Tag: ಪಿಗ್ಮಿ

  • ಚೀಟಿ ಹೆಸರಲ್ಲಿ ಕೋಟ್ಯಂತರ ರೂ. ದೋಖಾ – ಕಚೇರಿ ಮುಚ್ಚಿಕೊಂಡು ವಂಚಕ ಪರಾರಿ

    ಚೀಟಿ ಹೆಸರಲ್ಲಿ ಕೋಟ್ಯಂತರ ರೂ. ದೋಖಾ – ಕಚೇರಿ ಮುಚ್ಚಿಕೊಂಡು ವಂಚಕ ಪರಾರಿ

    ಶಿವಮೊಗ್ಗ: ಮೋಸ ಹೋಗುವ ಜನ ಇರುವವರೆಗೆ ಮೋಸ ಮಾಡೋ ಜನ ಇದ್ದೇ ಇರುತ್ತಾರೆ. ಇದಕ್ಕೆ ಉದಾಹರಣೆ ಎನ್ನುವಂತೆ ಶಿವಮೊಗ್ಗದಲ್ಲಿ ಚೀಟಿ ಹೆಸರಿನಲ್ಲಿ ವಂಚಕನೋರ್ವ ಕೋಟ್ಯಂತರ ರೂ. ಹಣ ದೋಚಿಕೊಂಡು ಜನರಿಗೆ ಪಂಗನಾಮ ಹಾಕಿದ್ದಾನೆ.

    ನಗರದ ಬಿ.ಎಚ್ ರಸ್ತೆಯಲ್ಲಿ ತುಂಗಾ ಪತ್ತಿನ ಸಹಕಾರ ಸಂಘದ ಹೆಸರಿನಲ್ಲಿ ಅದರ ಸಂಸ್ಥಾಪಕ ಶಂಕರ್ ನಾಗ್ ನೂರಾರು ಮಂದಿಯಿಂದ ಚೀಟಿ ಹಾಗು ಪಿಗ್ಮಿ ಕಲೆಕ್ಟ್ ಮಾಡುತ್ತಿದ್ದನು. ಈತನನ್ನು ನಂಬಿ ನೂರಾರು ಮಂದಿ ಅಮಾಯಕರು, ಬಡ ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಕಷ್ಟಪಟ್ಟು ದುಡಿದಿದ್ದ ಹಣವನ್ನು ಹೂಡಿಕೆ ಮಾಡಿದ್ದರು. ಆದರೆ ಇದೀಗ ಹಣ ವಸೂಲಿ ಮಾಡಿಕೊಂಡ ಶಂಕರ್ ನಾಗ್ ಕಳೆದೊಂದು ವಾರದಿಂದ ಕಚೇರಿಯ ಬಾಗಿಲು ಮುಚ್ಚಿಕೊಂಡು ಎಸ್ಕೇಪ್ ಆಗಿದ್ದಾನೆ.

    ಸುಮಾರು 4 ಕೋಟಿಗೂ ಅಧಿಕ ಹಣದೊಂದಿಗೆ ಜಾಗ ಖಾಲಿ ಮಾಡಿದ್ದಾನೆ. ಶಂಕರ್ ನಾಗ್ ಬಳಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾದ ನೂರಾರು ಮಂದಿ ಆತಂಕಕ್ಕೊಳಗಾಗಿದ್ದು, ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ತಮ್ಮ ಹಣದೊಂದಿಗೆ ನಾಪತ್ತೆಯಾಗಿರುವ ಶಂಕರ್ ನಾಗ್‍ನನ್ನು ಪತ್ತೆ ಹಚ್ಚಿ, ಹಣವನ್ನು ವಾಪಸ್ ಕೊಡಿಸುವಂತೆ ಪೊಲೀಸರಲ್ಲಿ ಹಣಹೂಡಿದವರು ಮನವಿ ಮಾಡಿಕೊಂಡಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ವಂಚಕನ ಪತ್ತೆಗೆ ಬಲೆ ಬೀಸಿದ್ದಾರೆ.

  • ಐಎಂಎ ಮಾದರಿಯಲ್ಲೇ ಮೈಸೂರಿನಲ್ಲೂ ಗ್ರಾಹಕರಿಗೆ ವಂಚನೆ

    ಐಎಂಎ ಮಾದರಿಯಲ್ಲೇ ಮೈಸೂರಿನಲ್ಲೂ ಗ್ರಾಹಕರಿಗೆ ವಂಚನೆ

    ಮೈಸೂರು: ಬೆಂಗಳೂರಿನಲ್ಲಿ ನಡೆದಿದ್ದ ಐಎಂಎ ವಂಚನೆ ಮಾದರಿಯಲ್ಲೇ ಮೈಸೂರಿನಲ್ಲೂ ಗ್ರಾಹಕರಿಂದ ಹಣ ಕಟ್ಟಿಸಿಕೊಂಡು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಪಿಗ್ಮಿ ಕಟ್ಟಿಸಿಕೊಂಡು ಪಿಗ್ಮಿ ಮೆಚ್ಯುರಿಟಿ ಆದ ಬಳಿಕವೂ ಹಣ ಹಿಂದಿರುಗಿಸದೆ ನೂರಾರು ಜನರಿಗೆ ಮೋಸ ಮಾಡಲಾಗಿದೆ.

    ಮೈಸೂರಿನ ಸುಭಾಷ್‍ನಗರದಲ್ಲಿರುವ ಮಹಾವಿಷ್ಣು ವಿವಿದೋದ್ದೇಶ ಸಹಕಾರ ಸಂಘದಲ್ಲಿ ಪಿಗ್ಮಿ ಹೆಸರಿನಲ್ಲಿ ನೂರಾರು ಗ್ರಾಹಕರಿಂದ ಹಣ ಕಟ್ಟಿಸಿಕೊಂಡು ದುಪ್ಪಟ್ಟು ಹಣ ಕೊಡ್ತೀವಿ ಅಂತ ಆಸೆ ತೋರಿಸಿದ್ದರು. ಆದರೆ ಪಿಗ್ಮಿ ಮೆಚ್ಯೂರಿಟಿ ಆದ್ಮೇಲೂ ಹಣವನ್ನು ಗ್ರಾಹಕರಿಗೆ ನೀಡದೇ ಇವತ್ತು, ನಾಳೆ ಎಂದು ಆಟ ಆಡಿಸ್ತಿದ್ದಾರೆ. ಇದರಿಂದ ಕೋಪಗೊಂಡ ಗ್ರಾಹಕರು ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಲಕ್ಷಾಂತರ ರೂಪಾಯಿ ಕಟ್ಟಿರೋ ಗ್ರಾಹಕರು ತಮ್ಮ ಹಣ ಮರುಪಾವತಿಸುವಂತೆ ಪಟ್ಟು ಹಿಡಿದು ಕುಳಿತಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬ್ರ್ಯಾಂಚ್ ಹೊಂದಿರೋ ಈ ಸಂಸ್ಥೆ ಕಳೆದ 3 ತಿಂಗಳಿಂದ ಹಣ ನೀಡದೆ ಸತಾಯಿಸುತ್ತಿದೆ. ಸದ್ಯ ಸಂಸ್ಥೆಯ ವ್ಯವಸ್ಥಾಪಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಮೋಸ ಹೋಗುವ ಜನರು ಇರುವವರೆಗೂ ಹೀಗೆ ಮೋಸ ಮಾಡೋರ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಲೇ ಇರುತ್ತೆ. ಮುಂದಾದರು ಜನರು ಈ ರೀತಿ ಪಿಗ್ಮಿ, ಹಣ ದುಪ್ಪಟ್ಟು ಮಾಡಿಕೊಳ್ಳುವ ಆಸೆ, ಆಮೀಷಕ್ಕೆ ಮೋಸ ಹೋಗದೆ ಎಚ್ಚರವಹಿಸಬೇಕಿದೆ.