Tag: ಪದ್ಮಾವತ್

  • ಮಹಿಳಾ ಪ್ರಧಾನ ‘ಪದ್ಮಾವತಿ’ ಚಿತ್ರದ ಹಾಡು ರಿಲೀಸ್ ಮಾಡಿದ ಲಹರಿ ವೇಲು

    ಮಹಿಳಾ ಪ್ರಧಾನ ‘ಪದ್ಮಾವತಿ’ ಚಿತ್ರದ ಹಾಡು ರಿಲೀಸ್ ಮಾಡಿದ ಲಹರಿ ವೇಲು

    ಲೆ ಬಾಚ್ಕೋಳ್ಳಿ ಪೌಡ್ರು ಹಾಕ್ಕೋಳ್ಳಿ  ಚಿತ್ರದಲ್ಲಿ ನಟಿಸಿ ನಿರ್ಮಾಣ ಮಾಡಿದ್ದ ವಿಕ್ರಂ ಆರ್ಯ ಗ್ಯಾಪ್ ನಂತರ ಮಿಲಿಟರಿ ಅಧಿಕಾರಿಯಾಗಿ ನಾಯಕ ಮತ್ತು ನಾಮದೇವಭಟ್ಟರ್ ಹೆಸರಿನಲ್ಲಿ ನಿರ್ಮಾಪಕರಾಗಿ ಅಭಿನಯಿಸಿರುವ ’ಪದ್ಮಾವತಿ’ ಚಿತ್ರದ ಧ್ವನಿಸಾಂದ್ರಿಕೆಯನ್ನು ಲಹರಿವೇಲು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಮತ್ತೊಂದು ಮುಖ್ಯ ಪಾತ್ರದಲ್ಲಿ ದಾಮೋದರ್‌ಪಾರಗೆ ಅಭಿನಯ ಹಾಗೂ ನಿರ್ಮಾಣದಲ್ಲಿ ಪಾಲುದಾರರು. ಹಿರಿಯ ನಿರ್ದೇಶಕರುಗಳ ಗರಡಿಯಲ್ಲಿ ಪಳಗಿರುವ ಮಿಥುನ್‌ ಚಂದ್ರಶೇಖರ್ ಚಿತ್ರಕತೆ, ಸಂಭಾಷಣೆ ಬರೆದು ಮೊದಲಬಾರಿ ನಿರ್ದೇಶನ ಮಾಡಿದ್ದಾರೆ.

    ತಪ್ಪೇ ಮಾಡಬೇಡಿ, ಮಾಡುವ ತಪ್ಪನ್ನು ತಪ್ಪು ತಪ್ಪಾಗಿ ಮಾಡಬೇಡಿ, ತಪ್ಪು ಮಾಡಿದ ಮೇಲೆ ತಪ್ಪದೆ ತಪ್ಪಾಯಿತು ಎಂದು ಒಪ್ಪಿಕೊಳ್ಳಿ. ಎಲ್ಲೋ ಒಂದು ಕಡೆ ತಿಳಿಯದೆ ಇರೋ ವಯಸ್ಸಿನಲ್ಲಿ ತಪ್ಪುಗಳನ್ನು ಮಾಡುವುದು ಸಹಜ. ಅದನ್ನು ಹಲವಾರು ವರ್ಷಗಳ ನಂತರ ಹೆಣ್ಣು ಸರಿಪಡಿಸಿಕೊಳ್ಳುವ ದಾರಿಯಲ್ಲಿ ತನ್ನ ಹಳೆಯ ನೆನಪುಗಳನ್ನು ಕೆದಕಿಕೊಂಡು ಹೋಗುತ್ತಾಳೆ. ಅಲ್ಲಿಂದ ಅವಳ ಹಾದಿ ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುದನ್ನು ಹೇಳಲಾಗಿದೆ. ಜೊತೆಗೆ ತಾಯಿ ಮಗನ ಸೆಂಟಿಮೆಂಟ್ ಅಂಶಗಳು ಇರಲಿದೆ. ಶಿವಳ್ಳಿಬೆಟ್ಟ, ಸಾಗರ, ಹೊಸನಗರ,ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ಕಡೆಗಳಲ್ಲಿ 51 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.  ಇದನ್ನೂ ಓದಿ:ಪಿಂಕ್ ಕಲರ್ ಸೀರೆಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ

    ಯುವತಿ, ಮಧ್ಯವಯಸ್ಸಿನ ಮಹಿಳೆ ಮತ್ತು 46 ವರ್ಷದವಳಾಗಿ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿರುವ ನಾಯಕಿ ಸಾಕ್ಷಿಮೇಘನಾ ಈಗ ಮೇಘನಾರಾಮ್ ಅಂತ ನಾಮಕರಣ ಮಾಡಿಕೊಂಡಿದ್ದಾರೆ. ಉಳಿದಂತೆ ಸುರೇಶ್‌ಸ್ವಾಮಿರಾವ್, ಕವಿತಪ್ರಿಯಾ, ರಾಘವಕುಮಾರ್,  ಅಭಿಲಾಶ್.ಬಿ.ಹೊಸನಗರ, ಶಿವಮೊಗ್ಗ ರಾಮಣ್ಣ, ಅರ್ಚನಾಶೆಟ್ಟಿ,ರಾಜೇಶ್ವರಿಪಾಂಡೆ, ಶರಣ್‌ಗಿನಕೇರಿ  ಮುಂತಾದವರ ತಾರಗಣವಿದೆ. ಪುಟ್ಟರಾಜಗವಾಯಿ ಆಶ್ರಮದ ವಿದ್ಯಾರ್ಥಿಯಾಗಿದ್ದ ಶರಣ್‌ಕುಮಾರ್ ಗಜೇಂದ್ರಗಡ ನಾಲ್ಕು ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಜ್ಯೂ.ಎಸ್.ಜಾನಕಿ ಎಂದೇ ಖ್ಯಾತರಾಗಿರುವ ಕೊಪ್ಪಳದ ಗಂಗಮ್ಮ ಒಂದು ಗೀತೆಗೆ ಧ್ವನಿಯಾಗಿದ್ದಾರೆ. ಸಂಗೀತ ದಿನೇಶ್‌ಕುಮಾರ್, ಛಾಯಾಗ್ರಹಣ ಕೆ.ಎಂ.ಶೋಯಿಬ್‌ಅಹ್ಮದ್, ಕತೆ ಲತಾ.ಎಸ್, ಸಂಕಲನ ಈಶ್ವರ್, ಸಾಹಸ ಥ್ರಿಲ್ಲರ್‌ಮಂಜು, ನೃತ್ಯ  ಸಂಯೋಜಿಸಿರುವ ತ್ರಿಭುವನ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

    Live Tv

  • ಆಸ್ಕರ್ ರೇಸ್‍ಗೆ ಎಂಟ್ರಿ ಕೊಟ್ಟ ಗಲ್ಲಿಬಾಯ್!

    ಆಸ್ಕರ್ ರೇಸ್‍ಗೆ ಎಂಟ್ರಿ ಕೊಟ್ಟ ಗಲ್ಲಿಬಾಯ್!

    ಬೆಂಗಳೂರು: ಪದ್ಮಾವತ್ ಖ್ಯಾತಿಯ ನಟ ರಣ್‌ವೀರ್ ಸಿಂಗ್ ಮತ್ತು ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಚಿತ್ರ ಗಲ್ಲಿ ಬಾಯ್. ಇದೇ ಫೆಬ್ರವರಿ ಹದಿನಾಲಕ್ಕರಂದು ಭಾರತದಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ತಳಮಟ್ಟದಿಂದ ಮೇಲೆದ್ದು ಬಂದು ರಾಪ್ ಸಿಂಗಿಂಗ್‍ನಲ್ಲಿ ಸ್ಟಾರ್ ಆದ ಹುಡುಗನೊಬ್ಬನ ಮನಮಿಡಿಯುವ ಕಥೆಯೊಂದಿಗೆ ದೊಡ್ಡ ಮಟ್ಟದಲ್ಲಿಯೇ ಸಂಚಲನ ಸೃಷ್ಟಿಸಿತ್ತು. ಧಾರಾವಿಯ ಸ್ಲಂ ಪ್ರದೇಶದಿಂದ ಹುಟ್ಟಿಕೊಂಡಿದ್ದ ಈ ಕಥೆಯ ಆಳ, ವಿಸ್ತಾರ ಕಂಡು ಕೇವಲ ಭಾರತೀಯ ಸಿನಿಮಾ ಪ್ರೇಮಿಗಳು ಮಾತ್ರವಲ್ಲದೇ ವಿಶ್ವಾದ್ಯಂತ ಸಿನಿಮಾಸಕ್ತರು ಬೆರಗಾಗಿದ್ದರು. ಇಂಥಾ ಅಪರೂಪದ ಕಥೆಯ ಚಿತ್ರಕ್ಕೀಗ ಸರಿಯಾದ ಸಮ್ಮಾನ ಸಿಗುವ ಕ್ಷಣಗಳು ಹತ್ತಿರಾಗಿವೆ. ಈ ಚಿತ್ರ 2020ರ ಸಾಲಿನ ಆಸ್ಕರ್ ಪ್ರಶಸ್ತಿ ರೇಸಿಗೆ ಎಂಟ್ರಿ ಕೊಟ್ಟಿದೆ.

    ಈಗಾಗಲೇ ಭಾರತದಿಂದ ಆಸ್ಕರ್ ಪ್ರಶಸ್ತಿಗಾಗಿ ಕಳುಹಿಸಲಾಗೋ ಚಿತ್ರಗಳ ಪಟ್ಟಿ ಅಂತಿಮ ಹಂತ ತಲುಪಿಕೊಂಡಿದೆ. ಭಾರತದ ಬೇರೆ ಬೇರೆ ಭಾಷೆಗಳ ಹಲವಾರು ಚಿತ್ರಗಳು ಈ ಲಿಸ್ಟಿಗೆ ಸೇರಿಕೊಳ್ಳುವ ಸ್ಪರ್ಧೆಯಲ್ಲಿದ್ದವು. ಅದರಲ್ಲಿಯೂ ಹಿಂದಿಯಲ್ಲಿ ಮಾತ್ರ ಈ ಸಾಲಿನಲ್ಲಿ ಹೆಚ್ಚು ಚಿತ್ರಗಳಿದ್ದವು. ಅದರಲ್ಲಿ ಕಡೆಗೂ ಗಲ್ಲಿ ಬಾಯ್, ಉರಿ, ಬದ್ಲಾ, ಆರ್ಟಿಕಲ್ 15 ಮುಂತಾದ ಚಿತ್ರಗಳು ಸ್ಥಾನ ಗಿಟ್ಟಿಸಿಕೊಂಡಿವೆ. ಈ ಎಲ್ಲ ಚಿತ್ರಗಳೂ ಕೂಡಾ ವಿಭಿನ್ನ ಕಥಾನಕದ ಮೂಲಕ ವಿಶ್ವಾದ್ಯಂತ ಗಮನ ಸೆಳೆದಂಥವುಗಳೇ. ಆದರೆ ಗಲ್ಲಿಬಾಯ್ ಚಿತ್ರದ ಕಥೆ, ಅದರ ಪ್ರಧಾನ ಪಾತ್ರಕ್ಕಾಗಿ ರಣ್‍ವೀರ್ ಸಿಂಗ್ ತಯಾರಾಗಿದ್ದ ರೀತಿ ಮಾತ್ರ ಸಲೀಸಾಗಿ ಯಾರೂ ಬೀಟ್ ಮಾಡಲು ಸಾಧ್ಯವಾಗದಿರುವಂಥಾದ್ದು.

    ಧಾರಾವಿಯ ಸ್ಲಂ ಪ್ರದೇಶವೊಂದರಿಂದ ಹೆತ್ತವರ ಆಸೆ ಆಕಾಂಕ್ಷೆಗಳನ್ನೆಲ್ಲ ಮೀರಿಕೊಂಡು ರಾಪ್ ಲೋಕದ ಕನಸು ಕಟ್ಟಿಕೊಂಡು ಹೊರಡೋ ಹುಡುಗನೊಬ್ಬನ ಕಥೆ ಗಲ್ಲಿ ಬಾಯ್ ಚಿತ್ರದ್ದು. ಇಲ್ಲಿ ರಣ್‍ವೀರ್ ಸಿಂಗ್ ಗಲ್ಲಿ ಬಾಯ್ ಆಗಿ ನಟಿಸಿದರೆ, ಆಲಿಯಾ ಭಟ್ ವೈದ್ಯಕೀಯ ವಿದ್ಯಾರ್ಥಿನಿಯಾಗಿ ಎಲ್ಲರನ್ನೂ ಕಾಡುವ ಪಾತ್ರಕ್ಕೆ ಜೀವ ತುಂಬಿದ್ದಾರೆ. ಜೋಯಲ್ ಅಖ್ತರ್ ಅದೆಷ್ಟೋ ವರ್ಷಗಳ ಹಿಂದೆ ಈ ಕಥಾ ಎಳೆಯನ್ನು ಎದೆಗಿಳಿಸಿಕೊಂಡು, ಧಾರಾವಿ ಸ್ಲಂ ಪ್ರದೇಶದ ಪ್ರತಿಭಾವಂತರ ಯಶೋಗಾಥೆಗಳನ್ನು ಕಾಡಿಸಿಕೊಂಡು ಈ ಕಥೆ ಹೊಸೆದಿದ್ದಾರೆ. ಅದನ್ನು ಸಮರ್ಥವಾಗಿಯೇ ನಿರ್ದೇಶನ ಮಾಡಿದ್ದಾರೆ. ರಿತೇಶ್ ನಿಧ್ವಾನಿ ಮತ್ತು ಫರ್ಹಾ ಅಖ್ತರ್ ಗಲ್ಲಿ ಬಾಯ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

    ಈ ಚಿತ್ರದಲ್ಲಿ ರಣ್‍ವೀರ್ ಸಿಂಗ್ ಗಲ್ಲಿ ಬಾಯ್ ಅವತಾರದಲ್ಲಿ ನಟಿಸಿರೋ ಬಗೆ, ಅದಕ್ಕಾಗಿ ಅವರು ಮಾಡಿಕೊಂಡಿರೋ ದೈಹಿಕ ರೂಪಾಂತರಗಳನ್ನು ಕಂಡು ಭಾರತೀಯ ಚಿತ್ರಪ್ರೇಮಿಗಳೆಲ್ಲ ನಿಬ್ಬೆರಗಾಗಿದ್ದರು. ಅದಾಗ ತಾನೇ ಪದ್ಮಾವತ್ ಚಿತ್ರಕ್ಕೆ ಕಟ್ಟುಮಸ್ತಾಗಿ ದೇಹವನ್ನು ಹುರಿಗೊಳಿಸಿಕೊಂಡಿದ್ದ ರಣ್‌ವೀರ್, ಅದಾಗಿ ತಿಂಗಳು ಕಳೆಯೋದರೊಳಗೆ ಪೀಚು ಪೀಚಾದ ಹುಡುಗನಂತಾಗಿ ದೇಹ ದಂಡಿಸಿಕೊಂಡಿದ್ದರು. ಇದೊಂದು ಸ್ಯಾಂಪಲ್ ಅಷ್ಟೇ. ಈ ಚಿತ್ರದ ಹಿಂದೆ ಇಂಥಾ ಅಗಾಧ ಪರಿಶ್ರಮಗಳಿವೆ. ಇದು ಮೂಡಿ ಬಂದಿರೋ ರೀತಿಯೇ ಆಸ್ಕರ್ ಗರಿ ಮತ್ತೆ ಭಾರತಕ್ಕೆ ದಕ್ಕುವ ಭರವಸೆಯನ್ನು ಗಟ್ಟಿಗೊಳಿಸಿದೆ.

  • ಶಾಹಿದ್ ಕಪೂರ್ ರನ್ನು ಮನೆಯಿಂದ ಹೊರಗೆ ಹಾಕಿದ್ದೆ ಎಂದ ಪತ್ನಿ ಮೀರಾ!

    ಶಾಹಿದ್ ಕಪೂರ್ ರನ್ನು ಮನೆಯಿಂದ ಹೊರಗೆ ಹಾಕಿದ್ದೆ ಎಂದ ಪತ್ನಿ ಮೀರಾ!

    ಮುಂಬೈ: ನನ್ನ ಪತಿ ಶಾಹಿದ್ ಕಪೂರ್ ರನ್ನು ಮನೆಯಿಂದ ಹೊರಹಾಕಿದ್ದೆ ಎಂದು ಪತ್ನಿ ಮೀರಾ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.

    ಇತ್ತೀಚಿಗೆ ನಟ ಶಾಹಿದ್ ಕಪೂರ್ ಹಾಗೂ ಪತ್ನಿ ಮೀರಾ, ನೇಹಾ ದುಪಿಯಾ ನಡೆಸಿಕೊಡುವ ಬಿಎಫ್‍ಎಫ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಮೀರಾ ಈ ಹಿಂದೆ ಶಾಹಿದ್ ರನ್ನು ಮನೆಯಿಂದ ಹೊರಹಾಕಿದ್ದೆ ಎಂದು ತಿಳಿಸಿದರು.

    ಶಾಹಿದ್ ಪದ್ಮಾವತ್ ಚಿತ್ರದ ಶೂಟಿಂಗ್ ಮುಗಿಸಿ ಬಂದಿದ್ದಾಗ ಅವರನ್ನು ಮನೆಯಿಂದ ಹೊರಹಾಕಿದ್ದೆ. ಅವರು ಬೆಳಗ್ಗೆ 8 ಗಂಟೆಗೆ ಶೂಟಿಂಗ್ ಮುಗಿಸಿಕೊಂಡು ಬಂದು ಮಧ್ಯಾಹ್ನ 2 ಗಂಟೆಗೆ ಏಳುತ್ತಿದ್ದರು. ಇಡೀ ರಾತ್ರಿ ಸಿನಿಮಾ ಶೂಟಿಂಗ್‍ನಲ್ಲಿ ತೊಡಗಿ ಮನೆಗೆ ಬಂದು ಮಲಗುವ ಸಮಯದಲ್ಲಿ ಅವರಿಗೆ ಯಾವುದೇ ರೀತಿ ತೊಂದರೆ ಆಗಬಾರದೆಂಬುದು ನನಗೆ ತಿಳಿದಿತ್ತು. ಆದರೆ ಅದೇ ಸಮಯದಲ್ಲಿ ನನ್ನ ಮಗಳು ಮಿಷಾ ಕೂಡ ಆಟವಾಡುತ್ತಿದ್ದಳು. ಮಿಷಾಳ ಗಲಾಟೆ ಕೇಳಿ ಶಾಹಿದ್ ಈ ಬಗ್ಗೆ ಎನ್ನನ್ನೂ ಮಾತನಾಡಲಿಲ್ಲ. ಆದರೆ ಅವರಿಗೆ ಡಿಸ್ಟರ್ಬ್ ಆಗುತ್ತಿತ್ತು ಎಂಬುದು ನನಗೆ ತಿಳಿಯಿತು. ಇದೇ ವೇಳೆ ನಾನು ಮಿಷಾಗೆ ಸುಮ್ಮನಿರಲು ಹೇಳಲು ಸಾಧ್ಯವಿಲ್ಲ. ಇದರಿಂದಾಗಿ ನಾನು ಶಾಹಿದ್‍ರನ್ನು ಮನೆಯಿಂದ ಹೊರಗೆ ಕಳುಹಿಸಿ ಹೊಟೇಲ್‍ನಲ್ಲಿ ತಂಗಲು ಹೇಳಿದ್ದೆ ಎಂದು ಮೀರಾ ಹೇಳಿದರು.

    ಆಗ ಶಾಹಿದ್ ಕಪೂರ್ ತನ್ನ ಜುಹು ಮನೆಯನ್ನು ಬಿಟ್ಟು, ಸಿನಿಮಾ ಸೆಟ್‍ಗೆ ಹತ್ತಿರವಿದ್ದ ಗುರ್ ಗಾಂವ್‍ನ ಸ್ಟಾರ್ ಹೊಟೇಲಿನಲ್ಲಿ ತಂಗಿದ್ದರು ಎಂದು ಮೀರಾ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

    ಸದ್ಯ ಶಾಹಿದ್ ಕಪೂರ್ ‘ಬತ್ತಿ ಗುಲ್ ಮೀಟರ್ ಚಾಲೂ’ ಚಿತ್ರದ ಶೂಟಿಂಗ್‍ನಲ್ಲಿ ಬ್ಯೂಸಿಯಾಗಿದ್ದಾರೆ. ಚಿತ್ರದಲ್ಲಿ ಶ್ರದ್ಧಾ ಕಪೂರ್ ಹಾಗೂ ಯಾಮಿ ಗೌತಮ್ ನಾಯಕಿಯರಾಗಿ ನಟಿಸುತ್ತಿದ್ದಾರೆ.

  • ಅಂದು ದೀಪಿಕಾಗೆ ಬೆದರಿಕೆಗಳು ಬಂದಾಗ ಪ್ರತಿಕ್ರಿಯೆ ಯಾಕೆ ನೀಡಿಲ್ಲ ಎಂಬ ಪ್ರಶ್ನೆಗೆ ರಣ್‍ವೀರ್ ಉತ್ತರ ಹೀಗಿತ್ತು

    ಅಂದು ದೀಪಿಕಾಗೆ ಬೆದರಿಕೆಗಳು ಬಂದಾಗ ಪ್ರತಿಕ್ರಿಯೆ ಯಾಕೆ ನೀಡಿಲ್ಲ ಎಂಬ ಪ್ರಶ್ನೆಗೆ ರಣ್‍ವೀರ್ ಉತ್ತರ ಹೀಗಿತ್ತು

    ಮುಂಬೈ: ಬಾಲಿವುಡ್‍ನ ಪದ್ಮಾವತ್ ಸಿನಿಮಾ ಎಲ್ಲ ವಿವಾದಗಳಿಂದಲೂ ಮುಕ್ತಿ ಪಡೆದು ಎಲ್ಲ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಅಭೂತಪೂರ್ವ ಯಶಸ್ಸನ್ನು ಪಡೆದುಕೊಂಡಿದೆ. ಸಿನಿಮಾದ ಬಿಡುಗಡೆಗೂ ಮುನ್ನ ಚಿತ್ರದ ನಟಿ ದೀಪಿಕಾ ಪಡುಕೋಣೆ ಅವರಿಗೆ ಹಲವು ಬೆದರಿಕೆ ಕರೆಗಳು ಬಂದಿದ್ದವು. ಆದ್ರೆ ರಣ್‍ವೀರ್ ಸಿಂಗ್ ಸೇರಿದಂತೆ ಚಿತ್ರತಂಡ ಯಾವುದೇ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಈಗ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ರಣ್‍ವೀರ್ ಅಂದಿನ ಮೌನಕ್ಕೆ ಉತ್ತರ ನೀಡಿದ್ದಾರೆ.

    ಚಿತ್ರ ರಿಲೀಸ್ ಮುನ್ನ ಕರ್ಣಿ ಸೇನಾ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಸೆನ್ಸಾರ್ ಮಂಡಳಿಯ ನಿರ್ದೇಶನದ ಮೇರೆಗೆ ಚಿತ್ರದಲ್ಲಿ ಹಲವು ಬದಲಾವಣೆ ಮತ್ತು ಕೆಲ ದೃಶ್ಯಗಳಿಗೆ ಕತ್ತರಿ ಹಾಕಿ ಬಿಡುಗಡೆ ಮಾಡಲಾಯಿತು. ಈ ಎಲ್ಲಾ ವಿವಾದಗಳ ನಡುವೆ ನಟಿ ದೀಪಿಕಾ ಪಡುಕೋಣೆಗೆ ಮೂಗು ಕತ್ತರಿಸಿ, ಶಿರಚ್ಛೇದಿಸುವುದಾಗಿ ಬೆದರಿಕೆ ಹಾಕಿದ್ದರು. ದೀಪಿಕಾ ಅವರ ಈ ಬೆದರಿಕೆಯ ವಿಚಾರವಾಗಿ ರಣ್‍ವೀರ್ ಸಿಂಗ್ ಯಾವುದೇ ಹೇಳಿಕೆ ನೀಡದಿರುವುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿತ್ತು.

    ಮೌನ ಮುರಿದ ರಣ್‍ವೀರ್: ಸಿನಿಮಾ ಬಿಡುಗಡೆ ವೇಳೆ ದೀಪಿಕಾಗೆ ಬೆದರಿಕೆಗಳು ಬಂದಾಗ ಸಹಜವಾಗಿಯೇ ಕೋಪ ಬಂದಿತ್ತು. ಆದ್ರೆ ನಾನು ನಿರ್ಮಾಪಕರು ಹಾಗೂ ನಿರ್ದೇಶಕರು ನೀಡಿದ ಕಟ್ಟುನಿಟ್ಟಾದ ಸೂಚನೆಯನ್ನು ನಾನು ಮೀರುವಂತಿರಲಿಲ್ಲ. ಇಂತಹ ಸಮಯದಲ್ಲಿ ಜನರು ತಿಳಿದು ಅಥವಾ ತಿಳಿಯದೆನೋ ವಿವಾದಗಳನ್ನು ಸೃಷ್ಟಿ ಮಾಡಿರುತ್ತಾರೆ. ಒಂದು ವೇಳೆ ನಾನು ಯಾವುದೇ ರೀತಿಯಲ್ಲಿ ಅದಕ್ಕೆ ಪ್ರತಿಕ್ರಿಯಿಸಿದರೆ ಅದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗುತಿತ್ತು. ಈ ಕಾರಣಕ್ಕಾಗಿ ಯಾವುದೇ ಹೇಳಿಕೆಯನ್ನು ನೀಡಲಿಲ್ಲ ಎಂದು ತಿಳಿಸಿದರು

    ಈ ಸಿನಿಮಾದ ವಿವಾದ ನಿರ್ಮಾಪಕರು ಹಾಗೂ ನಿರ್ದೇಶಕರ ಜೀವನವನ್ನು ನಿರ್ಧಾರ ಮಾಡುವಂತದಾಗಿತ್ತು. ನನ್ನ ನಿಲುವು ಮತ್ತು ಪ್ರತಿಕ್ರಿಯೆ ಅವರಿಗೆ ಯಾವುದೇ ಹಾನಿಯನ್ನುಂಟು ಮಾಡಬಾರದೆಂದು ನಾನು ಸುಮ್ಮನಿದ್ದೆ. ಅವರು ಕೊಟ್ಟ ಆದೇಶದಂತೆ ನಾನು ನಡೆದುಕೊಂಡಿದ್ದೇನೆ ಎಂದು ತಿಳಿಸಿದರು.

    ನಟಿ ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯ ಶಿರಚ್ಛೇದ ಮಾಡಿದವರಿಗೆ 10 ಕೋಟಿ ರೂ. ಬಹುಮಾನ ನೀಡುತ್ತೇವೆ ಎಂದು ಹರಿಯಾಣದ ಬಿಜೆಪಿ ಮಾಧ್ಯಮ ಘಟಕದ ಮುಖ್ಯಸ್ಥ ಸೂರಜ್ ಪಾಲ್ ಅಮು ಹೇಳಿದ್ದರು.

  • ಪದ್ಮಾವತ್ ಚಿತ್ರದ ನಂತರ ‘ಮಣಿಕರ್ಣಿಕಾ’ ಸಿನಿಮಾ ಶೂಟಿಂಗ್‍ಗೆ ವಿರೋಧ

    ಪದ್ಮಾವತ್ ಚಿತ್ರದ ನಂತರ ‘ಮಣಿಕರ್ಣಿಕಾ’ ಸಿನಿಮಾ ಶೂಟಿಂಗ್‍ಗೆ ವಿರೋಧ

    ಜೈಪುರ್: ಪದ್ಮಾವತ್ ಚಿತ್ರದ ಬಳಿಕ ಇದೀಗ ಕಂಗನಾ ಅಭಿನಯದ ‘ಮಣಿಕರ್ಣಿಕಾ- ದಿ ಕ್ವೀನ್ ಆಫ್ ಝಾನ್ಸಿ’ ಸಿನಿಮಾಗೆ ವಿರೋಧ ವ್ಯಕ್ತವಾಗಿದೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜೀವನ ಆಧಾರಿತ ಚಿತ್ರ ಇದಾಗಿದ್ದು, ಚಿತ್ರದಲ್ಲಿ ಇತಿಹಾಸ ತಿರುಚಲಾಗ್ತಿದೆ ಎಂದು ರಾಜಸ್ಥಾನದ ಬ್ರಾಹ್ಮಣ ಮಹಾಸಭಾ ಆರೋಪಿಸಿದೆ.

    ಪದ್ಮಾವತ್ ಚಿತ್ರ ತೀವ್ರ ವಿರೋಧದ ನಂತರ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಆದರೆ ಈಗ ಕಂಗನಾ ರಣಾವತ್ ನಟನೆಯ ಮಣಿಕರ್ಣಿಕಾ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದೆ. ಬ್ರಾಹ್ಮಣ ಮಹಾಸಭೆ ಅಧ್ಯಕ್ಷ ಪಂಡಿತ್ ಸುರೇಶ್ ಮಿಶ್ರಾ ಸುದ್ದಿಗೋಷ್ಠಿ ನಡೆಸಿ ಈ ಚಿತ್ರದ ಚಿತ್ರೀಕರಣ ಶೀಘ್ರವೇ ನಿಲ್ಲಿಸಬೇಕು ಎಂದು ರಾಜಸ್ಥಾನ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ಚಿತ್ರದಲ್ಲಿ ಇತಿಹಾಸ ತಿರುಚಲಾಗುತ್ತಿದೆ. ಚಿತ್ರತಂಡ ಈ ಚಿತ್ರದಲ್ಲಿ ಇತಿಹಾಸ ತಿರುಚಿಲ್ಲ ಎಂದು ಹೇಳಿದ ಮೇಲೆ ಈ ಚಿತ್ರದ ಚಿತ್ರೀಕರಣಕ್ಕೆ ಅನುಮತಿ ನೀಡಬೇಕು. ಸರ್ಕಾರ ಮೂರು ದಿನಗಳ ಒಳಗಡೆ ನಮ್ಮ ಮನವಿ ಒಪ್ಪಿಕೊಳ್ಳಲಿಲ್ಲ ಎಂದರೆ ಪ್ರತಿಭಟನೆ ಮಾಡುತ್ತೇವೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜಸ್ಥಾನದ ರಾಜ್ಯಪಾಲ ಕಲ್ಯಾಣ್ ಸಿಂಗ್ ಹಾಗೂ ಗೃಹ ಮಂತ್ರಿ ಗೂಲಾಬ್ ಚಂದ್ ಕಟಾರಿಯಾ ಭೇಟಿ ಮಾಡಿ ಅವರು ಮಧ್ಯಸ್ಥಿಕೆ ವಹಿಸಿಕೊಳ್ಳಲು ಕೇಳಿಕೊಳ್ಳುತ್ತೇನೆ ಎಂದು ಸುರೇಶ್ ಮಿಶ್ರಾ ರಾಜಸ್ಥಾನ ಸರ್ಕಾರದಲ್ಲಿ ಕೇಳಿಕೊಂಡಿದ್ದಾರೆ.

    ಏನಿದು ಆರೋಪ?: ಚಿತ್ರದಲ್ಲಿ ಲಕ್ಷ್ಮೀಬಾಯಿ ಬ್ರಿಟಿಷ್ ಇಂಡಿಯಾ ಕಂಪೆನಿಯ ಅಧಿಕಾರಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು ಎಂದು ತೋರಿಸಲಾಗುತ್ತಿದೆ. ಜಯಶ್ರೀ ಮಿಶ್ರಾ ರಾಣಿ ಲಕ್ಷ್ಮೀಬಾಯಿ ಬಗ್ಗೆ ಬರೆದಿರುವ ವಿವಾದಾತ್ಮಕ ಪುಸ್ತಕದಿಂದ ಪ್ರೇರಣೆಯಾಗಿ ಸಿನಿಮಾ ತಯಾರಾಗುತ್ತಿದ್ದು, ಚಿತ್ರದ ನಿರ್ಮಾಪಕರಾದ ಕಮಲ್ ಜೈನ್ ಅವರಿಗೆ ಪತ್ರ ಬರೆದು ಚಿತ್ರಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳನ್ನು ಕೇಳಿದ್ದೇನೆ. ಈ ಚಿತ್ರ ಪದ್ಮಾವತ್ ಚಿತ್ರದ ರೀತಿ ದೊಡ್ಡ ಸಮಸ್ಯೆ ಆಗಬಾರದೆಂದು ಸರ್ಕಾರ ಮಧ್ಯಸ್ಥಿಕೆ ವಹಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಸುರೇಶ್ ಮಿಶ್ರಾ ತಿಳಿಸಿದ್ದಾರೆ.

    ಸದ್ಯ ‘ಮಣಿಕರ್ಣಿಕಾ- ದಿ ಕ್ವೀನ್ ಆಫ್ ಝಾನ್ಸಿ’ ಚಿತ್ರದ ಚಿತ್ರೀಕರಣ ರಾಜಸ್ಥಾನದ ಕೆಲವು ಪ್ರದೇಶಗಳಲ್ಲಿ ಚಿತ್ರಿಕರಣವಾಗುತ್ತಿದ್ದು, ಕಳೆದ ವರ್ಷ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಿಂದ ರಾಜಸ್ಥಾನದ ಜುನ್‍ಜುನ್ ಹಾಗೂ ಜೈಪುರ್ ನಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಕಂಗನಾ ರಣಾವತ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಒಟ್ಟು 125 ಕೋಟಿ ರೂ. ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಈ ವರ್ಷದಲ್ಲೇ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ.

    ಈ ಹಿಂದೆ ಪದ್ಮಾವತ್ ಚಿತ್ರದಲ್ಲಿ ರಾಜಪೂತ ರಾಣಿ ಪದ್ಮಾವತಿ ಹಾಗೂ ಅಲ್ಲಾವುದ್ದೀನ್ ಖಿಲ್ಜಿ ನಡುವಿನ ಪ್ರೇಮ ಪ್ರಸಂಗವಿದೆ ಹಾಗೂ ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿ ಚಿತ್ರದ ಬಿಡುಗಡೆಗೆ ದೇಶ್ಯಾದ್ಯಂತ ಕರ್ಣಿಸೇನಾ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಡಿಸೆಂಬರ್ 28ರಂದು ಸೆನ್ಸಾರ್ ಬೋರ್ಡ್ ಚಿತ್ರಕ್ಕೆ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವಂತೆ ಸೂಚಿಸಿ ಯು/ಎ ಸರ್ಟಿಫಿಕೇಟ್ ನೀಡಿತ್ತು. ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರು ಟೈಟಲ್ ಸೇರಿದಂತೆ ಕೆಲವು ಬದಲಾವಣೆಗಳಿಗೆ ಒಪ್ಪಿಗೆ ಸೂಚಿಸಿದ ಬಳಿಕವೇ ಬಿಡುಗಡೆಗೆ ಅನುಮತಿ ನೀಡಲಾಗಿತ್ತು.

  • ಪದ್ಮಾವತ್ ವಿರುದ್ಧದ ಪ್ರತಿಭಟನೆಯನ್ನು ಹಿಂಪಡೆದ ಕರ್ಣಿ ಸೇನಾ

    ಪದ್ಮಾವತ್ ವಿರುದ್ಧದ ಪ್ರತಿಭಟನೆಯನ್ನು ಹಿಂಪಡೆದ ಕರ್ಣಿ ಸೇನಾ

    ಮುಂಬೈ: ಪದ್ಮಾವತ್ ಸಿನಿಮಾದ ವಿರುದ್ಧದ ನಮ್ಮ ಪ್ರತಿಭಟನೆಯನ್ನು ಹಿಂಪಡೆಯಲಾಗುತ್ತಿದೆ ಎಂದು ಶ್ರೀ ರಜಪೂತ ಕರ್ಣಿ ಸೇನಾ ತನ್ನ ನಿರ್ಧಾರವನ್ನು ಶುಕ್ರವಾರ ತಿಳಿಸಿದೆ.

    ಮುಂಬೈನ ಶ್ರೀ ರಾಷ್ಟ್ರೀಯ ರಜಪೂತ ಕರ್ಣಿ ಸೇನಾದ ನಾಯಕ ಯೋಗೇಂದ್ರ ಸಿಂಗ್ ಖಟರ್ ಈ ಬಗ್ಗ ನಿರ್ಣಯ ತೆಗೆದುಕೊಂಡಿದ್ದಾರೆ. ಯೋಗೇಂದ್ರ ಸಿಂಗ್ ತಮ್ಮ ನಿರ್ಧಾರವನ್ನು ಶ್ರೀ ರಾಷ್ಟ್ರೀಯ ರಜಪೂತ ಕರ್ಣಿ ಸೇನಾದ ಅಧ್ಯಕ್ಷ ಸುಖ್ ದೇವ್ ಸಿಂಗ್ ಗೋಮಾಡಿ ಅವರಿಗೆ ರವಾನಿಸಿದ್ದಾರೆ. ಶುಕ್ರವಾರದಂದು ಮುಂಬೈನಲ್ಲಿ ಕರ್ಣಿ ಸೇನಾದ ಕೆಲವು ಸದಸ್ಯರು ಪದ್ಮಾವತ್ ಸಿನಿಮಾ ವೀಕ್ಷಣೆ ಮಾಡಿದ್ದು, ಚಿತ್ರದ ವಿವಾದಗಳಿಂದ ಮುಕ್ತವಾಗಿದೆ. ಸಿನಿಮಾ ನೋಡಿದ ಪ್ರತಿಯೊಬ್ಬ ರಜಪೂತ ವ್ಯಕ್ತಿ ಹೆಮ್ಮೆ ಪಡುತ್ತಾರೆ ಎಂದು ಹೇಳಿದ್ದಾರೆ.

    ಚಿತ್ರ ಯಾವುದೇ ಆಕ್ಷೇಪಾರ್ಹ ದೃಶ್ಯಗಳನ್ನು ಹೊಂದಿಲ್ಲ. ದೆಹಲಿ ಸುಲ್ತಾನ್ ಅಲ್ಲಾವುದ್ದೀನ್ ಖಿಲ್ಜಿ ಮತ್ತು ರಾಣಿ ಪದ್ಮಿನಿ ದೃಶ್ಯಗಳು ಎಲ್ಲಿಯೂ ರಜಪೂತ ಸಮುದಾಯದ ಜನರ ಭಾವನೆಗಳಿಗೆ ನೋವುಂಟು ಮಾಡುವುದಿಲ್ಲ. ಪ್ರತಿಭಟನೆಯನ್ನು ಹಿಂಪಡೆದುಕೊಳ್ಳುವ ಪತ್ರವನ್ನು ಈಗಾಗಲೇ ಪ್ರಕಟಿಸಲಾಗಿದೆ. ಈ ಪತ್ರ ರಾಜಸ್ಥಾನ, ಮಧ್ಯ ಪ್ರದೇಶ, ಗುಜರಾತ್, ಹರಿಯಾಣ ಮತ್ತು ದೇಶದ ಚಿತ್ರಮಂದಿರಗಳ ಮಾಲೀಕರಿಗೆ ಸಿನಿಮಾ ರಿಲೀಸ್ ಮಾಡಲು ಒಪ್ಪಿಗೆ ನೀಡಿದಂತಾಗುತ್ತದೆ ಎಂದು ಯೋಗೇಂದ್ರ ಸಿಂಗ್ ತಿಳಿಸಿದ್ದಾರೆ.

    ಕರ್ಣಿ ಸೇನಾ ಈ ಹಿಂದೆ ಸುಪ್ರೀಂ ಕೋರ್ಟ್ ಗೆ ಸಿನಿಮಾವನ್ನು ಬ್ಯಾನ್ ಮಾಡುವಂತೆ ಅರ್ಜಿ ಸಲ್ಲಿಸಿತ್ತು. ಆದ್ರೆ ಸುಪ್ರೀಂ ಕೋರ್ಟ್ ಕರ್ಣಿ ಸೇನಾದ ಅರ್ಜಿಯನ್ನ ರದ್ದುಗೊಳಿಸಿ, ಪದ್ಮಾವತ್ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಕರ್ಣಿ ಸೇನಾ ಮಾತ್ರ ಚಿತ್ರ ಪ್ರದರ್ಶನಗೊಳ್ಳುವ ಥಿಯೇಟರ್ ಗೆ ಬೆಂಕಿ ಹಾಕಲಾಗುವುದು ಎಂದು ಬೆದರಿಕೆ ಹಾಕಿದ್ದರು. ಕರ್ಣಿ ಸೇನಾದ ಬೆದರಿಕೆ ಹೆದರಿದ ಕೆಲವು ಚಿತ್ರಮಂದಿರಗಳ ಮಾಲೀಕರು ‘ಪದ್ಮಾವತ್’ ಪ್ರದರ್ಶನಕ್ಕೆ ಹಿಂದೇಟು ಹಾಕಿದ್ದರು. ಕರ್ಣಿ ಸೇನಾ ಪ್ರತಿಭಟನೆಯನ್ನು ಹಿಂದೆ ಪಡೆದಿರುವದರಿಂದ ಚಿತ್ರಮಂದಿರಗಳ ಮಾಲೀಕರು ನಿರ್ಭಯವಾಗಿ `ಪದ್ಮಾವತ್’ ಸಿನಿಮಾ ರಿಲೀಸ್ ಮಾಡಬಹುದಾಗಿದೆ.

    ಪದ್ಮಾವತ್ ಸಿನಿಮಾ ಜನವರಿ 25ರಂದು ಬಿಡುಗೊಡೆ ಆಗಿದ್ದು, ಈಗಾಗಲೇ 200 ಕೋಟಿ ಅಧಿಕ ಹಣವನ್ನು ತನ್ನ ಗಲ್ಲಾಪೆಟ್ಟಿಗೆಯಲ್ಲಿ ತುಂಬಿಸಿಕೊಂಡಿದೆ. ದೇಶದ ಕೆಲವು ರಾಜ್ಯಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಭದ್ರತೆ ನೀಡಲಾಗಿತ್ತು. 2017 ಡಿಸೆಂಬರ್ 01 ರಂದು ಪದ್ಮಾವತ್ ಸಿನಿಮಾ ಬಿಡುಗೊಡೆ ಆಗಲಿದೆ ಎಂದು ಈ ಹಿಂದೆ ಚಿತ್ರತಂಡ ಹೇಳಿಕೊಂಡಿತ್ತು. ಚಿತ್ರ ಸೆಟ್ಟೇರಿದಾಗಿನಿಂದಲೂ ತನ್ನ ವಿರೋಧ ಮಾಡುತ್ತಿದ್ದ ಕರ್ಣಿ ಸೇನಾ ದೇಶಾದ್ಯಂತ ಪ್ರತಿಭಟನೆಯನ್ನು ತೀವ್ರಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಸೆನ್ಸಾರ್ ಬೋರ್ಡ್ ಚಿತ್ರವನ್ನು ಕೂಲಂಕುಷವಾಗಿ ಪರಿಶೀಲಿಸಿ ಸಿನಿಮಾದ ಟೈಟಲ್ ಸೇರಿದಂತೆ ಕೆಲವು ಬದಲಾವಣೆ ಮಾಡುವಂತೆ ಚಿತ್ರತಂಡಕ್ಕೆ ಸೂಚಿಸಿತ್ತು. ಸೆನ್ಸಾರ್ ಮಂಡಳಿಯ ನಿರ್ದೇಶನದಂತೆ ಚಿತ್ರತಂಡ ಸಿನಿಮಾದಲ್ಲಿ ಮಾರ್ಪಡು ಮಾಡಿಕೊಂಡು ಬಿಡುಗೊಡೆ ಮಾಡಿದೆ.

  • ಪದ್ಮಾವತ್ 200 ಕೋಟಿ ಗಳಿಸಿದ ಖುಷಿಯಲ್ಲಿ ಅಭಿಮಾನಿಗಳಿಗೆ ಗಿಫ್ಟ್ ನೀಡಿದ ಸಂಜಯ್ ಲೀಲಾ ಬನ್ಸಾಲಿ

    ಪದ್ಮಾವತ್ 200 ಕೋಟಿ ಗಳಿಸಿದ ಖುಷಿಯಲ್ಲಿ ಅಭಿಮಾನಿಗಳಿಗೆ ಗಿಫ್ಟ್ ನೀಡಿದ ಸಂಜಯ್ ಲೀಲಾ ಬನ್ಸಾಲಿ

    ಮುಂಬೈ: ಸಾಕಷ್ಟು ವಿವಾದಗಳಿಂದಲೇ ಸುದ್ದಿ ಮಾಡಿದ್ದ ಬಾಲಿವುಡ್ ನ ‘ಪದ್ಮಾವತ್’ ಸಿನಿಮಾ ಎಂಟು ದಿನಗಳಲ್ಲಿ 200 ಕೋಟಿಗೂ ಅಧಿಕ ಹಣವನ್ನು ಗಳಿಸಿ ಯಶಸ್ಸಿನತ್ತ ಮುನ್ನುಗುತ್ತಿದೆ. ಸಿನಿಮಾ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿಕೊಂಡಿದ್ದು, ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ 200 ಕೋಟಿ ರೂ. ಹಣ ಗಳಿಸಿದ ಖುಷಿಯಲ್ಲಿ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಪದ್ಮಾವತ್ ನ ಹಾಡಿನ ವಿಡಿಯೋವನ್ನು ಬಿಡುಗೊಡೆ ಮಾಡಿದ್ದಾರೆ.

    ಫೆಬ್ರವರಿ 01ರಂದು ‘ಬಿನ್ ಥೆ ದಿಲ್’ ಹಾಡು ಯೂಟ್ಯೂಬ್ ನಲ್ಲಿ ಅಪ್ಲೋಡ್ ಆಗಿದ್ದು, 12 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಬಿನ್ ಥೆ ವಿಲ್ ಹಾಡಿನಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮತ್ತು ಮಲ್ಲಿಕಾಫುರ್ ಕಾಣುತ್ತಾರೆ. ಖಿಲ್ಜಿ ಆರು ತಿಂಗಳ ಕಾಲ ರಾಣಿ ಪದ್ಮಾವತಿಗಾಗಿ ಚಿತ್ತೋರ ಕೋಟೆಯ ಮುಂಭಾಗದಲ್ಲಿ ವಾಸ್ತವ್ಯ ಹೂಡುತ್ತಾನೆ. ಈ ವೇಳೆ ಬಿನ್ ಥೆ ದಿಲ್ ಹಾಡು ಬರುತ್ತದೆ.

    ಪದ್ಮಾವತ್ ಸಿನಿಮಾ 2017 ಡಿಸೆಂಬರ್ 01ರಂದು ತೆರೆಕಾಣಬೇಕಿತ್ತು. ಆದ್ರೆ ಚಿತ್ರದ ಬಿಡುಗಡೆ ರಾಜಸ್ಥಾನ, ಗುಜರಾತ್, ಹಿಮಾಚಲ ಪ್ರದೇಶ ಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕರ್ಣಿ ಸೇನಾ ಮಾತ್ರ ಇನ್ನು ಪದ್ಮಾವತ್ ವಿರುದ್ದ ಪ್ರತಿಭಟನೆಯನ್ನು ಮಾಡುತ್ತಿದೆ. ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಸೆನ್ಸಾರ್ ಮಂಡಳಿ ಸಿನಿಮಾ ಟೈಟಲ್ ಸೇರಿದಂತೆ ಹಲವು ಬದಲಾವಣೆಗಳನ್ನು ತರಲು ಚಿತ್ರತಂಡಕ್ಕೆ ಸೂಚಿಸಿತ್ತು. ಸೆನ್ಸಾರ್ ಮಂಡಳಿ ಸೂಚನೆಯಂತೆ ಚಿತ್ರತಂಡವೂ ಬದಲಾವಣೆಗೆ ಒಪ್ಪಿಕೊಂಡಿತ್ತು. ಈ ನಡುವೆ ಚಿತ್ರದಲ್ಲಿ ಸಾಕಷ್ಟು ಬದಲಾವಣೆ ತಂದರೂ ಕರ್ಣಿ ಸೇನಾ ಮಾತ್ರ ತನ್ನ ನಿಲುವನ್ನು ಬದಲಿಸಿಕೊಂಡಿರಲಿಲ್ಲ.

    ದೀಪಿಕಾ ಪಡುಕೋಣೆ ನಟಿಸಿರುವ ಐತಿಹಾಸಿಕ ಕಥೆಯನ್ನು ಹೊಂದಿರುವ `ಪದ್ಮಾವತ್’ ಸಿನಿಮಾ ಜನವರಿ 25ರಂದು ತೆರೆಕಂಡಿದೆ. ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿಯಾಗಿ ರಣ್‍ವೀರ್ ಸಿಂಗ್ ಮತ್ತು ರಾಣಾರಾವಲ್ ರತನ್ ಸಿಂಗ್ ಪಾತ್ರದಲ್ಲಿ ಶಾಹಿದ್ ಕಪೂರ್ ನಟಿಸಿದ್ದು, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿ ಬಂದಿದೆ.

  • ಪದ್ಮಾವತ್ ಬಳಿಕ ಐತಿಹಾಸಿಕ ಪಾತ್ರಗಳಲ್ಲಿ ನಟಿಸಲ್ಲ ಅಂದ್ರು ದೀಪಿಕಾ ಪಡುಕೋಣೆ

    ಪದ್ಮಾವತ್ ಬಳಿಕ ಐತಿಹಾಸಿಕ ಪಾತ್ರಗಳಲ್ಲಿ ನಟಿಸಲ್ಲ ಅಂದ್ರು ದೀಪಿಕಾ ಪಡುಕೋಣೆ

    ಮುಂಬೈ: ಬಾಲಿವುಡ್ ನಲ್ಲಿ ತನ್ನದೇ ಚಾಪು ಮೂಡಿಸಿರುವ ನಟಿ ದೀಪಿಕಾ ಪಡುಕೋಣೆ. ಬಾಲಿವುಡ್ ಇಂಡಸ್ಟ್ರಿಗೆ ಪ್ರವೇಶ ನೀಡಿದಾಗಿನಿಂದಲೂ ಪ್ರಯೋಗಾತ್ಮಕ ಚಿತ್ರಗಳಲ್ಲಿ ನಟಿಸುತ್ತಾ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆದ್ರೆ ದೀಪಿಕಾ ಮುಂದಿನ ದಿನಗಳಲ್ಲಿ ಐತಿಹಾಸಿಕ ಸಿನಿಮಾಗಳಲ್ಲಿ ನಟಿಸಲ್ಲ ಅಂತಾ ಹೇಳಿರುವುದು ಅಭಿಮಾನಿಗಳಲ್ಲಿ ನಿರಾಸೆಯನ್ನು ಉಂಟು ಮಾಡಿದೆ.

    ದೀಪಿಕಾ ಪಡುಕೋಣೆ ನಟಿಸಿರುವ ಐತಿಹಾಸಿಕ ಕಥೆಯನ್ನು ಹೊಂದಿರುವ ‘ಪದ್ಮಾವತ್’ ಸಿನಿಮಾ ಜನವರಿ 25ರಂದು ತೆರೆಕಂಡಿದೆ. ಸಿನಿಮಾದಲ್ಲಿ ರಣ್‍ವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ನಟಿಸಿದ್ದು, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿ ಬಂದಿದೆ. ಈಗಾಗಲೇ ಮೆಚ್ಚುಗೆಯನ್ನು ಪಡೆದುಕೊಂಡಿದ್ದು, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.

    ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ನೀವು ಮುಂದಿನ ದಿನಗಳಲ್ಲಿಯೂ ಐತಿಹಾಸಿಕ ಸಿನಿಮಾದಲ್ಲಿ ನಟಿಸಲು ಇಷ್ಟಪಡ್ತೀರಾ ಅಂತಾ ಕೇಳಿದಾಗ, ಇಷ್ಟೆಲ್ಲಾ ಆದ ಮೇಲೆಯೂ ಮತ್ತೆ ಐತಿಹಾಸಿಕ ಚಿತ್ರಗಳಲ್ಲಿ ನಟಿಸಲ್ಲ ಅಂತಾ ಖಡಕ್ ಆಗಿ ಹೇಳಿದ್ದಾರೆ.

    ನನ್ನ ಪೋಷಕರು ಪದ್ಮಾವತ್ ಸಿನಿಮಾ ನೋಡಿದ ಬಳಿಕ ನನ್ನ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಪದ್ಮಾವತ್ ಸಿನಿಮಾದಲ್ಲಿ ರಾಣಿಯಾಗಿ ನಟಿಸಿರುವುದು ನಮ್ಮ ಮಗಳೆ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಪೋಷಕರು ಸಿನಿಮಾ ನೋಡಿ ಬಂದಾಗ ತಡರಾತ್ರಿ ಆಗಿದ್ದರೂ ನನಗೆ ವಿಡಿಯೋ ಕಾಲ್ ಮಾಡಿ ಸಿನಿಮಾ ಮತ್ತು ನಟನೆಯ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದರು. ಪೋಷಕರ ಕಣ್ಣುಗಳಲ್ಲಿ ಸಿನಿಮಾ ನೋಡಿದ ಸಂತೋಷವನ್ನು ನೋಡಿದೆ ಅಂತಾ ದೀಪಿಕಾ ಸಂತೋಷವನ್ನು ವ್ಯಕ್ತಪಡಿಸಿದರು.

    ಪದ್ಮಾವತ್ ಸಿನಿಮಾ 2017 ಡಿಸೆಂಬರ್ 01ರಂದು ತೆರೆಕಾಣಬೇಕಿತ್ತು. ಆದ್ರೆ ಚಿತ್ರದ ಬಿಡುಗಡೆ ರಾಜಸ್ಥಾನ, ಗುಜರಾತ್, ಹಿಮಾಚಲ ಪ್ರದೇಶ ಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕರ್ಣಿ ಸೇನಾ ಮಾತ್ರ ಇನ್ನು ಪದ್ಮಾವತ್ ವಿರುದ್ದ ಪ್ರತಿಭಟನೆಯನ್ನು ಮಾಡುತ್ತಿದೆ. ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಸೆನ್ಸಾರ್ ಮಂಡಳಿ ಸಿನಿಮಾ ಟೈಟಲ್ ಸೇರಿದಂತೆ ಹಲವು ಬದಲಾವಣೆಗಳನ್ನು ತರಲು ಚಿತ್ರತಂಡಕ್ಕೆ ಸೂಚಿಸಿತ್ತು. ಸೆನ್ಸಾರ್ ಮಂಡಳಿ ಸೂಚನೆಯಂತೆ ಚಿತ್ರತಂಡವೂ ಬದಲಾವಣೆಗೆ ಒಪ್ಪಿಕೊಂಡಿತ್ತು. ಈ ನಡುವೆ ಚಿತ್ರದಲ್ಲಿ ಸಾಕಷ್ಟು ಬದಲಾವಣೆ ತಂದರೂ ಕರ್ಣಿ ಸೇನಾ ಮಾತ್ರ ತನ್ನ ನಿಲುವನ್ನು ಬದಲಿಸಿಕೊಂಡಿರಲಿಲ್ಲ.

    ಪದ್ಮಾವತ್ ಸಿನಿಮಾ ಸೆಟ್ಟೇರುತ್ತಲೇ ಅದರ ಜೊತೆಗೆ ವಿವಾದಗಳು ಸಹ ಹುಟ್ಟಿಕೊಂಡಿದ್ದವು. ವಿವಾದಗಳ ನಡುವೆ ಸಿನಿಮಾದ ನಾಯಕಿ ಆಗಿರುವ ದೀಪಿಕಾ ಪಡುಕೋಣೆ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿತ್ತು. ಈ ಹಿಂದೆ ದೀಪಿಕಾ ಪಡುಕೋಣೆ ನಟಿಸಿದ್ದ ಐತಿಹಾಸಿಕ ಕಥೆಯನ್ನು ಹೊಂದಿದ್ದ ‘ಬಾಜೀರಾವ್ ಮಸ್ತಾನಿ’ ಚಿತ್ರೀಕರಣ ಬಿಡುಗಡೆ ವೇಳೆ ವ್ಯಾಪಕ ವಿರೋಧಗಳು ವ್ಯಕ್ತವಾಗಿದ್ದವು. ಈ ಎಲ್ಲ ಕಾರಣಗಳಿಂದ ದೀಪಿಕಾ ಮುಂದಿನ ದಿನಗಳಲ್ಲಿ ಐತಿಹಾಸಿಕ ಸಿನಿಮಾದಲ್ಲಿ ನಟಿಸಲು ಹಿಂದೇಟು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

  • ದೀಪಿಕಾ ಪಡುಕೋಣೆ ಬಾಳಲ್ಲಿ ಹೊಸ ವ್ಯಕ್ತಿಯ ಪ್ರವೇಶ!

    ದೀಪಿಕಾ ಪಡುಕೋಣೆ ಬಾಳಲ್ಲಿ ಹೊಸ ವ್ಯಕ್ತಿಯ ಪ್ರವೇಶ!

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತ್ ಸಿನಿಮಾ ಬಿಡುಗಡೆಯಾಗಿದ್ದು, ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ ಬಂದಿದೆ. ಹೀಗಿರುವಾಗ ದೀಪಿಕಾ ಬಾಳಲ್ಲಿ ಒಬ್ಬ ವ್ಯಕ್ತಿಯ ಪ್ರವೇಶವಾಗಿದೆ. ಅದು ಬೇರೆ ಯಾರೂ ಅಲ್ಲ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ.

    ಪದ್ಮಾವತ್ ಚಿತ್ರ ಬಿಡುಗಡೆಯಾಗುತ್ತಿದ್ದಂತೆ, ದೀಪಿಕಾ ಸಂಜಯ್ ಲೀಲಾ ಜೊತೆವಿರುವ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಾಕಿ ಅದಕ್ಕೆ “ನನ್ನ ಜೀವನದ ಈಗೀನ ಹಾಗೂ ಮುಂದಿನ ಜೀವನದ್ದಕ್ಕೂ ಇವರು ನನ್ನ ಮುಖ್ಯ ವ್ಯಕ್ತಿ ಆಗಿರುತ್ತಾರೆ. ನಮ್ಮಿಬ್ಬರ ಕಡೆಯಿಂದ ನಾವು ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಹೇಳಲು ಇಷ್ಟಪಡುತ್ತೇನೆ. ನಿಮ್ಮನ್ನು ಚಿತ್ರಮಂದಿರಗಳಲ್ಲಿ ಭೇಟಿ ಮಾಡುತ್ತೇನೆ” ಎಂದು ಪದ್ಮಾವತ್ ಕ್ಯಾಪ್ಷನ್ ಹಾಕಿ ಪೋಸ್ಟ್ ಮಾಡಿದ್ದಾರೆ.

    ಒಂದು ನಟಿಯನ್ನು ತೆರೆಯ ಮೇಲೆ ಅದ್ಭುತವಾಗಿ ಕಾಣಿಸಿಕೊಳ್ಳುವಂತೆ ಮಾಡಿದ ನಿರ್ದೇಶಕನಿಗೆ ನನ್ನ ಕೃತಜ್ಞತೆಗಳು. ಬಾಜಿರಾವ್ ಮಸ್ತಾನಿನಂತಹ ಬ್ಲಾಕ್ ಬಸ್ಟರ್ ಚಿತ್ರದ ನಂತರ ಮತ್ತೆ ನನ್ನನ್ನು ರಾಣಿಯಾಗಿ ಪದ್ಮಾವತ್ ಚಿತ್ರದಲ್ಲಿ ಕಾಣಿಸಿಕೊಳ್ಳುವಂತೆ ಮಾಡಿದ್ದಾರೆ ಎಂದು ದೀಪಿಕಾ ತಿಳಿಸಿದ್ದಾರೆ.

    ಪದ್ಮಾವತಿ ಚಿತ್ರ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ ಪದ್ಮಾವತ್ ಆಗಿ ಬದಲಾಗಿದ್ದು, ಯು/ಎ ಸರ್ಟಿಫಿಕೆಟ್ ದೊರೆತಿತ್ತು. ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಚಿತ್ರದಲ್ಲಿ ಇಬ್ಬರು ನಾಯಕರಿದ್ದು, ಶಾಹಿದ್ ಕಪೂರ್ ರಾಣಾ ರತನ್ ಸಿಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಮತ್ತೊಬ್ಬ ನಟ ರಣ್‍ವೀರ್ ಸಿಂಗ್ ಅಲ್ಲಾವುದ್ದೀನ್ ಖಿಲ್ಜಿ ಆಗಿ ಬಣ್ಣ ಹಚ್ಚಿದ್ದಾರೆ.

  • ಉತ್ತರ ಭಾರತದ ಬಳಿಕ ರಾಜ್ಯದಲ್ಲಿ ಪದ್ಮಾವತ್‍ಗೆ ವಿರೋಧ – ಬೆಳಗಾವಿ ಚಿತ್ರಮಂದಿರಕ್ಕೆ ಬೆಂಕಿ ಹಾಕಲು ಯತ್ನ

    ಉತ್ತರ ಭಾರತದ ಬಳಿಕ ರಾಜ್ಯದಲ್ಲಿ ಪದ್ಮಾವತ್‍ಗೆ ವಿರೋಧ – ಬೆಳಗಾವಿ ಚಿತ್ರಮಂದಿರಕ್ಕೆ ಬೆಂಕಿ ಹಾಕಲು ಯತ್ನ

    ಬೆಳಗಾವಿ: ಉತ್ತರ ಭಾರತದ ಬಳಿಕ ಇದೀಗ ರಾಜ್ಯದಲ್ಲಿಯೂ ನಟಿ ದೀಪಿಕಾ ಪಡುಕೋಣೆ ಅಭಿನಯದ `ಪದ್ಮಾವತ್’ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದೆ.

    ಗುರುವಾರ ರಾತ್ರಿ 9.25ರ ಸುಮಾರಿಗೆ ಶೋ ಮುಗಿಸಿ ವಾಪಸ್ ಆಗುವಾಗ ದುಷ್ಕರ್ಮಿಗಳು ಸೀಮೆಎಣ್ಣೆ ತುಂಬಿದ ಬಾಟಲ್‍ನನ್ನು ಪ್ರೇಕ್ಷಕರ ಕಡೆ ಎಸೆದು ಪರಾರಿಯಾಗಿದ್ದಾರೆ. ಬೆಳಗಾವಿಯ ಪ್ರಕಾಶ ಚಿತ್ರಮಂದಿರದ ಮುಂಭಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

    ಪ್ರೇಕ್ಷಕರು ಹೊರಬರುತ್ತಿದ್ದ ವೇಳೆ ದುಷ್ಕೃತ್ಯ ಎಸಗಿದ್ದು, ಭಯದಿಂದ ಪ್ರೇಕ್ಷಕರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಆದರೆ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಭಾರೀ ಅನಾಹುತ ತಪ್ಪಿಸಿದ್ದಾರೆ. ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಖಡೇಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪದ್ಮಾವತಿ ಚಿತ್ರ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ ಪದ್ಮಾವತ್ ಆಗಿ ಬದಲಾಗಿದ್ದು, ಯು/ಎ ಸರ್ಟಿಫಿಕೆಟ್ ದೊರೆತಿತ್ತು. ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಚಿತ್ರದಲ್ಲಿ ಇಬ್ಬರು ನಾಯಕರಿದ್ದು, ಶಾಹಿದ್ ಕಪೂರ್ ರಾಣಾ ರತನ್ ಸಿಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಮತ್ತೊಬ್ಬ ನಟ ರಣ್‍ವೀರ್ ಸಿಂಗ್ ಅಲ್ಲಾವುದ್ದೀನ್ ಖಿಲ್ಜಿ ಆಗಿ ಬಣ್ಣ ಹಚ್ಚಿದ್ದಾರೆ.