Tag: ಪಬ್ಲಿಕ್ ಟಿವಿ Kolkata

  • ಕೋಲ್ಕತ್ತಾದಲ್ಲಿ ಒಂದು ಸ್ಪೆಷಲ್ ಟೀಗೆ 1,000 ರೂ

    ಕೋಲ್ಕತ್ತಾದಲ್ಲಿ ಒಂದು ಸ್ಪೆಷಲ್ ಟೀಗೆ 1,000 ರೂ

    ಕೋಲ್ಕತ್ತಾ: ಸಾಮಾನ್ಯವಾಗಿ ಚಹಾ ಎಲ್ಲರಿಗೂ ಬಹಳ ಇಷ್ಟವಾದ ಪಾನೀಯ. ಎಷ್ಟೋ ಮಂದಿ ಚಹಾ ಕುಡಿಯುವುದನ್ನು ತಮ್ಮ ದಿನನಿತ್ಯದ ಅಭ್ಯಾಸವಾಗಿ ಮಾಡಿಕೊಂಡಿರುತ್ತಾರೆ. ಅಲ್ಲದೆ ಚಹಾಕ್ಕಾಗಿ ಬೆಲೆಬಾಳುವಂತಹ ಕೆಫೆ ಅಥವಾ ರೆಸ್ಟೊರೆಂಟ್‍ಗಳಿಗೆ ಭೇಟಿ ನೀಡಿ ಚಹಾ ಸವಿಯುವುದನ್ನು ನಾವು ನೋಡಿರುತ್ತೇವೆ. ಆದರೆ ಕೋಲ್ಕತ್ತಾದ ಮುಕುಂದಪುರದ ರಸ್ತೆ ಬದಿಯಲ್ಲಿ ಛತ್ರಿ ನೆಟ್ಟು, ಅನೇಕ ಪ್ಲಾಸ್ಟಿಕ್ ಚೇರ್‍ಗಳನ್ನು ಹಾಕಿಕೊಂಡಿರುವ ಚಿಕ್ಕದೊಂದು ಚಹಾ ಅಂಗಡಿ ದುಬಾರಿ ಮೊತ್ತದ ಚಹಾವನ್ನು ಮಾರಾಟ ಮಾಡುತ್ತಿದೆ. ಈ ಚಿಕ್ಕ ಅಂಗಡಿಯಲ್ಲಿ ದೊರೆಯುವ ಸ್ಪೆಷಲ್ ಚಹಾದ ಬೆಲೆ 1,000 ರೂ ಆಗಿದೆ.

    ಹೌದು ಕೋಲ್ಕತ್ತಾದ ಪುಟ್ಟ ಚಹಾದ ಅಂಗಡಿಯೊಂದು ಸುಮಾರು ನೂರಕ್ಕೂ ಅಧಿಕ ವಿವಿಧ ರೀತಿಯ ಚಹಾಗಳನ್ನು ಮಾರಾಟ ಮಾಡುವ ಮೂಲಕ ಬಹಳ ಪ್ರಸಿದ್ಧಿಗಳಿಸಿದೆ. ಈ ಅಂಗಡಿಯಲ್ಲಿ ಒಂದು ಕಪ್ ಚಹಾ 12ರೂ. ಯಿಂದ ಪ್ರಾರಂಭವಾಗಿ 1,000 ರೂ.ವರೆಗೂ ದೊರೆಯುತ್ತದೆ. ಅದರಲ್ಲೂ ಇಲ್ಲಿ ದೊರೆಯುವ ಬೊ-ಲೇ ಟೀ ಒಂದು ಕೆಜಿಗೆ ಸುಮಾರು 3 ಲಕ್ಷ ರೂ. ಆಗಿದೆ. ಸಿಲ್ವರ್ ನೀಡಲ್ ವೈಟ್ ಟೀ, ಲ್ಯಾವೆಂಡರ್ ಟೀ, ಹೈಬಿಸ್‍ಕಸ್(ದಾಸವಾಳದ)ಟೀ, ವೈನ್ ಟೀ, ತುಳಸಿ ಟೀ, ನೀಲಿ ಟಿಸೇನ್ ಟೀ, ಟೀಸ್ತಾ ವ್ಯಾಲಿ ಟೀ, ಮಕೈಬರಿ ಟೀ, ರೂಬಿಯೋಸ್ ಟೀ ಮತ್ತು ಒಕೈಟಿ ಟೀ ಹೀಗೆ ಹಲವು ರೀತಿಯ ಭಿನ್ನ ಭಿನ್ನ ರುಚಿ ನೀಡುವ ಚಹಾ ಈ ಮುಕುಂದಪುರ ಪ್ರದೇಶದಲ್ಲಿ ದೊರೆಯುತ್ತದೆ.

    ಈ ವಿಚಾರವಾಗಿ ಮಾತನಾಡಿದ ಅಂಗಡಿಯ ಮಾಲೀಕ ಪಾರ್ಥ ಪ್ರತಿಮ್ ಗಂಗೂಲಿ, ನಾನು ಮೊದಲಿಗೆ ಬೇರೆ ಕಡೆ ಪೂರ್ತಿದಿನ ಕೆಲಸ ಮಾಡುತ್ತಿದೆ. ಆದರೆ 2014ರಲ್ಲಿ ಚಹಾದ ಅಂಗಡಿಯನ್ನು ತೆರೆದು ಸ್ವಂತ ವ್ಯಾಪಾರ ಮಾಡಲು ಆರಂಭಿಸಿದೆ. ಮೊದಲಿಗೆ ವ್ಯಾಪಾರದಲ್ಲಿ ಯಶಸ್ಸು ಕಾಣಲಿಲ್ಲ ಹೀಗಾಗಿ ವಿವಿಧ ರೀತಿಯ ಚಹಾಗಳನ್ನು ಮಾರಾಟ ಮಾಡಲು ಆರಂಭಿಸಿದೆ. ಇದರಿಂದಾಗಿ ವ್ಯಾಪಾರ ಮಾಡಲು ಹಲವು ರೀತಿಯ ಚಹಾಗಳ ಬಗ್ಗೆ ಅರಿವಿರಬೇಕು ಹಾಗೂ ಅವುಗಳನ್ನು ಹೇಗೆ ಮಾರಾಟ ಮಾಡಬೇಕೆಂಬುವುದನ್ನು ತಿಳಿದಿರಬೇಕು ಎಂದು ಹೇಳಿದರು.

  • ಮದ್ವೆಯಾಗಲು ನಿರಾಕರಿಸಿದ್ದಕ್ಕೆ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಂದ ಪಾಪಿ

    ಮದ್ವೆಯಾಗಲು ನಿರಾಕರಿಸಿದ್ದಕ್ಕೆ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಂದ ಪಾಪಿ

    ಕೋಲ್ಕತ್ತಾ: 17 ವರ್ಷದ ಯುವತಿಯೊಬ್ಬಳು ಮನೆಯಲ್ಲಿ ಕೊಲೆಯಾಗಿರುವ ಘಟನೆ ಶನಿವಾರ ಕೋಲ್ಕತ್ತಾದ ರೋಹಿಣಿಯ ಬೇಗಂಪೂರ್ ಪ್ರದೇಶದಲ್ಲಿ ನಡೆದಿದೆ.

    ಯುವತಿಯನ್ನು ಲೈಕ್‍ಖಾನ್(25) ಎಂಬಾತ ಕೊಂದಿದ್ದು, ಕೃತ್ಯವೆಸಗಿದ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಅಲ್ಲದೆ ತನಿಖೆ ವೇಳೆ ಆರೋಪಿಯನ್ನು ಯುವತಿ ಮದುವೆಯಾಗಲು ನಿರಾಕರಿಸಿದ್ದರಿಂದ ಆಕೆಯನ್ನು ಕೊಲ್ಲಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪಿಕೆ ಮಿಶ್ರಾ ಹೇಳಿದ್ದಾರೆ.

    ತನಿಖೆ ವೇಳೆ, ಮೃತ ಯುವತಿ ತನ್ನ ಕುಟುಂಬದೊಂದಿಗೆ ಬವಾನಾ ಪ್ರದೇಶದಲ್ಲಿ ವಾಸಿಸುತ್ತಿದ್ದಳು. ಹಾಗೆಯೇ ಆಕೆ ತನ್ನ ನೆರೆಮನೆಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಳು. ಆದರೆ ಒಂದು ವರ್ಷದ ಬಳಿಕ ಬೇಗಂಪೂರ್ ಪ್ರದೇಶಕ್ಕೆ ಯುವತಿ ಮನೆ ಬದಲಾಯಿಸಲಾಗಿದೆ. ಶುಕ್ರವಾರ ಮೃತ ಯುವತಿಯ ನೂತನ ನಿವಾಸಕ್ಕೆ ಊಟಕ್ಕಾಗಿ ಹಿಂದಿನ ನೆರೆಮನೆಯ ಲೈಕ್‍ಖಾನ್ ಎಂಬಾತ ಬಂದಿದ್ದಾನೆ.

     

    ಈ ವೇಳೆ ಮೃತ ಯುವತಿ ಸಹೋದರ ಮತ್ತು ಸೋದರ ಸಂಬಂಧಿಗಳು ಕೆಲವು ದಿನಸಿ ವಸ್ತುಗಳನ್ನು ಹೊರಗೆ ಹೋಗಿದ್ದರು. ಅವರು ಹಿಂದಿರುಗುತ್ತಿದ್ದ ವೇಳೆ ಲೈಕ್ ಮನೆಗೆ ಬೀಗ ಹಾಕಿ ಹೊರಗೆ ಹೋಗುತ್ತಿರುವುದನ್ನು ನೋಡಿದ್ದಾರೆ. ಬಳಿಕ ನೀತು ಕೂಡ ಆತನೊಂದಿಗೆ ಹೊರಗೆ ಹೋಗಿರಬೇಕೆಂದು ಭಾವಿಸಿ ಮನೆಯ ಹೊರಗೆ ಕಾದು ಕುಳಿತಿದ್ದಾರೆ. ಆದರೆ ನೀತು ತಾಯಿ ಮನೆಗೆ ಬಂದಾಗ ಬೀಗ ಹಾಕಿರುವುದನ್ನು ನೋಡಿ ನೀತುಗೆ ಕರೆ ಮಾಡಿದ್ದಾರೆ. ಮೊಬೈಲ್ ಫೋನ್ ಮನೆಯಲ್ಲಿಯೇ ರಿಂಗ್ ಆದ ಶಬ್ದ ಕೇಳಿ ಬಾಗಿಲನ್ನು ಒಡೆದು ಮನೆ ಒಳಗೆ ಪ್ರವೇಶಿಸಿ ನೋಡಿದಾಗ ನೀತು ರಕ್ತದ ಮಡುವಿನ ಮಧ್ಯೆ ಬಿದ್ದಿರುವುದನ್ನು ನೋಡಿ ಆತಂಕಗೊಂಡಿದ್ದಾರೆ. ಬಳಿಕ ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ನೀತು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

    ಘಟನೆ ಸಂಬಂಧಿಸಿದಂತೆ ನೀತು ಸಹೋದರ ಆರೋಪಿ ನೀತು ಒಬ್ಬಳೇ ಇರುವ ವೇಳೆ ಆಕೆಯನ್ನು ಮದುವೆಯಾಗಲು ಪೀಡಿಸಿದ್ದಾನೆ. ಮದುವೆಯಾಗಲು ನೀತು ನಿರಾಕರಿಸಿದ್ದರಿಂದ ಆಕೆಯ ತಲೆಗೆ ಸುತ್ತಿಗೆಯಿಂದ ಹೊಡೆದು ಹತ್ಯೆಗೈಯ್ದಿದ್ದಾನೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.