Tag: ಪರಿಸರ

  • ಬೆಂಗಳೂರು ನಿವಾಸಿಗಳೇ ಗಮನಿಸಿ, ಮನೆ ಕಟ್ಟೋಕು ಮುನ್ನಾ ಸಸಿ ನೆಡುವುದು ಕಡ್ಡಾಯ..!

    ಬೆಂಗಳೂರು ನಿವಾಸಿಗಳೇ ಗಮನಿಸಿ, ಮನೆ ಕಟ್ಟೋಕು ಮುನ್ನಾ ಸಸಿ ನೆಡುವುದು ಕಡ್ಡಾಯ..!

    ಬೆಂಗಳೂರು: ನಗರದ ನಿವಾಸಿಗಳೇ ಸ್ವಲ್ಪ ಇತ್ತ ಗಮನಿಸಿ. ನೀವೇನಾದ್ರೂ ಸಿಲಿಕಾನ್ ಸಿಟಿಯಲ್ಲಿ ಮನೆ ಕಟ್ಟೋದಿಕ್ಕೆ ಪ್ಲಾನ್ ಮಾಡ್ತಾ ಇದ್ದೀರಾ? ಹಾಗಾದ್ರೆ ಇನ್ಮುಂದೆ ಮನೆ ಕಟ್ಟೋಕು ಮುನ್ನಾ ಸಸಿ ನೆಡುವುದು ಕಡ್ಡಾಯವಾಗಿದೆ.

    ಹೌದು. ಉದ್ಯಾನ ನಗರಿ ಎಂದು ಕರೆಸಿಕೊಳ್ಳುತ್ತಿದ್ದ ಬೆಂಗಳೂರು, ಇದೀಗ ಕಾಂಕ್ರಿಟ್ ಸಿಟಿಯಾಗಿ ಮಾರ್ಪಾಡಾಗ್ತಿದೆ. ಹಸಿರೆಂಬುದೆ ಅಪರೂಪವೆಂಬಂತಾಗಿದೆ. ಹೀಗಾಗಿ ಕೊನೆಗೂ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಬೆಂಗಳೂರನ್ನು ಮತ್ತೆ ಗಾರ್ಡನ್ ಸಿಟಿ ಮಾಡಲು ಹೊರಟಿದೆ.

    ಇನ್ಮುಂದೆ ನೀವು ಮನೆ ಕಟ್ಟೋಕು ಮುನ್ನಾ ಎರಡು ಸಸಿಗಳನ್ನು ನೆಡಲೇಬೇಕು. ಅಥವಾ ಎರಡು ಸಸಿಯನ್ನು ನೆಡುವಷ್ಟು ಜಾಗವನ್ನಾದ್ರೂ ಬಿಡಲೇಬೇಕು. ಒಂದು ವೇಳೆ ನೀವು ಈ ರೂಲ್ಸ್ ಬ್ರೇಕ್ ಮಾಡಿದ್ದೇ ಆದಲ್ಲಿ ಅಂಥವರ ವಿರುದ್ಧ ಬಿಬಿಎಂಪಿ ಕಠಿಣ ಕ್ರಮ ತೆಗೆದುಕೊಳ್ಳಲಿದೆ.

    ಇದೇನು ಹೊಸ ಕಾಯ್ದೆಯಲ್ಲ. ಗೃಹ ನಿರ್ಮಾಣ ಕಾಯ್ದೆಯಲ್ಲಿ ಮೊದಲಿನಿಂದಲೂ ಈ ನಿಯಮವಿದೆ. ಯಾರೇ ಮನೆ ಕಟ್ಟಿದ್ರು ಮಳೇ ನೀರು ಹರಿದು ಹೋಗುವುದಕ್ಕೆ ಸೂಕ್ತ ವ್ಯವಸ್ಥೆ ಮತ್ತು ಎರಡು ಸಸಿಗಳನ್ನು ನೆಡುವುದು ಕಡ್ಡಾಯ. ಆದ್ರೆ ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಈ ನಿಯಮ ಸರಿಯಾದ ರೀತಿಯಲ್ಲಿ ಪಾಲನೆಯಾಗಿರಲಿಲ್ಲ.

    ಜನರು ಇದ್ದ ಮರಕ್ಕೂ ಕೊಡಲಿ ಏಟು ಹಾಕುತ್ತಿದ್ದರು. ಇದರಿಂದ ಪರಿಸರ ಪ್ರೇಮಿಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಕೊನೆಗೂ ನಿದ್ರೆಯಿಂದ ಎಚ್ಚೆತ್ತಿರುವ ಬಿಬಿಎಂಪಿ ಕಟ್ಟುನಿಟ್ಟಾಗಿ ಈ ಕಾಯ್ದೆಯನ್ನು ಜಾರಿಗೆ ತರಲು ಹೊರಟಿದೆ.

    ಬಿಬಿಎಂಪಿ ಹೆಚ್ಚಿನ ನಿಯಮಗಳು ಕಾಗದಕ್ಕೆ ಸೀಮಿತವಾಗಿದ್ದೆ ಹೆಚ್ಚು. ಈ ನಿಯಮವಾದ್ರೂ ಪಾಲನೆಯಾಗಿ ಬೆಂಗಳೂರು ಮತ್ತೆ ಹಸಿರಾಗುತ್ತಾ ಎಂದು ಕಾದು ನೋಡ್ಬೇಕಿದೆ.

  • ಮರ, ಗಿಡ ಬೆಳೆಸೋದಂದ್ರೆ ಪಂಚಪ್ರಾಣ – ಸೈಕಲ್‍ನಲ್ಲಿ ನೀರು ಹೊತ್ತು ಬೆಟ್ಟ ಏರ್ತಾರೆ ಚಿಕ್ಕಬಳ್ಳಾಪುರದ ಬ್ರಹ್ಮ ಚೈತನ್ಯ

    ಮರ, ಗಿಡ ಬೆಳೆಸೋದಂದ್ರೆ ಪಂಚಪ್ರಾಣ – ಸೈಕಲ್‍ನಲ್ಲಿ ನೀರು ಹೊತ್ತು ಬೆಟ್ಟ ಏರ್ತಾರೆ ಚಿಕ್ಕಬಳ್ಳಾಪುರದ ಬ್ರಹ್ಮ ಚೈತನ್ಯ

    ಚಿಕ್ಕಬಳ್ಳಾಪುರ: ಇವತ್ತಿನ ನಮ್ಮ ಪಬ್ಲಿಕ್ ಹೀರೋ ತುಂಬಾ ಡಿಫರೆಂಟ್. ತಮ್ಮ ಇಳಿ ವಯಸ್ಸಿನಲ್ಲಿಯೀ ಕಡಿದಾದ ಬೆಟ್ಟವನ್ನೇರಿ ಮರ-ಗಿಡಗಳಿಗೆ ನೀರುಣಿಸಿ, ತಮ್ಮ ಮಕ್ಕಳಿಗಿಂತಲೂ ಹೆಚ್ಚಾಗಿ ಪಾಲನೆ ಪೋಷಣೆ ಮಾಡ್ತಿದ್ದಾರೆ.

    ಜಿಲ್ಲೆಯ ಚಿಂತಾಮಣಿ ಪಟ್ಟಣದ ನಿವಾಸಿ 73 ವರ್ಷದ ಬ್ರಹ್ಮ ಚೈತನ್ಯ ಅವರು ನಮ್ಮ ಪಬ್ಲಿಕ್ ಹೀರೋ. ಪ್ಲಾಸ್ಟಿಕ್ ಕ್ಯಾನ್‍ಗಳಲ್ಲಿ ನೀರು ತುಂಬಿಕೊಂಡು, ಸೈಕಲ್ ತಳ್ಳಿಕೊಂಡು ತೀರ ಕಡಿದಾದ ಬೆಟ್ಟಗಳ ಸಾಗಿ ಮರಗಳಿಗೆ ನೀರುಣಿಸುತ್ತಿದ್ದಾರೆ.

    ಬೆಳಗ್ಗೆ ಎದ್ದರೆ ಕ್ಯಾನ್‍ಗಳಲ್ಲಿ ನೀರು ತುಂಬಿಕೊಂಡು ಕಾಡುಮಲ್ಲೇಶ್ವರ ಬೆಟ್ಟದ ತಪ್ಪಿನಲ್ಲಿರುವ ಮರಗಿಡಗಳ ಪೋಷಣೆಗೆ ಹೊರಡ್ತಾರೆ. ಕೃಷಿ ಇಲಾಖೆ ಸೇವೆಯಿಂದ ನಿವೃತ್ತರಾಗಿರೋ ಇವರು ಎಲ್ಲೆಲ್ಲಿ ಕೆಲಸ ಮಾಡಿದ್ದಾರೋ ಅಲ್ಲಿ ಎಲ್ಲ ಬಾದಾಮಿ, ಮಾವು, ನೇರಳೆ, ಗಸಗಸೆ, ಹುಣಸೆ ಹೀಗೆ 30 ಕ್ಕೂ ಹೆಚ್ಚು ಗಿಡಗಳನ್ನ ನೆಟ್ಟು ಬೆಳೆಸಿರುವುದು ವಿಶೇಷ.

    ಮೊದಲು ಬೆನ್ನಿಗೆ ನೀರು ತುಂಬಿದ ಕ್ಯಾನ್ ಕಟ್ಟಿಕೊಂಡು ಬೆಟ್ಟ ಏರುತ್ತಿದ್ದರು. ಇವರ ಕಷ್ಟ ಕಂಡ ಒಬ್ಬರು ಹಳೆಯ ಸೈಕಲ್ ದಾನ ಮಾಡಿದ್ದಾರೆ. ಹೀಗಾಗಿ ಸದ್ಯ ಪರಿಚಯಸ್ಥರ ಮನೆಯ ಸಂಪಿನಲ್ಲಿ ನೀರು ತುಂಬಿಕೊಂಡು, ಸೈಕಲ್‍ನಲ್ಲಿ ನೀರು ಕೊಂಡೊಯ್ತಿದ್ದಾರೆ. ಬಿಪಿ, ಶೂಗರ್ ಇದ್ರೂ ಆರೋಗ್ಯಕ್ಕಿಂತ ಮರಗಿಡಗಳ ಪೋಷಣೆಯಲ್ಲೇ ನೆಮ್ಮದಿ ಕಾಣ್ತಾರೆ.

    ಬ್ರಹ್ಮಚೈತನ್ಯರಿಗೆ ಎರಡು ಹೆಣ್ಣು ಹಾಗೂ ಒಬ್ಬ ಗಂಡು ಮಗನಿದ್ದಾನೆ. ಎಲ್ಲರೂ ಮದುವೆ ಮಾಡಿಕೊಂಡು ಆರಾಮಾಗಿದ್ದಾರೆ. ಮಕ್ಕಳು ಮೊಮ್ಮಕ್ಕಳ ಜೊತೆ ಹಾಯಾಗಿ ಇರಬೇಕಾದ ಈ ವಯಸ್ಸಲ್ಲಿ ಮರ ಗಿಡ ಬೆಳೆಸಿ ಪರಿಸರ ಪ್ರೇಮವನ್ನು ಎಲ್ಲರಿಗೂ ಮಾದರಿಯಾಗಿದ್ದಾರೆ.

    https://www.youtube.com/watch?v=d_deamYVCk8

  • ಸೈಕಲ್‍ನಲ್ಲೇ ಪ್ರೊಫೆಸರ್ ಓಡಾಟ-ಇಡೀ ಕಾಲೇಜಿಗೆ ಹಸಿರು ಹೊದಿಸಿದ ಶಿವಮೊಗ್ಗದ ಶಿಕ್ಷಕ

    ಸೈಕಲ್‍ನಲ್ಲೇ ಪ್ರೊಫೆಸರ್ ಓಡಾಟ-ಇಡೀ ಕಾಲೇಜಿಗೆ ಹಸಿರು ಹೊದಿಸಿದ ಶಿವಮೊಗ್ಗದ ಶಿಕ್ಷಕ

    ಶಿವಮೊಗ್ಗ: ಪರಿಸರ ಕಾಳಜಿ, ಕೇವಲ ಭಾಷಣಗಳಿಗೆ ಮಾತ್ರ ಸೀಮಿತವಾಗ್ತಿದೆ. ಆದರೆ ಪರಿಸರ ಉಳಿಸಿ ಅನ್ನೋದನ್ನು ವೈಯಕ್ತಿಕವಾಗಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಪ್ರೋಫೆಸರ್ ಒಬ್ಬರು ಕ್ಯಾಂಪಸ್‍ಗೆ ಸೈಕಲ್‍ನಲ್ಲೇ ಬರ್ತಾರೆ. ಅಷ್ಟೇ ಅಲ್ಲ, ಪರಿಸರ ಸ್ನೇಹಿ ಚಟುವಟಿಕೆಗಳಿಂದ ಎಲ್ಲರ ಗಮನ ಸೆಳೆದಿದ್ದಾರೆ.

    ಶಿವಮೊಗ್ಗದ ಜವಾಹರಲಾಲ್ ನೆಹರೂ ರಾಷ್ಟ್ರೀಯ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಎಲ್.ಕೆ.ಶ್ರೀಪತಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಶ್ರೀಪತಿ ಅವರು ದಿನವೂ ಸೈಕಲ್‍ನಲ್ಲೇ ಕಾಲೇಜಿಗೆ ಬರ್ತಾರೆ. 42 ಎಕರೆ ವಿಸ್ತೀರ್ಣದ ಈ ಕ್ಯಾಂಪಸ್‍ನಲ್ಲಿ 1 ಸಾವಿರಕ್ಕೂ ಹೆಚ್ಚು ಹೊಂಗೆ ಸಸಿ ನೆಟ್ಟು ಬೆಳೆಸಿದ್ದಾರೆ. ಇದಲ್ಲದೆ ಸೋಲಾರ್ ಕುಕ್ಕರ್, ಹ್ಯಾಂಡ್ ಪಂಪ್, ಸುಧಾರಿತ ಒಲೆಗಳು, ಕಿಚನ್ ವೆಸ್ಟ್ ಗ್ಯಾಸ್ ಪ್ಲಾಂಟ್, ಬಯೋ ಫಿಲ್ಟರ್, ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಇತ್ಯಾದಿ ಘಟಕಗಳನ್ನು ನಿರ್ಮಾಣ ಮಾಡಿದ್ದಾರೆ. ಇವುಗಳಿಂದ ಇಡೀ ಕ್ಯಾಂಪಸ್‍ನಿಂದ ಒಂದೇ ಒಂದು ಚೂರು ತ್ಯಾಜ್ಯ ಹೊರ ಹೋಗುವುದಿಲ್ಲ.

    2011 ರಿಂದ ಪ್ರತಿ ತಿಂಗಳು ಸುಮಾರು 400 ರಿಂದ 500 ಲೀಟರ್ ಬಯೋಡಿಸೆಲ್ ತಯಾರಿಸಿ ಇದೇ ಕಾಲೇಜಿನ ಬಸ್ಸುಗಳಿಗೆ ಬಳಸಲಾಗ್ತಿದೆ. ಕ್ಯಾಂಪಸ್‍ನಲ್ಲೇ ಜೇನು ಕೃಷಿ, ನರ್ಸರಿ ವೈವಿಧ್ಯಮಯ ಮರಗಿಡಗಳ ನಡುವೆ ಇವರ ಪಾಠ-ಪ್ರವಚನಗಳು ನಡೆಯುತ್ತವೆ. ಜೆಎನ್‍ಎನ್‍ಸಿ ಕ್ಯಾಂಪಸ್‍ಗೆ ಹಸಿರು ಹೊದಿಕೆ ಹೊದಿಸಿರುವ, ಪರಿಸರದ ಬಗ್ಗೆ ಬದ್ಧತೆಯಿಂದ ಕೆಲಸ ಮಾಡುವ ಶ್ರೀಪತಿ ನಮ್ಮ ನಡುವಿನ ಅಪರೂಪದ ಶಿಕ್ಷಕರಾಗಿದ್ದಾರೆ.

    ದೇಶ-ವಿದೇಶಗಳಲ್ಲಿ ಅಪಾರ ಶಿಷ್ಯಬಳಗ ಹೊಂದಿರುವ ಶ್ರೀಪತಿ ಇಂದಿಗೂ ಮಲೆನಾಡಿನ ಯಾವುದೇ ರೀತಿಯ ಪರಿಸರ ಹೋರಾಟಗಳಲ್ಲಿ ಅಧಿಕೃತವಾಗಿ ಮಾತನಾಡ್ತಾರೆ ಅನ್ನೋದು ಹೆಮ್ಮೆಯ ವಿಷಯ.

    https://www.youtube.com/watch?v=3KTWnzOdKb0

     

  • ಡಾ.ರಾಜ್‍ಕುಮಾರ್ ಮಣ್ಣಿನ ಪುತ್ಥಳಿ ನಿರ್ಮಾಣ: ಶಿವಣ್ಣ ಅಭಿಮಾನಿಗಳಿಗೆ ಹೇಳಿದ್ದು ಹೀಗೆ!

    ಡಾ.ರಾಜ್‍ಕುಮಾರ್ ಮಣ್ಣಿನ ಪುತ್ಥಳಿ ನಿರ್ಮಾಣ: ಶಿವಣ್ಣ ಅಭಿಮಾನಿಗಳಿಗೆ ಹೇಳಿದ್ದು ಹೀಗೆ!

    ಬೆಂಗಳೂರು: ವರನಟ ಡಾ. ರಾಜ್‍ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ 6 ಅಡಿ ಮಣ್ಣಿನ ಪುತ್ಥಳಿ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಶಿವರಾಜ್‍ಕುಮಾರ್ ಮಾತ್ರ ಪುತ್ಥಳಿ ನಿರ್ಮಾಣ ಮಾಡುವುದು ಬೇಡ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ರಾಜ್ ಅವರ ಮಣ್ಣಿನ ಮೂರ್ತಿ ನಿರ್ಮಾಣ ಮಾಡಿ ಅದಕ್ಕೆ ಪೂಜೆ ಮಾಡಿ ಕೆರೆಗೆ ವಿಸರ್ಜನೆ ಮಾಡಲು ದೊಡ್ಮನೆಯ ಅಭಿಮಾನಿಗಳು ಮುಂದಾಗಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮಣ್ಣಿನ ಪುತ್ಥಳಿಕೆಯನ್ನು ಕೆರೆಯಲ್ಲಿ ವಿಸರ್ಜನೆ ಮಾಡುವುದರಿಂದ ಪರಿಸರ ಮಾಲಿನ್ಯ ಮತ್ತು ಜಲಚರಗಳಿಗೆ ಹಾನಿ ಉಂಟಾಗುತ್ತದೆ ಎಂದು ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸ್ತಿದ್ದಾರೆ.

    ಶಿವಣ್ಣ ಹೇಳಿದ್ದು ಹೀಗೆ:
    ಅಪ್ಪಾಜಿಯ ಬಗ್ಗೆ ಜನರಿಗೆ ತುಂಬಾ ಅಭಿಮಾನವಿದೆ. ಅಪ್ಪಾಜಿ ಬದುಕಿದ್ದೇ ಅಭಿಮಾನಿಗಳಿಗೋಸ್ಕರ, ಅಪ್ಪಾಜಿ ಅವರು ನಾನು ಸತ್ತ ಮೇಲೆ ನನ್ನ ಹೂಳಲು ಜಾಗ ವೇಸ್ಟ್ ಮಾಡಬೇಡಿ. ಆ ಜಾಗವನ್ನು ಯಾರಿಗಾದ್ರೂ ಕೊಡಿ ಎಂದು ಹೇಳಿದ್ದರು. ಅಭಿಮಾನಿಗಳು ಏನೇ ಮಾಡಿದ್ರೂ ಅಪ್ಪಾಜಿಯ ಆಸೆ, ಆಕಾಂಕ್ಷೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮಾಡ್ಬೇಕು. ಅಭಿಮಾನಿಗಳ ಅಭಿಮಾನದಿಂದ ಯಾರಿಗೂ ತೊಂದರೆ ಆಗಬಾರದು. ಗಣಪತಿಯನ್ನು ಪೂಜೆ ಮಾಡಿ, ವಿಸರ್ಜನೆ ಮಾಡ್ತಿವಿ. ಅಪ್ಪಾಜಿಯೇ ಮನೆಯಲ್ಲಿ ಗಣಪತಿಯನ್ನು ಪೂಜೆ ಮಾಡುತ್ತಿದ್ದರು. ಅಪ್ಪಾಜಿಯನ್ನು ಗಣಪತಿ ದೇವರಿಗೆ ಹೋಲಿಕೆ ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಶಿವಣ್ಣ ಮನವಿ ಮಾಡಿಕೊಂಡರು.

    ಅಪ್ಪಾಜಿಯ ಪುತ್ಥಳಿ ಮಾಡುವ ಅವಶ್ಯಕತೆಯಿಲ್ಲ. ಈಗಾಗಲೇ ಅಪ್ಪಾಜಿಯ ಪುತ್ಥಳಿಗಳು ಸಾಕಷ್ಟಿವೆ. ಅಪ್ಪಾಜಿಯನ್ನು ಅಭಿಮಾನಿಗಳು ಮನುಷ್ಯನ ರೂಪದಲ್ಲಿ ನೋಡುವುದು ಒಳ್ಳೇಯದು. ದೇವರ ರೂಪದಲ್ಲಿ ಬೇಡ. ಪರಿಸರ ನಮಗೆ ಮುಖ್ಯ. ಹಾಗಾಗಿ ಅದನ್ನು ನಾವು ಕಾಪಾಡಬೇಕು. ದಯವಿಟ್ಟು ಅಪ್ಪಾಜಿಯ ಮಣ್ಣಿನ ಪುತ್ಥಳಿ ನಿರ್ಮಾಣ ಬೇಡ. ಅಪ್ಪಾಜಿಯ ಮೂರ್ತಿ ನಿರ್ಮಾಣ ಮಾಡುವುದರಿಂದ ಇನ್ನೊಬ್ಬರಿಗೆ ತೊಂದರೆ ಆಗುವಂತಿದ್ದರೆ ಅದು ಖಂಡಿತ ಬೇಡ ಎಂದು ಶಿವಣ್ಣ ಹೇಳಿದರು.

    ಈ ರೀತಿ ಪ್ರತಿಮೆಗಳನ್ನು ಮಾಡೋದ್ರಿಂದ ಪರಿಸರ ಹಾಳಾಗುತ್ತೆ. ಉಳಿದ ಕಲಾವಿದರ ಅಭಿಮಾನಿಗಳು ಈ ಟ್ರೆಂಡ್ ಶುರು ಮಾಡಿದ್ರೆ ಪರಿಸರ ನಾಶವಾಗುತ್ತೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

    https://youtu.be/IsuH0NIoeqs