Tag: ಪುರೋಹಿತ

  • ದೇವಾಲಯದ ಒಳಗೆ ಮೆಣಸಿನ ಹುಡಿ ಎರಚಿ ಅರ್ಚಕನಿಗೆ ಮಹಿಳೆ ಥಳಿತ!

    ದೇವಾಲಯದ ಒಳಗೆ ಮೆಣಸಿನ ಹುಡಿ ಎರಚಿ ಅರ್ಚಕನಿಗೆ ಮಹಿಳೆ ಥಳಿತ!

    ಹೈದರಾಬಾದ್: ಮಹಿಳೆಯೊಬ್ಬರು ಪುರೋಹಿತರೊಬ್ಬರಿಗೆ ದೇವಸ್ಥಾನದ ಒಳಗಡೆಯೇ ಹಿಗ್ಗಾಮುಗ್ಗ ಥಳಿಸಿದ ಘಟನೆ ವಿಜಯವಾಡದ ಭವಾನಿಪುರಂ ಎಂಬಲ್ಲಿ ನಡೆದಿದೆ.

    ಪುರೋಹಿತ ಹಾಗೂ ದೇವಸ್ಥಾನದ ಸಮಿತಿ ಸದಸ್ಯನ ಮಧ್ಯೆ ಇದ್ದ ವೈಮನಸ್ಸೇ ಈ ಘಟನೆಗೆ ಕಾರಣ ಎಂದು ವರದಿಯಾಗಿದೆ. ಥಳಿತಕ್ಕೊಳಗಾದ ಕೋಟ ಪವನ್ ಹೆಚ್ ಬಿ ಕಾಲೋನಿಯಲ್ಲಿರುವ ಸೈತ್ರಿಶಕ್ತಿ ದೇವಸ್ಥಾನದಲ್ಲಿ ಪುರೋಹಿತನಾಗಿ ಕೆಲಸ ಮಾಡುತ್ತಿದ್ದರು.

    ಪವನ್ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸಮಿತಿ ಸದಸ್ಯ ಮೋಹನ್ ರೆಡ್ಡಿ ಮಧ್ಯೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿತ್ತು. ಈ ಸಂದರ್ಭದಲ್ಲಿ ರೆಡ್ಡಿ, ದೇವಸ್ಥಾನದ ಅಕ್ಕಪಕ್ಕ ಎಲ್ಲೂ ಕಾಣಿಸಿಕೊಳ್ಳಬಾರದೆಂದು ಬೆದರಿಕೆ ಹಾಕಿದ್ದರು. ಹೀಗಾಗಿ ಪವನ್ ಪೊಲೀಸ್ ಠಾಣೆಯಲ್ಲಿ ರೆಡ್ಡಿ ವಿರುದ್ಧ ದೂರು ಕೂಡ ದಾಖಲಿಸಿದ್ದರು.

    ಭಾನುವಾರ ತಂದೆಯನ್ನು ಭೇಟಿ ಮಾಡಲೆಂದು ಹೋಗುತ್ತಿರುವ ವೇಳೆ ಪವನ್ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮೋಹನ್ ರೆಡ್ಡಿ ಮಗಳು ಆರೋಪ ಮಾಡಿದ್ದಾಳೆ. ಈ ಹಿನ್ನೆಲೆಯಲ್ಲಿ ರೆಡ್ಡಿ ಪತ್ನಿ ಹಾಗೂ ಮಗಳು ದೇವಸ್ಥಾನಕ್ಕೆ ಬಂದಿದ್ದು, ಪವನ್ ಪೂಜೆಗೆ ರೆಡಿಯಾಗುತ್ತಿದ್ದಾಗ ಇಬ್ಬರೂ, ಪವನ್ ಮೇಲೆ ಮೆಣಸಿನ ಹುಡಿಯನ್ನು ಎರಚಿ, ಬಟ್ಟೆ ಮುಸುಕು ಹಾಕಿ ಚೆನ್ನಾಗಿ ಥಳಿಸಿದ್ದಾರೆ. ಈ ವೇಳೆ ಉಳಿದ ಪುರೋಹಿತರು ಅಲ್ಲಿಗೆ ದೌಡಾಯಿಸಿ ಪವನ್ ನನ್ನು ರಕ್ಷಿಸಿದ್ದಾರೆ.

    ಇದಾದ ಬಳಿಕ ಮೋಹನ್ ರೆಡ್ಡಿ ಮಗಳು ಪವನ್ ವಿರುದ್ಧ ದೂರು ದಾಖಲಿಸಿದ್ದಾಳೆ. ಇತ್ತ ಪವನ್ ಕೂಡ ತನ್ನ ಮೇಲೆ ದಾಳಿ ಮಾಡಿದವರ ವಿರುದ್ಧ ಪೊಲೀಸರಿಗೆ ದೂರು ನಿಡಿದ್ದಾರೆ. ಸದ್ಯ ಪೊಲೀಸರು ಇಬ್ಬರ ದೂರನ್ನೂ ದಾಖಲಿಸಿಕೊಂಡಿದ್ದು, ಘಟನಾ ಸ್ಥಳದಲ್ಲಿದ್ದ ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ.

  • ಡ್ರಾಮಾ ಜೂನಿಯರ್ಸ್‍ನಲ್ಲಿ ಬ್ರಾಹ್ಮಣ ಪುರೋಹಿತರಿಗೆ ಅಪಮಾನ- ಉಡುಪಿ ಪೇಜಾವರ ಮಠ ತಲುಪಿದ ವಿವಾದ

    ಡ್ರಾಮಾ ಜೂನಿಯರ್ಸ್‍ನಲ್ಲಿ ಬ್ರಾಹ್ಮಣ ಪುರೋಹಿತರಿಗೆ ಅಪಮಾನ- ಉಡುಪಿ ಪೇಜಾವರ ಮಠ ತಲುಪಿದ ವಿವಾದ

    ಬೆಂಗಳೂರು: ಖಾಸಗಿ ವಾಹಿನಿಯ ಡ್ರಾಮಾ ಜೂನಿಯರ್ಸ್ ಎರಡನೇ ಆವೃತ್ತಿಯ ಸಂಚಿಕೆಯಲ್ಲಿ ಬ್ರಾಹ್ಮಣ ವೃತ್ತಿಗೆ ಮತ್ತು ಜಾತಿಗೆ ಅವಮಾನವಾಗಿದೆ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಪ್ರಸಾರವಾದ ಎಪಿಸೋಡ್ ಒಂದರ ಬಗ್ಗೆ ಉಡುಪಿ ಪೇಜಾವರ ಮಠದಲ್ಲಿ ಖಂಡನಾ ಸಭೆ ನಡೆಯಿತು. ಬ್ರಾಹ್ಮಣ ಜಾತಿಗೆ ಜೊತೆಗೆ ವೃತ್ತಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಯುವ ಬ್ರಾಹ್ಮಣ ಪರಿಷತ್ ನೇತೃತ್ವದಲ್ಲಿ ಪ್ರತಿಭಟನಾ ಸಭೆ ಮಾಡುವ ಮೂಲಕ ಖಂಡಿಸಲಾಯ್ತು.

    ಈ ಸಂದರ್ಭ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಬ್ರಾಹ್ಮಣ ವೃತ್ತಿಯ ಅವಹೇಳನವಾಗಿದೆ. ಇದು ನಮಗೆ ದುಃಖವುಂಟು ಮಾಡಿದೆ. ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಬೇಡ. ಸಣ್ಣ ಮಕ್ಕಳ ಮನಸ್ಸಿನಲ್ಲಿ ವಿಷಬೀಜ ಬಿತ್ತುವ ಕಾರ್ಯ ಮಾಡದಿರಿ. ಇದನ್ನು ನಾವು ಸರ್ವತಾ ಒಪ್ಪಲು ಸಾಧ್ಯವಿಲ್ಲ. ಕ್ಷಮೆ ಯಾಚನೆ ಮಾಡದೆ ಇದ್ದಲ್ಲಿ ಈ ಬಗ್ಗೆ ತೀವ್ರ ಪ್ರತಿಭಟನೆ ಮಾಡುತ್ತೇನೆ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿಗಳ ಮೂಲಕ ಯುವ ಬ್ರಾಹ್ಮಣ ಪರಿಷತ್ ಮನವಿಯನ್ನು ನೀಡುವುದಾಗಿ ಹೇಳಿದೆ.

    ಕಾರ್ಯಕ್ರಮದಲ್ಲಿ ಪುರೋಹಿತ ವರ್ಗ, ಬ್ರಾಹ್ಮಣರನ್ನು ಅವಹೇಳನ ಮಾಡಲಾಗಿದೆ ಎಂದು ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಆರೋಪಿಸಿದೆ. ಈ ಸಂಚಿಕೆಯಲ್ಲಿ ಮುಗ್ಧ ಮಕ್ಕಳನ್ನು ಇಟ್ಟುಕೊಂಡು ಬ್ರಾಹ್ಮಣರನ್ನು ತೇಜೋವಧೆ ಮಾಡಲಾಗಿದೆ. ಇಂತಹ ಕಾರ್ಯಕ್ರವiಗಳಿಗೆ ಅವಕಾಶ ನೀಡಬಾರದೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬ್ರಾಹ್ಮಣ ಮಹಾಸಭಾ ಪತ್ರ ಬರೆದಿದೆ. ಅಲ್ಲದೇ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದೆ