Tag: ಪೆಥಾಯ್

  • ಪೆಥಾಯ್ ಚಂಡಮಾರುತ: 250ಕ್ಕೂ ಹೆಚ್ಚು ಗೋವುಗಳ ಮಾರಣಹೋಮ

    ಪೆಥಾಯ್ ಚಂಡಮಾರುತ: 250ಕ್ಕೂ ಹೆಚ್ಚು ಗೋವುಗಳ ಮಾರಣಹೋಮ

                                                                  ಸಾಂದಭೀಕ ಚಿತ್ರ

    ಭುವನೇಶ್ವರ: ಪೆಥಾಯ್ ಚಂಡಮಾರುತಕ್ಕೆ ತತ್ತರಿಸಿದ ಒಡಿಶಾದಲ್ಲಿ ಮೂರೇ ದಿನದಲ್ಲಿ ಸುಮಾರು 250 ಕ್ಕೂ ಹೆಚ್ಚು ಜಾನುವಾರುಗಳು ಸಾವಿಗೀಡಾಗಿದೆ.

    ಪೆಥಾಯ್ ಚಂಡಮಾರುತಕ್ಕೆ ಒಡಿಶಾ ರಾಜ್ಯ ತತ್ತರಿಸಿ ಹೋಗಿದೆ. ಗಂಜಮ್ ಜಿಲ್ಲೆಯ ಲ್ಯಾಂಡಜುವಿಲಿ ಗ್ರಾಮದಲ್ಲಿ ಗುರುವಾರ ಒಂದೇ ದಿನಕ್ಕೆ ಸುಮಾರು 57 ಕರುಗಳು ಸಾವನ್ನಪ್ಪಿದ್ದವು. ಈ ವಿಷಯ ತಿಳಿಯುತ್ತಿದಂತೆ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೆಥಾಯ್ ಚಂಡಮಾರುತದ ಪರಿಣಾಮದಿಂದ ಜಾನುವಾರುಗಳು ಸಾವನ್ನಪ್ಪಿರುವ ಸಂಗತಿ ತಿಳಿದು ಬಂದಿದೆ.

    ಚಂಡಮಾರುತದಿಂದ ಒಡಿಶಾದಲ್ಲಿ ವಾತಾವರಣ ಹದಗೆಟ್ಟಿತ್ತು. ಇದರ ಪರಿಣಾಮವೆಂಬಂತೆ ಈ ಭಾಗದ ಜಾನುವಾರುಗಳು ನೇರವಾಗಿ ಮಳೆಯಲ್ಲಿ ಇದ್ದಿದ್ದರಿಂದ ಹಾಗೂ ಪ್ರದೇಶದಲ್ಲಿ ಹೆಚ್ಚು ಚಳಿ ಇದ್ದ ಕಾರಣಕ್ಕೆ ನ್ಯುಮೋನಿಯಾ ರೋಗ ಬಂದು ಮೃತಪಟ್ಟಿದೆ ಎಂದು ಸಹಾಯಕ ಜಿಲ್ಲಾ ಪಶುವೈದ್ಯಾಧಿಕಾರಿ ರವೀಂದ್ರನಾಥ್ ಪಾಂಡಾ ತಿಳಿಸಿದರು.

    ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಾವನ್ನಪ್ಪಿದ್ದ ಜಾನುವಾರುಗಳನ್ನು ಸುಡಲಾಯಿತು. ಅಲ್ಲದೆ ಗಂಜಮ್ ಜಿಲ್ಲೆಯ ಇತರೇ ಜಾನುವಾರುಗಳ ರಕ್ತದ ಪರೀಕ್ಷೆ ನಡೆಸಿ, ನ್ಯುಮೋನಿಯಾ ರೋಗ ಲಕ್ಷಣ ಕಂಡು ಬಂದರೆ ಚಿಕಿತ್ಸೆ ನೀಡಲು ಅಲ್ಲಿನ ಜಿಲ್ಲಾಡಳಿತ ಮುಂದಾಗಿದೆ.

    ಕಳೆದ ಮೂರು ದಿನಗಳಲ್ಲಿ ಸರಿ ಸುಮಾರು 259 ಜಾನುವಾರುಗಳಲ್ಲಿ 223 ಕರುಗಳು ಚಂಡಮಾರುತದ ಮಳೆಗೆ ಬಲಿಯಾಗಿದೆ ಎಂದು ವರದಿಯಾಗಿದೆ. ಪೆಥಾಯ್ ಚಂಡಮಾರುತಕ್ಕೆ ಒಡಿಶಾ ರಾಜ್ಯದ ಜನರ ಜೀವನ ಅಸ್ತವ್ಯಸ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪೆಥಾಯ್ ಚಂಡಮಾರುತ ಎಫೆಕ್ಟ್: ಕರ್ನಾಟಕದಲ್ಲಿ ಹೆಚ್ಚಾಯ್ತು ಚಳಿ!

    ಪೆಥಾಯ್ ಚಂಡಮಾರುತ ಎಫೆಕ್ಟ್: ಕರ್ನಾಟಕದಲ್ಲಿ ಹೆಚ್ಚಾಯ್ತು ಚಳಿ!

    ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಪೆಥಾಯ್ ಚಂಡಮಾರುತದ ಅಬ್ಬರದಿಂದ ರಾಜ್ಯದಲ್ಲಿ ಮೋಡದ ಜೊತೆಗೆ ಚಳಿಯ ಪ್ರಮಾಣವೂ ಹೆಚ್ಚಾಗಿದೆ.

    ಸಂಜೆ 6 ಗಂಟೆಯಿಂದ ಮರುದಿನ ಬೆಳಗ್ಗೆ ಸುಮಾರು 7 ಗಂಟೆಯವರೆಗೂ ಕೊರೆಯುವ ಚಳಿಯಿದೆ. ಸೋಮವಾರ ಬೆಂಗಳೂರು ಗ್ರಾಮಾಂತರದಲ್ಲಿ 11.8 ಡಿಗ್ರಿ ತಾಪಮಾನ ದಾಖಲಾಗಿದ್ದು, ಇದು ಇತ್ತೀಚಿನ ದಿನಗಳಲ್ಲಿ ಅತಿಕಡಿಮೆ ಎಂದು ಹೇಳಲಾಗುತ್ತಿದೆ. ದಕ್ಷಿಣ ಒಳನಾಡಿನ ಬಹುತೇಕ ಭಾಗಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಹಿಮದಿಂದ ಕೂಡಿದ ಚಳಿಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಎಲ್ಲೆಲ್ಲಿ ಎಷ್ಟು?
    ಸೋಮವಾರ ಬೆಂಗಳೂರು ಗ್ರಾಮಾಂತರ 11.8 ಡಿಗ್ರಿ, ಹಾಸನ 11.9 ಡಿಗ್ರಿ, ಕೊಡಗು 12.4 ಡಿಗ್ರಿ, ಬೆಂಗಳೂರು ನಗರದಲ್ಲಿ 12.8 ಡಿಗ್ರಿ ತಾಪಮಾನ ದಾಖಲಾಗಿದೆ.

    ಉಡುಪಿಯಲ್ಲಿ ಅತಿ ಹೆಚ್ಚು 20.1 ಡಿಗ್ರಿ ತಾಪಮಾನ ದಾಖಲಾಗಿದೆ. ದಕ್ಷಿಣ ಕನ್ನಡ 19 ಡಿಗ್ರಿ, ಉತ್ತರ ಕನ್ನಡ 17.7 ಡಿಗ್ರಿ, ಬಳ್ಳಾರಿ 15.9 ಡಿಗ್ರಿ, ಬಾಗಲಕೋಟ 14.6 ಡಿಗ್ರಿ, ಬೀದರ್ 14.5 ಡಿಗ್ರಿ, ಚಿಕ್ಕಬಳ್ಳಾಪುರ 13.2 ಡಿಗ್ರಿ, ಚಿಕ್ಕಮಗಳೂರು 13.3 ಡಿಗ್ರಿ, ಹಾವೇರಿ 14.6 ಡಿಗ್ರಿ, ಕಲಬುರಗಿ 14.7 ಡಿಗ್ರಿ, ಧಾರವಾಡ 13.5 ಡಿಗ್ರಿ ತಾಪಮಾನ ದಾಖಲಾಗಿದೆ.

    ಆಂಧ್ರ, ತಮಿಳುನಾಡಲ್ಲಿ ಭಾರೀ ಮಳೆ:
    ಪೆಥಾಯಿ ಚಂಡಮಾರುತ ಸೋಮವಾರ ಮಧ್ಯಾಹ್ನ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಗೆ ಅಪ್ಪಳಿಸಿದೆ. ಈಗ ಆಂಧ್ರ, ತಮಿಳುನಾಡು ಕರಾವಳಿ ಭಾಗದಲ್ಲಿ ಮಳೆಯಬ್ಬರ ಜೋರಾಗಿದ್ದು, ಸಾವಿರಾರು ಜನ ಅತಂತ್ರರಾಗಿದ್ದಾರೆ. ಅಲ್ಲದೆ ಆಂಧ್ರದಲ್ಲಿ ಈಗಾಗಲೇ ನಾಲ್ವರು ಬಲಿಯಾಗಿದ್ದಾರೆ. ಅಮಲಾಪುರದಲ್ಲಿ ಚಂಡಮಾರುತದ ಮಳೆಯ ನೀರಿನ ಜೊತೆಗೆ ಗ್ರಾಮದೊಳಗೆ ಮೀನುಗಳು ಬರುತ್ತಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv