Tag: ಪಶುವೈದ್ಯಾಧಿಕಾರಿ

  • ಚಿಕ್ಕಬಳ್ಳಾಪುರದ ವರದಹಳ್ಳಿ ಗ್ರಾಮದಲ್ಲಿ ಹಕ್ಕಿ ಜ್ವರ – 400ಕ್ಕೂ ಹೆಚ್ಚು ಕೋಳಿಗಳ ಸಾಮೂಹಿಕ ಹತ್ಯೆ!

    ಚಿಕ್ಕಬಳ್ಳಾಪುರದ ವರದಹಳ್ಳಿ ಗ್ರಾಮದಲ್ಲಿ ಹಕ್ಕಿ ಜ್ವರ – 400ಕ್ಕೂ ಹೆಚ್ಚು ಕೋಳಿಗಳ ಸಾಮೂಹಿಕ ಹತ್ಯೆ!

    – ತಪ್ಪಿಸಿಕೊಂಡ ಕೋಳಿಗಳನ್ನು ಹುಡುಕುತ್ತಿರುವ ಸಿಬ್ಬಂದಿ
    – ಅಧಿಕಾರಿಗಳು, ಗ್ರಾಮಸ್ಥರ ಮಧ್ಯೆ ಪರಿಹಾರದ ಫೈಟ್

    ಚಿಕ್ಕಬಳ್ಳಾಪುರ: ಹಕ್ಕಿ ಜ್ವರ (Bird Flu) ರಾಜ್ಯಕ್ಕೂ ಕಾಲಿಟ್ಟಾಯ್ತು. ಹಕ್ಕಿಜ್ವರ ಕಾಣಿಸಿಕೊಂಡಿರೋ ಗ್ರಾಮದಲ್ಲಿರೋ ಕೋಳಿಗಳನ್ನೆಲ್ಲಾ ಆಧಿಕಾರಿಗಳು ಸಾಮೂಹಿಕ ಹತ್ಯೆ ಮಾಡಿ ಗುಂಡಿಗೆ ಹಾಕಿ ಮುಚ್ಚಿದ್ದಾಯ್ತು. ಆದ್ರೆ ಹತ್ಯೆ ಮಾಡಿದ ಕೋಳಿಗಳಿಗೆ ಪರಿಹಾರ ಎಲ್ಲಿ..? ಅದೆಷ್ಟು ಕೊಡ್ತಿರಾ, ಅದ್ಯಾವಾಗ ಕೊಡ್ತೀರಾ? ಅಂತ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧವೇ ಆಕ್ರೋಶ ಹೊರಹಾಕಿದ್ದಾರೆ.

    ಹೌದು. ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ವರದಹಳ್ಳಿ ಗ್ರಾಮದಲ್ಲಿ ಪಕ್ಷಿಗಳು ಅದ್ರಲ್ಲೂ ಕೋಳಿಗಳಿಗೆ ಮಾರಕವಾಗಿರೋ ಡೆಡ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಎರಡು ದಿನಗಳಿಂದ ಗ್ರಾಮದಲ್ಲೇ ಬೀಡುಟ್ಟಿದೆ. ಇರೋ ಬರೋ ಕೋಳಿಗಳನ್ನ ಸೆರೆಹಿಡಿದು ಹತ್ಯೆ ಮಾಡಿದೆ. ಹಕ್ಕಿ ಜ್ವರ ನಿಯಂತ್ರಣ ಮಾಡಲು ಗ್ರಾಮದಲ್ಲಿರುವ ಮನೆ ಮನೆಗಳಿಗೆ ತೆರಳಿ ಮನೆಯಲ್ಲಿರುವ ಕೋಳಿಗಳನ್ನ ವಶಕ್ಕೆ ಪಡೆದು ಗ್ರಾಮ ಹೊರವಲಯದಲ್ಲಿ ಗುಂಡಿ ತೋಡಿ ಕೋಳಿಗಳನ್ನ ಮುಚ್ಚಿ ನಾಶ ಮಾಡಲಾಗಿದೆ. ತಪ್ಪಿಸಿಕೊಂಡ ಕೋಳಿಗಳಿಗಾಗಿ ಸಿಬ್ಬಂದಿ ಹುಡುಕಾಡಿ ಹಿಡಿಯುತ್ತಿದ್ದಾರೆ.

    ಕೋಳಿಗಳನ್ನ ಹಿಡಿಯೋಕೆ ಬಂದ ಅಧಿಕಾರಿಗಳಿಗೆ ಕೋಳಿ ಮಾಲೀಕರು ಆಕ್ಷೇಪಿಸಿದರು. ಮೊದಲು ಪರಿಹಾರ ಎಷ್ಟು ಅಂತ ಹೇಳಿ ಆಮೇಲೆ ಕೋಳಿ ತಗೊಂಡು ಹೋಗಿ ಅಂತ ಗ್ರಾಮಸ್ಥರು ಆಕ್ಷೇಪ ಹೊರಹಾಕಿದ್ರು. ಇದ್ರಿಂದ ಸಹಜವಾಗಿಯೇ ಅಧಿಕಾರಿಗಳು ಹಾಗೂ ಕೋಳಿಗಳ ಮಾಲೀಕರ ನಡುವೆ ಮಾತಿನ ಚಕಮಕಿ ನಡೆಯಿತು.

    ಗ್ರಾಮಸ್ಥರ ಆಕ್ರೋಶ, ಆಕ್ಷೇಪ ನಡುವೆಯೂ ಹರಸಾಹಸಪಟ್ಟು ಗ್ರಾಮಸ್ಥರ ಮನವೊಲಿಸಿದ ಅಧಿಕಾರಿಗಳು ಗ್ರಾಮದಲ್ಲಿದ್ದ 400ಕ್ಕೂ ಹೆಚ್ಚು ಕೋಳಿಗಳನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ಹಕ್ಕಿ ಜ್ವರ ಉಲ್ಭಣಿಸಿದಂತೆ ಮಾಡಲು ಕೋಳಿಗಳ ಹತ್ಯೆ ಮಾಡೋದಾಗಿ ಅಧಿಕಾರಿಗಳು ಹೇಳಿದ್ರು. ವಶಕ್ಕೆ ಪಡೆದಿರುವ ಕೋಳಿಗಳ ಲೆಕ್ಕ ಇದ್ದು ಮುಂದಿನ ದಿನಗಳಲ್ಲಿ ಪರಿಹಾರ ನೀಡುವುದಾಗಿ ಗ್ರಾಮಸ್ಥರ ಮನವೊಲಿಸಿದರು.

    ಗ್ರಾಮದಲ್ಲಿ 447ಕ್ಕೂ ಹೆಚ್ಚು ಕೋಳಿಗಳಿದ್ದು ಬಹುತೇಕ ಕೋಳಿಗಳನ್ನ ಹಿಡಿದು ಹತ್ಯೆ ಮಾಡಿ ಗುಂಡಿಗೆ ಹಾಕಿ ಮುಚ್ಚಿ ನಾಶ ಮಾಡಲಾಗಿದೆ. ಆದ್ರೆ ಕೋಳಿಗೆ ಕೇವಲ 90 ರೂಪಾಯಿ ಪರಿಹಾರ ಮಾತ್ರ ಸಿಗಲಿದೆಯಂತೆ. ಅದು ಕೂಡ ಸಿಗುತ್ತೋ ಇಲ್ವೋ ಅನ್ನೋ ಅನುಮಾನ ಹೊರಹಾಕಿದ್ದಾರೆ ಗ್ರಾಮಸ್ಥರು.

  • ಕಾಳಿ ರಕ್ಷಿತಾರಣ್ಯದಲ್ಲಿ ಸರಣಿ ಕಾಡುಕೋಣಗಳ ಸಾವು – ಸಾಂಕ್ರಾಮಿಕ ರೋಗಕ್ಕೆ ಬಲಿ?

    ಕಾಳಿ ರಕ್ಷಿತಾರಣ್ಯದಲ್ಲಿ ಸರಣಿ ಕಾಡುಕೋಣಗಳ ಸಾವು – ಸಾಂಕ್ರಾಮಿಕ ರೋಗಕ್ಕೆ ಬಲಿ?

    – ನಿಗೂಢವಾಗಿ ಉಳಿದ ಸಾವಿನ ಸರಣಿ
    – ಮನುಷ್ಯರಿಗೂ ರೋಗ ಭಾದಿಸುವ ಭಯ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕಾಳಿ ಹುಲಿ ರಕ್ಷಿತ ಪ್ರದೇಶಗಳಲ್ಲಿ ಕಾಡುಕೋಣಗಳು ನಿರಂತರವಾಗಿ ಸಾವನ್ನಪ್ಪುತ್ತಿದ್ದು, ಕಾಡುಕೋಣಗಳಲ್ಲಿ ಸಾಂಕ್ರಾಮಿಕ ರೋಗದ ವಾಸನೆ ಹೊಡೆಯಲು ಆರಂಭವಾಗಿದೆ.

    ಕಳೆದ ಒಂದು ತಿಂಗಳಿಂದ 15 ಕಾಡುಕೋಣಗಳು ಸಾವನ್ನಪ್ಪಿವೆ. ಇದರಲ್ಲಿ ಈಗಾಗಲೇ ನಾಲ್ಕು ಕಾಡುಕೋಣಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ ಅರಣ್ಯ ಇಲಾಖೆ ಮಾತ್ರ ದಾಖಲೆಯಲ್ಲಿ ಕೇವಲ ನಾಲ್ಕು ಕಾಡುಕೋಣಗಳು ಸಾವನ್ನಪ್ಪಿರುವ ಕುರಿತು ಉಲ್ಲೇಖಿಸಿದೆ.

    ಕಾಡುಕೋಣಗಳ ಕಳೆ ಬರಹಗಳು ಜೋಯಿಡಾ ಅರಣ್ಯ ಭಾಗವಾದಕಟ್ಟೆ, ಕೋಡುಗಾಳಿ, ಕಡಗರ್ಣಿ, ದಿಗಾಳಿ ಕಾಡಿನಲ್ಲಿ ಸಿಕ್ಕಿವೆ. ಇನ್ನು ಕುಂಬಾರವಾಡ, ಕ್ಯಾಸಲ್ ರಾಕ್ ಭಾಗದಲ್ಲಿಯೂ ಕಾಡುಕೋಣಗಳು ಅಸುನೀಗಿರುವ ಕುರಿತು ಸಂದೇಹಗಳು ವ್ಯಕ್ತವಾಗಿದೆ.

    ದಿಗಾಳಿ ಕಾಡಿನಲ್ಲಿ ಮೃತಪಟ್ಟ ಕಾಡುಕೋಣದ ಮರಣೋತ್ತರ ಪರೀಕ್ಷೆಯನ್ನು ಶಿವಮೊಗ್ಗ ವನ್ಯಜೀವಿ ವಲಯದ ಪಶುವೈದ್ಯಾಧಿಕಾರಿ ಡಾ.ವಿನಯ್ ನೇತ್ರತ್ವದಲ್ಲಿ ನಡೆಸಲಾಗಿದ್ದು, ಅಂಗಾಂಗ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ.

    ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಕಾಡುಗಳಲ್ಲಿ ಮಂಗಗಳು ಕ್ಯಾಸನೂರು ಕಾಯಿಲೆಗೆ ತುತ್ತಾಗಿ ಹಲವು ಮಂಗಗಳು ಸಾವನ್ನಪ್ಪಿದ್ದವು. ಇದರಿಂದಾಗಿ ಮನುಷ್ಯನಿಗೂ ರೋಗಾಣುಗಳು ಪಸರಿಸಿ ಅನೇಕರು ಮಂಗನಕಾಯಿಲೆಗೆ ತುತ್ತಾಗಿದ್ದರು.

    ಈಗ ಕಾಡುಕೋಣಗಳು ಸರಣಿ ಸಾವನ್ನಪ್ಪುತಿದ್ದು, ಮೊದಲು ನೀರಿನ ಕೊರತೆ ಎನ್ನಲಾಗಿತ್ತು. ಆದರೆ ಕಾಡುಕೋಣಗಳ ಕಳೇಬರಹ ಸಿಕ್ಕ ಸುತ್ತಮುತ್ತ ಅರಣ್ಯ ಇಲಾಖೆ ಪ್ರಾಣಿಗಳಿಗಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿತ್ತು ಹಾಗೂ ಹೇಳುವಂತಹ ಸಮಸ್ಯೆ ಕೂಡ ಇರಲಿಲ್ಲ. ಆದರೂ ಕಾಡುಕೋಣಗಳು ಸಾಯುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಯಾವುದೋ ಸಾಂಕ್ರಾಮಿಕ ರೋಗದಿಂದ ಸತ್ತಿರಬಹುದೇ ಎಂಬ ಅನುಮಾನ ಮೂಡತೊಡಗಿದೆ.

    ಸಾವುಕಂಡ ಕಾಡುಕೋಣದ ಗಂಟಲು ಹಾಗೂ ದೇಹದ ಒಳಭಾಗದಲ್ಲಿ ಹುಣ್ಣುಗಳು ಕಾಣಿಸಿಕೊಂಡಿದ್ದು, ಸಾಂಕ್ರಾಮಿಕ ರೋಗ ಭಾದಿಸಿರಬಹುದು ಎಂದು ಸಂಶಯ ವ್ಯಕ್ತಪಡಿಸಲಾಗಿದೆ. ಕಾಡುಕೋಣದ ಮರಣೋತ್ತರ ಪರೀಕ್ಷೆಯಿಂದ ವಿಷಯ ಬಹಿರಂಗಗೊಳ್ಳಬೇಕಿದೆ.