Tag: ಪರಿಹಾರ ನಿಧಿ

  • ಆಟೋ, ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂ. ಘೋಷಣೆ – ಯಾವೆಲ್ಲಾ ಚಾಲಕರು ಅರ್ಹರು?

    ಆಟೋ, ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂ. ಘೋಷಣೆ – ಯಾವೆಲ್ಲಾ ಚಾಲಕರು ಅರ್ಹರು?

    ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರ್ಕಾರದಿಂದ 5 ಸಾವಿರ ರೂ. ಪರಿಹಾರ ನೀಡುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ.

    ಆಟೋ ಮತ್ತು ಟ್ಯಾಕ್ಸಿಯನ್ನು ಓಡಿಸಿಕೊಂಡು ಜೀವನ ಮಾಡುತ್ತಿದ್ದ ಚಾಲಕರು ಈ ಲಾಕ್‍ಡೌನ್ ಸಮಯದಲ್ಲಿ ಬಹಳ ಕಷ್ಟ ಅನುಭವಿಸಿದ್ದಾರೆ. ಹೀಗಾಗಿ ಅವರಿಗಾಗಿ ಸರ್ಕಾರ ಸಿಎಂ ಪರಿಹಾರ ನಿಧಿಯಿಂದ ಹಣ ಕೊಡಲು ತೀರ್ಮಾನ ಮಾಡಿದೆ. ಈ ಹಣವನ್ನು ವಿರತಣೆ ಮಾಡಲು ಸಾರಿಗೆ ಇಲಾಖೆಯ ಅಯುಕ್ತರು ಸರ್ಕಾರದ ನಡವಳಿಕೆಗಳ ಪಟ್ಟಿಯನ್ನು ತಯಾರಿಸಿದ್ದು ರಾಜ್ಯಪಾಲರ ಸಹಿಯೊಂದೇ ಬಾಕಿಯಿದೆ. ಈ ನಡವಳಿ ಪ್ರಕಾರ ಯಾವೆಲ್ಲಾ ಚಾಲಕರಿಗೆ ಈ ಹಣ ಸಿಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.

    ಯಾವೆಲ್ಲಾ ಚಾಲಕರು ಅರ್ಹರರು?
    1. ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲನೆ ಮಾಡಲು ಚಾಲನಾ ಅನುಜ್ಞಾ ಪತ್ರ ಮತ್ತು ಬ್ಯಾಡ್ಜ್ ಹೊಂದಿರುವವರು ಮಾತ್ರ ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.
    2. ಫಲಾನುಭವಿಗಳು ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಾಗಿದ್ದು, ದಿನಾಂಕ: 01-03-2020 ಕ್ಕೆ ಚಾಲ್ತಿಯಲ್ಲಿರುವ ಚಾಲನಾ ಅನುಜ್ಞಾ ಪತ್ರದ ವಿವರಗಳನ್ನು ಪೋರ್ಟಲ್ ನಲ್ಲಿ ನಮೂದಿಸಬೇಕಾಗಿರುತ್ತದೆ.
    3. ಚಾಲಕರ ಆಧಾರ್ ಕಾರ್ಡ್ ವಿವರಗಳನ್ನು ಪೋರ್ಟಲ್‍ನಲ್ಲಿ ನಮೂದಿಸಬೇಕಾಗಿರುತ್ತದೆ.


    4. ಚಾಲಕರ ಬ್ಯಾಂಕ್ ಅಕೌಂಟ್ ವಿವರ, ಸಂಬಂಧಪಟ್ಟ ಬ್ಯಾಂಕಿನ ಐಎಫ್‍ಎಸ್‍ಸಿ ಕೋಡ್, ಎಂಐಸಿಆರ್ ಕೋಡ್‍ಗಳ ವಿವರಗಳನ್ನು ಪೋರ್ಟಲ್‍ನಲ್ಲಿ ನಮೂದಿಸಬೇಕಾಗಿರುತ್ತದೆ.
    5. ಚಾಲಕರು ಚಾಲನೆ ಮಾಡುವ ವಾಹನದ ನೋಂದಣಿ ಸಂಖ್ಯೆ ವಿವರಗಳನ್ನು ಪೋರ್ಟಲ್‍ನಲ್ಲಿ ನಮೂದಿಸಬೇಕಾಗಿರುತ್ತದೆ. ವಾಹನ್-4 ತಂತ್ರಾಂಶದಿಂದ ವಿವರಗಳನ್ನು ನೇರವಾಗಿ ಪಡೆಯುವುದು.
    6. ಚಾಲನಾ ಅನುಜ್ಞಾ ಪತ್ರದ ವಿವರಗಳನ್ನು ಸಾರಿಗೆ ಇಲಾಖೆಯ ಸಾರಥಿ-4 ತಂತ್ರಾಂಶದಿಂದ ನೇರವಾಗಿ ಪಡೆದುಕೊಳ್ಳಬೇಕು.


    7. ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ತಮ್ಮ ದೈನಂದಿನ ಉದ್ಯೋಗವನ್ನು ನಡೆಸಲಾಗದ ಆದಾಯ ಕಳೆದುಕೊಂಡಿರುವ ಬಗ್ಗೆ ಸ್ವಯಂ ಘೋಷಣೆ ಮಾಡಬೇಕು.
    8. ಈ ಯೋಜನೆಯನ್ನು ಜಾರಿಗೊಳಿಸಲು ಅರ್ಹ ಚಾಲಕರು ತಮ್ಮ ಅರ್ಜಿಗಳನ್ನು ‘ಸೇವಾಸಿಂಧು’ವಿನ ಮುಖಾಂತರ ಸಲ್ಲಿಸಲು ವ್ಯವಸ್ಥೆ ಮಾಡಬೇಕಾಗಿರುತ್ತದೆ. ಈ ಬಗ್ಗೆ ‘ಸೇವಾಸಿಂಧು’ ವಿನಲ್ಲಿ ಸೂಕ್ತ ವ್ಯವಸ್ಥೆ ಮಾಡುವಂತೆ ಇ-ಆಡಳಿತ ಇಲಾಖೆಯನ್ನು ಕೋರಬಹುದಾಗಿದೆ.
    9. ಅರ್ಹ ಫಲಾನುಭವಿಗಳಿಗೆ ಆಧಾರ್ ಸಂಖ್ಯೆಯ ಮೂಲಕ ಡಿಬಿಟಿ ಮಾಡಬೇಕು ಅಥವಾ ಆನ್‍ಲೈನ್ ಮೂಲಕ ಬ್ಯಾಂಕಿಗೆ ಜಮಾ ಮಾಡಬೇಕು.
    10. ಫಲಾನುಭವಿಗಳು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಲು ಅನುವಾಗುವಂತೆ ಅರ್ಹ/ಅನರ್ಹ ಅರ್ಜಿದಾರರ ಪಟ್ಟಿಯನ್ನು ತಂತ್ರಾಂಶದಲ್ಲಿ ಅಳವಡಿಸಿಕೊಳ್ಳಬೇಕು.

    ಈ ರೀತಿಯ ನಡವಳಿಕೆಗಳನ್ನು ಸಾರಿಗೆ ಆಯುಕ್ತರು ಸರ್ಕಾರಕ್ಕೆ ತಯಾರಿಸಿ ಕೊಟ್ಟಿದ್ದು, ಇಂದು ಅಥವಾ ನಾಳೆ ಸರ್ಕಾರದ ಆದೇಶ ಪ್ರಕಟವಾಗುವ ಸಾದ್ಯತೆ ಇದೆ.

  • ಪುರಾತನ ಕಾಲದ 2 ಲಕ್ಷ ನಾಣ್ಯ ಹರಾಜು ಮಾಡಲು ಮುಂದಾದ ನಾಣ್ಯಶಾಸ್ತ್ರಜ್ಞ

    ಪುರಾತನ ಕಾಲದ 2 ಲಕ್ಷ ನಾಣ್ಯ ಹರಾಜು ಮಾಡಲು ಮುಂದಾದ ನಾಣ್ಯಶಾಸ್ತ್ರಜ್ಞ

    – 20 ವರ್ಷದಿಂದ 8 ಲಕ್ಷ ನಾಣ್ಯ ಸಂಗ್ರಹ
    – ಕೊರೊನಾ ಪರಿಹಾರ ನಿಧಿಗಾಗಿ ಮಾರಾಟ

    ಭುನವೇಶ್ವರ: ಇಡೀ ದೇಶವೇ ಕೊರೊನಾದಿಂದ ತತ್ತರಿಸಿ ಹೋಗಿದೆ. ಇದರಿಂದ ಬಡವರು, ನಿರ್ಗತಿಕರು ಮತ್ತು ಕೂಲಿ ಕಾರ್ಮಿಕರು ಪರದಾಡುತ್ತಿದ್ದಾರೆ. ಈಗಾಗಲೇ ಅನೇಕರು ಕೊರೊನಾ ವಿರುದ್ಧ ಹೋರಾಟಕ್ಕೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಇದೀಗ ಒಡಿಶಾದ ಪ್ರಸಿದ್ಧ ನಾಣ್ಯಶಾಸ್ತ್ರಜ್ಞ ಕೊರೊನಾ ಪರಿಹಾರ ನಿಧಿಗೆ ಸಹಾಯ ಮಾಡಲು ತಾವು ಸಂಗ್ರಹಿಸಿರುವ ಪುರಾತನ ನಾಣ್ಯಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ.

    27 ವರ್ಷದ ನಾಣ್ಯಶಾಸ್ತ್ರಜ್ಞ ಡೆಬಿ ಪ್ರಸಾದ್ ಮಂಗರಾಜ್ ನಾಣ್ಯ ಮಾರಾಟ ಮಾಡಲು ಮುಂದಾಗಿದ್ದಾರೆ. ಇವರು ಒಡಿಶಾದಲ್ಲಿ ನಾಣ್ಯಗಳ ಸಂಗ್ರಹದ ಮೂಲಕ ಖ್ಯಾತಿ ಗಳಿಸಿದ್ದಾರೆ. ಚಕ್ರವರ್ತಿಗಳಾದ ಅಶೋಕ, ಚಂದ್ರಗುಪ್ತ ಮೌರ್ಯ ಮತ್ತು ಮರಾಠ ರಾಜ ಶಿವಾಜಿ ಅವರ ಕಾಲಕ್ಕೆ ಸೇರಿದ 8 ಲಕ್ಷಕ್ಕೂ ಹೆಚ್ಚು ಹಳೆಯ ನಾಣ್ಯಗಳನ್ನು ಸಂಗ್ರಹಿಸಿದ್ದಾರೆ. ಅದರಲ್ಲಿ ಕನಿಷ್ಠ 2 ಲಕ್ಷ ನಾಣ್ಯವನ್ನು ಹರಾಜು ಮಾಡಲು ನಿರ್ಧರಿಸಿದ್ದಾರೆ.

    ಮಂಗರಾಜ್ ಸುಮಾರು 20 ವರ್ಷಗಳಿಂದ ಪುರಾತನ ನ್ಯಾಣಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದರು. ಆದರೆ ಇದೀಗ ಕೊರೊನಾ ವಿರುದ್ಧ ಹೋರಾಡಲು ಪಿಎಂ ಕೇರ್ಸ್ ನಿಧಿಗೆ ಮತ್ತು ಒಡಿಶಾ ಸರ್ಕಾರದ ಸಿಎಂ ಪರಿಹಾರ ನಿಧಿಗೆ ಹಣ ನೀಡಲು ಮುಂದಾಗಿದ್ದಾರೆ.

    ಈ ಬಗ್ಗೆ ಮಾತನಾಡಿದ ನಾಣ್ಯಶಾಸ್ತ್ರಜ್ಞ, ಪ್ರತಿದಿನ ನಾನು ಮಾಧ್ಯಮಗಳಲ್ಲಿ ಕೊರೊನಾದಿಂದ ಭಾರತ ಮತ್ತು ಇತರ ದೇಶಗಳಲ್ಲಿ ಹೆಚ್ಚುತ್ತಿರುವ ಸಾವುಗಳು ಬಗ್ಗೆ ನೋಡಿದ್ದೇನೆ. ಈಗ ದೇಶ ತುಂಬಾ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಆದ್ದರಿಂದ ನಾನು ಇಂತಹ ಸಮಯದಲ್ಲಿ ಏನಾದರೂ ಮಾಡಬೇಕು ಎಂದು ಯೋಚಿಸಿದೆ. ನಾಣ್ಯಗಳನ್ನು ಮಾರಾಟ ಮಾಡುವ ಆಲೋಚನೆ ನನಗೆ ಎಂದಿಗೂ ಬಂದಿರಲಿಲ್ಲ. ಎಲ್ಲಾ ವರ್ಷಗಳಲ್ಲಿ ನಾಣ್ಯಗಳನ್ನು ನಾನೇ ಖರೀದಿಸಿ ಸಂಗ್ರಹಿಸುತ್ತಿದ್ದೆ. ಆದರೆ ಈಗ ಜನರಿಗೆ ಸಹಾಯ ಮಾಡುವುದಕ್ಕಾಗಿ ನಾನು ಅದನ್ನು ಹರಾಜು ಮಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದರು.

    ಮಂಗರಾಜ್ ಈಗ ಮುಂಬೈನಲ್ಲಿರುವ ತಮ್ಮ ಸಹೋದರಿಯೊಂದಿಗೆ ವಾಸಿಸುತ್ತಿದ್ದಾರೆ. ಅವರನ್ನು ನಾಣ್ಯಗಳನ್ನು ಮಾರಾಟ ಮಾಡಲು ಸಂಪರ್ಕಿಸಿದ್ದಾರೆ. ಈಗಾಗಲೇ ನಾಣ್ಯಗಳಿಗೆ ಕೋಟ್ಯಂತರ ರೂಪಾಯಿ ನೀಡಲು ಕೆಲವರು ಮುಂದಾಗಿದ್ದಾರೆ. ಮುಂದಿನ ತಿಂಗಳು ಭುವನೇಶ್ವರದಲ್ಲಿ ಹರಾಜನ್ನು ನಿಗದಿ ಮಾಡಲಾಗಿದೆ. ಆಫ್‍ಲೈನ್‍ನಲ್ಲಿ ಹರಾಜು ನಡೆಯಲಿದೆ.

    ನಾಣ್ಯಗಳು:
    ಚಕ್ರವರ್ತಿಗಳಾದ ಅಶೋಕ, ಚಂದ್ರಗುಪ್ತ ಮೌರ್ಯ, ಗುಪ್ತಾ ರಾಜವಂಶ ಮತ್ತು ಮರಾಠ ರಾಜ ಶಿವಾಜಿಯ ಕಾಲದಿಂದ ನಾಣ್ಯಗಳನ್ನು ಸಂಗ್ರಹಿಸಿದ್ದಾರೆ. ಅಲ್ಲದೇ ಬ್ರಿಟಿಷ್ ನಾಣ್ಯಗಳ ಪೈಕಿ, ಕಿಂಗ್ ಜಾರ್ಜ್ 5, ಕಿಂಗ್ ಜಾರ್ಜ್ 6 ಮತ್ತು ರಾಣಿ ವಿಕ್ಟೋರಿಯಾ ಆಳ್ವಿಕೆಯಲ್ಲಿ ಹಲವಾರು ನಾಣ್ಯಗಳನ್ನು ಸಂಗ್ರಹಿಸಿದ್ದಾರೆ. ಜೊತೆಗೆ ಅಮೆರಿಕ, ಇಂಗ್ಲೆಂಡ್, ಹಾಂಗ್‍ಕಾಂಗ್, ಬೆಲ್ಜಿಯಂ, ಫ್ರಾನ್ಸ್, ಆಸ್ಟ್ರೇಲಿಯಾ, ಇಟಲಿ, ನೇಪಾಳದ ಲೋಹ ಮತ್ತು ಕಾಗದದ ಕರೆನ್ಸಿಗಳನ್ನು ಸಂಗ್ರಹಿಸಿದ್ದಾರೆ.

    ಸುಮಾರು 20 ವಿವಿಧ ದೇಶಗಳ ನಾಣ್ಯಗಳು ಮತ್ತು ಪ್ಲಾಸ್ಟಿಕ್, ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳಿಂದ ಮಾಡಿದ ನಾಣ್ಯಗಳು ಸಹ ಇವೆ ಎಂದು ಮಂಗರಾಜ್ ತಿಳಿಸಿದ್ದಾರೆ. ಕೊರೊನಾ ವಿರುದ್ಧ ಹೋರಾಡಲು ಸರ್ಕಾರಕ್ಕೆ ಸಹಾಯ ಮಾಡಲು ನಾಣ್ಯಶಾಸ್ತ್ರಜ್ಞ ತಾವು ಸಂಗ್ರಹಿಸಿದ್ದ ಪುರಾತನ ಕಾಲದ ನಾಣ್ಯಗಳನ್ನು ಹರಾಜು ಮಾಡಲು ನಿರ್ಧರಿಸಿದ್ದಾರೆ.

  • ಮೂರು ಫಂಡ್‍ಗೆ ತಲಾ 1 ಲಕ್ಷ ಪಿಂಚಣಿ ದೇಣಿಗೆ ನೀಡಿದ ದೇವೇಗೌಡ್ರು

    ಮೂರು ಫಂಡ್‍ಗೆ ತಲಾ 1 ಲಕ್ಷ ಪಿಂಚಣಿ ದೇಣಿಗೆ ನೀಡಿದ ದೇವೇಗೌಡ್ರು

    ಬೆಂಗಳೂರು: ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರು ತಮ್ಮ ಪಿಂಚಣಿ ಹಣವನ್ನು ಕೊರೊನಾ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ.

    ದೇವೇಗೌಡರು ಪಿಎಂ ಕೇರ್ಸ್ ಫಂಡ್, ಮುಖ್ಯಮಂತ್ರಿ ಪರಿಹಾರ ನಿಧಿ ಮತ್ತು ಕೇರಳ ಸಿಎಂ ಪರಿಹಾರ ನಿಧಿಗೆ ತಲಾ ಒಂದೊಂದು ಲಕ್ಷ ದೇಣಿಗೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.

    “ಕೊರೊನಾ ನಿಯಂತ್ರಣ ನಿಧಿಗೆ ನಾನು ಪಡೆಯುವ ಪಿಂಚಣಿ ಹಣವನ್ನು ನೀಡುತ್ತಿದ್ದೇವೆ. ಪಿಎಂ ಕೇರ್ಸ್ ಫಂಡ್, ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿ ಮತ್ತು ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ 1 ಲಕ್ಷ ನೀಡುತ್ತಿದ್ದೇವೆ” ಎಂದು ಬರೆದುಕೊಂಡಿದ್ದಾರೆ.

    ಈ ಮೂಲಕ ಕೊರೊನಾ ಪರಿಹಾರ ನಿಧಿಗೆ ದೇವೇಗೌಡರು ಮೂರು ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನೀಡುತ್ತಿದ್ದಾರೆ. ಮಹಾಮಾರಿ ಕೊರೊನಾ ವೈರಸ್‍ಗೆ ಇಡೀ ದೇಶವೇ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದೆ. ಹೀಗಾಗಿ ಪಿಎಂ, ಸಿಎಂ ಕೊರೊನಾ ಪರಿಹಾರ ನಿಧಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ಅನೇಕರು ಕೊರೊನಾ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.

  • ಕೊರೊನಾ ವಿರುದ್ಧ ಹೋರಾಟಕ್ಕೆ ಟಾಲಿವುಡ್ ನಾಯಕರ ಆರ್ಥಿಕ ಸಹಾಯ – ಯಾರು ಎಷ್ಟು ಕೊಟ್ಟಿದ್ದಾರೆ?

    ಕೊರೊನಾ ವಿರುದ್ಧ ಹೋರಾಟಕ್ಕೆ ಟಾಲಿವುಡ್ ನಾಯಕರ ಆರ್ಥಿಕ ಸಹಾಯ – ಯಾರು ಎಷ್ಟು ಕೊಟ್ಟಿದ್ದಾರೆ?

    ಹೈದರಾಬಾದ್: ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಭಾರತ ಬಂದ್ ಆಗಿದೆ. ಇಡೀ ದೇಶದ ಜನರು ಕೋವಿಂಡ್ ವಿರುದ್ಧ ಹೋರಾಡಲು ಒಗ್ಗಟ್ಟಾಗಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಆರ್ಥಿಕ ಸಹಾಯ ಮಾಡುವಂತೆ ದೇಶದ ಜನರನ್ನು ಕೋರಿದ್ದಾರೆ.

    ಪಿಎಂ ಮತ್ತು ಸಿಎಂಗಳ ಮನವಿ ಸ್ಪಂದಿಸಿರುವ ಟಾಲಿವುಡ್ ನಾಯಕರು ಸರ್ಕಾರದ ನೆರವಿಗೆ ಬಂದಿದ್ದಾರೆ. ನಟ ಪವನ್ ಕಲ್ಯಾಣ ಎರಡು ಕೋಟಿ ಆರ್ಥಿಕ ನೆರವು ನೀಡಿದ್ದಾರೆ. ಈ ಪೈಕಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಒಂದು ಕೋಟಿ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ 50 ಲಕ್ಷ ರೂ. ನೆರವು ನೀಡಿದ್ದಾರೆ.

    ಟಾಲಿವುಡ್‍ನ ಮತ್ತೋರ್ವ ನಟ ಮಹೇಶ್ ಬಾಬು ಆಂಧ್ರ ಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಕೋಟಿ ನೀಡಿ ಸಹಾಯ ಹಸ್ತ ಚಾಚಿದ್ದಾರೆ.

    ಪವನ್ ಕಲ್ಯಾಣ ಆರ್ಥಿಕ ಸಹಾಯ ಮಾಡಿದ್ದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದರಿಂದ ಪ್ರೇರಣೆಗೊಂಡ ನಟ ರಾಮ್‍ಚರಣ್ 70 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದು, ಕೇಂದ್ರ ಸರ್ಕಾರ ಮತ್ತು ಆಂಧ್ರ ಪ್ರದೇಶ, ತೆಲಂಗಾಣ ಸರ್ಕಾರ ಪರಿಹಾರ ನಿಧಿಗೆ ಹಂಚಿಕೆ ಮಾಡಿದ್ದಾರೆ.

    ಕೊರೊನಾ ವಿರುದ್ಧದ ಹೋರಾಟಕ್ಕೆ ಎಲ್ಲರೂ ಒಂದಾಗಬೇಕಿದ್ದು, ಸರ್ಕಾರದ ನೆರವಿಗೆ ನಿಲ್ಲಬೇಕಿದೆ. ಎಲ್ಲರೂ ಸಾಧ್ಯವಾದಷ್ಟು ನೆರವು ನೀಡಿ ಎಂದು ಈ ನಟರು ಮನವಿ ಮಾಡಿಕೊಂಡಿದ್ದಾರೆ.

  • ತುರ್ತು 100 ಕೋಟಿ ರೂ. ಬಿಡುಗಡೆ – ಯಾವ ಜಿಲ್ಲೆಗೆ ಎಷ್ಟು ಕೋಟಿ?

    ತುರ್ತು 100 ಕೋಟಿ ರೂ. ಬಿಡುಗಡೆ – ಯಾವ ಜಿಲ್ಲೆಗೆ ಎಷ್ಟು ಕೋಟಿ?

    ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಬಂದ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಗಳಿಗೆ ನೆರವಾಗಲು ಸರ್ಕಾರ 15 ಜಿಲ್ಲೆಗಳಿಗೆ ಒಟ್ಟಾಗಿ ತುರ್ತು 100 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ.

    ಅತಿ ಹೆಚ್ಚು ಹಾನಿಯಾಗಿರುವ ಬೆಳಗಾವಿಗೆ 25 ಕೋಟಿ ರೂ. ಬಿಡುಗಡೆ ಮಾಡಿದ್ದರೆ ಬಾಗಲಕೋಟೆ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ತಲಾ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿ ಅನುದಾನ ಬಿಡುಗಡೆಗೊಳಿಸಿ ಸರ್ಕಾರದ ಆದೇಶ ಹೊರಡಿಸಿದೆ.

    ಪರಿಹಾರ ಕಾಮಗಾರಿಗೆ ಪ್ರಸಕ್ತ ವರ್ಷದ ಎನ್‌ಡಿಆರ್‌ಎಫ್‌ ನಿಧಿಯ ಎರಡನೇ ಕಂತು 126 ಕೋಟಿ ರೂ. ಹಣವನ್ನು ಬಿಡುಗಡೆ ಮಾಡುವಂತೆ ಸರ್ಕಾರ ಕೇಂದ್ರದಲ್ಲಿ ಮನವಿ ಮಾಡಿದೆ. ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಸಂಜೀವ್ ಕುಮಾರ್ ಜಿಂದಾಲ್ ಅವರಿಗೆ ರಾಜ್ಯ ಕಂದಾಯ ಇಲಾಖೆ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್ ಪತ್ರ ಬರೆದಿದ್ದಾರೆ.

    ಯಾವ ಜಿಲ್ಲೆಗೆ ಎಷ್ಟು ಕೋಟಿ ರೂ?
    ಬೆಳಗಾವಿ 25 ಕೋಟಿ ರೂ., ಬಾಗಲಕೋಟೆ ಮತ್ತು ಉತ್ತರ ಕನ್ನಡ 10 ಕೋಟಿ ರೂ., ವಿಜಯಪುರ, ಯಾದಗಿರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ, ಕೊಡಗು, ಚಿಕ್ಕಮಗಳೂರು, ಹಾಸನ, ಧಾರವಾಡ, ಗದಗ, ಕಲಬುರಗಿಗೆ ತಲಾ 5 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ.

  • ಭೀಕರ ಪ್ರವಾಹಕ್ಕೆ ಅಸ್ಸಾಂ ತತ್ತರ- 2 ಕೋಟಿ ನೆರವು ನೀಡಲು ಮುಂದಾದ ಅಕ್ಷಯ್ ಕುಮಾರ್

    ಭೀಕರ ಪ್ರವಾಹಕ್ಕೆ ಅಸ್ಸಾಂ ತತ್ತರ- 2 ಕೋಟಿ ನೆರವು ನೀಡಲು ಮುಂದಾದ ಅಕ್ಷಯ್ ಕುಮಾರ್

    ನವದೆಹಲಿ: ಭೀಕರ ಪ್ರವಾಹಕ್ಕೆ ತುತ್ತಾಗಿರುವ ಅಸ್ಸಾಂಗೆ ಬಾಲಿವುಡ್ ಆಕ್ಷನ್ ಹೀರೋ ಅಕ್ಷಯ್ ಕುಮಾರ್ ಅವರು ಪ್ರವಾಹ ಪೀಡಿತ ಜನರಿಗೆ ಮತ್ತು ಕಾಜಿರಂಗ ಉದ್ಯಾನವನಕ್ಕೆ ತಲಾ 1 ಕೋಟಿ ರೂಪಾಯಿಯಂತೆ ಒಟ್ಟು 2 ಕೋಟಿ ರೂ. ಸಹಾಯ ಧನವನ್ನು ನೀಡಲು ಮುಂದಾಗಿದ್ದಾರೆ.

    ತಮ್ಮ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಘೋಷಿಸಿಕೊಂಡಿರುವ ಅಕ್ಷಯ್ ಕುಮಾರ್, ಅಸ್ಸಾಂನಲ್ಲಿ ಪ್ರವಾಹದಿಂದ ಎದುರಾಗಿರುವ ಪರಿಸ್ಥಿತಿ ನಿಜಕ್ಕೂ ಹೃದಯವಿದ್ರಾವಕವಾಗಿದೆ. ಪ್ರವಾಹ ಪೀಡಿತರಾದ ಎಲ್ಲಾ ಮನುಷ್ಯರು ಹಾಗೂ ಪ್ರಾಣಿಗಳು, ಈ ಸಂಕಷ್ಟದ ಸಮಯದಲ್ಲಿ ಸಹಾಯಕ್ಕೆ ಅರ್ಹ. ಆದ್ದರಿಂದ ನಾನು ಸಿಎಂ ಪರಿಹಾರ ನಿಧಿಗೆ ಹಾಗೂ ಕಾಜಿರಂಗ ಪಾರ್ಕ್ ರಕ್ಷಣೆಗೆ ತಲಾ ಒಂದು ಕೋಟಿ ರೂ. ದಾನ ಮಾಡಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ. ಅಲ್ಲದೆ ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಕೂಡ ಸಂತ್ರಸ್ಥರಿಗೆ ಸಹಾಯ ಹಸ್ತಚಾಚಿ ನೆರವಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಇತ್ತ ಭಾರತದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ಅಸ್ಸಾಂನ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ತಮ್ಮ ಒಂದು ತಿಂಗಳ ಸಂಬಳದಲ್ಲಿ ಅರ್ಧದಷ್ಟು ದಾನ ಮಾಡಿದ್ದಾರೆ. ಅಲ್ಲದೆ ನನ್ನ ಅಸ್ಸಾಂಗೆ ಸಹಾಯ ಮಾಡಲು ಮುಂದೆ ಬನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ. ಹಿಮಾ ಇಂಡಿಯನ್ ಆಯಿಲ್ ಕಂಪನಿಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಉದ್ಯೋಗದಲ್ಲಿದ್ದು, ತಮ್ಮ ಸಂಬಳದ ಅರ್ಧದಷ್ಟು ಹಣವನ್ನು ಭಾರತೀಯ ತೈಲ ನಿಗಮದ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.

    ಬ್ರಹ್ಮಪುತ್ರ ನದಿಯ ಪ್ರವಾಹದಿಂದಾಗಿ ಅಸ್ಸಾಂನಲ್ಲಿ ಭೂಕುಸಿತವಾಗಿ ಈವೆರೆಗೆ 15 ಮಂದಿ ಬಲಿಯಾಗಿದ್ದಾರೆ. ಹಾಗೆಯೇ ಪ್ರವಾಹದಿಂದ 46 ಲಕ್ಷಕ್ಕೂ ಹೆಚ್ಚು ಮಂದಿ ಸಂಕಷ್ಟದಲ್ಲಿದ್ದಾರೆ. ಕಾಜಿರಂಗದಲ್ಲಿ 10 ಲಕ್ಷಕ್ಕೂ ಹೆಚ್ಚು ಪ್ರಾಣಿಗಳ ಮೇಲೆ ಪ್ರವಾಹ ಪರಿಣಾಮ ಬೀರಿದೆ.

    ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದ ಶೇ.90ರಷ್ಟು ಭಾಗವು ಜಲಾವೃತವಾಗಿದೆ ಎನ್ನಲಾಗಿದೆ. ಅಲ್ಲದೆ ಪ್ರಾಣಿಗಳು ಸುರಕ್ಷಿತ ಸ್ಥಳವನ್ನು ಹುಡುಕಿ ಸಾಗುವಾಗ ಹೆದ್ದಾರಿ ಮೇಲೆ ಹೋಗುತ್ತದೆ. ಹೀಗಾಗಿ ಉದ್ಯಾನವನವನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 37ರಲ್ಲಿ ಸವಾರರು ಕಡಿಮೆ ವೇಗದಲ್ಲಿ ವಾಹನ ಚಲಾಯಿಸುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.

    ಅಸ್ಸಂನಲ್ಲಿ ಉಂಟಾಗಿರುವ ಪ್ರವಾಹಕ್ಕೆ ಸುಮಾರು 4,175 ಹಳ್ಳಿಗಳು ಜಲಾವೃತಗೊಂಡಿದ್ದು, ಸುಮಾರು 90 ಸಾವಿರ ಹೆಕ್ಟರ್ ಕೃಷಿ ಭೂಮಿ ಕೂಡ ನೀರಿನಲ್ಲಿ ಮುಳುಗಡೆಯಾಗಿದೆ.

  • ಸಿಎಂ ಪರಿಹಾರ ನಿಧಿಗೆ ಶಿವಣ್ಣರಿಂದ 10 ಲಕ್ಷ ಚೆಕ್

    ಸಿಎಂ ಪರಿಹಾರ ನಿಧಿಗೆ ಶಿವಣ್ಣರಿಂದ 10 ಲಕ್ಷ ಚೆಕ್

    ಬೆಂಗಳೂರು: ಪ್ರವಾಹದಿಂದ ತತ್ತರಿಸಿ ಹೋಗಿರುವ ಕೊಡಗು ಮಂದಿಗೆ ರಾಜ್ಯದ ಮೂಲೆ ಮೂಲೆಗಳಿಂದ ನೆರವು ಹರಿದು ಬರುತ್ತಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ. ನೆರವು ನೀಡಿದ್ದಾರೆ.

    ನಟ ಶಿವರಾಜ್‍ಕುಮಾರ್ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಶಿವಣ್ಣ ಸಿಎಂ ಪರಿಹಾರ ನಿಧಿಗೆ 10 ಲಕ್ಷ ಚೆಕ್ ಕೂಡ ನೀಡಿದರು. ಅಲ್ಲದೇ ಅಭಿಮಾನಿಗಳಲ್ಲಿ ಮನವಿ ಕೂಡ ಮಾಡಿಕೊಂಡರು.

    ಇದೇ ವೇಳೆ ಮಾತನಾಡಿದ ಶಿವರಾಜ್‍ಕುಮಾರ್, ಕರ್ನಾಟಕ ಒಂದೇ. ಯಾರದ್ದೇ ಕಷ್ಟ ಇದ್ದರು ನಾವು ಸ್ಪಂಧಿಸಬೇಕು. ಮಂಗಳೂರು, ಕೊಡಗು, ಉತ್ತರ ಕರ್ನಾಟಕ ಅಂತ ಇಲ್ಲ. ಅಖಂಡ ಕರ್ನಾಟಕ ನಮ್ಮದು. ಯಾರದ್ದೇ ಕಷ್ಟ ಆದ್ರು ನಾವು ಸಹಾಯ ಮಾಡಬೇಕು. ಎಲ್ಲಾ ಜನರು ಕೈಲಾದಷ್ಟು ಸಹಾಯ ಮಾಡಿ. ಅಭಿಮಾನಿಗಳು, ನಟರು, ಜನರು ಸಹಾಯ ಮಾಡುವಂತೆ ಶಿವಣ್ಣ ಮನವಿ ಮಾಡಿಕೊಂಡರು.

    ನಿರ್ದೇಶಕ ಪವನ್ ಒಡೆಯರ್ ಮದುವೆಯಲ್ಲಿ ಪುನೀತ್ ರಾಜ್‍ಕುಮಾರ್ ಭಾಗಿಯಾಗಿದ್ದರು. ಇದೇ ವೇಳೆ ಕೊಡಗಿನಲ್ಲಿ ಸಂಭವಿಸಿರುವ ಪ್ರವಾಹದ ಪರಿಸ್ಥಿತಿ ಬಗ್ಗೆ ಮಾತನಾಡಿ, ಕೊಡಗಿನ ಜನತೆಗೆ ನನ್ನ ಕೈಲಾದಷ್ಟು ನಾನು ಸಹಾಯ ಮಾಡಿದ್ದೇನೆ. ಎಲ್ಲರೂ ಅವರ ಶಕ್ತಿಯಾನುಸಾರ ಸಹಾಯ ಮಾಡಬೇಕು. ಸಂತ್ರಸ್ತ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗು ಪರಿಹಾರ ನಿಧಿ- ಸಹಾಯ ಮಾಡುವಂತೆ ಸಿಎಂ ಎಚ್‍ಡಿಕೆ ಮನವಿ

    ಕೊಡಗು ಪರಿಹಾರ ನಿಧಿ- ಸಹಾಯ ಮಾಡುವಂತೆ ಸಿಎಂ ಎಚ್‍ಡಿಕೆ ಮನವಿ

    ಬೆಂಗಳೂರು: ಪ್ರವಾಹದಿಂದ ತೀವ್ರ ತತ್ತರಿಸಿ ಹೋಗಿರುವ ಕೊಡಗು ಜಿಲ್ಲೆಯ ಜನತೆಗೆ ಸಹಾಯ ಮಾಡುವಂತೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

    ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ಸಾರ್ವಜನಿಕರು ಕೊಡುಗೆ ನೀಡುವಂತೆ ಕೋರಿದ್ದಾರೆ. ವಿಧಾನಸೌಧ ವಿಳಾಸಕ್ಕೆ ಚೆಕ್ ಅಥವಾ ಡಿಡಿ ರೂಪದಲ್ಲಿ ಮಾತ್ರವಲ್ಲದೆ ಆನ್ ಲೈನ್ ಮೂಲಕವೂ ಸಲ್ಲಿಸಬಹುದು ಅಂತ ಮನವಿ ಮಾಡಿದ್ದಾರೆ. ಹೆಚ್ಚಿನ ವಿವರಗಳ ಬಗ್ಗೆ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ.

    ಪ್ರವಾಹದಿಂದ ತತ್ತರಿಸಿ ಹೋಗಿರುವ ಕೊಡಗು ಮಂದಿಗೆ ರಾಜ್ಯದ ಮೂಲೆ ಮೂಲೆಗಳಿಂದ ನೆರವು ಹರಿದು ಬರುತ್ತಿದೆ. ಈಗಾಗಲೇ ಹ್ಯಾಟ್ರಿಕ್ ಹೀರೋ ಶಿವರಾಜ್‍ ಕುಮಾರ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ. ನೆರವು ನೀಡಿದ್ದಾರೆ. ರಾಜ್ಯ ಸಭಾ ಸದಸ್ಯ ಕುಪ್ಪೆಂದ್ರ ರೆಡ್ಡಿ ಅವರು 25 ಲಕ್ಷ ರೂ. ಚೆಕ್ ನೀಡಿದ್ದಾರೆ. ಆನಂದ್ ನಾಗಮಂಗಲದ ನಿವಾಸಿ ಮನೆ ಗೃಹ ಪ್ರವೇಶ ನಿಲ್ಲಿಸಿ 1 ಲಕ್ಷ ರೂ. ಸಿಎಂ ಪರಿಹಾರ ನಿಧಿಗೆ ಹಣ ನೀಡಿದ್ದಾರೆ.

    ರಾಜ್ಯದ ಸಾರಿಗೆ ಸಿಬ್ಬಂದಿಗಳು ತಮ್ಮ ಒಂದು ದಿನದ ವೇತನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲು ಮುಂದಾಗಿದ್ದಾರೆ. ಆಗಸ್ಟ್ ತಿಂಗಳ ಒಂದು ದಿನದ ವೇತನ ನೀಡಲು ತಿರ್ಮಾನಿಸಿದ್ದು, ಒಟ್ಟು 1.16 ಲಕ್ಷ ಸಿಬ್ಬಂದಿ ಇದ್ದು, ಅಂದಾಜು 11. 80 ಕೋಟಿ ರೂ. ಹಣವನ್ನು ನೀಡಲು ತಿರ್ಮಾನ ಮಾಡಿದ್ದಾರೆ.

    ಕೊಡಗು ಪ್ರವಾಹದ ಬಗ್ಗೆ ಕುಮಾರಸ್ವಾಮಿ ಸಭೆ ನಡೆಸಿದ್ದು, ಎರಡು ದಿನಗಳ ಕಾಲ ಕೊಡಗು ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಾಗಿದೆ. ಹಲವು ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗಿದ್ದು, 12 ಜನ ಮೃತಪಟ್ಟಿದ್ದಾರೆ. ಸುಮಾರು 845 ಮನೆಗಳು ಪೂರ್ಣ ಹಾನಿಗೊಳಗಾಗಿವೆ ಎಂದು ಎಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

    ಇದೇ ವೇಳೆ ಕೊಡಗಿನ ನಿರಾಶ್ರಿತರಿಗೆ ಸರ್ಕಾರ ತಾತ್ಕಾಲಿಕ ಪರಿಹಾರ ಘೋಷಿಸಿದೆ. ಸದ್ಯಕ್ಕೆ 3,800 ರೂಪಾಯಿ ಹಣ ನೀಡಲು ನಿರ್ಧರಿಸಿದ್ದಾರೆ. ಜೊತೆಗೆ 10 ಕೆ.ಜಿ ಅಕ್ಕಿ, 1 ಕೆಜಿ ಸಕ್ಕರೆ, 1ಕೆಜಿ ಎಣ್ಣೆ, 1 ಕೆಜಿ ತೊಗರಿ ಬೇಳೆ, 5 ಲೀಟರ್ ಸೀಮೆಎಣ್ಣೆಯನ್ನು ಉಚಿತವಾಗಿ ನೀಡಲಿದೆ. ನಿರಾಶ್ರಿತರಿಗೆ ನರೇಗಾ ಯೋಜನೆಯಲ್ಲಿ ಕೆಲಸ ನೀಡಲು ಸಿಎಂ ಆದೇಶಿಸಿದ್ದು, 2 ಸಾವಿರ ಅಲ್ಯೂಮಿನಿಯಂ ಶೆಡ್ ನಿರ್ಮಿಸಲು ಸೂಚಿಸಿದ್ದಾರೆ.

    ಕೊಡಗಿನಲ್ಲಿ ಮಳೆಯಿಂದ ಹಾನಿ ಹಿನ್ನೆಲೆ
    ಹೊಸ ರಿಲೀಫ್ ಅಕೌಂಟ್ ತೆರೆದ ಸಿಎಂ
    ಖಾತೆ ಸಂಖ್ಯೆ : 37887098605
    ಐಎಫ್‍ಎಸ್‍ಸಿ ಕೋಡ್ : ಎಸ್‍ಬಿಐಎನ್ 0040277
    ಎಂಐಸಿಆರ್ : 560003419

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗಿನ ಸಂತ್ರಸ್ತರಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ 2 ಕೋಟಿ ರೂ. ಪರಿಹಾರ

    ಕೊಡಗಿನ ಸಂತ್ರಸ್ತರಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ 2 ಕೋಟಿ ರೂ. ಪರಿಹಾರ

    ಮಂಗಳೂರು: ಕೊಡಗಿನ ಸಂತ್ರಸ್ತರಿಗೆ ರಾಜ್ಯದ ಸಂಘ, ಸಂಸ್ಥೆ, ದೇವಸ್ಥಾನ ಸಮಿತಿ, ನಾಯಕರು ಸೇರಿದಂತೆ ಜನಸಾಮಾನ್ಯರು ಧನ ಸಹಾಯಕ್ಕೆ ಮುಂದಾಗಿದ್ದಾರೆ. ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಮಿತಿಯು 2 ಕೋಟಿ ರೂ. ನೆರವುವನ್ನು ನೀಡಿದೆ.

    ದೇವಸ್ಥಾನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ನೇತೃದಲ್ಲಿ ವ್ಯವಸ್ಥಾಪನಾ ಸಮಿತಿ ಸಭೆ ನಡೆಸಿ, ಈ ನಿರ್ಣಯ ಕೈಗೊಳ್ಳಲಾಗಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣವನ್ನು ನೀಡಲು ಸಮಿತಿಯ ಸದಸ್ಯರು ನಿರ್ಧರಿಸಿದ್ದಾರೆ.

    ದಾವಣಗೆರೆ: ಜಿಲ್ಲಾ ಸಹಕಾರ ಬ್ಯಾಂಕ್ ಒಕ್ಕೂಟ ಗೌರವಾಧ್ಯಕ್ಷ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರು, ಬ್ಯಾಂಕ್‍ನಿಂದ ಕೇರಳ ಹಾಗೂ ಮಡಿಕೇರಿ ಸಂತ್ರಸ್ತರಿಗೆ ನೀಡಲು 1 ಕೋಟಿ ಪರಿಹಾರ ನೀಡಲು ನಿರ್ಧರಿಸಿದ್ದಾರೆ.

    ಒಟ್ಟು 1 ಕೋಟಿ ರೂ.ಗಳಲ್ಲಿ 50 ಲಕ್ಷ ರೂ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಾಗೂ 50 ಲಕ್ಷ ರೂ.ವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ. ಜೊತೆಗೆ ಶಾಮನೂರು ಶಿವಶಂಕರಪ್ಪ ಅವರು ಕೇರಳ ಹಾಗೂ ಕೊಡಗಿಗೆ ವೈಯಕ್ತಿಕ 25 ಲಕ್ಷ ರೂ. ನೀಡಲು ಮುಂದಾಗಿದ್ದಾರೆ.

    ಬೀದರ್: ನಗರದಲ್ಲಿಯೂ ಕೂಡಾ ಭಗತ್ ಸಿಂಗ್ ಯೂತ್ ಬ್ರೀಗೆಡ್ ಸಂಘಟನೆಯು ಶನಿವಾರದಿಂದ ಅಭಿಯಾನ ಪ್ರಾರಂಭ ಮಾಡಿದೆ. ಕಾರ್ಯಕರ್ತರು ರಸ್ತೆಗಳಿದು ಪರಿಹಾರ ನಿಧಿ, ಆಹಾರ ಸಾಮಗ್ರಿಗಳು, ಔಷಧಿ, ಸಂತ್ರಸ್ತರಿಗೆ ಬೇಕಾಗುವ ಬಟ್ಟೆ, ಆಹಾರ ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/QCNusRT6oCA