನಶಕ್ತಿ ಸಂಘದ 20 ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ರಾಯಚೂರಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಾಳಾ’ ಸಿನಿಮಾ ಪ್ರದರ್ಶನ ರದ್ದಾಗಿದೆ. ಪದ್ಮನಾಭ ಚಿತ್ರಮಂದಿರದಲ್ಲಿ ಬೆಳಿಗ್ಗೆ 11ಕ್ಕೆ ಕಾಳಾ ಸಿನಿಮಾ ಪ್ರದರ್ಶನವಾಗಬೇಕಿತ್ತು. ಆದರೆ ಚಿತ್ರವಿತರಕರ ಸಂಘದ ಸೂಚನೆ ಮೇರೆಗೆ ಪ್ರದರ್ಶನ ರದ್ದುಗೊಳಿಸಲಾಗಿದೆ.

    ಚಿತ್ರ ಪ್ರದರ್ಶನದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಅಲ್ಲದೇ ಅಹಿತಕರ ಘಟನೆ ನಡೆಯದಂತೆ ಮುನ್ನೇಚ್ಚರಿಕೆ ವಹಿಸಲಾಗಿತ್ತು. ಸುಮಾರು 50 ಜನ ಪ್ರೇಕ್ಷಕರು ಮಾತ್ರ ಚಿತ್ರಮಂದಿರಕ್ಕೆ ಬಂದಿದ್ದರು. ಆದರೆ ಈಗ ಚಿತ್ರಮಂದಿರದ ಮಾಲೀಕರು ಟಿಕೆಟ್ ಮರಳಿ ಪಡೆದು ಹಣ ವಾಪಸ್ ಕೊಡುತ್ತಿದ್ದಾರೆ.