Tag: ಪನ್ನೀರ್ ಸೆಲ್ವಂ

  • ಅಜ್ಞಾತ ಸ್ಥಳದತ್ತ ಶಶಿಕಲಾ ಬೆಂಬಲಿಗರು: ನಿನ್ನೆ ರಾತ್ರಿಯಿಂದ ಇಲ್ಲಿಯವರೆಗಿನ ಟೈಂ ಲೈನ್ ಇಲ್ಲಿದೆ

    ಚೆನ್ನೈ: ತಮಿಳುನಾಡಲ್ಲಿ ಯಾರೂ ನಿರೀಕ್ಷಿಸದ ಮಟ್ಟಕ್ಕೆ ಕ್ಷಿಪ್ರ ರಾಜಕೀಯ ಕ್ರಾಂತಿ ಆಗ್ತಿದೆ. ಮಂಗಳವಾರ ರಾತ್ರಿ ಜಯಯಲಿತಾ ಸಮಾಧಿ ಮುಂದೆ ಪನ್ನೀರ್ ಸೆಲ್ವಂ ಧ್ಯಾನಕ್ಕೆ ಇಳಿದು ನಂತರ ನೀಡಿದ ಹೇಳಿಕೆ ಬಳಿಕ ರಾಜಕೀಯದ ಚದುರಂಗದಾಟ ಶುರುವಾಗಿದೆ.

    ನಾನು ಯಾವುದೇ ಕಾರಣಕ್ಕೂ ಸುಮ್ಮನಿರಲ್ಲ. ಜಯಲಲಿತಾ ಸಾವಿನ ಬಗ್ಗೆ ತನಿಖೆ ನಡೆಸುತ್ತೇನೆ. ಜನ ಬಯಸಿದ್ದರೆ ಮತ್ತೆ ರಾಜೀನಾಮೆ ವಾಪಾಸ್ ಪಡೆಯುತ್ತೇನೆ. ಶಶಿಕಲಾರನ್ನ ಸಿಎಂ ಆಗೋಕೆ ಬಿಡಲ್ಲ ಅಂತಾ ಪನ್ನೀರ್ ಸೆಲ್ವಂ ರಣಕಹಳೆ ಊದಿದ್ದಾರೆ. ರಾಜ್ಯಪಾಲರ ಭೇಟಿಗೂ ಸಮಯ ಕೇಳಿದ್ದಾರೆ.

    ಆದರೆ ಯಾವುದೇ ಕಾರಣಕ್ಕೂ ಕುರ್ಚಿ ಬಿಡಲು ಶಶಿಕಲಾ ನಟರಾಜನ್ ಕೂಡಾ ರೆಡಿಯಿಲ್ಲ. ಶಶಿಕಲಾ ಶಾಸಕಾಂಗ ಪಕ್ಷದ ಸಭೆ ಕೂಡಾ ನಡೆಸಿದ್ದಾರೆ. ನಾನು ಕದ್ದುಮುಚ್ಚಿ ಶಾಸಕಾಂಗ ಸಭೆ ನಡೆಸಿಲ್ಲ. ಪನ್ನೀರ್ ಸೆಲ್ವಂ ಒಬ್ಬ ನಯವಂಚಕ. ಜಯಲಲಿತಾ ವಿರೋಧಿಗಳ ಜೊತೆಯೇ ಸೇರಿಕೊಂಡಿದ್ದಾರೆ ಅಂತಾ ಆರೋಪಿಸಿದ್ರು. ಪಕ್ಷದ ಒಗ್ಗಟ್ಟು ಒಡೆಯಲು ಯಾರಿಗೂ ಸಾಧ್ಯವಿಲ್ಲ. ಅಮ್ಮನನ್ನು ಪ್ರೀತಿಸುವವರೆಲ್ಲರೂ ನನಗೆ ಬೆಂಬಲಿಸುತ್ತೀರಿ ಎಂದು ನಂಬಿದ್ದೇನೆ ಅಂತ ಹೇಳಿದ್ರು.

    ಈಗಾಗಲೇ 134 ಶಾಸಕರಲ್ಲಿ 131 ಮಂದಿ ಶಾಸಕರನ್ನು ಒಟ್ಟುಮಾಡಿಕೊಂಡಿರುವ ಶಶಿಕಲಾ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ನಾಳೆ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡುವ ಸಾಧ್ಯತೆಯಿದೆ. ಅಲ್ಲದೇ ಪ್ರಮಾಣ ವಚನಕ್ಕೆ ಬಾರದ ರಾಜ್ಯಪಾಲರ ವಿರುದ್ಧವೂ ದೂರು ನೀಡಲಿದ್ದಾರೆ. ರಾಜ್ಯಪಾಲ ವಿದ್ಯಾಸಾಗರ್ ರಾವ್ ಇನ್ನೂ ಚೆನ್ನೈಗೆ ಬಂದಿಲ್ಲ. ರಾಜ್ಯಪಾಲರು ಎಲ್ಲಿಯವರೆಗೆ ವಿಳಂಬ ಮಾಡುತ್ತಾರೋ ಅಲ್ಲಿಯವರೆಗೆ ಪನ್ನೀರ್ ಸೆಲ್ವಂಗೆ ಶಶಿಕಲಾ ವಿರುದ್ಧ ರಣತಂತ್ರ ಹೆಣೆಯಲು ಅವಕಾಶವಿದೆ.

    ನಿನ್ನೆ ರಾತ್ರಿಯಿಂದ ಏನಾಯ್ತು?
    * ರಾತ್ರಿ 9.09 – ಚೆನ್ನೈನ ಮರೀನಾ ಬೀಚ್‍ನ ಜಯಾ ಸಮಾಧಿಗೆ ಸೆಲ್ವಂ ಭೇಟಿ
    * ರಾತ್ರಿ 9.10 – ಜಯಾ ಸಮಾಧಿ ಮುಂದೆ ಸೆಲ್ವಂ ಧ್ಯಾನ ಆರಂಭ (ಧ್ಯಾನದ ಮಧ್ಯೆ ಕಣ್ಣೀರು ಹಾಕಿದ ಓಪಿಎಸ್)
    * ರಾತ್ರಿ 9.45 – ಸಮಾಧಿ ಮುಂದೆ ಧ್ಯಾನ ಅಂತ್ಯ
    * ರಾತ್ರಿ 9.54 – ಮಾಧ್ಯಮಗಳಿಗೆ ಸೆಲ್ವಂ ಪ್ರತಿಕ್ರಿಯೆ

    * ರಾತ್ರಿ 9.57 – ಶಶಿಕಲಾ ವಿರುದ್ಧ ಬಂಡಾಯದ ಕಹಳೆ
    * ರಾತ್ರಿ 10 ಗಂಟೆ – ಜಯಾ ಸ್ಮಾರಕದ ಬಳಿ ಪನ್ನೀರ್ ಸೆಲ್ವಂಗೆ ಜನಬೆಂಬಲ
    * ರಾತ್ರಿ 10.30 – ನಿವಾಸಕ್ಕೆ ಮರಳಿದ ಪನ್ನೀರ್ ಸೆಲ್ವಂ
    * ರಾತ್ರಿ 10.45 – ಸೆಲ್ವಂ ನಿವಾಸದ ಮುಂದೆ ಜನಸ್ತೋಮ

    * ರಾತ್ರಿ 10.45 – ಅತ್ತ ಪೋಯಸ್ ಗಾರ್ಡನ್ ಮುಂದೆ ಶಶಿಕಲಾ ಅಭಿಮಾನಿಗಳ ಜಮಾವಣೆ
    * ರಾತ್ರಿ 11 – ಎಐಎಡಿಎಂಕೆ ಶಾಸಕರು, ಸಚಿವರಿಗೆ ಶಶಿಕಲಾ ತುರ್ತು ಬುಲಾವ್
    * ಮಧ್ಯರಾತ್ರಿ 11.30 – ಶಶಿಕಲಾ ಮನೆಯಲ್ಲಿ 20 ಸಚಿವರು 80 ಶಾಸಕರು ಹಾಜರು
    * ಮಧ್ಯರಾತ್ರಿ 12 – ಪೋಯಸ್ ಗಾರ್ಡನ್ ನಿವಾಸದಲ್ಲಿ ಅಣ್ಣಾಡಿಎಂಕೆ ಪಕ್ಷದ ಸಭೆ
    * ಮಧ್ಯರಾತ್ರಿ 12.45 – ಪಕ್ಷದ ಖಜಾಂಚಿ ಹುದ್ದೆಯಿಂದ ಪನ್ನೀರ್ ಸೆಲ್ವಂ ಔಟ್

    * ಮಧ್ಯರಾತ್ರಿ 1 ಗಂಟೆ – ಶಶಿಕಲಾ ನಾಯಕತ್ವದಲ್ಲಿ ಪಕ್ಷ ಅಧಿಕಾರ ನಡೆಸುತ್ತೆ – ಎಐಎಡಿಎಂಕೆ
    * ಮಧ್ಯರಾತ್ರಿ 1.13 – ಪೋಯಸ್ ಗಾರ್ಡನ್ ನಿವಾಸದಿಂದ ಹೊರಬಂದ ಶಶಿಕಲಾ
    * ಮಧ್ಯರಾತ್ರಿ 1.16 – ನಾವೆಲ್ಲಾ ಒಂದೇ ಕುಟುಂಬ. ಎಲ್ಲಾ 134 ಶಾಸಕರು ಒಗ್ಗಟ್ಟಾಗಿದ್ದೇವೆ – ಶಶಿಕಲಾ
    * ಮಧ್ಯರಾತ್ರಿ 1.17 – ಇದರ ಹಿಂದೆ ಡಿಎಂಕೆ ಕೈವಾಡ ಇದೆ. ಸೆಲ್ವಂರನ್ನ ಪಕ್ಷದಿಂದ ಉಚ್ಚಾಟಿಸ್ತೇವೆ -ಶಶಿಕಲಾ
    * ಮಧ್ಯರಾತ್ರಿ 1.20 – ಶಶಿಕಲಾ ಸರ್ಕಾರ ರಚನೆಗೆ ರಾಜ್ಯಪಾಲರು ಅವಕಾಶ ನೀಡಬೇಕು – ತಂಬಿದೊರೈ
    * ಮಧ್ಯರಾತ್ರಿ 1.40 – ನಾನು ಪಕ್ಷದ ನಿಷ್ಠಾವಂತ. ನನ್ನನ್ನ ಯಾರೂ ಹೊರಹಾಕೋಕೆ ಆಗಲ್ಲ – ಸೆಲ್ವಂ

    * ಬೆಳಗ್ಗೆ 9.08 – ಡಿಎಂಕೆಗೂ ಇದಕ್ಕೂ ಸಂಬಂಧವಿಲ್ಲ – ಡಿಎಂಕೆಯ ಟಿಕೆಎಸ್ ಇಳಂಗೋವನ್ ಹೇಳಿಕೆ
    * ಬೆಳಗ್ಗೆ 9.17 – ತಮಿಳುನಾಡು ರಾಜಕೀಯ ಅಸ್ಥಿರತೆಗೆ ಕೇಂದ್ರ ಕಾರಣ – ಕಾಂಗ್ರೆಸ್ ಆರೋಪ
    * ಬೆಳಗ್ಗೆ 9.27 – ಅಮ್ಮಾ ಭೇಟಿ ಮಾಡಲು ಶಶಿಕಲಾ ಅವಕಾಶ ಕೊಡಲಿಲ್ಲ – ಸೆಲ್ವಂ ಆರೋಪ
    * ಬೆಳಗ್ಗೆ 10.15 – ಶಶಿಕಲಾ ಪರ ಸುಬ್ರಮಣಿಯನ್ ಸ್ವಾಮಿ ಬ್ಯಾಟಿಂಗ್
    * ಬೆಳಗ್ಗೆ 10.16 – ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಲ್ಲ. ರಾಜ್ಯಪಾಲರಿಂದ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಎಂದ ವೆಂಕಯ್ಯ ನಾಯ್ಡು

    * ಬೆಳಗ್ಗೆ 10.36 – ಸೆಲ್ವಂಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ ರಾಜ್ಯಸಭಾ ಸದಸ್ಯ ಮೈತ್ರೆಯನ್
    * ಬೆಳಗ್ಗೆ 10.47 – ಪನ್ನೀರ್ ಸೆಲ್ವಂ – ಪಾಂಡಿಯನ್ ಸುದ್ದಿಗೋಷ್ಠಿ – ವಿಧಾನಸಭೆಯಲ್ಲಿ ನನ್ನ ಬಲ ಏನೆಂದು ತೋರಿಸುವೆ. ಜಯಾ ಸಾವಿನ ಬಗ್ಗೆ ತನಿಖೆಗೆ ಆದೇಶ
    * ಬೆಳಗ್ಗೆ 11.37 – ಅಣ್ಣಾಡಿಎಂಕೆ ಕಚೇರಿಯಲ್ಲಿ ಶಶಿಕಲಾ ನೇತೃತ್ವದಲ್ಲಿ ಶಾಸಕರ ಸಭೆ. 130 ಶಾಸಕರು ಹಾಜರು
    * ಬೆಳಗ್ಗೆ 11.44 – ಇವತ್ತು ಮುಂಬೈನಲ್ಲೇ ಉಳಿಯಲು ರಾಜ್ಯಪಾಲ ವಿದ್ಯಾಸಾಗರ್ ರಾವ್ ನಿರ್ಧಾರ

    * ಮಧ್ಯಾಹ್ನ 12.10 – ಶಶಿಕಲಾಗೆ ಚುನಾವಣಾ ಆಯೋಗಕ್ಕೆ ಶಾಕ್. ಜನೆರಲ್ ಸೆಕ್ರೆಟರಿಯಾಗಿ ಆಯ್ಕೆಯಾದ ಬಗ್ಗೆ ವಿವರ ಕೋರಿ ನೋಟೀಸ್
    * ಮಧ್ಯಾಹ್ನ 1.10 – ಶಾಸಕರ ಸಭೆ ಬಳಿಕ ಶಶಿಕಲಾ ಸುದ್ದಿಗೋಷ್ಠಿ. ಪನ್ನೀರ್ ಸೆಲ್ವಂ ಒಬ್ಬ ವಂಚಕ. ಡಿಎಂಕೆ ಜೊತೆ ಸೇರಿದ್ದಾರೆ ಎಂದು ವಾಗ್ದಾಳಿ
    * ಮಧ್ಯಾಹ್ನ 1.37 – ಶಶಿಕಲಾ ಆರೋಪ ತಳ್ಳಿಹಾಕಿದ ಎಂ ಕೆ ಸ್ಟಾಲಿನ್
    * ಮಧ್ಯಾಹ್ನ 2.15 – ರಾಷ್ಟ್ರಪತಿಗಳ ಮುಂದೆ ಬಲಪ್ರದರ್ಶನ ಮಾಡಲು ಶಶಿಕಲಾ ಅಂಡ್ ಟೀಂ ಚಿಂತನೆ
    * ಮಧ್ಯಾಹ್ನ 3.20 – 130 ಶಾಸಕರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಶಶಿಕಲಾ

  • ಆಸ್ಪತ್ರೆಯಲ್ಲಿ 1 ಬಾರಿಯೂ ಜಯಲಲಿತಾ ಭೇಟಿಗೆ ಬಿಡಲಿಲ್ಲ: ಪನ್ನೀರ್ ಸೆಲ್ವಂ

    – ಜಯಾ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ಆಗ್ಬೇಕು

    ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿವೆ. ಮಂಗಳವಾರ ರಾತ್ರಿ ಇದ್ದಕ್ಕಿದ್ದಂತೆ ಜಯಲಲಿತಾ ಸಮಾಧಿ ಬಳಿ ಧ್ಯಾನ ಮಗ್ನರಾಗಿದ್ದ ಪನ್ನೀರ್ ಸೆಲ್ವಂ ಶಶಿಕಲಾ ವಿರುದ್ಧ ತಿರುಗಿಬಿದದ್ದಿದ್ದಾರೆ. ಜಯಲಲಿತಾ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಒಂದು ಬಾರಿಯೂ ಅವರನ್ನು ನೋಡಲು ನನ್ನನ್ನು ಬಿಟ್ಟಿರಲಿಲ್ಲ ಎಂದು ಪನ್ನೀರ್ ಸೆಲ್ವಂ ಟ್ವೀಟ್ ಮಾಡಿದ್ದಾರೆ.

    ನಾನು ಪ್ರತಿದಿನ ಅಮ್ಮನ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಹೋಗುತ್ತಿದ್ದೆ. ಆದ್ರೆ ಒಂದು ಬಾರಿಯೂ ಅವರನ್ನು ಭೇಟಿಯಾಗುವ ಅವಕಾಶ ಸಿಗಲಿಲ್ಲ ಎಂದು ಒನ್ನೀರ್ ಸೆಲ್ವಂ ಹೇಳಿದ್ದಾರೆ. ವರದಿಗಾರರೊಂದಿಗೆ ಮಾತನಾಡಿರುವ ಅವರು, ಇನ್ಫೆಕ್ಷನ್ ಆಗುತ್ತದೆ ಎಂಬ ಭಯದಿಂದ ಜಯಲಲಿತಾರನ್ನು ನೋಡಲು ಆಗಲಿಲ್ಲ ಎಂದು ಪ್ರತಿದಿನ ನನ್ನ ಕುಟುಂಬದವರಿಗೆ ಹೇಳುತ್ತಿದೆ. ಪ್ರತಿದಿನ ನನ್ನ ಕುಟುಂಬದವರು, ನೀವು ಆಸ್ಪತ್ರೆಯಲ್ಲಿ ಅಮ್ಮನನ್ನು ನೋಡಿದ್ರಾ ಅಂತ ಕೇಳ್ತಿದ್ರು. ಹೌದು ಅಂತ ಹೇಳಬೇಕು ಎಂದುಕೊಂಡರೂ ಸುಳ್ಳು ಹೇಳಲು ಮನಸ್ಸಾಗಲಿಲ್ಲ ಎಂದಿದ್ದಾರೆ.

    ಜಯಲಲಿತಾ ಚಿಕಿತ್ಸೆಯ ಬಗ್ಗೆ ಅನುಮಾನಗಳಿದ್ದು, ಅದಕ್ಕೆ ಉತ್ತರ ಬೇಕು. ಜಯಲಲಿತಾ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಪನ್ನೀರ್ ಸೆಲ್ವಂ ಹೇಳಿದ್ದಾರೆ. ಮಂಗಳವಾರದಂದು ಎಐಎಡಿಂಕೆಯ ಕಾರ್ಯಕರ್ತ ಪಿಹೆಚ್ ಪಂಡಿಯನ್, ಜಯಲಲಿತಾ ಅವರ ಸಾವು ಸಹಜ ಸಾವಲ್ಲ ಎಂದು ಆರೋಪಿಸಿದ್ದರು.

    ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾರನ್ನು ಶಶಿಕಲಾ ಸೇರಿದಂತೆ ಕೆಲವೇ ಕೆಲವು ವ್ಯಕ್ತಿಗಳು ಮಾತ್ರ ಭೇಟಿ ಮಾಡಿದ್ದರು. ಸಿಎಂಬರ್ 5 ರಂದು ಜಯಲಲಿತಾ ನಿಧನರಾದ್ರು.

  • ಶಶಿಕಲಾ ವಿರುದ್ಧ ಸೆಲ್ವಂ ಬಂಡಾಯದ ಕಹಳೆ – ಖಜಾಂಚಿ ಸ್ಥಾನದಿಂದ ಕಿತ್ತೆಸೆದ ಶಶಿಕಲಾ

    – ಪನ್ನೀರ್ ಸೆಲ್ವಂಗೆ ಡಿಎಂಕೆ ಸಪೋರ್ಟ್

    ಚೆನ್ನೈ: ಜಯಲಲಿತಾ ನಿಧನದ ನಂತರ ಅಸ್ಥಿರತೆಯಲ್ಲಿದ್ದ ತಮಿಳುನಾಡಿನ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಅಮ್ಮನಿಲ್ಲದ ತಮಿಳುನಾಡಿನಲ್ಲಿ ರಾಜಕೀಯ ಕ್ಷಿಪ್ರಕ್ರಾಂತಿ ನಡೆದಿದೆ. ಇದಕ್ಕೆ ಕಾರಣವಾಗಿದ್ದು ಅಮ್ಮನ ನಂಬಿಕಸ್ಥ ಬಂಟ ಪನ್ನೀರ್ ಸೆಲ್ವಂ. ಚಿನ್ನಮ್ಮ ಶಶಿಕಲಾ ವಿರುದ್ಧ ಅಮ್ಮನ ಬಲಗೈ ಬಂಟ ಪನ್ನೀರ್ ಸೆಲ್ವಂ ಬಂಡಾಯದ ಕಹಳೆ ಊದಿದ್ದಾರೆ.

    ಶಶಿಕಲಾ ನಟರಾಜನ್‍ಗಾಗಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದ ಓಪಿಎಸ್, ಅಚ್ಚರಿಯ ಬೆಳವಣಿಗೆಯಲ್ಲಿ ರಾತ್ರೋರಾತ್ರಿ ಚಿನ್ನಮ್ಮನ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಪನ್ನೀರ್ ಸೆಲ್ವಂ, ಚೆನ್ನೈನ ಮರೀನಾ ಬೀಚ್‍ನಲ್ಲಿರೋ ಜಯಲಲಿತಾ ಸಮಾಧಿಗೆ ದಿಢೀರ್ ಭೇಟಿಕೊಟ್ಟು ಸುಮಾರು 45 ನಿಮಿಷಗಳ ಕಾಲ ಧ್ಯಾನ ಮಾಡಿದ್ರು. ಬಳಿಕ ಮಾಧ್ಯಮದ ಜೊತೆ ಮಾತಾಡಿ, ಶಶಿಕಲಾ ಅವ್ರು ತನ್ನನ್ನ ಬಲವಂತವಾಗಿ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರು ಅಂತ ಬಾಂಬ್ ಹಾಕಿದ್ರು. ನಾನು ಸಿಎಂ ಆಗಬೇಕು ಅಂತ ಆಸ್ಪತ್ರೆಯಲ್ಲಿದ್ದಾಗ ಅಮ್ಮ ಬಯಸಿದ್ರು. ಆದ್ರೆ, ಶಶಿಕಲಾ ಟೀಂ ನನಗೆ ಗೊತ್ತಿಲ್ಲದೇ ಶಾಸಕಾಂಗ ಪಕ್ಷದ ಸಭೆ ಕರೆದು ಅವಮಾನ ಮಾಡ್ತು. ಈಗ ಅಮ್ಮನ ಆತ್ಮವೇ ಬಂದು ಜನರಿಗೆ ಸತ್ಯ ಹೇಳುವಂತೆ ತಿಳಿಸಿದೆ. ಈಗ ಜನ ಹಾಗೂ ಕಾರ್ಯಕರ್ತರಿಗೆ ಸತ್ಯ ತಿಳಿಸುತ್ತಿದ್ದೇನೆ ಅಂತ ಹೇಳಿ ತಮಿಳುನಾಡು ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ರು.

    ಜಯಾ ಸಮಾಧಿಯಿಂದ ತನ್ನ ನಿವಾಸಕ್ಕೆ ಮರಳಿದ ಪನ್ನೀರ್ ಸೆಲ್ವಂಗೆ ಅಭೂತರ್ಪ ಬೆಂಬಲ ವ್ಯಕ್ತವಾಯ್ತು. ಜನರು ಸೆಲ್ವಂ ನಿವಾಸದ ಮುಂದೆ ಜಮಾಯಿಸಿ ಶಶಿಕಲಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಇದರ ಬೆನ್ನಲ್ಲೇ ಪೋಯಸ್ ಗಾರ್ಡನ್ ನಿವಾಸದ ಮುಂದೆ ಶಶಿಕಲಾ ಅಭಿಮಾನಿಗಳು ಸೇರತೊಡಗಿದ್ರು.

    ತುರ್ತು ಸಭೆ ಕರೆದ ಶಶಿಕಲಾ: ದಂಗೆಯ ಮುನ್ನೆಚ್ಚರಿಕೆ ಅರಿತ ಶಶಿಕಲಾ ತಕ್ಷಣವೇ ತುರ್ತು ಸಭೆ ನಡೆಸಿದ್ರು. ಮಧ್ಯರಾತ್ರಿ 1 ಗಂಟೆವರೆಗೆ ನಡೆದ ಸಭೆಯಲ್ಲಿ ಪಕ್ಷದ ಖಜಾಂಚಿ ಸ್ಥಾನದಿಂದ ಪನ್ನೀರ್ ಸೆಲ್ವಂಗೆ ಗೇಟ್‍ಪಾಸ್ ಕೊಡಲಾಯಿತು. ಸಭೆಯಲ್ಲಿ 20 ಸಚಿವರು 80 ಶಾಸಕರು ಹಾಜರಿದ್ರು. ಸಭೆ ಬಳಿಕ ಮಾತನಾಡಿದ ಶಶಿಕಲಾ, ಅಣ್ಣಾಡಿಎಂಕೆ ಪಕ್ಷದ ಶಾಸಕರು ಒಂದೇ ಕುಟುಂಬ, ಬಿಕ್ಕಟ್ಟಿನ ಹಿಂದೆ ಡಿಎಂಕೆ ಕೈವಾಡ ಇದೆ. ಸೆಲ್ವಂಗೆ ನಾನು ಒತ್ತಡ ಹಾಕಿಲ್ಲ, ಅವ್ರನ್ನ ಪಕ್ಷದಿಂದ ಹೊರಹಾಕ್ತೇವೆ ಅಂತ ಶಾಂತಚಿತ್ತವಾಗೇ ಉತ್ತರಿಸಿದ್ರು. ಈ ಹೈಡ್ರಾಮಾಗೆ ಡಿಎಂಕೆ ಕಾರಣ ಅಂತ ದೂರಿದ ಪಕ್ಷದ ಹಿರಿಯ ನಾಯಕ ತಂಬಿದೊರೈ, ಚಿನ್ನಮ್ಮ ಶಶಿಕಲಾಗೆ ಸರ್ಕಾರ ರಚಿಸಲು ರಾಜ್ಯಪಾಲರು ಅವಕಾಶ ಕೊಡಬೇಕು ಅಂದ್ರು.

    ನನ್ನ ನಿಷ್ಠೆಯನ್ನು ಯಾರೂ ಪ್ರಶ್ನಿಸುವಂತಿಲ್ಲ: ನಾನು ಎಐಎಡಿಎಂಕೆ ಪಕ್ಷದ ಕಟ್ಟಾಳು. ಯಾರೂ ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವಂತಿಲ್ಲ. ನನ್ನನ್ನ ಖಜಾಂಚಿ ಮಾಡಿದ್ದು ಅಮ್ಮ. ನಾನು ಅದನ್ನ ಮುಂದುವರಿಸ್ತೇನೆ. ನನ್ನ ಸ್ಥಾನವನ್ನ ಯಾರಿಂದಲೂ ಕಸಿದುಕೊಳ್ಳೋಕೆ ಸಾಧ್ಯವಿಲ್ಲ. ಈ ಬೆಳವಣಿಗೆಯಲ್ಲಿ ಡಿಎಂಕೆಯ ಪಾತ್ರವಿಲ್ಲ. ಪ್ರತಿಪಕ್ಷ ನಾಯಕರತ್ತ ನೋಡೋದು, ನಗು ಚೆಲ್ಲೋದು ಅಪರಾಧ ಅಲ್ಲವೇ ಅಲ್ಲ. ಖಂಡಿತಾ ಕ್ರೈಮ್ ಅಲ್ಲ ಅಲ್ವಾ. (ಕಳೆದ ಕೆಲ ದಿನಗಳ ಹಿಂದೆ ನಡೆದ ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕ ಸ್ಟಾಲಿನ್ ಕಡೆ ಸೆಲ್ವಂ ನಗು ಚೆಲ್ಲಿದ್ದರು) ನಾಳೆ ಏನಾಗುತ್ತೆ ಕಾದು ನೋಡಿ ಅಂತ ಪನ್ನೀರ್ ಸೆಲ್ವಂ ಪ್ರತಿಕ್ರಿಯಿಸಿದ್ದಾರೆ.

    ಕ್ಷಿಪ್ರ ರಾಜಕೀಯದಿಂದಾಗಿ ತಮಿಳುನಾಡಿನ ರಾಜಕೀಯ ಲೆಕ್ಕಾಚಾರವನ್ನ ನೋಡಬೇಕಾಗಿದೆ. ತಮಿಳುನಾಡು ಅಸೆಂಬ್ಲಿಯಲ್ಲಿ ಪಕ್ಷಗಳ ಬಲಾಬಲ ಹೀಗಿದೆ.
    * ಒಟ್ಟು ಕ್ಷೇತ್ರ – 235
    * ಸರಳ ಬಹುಮತ – 118
    * ಎಐಎಡಿಂಕೆ – 134
    * ಡಿಎಂಕೆ – 89
    * ಕಾಂಗ್ರೆಸ್ – 8
    * ಐಯುಎಂಎಲ್ – 1
    * ಖಾಲಿ – 1 (ಜಯಲಲಿತಾ ಸಾವಿನಿಂದ ಆರ್.ಕೆ. ನಗರ ಖಾಲಿ ಇದೆ)

    ಈಗ ಒಂದು ವೇಳೆ ಶಶಿಕಲಾ ವಿರುದ್ಧ ಪನ್ನೀರ್ ಸೆಲ್ವಂ ಸರ್ಕಾರ ರಚಿಸ್ತಾರೆ ಎಂದಾದರೆ ಪನ್ನೀರ್ ಸೆಲ್ವಂಗೆ ಅಣ್ಣಾಡಿಎಂಕೆಯಿಂದ 2/3 ಮೆಜಾರಿಟಿ ಅಂದ್ರೆ ಕನಿಷ್ಟ 90 ಶಾಸಕರ ಬೆಂಬಲದೊಂದಿಗೆ ಹೊರ ಹೋದರೆ ಪಕ್ಷಾಂತರ ಕಾಯ್ದೆ ಅನ್ವಯ ಆಗಲ್ಲ. ಅಷ್ಟು ಎಂಎಲ್‍ಎಗಳು ಸೆಲ್ವಂ ಹಿಂದೆ ಹೋಗ್ತಾರಾ? ಆದ್ರೆ ಪನ್ನೀರ್ ಸೆಲ್ವಂ ಜನನಾಯಕರಲ್ಲವಾದ್ದರಿಂದ ಅಷ್ಟೂ ಎಂಎಲ್‍ಎಗಳ ಬೆಂಬಲ ಸಿಗುವುದಲ್ಲ ಅಂತ ಹೇಳಲಾಗಿದೆ. ಆದರೂ, ಪನ್ನೀರ್ ಸೆಲ್ವಂಗೆ ಡಿಎಂಕೆ ಬಾಹ್ಯ ಬೆಂಬಲ ನೀಡೋದಾಗಿ ಘೋಷಿಸಿದೆ. ಒಂದೊಮ್ಮೆ 8 ಸೀಟ್ ಹೊಂದಿರೋ ಕಾಂಗ್ರೆಸ್ ಸಹ ಸಪೋರ್ಟ್ ಕೊಟ್ರೆ ಸೆಲ್ವಂ ಹಾಗೂ ಶಶಿಕಲಾ ನಡುವಿನ ನಂಬರ್ ಗೇಮ್ ಹೀಗಿರಲಿದೆ:
    * 90 ಶಾಸಕರ ಬೆಂಬಲ ಇದ್ದರೆ ಸೆಲ್ವಂ ಬಚಾವ್
    * ಸದ್ಯ ಸೆಲ್ವಂಗೆ 50 ಶಾಸಕರ ಬೆಂಬಲ..?
    * ಶಶಿಕಲಾ ನಟರಾಜನ್‍ಗೆ 84 (ಆದ್ರೆ ನೂರಕ್ಕೂ ಅಧಿಕ ಶಾಸಕರು ಮಧ್ಯರಾತ್ರಿ ಶಶಿಕಲಾ ಸಭೆಯಲ್ಲಿದ್ದರು)
    * ಸೆಲ್ವಂ+ಡಿಎಂಕೆ+ಕಾಂಗ್ರೆಸ್ – 147

    ಇತ್ತ ಸೆಲ್ವಂ, ಶಶಿಕಲಾ ಮಧ್ಯೆ ರಾಜಕೀಯ ಘರ್ಷಣೆ ನಡೀತಿದ್ರೆ. ಅತ್ತ ಶಶಿಕಲಾ ವಿರುದ್ಧವಾಗಿ ಅಖಾಡಕ್ಕೆ ಇಳಿಯೋಕೆ ಜಯಾ ಸೊಸೆ ದೀಪಾ ಸಜ್ಜಾಗ್ತಿದ್ದಾರೆ.