Tag: ಪಬ್ಲಿಕ್

  • ಕರಾವಳಿಯ 3ನೇ ಚಿನ್ನದ ದೇಗುಲ ಶ್ರೀಕೃಷ್ಣಮಠ

    ಕರಾವಳಿಯ 3ನೇ ಚಿನ್ನದ ದೇಗುಲ ಶ್ರೀಕೃಷ್ಣಮಠ

    ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದ ಗರ್ಭಗುಡಿಯನ್ನು ಚಿನ್ನದ ಗೋಪುರ ಮಾಡುವ ಮೂಲಕ ಕರಾವಳಿಯ ಮೂರನೇ ಚಿನ್ನದ ದೇಗುಲ ಎಂಬ ಕೀರ್ತಿಗೆ ಪಾತ್ರವಾಗಿದೆ.

    40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಚಿನ್ನದ ಗೋಪುರದಲ್ಲಿ ಅಷ್ಟಮಠಾಧೀಶರ ಸಮ್ಮುಖದಲ್ಲಿ ಶಿಖರ ಪ್ರತಿಷ್ಠೆ ಮಾಡಿ ಅಭಿಷೇಕ ಮಾಡಲಾಯಿತು. ಪರ್ಯಾಯ ಪಲಿಮಾರು ಶ್ರೀಗಳು ತಮ್ಮ ಪರ್ಯಾಯ ಮಹೋತ್ಸವದ ಕೀರ್ತಿ ಶಾಶ್ವತಗೊಳಿಸಲು ಈ ಮಹತ್ವದ ಯೋಜನೆ ಪೂರೈಸಿದ್ದಾರೆ. ಈ ಮೂಲಕ ಪಲಿಮಾರು ಶ್ರೀಗಳ ಆ ಮಹತ್ವಾಕಾಂಕ್ಷಿ ಯೋಜನೆ ಈಡೇರಿದೆ. ಶ್ರೀ ಕೃಷ್ಣನಿಗೆ ಚಿನ್ನದ ಗೋಪುರ ಸಮರ್ಪಣೆಯಾಗಿದೆ.

    ಕಳೆದ 10 ದಿನಗಳಿಂದ ಸುವರ್ಣ ಗೋಪುರ ಸಮರ್ಪಣೆ ಅಂಗವಾಗಿ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಾ ಬಂದಿದ್ದವು. ಚಿನ್ನದ ಶಿಖರ ಪ್ರತಿಷ್ಠೆ ಮಾಡಲಾಯಿತು. ಒಂದು ಸಾವಿರ ಬೆಳ್ಳಿ ಕಲಶಗಳಿಂದ ಗಂಗಾಧಿತೀರ್ಥದ ಅಭಿಷೇಕ ಸಲ್ಲಿಸಲಾಯಿತು. ಪುತ್ತಿಗೆ ಶ್ರೀಗಳು ಹೊರತು ಪಡಿಸಿದಂತೆ ಪೇಜಾವರ ಶ್ರೀಗಳ ಸಹಿತ ಅಷ್ಠಮಠಾಧೀಶರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಚಿನ್ನದ ಕಲಶದಿಂದ ಶಿಖರಕ್ಕೆ ಅಭಿಷೇಕ ಮಾಡಿದರು. ಪಲಿಮಾರು ಶ್ರೀಗಳು ಕೃಷ್ಣನ ಗೋಪುರ ಸುವರ್ಣಮಯವಾಗಿ ಇರಬೇಕೆಂದು ಈ ಯೋಜನೆ ಮಾಡಿದರು. 2500 ಚದರಡಿ ಸುವರ್ಣ ಗೋಪುರಕ್ಕೆ 200 ಕೆ.ಜಿ ತಾಮ್ರ, 800 ಕೆ.ಜಿ ಬೆಳ್ಳಿ, 100 ಕೆ.ಜಿ ಚಿನ್ನವನ್ನು ಬಳಕೆ ಮಾಡಲಾಗಿದೆ. ಸುಮಾರು 40 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಶ್ರೀ ಕೃಷ್ಣನಿಗೆ ಸುವರ್ಣ ತೊಟ್ಟಿಲು, ವಜ್ರ ಕಿರೀಟ, ಸುವರ್ಣ ರಥ ಸಮರ್ಪಿಸಿದರು. ಈಗಿನ ಪರ್ಯಾಯ ಪಲಿಮಾರು ಶ್ರೀಗಳು ತಮ್ಮ ಮೊದಲ ಪರ್ಯಾಯದಲ್ಲಿ ವಜ್ರ ಕವಚ ಅರ್ಪಿಸಿದ್ದರು.

  • ಮೃತದೇಹದ ವಾಸನೆಯಿಂದ ಕೊಲೆ ಪ್ರಕರಣ ಬಯಲು

    ಮೃತದೇಹದ ವಾಸನೆಯಿಂದ ಕೊಲೆ ಪ್ರಕರಣ ಬಯಲು

    ಗದಗ: ಮಾರಕಾಸ್ತ್ರದಿಂದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಕೌಜಗೇರಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

    22 ವರ್ಷದ ಸಮೀರ್ ಕೊಲೆಯಾದ ಯುವಕ. ಮೃತ ಸಮೀರ್ ಕೌಜಗೇರಿ ಗ್ರಾಮದಲ್ಲಿ ಪೋಸ್ಟ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದು, ಜೂನ್ 1 ರಂದು ನಾಪತ್ತೆಯಾಗಿದ್ದನು. ಆದರೆ ಇಂದು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾದ ದಿನವೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

    ಇಂದು ಮೃತದೇಹದ ವಾಸನೆಯಿಂದ ಕೊಲೆ ಪ್ರಕರಣ ಬಯಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಸಮೀರ್ ಕೊಲೆಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ.

    ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಬಕಾರಿ ಇಲಾಖೆಯಿಂದ ಲಕ್ಷ ಲಕ್ಷ ಮೌಲ್ಯದ ಮದ್ಯ ವಶ

    ಅಬಕಾರಿ ಇಲಾಖೆಯಿಂದ ಲಕ್ಷ ಲಕ್ಷ ಮೌಲ್ಯದ ಮದ್ಯ ವಶ

    ರಾಯಚೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಅಬಕಾರಿ ಇಲಾಖೆ 37 ಮದ್ಯದಂಗಡಿಗಳ ಪರವಾನಿಗೆಯನ್ನ ಅಮಾನತು ಮಾಡಿ ಆದೇಶ ಹೊರಡಿಸಿದೆ.

    ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತೆರೆಯಲಾದ 5 ಕಂಟ್ರೋಲ್ ರೂಂ.ಗಳಲ್ಲಿ ಒಟ್ಟು 177 ಪ್ರಕರಣಗಳು ದಾಖಲಾಗಿದ್ದು, ಈ ಹಿನ್ನೆಲೆ ಅಬಕಾರಿ ಇಲಾಖೆ, ಅಕ್ರಮ ಅಂಗಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡಿದೆ. ಚಿಲ್ಲರೆಗೆ ಮದ್ಯ ಕೊಡುವುದು, ಎಂಆರ್‍ಪಿ ಗಿಂತ ಹೆಚ್ಚು ಬೆಲೆ ಹಾಗೂ ಬಿಲ್ ಕೊಡದ 37 ಮದ್ಯದಂಗಡಿಗಳ ಪರವಾನಿಗೆಯನ್ನ ಅಮಾನತು ಮಾಡಲಾಗಿದೆ.

    ಇನ್ನೂ ಇದುವರೆಗೆ ಅಕ್ರಮ ಸಾಗಣೆ ಮಾಡುತ್ತಿದ್ದ 1600 ಲೀಟರ್ ಮದ್ಯ, 193 ಲೀಟರ್ ಬೀಯರ್, 769 ಲೀಟರ್ ಕಲಬೆರಿಕೆ ಸೇಂದಿ, 10 ಲೀಟರ್ ಕಳ್ಳಭಟ್ಟಿ ಹೆಂಡವನ್ನ ಜಪ್ತಿ ಮಾಡಲಾಗಿದೆ. ದಾಳಿ ವೇಳೆ ಒಟ್ಟು 22 ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ. ವಾಹನ ಸೇರಿದಂದ 18 ಲಕ್ಷ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದೇವೆ ಎಂದು ಅಬಕಾರಿ ಉಪ ಆಯುಕ್ತ ಪ್ರಶಾಂತ್ ಕುಮಾರ್ ಹೇಳಿದ್ದಾರೆ.

  • ಮೋದಿ ಬಯೋಪಿಕ್ ಸಿನ್ಮಾ ಶೂಟಿಂಗ್ ನಲ್ಲಿ ಗಾಯಗೊಂಡ ವಿವೇಕ್ ಓಬೇರಾಯ್

    ಮೋದಿ ಬಯೋಪಿಕ್ ಸಿನ್ಮಾ ಶೂಟಿಂಗ್ ನಲ್ಲಿ ಗಾಯಗೊಂಡ ವಿವೇಕ್ ಓಬೇರಾಯ್

    ಮುಂಬೈ: ಪ್ರಧಾನಿ ನರೇಂದ್ರ ಮೋದಿ ಜೀವನಾಧರಿತ ಸಿನಿಮಾ ಶೂಟಿಂಗ್ ವೇಳೆ ನಟ ವಿವೇಕ್ ಓಬೇರಾಯ್ ಗಾಯಗೊಂಡಿದ್ದಾರೆ.

    ಉತ್ತರಾಖಂಡನ ಉತ್ತರಕಾಶಿ ಜಿಲ್ಲೆಯ ಹರ್ಷಿಲ್ ಕಣಿವೆಯಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಶನಿವಾರದ ಚಿತ್ರೀಕರಣದ ವೇಳೆ ವಿವೇಕ್ ಓಬೇರಾಯ್ ತಮ್ಮ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಕಾಲಿಗೆ ಮರದ ಚೂಪಾದ ಕಟ್ಟಿಗೆ ಚುಚ್ಚಿದ್ದರಿಂದ ಹೊಲಿಗೆ ಹಾಕಲಾಗಿದ್ದು, ವಿವೇಕ್ ಆರೋಗ್ಯವಾಗಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

    ಹರ್ಷಿಲ್ ಪ್ರದೇಶದಲ್ಲಿ ಮೋದಿಯವರ ರಾಜಕೀಯ ಮುನ್ನದ ದಿನಗಳನ್ನು ಚಿತ್ರೀಕರಿಸಲಾಗಿತ್ತು. ಗಂಗಾ ಘಾಟ್ ಬಳಿಯ ಧರಲಿ ಎಂಬ ಗ್ರಾಮದಲ್ಲಿ ಹಿಮದ ಮೇಲೆ ಮೋದಿ ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಕೆಲ ದೃಶ್ಯಗಳ ಚಿತ್ರೀಕರಣ ನಡೆದಿತ್ತು. ಬರಿಗಾಲಿನಲ್ಲಿ ನಡೆಯುತ್ತಿದ್ದ ವೇಳೆ ವಿವೇಕ್ ಅವರಿಗೆ ಕಟ್ಟಿಗೆ ತುಂಡು ಚುಚ್ಚಿದೆ.

    ಓಮುಂಗ್ ಕುಮಾರ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಪ್ರಧಾನಿಗಳ ಪಾತ್ರದಲ್ಲಿ ವಿವೇಕ್ ಓಬೇರಾಯ್ ನಟಿಸುತ್ತಿದ್ದಾರೆ. ಮೇರಿಕೋಮ್ ಮತ್ತು ಸರ್ಬಜಿತ್ ಸೂಪರ್ ಹಿಟ್ ಸಿನಿಮಾಗಳನ್ನು ಓಮುಂಗ್ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಲಾಡ್ಜ್‌ನಲ್ಲಿ ಮಂಡ್ಯ ಕಾಂಗ್ರೆಸ್ ನಾಯಕನಿಂದ ಮಹಿಳೆಗೆ ಲೈಂಗಿಕ ದೌರ್ಜನ್ಯ!

    ಲಾಡ್ಜ್‌ನಲ್ಲಿ ಮಂಡ್ಯ ಕಾಂಗ್ರೆಸ್ ನಾಯಕನಿಂದ ಮಹಿಳೆಗೆ ಲೈಂಗಿಕ ದೌರ್ಜನ್ಯ!

    ಬೆಂಗಳೂರು: ಮಂಡ್ಯದ ಕಾಂಗ್ರೆಸ್ ನಾಯಕನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ.

    ಮೂಡಾ ಮಾಜಿ ಅಧ್ಯಕ್ಷನೂ ಆಗಿರುವ ಮುನಾವರ್ ಖಾನ್ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪವನ್ನು ಮಾಡಿದ್ದಾರೆ. ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಕರೆಸಿ ಅಲ್ಲಿಂದ ಮೆಜೆಸ್ಟಿಕ್‍ನಲ್ಲಿರುವ ವಂಶಿ ಲಾಡ್ಜ್‌ಗೆ ಕರೆದುಕೊಂಡು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.

    ಮುನಾವರ್ ಖಾನ್ ಸಾಕಷ್ಟು ಜನರು ಲಾಡ್ಜ್‌ನಲ್ಲಿದ್ದಾರೆ ಎಂದು ಕರೆಸಿಕೊಂಡಿದ್ದು, ಅಲ್ಲಿ ಕಂಠಪೂರ್ತಿ ಕುಡಿದು ಬಂದು ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ನೊಂದ ಮಹಿಳೆ ಉಪ್ಪಾರಪೇಟೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ.

    ದೂರಿನಲ್ಲಿ ಏನಿದೆ?
    ಮಂಡ್ಯ ನಿವಾಸಿಯಾದ ನನಗೆ ಅಧ್ಯಕ್ಷ ಮುನಾವರ್ ಖಾನ್ ಪರಿಚಯವಿದೆ. ಇಬ್ಬರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುನಾವರ್ ನಂಬರ್ ನಿಂದ ಫೋನ್ ಮಾಡಿ ಬೆಂಗಳೂರಿನಲ್ಲಿ ಕಾರ್ಯಕ್ರಮವಿದೆ ಬರಬೇಕು ಎಂದು ತಿಳಿಸಿದ್ದರು. ಅದರಂತೆಯೇ ನಾನು ಬೆಂಗಳೂರಿಗೆ ಬಂದು ಮುನಾವರ್ ಗೆ ಫೋನ್ ಮಾಡಿದೆ. ಅವರು ಬಂದು ನನ್ನನ್ನು ಮೆಜಿಸ್ಟಿಕ್ ನ ವಂಶಿ ಲಾಡ್ಜ್‌ಗೆ ಕರೆದುಕೊಂಡು ಹೋದರು. ಅಲ್ಲಿ ರೂಮ್ ಬುಕ್ ಮಾಡಿ ಕೂರಿಸಿ. ಇಲ್ಲೆ ಇರು ಎಂದು ಹೊರಗೆ ಹೋಗಿದ್ದರು. ಸ್ವಲ್ಪ ಸಮಯದ ನಂತರ ಮದ್ಯಪಾನ ಮಾಡಿಕೊಂಡು ಬಂದು ನಿನ್ನ ಬಳಿ ಮಾತನಾಡಬೇಕು ಎಂದು ರೂಮಿನ ಬಾಗಿಲು ಹಾಕಿದರು. ಬಳಿಕ ಬಲವಂತವಾಗಿ ನನ್ನನ್ನು ಹಿಡಿದು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದರು. ಅಷ್ಟರಲ್ಲಿ ನಾನು ಅವರನ್ನು ತಳ್ಳಿ ನನ್ನ ಸ್ನೇಹಿತೆಗೆ ಫೋನ್ ಮಾಡಿದೆ. ಆಕೆ ತನ್ನ ಪರಿಚಯಸ್ಥರನ್ನು ರೂಮಿಗೆ ಕಳುಹಿಸಿ ನನ್ನನ್ನು ಕಾಪಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಮುನಾವರ್ ಖಾನ್ ವಿರುದ್ಧ ಕಠಿಣ ಕ್ರಮಕೈಗೊಳ್ಳಿ. ನ್ಯಾಯ ಕೊಡಿಸಿ ಎಂದು ಮಹಿಳೆ ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 0.099 ಸೆಕೆಂಡ್‍ಗಳಲ್ಲಿ ಧೋನಿ ಮ್ಯಾಜಿಕ್ ಸ್ಟಂಪಿಂಗ್ – ಕಿವೀಸ್ ಪಂದ್ಯದಲ್ಲಿ ವಿಶ್ವ ದಾಖಲೆ

    0.099 ಸೆಕೆಂಡ್‍ಗಳಲ್ಲಿ ಧೋನಿ ಮ್ಯಾಜಿಕ್ ಸ್ಟಂಪಿಂಗ್ – ಕಿವೀಸ್ ಪಂದ್ಯದಲ್ಲಿ ವಿಶ್ವ ದಾಖಲೆ

    ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಮಾಜಿ ನಾಯಕ, ವಿಕೆಟ್ ಕೀಪರ್ ಎಂಎಸ್ ಧೋನಿ ಮತ್ತೊಮ್ಮೆ ತಮ್ಮ ಸ್ಟಂಪಿಂಗ್ ಮೂಲಕ ಅಭಿಮಾನಿಗಳ ಮನಗೆದಿದ್ದು, ಕೇವಲ 0.099 ಸೆಕೆಂಡ್ ಗಳಲ್ಲಿ ಸಿಫರ್ಡ್ ಅವರನ್ನು ಸ್ಟಂಪಿಂಗ್ ಮಾಡಿದ್ದಾರೆ.

    37 ವರ್ಷದ ಧೋನಿ ತಮ್ಮ ವೇಗದ ಸ್ಟಂಪಿಂಗ್ ಗಳ ಮೂಲವೇ ಅಭಿಮಾನಿಗಳು ಮನಗೆದ್ದಿದ್ದು, ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿ ಕೇವಲ 25 ಎಸೆತಗಳಲ್ಲಿ 43 ರನ್ ಗಳಿಸಿ ತಂಡಕ್ಕೆ ಮಾರಕವಾಗುತ್ತಿದ್ದ ಸಿಫರ್ಡ್ ರನ್ನು ಪೆವಿಲಿಯನ್‍ಗಟ್ಟಲು ಯಶಸ್ವಿಯಾದರು. 7ನೇ ಓವರಿನ 4ನೇ ಎಸೆತದಲ್ಲಿ ಮ್ಯಾಜಿಕ್ ಸ್ಟಂಪಿಂಗ್ ದಾಖಲಾಗಿದ್ದು, ಈ ಮೂಲಕ ವೃತ್ತಿ ಜೀವನದಲ್ಲಿ 34ನೇ ಸ್ಟಂಪಿಂಗ್ ಪೂರ್ಣಗೊಳಸಿ ದಾಖಲೆ ಬರೆದರು.

    ಇದೇ ಟೂರ್ನಿಯಲ್ಲಿ ಧೋನಿ ನ್ಯೂಜಿಲೆಂಡ್ ತಂಡದ ಅನುಭವಿ ಆಟಗಾರ ರಾಸ್ ಟೇಲರ್ ಅವರನ್ನು ಮಿಂಚಿನ ವೇಗದಲ್ಲಿ ಸ್ಟಂಪ್ ಮಾಡಿದ್ದರು. ಸದ್ಯ ಧೋನಿ ಟಿ20 ಮಾದರಿಯಲ್ಲಿ 89 ಬಲಿ ಪಡೆದಿದ್ದು, ಈ ಮೂಲಕ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದ್ದಾರೆ. ಇದರಲ್ಲಿ 55 ಕ್ಯಾಚ್ ಗಳು ಸೇರಿದೆ. ಉಳಿದಂತೆ 337 ಏಕದಿನ ಪಂದ್ಯಗಳನ್ನು ಆಡಿರುವ ಧೋನಿ 311 ಕ್ಯಾಚ್ ಹಾಗೂ 119 ಸ್ಟಂಪಿಂಗ್ ಮಾಡಿದ್ದಾರೆ.

    https://twitter.com/RamLokendar/status/1094504403141156865?

    ಧೋನಿ ಇದುವರೆಗೂ 524 ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು, ಈ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಆಡಿರುವ ವಿಕೆಟ್ ಕೀಪರ್ ಎಂಬ ವಿಶ್ವ ದಾಖಲೆ ಬರೆದರು. 90 ಟೆಸ್ಟ್ ಪಂದ್ಯ, 338 ಏಕದಿನ ಹಾಗು 96 ಟಿ20 ಪಂದ್ಯಗಳಲ್ಲಿ ಧೋನಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ.

    ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯಗಳು ಸೇರಿದಂತೆ ಧೋನಿ ಇದುವರೆಗೂ 300 ಟಿ20 ಪಂದ್ಯಗಳನ್ನು ಆಡಿದ್ದು, ಈ ಮಾದರಿಯಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಆಡಿದ ಭಾರತ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಪಟ್ಟಿಯಲ್ಲಿ 298 ಪಂದ್ಯಗಳಾಡಿರುವ ರೋಹಿತ್ 2ನೇ ಸ್ಥಾನದಲ್ಲಿದ್ದು, ರೈನಾ 296 ಪಂದ್ಯಗಳ ಮೂಲಕ 3ನೇ ಸ್ಥಾನ ಪಡೆದಿದ್ದಾರೆ.

    https://twitter.com/thota_deep/status/1094502082915250176?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕಿವೀಸ್ ವಿರುದ್ಧ ರೋಚಕ ಸೋಲುಂಡ ಟೀಂ ಇಂಡಿಯಾ – ಟಿ20 ಸರಣಿ ಗೆಲುವಿನ ಕನಸು ಭಗ್ನ

    ಕಿವೀಸ್ ವಿರುದ್ಧ ರೋಚಕ ಸೋಲುಂಡ ಟೀಂ ಇಂಡಿಯಾ – ಟಿ20 ಸರಣಿ ಗೆಲುವಿನ ಕನಸು ಭಗ್ನ

    ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ 4 ರನ್ ಸೋಲು ಪಡೆಯಿತು. ಈ ಮೂಲಕ ಸರಣಿಯನ್ನು 2-1 ಅಂತರದಲ್ಲಿ ಸೋಲುಂಡಿತು. ಅಲ್ಲದೇ ನ್ಯೂಜಿಲೆಂಡ್ ನೆಲದಲ್ಲಿ ಮೊದಲ ಟಿ20 ಸರಣಿಯನ್ನು ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತು.

    213 ರನ್ ಗಳಿಸಿದ ಟೀಂ ಇಂಡಿಯಾ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 208 ರನ್ ಗಳಿಸಲಷ್ಟೇ ಶಕ್ತವಾಯಿತು. ಏಕದಿನ ಸರಣಿ ಸೋಲಿನ ಸೇಡು ತಿರಿಸಿಕೊಂಡ ಕಿವೀಸ್ ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿತು.

    ಕಿವೀಸ್ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ ಟೀಂ ಇಂಡಿಯಾಗೆ ಮೊದಲ ಓವರಿನಲ್ಲೇ ಧವನ್ ವಿಕೆಟ್ ಪಡೆಯುವ ಮೂಲಕ ಮಿಚೆಲ್ ಅಘಾತ ನೀಡಿದರು. ಆದರೆ ನಾಯಕ ರೋಹಿತ್ ಶರ್ಮಾರನ್ನು ಕೂಡಿಕೊಂಡ ಯುವ ಆಟಗಾರ ವಿಜಯ್ ಶಂಕರ್ ಬಿರುಸಿನ ಆಟವಾಡಿ ತಂಡದ ರನ್ ಗಳಿಕೆಗೆ ವೇಗ ತುಂಬಿದರು. ಇತ್ತ ರೋಹಿತ್ ರಕ್ಷಣಾತ್ಮಕ ಆಟವಾಡಿ ವಿಕೆಟ್ ಕಾಯ್ದುಕೊಂಡರು. ಈ ಜೋಡಿ 2ನೇ ವಿಕೆಟ್‍ಗೆ 75 ರನ್ ಗಳ ಜೊತೆಯಾಟ ನೀಡಿತು. ಆದರೆ 28 ಎಸೆತಗಳಲ್ಲಿ 43 ರನ್ ಗಳಿಸಿದ್ದ ಶಂಕರ್ ಭಾರೀ ಹೊಡೆತಕ್ಕೆ ಕೈ ಹಾಕಿ ಔಟಾಗುವ ಮೂಲಕ ಅರ್ಧ ಶತಕ ವಂಚಿತರಾದರು.

    ಈ ಹಂತದಲ್ಲಿ ಕಣಕ್ಕೆ ಇಳಿದ ಪಂತ್ ಸ್ಫೋಟಕ ಆಟ ಪ್ರದರ್ಶಿಸಿದರು. ಕೇವಲ 12 ಎಸೆತಗಳಲ್ಲಿ 28 ರನ್ ಗಳಿಸಿದ ಪಂತ್ ರನ್ನು ಸ್ಕಾಟ್ ಕುಗೆಲಿಜಿನ್ ಪೆವಿಲಿಯನ್ ಗಟ್ಟಿದರು. ಈ ವೇಳೆಗೆ ಪಂತ್ 1 ಬೌಂಡರಿ ಹಾಗೂ ಭರ್ಜರಿ 3 ಸಿಕ್ಸರ್ ಸಿಡಿಸಿದ್ದರು. 9.2 ಓವರ ಗಳಲ್ಲೇ ಟೀಂ ಇಂಡಿಯಾ 100 ರನ್ ಗಡಿದಾಟಿತ್ತು.

    ಇದರ ಬೆನ್ನಲ್ಲೇ 38 ರನ್ ಗಳಿಸಿದ್ದ ರೋಹಿತ್ ಕೂಡ ಔಟಾದರು. ಬಳಿಕ ಬಂದ ಹಾರ್ದಿಕ್ ಪಾಂಡ್ಯ ಕೂಡ ಬಿರುಸಿನ ಆಟಕ್ಕೆ ಮುಂದಾದರು. ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದ ಹಾರ್ದಿಕ್ ಗೆಲುವಿನ ಆಸೆ ಚಿಗುರುವಂತೆ ಮಾಡಿದರು. ಆದರೆ ಭಾರೀ ಹೊಡೆತಕ್ಕೆ ಕೈ ಹಾಕಿದ್ದ ವೇಳೆ ಬ್ಯಾಟ್ ಕೈಯಿಂದ ಜಾರಿದ ಪರಿಣಾಮ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಹಾರ್ದಿಕ್ 11 ಎಸೆತಗಳಲ್ಲಿ 2 ಸಿಕ್ಸರ್ 1 ಬೌಂಡರಿ ಸಿಡಿಸಿ 21 ರನ್ ಗಳಿಸಿದರು. ಬಳಿಕ ಬಂದ ಧೋನಿ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದರು ಕೂಡ ಕೇವಲ 2 ರನ್ ಗಳಿಸಿ ಔಟಾದರು.

    ದಿನೇಶ್ ಹೋರಾಟ ವ್ಯರ್ಥ: ಅಂತಿಮ 25 ಎಸೆತಗಳಲ್ಲಿ ಟೀಂ ಇಂಡಿಯಾಗೆ ಗೆಲ್ಲಲ್ಲು 60 ಗಳಿಸುವ ಒತ್ತಡ ಸಮಯದಲ್ಲಿ ಕ್ರಿಸ್ ಎಂಟ್ರಿ ಕೊಟ್ಟ ದಿನೇಶ್ ಕಾರ್ತಿಕ್ ಮತ್ತೆ ತಮ್ಮ ಹಿಂದಿನ ಆಟವನ್ನು ನೆನಪು ಮಾಡುವಂತೆ ಮಾಡಿದರು. ಅಲ್ಲದೇ ಕಾರ್ತಿಕ್ ಗೆ ಕೃಣಾಲ್ ಪಾಂಡ್ಯ ಕೂಡ ಸಾಥ್ ನೀಡಿ ತಂಡ ಗೆಲುವಿನ ಸನಿಹ ಆಗಮಿಸಲು ಕಾರಣರಾದರು. ಆದರೆ ಅಂತಿಮವಾಗಿ ಕಾರ್ತಿಕ್ 16 ಎಸೆತಗಳಲ್ಲಿ 4 ಸಿಕ್ಸರ್ ಸಮೇತ 33 ರನ್ ಹಾಗೂ 13 ಎಸೆತಗಳಲ್ಲಿ ಕೃಣಾಲ್ ಪಾಂಡ್ಯ 2 ಸಿಕ್ಸರ್ ಸಿಡಿಸಿ 26 ರನ್ ಗಳಿಸಿದರು.

    ಅಂತಿಮ 25 ಎಸೆತ: 17ನೇ ಓವರಿನಲ್ಲಿ ಸಿಕ್ಸರ್ ಸಮೇತ 11 ರನ್, 18ನೇ ಓವರಿನಲ್ಲಿ 2 ಬೌಂಡರಿ, 1 ಸಿಕ್ಸರ್ ಸಮೇತ 18 ರನ್ ಬಂತು. ಅಂತಿಮ 12 ಎಸೆತಗಳಲ್ಲಿ ಟೀಂ ಇಂಡಿಯಾಗೆ 30 ರನ್ ಗಳ ಅಗತ್ಯವಿತ್ತು. ಸ್ಕಾಟ್ ಕುಗೆಲಿಜಿನ್ ಈ ಹಂತದಲ್ಲಿ ಬಿಗಿ ಬೌಲಿಂಗ್ ದಾಳಿ ನಡೆಸಿದರೂ ಕೂಡ 2 ಸಿಕ್ಸರ್ ಸಮೇತ 14 ರನ್ ಹರಿದು ಬಂತು. ಆದರೆ ಅಂತಿಮ ಓವರ್ ನಲ್ಲಿ 10 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ಮೂಲಕ ನಿಗದಿತ 20 ಓವರ್ ಗಳಲ್ಲಿ 208 ರನ್ ಗಳಿಸಿ ಟೀಂ ಇಂಡಿಯಾ 4 ರನ್ ಗಳ ಸೋಲುಂಡಿತು.

    ಕಿವೀಸ್ ಪರ ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡದ ಮನ್ರೋ (72 ರನ್, 40 ಎಸೆತ) ಹಾಗೂ ಸಿಫಿರ್ಟ್ (43 ರನ್, 25 ಎಸೆತ) ಬಿರುಸಿನ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 212 ರನ್‍ಗಳ ಸವಾಲಿನ ಮೊತ್ತ ಗಳಿಸಿತ್ತು. ಕಿವೀಸ್ ಪರ ಭರ್ಜರಿ ಆರಂಭ ನೀಡಿದ ಸಿಫರ್ಟ್, ಮನ್ರೋ ಜೋಡಿ ಮೊದಲ ವಿಕೆಟ್‍ಗೆ 80 ರನ್ ಗಳ ಜೊತೆಯಾಟ ನೀಡಿತು. ಟೀಂ ಇಂಡಿಯಾ ಪರ ಕುಲ್ದೀಪ್ ಯಾದವ್ 26 ರನ್ ನೀಡಿ 2 ವಿಕೆಟ್ ಪಡೆದರೆ, ಖಲೀಲ್ ಅಹ್ಮದ್, ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮನ್ರೋ ಫಿಫ್ಟಿ – ಟೀಂ ಇಂಡಿಯಾ ಐತಿಹಾಸಿಕ ಗೆಲುವಿಗೆ 213 ರನ್ ಗುರಿ

    ಮನ್ರೋ ಫಿಫ್ಟಿ – ಟೀಂ ಇಂಡಿಯಾ ಐತಿಹಾಸಿಕ ಗೆಲುವಿಗೆ 213 ರನ್ ಗುರಿ

    ಹ್ಯಾಮಿಲ್ಟನ್: ನ್ಯೂಜಿಲೆಂಡ್ ನೆಲದಲ್ಲಿ ಮೊದಲ ಟಿ20 ಸರಣಿಯ ಗೆಲುವು ಪಡೆಯುವ ಉದ್ದೇಶ ಹೊಂದಿರುವ ಟೀಂ ಇಂಡಿಯಾಗೆ ಅಂತಿಮ ಟಿ20 ಪಂದ್ಯದಲ್ಲಿ ಕಿವೀಸ್ ಪಡೆ 213 ರನ್ ಗುರಿಯನ್ನು ನೀಡಿದೆ.

    ನ್ಯೂಜಿಲೆಂಡ್ ತಂಡದ ಮನ್ರೋ (72 ರನ್, 40 ಎಸೆತ) ಹಾಗೂ ಸಿಫಿರ್ಟ್ (43 ರನ್, 25 ಎಸೆತ) ಬಿರುಸಿನ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 212 ರನ್‍ಗಳ ಸವಾಲಿನ ಮೊತ್ತ ಗಳಿಸಿತು.

    ಕಿವೀಸ್ ಪರ ಭರ್ಜರಿ ಆರಂಭ ನೀಡಿದ ಸಿಫರ್ಟ್, ಮನ್ರೋ ಜೋಡಿ ಮೊದಲ ವಿಕೆಟ್‍ಗೆ 80 ರನ್ ಗಳ ಜೊತೆಯಾಟ ನೀಡಿತು. ಈ ಇಬ್ಬರ ಜೋಡಿಯನ್ನು ಮುರಿಯಲು ಕುಲ್ದೀಪ್ ಯಾದವ್ ಯಶಸ್ವಿಯಾದರು. ಬಳಿಕ ಮನ್ರೋರನ್ನು ಕೂಡಿಕೊಂಡ ನಾಯಕ ವಿಲಿಮ್ಸನ್ ರನ್ ಗಳಿಕೆ ಮತ್ತಷ್ಟು ವೇಗ ಕೊಟ್ಟರು. 10 ಓವರ್ ಗಳ ಅಂತ್ಯಕ್ಕೆ ಕಿವೀಸ್ 110 ರನ್ ಗಳಿಸಿದರೆ, 15 ಓವರ್ ಗಳ ಅಂತ್ಯಕ್ಕೆ ಈ ಮೊತ್ತ 151 ರನ್ ಗಳಿಗೆ ತಲುಪಿತ್ತು. ಈ ಹಂತದಲ್ಲಿ ಖಲೀಲ್ ಅಹ್ಮದ್ ಹಾಗೂ ಕುಲ್ದೀಪ್ ಯಾದವ್ ವಿಲಿಯಮ್ಸನ್, ಮನ್ರೋ ವಿಕೆಟ್ ಪಡೆಯಲು ಯಶಸ್ವಿಯಾಗಿದ್ದರು.

    ಅಂತಿಮ 5 ಓವರ್ ಗಳಲ್ಲೂ ನ್ಯೂಜಿಲೆಂಡ್ ಬ್ಯಾಟ್ಸ್ ಮನ್‍ಗಳ ವೇಗಕ್ಕೆ ಕಡಿವಾಣ ಹಾಕಲು ತಿಣುಕಾಡಿದ ಟೀಂ ಇಂಡಿಯಾ ಬೌಲರ್ ಗಳು ದುಬಾರಿಯಾಗಿ ಪರಿಣಮಿಸಿದರು. ನ್ಯೂಜಿಲೆಂಡ್ ಇನ್ನಿಂಗ್ಸ್ ನ ಅಂತಿಮ 5 ಓವರ್ ಗಳಲ್ಲಿ 61 ರನ್ ಹರಿದು ಬಂತು. ಡ್ಯಾರೆಲ್ ಮಿಚೆಲ್ 11 ಎಸೆತಗಳಲ್ಲಿ 19 ರನ್ ಮತ್ತು ರಾಸ್ ಟೇಲರ್ 7 ಎಸೆತಗಳಲ್ಲಿ 14 ರನ್ ಗಳಿಸಿ ಅಜೇಯರಾಗಿ ಉಳಿದರು. ಇದರೊಂದಿಗೆ ನ್ಯೂಜಿಲೆಂಡ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿತು. ಟೀಂ ಇಂಡಿಯಾ ಪರ ಕುಲ್ದೀಪ್ ಯಾದವ್ 26 ರನ್ ನೀಡಿ 2 ವಿಕೆಟ್ ಪಡೆದರೆ, ಖಲೀಲ್ ಅಹ್ಮದ್, ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದರು.

    ಪಂದ್ಯದಲ್ಲಿ ಟೀಂ ಇಂಡಿಯಾ ಗುರಿ ಬೆನ್ನತ್ತಲೂ ಯಶ್ವಿಯಾದರೆ ನ್ಯೂಜಿಲೆಂಡ್ ನೆಲದಲ್ಲಿ ಮೊದಲ ಟಿ20 ಗೆದ್ದ ಸರಣಿ ಗೆದ್ದ ಹೆಗ್ಗಳಿಕೆ ಪಡೆಯಲಿದ್ದು, ಭಾರತ ಬ್ಯಾಟ್ಸ್ ಮನ್ ಗಳ ಪ್ರದರ್ಶನ ನಿರ್ಣಯಕವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಂಗ್ರೆಸ್ಸಿನಲ್ಲಿ ಮಹಿಳೆಯರಿಗೆ ಡ್ರೆಸ್ ಕೋಡ್..!

    ಕಾಂಗ್ರೆಸ್ಸಿನಲ್ಲಿ ಮಹಿಳೆಯರಿಗೆ ಡ್ರೆಸ್ ಕೋಡ್..!

    ಬೆಂಗಳೂರು: ಕಾಂಗ್ರೆಸ್ಸಿನಲ್ಲಿ ಮಹಿಳೆಯರಿಗೆ ನೂತನ ಡ್ರೆಸ್ ಕೋಡ್ ಮಾಡಲಾಗಿದ್ದು, ಇದರಿಂದ ಕಾಂಗ್ರೆಸ್ ನಾಯಕರು ಮೀಟೂಗೆ ಹೆದರಿದ್ದಾರಾ ಎಂಬ ಮಾತುಗಳು ಕೇಳಿ ಬರುತ್ತಿದೆ.

    ಇನ್ನು ಮುಂದೆ ಕಾಂಗ್ರೆಸ್ ನ ಮಹಿಳಾ ಕಾರ್ಯಕರ್ತರು ತುಟಿಗೆ ಲಿಪ್‍ಸ್ಟಿಕ್, ಮುಖಕ್ಕೆ ಮೇಕಪ್ ಹಚ್ಚಿಕೊಂಡು ಬರುವಂತಿಲ್ಲ. ಅಷ್ಟೇ ಅಲ್ಲದೇ ಉಡೋ ಸೀರೆ ಕೂಡ ಮೈ ಮುಚ್ಚಬೇಕು. ಹಾಕೋ ಬ್ಲೌಸ್ ಕುತ್ತಿಗೆ ಮುಚ್ಚಬೇಕು. ಸ್ಕರ್ಟ್, ಸ್ಲೀವ್ ಲೆಸ್ ಇಂತಹ ಉಡುಪನ್ನು ತೊಡುವಂತಿಲ್ಲ. ಇದು 133 ವರ್ಷದ ಹಳೆ ಪಕ್ಷದಲ್ಲಿ ಹೊಸ ನಿಯಮವಾಗಿದೆ.

    ಕಾಂಗ್ರೆಸ್ ಪಕ್ಷದಲ್ಲಿರುವ ಹೆಣ್ಣು ಮಕ್ಕಳು ಕೂಡ ಇನ್ನು ಮುಂದೆ ಮೈ, ಕೈ ಕಾಣುವಂತೆ ಬಟ್ಟೆ ತೊಡುವ ಹಾಗಿಲ್ಲ. ಸ್ಲೀವ್ ಲೆಸ್, ಪೆನ್ಸಿಲ್ ಟೈಟ್, ಸ್ಕಿನ್ ಟೈಟ್, ಶಾರ್ಟ್ ಸ್ಕರ್ಟ್ ಹಾಕುವ ಹಾಗಿಲ್ಲ. ಮೈತುಂಬ ಲಕ್ಷಣವಾಗಿ ಸೀರೆ ಉಟ್ಟು, ಕುತ್ತಿಗೆವರೆಗೆ ಮೈ ಮುಚ್ಚುವ ಬ್ಲೌಸ್ ಹಾಕಬೇಕು ಎಂದು ಮಹಿಳಾ ಕಾಂಗ್ರೆಸ್ ನ ನೂತನ ಅಧ್ಯಕ್ಷೆ ಪುಷ್ಪ ಅಮರನಾಥ್ ಆದೇಶ ಹೊರಡಿಸಿದ್ದಾರೆ.

    ನವಂಬರ್ 19 ರಂದು ನೂತನ ಅಧ್ಯಕ್ಷೆಯಾಗಿ ಅಧಿಕೃತವಾಗಿ ಪದಗ್ರಹಣ ಕಾರ್ಯಕ್ರಮವಿದ್ದು, ಈ ಪ್ರೋಗ್ರಾಂಗೆ ಬರೋ ಎಲ್ಲಾ ಮಹಿಳಾ ಪದಾಧಿಕಾರಿಗಳು ನೀಲಿ ಸೀರೆ ಉಟ್ಟು ಮೈ ಮುಚ್ಚುವಂತಹ ಬ್ಲೌಸ್ ತೊಟ್ಟು ಇದಕ್ಕೆ ಚಾಲನೆ ನೀಡೋಣ ಅಂತ ಪುಷ್ಪ ಹೇಳಿದ್ದಾರೆ.

    ನೂತನ ಡ್ರೆಸ್‍ಕೋಡ್ ಮಾಡಿದ ತಕ್ಷಣ, ನಾವು ಹಾಕಬೇಕಾದ ಬಟ್ಟೆಯನ್ನು ಅಧ್ಯಕ್ಷೆ ತೀರ್ಮಾನ ಮಾಡಬೇಕಾ. ನಮ್ಮ ಇಷ್ಟ, ನಮ್ಮ ಬಟ್ಟೆ. ಅವರು ಹೇಳಿದಂಗೆ ನಾವು ಯಾಕೆ ಕೇಳಬೇಕು. ಒಂದು ಸಭೆಯಾದರೆ ಅವರು ಹೇಳಿದ ಬಟ್ಟೆಯನ್ನು ಹಾಕಿಕೊಂಡು ಬರಬಹುದು. ಆದರೆ ಇನ್ನು ಮುಂದೆಯೂ ಇದೇ ರೀತಿ ಡ್ರೆಸ್ ಹಾಕಿಕೊಂಡು ಬರಬೇಕು ಎಂದರೆ ಕಷ್ಟವಾಗುತ್ತದೆ ಎಂದು ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಇತ್ತ ಅಧ್ಯಕ್ಷೆಯಾಗುವ ಮೊದಲೇ ಈ ರೀತಿ ಹೊಸ ನಿಯಮವನ್ನು ಮಾಡುವ ಮೂಲಕ ವಿವಾದಕ್ಕೀಡಾಗುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ವಿಧಾನ ಪರಿಷತ್ ಸದಸ್ಯನ ಪುತ್ರಿ ಮದ್ವೆಯಲ್ಲಿ ಎಚ್‍ಎಚ್‍ಡಿ ಕುಟುಂಬ

    ವಿಧಾನ ಪರಿಷತ್ ಸದಸ್ಯನ ಪುತ್ರಿ ಮದ್ವೆಯಲ್ಲಿ ಎಚ್‍ಎಚ್‍ಡಿ ಕುಟುಂಬ

    ಮಂಗಳೂರು: ಉದ್ಯಮಿ ಮತ್ತು ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಪುತ್ರಿಯ ಮದುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದ್ಧೂರಿಯಾಗಿ ನಡೆದಿದೆ.

    ಮಂಗಳೂರು ನಗರ ಹೊರವಲಯದ ಉಳ್ಳಾಲದ ಸಮುದ್ರ ದಂಡೆಯಲ್ಲಿ ಫಾರೂಕ್ ಕಟ್ಟಿಸಿರುವ ನೂತನ ರೆಸಾರ್ಟ್ ಸ್ಯಾಂಡ್ ಬೀಚ್ ನಲ್ಲಿ ಮದುವೆ ಕಾರ್ಯ ನಡೆದಿದೆ. ಕೇರಳದ ಹುಡುಗನ ಜೊತೆಗಿನ ಮದುವೆ ಕಾರ್ಯ ಮೂರು ದಿನ ನಡೆಯಲಿದ್ದು, ಇಂದು ಕೂಡ ಗಣ್ಯರು ಮಂಗಳೂರಿಗೆ ಆಗಮಿಸಲಿದ್ದಾರೆ.

    ಮದುವೆ ಗಣ್ಯರು ಬರುವ ಕಾರಣ ಮಂಗಳೂರಿನ ಐಷಾರಾಮಿ ಹೋಟೆಲ್ ಗಳನ್ನು ಮೂರು ದಿನಗಳ ಕಾಲ ತಿಂಗಳ ಮೊದಲೇ ಬುಕ್ ಮಾಡಲಾಗಿದೆ. ಸಚಿವ ಯು.ಟಿ. ಖಾದರ್ ಸ್ವ-ಕ್ಷೇತ್ರದಲ್ಲಿ ಫಾರೂಕ್ ಕಟ್ಟಿಸಿರುವ ರೆಸಾರ್ಟ್ ಈಗ ಜನಮನ ಸೆಳೆಯುವಂತಾಗಿದೆ.

    ಈ ಮದುವೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ, ಜೆಡಿಎಸ್ ವರುಷ್ಠ ದೇವೇಗೌಡ, ಪತ್ನಿ ಚನ್ನಮ್ಮ, ಶಾಸಕಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್, ಸಚಿವ ಎಚ್.ಡಿ. ರೇವಣ್ಣ, ಪುತ್ರ ಪ್ರಜ್ವಲ್ ಮತ್ತು ಸಚಿವ ಬಸವರಾಜ್ ಹೊರಟ್ಟಿ, ಸಚಿವ ಜಮೀರ್ ಅಹ್ಮದ್ ಸೇರಿದಂತೆ ಜೆಡಿಎಸ್ ಹಾಗೂ ಕಾಂಗ್ರೆಸ್ ನ ಹಲವು ಮುಖಂಡರು ಪಾಲ್ಗೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews