Tag: ಪುದುಚೇರಿ

  • 18 ರಾಜ್ಯಗಳಲ್ಲಿ ಬಿಜೆಪಿಗೆ ಅಧಿಕಾರ

    18 ರಾಜ್ಯಗಳಲ್ಲಿ ಬಿಜೆಪಿಗೆ ಅಧಿಕಾರ

    ನವದೆಹಲಿ: 2 ವಿಧಾನಸಭೆ ಚುನಾವಣೆಗಳನ್ನು ಜಯಿಸುವುದರೊಂದಿಗೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.

    ಈ ಮೊದಲು ಬಿಜೆಪಿ ಸ್ವಂತ ಬಲ ಮತ್ತು ಮಿತ್ರ ಪಕ್ಷಗಳ ಜೊತೆ ಸೇರಿ 17 ರಾಜ್ಯಗಳಲ್ಲಿ ಆಡಳಿತದಲ್ಲಿತ್ತು. ಆದರೆ ಈಗ ಅಸ್ಸಾಂ ಉಳಿಸಿಕೊಳ್ಳುವುದರ ಜೊತೆ ಪುದುಚೇರಿಯಲ್ಲೂ ಕಮಲ ಕಮಾಲ್ ಮಾಡಿದ್ದು, ಹೊಸದಾಗಿ ಸೇರ್ಪಡೆಯಾಗಿದೆ.

    ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಗೆಲ್ಲಲೇಬೇಕೆಂದು ಬಿಜೆಪಿ ಹಠ ಹಿಡಿದಿತ್ತು. ಆದರೆ ಫಲಿತಾಂಶದಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ತಮಿಳುನಾಡಿನಲ್ಲಿ ಎಐಎಡಿಎಂಕೆಗೆ ಸೋಲಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಜೊತೆ ಎಐಎಡಿಎಂಕೆ ಮೈತ್ರಿ ಮಾಡಿಕೊಂಡಿರಲಿಲ್ಲ. ಈ ಬಾರಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು.

    ಎಲ್ಲೆಲ್ಲಿ ಅಧಿಕಾರ?
    ಅಸ್ಸಾಂ, ಅರುಣಾಚಲ ಪ್ರದೇಶ, ಬಿಹಾರ, ಗೋವಾ, ಗುಜರಾತ್, ಹರ್ಯಾಣ, ಹಿಮಾಚಲ ಪ್ರದೇಶ, ಪುದುಚೇರಿ, ಕರ್ನಾಟಕ, ಮಧ್ಯಪ್ರದೇಶ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾ, ಉತ್ತರಾಖಂಡ, ಉತ್ತರ ಪ್ರದೇಶ, ಮಣಿಪುರ, ಮೇಘಾಲಯ.

  • ಪುದುಚೇರಿಯಲ್ಲಿ ಅರಳಿದ ಕಮಲ

    ಪುದುಚೇರಿಯಲ್ಲಿ ಅರಳಿದ ಕಮಲ

    ಪುದುಚೇರಿ: ತಮಿಳುನಾಡಿಗೆ ಅಂಟಿಕೊಂಡೇ ಇರುವ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಬೇರೆಯದ್ದೇ ರಾಜಕಾರಣ. ತಮಿಳುನಾಡಿನಲ್ಲಿ ದ್ರಾವಿಡ ರಾಜಕಾರಣವೇ ಹಾಸುಹೊದ್ದು ಮಲಗಿದೆ. ರಾಷ್ಟ್ರೀಯ ಪಕ್ಷಗಳಿಗೂ ಅಲ್ಲಿನ ಜನ ಮಣೆ ಹಾಕುತ್ತವೆ. ಹೀಗಾಗಿಯೇ ಕಳೆದ ಬಾರಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾರದಲ್ಲಿತ್ತು. ಈಗ ಬಿಜೆಪಿಯನ್ನು ಒಳಗೊಂಡ ಮೈತ್ರಿಕೂಟಕ್ಕೆ ಜನ ಜೈ ಎಂದಿದ್ದಾರೆ.

    ಅಧಿಕಾರ ರಚಿಸಲು ಕೇವಲ ಒಂದು ಸ್ಥಾನದ ಅಗತ್ಯ ಬಿದ್ದಿದೆ. ಪಕ್ಷೇತರರರು ಬೆಂಬಲನೀಡುವ ಸಂಭವ ಇದೆ. ಇದರೊಂದಿಗೆ ದಕ್ಷಿಣ ಭಾರತದಲ್ಲಿ ಇದ್ದೊಂದು ಸರ್ಕಾರವನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಈಗ ಪುದ್ದುಚೇರಿಯ ಸಿಎಂ ಯಾರಾಗ್ತಾರಾ? ಬಿಜೆಪಿಯವರಾ ಅಥವಾ ಎನ್ ಆರ್ ರಂಗಸ್ವಾಮಿನಾ ಅನ್ನೋದು ಕುತೂಹಲ.

    ಯಾರಿಗೆ ಎಷ್ಟು ಕ್ಷೇತ್ರ?
    * ಬಿಜೆಪಿ+ – 15
    * ಕಾಂಗ್ರೆಸ್+ – 10
    * ಇತರೆ – 05

    ಪುದುಚ್ಚೆರಿಯಲ್ಲಿ ಕಮಲ ಅರಳಲು ಕಾರಣ
    * ಆಡಳಿತ ವಿರೋಧಿ ಅಲೆ
    * ಯುಪಿಎನಿಂದ ಪ್ರಮುಖ ನಾಯಕರ ವಲಸೆ
    * ಎಐಎಡಿಎಂಕೆ ಜೊತೆ ಬಿಜೆಪಿ ಮೈತ್ರಿ
    * ಬಿಜೆಪಿಗೆ ಶಕ್ತಿ ತುಂಬಿದ ನಮಃ ಶಿವಾಯಂ
    * ನಾರಾಯಣಸ್ವಾಮಿಯನ್ನು ಕಾಂಗ್ರೆಸ್ ಕಡೆಗಣಿಸಿದ್ದು

  • ಪುದುಚೇರಿ ಕಳೆದುಕೊಂಡ ಕಾಂಗ್ರೆಸ್ – ಅರಳಿದ ಕಮಲ

    ಪುದುಚೇರಿ ಕಳೆದುಕೊಂಡ ಕಾಂಗ್ರೆಸ್ – ಅರಳಿದ ಕಮಲ

    ನವದೆಹಲಿ: ನಾಲ್ಕು ರಾಜ್ಯಗಳ ಜೊತೆಯಲ್ಲಿ ಒಂದು ಕೇಂದ್ರಾಡಳಿತ ಪ್ರದೇಶ ಪುದುಚೇರಿಯ 30 ವಿಧಾನ ಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಬಹುಮತ ಸಾಬೀತು ಮಾಡುವಲ್ಲಿ ವಿಫಲವಾದ ಪುದುಚೇರಿಯ ಕಾಂಗ್ರೆಸ್ ಸರ್ಕಾರ ಪತನವಾಗಿತ್ತು. ಈಗ ನಡೆದ ಚುನಾವಣೆಯಲ್ಲಿ ಪುದುಚೇರಿಯನ್ನ ಬಿಜೆಪಿ ತನ್ನ ತೆಕ್ಕಗೆ ತೆಗೆದುಕೊಳ್ಳಲಿದೆ ಎಂದು ಸಮೀಕ್ಷೆಗಳು ಹೇಳಿವೆ.

    ವಿಶ್ವಾಸಮತ ಸಾಬೀತುಪಡಿಸುವಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಡಿಎಂಕೆ ಜೊತೆ ಎದುರಿಸಿತ್ತು. ಆದ್ರೆ ತಮಿಳುನಾಡಿನಲ್ಲಿ ವರ್ಕೌಟ್ ಆದ ತಂತ್ರ ಇಲ್ಲಿ ಯಶಸ್ಸು ಕಂಡಿಲ್ಲ. ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಪ್ರಮುಖ ನಾಯಕರು ಕಮಲ ಹಿಡಿದಿದ್ದರು. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ದೀದಿ ಅಧಿಕಾರಕ್ಕೆ

    ಯಾರಿಗೆ ಎಷ್ಟು ಕ್ಷೇತ್ರ: ಒಟ್ಟು ವಿಧಾನಸಭಾ ಕ್ಷೇತ್ರಗಳು-30

    ಇಂಡಿಯಾ ಟುಡೇ-ಆಕ್ಸಿನ್ ಮೈ ಇಂಡಿಯಾ
    ಕಾಂಗ್ರೆಸ್+: 6-10
    ಬಿಜೆಪಿ+: 20-24
    ಇತರೆ: 0-1

    ಟೈಮ್ಸ್ ನೌ-ಸಿ ವೋಟರ್
    ಕಾಂಗ್ರೆಸ್+: 6-10
    ಬಿಜೆಪಿ+: 19-23
    ಇತರೆ: 1-2

    ಸಿಎನ್‍ಎಕ್ಸ್
    ಕಾಂಗ್ರೆಸ್+: 11-13
    ಬಿಜೆಪಿ+: 16-20
    ಇತರೆ: 0

    ಜನ್ ಕಿ ಬಾತ್
    ಕಾಂಗ್ರೆಸ್+: 6-11
    ಬಿಜೆಪಿ+: 19-24
    ಇತರೆ: 0

    ಇದನ್ನೂ ಓದಿ: ಮಸ್ಕಿ, ಬಸವ ಕಲ್ಯಾಣದಲ್ಲಿ ಕಾಂಗ್ರೆಸ್ – ಬೆಳಗಾವಿಯಲ್ಲಿ ಮತ್ತೆ ಬಿಜೆಪಿ

    2016ರ ಫಲಿತಾಂಶ: 2016ರಲ್ಲಿ 30 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 15ರಲ್ಲಿ ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಅಣ್ಣಾಡಿಎಂಕೆ- 04, ಡಿಎಂಕೆ- 02 ಮತ್ತು ಇತರರು ಒಂದು ಕ್ಷೇತ್ರದಲ್ಲಿ ಗೆದ್ದಿದ್ದರು. 33 ಸದಸ್ಯರ ಪುದುಚೇರಿಯ ವಿಧಾನಸಭೆಯಲ್ಲಿ ಮೂವರು ಕೇಂದ್ರ ಸರ್ಕಾರದಿಂದ ನೇಮಕ ಆಗಿರುತ್ತಾರೆ. ಇನ್ನುಳಿದ 30 ಸದಸ್ಯರು ಜನರಿಂದ ನೇರವಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿರುತ್ತಾರೆ.ಇದನ್ನೂ ಓದಿ: ಅಸ್ಸಾಂ ಚಹಾ ತೋಟದಲ್ಲಿ ಎರಡನೇ ಬಾರಿ ಅರಳಿದ ಕಮಲ

    ಇದನ್ನೂ ಓದಿ: ಕೇರಳದಲ್ಲಿ ಪಿಣರಾಯಿ ‘ವಿಜಯ’ನ್ ಪತಾಕೆ – ಒಂದಂಕಿಗೆ ಸೀಮಿತವಾದ ಬಿಜೆಪಿ

    ಇದನ್ನೂ ಓದಿ: ತಮಿಳುನಾಡಿನಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿ ಸಕ್ಸಸ್ – ಖಾತೆ ತೆರೆಯಲು ಕಮಲ್ ಹಾಸನ್ ಹರಸಾಹಸ

  • ಇಂದು ಪುದುಚೇರಿ ಸೇರಿದಂತೆ 4 ರಾಜ್ಯಗಳಲ್ಲಿ ಚುನಾವಣೆ

    ಇಂದು ಪುದುಚೇರಿ ಸೇರಿದಂತೆ 4 ರಾಜ್ಯಗಳಲ್ಲಿ ಚುನಾವಣೆ

    ಬೆಂಗಳೂರು: ಒಂದು ಕೇಂದ್ರಾಡಳಿತ ಪ್ರದೇಶ, ನಾಲ್ಕು ರಾಜ್ಯಗಳಲ್ಲು ಚುನಾವಣೆ ಹಬ್ಬ ನಡೆಯಲಿದೆ. ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳ ಅಸ್ಸಾಂ ಮತ್ತು ಪುದುಚೇರಿಯಲ್ಲಿ ಮತದಾನ ನಡೆಯಲಿದೆ. ಕೇರಳ ಮತ್ತು ತಮಿಳುನಾಡು, ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಮತದಾನ ನಡೆಯಲಿದೆ.

    ಕೇರಳದ 140 ಹಾಗೂ ತಮಿಳುನಾಡಿನ 234 ಪುದುಚೇರಿಯ 30 ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಸೇರಲಿದೆ. ಕೇರಳದಲ್ಲಿ ಎಲ್‍ಡಿಎಫ್, ಯುಡಿಎಫ್ ಮತ್ತು ಎನ್‍ಡಿಎ ಒಕ್ಕೂಟದ ನಡುವೆ ತ್ರಿಕೋನ ಸ್ಪರ್ಧೆ ಇದೆ. ಇತ್ತ ತಮಿಳುನಾಡಿನಲ್ಲಿ ಡಿಎಂಕೆ ವರ್ಸಸ್ ಎಐಎಡಿಎಂ ನಡುವೆ ನೇರ ಪೈಪೋಟಿ ನಡೆಯುತ್ತಿದೆ. ಪುದುಚೇರಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಂಘರ್ಷ ಏರ್ಪಟ್ಟಿದೆ. ಎರಡನೇ ಬಾರಿಗೆ ಸಿಎಂ ಆಗಲು ಪಿಣರಾಯಿ ವಿಜಯನ್ ಮತ್ತು ಎಡಪ್ಪಾಡಿ ಪಳನಿಸ್ವಾಮಿ ಪ್ರಯತ್ನದಲ್ಲಿದ್ದಾರೆ.

    ಕೇರಳ:
    ಮಂಗಳವಾರ ಕೇರಳದ ಎಲ್ಲ 140 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ವೋಟಿಂಗ್ ನಡೆಯಲಿದೆ. ಒಟ್ಟು 2,74,46,039 ಮತದಾರರಿದ್ದಾರೆ. ಸಿಪಿಐ(ಎಂ) ನೇತೃತ್ವದಲ್ಲಿ ಎಲ್‍ಡಿಎಫ್, ಕಾಂಗ್ರೆಸ್ ನೇತೃತ್ವದಲ್ಲಿ ಯುಡಿಎಫ್, ಮತ್ತು ಬಿಜೆಪಿ ನೇತೃತ್ವದಲ್ಲಿ ಎನ್‍ಡಿಎ ಮಿತ್ರ ಪಕ್ಷಗಳ ಸ್ಪರ್ಧೆ ಮಾಡಿವೆ. ಸಿಪಿಐ (ಎಂ) ಕಳೆದ ಬಾರಿ 91 ಸ್ಥಾನಗಳೊಂದಿಗೆ ಅಧಿಕಾರ ರಚಿಸಿತ್ತು. ಕಾಂಗ್ರೆಸ್ 46 ಸ್ಥಾನಗಳೊಂದಿಗೆ ವಿರೋಧ ಪಕ್ಷದಲ್ಲಿತ್ತು. ಹಾಗಾಗಿ ಸಿಪಿಐ (ಎಂ) ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆದಿದೆ.

    ಕಳೆದ ಬಾರಿ ಒಂದೇ ಸ್ಥಾನ ಗೆದ್ದಿದ್ದ ಬಿಜೆಪಿಯಿಂದ 10 ಸ್ಥಾನ ಗೆಲ್ಲುವ ಪ್ರಯತ್ನಕ್ಕೆ ಮುಂದಾಗಿದೆ. ಈಗಾಗಲೇ ಎಲ್ಲ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿವೆ. ಲೋಕಸಭೆಯಲ್ಲಿ 20 ರ ಪೈಕಿ 18 ಸ್ಥಾನಗಳು ಗೆದ್ದಿದ್ದ ಕಾಂಗ್ರೆಸ್ ನೇತೃತ್ವದ ಯುಡಿಎಫ್, ಈ ಬಾರಿ ಅಧಿಕಾರ ರಚಿಸುವ ಪ್ರಯತ್ನದಲ್ಲಿದೆ. ಸಿ – ವೋಟರ್ ಸಮೀಕ್ಷೆ ಪ್ರಕಾರ 140 ಸದಸ್ಯರ ವಿಧಾನಸಭೆಯಲ್ಲಿ 82 ಸ್ಥಾನಗಳನ್ನು ಪಿಣರಾಯಿ ವಿಜಯನ್ ನೇತೃತ್ವದ ಎಲ್‍ಡಿಎಫ್, ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮತ್ತೊಮ್ಮೆ 56 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ.

    ತಮಿಳುನಾಡು:
    ಒಟ್ಟು 234 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ತಮಿಳುನಾಡಿನ 88,937 ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ. ಒಟ್ಟು 3,998 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದು, ಕರೂರು ಒಂದೇ ಕ್ಷೇತ್ರದಿಂದ 77 ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. 537 ಮತಗಟ್ಟೆಗಳನ್ನು ನಿರ್ಣಾಯಕ ಮತ್ತು 10,813 ದುರ್ಬಲ ಎಂದು ಗುರುತಿಸಲಾಗಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ 23,200 ಸಿಬ್ಬಂದಿ, 16,350 ಗೃಹರಕ್ಷಕರು ಮತ್ತು ಇತರ ರಾಜ್ಯಗಳ ಮಾಜಿ ಸೈನಿಕರು, ತಮಿಳುನಾಡಿನ 12,411 ಗೃಹರಕ್ಷಕರು ಮತ್ತು ರಾಜ್ಯ ಪೊಲೀಸರು 74,162 ಮಂದಿ ಸೇರಿ ಒಟ್ಟು 1,58,263 ಪೊಲೀಸ್ ಮತ್ತು ಪೊಲೀಸ್ ರಹಿತ ಪಡೆಗಳು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

    ಡಿಎಂಕೆ ಜೊತೆಗೆ ಕಾಂಗ್ರೆಸ್, ಎಐಎಡಿಎಂಕೆ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ನಟ ಕಮಲ ಹಾಸನ್ ನೇತೃತ್ವದಲ್ಲಿ 154 ಸ್ಥಾನಗಳಲ್ಲಿ ಎಂಎನ್‍ಎಂ ಸ್ಪರ್ಧೆ ಮಾಡಿದೆ. 2016 ರಲ್ಲಿ 178 ರಲ್ಲಿ ಸ್ಪರ್ಧಿಸಿ 89, 41 ರಲ್ಲಿ ಸ್ಪರ್ಧಿಸಿ 8 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಎಐಎಡಿಎಂಕೆ 136 ಸ್ಥಾನಗಳು ಗೆಲ್ಲುವ ಮೂಲಕ 2016 ರಲ್ಲಿ ಅಧಿಕಾರ ರಚಿಸಿತ್ತು. ಮಾಜಿ ಸಿಎಂಗಳಾದ ಕರುಣಾನಿಧಿ ಮತ್ತು ಜಯಲಲಿತಾ ಇಲ್ಲದೇ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆ ಇದಾಗಿದ್ದು, ಬಿಜೆಪಿ ಈ ಬಾರಿ ಗರಿಷ್ಠ ಸೀಟುಗಳಿಗೆ ಪ್ರಯತ್ನ ಮಾಡಿದೆ.

    ಪುದುಚೇರಿ:
    30 ಸ್ಥಾನಗಳ ಪೈಕಿ ರಂಗಸಾಮಿಯ ಎಐಎನ್‍ಆರ್‍ಸಿ 16, 9 ಬಿಜೆಪಿ ಮತ್ತು ನಾಲ್ಕು ಕ್ಷೇತ್ರಗಳಿಂದ ಎಐಎಡಿಎಂಕೆ ಸ್ಪರ್ಧೆ ಮಾಡಿದೆ. ಕಾಂಗ್ರೆಸ್ 14 ಮತ್ತು ಡಿಎಂಕೆ 13 ಸ್ಪರ್ಧೆ, ಮೂವರು ಸ್ವತಂತ್ರ ಅಭ್ಯರ್ಥಿಗಳಿಗೆ ಬೆಂಬಲ ನೀಡಿದೆ. 10,04,197 ಮತದಾರರನ್ನು ಪುದುಚೇರಿ ಹೊಂದಿದೆ. ಎನ್‍ಡಿಎಗೆ ಸುಮಾರು 17-20 ಸ್ಥಾನಗಳು, ಕಾಂಗ್ರೆಸ್ ನೇತೃತ್ವದ ಎಸ್‍ಡಿಎ ಸುಮಾರು 9-11 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಸಮೀಕ್ಷೆಗಳು ಹೇಳಿವೆ. ಆಡಳಿರೂಢ ಕಾಂಗ್ರೆಸ್ ಸೋಲಲಿದೆ ಎಂದು ಸಮೀಕ್ಷೆಗಳು ಹೇಳಿವೆ

    ಅಸ್ಸಾಂ
    ಮೂರನೇ ಹಂತದ 40 ಕ್ಷೇತ್ರಗಳಲ್ಲಿ 337 ಮಂದಿ ಕಣದಲ್ಲಿದ್ದಾರೆ. ಬಿಜೆಪಿ 20 ಸ್ಥಾನಗಳಲ್ಲಿ, ಅದರ ಮಿತ್ರರಾಷ್ಟ್ರಗಳಾದ ಅಸ್ಸಾಂ ಗಣ ಪರಿಷತ್ 9, ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ 8 ಯುಪಿಪಿಎಲ್ 03 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿವೆ. ಕಾಂಗ್ರೆಸ್ 24, ಮಿತ್ರ ಪಕ್ಷಗಳಾದ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಎಂಟು, ಸಿಪಿಐ (ಎಂ) ಒಂದು ಸೇರಿದ ಉಳಿದ ಮಿತ್ರ ಪಕ್ಷಗಳಿಗೆ ಸ್ಥಾನ ಹಂಚಿಕೆ ಮಾಡಿಕೊಂಡಿವೆ.

    11,401 ಬೂತ್ ಗಳ ನಿರ್ಮಾಣ ಮಾಡಿದ್ದು, 79,19,641 ಮತದಾರರಿದ್ದಾರೆ. ಭದ್ರತೆಗೆ 320 ಸಶಸ್ತ್ರ ಪಡೆಗಳ ನೇಮಕ ಮಾಡಲಾಗಿದೆ. ಹಿರಿಯ ಸಚಿವ ಹಿಮಂತ ಬಿಸ್ವಾ ಶರ್ಮಾ ಸೇರಿ ಐವರು ಸಚಿವರು ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಂಜೀತ್ ಕುಮಾರ್ ದಾಸ್ ಭವಿಷ್ಯವನ್ನು ನಿರ್ಧಾರವಾಗಲಿದೆ. ಸಿಎಂ ರೇಸ್ ನಲ್ಲಿರುವ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ, ಕಾಂಗ್ರೆಸ್, ಬಿಜೆಪಿ ಮತ್ತು ಎಐಯುಡಿಎಫ್ ಸೇರಿ ಒಟ್ಟು 20 ಮಂದಿ ಹಾಲಿ ಶಾಸಕರ ಸ್ಪರ್ಧೆಯಲ್ಲಿದ್ದಾರೆ.

    ಪಶ್ಚಿಮ ಬಂಗಾಳ
    ಮೂರು ಜಿಲ್ಲೆಯ 31 ಕ್ಷೇತ್ರಗಳಿಗೆ ಮತದಾನ ಇಂದು ನಡೆಯಲಿದೆ. 78,52,425 ಮಂದಿ ಮತದಾರರಿಂದ 205 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಹಿಂದುತ್ವದ ಅಲೆ ಇರುವ ಮೂರು ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದೆ. ಇಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್, ಸ್ಮೃತಿ ಇರಾನಿ ಭರ್ಜರಿ ಪ್ರಚಾರ ನಡೆಸಿದ್ದರು. ಖುದ್ದು ಪ್ರಚಾರಕ್ಕೆ ಇಳಿದಿದ್ದ ದೀದಿ, ಎಡ ಪಕ್ಷಗಳಿಂದ ಮನೆ ಮನೆ ಪ್ರಚಾರ ನಡೆಸಿದ್ದರು. ಮೋದಿ ಮತ್ತು ದೀದಿ ನಡುವೆ ನೇರ ಸಂಘರ್ಷಕ್ಕೆ ಮೂರು ಜಿಲ್ಲೆಗಳಲ್ಲಿ ನಡೆಯುವ ಸಾಧ್ಯತೆಯಿದೆ.

  • ಚುನಾವಣಾ ಪೂರ್ವ ಸಮೀಕ್ಷೆ- ಬಂಗಾಳದಲ್ಲಿ ದೀದಿ ಹ್ಯಾಟ್ರಿಕ್, ಕೇರಳದಲ್ಲಿ ಎಲ್‍ಡಿಎಫ್ ಸೇಫ್

    ಚುನಾವಣಾ ಪೂರ್ವ ಸಮೀಕ್ಷೆ- ಬಂಗಾಳದಲ್ಲಿ ದೀದಿ ಹ್ಯಾಟ್ರಿಕ್, ಕೇರಳದಲ್ಲಿ ಎಲ್‍ಡಿಎಫ್ ಸೇಫ್

    – ತಮಿಳುನಾಡು ಡಿಎಂಕೆ, ಅಸ್ಸಾಂನಲ್ಲಿ ಬಿಜೆಪಿಗೆ ಬಿಗ್ ಫೈಟ್
    – ಪುದುಚೇರಿಯಲ್ಲಿ ಎನ್‍ಡಿಎಗೆ ಗೆಲುವಿನ ಸಿಹಿ

    ನವದೆಹಲಿ: ಒಂದು ಕೇಂದ್ರಾಡಳಿಯ ಪ್ರದೇಶ ಪುದುಚೇರಿ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಖಾಸಗಿ ವಾಹಿನಿ ಟೈಮ್ಸ್ ನೌ- ಸಿ ವೋಟರ್ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟಗೊಂಡಿದೆ.

    ಬಿಜೆಪಿಯ ತೀವ್ರ ಸ್ಪರ್ಧೆಯ ನಡುವೆಯೂ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕೇರಳದಲ್ಲಿ ಎಲ್‍ಡಿಎಫ್ ಬಳಿಯಲ್ಲಿಯೇ ಉಳಿಯಲಿದೆ. ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ವಾಪಸ್ ಬರಲಿದೆ. ಸದ್ಯ ಬಿಜೆಪಿ ಸರ್ಕಾರ ಇರೋ ಅಸ್ಸಾಂನಲ್ಲಿ ನೇರ ಹಣಾಹಣಿ ನಡೆಯಲಿದ್ದು, ಪುದುಚೇರಿಯಲ್ಲಿ ಎನ್‍ಡಿಎಗೆ ಗೆಲುವು ಸಿಗಲಿದೆ ಎಂದು ಹೇಳಿದೆ.

    ಬಂಗಾಳದಲ್ಲಿ ಬಿಜೆಪಿಗೆ ಲಾಭ, ಅಧಿಕಾರದಿಂದ ದೂರ:
    ಅಭಿಪ್ರಾಯ ಸಮೀಕ್ಷೆ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ದೀದಿ ಮೂರನೇ ಬಾರಿ ಸರ್ಕಾರ ರಚನೆ ಮಾಡಲಿದ್ದಾರೆ. ಟಿಎಂಸಿ 160 ಕ್ಷೇತ್ರಗಳಲ್ಲಿ ಗೆಲುವು ಕಾಣಬಹುದು. 2016ರಲ್ಲಿ ಟಿಎಂಸಿ 211 ಕ್ಷೇತ್ರಗಳಲ್ಲಿ ಜಯ ದಾಖಲಿಸಿತ್ತು. ಈ ಬಾರಿ 200 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ ಅಂತ ಕಮಲ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2016ರಲ್ಲಿ ಮೂರು ಕ್ಷೇತ್ರಗಳಲ್ಲಿದ್ದ ಬಿಜೆಪಿ ಈ ಬಾರಿ 100ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಕಮಲ ಧ್ವಜ ಹಾರಿಸಲಿದೆ ಎಂದು ಪೋಲ್ ನಲ್ಲಿ ಹೇಳಲಾಗಿದೆ. ಟಿಎಂಸಿ ಗಿಂತ ಬಿಜೆಪಿ ಶೇಕಡಾವಾರು ಮತಗಳಿಕೆ ಹೆಚ್ಚಿರಲಿದೆ.

    ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ದೊಡ್ಡ ಸೋಲು ಕಾಣುವ ಸಾಧ್ಯತೆ ಇದೆ ಅನ್ನೋದು ಬಂಗಾಳ ಜನತೆಯ ಅಭಿಪ್ರಾಯ. ಕಾಂಗ್ರೆಸ್ ಮೈತ್ರಿ ಸುಮಾರು 26 ಕ್ಷೇತ್ರಗಳಲ್ಲಿ ಮಾತ್ರ ವಿಜಯದ ನಗೆ ಬೀರುವ ಸಾಧ್ಯತೆಗಳಿವೆ. ಶೇ.5ರಷ್ಟು ಜನರು ಮಮತಾ ಬ್ಯಾನರ್ಜಿ ನೆಚ್ಚಿನ ನಾಯಕಿ ಎಂದು ಒಪ್ಪಿಕೊಂಡಿದ್ದು, ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಎರಡನೇ ಸ್ಥಾನದಲ್ಲಿದ್ದಾರೆ.

    ತಮಿಳುನಾಡಿನಲ್ಲಿ ಕಾಂಗ್ರೆಸ್-ಡಿಎಂಕೆ:
    ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್ ಜೊತೆಯಾಗಿ ಚುನಾವಣೆ ಎದುರಿಸುತ್ತಿದ್ದು, ಸರ್ಕಾರ ರಚಿಸಲಿದೆ ಎಂದು ಅಭಿಪ್ರಾಯ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ. 234 ವಿಧಾನಸಭಾ ಕ್ಷೇತ್ರಗಳಲ್ಲಿ 177ರಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟ ಗೆಲ್ಲಲಿದೆ. ಸದ್ಯ ಅಧಿಕಾರದಲ್ಲಿರುವ ಎಐಎಎಂಡಿಕೆ ಬಿಜೆಪಿ ಜೊತೆಯಲ್ಲಿ ಚುನಾವಣೆ ಎದುರಿಸಿದ್ದು, ಮತಗಳಿಕೆಯಲ್ಲಿ ದೊಡ್ಡ ಪೆಟ್ಟು ಬೀಳಲಿದೆ.

    ಕಮಲ್ ಹಾಸನ್ ನೇತೃತ್ವದ ಎಂಎನ್‍ಎಂ ಮತ್ತು ಟಿಟಿವಿ ದಿನಕರನ್ ಅವರ ಎಎಂಎಂಕೆ ತಲಾ ಮೂರು ಕ್ಷೇತ್ರಗಳಲ್ಲಿ ಗೆಲುವು ಕಾಣೋದು ಕಷ್ಟವಾಗಲಿದೆ. ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ತಮಿಳುನಾಡು ಜನರ ಮೊದಲ ಆಯ್ಕೆ. ಶೇ.43.1ರಷ್ಟು ಜನ ಸ್ಟಾಲಿನ್ ತಮ್ಮ ನಾಯಕ ಎಂದು ಒಪ್ಪಿಕೊಂಡಿದ್ರೆ, ಶೇ.29.7 ಜನರ ಆಯ್ಕೆ ಸಿಎಂ ಪಳನಿಸ್ವಾಮಿ ಆಗಿದ್ದಾರೆ.

    ಅಸ್ಸಾಂನಲ್ಲಿ ಎನ್‍ಡಿಎ-ಯುಪಿಎ ನಡುವೆ ಸಮಬಲದ ಹೋರಾಟ:
    ಸಮೀಕ್ಷೆ ಪ್ರಕಾರ ಬಿಜೆಪಿ ಸರ್ಕಾರ ಇರೋ ಅಸ್ಸಾಂನಲ್ಲಿ ಎನ್‍ಡಿಎ ಮತ್ತು ಯುಪಿಎ ನಡುವೆ ಸಮಬಲದ ಹೋರಾಟ ನಡೆಯಲಿದೆ. ಸಮೀಕ್ಷೆಯ ಪ್ರಕಾರ 126 ವಿಧಾನಸಭಾ ಕ್ಷೇತ್ರಗಳಲ್ಲಿ ಎನ್‍ಡಿಎ 69 ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ 56ರಲ್ಲಿ ಗೆಲುವು ಕಾಣಲಿದೆ. ಈ ಬಾರಿ ಬದ್ರುದ್ದೀನ್ ಅಜ್ಮಲ್ ಅವರ ಎಐಯುಡಿಎಫ್ ಮತ್ತು ಬೋಡೋ ಪೀಪಲ್ಸ್ ಫ್ರಂಟ್ ಸೇರಿದಂತೆ ಮೂರು ಎಡಪಕ್ಷಗಳೊಂದಿಗೆ ಮೈತ್ರಿ ರಚಿಸಿಕೊಂಡು ಚುನಾವಣಾ ಅಖಾಡಕ್ಕೆ ಧುಮುಕಿದೆ.

    ಇತ್ತ ಎನ್‍ಡಿಎ ಕೂಟದ ಬಿಜೆಪಿ ಜೊತೆ ಅಸ್ಸಾಂ ಗಣ್ ಪರಿಷದ್ ಕೈ ಜೋಡಿಸಿದೆ. 2016ರಲ್ಲಿ ಎನ್‍ಡಿಎ 86 ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರ ರಚನೆ ಮಾಡಿತ್ತು. ಇತ್ತ ಯುಪಿಎ 26ರಲ್ಲಿ ಜಯ ತನ್ನದಾಗಿಸಿಕೊಂಡಿತ್ತು. ಸಿಎಂ ಸರ್ಬಾನಂದ್ ಸೋನಾವಾಲಾ ಬಿಜೆಪಿ ಸಿಎಂ ಅಭ್ಯರ್ಥಿಯಾಗಿದ್ದು, ಅಸ್ಸಾಂನ ಶೇ.46ರಷ್ಟು ಜನ ತಮ್ಮ ನಾಯಕ ಎಂದು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್‍ನ ಗೌರವ್ ಗೋಗೊಯಿ ಅವರನ್ನ ಶೇ.25ರಷ್ಟು ಜನರ ಮೆಚ್ಚುಗೆ ಪಡೆದಿದ್ದಾರೆ.

    ಕೇರಳದಲ್ಲಿ ಬಹುಮತದೊಂದಿಗೆ ವಿಜಯನ್ ಸರ್ಕಾರ:
    ಆಡಳಿತದಲ್ಲಿರುವ ಪಿಣರಾಯಿ ವಿಜಯನ್ ನೇತೃತ್ವದ ಎಲ್‍ಡಿಎಫ್ ಸರ್ಕಾರ ಮತ್ತೊಮ್ಮೆ ಅಧಿಕಾರ ಬರುವ ಸಾಧ್ಯತೆಗಳಿವೆ ಅನ್ನೋದು ಸಮೀಕ್ಷೆ ಹೇಳಿದೆ. ಪಿಣರಾಯಿ ವಿಜಯನ್ ನೇತೃತ್ವದ ಘಟಬಂಧನ 140ರಲ್ಲಿ 77 ಕ್ಷೇತ್ರಗಳಲ್ಲಿ ವಿಜಯ ಪತಾಕೆ ಹಾರಿಸಲಿದೆ. 2016ರಲ್ಲಿ ಪಿಣರಾಯಿ ಸರ್ಕಾರ 91ರ ಶಾಸಕರೊಂದಿಗೆ ಸರ್ಕಾರ ರಚನೆ ಮಾಡಿತ್ತು. ಆಡಳಿತ ವಿರೋಧ ಅಲೆಯ ನಡುವೆಯೂ ಎಲ್‍ಡಿಎಫ್ ಮತ್ತಷ್ಟು ಕ್ಷೇತ್ರ ಗೆದ್ದು ಸರ್ಕಾರ ರಚನೆ ಮಾಡಲಿದೆ ಸಮೀಕ್ಷೆ ಹೇಳಿದೆ.

    2016ರಲ್ಲಿ 47 ಸೀಟ್ ಗೆದ್ದಿದ್ದ ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಈ ಬಾರಿ 62 ಕ್ಷೇತ್ರಗಳನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಲಿದೆ. 2016ರಂತೆ ಈ ಬಾರಿಯೂ ಬಿಜೆಪಿ ಕೇವಲ ಒಂದು ಕ್ಷೇತ್ರದಲ್ಲಿ ಗೆಲುವು ದಾಖಲಿಸಬಹುದು. ಶೇ.39.3ರಷ್ಟು ಜನ ಸಿಎಂ ವಿಜಯನ್ ಅವರನ್ನ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಲು ಇಷ್ಟಪಡುತ್ತಾರೆ. ಮಾಜಿ ಸಿಎಂ ಉಮ್ಮನ್ ಚಾಂಡಿ ಎರಡನೇ ಸ್ಥಾನದಲ್ಲಿದ್ದಾರೆ. ಚಾಂಡಿ ಅವರಿಗೆ ಶೇ.26.5 ಜನರು ಸಮೀಕ್ಷೆಯಲ್ಲಿ ಮತ ಹಾಕಿದ್ದಾರೆ.

    ಪುದುಚೇರಿಯಲ್ಲಿ ಮಾತ್ರ ಎನ್‍ಡಿಎಗೆ ಗುಡ್ ನ್ಯೂಸ್:
    ಪುದುಚೇರಿಯ 30 ಸದಸ್ಯರ ಪೈಕಿ 21 ಎನ್‍ಡಿಎ ಕೂಟದ ಅಭ್ಯರ್ಥಿಗಳು ಗೆಲ್ಲುತ್ತಾರೆ. ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫಲವಾಗಿದ್ದ ಕಾಂಗ್ರೆಸ್ ಮತ್ತು ಡಿಎಂಕೆ ಜೊತೆಯಾಗಿ ಸ್ಪರ್ಧೆ ಮಾಡಿದ್ದು, 9 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಎಐಎನ್‍ಆರ್‍ಸಿಯ ಎನ್.ರಂಗಸ್ವಾಮಿ ಅವರನ್ನು ಮುಖ್ಯಮಂತ್ರಿಗಳನ್ನಾಗಿ ನೋಡಲು ಶೇ.50ರಷ್ಟು ಜನ ಇಷ್ಟಪಡುತ್ತಾರೆ. ಸದ್ಯ ಪುದುಚೇರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆ.

    ಮಾರ್ಚ್ 27ರಿಂದ ಮತದಾನ ಆರಂಭ:
    ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಅಸ್ಸಾಂನಲ್ಲಿ ಮಾರ್ಚ್ 27ರಿಂದ ಏಪ್ರಿಲ್ 6ರವರಗೆ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಪಶ್ಚಿಮ ಬಂಗಾಳದ 294 ಕ್ಷೇತ್ರಗಳಿಗೆ ಎಂಟು ಹಂತದಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27 ಮೊದಲ ಹಂತದ ಮತದಾನ ನಡೆಯಲಿದೆ. ತದನಂತರ ಏಪ್ರಿಲ್ 1, 6, 10, 17, 22, 26, 29 ಮತದಾನ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.

  • ಪುದುಚೇರಿಯ ಕಾಂಗ್ರೆಸ್ ಸರ್ಕಾರ ಪತನ – ಸಿಎಂ ರಾಜೀನಾಮೆ

    ಪುದುಚೇರಿಯ ಕಾಂಗ್ರೆಸ್ ಸರ್ಕಾರ ಪತನ – ಸಿಎಂ ರಾಜೀನಾಮೆ

    ಪುದುಚೇರಿ: ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾದ ಹಿನ್ನೆಲೆ ಪುದುಚೇರಿಯ ಕಾಂಗ್ರೆಸ್ ಸರ್ಕಾರ ಪತನವಾಗಿದೆ. ಸಿಎಂ ವಿ.ನಾರಾಯಣಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಹ ನೀಡಿದ್ದಾರೆ.

    ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡುವಲ್ಲಿ ನಾರಾಯಣಸ್ವಾಮಿ ಸರ್ಕಾರ ವಿಫಲವಾಯ್ತು. ಕಾಂಗ್ರೆಸ್‍ನ 9 ಶಾಸಕರು, ಡಿಎಂಕೆಯ ಮೂವರು ಮತ್ತು ಪಕ್ಷೇತರ ಓರ್ವ ಶಾಸಕ ಸೇರಿದಂತೆ ಸರ್ಕಾರದ ಪರವಾಗಿದ್ದರು. ರಾತ್ರಿ ಡಿಎಂಕೆಯ ಓರ್ವ ಶಾಸಕ ರಾಜೀನಾಮೆ ನೀಡಿದ್ದರಿಂದ ಕಾಂಗ್ರೆಸ್‍ಗೆ ಕೇವಲ 12 ಶಾಸಕರ ಬೆಂಬಲ ಸಿಕ್ಕಿತ್ತು. ಆದ್ರೆ ಬಹುಮತಕ್ಕೆ 14 ಮತಗಳು ಬೇಕಿತ್ತು.

    33 ಸದಸ್ಯರ ಪುದುಚೇರಿಯ ವಿಧಾನಸಭೆಯಲ್ಲಿ ಮೂವರು ಕೇಂದ್ರ ಸರ್ಕಾರದಿಂದ ನೇಮಕ ಆಗಿರುತ್ತಾರೆ. ಇನ್ನುಳಿದ 30 ಸದಸ್ಯರು ಜನರಿಂದ ನೇರವಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿರುತ್ತಾರೆ. 2016ರ ಚುನಾವಣೆಯಲ್ಲಿ ಕಾಂಗ್ರೆಸ್ 15 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಓರ್ವ ಶಾಸಕರನ್ನ ಕಾಂಗ್ರೆಸ್ ಉಚ್ಛಾಟಿತಗೊಳಿಸಿದ್ರೆ, ಐವರು ಶಾಸಕರು ರಾಜೀನಾಮೆ ನೀಡಿದ್ದಾರೆ.

    ಡಿಎಂಕೆಯ ಮೂವರು ಶಾಸಕರು ಕಾಂಗ್ರೆಸ್‍ಗೆ ಬೆಂಬಲ ನೀಡಿದ್ದರು. ಆದ್ರೆ ಭಾನುವಾರದ ನಡೆದ ಅಚ್ಚರಿ ಬೆಳವಣಿಗೆಯಲ್ಲಿ ಡಿಎಂಕೆ ಓರ್ವ ಶಾಸಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕೈ ನಾಯಕರಿಗೆ ಶಾಕ್ ನೀಡಿದರು. ಭಾನುವಾರದ ವೇಳೆ ಕಾಂಗ್ರೆಸ್ ಬಳಿ ಕೇವಲ 12 ಶಾಸಕರ ಸಮರ್ಥನೆ ಇತ್ತು. ಆರು ಶಾಸಕರ ರಾಜೀನಾಮೆ ಮತ್ತು ಒಬ್ಬರ ಅನರ್ಹತೆ ಹಿನ್ನೆಲೆ ಪುದುಚೇರಿಯ ವಿಧಾನಸಭಾ ಸದಸ್ಯರ ಸಂಖ್ಯೆ 26ಕ್ಕೆ ತಲುಪಿತ್ತು.

    2016ರ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳಲ್ಲಿ ಜಯಗಳಿಸಿದ್ದ ವಿಪಕ್ಷ ಆಲ್ ಇಂಡಿಯಾ ಎನ್.ಆರ್.ಕಾಂಗ್ರೆಸ್ ಓರ್ವ ಶಾಸಕ ಅನರ್ಹಗೊಂಡಿದ್ದರು. ಈ ಕ್ಷೇತ್ರದ ಉಪ ಚುನಾವಣೆಯನ್ನ ಡಿಎಂಕೆ ಗೆದ್ದು ಕೊಂಡಿತ್ತು.

  • ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಕಿರಣ್ ಬೇಡಿ ವಜಾ

    ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಕಿರಣ್ ಬೇಡಿ ವಜಾ

    – ಪುದುಚೇರಿ ಜನರ ಗೆಲುವು ಅಂದ್ರು ದಿನೇಶ್ ಗುಂಡೂರಾವ್

    ಪುದುಚೇರಿ: ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ರಾಷ್ಟ್ರಪತಿ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.

    ಕಿರಣ್ ಬೇಡಿ ತೆಲಂಗಾಣದ ಲೆಫ್ಟಿನೆಂಟ್ ಗವರ್ನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಅವರನ್ನು ಈ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ರಾಷ್ಟ್ರಪತಿ ಭವನದಿಂದ ಈ ಬಗ್ಗೆ ಅಧಿಕೃತ ಆದೇಶ ಪ್ರಕಟಗೊಂಡಿದ್ದು, ಹೊಸ ರಾಜ್ಯಪಾಲರ ನೇಮಕವಾಗುವವರೆಗೂ ತೆಲಂಗಾಣದ ರಾಜ್ಯಪಾಲರಾದ ತಮಿಳುಸಾಯಿ ಸೌಂದರರಾಜನ್ ಅವರಿಗೆ ಪುದುಚೆರಿಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ.

    ಪುದುಚೇರಿಯ ವಿಧಾನಸಭೆ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇದ್ದಾಗ ಕೇಂದ್ರ ಸರ್ಕಾರ ರಾಜ್ಯಪಾಲರ ಬದಲಾವಣೆ ಮಾಡಿರುವುದು ಕುತೂಹಲ ಮೂಡಿಸಿದೆ. ಪುದುಚೆರಿಯ ಅಭಿವೃದ್ಧಿಗೆ ಕೇಂದ್ರದ ಸೂಚನೆಯಂತೆ ಕಿರಣ್ ಬೇಡಿ ಅಡ್ಡಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಈ ಹಿಂದೆ ಆರೋಪ ಮಾಡಿತ್ತು.

    ಇದೀಗ ಏಕಾಏಕಿ ಪುದುಚೇರಿಯ ರಾಜ್ಯಪಾಲರ ಹುದ್ದೆಯಿಂದ ವಜಾಮಾಡಲಾಗಿದ್ದು, ಕಿರಣ್ ಬೇಡಿ ಅವರನ್ನು ತಡೆಯಲಾಗಿದೆ. ಹೊಸ ರಾಜ್ಯಪಾಲರ ನೇಮಕವಾಗುವವರೆಗೆ ತೆಲಂಗಾಣದ ರಾಜ್ಯಪಾಲರಾದ ತಮಿಳುಸಾಯಿ ಸೌಂದರರಾಜನ್ ಅವರಿಗೆ ಪುದುಚೆರಿಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ ಎಂದು ರಾಷ್ಟ್ರಪತಿ ಭವನದಿಂದ ಅಧಿಕೃತ ಹೇಳಿಕೆ ಪ್ರಕಟವಾಗಿದೆ.

    ಕಳೆದ ತಿಂಗಳು ಪುದುಚೆರಿಯಲ್ಲಿ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದಿದ್ದ ಇಬ್ಬರು ಶಾಸಕರು ಕಿರಣ್ ಬೇಡಿ ಅವರನ್ನು ರಾಜ್ಯಪಾಲರ ಹುದ್ದೆಯಿಂದ ವಜಾಗೊಳಿಸಬೇಕೆಂದು ಬೇಡಿಕೆ ಇಟ್ಟಿದ್ದರಂತೆ. ಈ ಎಲ್ಲಾ ಹಾಗು- ಹೋಗುಗಳ ನಡುವೆ ಇದೀಗ ಕಿರಣ್ ಬೇಡಿ ಪದಚ್ಯುತಿ ಕೂತುಹಲ ಕೆರಳಿಸಿದೆ.

    ಪುದುಚೇರಿ ಜನರಿಗೆ ಗೆಲುವು:
    ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ವಜಾಗೊಳಿಸಿರುವುದು ಪುದುಚೇರಿ ಜನರ ಗೆಲುವು ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

    ಭಾರತದ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಲೆಫ್ಟಿನೆಂಟ್ ಜನರಲ್ ಆಗಿದ್ದಾರೆ. ಅವರು ಪುದುಚೇರಿಯಲ್ಲಿ ಕಾಂಗ್ರೆಸ್ ಸರ್ಕಾರ ಸರಿಯಾಗಿ ಕಾರ್ಯನಿರ್ವಹಿಸಲು ಬಿಟ್ಟಿರಲಿಲ್ಲ. ಬಿಜೆಪಿ/ಆರ್‍ಎಸ್‍ಎಸ್ ಕಚೇರಿಯೇ ಕಿರಣ್ ಬೇಡಿ ಕಚೇರಿಯಾಗಿತ್ತು ಎಂದು ದಿನೇಶ್ ಬರೆದುಕೊಂಡಿದ್ದಾರೆ.

  • ಮತ್ತೊಂದು ವಿಕೆಟ್‌ ಪತನ – 4 ಶಾಸಕರ ರಾಜೀನಾಮೆ, ಪುದುಚೇರಿ ಕೈ ಸರ್ಕಾರಕ್ಕೆ ಸಂಕಷ್ಟ

    ಮತ್ತೊಂದು ವಿಕೆಟ್‌ ಪತನ – 4 ಶಾಸಕರ ರಾಜೀನಾಮೆ, ಪುದುಚೇರಿ ಕೈ ಸರ್ಕಾರಕ್ಕೆ ಸಂಕಷ್ಟ

    ಪುದುಚೇರಿ: ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ದಿಢೀರ್‌ ರಾಜಕೀಯ ಬೆಳವಣಿಗೆ ನಡೆಯುತ್ತಿದ್ದು ಪುದುಚೇರಿ ಕಾಂಗ್ರೆಸ್‌ ಸರ್ಕಾರದ ಮತ್ತೊಬ್ಬ ಶಾಸಕ ರಾಜೀನಾಮೆ ನೀಡಿದ್ದು, ರಾಜೀನಾಮೆ ನೀಡಿದ ಶಾಸಕರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

    ಬುಧವಾರ ಕಾಂಗ್ರೆಸ್‌ ಪ್ರಚಾರ ಕಾರ್ಯಕ್ರಮಕ್ಕೆ ರಾಹುಲ್‌ ಗಾಂಧಿ ಆಗಮಿಸಿ ಚಾಲನೆ ನೀಡುವ  ಮುನ್ನ ದಿನವೇ ಶಾಸಕರು ರಾಜೀನಾಮೆ ನೀಡಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಸರ್ಕಾರಕ್ಕೆ ಶಾಕ್‌ ನೀಡಿದ್ದಾರೆ.

    ಕಾಮರಾಜ ನಗರ‌ ಕ್ಷೇತ್ರದ ಶಾಸಕ ಜಾನ್‌ ಕುಮಾರ್‌ ಇಂದು ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದಾರೆ.

    ಸೋಮವಾರ ಶಾಸಕ ಮಲ್ಲಾಡಿ ಕೃಷ್ಣ ರಾವ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಮುಖ್ಯಮಂತ್ರಿ ವಿ. ನರಸಿಂಹಸ್ವಾಮಿ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದ ಇವರು, ಇತ್ತೀಚಿಗಷ್ಟೇ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.

    ಇದಕ್ಕೂ ಮೊದಲು ಸಚಿವ ಎ ನಮಸ್ಸಿವಾಯಮ್ ಮತ್ತು ಕಾಂಗ್ರೆಸ್ ಶಾಸಕ ಇ ಥಿಪ್ಪಾಇಂಥನ್ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ಶಾಸಕರು ನೀಡಿದ ರಾಜೀನಾಮೆಯಿಂದ ಚುನಾವಣೆ ಹೊಸ್ತಿಲಿನಲ್ಲೇ ಸರ್ಕಾರಕ್ಕೆ ಮತ್ತೊಂದು ಆಘಾತ ನೀಡಿದಂತಾಗಿದೆ.

    ಸದ್ಯ ಸರ್ಕಾರಕ್ಕೆ ಕಾಂಗ್ರೆಸ್ 10, ಡಿಎಂಕೆ 3 ಮತ್ತು ಒಬ್ಬ ಪಕ್ಷೇತರ ಶಾಸಕನ ಬೆಂಬಲವಿದೆ.  ವಿರೋಧ ಪಕ್ಷವಾಗಿ ಎನ್ ಆರ್ ಕಾಂಗ್ರೆಸ್ 7, ಎಐಎಡಿಎಂಕೆ 4 ಮತ್ತು ಬಿಜೆಪಿಯ ಮೂವರು ನಾಮನಿರ್ದೇಶಿತ ಶಾಸಕರಿದ್ದು, 14 ಸದಸ್ಯರ ಬಲವನ್ನು ಹೊಂದಿದೆ.

    2016ರಲ್ಲಿ ನಡೆದ ಪುದುಚೇರಿ ವಿಧಾನಸಭಾ ಚುನಾವಣೆ ನಂತರದಲ್ಲಿ ಕಾಂಗ್ರೆಸ್ 15 ಶಾಸಕರ ಪೈಕಿ ಜನವರಿ 25ರಂದು ಶಾಸಕ ಎ. ನಮಸ್ಸಿವಾಯಮ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂದೇ ಮತ್ತೊಬ್ಬ ಕಾಂಗ್ರೆಸ್ ಶಾಸಕ ಇ ಥಿಪ್ಪಾಇಂಥನ್ ಕೂಡಾ ಶಾಸಕ ಸ್ಥಾನವನ್ನು ತೊರೆದಿದ್ದರು. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕೈ ಶಾಸಕ ಧನವೇಲುರನ್ನು ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಅನರ್ಹಗೊಳಿಸಿ ಸ್ಪೀಕರ್ ಆದೇಶ ಹೊರಡಿಸಿದ್ದರು.

  • ಅ.23ರಿಂದ ಬೆಂಗಳೂರಿನಿಂದ ಪುದುಚೇರಿಗೆ KSRTC ಬಸ್ ಸಂಚಾರ

    ಅ.23ರಿಂದ ಬೆಂಗಳೂರಿನಿಂದ ಪುದುಚೇರಿಗೆ KSRTC ಬಸ್ ಸಂಚಾರ

    ಬೆಂಗಳೂರು: ಅಕ್ಟೋಬರ್ 23ರಿಂದ ಬೆಂಗಳೂರಿನಿಂದ ಪುದುಚೇರಿಗೆ ಸಾರಿಗೆ ಬಸ್ ಗಳು ಸಂಚಾರ ಆರಂಭ ಮಾಡಲಿವೆ. ಅನ್‍ಲಾಕ್ ಬಳಿಕ ಸಾರಿಗೆ ಸಂಸ್ಥೆ ಹಂತ ಹಂತವಾಗಿ ಸಾರಿಗೆ ಬಸ್ ಸಂಚಾರ ಆರಂಭಿಸುತ್ತಿದೆ.

    ಕೊರೊನಾ ಮತ್ತು ಲಾಕ್‍ಡೌನ್ ಬಳಿಕ ಅಂತರಾಜ್ಯ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಇದೀಗ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಬಸ್ ಆರಂಭಗೊಂಡಿವೆ. ಜನದಟ್ಟನೆಗೆ ಅನುಗುಣವಾಗಿ ಬಸ್ ಗಳನ್ನು ಬಿಡಲಾಗುವುದು ಎಂದು ಸಾರಿಗೆ ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ. ಪ್ರಯಾಣಿಕರು ಮುಂಗಡ ಟಿಕೆಟ್ ಗಳನ್ನು WWW.KSRTC.in ವೆಬ್ ಸೈಟ್ ಮೂಲಕ ಕಾಯ್ದಿರಿಸಬಹುದು. ಎಲ್ಲ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಕೆಎಸ್‍ಆರ್ ಟಿಸಿ ಸೂಚಿಸಿದೆ.

    ಹೊಸ ನೇಮಕ ಇಲ್ಲ: ಕೋವಿಡ್-19 ಹಿನ್ನೆಲೆ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನ ಕೆಎಸ್‍ಆರ್ ಟಿಸಿ ರದ್ದುಗೊಳಿಸಿದೆ. ಕೋವಿಡ್ ನಿಂದಾಗಿ ಸಾರಿಗೆ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಮುಂದಿನ ಆದೇಶದವರೆಗೆ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳ ನೇಮಕಾತಿ ರದ್ದು ಮಾಡಲಾಗಿದೆ.

  • ಸೋನಿಯಾ ಗಾಂಧಿ ಹುಟ್ಟುಹಬ್ಬ- ಈರುಳ್ಳಿ ಉಡುಗೊರೆ ನೀಡಿದ ಪುದುಚೇರಿ ಸಿಎಂ

    ಸೋನಿಯಾ ಗಾಂಧಿ ಹುಟ್ಟುಹಬ್ಬ- ಈರುಳ್ಳಿ ಉಡುಗೊರೆ ನೀಡಿದ ಪುದುಚೇರಿ ಸಿಎಂ

    ಪುದುಚೇರಿ: ಈರುಳ್ಳಿ ಬೆಲೆ ಹೆಚ್ಚಳದ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ವಿನೂತನ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ.

    ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಹುಟ್ಟುಹಬ್ಬವನ್ನು ಕಾರ್ಯಕರ್ತರು ಆಚರಿಸಿದ್ದಾರೆ. ಆದರೆ ನಾರಾಯಣಸ್ವಾಮಿಯವರು ಸೋನಿಯಾ ಅವರ ಹುಟ್ಟುಹಬ್ಬದ ಅಂಗವಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮಹಿಳೆಯರಿಗೆ ಈರುಳ್ಳಿ ಹಂಚಿದ್ದಾರೆ.

    ಪುದುಚೇರಿಯ ಕಾಂಗ್ರೆಸ್ ಕೇಂದ್ರ ಕಚೇರಿ ಬಳಿ ಸೋನಿಯಾ ಗಾಂಧಿಯವರ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಪಕ್ಷದ ಮುಖ್ಯಸ್ಥ ನಮಶಿವಾಯಂ ಅವರು ನಾರಾಯಣಸ್ವಾಮಿಯವರೊಂದಿಗೆ ಮಹಿಳೆಯರಿಗೆ ಈರುಳ್ಳಿ ಹಂಚಿದ್ದಾರೆ. ಈರುಳ್ಳಿ ಬೆಲೆ ಹೆಚ್ಚಾದ ಹಿನ್ನೆಲೆ ಸೋನಿಯಾ ಗಾಂಧಿಯವರ ಹುಟ್ಟುಹಬ್ಬದ ಅಂಗವಾಗಿ ಮಹಿಳಾ ಕಾರ್ಯಕರ್ತರಿಗೆ ಸಿಎಂ ಈರುಳ್ಳಿ ಉಡುಗೊರೆ ನೀಡಿ, ಪ್ರತಿಭಟಿಸಿದ್ದಾರೆ.

    ಈರುಳ್ಳಿ ಬೆಲೆ ಹೆಚ್ಚಳವಾಗಿರುವ ಕುರಿತು ನಿನ್ನೆಯಷ್ಟೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದು, ಈರುಳ್ಳಿ ಬೆಲೆ ಗಗನಕ್ಕೆ ತಲುಪುತ್ತಿದ್ದರೂ ಕೇಂದ್ರ ಸರ್ಕಾರ ಇನ್ನೂ ನಿದ್ರಾವಸ್ಥೆಯಲ್ಲಿದೆ. ಈರುಳ್ಳಿ ಪ್ರತಿ ಕೆ.ಜಿ.ಗೆ 200 ರೂ., ಪೆಟ್ರೋಲ್ ಬೆಲೆ ಪ್ರತಿ ಲೀಟರಿಗೆ 75 ರೂ.ಗೆ ತಲುಪಿದೆ. ಇಷ್ಟಾದರೂ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದು ವಾಗ್ದಾಳಿ ನಡೆರಸಿದ್ದರು.

    ಶನಿವಾರ ಗೋವಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ತೋಟಗಾರಿಕಾ ಮಂಡಳಿ ಬಳಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದರು. ಈರುಳ್ಳಿ ಬೆಲೆ ಕಡಿಮೆ ಮಾಡಬೇಕು ಇಲ್ಲವೇ ಸರ್ಕಾರ ಸಬ್ಸೀಡಿ ಘೋಷಿಸಬೇಕು. ಆಹಾರ ತಯಾರಿಸಲು ಈರುಳ್ಳಿ ಅಗತ್ಯವಾಗಿದ್ದು, ಬೆಲೆ ಹೆಚ್ಚಾಗಿದ್ದರಿಂದ ಮಹಿಳೆಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲೇಬೇಕು ಎಂದು ಒತ್ತಾಯಿಸಿದ್ದರು.

    https://www.facebook.com/publictv/videos/804055176712336/