Tag: ಪಬ್ಲಿಕ್ ಟಿವಿ camarasa malipatil

  • ಸುಮಲತಾ ಹೋರಾಟಕ್ಕೆ ರೈತ ಸಂಘದಿಂದ ಸಂಪೂರ್ಣ ಬೆಂಬಲ: ಚಾಮರಸ ಮಾಲಿಪಾಟೀಲ್

    ಸುಮಲತಾ ಹೋರಾಟಕ್ಕೆ ರೈತ ಸಂಘದಿಂದ ಸಂಪೂರ್ಣ ಬೆಂಬಲ: ಚಾಮರಸ ಮಾಲಿಪಾಟೀಲ್

    ರಾಯಚೂರು: ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಸಂಸದೆ ಸುಮಲತಾ ಹೋರಾಟಕ್ಕೆ ರಾಜ್ಯ ರೈತ ಸಂಘದಿಂದ ಸಂಪೂರ್ಣ ಬೆಂಬಲವಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ಚಾಮರಸ ಮಾಲಿಪಾಟೀಲ್‍ರವರು, ರಾಜ್ಯದ ಹಲವೆಡೆ ಅಕ್ರಮ ಕಲ್ಲುಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಮಂಡ್ಯ ಜಿಲ್ಲೆಯ ಬೇಬಿಬೆಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಅದೂ ಕೆಆರ್‍ಎಸ್ ನಿಂದ 5-6 ಕಿ.ಮೀನಲ್ಲಿ ಗಣಿಗಾರಿಕೆ ನಡೆಯುತ್ತಿದೆ. 20 ಕಿ.ಮೀ ಒಳಗೆ ಗಣಿಗಾರಿಕೆ ನಡೆಸಬಾರದು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಈ ಹಿಂದೆ ಪುಟ್ಟಣ್ಣಯ್ಯ ನೇತೃತ್ವದಲ್ಲಿ ರೈತ ಸಂಘ ಹೋರಾಟ ಮಾಡಿದಾಗ ಬಂದ್ ಆಗಿತ್ತು ಎಂದಿದ್ದಾರೆ.

    ಕೆಲವರು ಕನ್ನಂಬಾಡಿ ಕಟ್ಟೆ ಬಿರುಕು ಬಿಟ್ಟಿದೆ ಅಂತ ಹೇಳಬಹುದು, ಕೆಲವರು ಇಲ್ಲ ಎನ್ನಬಹುದು. ಆದರೆ ಅಣೆಕಟ್ಟಿನ ಅಯುಷ್ಯ ಮಾತ್ರ ಖಂಡಿತ ಕಡಿಮೆಯಾಗುತ್ತದೆ. 100 ವರ್ಷದ ಆಯುಷ್ಯ 50 ವರ್ಷಕ್ಕೆ ಮುಗಿಯುತ್ತದೆ. ರೈತ ಸಂಘ ಹಿಂದೆ ಮಾಡಿದ ಹೋರಾಟವನ್ನು ಈಗ ಸುಮಲತಾ ಮಾಡುತ್ತಿದ್ದಾರೆ, ಸುಮಲತಾ ಹೋರಾಟಕ್ಕೆ ರೈತ ಸಂಘ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ತಿಳಿಸಿದ್ದಾರೆ.

    ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ ಆಗಿ ಜವಾಬ್ದಾರಿಯಿಂದ ಮಾತನಾಡಬೇಕು. ಒಬ್ಬ ಮಹಿಳಾ ಸಂಸದರ ಬಗ್ಗೆ ಮಾತನಾಡುವಾಗ ಎಚ್ಚರವಿರಬೇಕು. ಕುಮಾರಸ್ವಾಮಿ ತಮ್ಮ ಮಾತನ್ನು ವಾಪಸ್ ಪಡೆಯಬೇಕು. ಸಣ್ಣ ಮಾತುಗಳನ್ನು ಆಡಿ ಸಣ್ಣತನ ಪ್ರದರ್ಶನ ಮಾಡಬಾರದು ಅಂತ ಚಾಮರಸ ಮಾಲಿಪಾಟೀಲ್ ಹೇಳಿದ್ದಾರೆ. ಇದನ್ನೂ ಓದಿ:‘ಏನಯ್ಯಾ ದರ್ಶನ್‍ಗೆ ತಲೆ ಇಲ್ವೇನಯ್ಯಾ, ಹೋಗಿ ಹೋಗಿ ನಾಯಿಗೆ ಕಚ್ಚಿದ್ದಾನೆ’