Tag: ಪಹಣಿ

  • ಪಹಣಿ ಬದಲಾವಣೆಗೆ 50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಗ್ರಾಮ ಲೆಕ್ಕಿಗ!

    ಪಹಣಿ ಬದಲಾವಣೆಗೆ 50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಗ್ರಾಮ ಲೆಕ್ಕಿಗ!

    ಬೆಂಗಳೂರು: ರಾಜ್ಯ ಸರ್ಕಾರವನ್ನ 40% ಕಮಿಷನ್ ಸರ್ಕಾರ ಅಂತಾ ಕಾಂಗ್ರೆಸ್ ಪಕ್ಷ ಟೀಕೆಗಳ ಮೇಲೆ ಟೀಕೆ ಮಾಡ್ತಿರೋದು ಎಲ್ಲರಿಗೂ ಗೊತ್ತಿದೆ. ಈ ಸರ್ಕಾರ (BJP Government) ಭ್ರಷ್ಟಾಚಾರದ ಸರ್ಕಾರ ಅಂತಾ ವಿಪಕ್ಷಗಳು ಆರೋಪ ಮಾಡ್ತಾನೆ ಬಂದಿದೆ. ಒಂದು ಪಹಣಿಯ ಬದಲಾವಣೆ ಮಾಡಿಸಲು ಲಕ್ಷ ಲಕ್ಷ ಹಣಕೊಟ್ಟು ಕೆಲಸವೂ ಆಗದೇ ನಮಗೆ ನಮ್ಮ ಹಣ (Money) ಕೊಡಿಸಿ ಅಂತಾ ಪೊಲೀಸ್ ಠಾಣೆಗೆ ದೂರು ನೀಡಿರೋ ಘಟನೆ ಬೆಳಕಿಗೆ ಬಂದಿದೆ.

    ಹೌದು. ಬೆಂಗಳೂರಿನ ಕಾಟನ್ ಪೇಟೆಯಲ್ಲಿ ವಾಸವಾಗಿರೋ ಶ್ರೀನಿವಾಸ್, ಮೂಲತಃ ಕಗಲ್ಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಉದೀಪಾಳ್ಯದ ನಿವಾಸಿ. ತಮ್ಮ ಮುತ್ತಾತನ ಹೆಸರಿನಲ್ಲಿರೋ 4 ಎಕರೆ ಜಾಗ (Property) ವನ್ನ ತಂದೆಯ ಹೆಸರಿಗೆ ಮಾಡಿಸಿ ಕುಟುಂಬದವರಿಗೆ ಹಂಚಿಕೆ ಮಾಡೋ ಪ್ಲಾನ್ ಮಾಡಿಕೊಂಡಿದ್ರು. ಶ್ರೀನಿವಾಸ್ ಅವರು ಕಗ್ಗಲಿಪುರದ ವಿಲೇಜ್ ಅಕೌಂಟೆಂಟ್ (Village Accountant) ಬಳಿ ಪಹಣಿ ಬದಲಾವಣೆ ಮಾಡಿಸಿಕೊಂಡುವಂತೆ ಕೇಳಿಕೊಂಡಿದ್ರು. ಆದರೆ ಪಹಣಿ ಬದಲಾವಣೆ ಮಾಡಿಕೊಡಲು ವಿಲೇಜ್ ಅಕೌಂಟೆಂಟ್ ಆಗಿರೋ ಮಿಸ್ಟರ್ ಶಾಂತೇಗೌಡ ಬರೋಬ್ಬರಿ 50ಲಕ್ಷ ಕೇಳಿದ್ದಾನೆ.

    ಪಹಣಿ ಬದಲಾವಣೆ ಆದರೆ ಸಾಕು ಅಂತಾ ಶ್ರೀನಿವಾಸ್ ಅವರು ತಮ್ಮ ಹೆಸರಿನಲ್ಲಿದ್ದ ಜಮೀನು (Land) ಮಾರಿ 30 ಲಕ್ಷ ಅಡ್ವಾನ್ಸ್ ಅಂತಾ 2018ರಲ್ಲಿ ನೀಡಿದ್ದಾರೆ. ಆದರೆ ಇಲ್ಲಿಯವರೆಗೆ ಹಣವನ್ನು ವಾಪಸ್ ನೀಡದೇ ಪಹಣಿ ಕೆಲಸವೂ ಮಾಡಿಸದೇ ಮೋಸ ಮಾಡ್ತಿದ್ದಾರೆ ಎಂದು ಕಗ್ಗಲಿಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಪಾಲಿಕೆಯ ಹೊಸ ಪಾರ್ಕಿಂಗ್ ರೂಲ್ಸ್ – ಲೂಟಿ ಯೋಜನೆಯೆಂದು ಜನಾಕ್ರೋಶ

    ಹಣ ಕೊಡಿ ಇಲ್ವಾ ಕೆಲಸ ಮಾಡಿಕೊಡಿ ಅಂತಾ ಕೇಳಲು ಹೋದ್ರೆ ಶಾಂತೇಗೌಡ ಏನ್ ಮಾಡ್ತಿರೋ ಮಾಡ್ಕೋಳಿ ನಿಮ್ಮನ್ನ ಜೀವಂತವಾಗಿ ಉಳಿಸೋಲ್ಲ ಅಂತಾ ದಮ್ಕಿ ಕೂಡ ಹಾಕಿದ್ದರಂತೆ. ಹೇಗೋ ನಮ್ಮ ತಾತನ ಆಸ್ತಿ ಬರುತ್ತೆ ಅಂತಾ ಹಣ ಕೊಟ್ಟು ಈಗ ಜಮೀನು ಕೂಡ ಬದಲಾವಣೆ ಆಗಿದೆ ಕೊಟ್ಟ ಹಣವೂ ಇಲ್ಲದೇ ಹೇಗಪ್ಪ ಜೀವನ ಅಂತಾ ಕಷ್ಟದಲ್ಲೇ ಕಾಲ ಕಳೆಯುವಂತೆ ಆಗಿದೆ ಶ್ರೀನಿವಾಸ್ ಪತ್ನಿ ಹೇಳುತ್ತಾರೆ.

    ಒಟ್ಟಿನಲ್ಲಿ ಒಬ್ಬ ಸಾಮಾನ್ಯ ವಿಲೇಜ್ ಅಕೌಂಟೆಂಟ್ ಹೀಗೆ ಲಕ್ಷ ಲಕ್ಷ ಹಣ ಪಡೆಯುತ್ತಿದ್ದಾನೆ ಅಂದ್ರೇ ಹೇಗಿದೆ ನಮ್ಮ ವ್ಯವಸ್ಥೆ ಅನ್ನೋದು ಗೊತ್ತಾಗ್ತಿದೆ. ಸದ್ಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರೈತನಿಂದ 14 ಸಾವಿರ ಪಡೆಯೋವಾಗ ಎಸಿಬಿ ಬಲೆಗೆ ಬಿದ್ದ ಗ್ರಾಮಲೆಕ್ಕಾಧಿಕಾರಿ

    ರೈತನಿಂದ 14 ಸಾವಿರ ಪಡೆಯೋವಾಗ ಎಸಿಬಿ ಬಲೆಗೆ ಬಿದ್ದ ಗ್ರಾಮಲೆಕ್ಕಾಧಿಕಾರಿ

    ಗದಗ: ರೈತನ ಜಮೀನಿನ ಪಹಣಿ ಬದಲಾವಣೆಗೆ ಲಂಚದ ಬೇಡಿಕೆಯಿಟ್ಟಿದ್ದ ಗ್ರಾಮಲೆಕ್ಕಾಧಿಕಾರಿ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿರೋ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.

    ಲಕ್ಷ್ಮೇಶ್ವರ ತಾಲೂಕಿನ ಪುಟ್ಟಗಾಂವ್ ಬಡ್ನಿ ಪಂಚಾಯ್ತಿಯ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಫಿರೋಜ್‍ಖಾನ್ ಗೋರಿಖಾನ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಫಿರೋಜ್‍ಖಾನ್ ಪುಟಂಗಾವ್ ಬಡ್ನಿ ಗ್ರಾಮದ ರೈತ ರಾಮಪ್ಪ ಅಣ್ಣಿಗೇರಿ ಅನ್ನುವರ ಜಮೀನಿನ ಪಹಣಿ ಬದಲಾವಣೆಗೆ 14 ಸಾವಿರ ರೂಪಾಯಿ ಲಂಚ ಇಟ್ಟಿದ್ದನು.

    ಮನೆಗೆ ಬಂದು ಹಣ ಕೊಟ್ಟರೆ ಪಹಣಿ ಮನೆಯಲ್ಲಿ ಕೊಡುತ್ತೇನೆ. ಹಣ ಮನೆಗೆ ತೆಗೆದುಕೊಂಡು ಬಾ ಎಂದು ರೈತನಿಗೆ ಗ್ರಾಮ ಲೆಕ್ಕಾಧಿಕಾರಿ ಫಿರೋಜ್‍ಖಾನ್ ಹೇಳಿದ್ದನು. ಮನೆಯಲ್ಲಿ ಹಣ ನೀಡುವ ವೇಳೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಎಸಿಬಿ ಡಿ.ವೈಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

  • ಪಹಣಿಯಲ್ಲಿ 24 ಲಕ್ಷ ರೂ. ಸಾಲ ಕಂಡು ದಂಗಾದ ರೈತ

    ಪಹಣಿಯಲ್ಲಿ 24 ಲಕ್ಷ ರೂ. ಸಾಲ ಕಂಡು ದಂಗಾದ ರೈತ

    ಧಾರವಾಡ: ಕಂದಾಯ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದಾಗಿ ಧಾರವಾಡದ ರೈತರೊಬ್ಬರು ಪರದಾಡುವಂತಾಗಿದ್ದು, ಬ್ಯಾಂಕಿನಿಂದ ಸಾಲ ಸಿಗದೇ ಪರಿತಪಿಸುತ್ತಿದ್ದಾರೆ.

    ಅಧಿಕಾರಿಗಳ ಎಡವಟ್ಟಿನಿಂದ ತಾಲೂಕಿನ ರೈತ ನರೇಂದ್ರ ಗ್ರಾಮದ ನಾಗಪ್ಪ ಮೊರಬ ಬ್ಯಾಂಕಿನಿಂದ ಬ್ಯಾಂಕ್‍ಗೆ ಹಾಗೂ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಇವರ ಜಮೀನಿನ ಪಹಣಿ ಪತ್ರದಲ್ಲಿ 24 ಲಕ್ಷ ರೂ. ಸಾಲದ ಭೋಜಾ ಏರಿಸಲಾಗಿದ್ದು, ಇದರಿಂದ ಭೋಜಾ ಇಳಿಸದೇ ಯಾವುದೇ ಬ್ಯಾಂಕಿನವರು ಸಾಲ ಕೊಡಲು ನಿರಾಕರಿಸುತ್ತಿದ್ದಾರೆ. ಇನ್ನೂ ಅಚ್ಚರಿ ಸಂಗತಿ ಎಂದರೆ 7 ಎಕ್ರೆ ಜಮೀನಿನ ಈ ಪಹಣಿ ಪತ್ರದಲ್ಲಿ ಎಸ್‍ಬಿಎಂ ಬ್ಯಾಂಕ್‍ನ ಸಾಲ ಎಂದು ನಮೂದಿಸಲಾಗಿದೆ.

    ಆದರೆ ಈ ಬ್ಯಾಂಕ್‍ನಲ್ಲಿ ನಾಗಪ್ಪ ಮೊರಬ ಅವರ ಖಾತೆಯೇ ಇಲ್ಲ. ಹೀಗಾಗಿ ಇವರು ಸಾಲ ಕೇಳಲು ಬ್ಯಾಂಕ್‍ಗಳಿಗೆ ಹೋದರೆ ಸಾಲದ ಭೋಜಾ ಇದೆ ಅದನ್ನು ಕಡಿಮೆ ಮಾಡಿಸಿಕೊಂಡು ಬನ್ನಿ ಇಲ್ಲವೇ ಎಸ್‍ಬಿಎಂನಿಂದ ಎನ್‍ಒಸಿ ತೆಗೆದುಕೊಂಡು ಬನ್ನಿ ಎನ್ನುತ್ತಿದ್ದಾರೆ. ಇತ್ತ ಎಸ್‍ಬಿಎಂ ವಿಲೀನಗೊಂಡ ಹಿನ್ನೆಲೆ ನಾಗಪ್ಪ ಅವರು ಎಸ್‍ಬಿಐನ ಹುಬ್ಬಳ್ಳಿ ಶಾಖೆಗೆ ಹೋಗಿ ಭೋಜಾದ ಎನ್‍ಒಸಿ ಕೊಡುವಂತೆ ಕೇಳಿದ್ದಾರೆ. ನಮ್ಮಲ್ಲಿ ಖಾತೆಯೇ ಇಲ್ಲದೇ ಎನ್‍ಒಸಿ ಹೇಗೆ ಕೊಡುವುದು ಎಂದು ಪ್ರಶ್ನಿಸಿದ್ದಾರೆ.

    ಒಂದೆಡೆ ಎನ್‍ಒಸಿ ಇಲ್ಲದೇ ಬೇರೆ ಬ್ಯಾಂಕ್‍ಗಳು ಸಾಲ ಕೊಡುತ್ತಿಲ್ಲ. ಇತ್ತ ಭೋಜಾ ತೆಗೆದುಕೊಡಿ ಎಂದು ತಹಶೀಲ್ದಾರ ಕಚೇರಿಗೆ ಅಲೆದಾಡಿದರೂ ಸ್ಪಂದನೆ ಸಿಗುತ್ತಿಲ್ಲ. ಈ ಹಿಂದೆ ಪಹಣಿ ಪತ್ರಗಳನ್ನು ಗಣಕೀಕೃತಗೊಳಸುವಾಗ ಅಧಿಕಾರಿಗಳು ಈ ರೀತಿ ಎಡವಟ್ಟು ಮಾಡಿದ್ದಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ರೈತ ನಾಗಪ್ಪ ಅವರು ಮಾತ್ರ ಸಾಲ ಸಿಗದೆ ಪರದಾಡುತ್ತಿದ್ದಾರೆ.