Tag: ಪಾಕ್ ಪ್ರಧಾನಿ ಇಮ್ರಾನ್ ಖಾನ್

  • ಉಗ್ರ ಒಸಾಮಾ ಬಿನ್ ಲಾಡೆನ್‍ನನ್ನು ಹುತಾತ್ಮ ಎಂದ ಇಮ್ರಾನ್ ಖಾನ್

    ಉಗ್ರ ಒಸಾಮಾ ಬಿನ್ ಲಾಡೆನ್‍ನನ್ನು ಹುತಾತ್ಮ ಎಂದ ಇಮ್ರಾನ್ ಖಾನ್

    ನವದೆಹಲಿ: ಪಾಕಿಸ್ತಾನಿಗಳು ಉಗ್ರರನ್ನು ಎಷ್ಟು ಗೌರವಿಸುತ್ತಾರೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಲಭ್ಯವಾಗಿದ್ದು, ಸ್ವತಃ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಂಸತ್‍ನಲ್ಲೇ ಅಮೆರಿಕ ಸೈನಿಕರು ಹತ್ಯೆ ಮಾಡಿದ ಅಲ್ ಖೈದಾ ಮುಖ್ಯಸ್ಥ, ಉಗ್ರ ಒಸಾಮಾ ಬಿನ್ ಲಾಡೆನ್‍ಗೆ ಹುತಾತ್ಮ ಪಟ್ಟವನ್ನು ನೀಡಿ ಗೌರವಿಸಿದ್ದಾರೆ.

    ಇಮ್ರಾನ್ ಖಾನ್ ಪಾಕಿಸ್ತಾನದ ಪಾರ್ಲಿಮೆಂಟ್‍ನಲ್ಲಿ ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಈ ಮೂಲಕ ಪಾಕಿಸ್ತಾನ ಉಗ್ರರಿಗೆ ಎಷ್ಟು ಗೌರವ ಕೊಡುತ್ತದೆ ಎಂಬುದು ಬಯಲಾಗಿದೆ. ಪಾಕಿಸ್ತಾನಕ್ಕೆ ಯಾವುದೇ ಮಾಹಿತಿ ನೀಡದೆ ಅಮೆರಿಕ ಸೈನಿಕರು ಪಾಕಿಸ್ತಾನಕ್ಕೆ ನುಗ್ಗಿ ಒಸಾಮಾ ಬಿನ್ ಲಾಡೆನ್‍ನನ್ನು ಹತ್ಯೆ ಮಾಡಿದರು. ಬಳಿಕ ವಿಶ್ವದ ಪ್ರತಿಯೊಬ್ಬರೂ ಪಾಕಿಸ್ತಾನವನ್ನು ನಿಂದಿಸಲು ಪ್ರಾರಂಭಿಸಿದರು. ಈ ಮೂಲಕ ಮುಜುಗರಕ್ಕೀಡು ಮಾಡಿದರು ಎಂದು ದೂರಿದ್ದಾರೆ.

    ಭಯೋತ್ಪಾದನೆ ವಿರುದ್ಧ ಯುಎಸ್ ನಡೆಸಿದ ಯುದ್ಧದಲ್ಲಿ 70 ಸಾವಿರ ಪಾಕಿಸ್ತಾನಿಗಳು ಸಾವನ್ನಪ್ಪಿದರು ಎಂದು ಖಾನ್ ಹೇಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಒಸಾಮಾ ಬಿನ್ ಲಾಡೆನ್ ಹುತಾತ್ಮನೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.

    ವಿಶ್ವ ವಾಣಿಜ್ಯ ಕೇಂದ್ರದ ದಾಳಿಯ ರೂವಾರಿ, ಆಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‍ನನ್ನು 2011ರ ಮೇ 2 ರಂದು ಅಮೆರಿಕ ನೌಕಾಪಡೆ ಹತ್ಯೆ ಮಾಡಿದೆ. ಒಸಾಮಾ ತಂಗಿದ್ದ ಪಾಕಿಸ್ತಾನದ ಅಬೋಟಾಬಾದ್ ನಿವಾಸದ ಮೇಲೆ ಅಮೆರಿಕ ನೌಕಾಪಡೆಯ ಸೀಲ್ ಕಮಾಂಡೊಗಳು ದಾಳಿ ನಡೆಸಿ ಹತ್ಯೆ ಮಾಡಿತ್ತು. ನಂತರ ಈ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು. ಈತ ಉಗ್ರ ಎಂಬುದು ವಿಶ್ವಕ್ಕೆ ತಿಳಿದಿದ್ದರಿಂದ ಈತನ ಹತ್ಯೆಯಾದರೂ ಪಾಕಿಸ್ತಾನ ತುಟಿ ಬಿಚ್ಚಿರಲಿಲ್ಲ. ಇದೀಗ ಇಮ್ರಾನ್ ಖಾನ್ ಒಸಾಮಾ ಹುತಾತ್ಮ ಎಂದು ಹೇಳಿದ್ದಾರೆ.

  • ಭಾರತದೊಂದಿಗಿನ ಯುದ್ಧದಲ್ಲಿ ಪಾಕ್ ಸೋಲುತ್ತೆ: ಇಮ್ರಾನ್ ಖಾನ್

    ಭಾರತದೊಂದಿಗಿನ ಯುದ್ಧದಲ್ಲಿ ಪಾಕ್ ಸೋಲುತ್ತೆ: ಇಮ್ರಾನ್ ಖಾನ್

    ಇಸ್ಲಾಮಾಬಾದ್: ಭಾರತಕ್ಕೆ ಪರಮಾಣು ಬಾಂಬ್ ದಾಳಿ ಬೆದರಿಕೆ ಹಾಕಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಈಗ ಸೋಲಿನ ಭಯ ಶುರುವಾಗಿದೆ. ಭಾರತದೊಂದಿಗೆ ಯುದ್ಧ ಮಾಡಿದರೆ ನಾವು ಸೋಲುತ್ತೇವೆ ಎಂದು ಅವರೇ ಒಪ್ಪಿಕೊಂಡಿದ್ದಾರೆ.

    ಖಾಸಗಿ ಸುದ್ದಿ ವಾಹಿನಿ ಅಲ್ ಜಜೀರಾ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ಈ ಬಾರಿ ಭಾರತದೊಂದಿಗಿನ ಸಾಂಪ್ರದಾಯಿಕ ಯುದ್ಧದಲ್ಲಿ ಪಾಕಿಸ್ತಾನ ಸೋಲಬಹುದು. ಯುದ್ಧದಲ್ಲಿ ಸೋತರೂ ಭಾರತವು ಅದರಿಂದಾಗುವ ಘನಘೋರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಇಮ್ರಾನ್ ಖಾನ್ ಅವರು, ಉಭಯ ದೇಶಗಳ ನಡುವೆ ಪರಮಾಣು ಯುದ್ಧದ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದಾರೆ.

    ಭಾರತ-ಪಾಕ್ ನಡುವೆ ಯುದ್ಧವೊಂದೇ ಪರಿಹಾರವಾದರೆ ನಾವು ನಮ್ಮ ಘನತೆಗಾಗಿ, ಸ್ವಾತಂತ್ರ್ಯಕ್ಕಾಗಿ ಕೊನೆವರೆಗೂ ಹೋರಾಡುತ್ತೇವೆ. ಆದ್ದರಿಂದ ಪರಮಾಣು ಶಕ್ತಿ ಹೊಂದಿರುವ ಎರಡು ದೇಶಗಳು ಹೋರಾಡಿದಾಗ, ಅದು ತನ್ನದೇ ಆದ ಘೋರ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.

    ನಾನು ಯಾವಾಗಲೂ ಯುದ್ಧವನ್ನು ವಿರೋಧಿಸುತ್ತೇನೆ. ಯುದ್ಧವು ಯಾವುದೇ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಅದು ವಿಯೆಟ್ನಾಂ ಅಥವಾ ಇರಾಕ್ ಯುದ್ಧವಾಗಿರಲಿ, ಯುದ್ಧದಿಂದ ಅನೇಕ ಸಮಸ್ಯೆಗಳು ಉದ್ಭವಿಸಿವೆ. ಪಾಕಿಸ್ತಾನವು ಎಂದಿಗೂ ಪರಮಾಣು ಯುದ್ಧವನ್ನು ಪ್ರಾರಂಭಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಪಾಕ್ ಪ್ರಧಾನಿ ಇಮ್ರಾನ್ ಇತ್ತೀಚೆಗಷ್ಟೇ ಭಾರತದೊಂದಿಗಿನ ಯುದ್ಧದ ಬಗ್ಗೆ ಹೇಳಿಕೆ ನೀಡಿದ್ದರು. ನ್ಯೂಯಾರ್ಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ, ಈಗ ನಾನು ಭಾರತದೊಂದಿಗೆ ಏನನ್ನೂ ಚರ್ಚಿಸುವುದಿಲ್ಲ, ಏಕೆಂದರೆ ಮಾತನಾಡಲು ಏನೂ ಉಳಿದಿಲ್ಲ ಎಂದು ಹೇಳಿದ್ದರು.

  • ಹಳೆಯ ಎಲ್ಲ ಬಾಕಿ ತೀರಿಸ್ತೇವೆ – ಮೋದಿ ಹೇಳಿಕೆಯ ಬೆನ್ನಲ್ಲೇ ಶಾಂತಿ ಮಂತ್ರ ಪಠಿಸಿದ ಪಾಕಿಸ್ತಾನ

    ಹಳೆಯ ಎಲ್ಲ ಬಾಕಿ ತೀರಿಸ್ತೇವೆ – ಮೋದಿ ಹೇಳಿಕೆಯ ಬೆನ್ನಲ್ಲೇ ಶಾಂತಿ ಮಂತ್ರ ಪಠಿಸಿದ ಪಾಕಿಸ್ತಾನ

    ಇಸ್ಲಾಮಾಬಾದ್: ಭಾರತ ಯುದ್ಧ ಆರಂಭಿಸಿದರೆ ನಾವು ಯುದ್ಧಕ್ಕೆ ತಯಾರಿದ್ದೇವೆ ಎಂದು ಹೇಳಿಕೆ ನೀಡಿದ್ದ ಪಾಕಿಸ್ತಾನ ಈಗ ಶಾಂತಿ ಮಾತುಕತೆ ಪ್ರಸ್ತಾಪವನ್ನು ಇಟ್ಟಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿಸುವ ಭಾರತದ ಪ್ರಯತ್ನಗಳು ಒಂದೊಂದಾಗಿ ಫಲ ಕೊಡಲಾರಂಭಿಸಿದ ಬೆನ್ನಲ್ಲೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಈಗ ಶಾಂತಿಮಂತ್ರವನ್ನು ಪಠಿಸಲು ಆರಂಭಿಸಿದ್ದಾರೆ.

    ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಸಾಕ್ಷ್ಯವನ್ನು ನೀಡಿದರೆ ಪಾಕಿಸ್ತಾನ ತಕ್ಷಣವೇ ಸ್ಪಂಧಿಸುತ್ತದೆ. ಹಾಗೆಯೇ ಶಾಂತಿ ನೆಲೆಸಲು ಅವಕಾಶ ಮಾಡಿಕೊಟ್ಟರೆ ನನ್ನ ಮಾತಿಗೆ ನಾನು ಬದ್ಧನಾಗಿರುತ್ತೇನೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿ, ಉಗ್ರರ ವಿರುದ್ಧ ಇಡೀ ವಿಶ್ವದಲ್ಲಿ ಒಂದೇ ಮಾತು ಕೇಳಿಬರುತ್ತಿದೆ. ಭಯೋತ್ಪಾದನೆ ನಡೆಸುವವರನ್ನು ಮತ್ತು ಇಂತಹ ದುಷ್ಕೃತ್ಯಕ್ಕೆ  ಬೆಂಬಲ ನೀಡುವವರಿಗೆ ಪಾಠ ಕಲಿಸಬೇಕು ಎನ್ನುವ ಆಗ್ರಹ ಎಲ್ಲ ಕಡೆ ಕೇಳಿಬರುತ್ತಿದೆ. ಭಾರತ ಈಗ ಬದಲಾಗುತ್ತಿದೆ. ಈ ಬಾರಿ ಉಗ್ರರು ಹಾಗೂ ಭಯೋತ್ಪಾದನೆ ವಿರುದ್ಧ ಹೋರಾಡಲು ಸಮಯ ಬಂದಿದೆ. ಅನ್ಯಾಯವಾಗಿ ಸೈನಿಕರು ಬಲಿಯಾದ ನೋವನ್ನು ಮರೆಯಲು ಸಾಧ್ಯವೇ ಇಲ್ಲ. ಭಯೋತ್ಪಾದನೆ ಹಾಗೂ ಉಗ್ರರ ವಿರುದ್ಧ ಹೇಗೆ ಹೋರಾಡಬೇಕು ಅವರನ್ನು ಯಾವ ರೀತಿ ಸದೆಬಡಿಯಬೇಕು ಎನ್ನುವುದು ನಮಗೆ ಗೊತ್ತಿದೆ. ಅಷ್ಟೇ ಅಲ್ಲದೇ ಈ ಬಾರಿ ಹಳೆಯ ಎಲ್ಲ ಬಾಕಿಗಳನ್ನು ತೀರಿಸುತ್ತೇವೆ. ಅಂತಿಮ ಜಯ ನಮಗೆ ಸಿಗಲಿದೆ ಎಂದು ಗುಡುಗಿದ್ದರು.

    ಮೋದಿಯಿಂದ ಖಾರವಾದ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ಇಮ್ರಾನ್ ಖಾನ್ ಅವರು ಶಾಂತಿ ಮಾತನ್ನು ಆಡಲು ಆರಂಭಿಸಿದ್ದಾರೆ. ಬಡತನ ಮತ್ತು ಅನಕ್ಷರಸ್ಥತೆಯ ವಿರುದ್ಧ ಒಟ್ಟಾಗಿ ಹೋರಾಟ ನಡೆಸೋಣ ಎಂದು ನರೇಂದ್ರ ಮೋದಿ ಹೇಳಿದ್ದರು. ಆ ಮಾತಿಗೆ ನಾನು ಬದ್ಧನಾಗಿದ್ದೇನೆ. ಶಾಂತಿಗೆ ಒಂದು ಅವಕಾಶ ನೀಡಿ, ಪುಲ್ವಾಮಾ ದಾಳಿಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನಾನು ನಿಮಗೆ ನೀಡುತ್ತೇನೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

    ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಪ್ರಧಾನಿಯಾದ ನಂತರ ಮೋದಿ ಅವರು ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದರು. ಬಳಿಕ ಮಾತನಾಡುತ್ತ ಬಡತನ ಮತ್ತು ಅನಕ್ಷರತೆ ವಿರುದ್ಧ ಒಟ್ಟಾಗಿ ಹೋರಾಡಬೇಕು ಎಂದು ಹೇಳಿದ್ದಾಗ ನಾನು ‘ಪ್ಯಾಥನ್ ಮಗ’ ಎಂದು ಇಮ್ರಾನ್ ಖಾನ್ ಹೇಳಿದ್ದರು. ಪ್ಯಾಥನ್ ಎಂದರೆ ಇರಾನಿನ ಒಂದು ಜನಾಂಗ. ಇವರು ಪ್ರಾಮಾಣಿಕತೆ ಮತ್ತು ಸತ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಆದರೆ ಇಂದು ಪಾಕ್ ಪ್ರಧಾನಿ ತಮ್ಮ ಮಾತನ್ನು ಮರೆತಿದ್ದಾರೆ, ಅವರು ತಮ್ಮ ಮಾತಿನ ಪ್ರಕಾರ ನಡೆದುಕೊಳ್ಳುತ್ತಿಲ್ಲ ಎಂದು ಮೋದಿ ಟೀಕಿಸಿದ್ದರು.

    ಕಳೆದ ಫೆಬ್ರವರಿ 19ರಂದು ಪುಲ್ವಾಮಾ ದಾಳಿ ಕುರಿತು ಪ್ರತಿಕ್ರಿಯೆ ನೀಡಿದ್ದ ಇಮ್ರಾನ್ ಖಾನ್ ಅವರು, ಭಾರತ ಪಾಕಿಸ್ತಾನ ಜೊತೆಗೆ ಸಹಕರಿಸಿದರೆ ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಲು ಪಾಕಿಸ್ತಾನ ಸಿದ್ಧವಿದೆ ಎಂದು ಭರವಸೆ ನೀಡಿದ್ದರು. ಅಷ್ಟೇ ಅಲ್ಲದೆ ಉಗ್ರರ ದಾಳಿಗೆ ಪ್ರತ್ಯುತ್ತರ ನೀಡಲು ಆಕ್ರಮಣಕ್ಕೆ ಮುಂದಾದರೆ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆಯನ್ನು ಕೂಡ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv