Tag: ಪ್ರಕಾಶ್ ಬೆಳವಾಡಿ

  • ಕಣಗಾಲರ ಹಾದಿಯಲ್ಲೊಂದು ಕನಸಿನಂಥಾ `ಕಥಾ ಸಂಗಮ’!

    ಕಣಗಾಲರ ಹಾದಿಯಲ್ಲೊಂದು ಕನಸಿನಂಥಾ `ಕಥಾ ಸಂಗಮ’!

    ನ್ನಡ ಚಿತ್ರರಂಗವನ್ನು ತಮ್ಮ ವಿಭಿನ್ನ ಆಲೋಚನೆಗಳ ಮೂಲಕವೇ ಬೆಳಗಿದ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್. ಚಿತ್ರರಂಗ ಒಂದೇ ಬಿಂದುವಿನ ಸುತ್ತ ಗಿರಕಿ ಹೊಡೆಯುತ್ತಿದ್ದ ಕಾಲದಲ್ಲಿಯೇ ಹೊಸ ಸಾಧ್ಯತೆಗಳ ಬ್ರಹ್ಮಾಂಡವನ್ನೇ ಬಿಚ್ಚಿಟ್ಟವರು ಪುಟ್ಟಣ್ಣ ಕಣಗಾಲ್. ಇದರೊಂದಿಗೆ ಪರಭಾಷಾ ಚಿತ್ರರಂಗದ ಮಂದಿಯೇ ಬೆರಗಾಗುವಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಕಣಗಾಲರ ಪ್ರಯೋಗಶೀಲತೆಗೆ ಕಥಾ ಸಂಗಮ ಕಿರೀಟವಿದ್ದಂತೆ. ಇದೀಗ ಈಗಿನ ತಲೆಮಾರಿನ ಕ್ರಿಯಾಶೀಲ ನಿರ್ದೇಶಕ ರಿಷಬ್ ಶೆಟ್ಟಿ ಆ ಕಿರೀಟಕ್ಕೆ ಮತ್ತೊಂದು ಗರಿ ಮೂಡಿಸುವಂತಹ ಪ್ರಯತ್ನ ಮಾಡಿದ್ದಾರೆ. ಅದರ ಫಲವಾಗಿ ರೂಪುಗೊಂಡಂತಿರುವ ಹೊಸ `ಕಥಾ ಸಂಗಮ’ ಡಿಸೆಂಬರ್ 6ರಂದು ಬಿಡುಗಡೆಯಾಗುತ್ತಿದೆ.

    ಶ್ರೀದೇವಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ಹೆಚ್.ಕೆ ಪ್ರಕಾಶ್, ಪ್ರದೀಪ್ ಎನ್ ಆರ್ ಮತ್ತು ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ಕಥಾ ಸಂಗಮವೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅಷ್ಟಕ್ಕೂ ರಿಷಬ್ ಶೆಟ್ಟಿ ಒಂದು ಸಿನಿಮಾ ನಿರ್ದೇಶನಕ್ಕಿಳಿದರೆಂದರೆ ಅಲ್ಲೇನೋ ಹೊಸತನ ಇದ್ದೇ ಇರುತ್ತದೆ ಎಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು ಎಂಬ ಚಿತ್ರವನ್ನವರು ರೂಪಿಸಿದ್ದ ರೀತಿಯೇ ಅವರೆಂತಹ ಭಿನ್ನ ನಿರ್ದೇಶಕ ಎಂಬುದಕ್ಕೆ ಸ್ಪಷ್ಟ ಸಾಕ್ಷಿ. ಈ ಕಥಾ ಸಂಗಮದಲ್ಲಂತೂ ಅವರು ಕನ್ನಡ ಚಿತ್ರರಂಗದ ಘನತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಂತಹ ಪ್ರಯತ್ನ ಮಾಡಿದ್ದಾರೆ. ಎಪ್ಪತ್ತರ ದಶಕದಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ್ದ ಚಿತ್ರದಲ್ಲಿ ನಾಲ್ಕು ಕಥೆಗಳನ್ನು ಹೇಳಿದ್ದರು. ರಿಷಬ್ ಶೆಟ್ಟರು ಈ ಕಥಾ ಸಂಗಮದಲ್ಲಿ ಏಳು ಕಥೆಗಳನ್ನು ಹೇಳಿದ್ದಾರೆ. ಇಲ್ಲಿ ಏಳು ಜನ ನಿರ್ದೇಶಕರು, ಏಳು ಮಂದಿ ಛಾಯಾಗ್ರಾಹಕರು ಮತ್ತು ಏಳು ಜನ ಸಂಗೀತ ನಿರ್ದೇಶಕರು ಸೇರಿ ಈ ಸಿನಿಮಾವನ್ನು ನಿರ್ವಹಿಸಿದ್ದಾರೆ. ರಿಷಬ್ ಶೆಟ್ಟಿ ಅದರ ಸೂತ್ರ ಹಿಡಿದು ಮುನ್ನಡೆಸಿದ್ದಾರೆ. ಈ ಸಿನಿಮಾಗೀಗ ಸೆನ್ಸಾರ್ ಮಂಡಳಿ ಕಡೆಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.

    ಈ ಮೂಲಕ ಒಂದೇ ಸಿನಿಮಾದಲ್ಲಿ ಏಳು ಸಿನಿಮಾ ನೋಡುವ ಸದಾವಕಾಶ ಪ್ರೇಕ್ಷಕರಿಗೆ ಸಿಕ್ಕಿದೆ. ಕ್ರೈಂ, ಸಸ್ಪೆನ್ಸ್ ಥ್ರಿಲ್ಲರ್ ಸೇರಿದಂತೆ ಹಲವು ಬಗೆಯ ಕಥೆಗಳನ್ನು ಒಂದೇ ಸಿನಿಮಾದಲ್ಲಿ ಕಣ್ತುಂಬಿಕೊಳ್ಳುವ ಅಪರೂಪದ ಕ್ಷಣಗಳು ಹತ್ತಿರವಾಗುತ್ತಿವೆ. ನಿರ್ದೇಶಕ ರಿಷಬ್ ಶೆಟ್ಟಿ ಸದಾ ಸಿನಿಮಾ ಧ್ಯಾನದಲ್ಲಿಯೇ ತಲ್ಲೀನರಾಗಿರುವವರು. ಕಥಾ ಸಂಗಮದಂತಹ ಗುಂಗೀಹುಳ ಅವರ ಮನಸ್ಸು ಹೊಕ್ಕು ಕೆಲಸ ಶುರುವಿಟ್ಟುಕೊಂಡಿದ್ದದ್ದು ವರ್ಷಗಳ ಹಿಂದೆ. ನಂತರ ಪಟ್ಟು ಬಿಡದೇ ಏಳು ಮಂದಿ ಪ್ರತಿಭಾವಂತರನ್ನು ಹುಡುಕಿ, ಚೆಂದದ ಕಥೆಗಳನ್ನು ಆಯ್ಕೆ ಮಾಡಿಕೊಂಡು ಈ ರಿಸ್ಕಿ ಸಾಹಸಕ್ಕೆ ಕೈ ಹಾಕಿದ್ದರು. ಪುಟ್ಟಣ್ಣ ಕಣಗಾಲರ ಸ್ಫೂರ್ತಿಯಿಂದಲೇ ತಯಾರಾದ ಈ ಸಿನಿಮಾವನ್ನು ಅವರಿಗೇ ಅರ್ಪಿಸುವ ಮೂಲಕ ಗೌರವ ತೋರಿಸಲಾಗಿದೆ. ಕಣಗಾಲರ ಕೀರ್ತಿಯನ್ನು ಮತ್ತಷ್ಟು ಮಿರುಗಿಸುವಂತೆಯೇ ಈ ಸಿನಿಮಾ ಮೂಡಿ ಬಂದಿದೆ ಅನ್ನೋದು ಈಗಾಗಲೇ ಸ್ಪಷ್ಟಗೊಂಡಿದೆ.

    ಕಥಾ ಸಂಗಮದ ಮೂಲಕ ಕಿರಣ್ ರಾಜ್ ಕೆ, ಶಶಿಕುಮಾರ್ ಪಿ, ಚಂದ್ರಜಿತ್ ಎಲಿಯಪ್ಪ, ರಾಹುಲ್ ಪಿ.ಕೆ, ಜೈ ಶಂಕರ್, ಕರಣ್ ಅನಂತ್, ಜಮದಗ್ನಿ ಮನೋಜ್ ಎಂಬ ಏಳು ಮಂದಿ ಪ್ರತಿಭಾವಂತ ನಿರ್ದೇಶಕರನ್ನು ರಿಷಬ್ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ರಿಷಬ್ ಶೆಟ್ಟಿ, ಹರಿಪ್ರಿಯಾ, ರಾಜ್ ಬಿ ಶೆಟ್ಟಿ, ಕಿಶೋರ್ ಕುಮಾರ್, ಪ್ರಮೋದ್ ಶೆಟ್ಟಿ, ಯಜ್ಞಾ ಶೆಟ್ಟಿ, ಪ್ರಕಾಶ್ ಬೆಳವಾಡಿ, ಬಾಲಾಜಿ ಮನೋಹರ್ ಮುಂತಾದವರು ಈ ಏಳೂ ಕಥೆಗಳ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಏಳೂ ಕಥೆಗಳ ಪ್ರತೀ ಪಾತ್ರಗಳೂ ಅದೆಷ್ಟು ಭಿನ್ನವಾಗಿವೆ ಅನ್ನೋದಕ್ಕೆ ಮೊನ್ನೆ ಬಿಡುಗಡೆಗೊಂಡಿರೋ ಟ್ರೇಲರ್‍ನಲ್ಲಿ ಸಾಕ್ಷಿಗಳಿವೆ. ವಾರದೊಪ್ಪತ್ತಿನಲ್ಲಿಯೇ ಕಥಾ ಸಂಗಮ ಪ್ರೇಕ್ಷಕರೆದುರು ತೆರೆದುಕೊಳ್ಳಲಿದೆ.

     

  • ಹಿಕೋರ ಚಿತ್ರೀಕರಣ ಪೂರ್ಣ

    ಹಿಕೋರ ಚಿತ್ರೀಕರಣ ಪೂರ್ಣ

    ಬೆಂಗಳೂರು: ಶ್ರೀನೀಲಕಂಠೇಶ್ವರ ಸಿನಿ ಕಂಬೈನ್ಸ್ ಲಾಂಛನದಲ್ಲಿ ತಯಾರಾಗಿರುವ ‘ಹಿಕೋರಾ` ಚಿತ್ರತಂಡ ಚಿತ್ರೀಕರಣ ಮುಗಿಸಿದ ಸಂತಸದಲ್ಲಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಕೊಂಡಿದೆ. ನೀನಾಸಂನಲ್ಲಿ ಸುಮಾರು 18 ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಅನ್ನ ಉಣಬಡಿಸಿದ ರತ್ನಶ್ರೀಧರ್ ಈ ಚಿತ್ರದ ನಿರ್ಮಾಪಕರು. ಬಹುತೇಕ ನೀನಾಸಂನಲ್ಲಿ ತರಬೇತಿ ಪಡೆದು, ತಮ್ಮ ಕೈ ತುತ್ತು ತಿಂದು ಬೆಳೆದವರನ್ನೇ ಈ ಚಿತ್ರದಲ್ಲಿ ಕಲಾವಿದರನ್ನಾಗಿ ಬಳಸಿಕೊಂಡಿದ್ದಾರೆ ನಿರ್ಮಾಪಕರು. ಈ ಚಿತ್ರದ ನಿರ್ದೇಶಕ ಮತ್ತು ನಾಯಕ ಎಂ.ಜಿ.ಕೃಷ್ಣ, ಯಶವಂತ ಶೆಟ್ಟಿ, ಸ್ಪಂದನ ಪ್ರಸಾದ್, ಮಹಾಂತೇಶ್, ಸರ್ದಾರ್ ಸತ್ಯ ಮುಂತದಾವರೆಲ್ಲ ನೀನಾಸಂನವರೇ.


    ಚಿತ್ರದ ನಾಯಕರಾಗಿ ನಟಿಸಿರುವ ಕೃಷ್ಣಪೂರ್ಣ ಈ ಚಿತ್ರದ ನಿರ್ದೇಶಕರೂ ಹೌದು. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಕೃಷ್ಣಪೂರ್ಣ ಅವರೇ ಬರೆದಿದ್ದಾರೆ. ಪೂರ್ಣಚಂದ್ರತೇಜಸ್ವಿ ಸಂಗೀತ ನೀಡಿರುವ ಈ ಚಿತ್ರಕ್ಕೆ ಆಪ್ತಮಿತ್ರ, ಸಂಗೊಳ್ಳಿ ರಾಯಣ್ಣ ಖ್ಯಾತಿಯ ರಮೇಶ್‍ಬಾಬು ಅವರ ಛಾಯಾಗ್ರಹಣವಿದೆ. ಕಿರಣ್ ಸಂಕಲನ, ಮದನ್ – ಹರಿಣಿ ನೃತ್ಯ ನಿರ್ದೇಶನ ಹಾಗೂ ಡಾ.ನಾಗರಾಜ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಸಹ ನಿರ್ಮಾಪಕರು ಕುಮಾರಿ ಆದ್ಯ. ಸುನೀಲ್ ಯಾದವ್ ಹಾಗೂ ವಿನಾಯಕರಾಮ ಕಲಗಾರು ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಪ್ರೊಡಕ್ಷನ್ ಕಂಟ್ರೋಲರ್ ಆಗಿ ಅಭಿರಾಮ್ ಕಾರ್ಯ ನಿರ್ವಹಿಸಿದ್ದಾರೆ. ಅಂದುಕೊಂಡಿದ್ದಕ್ಕಿಂತಲೂ ಅದ್ಭುತವಾಗಿ ಚಿತ್ರ ಮೂಡಿಬಂದಿರುವುದಕ್ಕೆ ಚಿತ್ರತಂಡ ಸಂತಸದಲ್ಲಿದೆ.

    ಕೃಷ್ಣಪೂರ್ಣ, ಯಶ್ವಂತ್ ಶೆಟ್ಟಿ, ಸ್ಪಂದನಾ ಪ್ರಸಾದ್, ಪ್ರಕಾಶ್ ಬೆಳವಾಡಿ, ಸರ್ದಾರ್ ಸತ್ಯ, ಮಹಾಂತೇಶ್ ರಾಮದುರ್ಗ, ಆನಂದ್ ಮಾಸ್ಟರ್, ಲಾವಂತಿ, ಮುನಾಲಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಖ್ಯಾತ ನಟ ಪ್ರಕಾಶ್ ಬೆಳವಾಡಿ ಅತೀ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ.

  • ಸಾಹಿತಿಗಳಿಗೆ ಓದೋಕೆ ಬರೆಯೋಕೆ ಬಿಟ್ರೆ ಬೇರೇನೂ ಗೊತ್ತಿಲ್ಲ: ರಂಗಕರ್ಮಿ ಪ್ರಕಾಶ್ ಬೆಳವಾಡಿ

    ಸಾಹಿತಿಗಳಿಗೆ ಓದೋಕೆ ಬರೆಯೋಕೆ ಬಿಟ್ರೆ ಬೇರೇನೂ ಗೊತ್ತಿಲ್ಲ: ರಂಗಕರ್ಮಿ ಪ್ರಕಾಶ್ ಬೆಳವಾಡಿ

    ಬೆಂಗಳೂರು: ಹಿರಿಯ ರಂಗಕರ್ಮಿ ಪ್ರಕಾಶ್ ಬೆಳವಾಡಿ ಅವರ ಸಂದರ್ಶನದ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಪ್ರಕಾಶ್ ಬೆಳವಾಡಿ, ಸಾಹಿತಿಗಳು ಅನಾವಶ್ಯಕವಾಗಿ ಮಾತನಾಡೋದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

    ಕರ್ನಾಟಕದಲ್ಲಿ ಯಾವುದೇ ಸರ್ಕಾರಿ ಕಚೇರಿಗಳಿಗೆ ಹೋದ್ರೆ ಎಲ್ಲ ಕಡೆಯೂ ಸಾಹಿತಿಗಳ ಫೋಟೋ ಹಾಕಿರುತ್ತಾರೆ. ರಾಜ್ಯದ ದೊಡ್ಡ ಎಂಜಿನಿಯರ್ ಗಳು, ಸಂಶೋಧನಕಾರರು ಮತ್ತು ವೈದ್ಯರು, ದೊಡ್ಡ ರೈತರ ಫೋಟೋಗಳು ಎಲ್ಲಿಯೂ ಕಾಣುವುದಿಲ್ಲ. ಮಹಾನ್ ಸಾಧನೆ ಮಾಡಿದವರಿಗೆ ಕರ್ನಾಟಕದಲ್ಲಿ ಗೌರವ ಇಲ್ಲ. ದೊಡ್ಡ ಬಾಯಿಯುಳ್ಳ ಸಾಹಿತಿಗಳನ್ನು ಎಲ್ಲಾ ಕಾರ್ಯಕ್ರಮಗಳಿಗೂ ಕರೆದುಕೊಂಡು ಬರುತ್ತಾರೆ. ದೊಡ್ಡ ಸಾಹಿತಿಗಳಿಗೆ ಬದನೆಕಾಯಿ ಹೇಗೆ ಬೆಳೆಯುತ್ತಾರೆ ಎಂಬುದೇ ಗೊತ್ತಿಲ್ಲ. ಸಾಹಿತಿಗಳಿಗೆ ಓದೋಕೆ ಬರೆಯೋಕೆ ಬಿಟ್ರೆ ಏನೂ ಗೊತ್ತಿಲ್ಲ ಎಂದು ಪ್ರಕಾಶ್ ಬೆಳವಾಡಿ ವಾಗ್ದಾಳಿ ನಡೆಸಿದ್ದಾರೆ.

    ಮಾಜಿ ಪ್ರಧಾನಿ ದೇವೇಗೌಡರಿಗೆ ಗೊತ್ತಿರುವಷ್ಟು ಕರ್ನಾಟಕದ ಮಾಹಿತಿ ಬೇರೆ ಯಾವ ಸಾಹಿತಿಗಳಿಗೂ ತಿಳಿದಿರಲ್ಲ. ಅವರಿಗೆ ಕುಡಿಯುವ ನೀರಿನ ಬೆಲೆ ಗೊತ್ತಿಲ್ಲ. ಯಾವ ಪರಿಸರಕ್ಕೆ ಯಾವ ಬೆಳೆ ಬೆಳೆಯಬೇಕು ಎಂಬುದು ಗೊತ್ತಿಲ್ಲ. ಬದಲಾಗುತ್ತಿರುವ ಜಗತ್ತಿನ ಆಧುನಿಕ ತಂತ್ರಜ್ಞಾನದ ಮಾಹಿತಿ ಅವರಿಗೆ ಗೊತ್ತಿರಲ್ಲ. ಬೆಂಗಳೂರಲ್ಲಿ ರಾಕೆಟ್ ಸೈನ್ಸ್ ಇದೆ. ಆದ್ರೆ ಎಲ್ಲಿಯೂ ಒಬ್ಬ ರಾಕೆಟ್ ವಿಜ್ಞಾನಿಯ ಫೋಟೋವನ್ನು ನಾವು ಕಾಣುವುದಿಲ್ಲ. ಒಂದು ವೇಳೆ ನಾವು ಸಾಹಿತಿಗಳ ಬಳಿ ನಮ್ಮ ಮಕ್ಕಳನ್ನು ಟ್ಯೂಶನ್ ಗೆ ಕಳಿಸಿದ್ರೆ ಅವರನ್ನ ನಾಶ ಮಾಡ್ತಾರೆ. ಎಲ್ಲಾದ್ರೂ ಹೋಗುವಾಗ ಕಾರ್ ಟಯರ್ ಪಂಚರ್ ಆದ್ರೆ ಅದನ್ನ ಹೇಗೆ ರಿಪೇರಿ ಮಾಡಬೇಕು ಎನ್ನುವ ವಿಚಾರವೂ ಗೊತ್ತಿರಲ್ಲ ಎಂದು ಅವರು ಸಾಹಿತಿಗಳನ್ನು ಟೀಕಿಸಿದ್ದಾರೆ.

    ಮನೆಯಲ್ಲಿ ಒಂದು ವಿದ್ಯುತ್ ಸ್ವಿಚ್ ಹೋದರೆ ಅದನ್ನು ರಿಪೇರಿ ಮಾಡುವ ಬದಲು ದೇಶದ ಆರ್ಥಿಕ ಸ್ಥಿತಿ ಎಲ್ಲಿಗೆ ಬಂತು. ಮೋದಿಯವರ ಆರ್ಥಿಕ ನೀತಿ ಎಲ್ಲಿಗೆ ಬಂದಿದೆ ಎಂಬ ದೊಡ್ಡ ಲೇಖನಗಳನ್ನು ಬರೆಯುತ್ತಾರೆ. ಮನೆಯಲ್ಲಿ ಎಂಜಿನಿಯರ್ ಓದಿರುವ ಮಗನಿದ್ರೂ, ಅವನ ತಲೆಯಲ್ಲಿ ಎಡ, ಬಲ ಅಂತಾ ಉಪದೇಶ ಮಾಡಿದ್ದರಿಂದ ಆತನೂ ರಿಪೇರಿ ಮಾಡೋದಕ್ಕೆ ಹೋಗಲ್ಲ ಎಂದು ವ್ಯಂಗ್ಯವಾಡಿದ್ರು.

    ಓದೋದು ನಿಮ್ಮ ಕೆಲಸವಾಗಿದ್ದು, ರಾಜ್ಯಕ್ಕೆ ಹಿತವಾದದನ್ನು ಓದಿ ತಿಳಿದುಕೊಂಡು ನಮಗೂ ಹೇಳಿಕೊಡಿ. ಕರ್ನಾಟಕ ನೈಸರ್ಗಿಕ ಸಂಪತ್ತಿನಿಂದ ಭರಪೂರವಾಗಿದೆ. ಎಲ್ಲಿ ಯಾವ ಉದ್ಯಮ ಆರಂಭಿಸಬೇಕು. ಪರಿಸರಕ್ಕನುಗುಣವಾಗಿ ಕೃಷಿ ಚಟುವಟಿಕೆ ಹೇಗೆ ನಡೆಸಬೇಕು ಎಂಬುದರ ಕುರಿತಾದ ವಿಶೇಷ ಮಾಹಿತಿಗಳನ್ನು ಕಲೆ ಹಾಕಿ ರಾಜ್ಯದ ಜನತೆಗೆ ಮಾರ್ಗದರ್ಶನ ನೀಡಿ. ಐದು ವರ್ಷ ಸುಮ್ಮನಿದ್ದು, ಎಲ್ಲ ವಲಯಗಳ ಮಾಹಿತಿಯನ್ನು ಪಡೆದುಕೊಳ್ಳಬೇಕು. ಸೈನ್ಸ್ ಬಗ್ಗೆ ಜ್ಞಾನ ಇದ್ದವನು ಸಂಶೋಧನೆ, ಎಂಜಿನಿಯರ್, ಮೆಡಿಕಲ್ ವಿಭಾಗಕ್ಕೆ ಸೇರುವುದು. ಕಾಮರ್ಸ್ ಬಗೆಗೆ ಆಸಕ್ತಿಯುಳ್ಳವರು ಮಾರುಕಟ್ಟೆ, ಹಣಕಾಸಿನ ವ್ಯವಹಾರ, ಬ್ಯಾಂಕಿಂಗ್ ವಲಯ ಆಯ್ದುಕೊಳ್ಳುವುದು. ಯಾವ ವಿಷಯ ಗೊತ್ತಿಲ್ಲದವನು ಸಾಹಿತಿ ಆಗುತ್ತಾನೆ ಎಂಬ ತಪ್ಪು ಪರಿಕಲ್ಪನೆ ಬದಲಾಗಬೇಕಿದೆ ಎಂಬ ಆಶಯವನ್ನು ಪ್ರಕಾಶ್ ಬೆಳವಾಡಿ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews