Tag: ಪಕ್ಷಿ ಪ್ರೇಮಿ

  • ಮರಗಳನ್ನು ಸ್ಥಳಾಂತರಿಸಿ ಪರಿಸರ ಕಾಳಜಿ- ಕೆರೆಗೂ ಕಾಯಕಲ್ಪ ನೀಡ್ತಿದ್ದಾರೆ ಧಾರವಾಡದ ಅಸ್ಲಂ ಜಹಾನ್

    ಮರಗಳನ್ನು ಸ್ಥಳಾಂತರಿಸಿ ಪರಿಸರ ಕಾಳಜಿ- ಕೆರೆಗೂ ಕಾಯಕಲ್ಪ ನೀಡ್ತಿದ್ದಾರೆ ಧಾರವಾಡದ ಅಸ್ಲಂ ಜಹಾನ್

    -ಪಕ್ಷಿ ಸಂಕುಲ ರಕ್ಷಣೆಗೆ ವಿಶೇಷ ಮುತುವರ್ಜಿ

    ಧಾರವಾಡ: ಸಸ್ಯ ಹಾಗೂ ಪಕ್ಷಿ ಸಂಕುಲ ರಕ್ಷಣೆಗೆ ಪಣತೊಟ್ಟಿರುವ ಧಾರವಾಡ ಹೊರವಲಯದ ಆಂಜನೇಯ ನಗರದ ಅಸ್ಲಂಜಹಾನ್ ಅಬ್ಬಿಹಾಳ ಇವತ್ತಿನ ಪಬ್ಲಿಕ್ ಹೀರೋ.

    ವೃತ್ತಿಯಲ್ಲಿ ಪೇಂಟಿಂಗ್ ಕಾಂಟ್ರ್ಯಾಕ್ಟರ್ ಆಗಿರೋ ಅಸ್ಲಂ ಜಹಾನ್ ಪರಿಸರ ಪ್ರೇಮಿ. ಪಕ್ಷಿಗಳು ಎಂದರೆ ಅತೀ ಪ್ರೀತಿ. ಕೆರೆ ಪಕ್ಕ ಕಸ ತೆಗೆಯುವಾಗ ಪಕ್ಷಿಗಳು ಮರಿ ಮಾಡಲು ತೊಂದರೆಯಾಗುವುದನ್ನ ಗಮನಿಸಿ, ಏಳು ನಡುಗಡ್ಡೆಯನ್ನ ನಿರ್ಮಾಣ ಮಾಡಿದ್ದಾರೆ. ಈ ನಡುಗಡ್ಡೆಗಳ ಮೇಲೆ 200ಕ್ಕೂ ಹೆಚ್ಚು ಜಾಲಿ, ಅರಳಿ, ಬೇವು ಹಾಗೂ ಇನ್ನಿತರ ಸಸಿಗಳನ್ನ ನೆಟ್ಟಿದ್ದಾರೆ. ಇದರ ಜೊತೆಗೆ ರಸ್ತೆ ಅಗಲೀಕರಣಕ್ಕೆ ಬಲಿಯಾಗುತ್ತಿದ್ದ ಮರಗಳನ್ನ ಇದೇ ಕೆರೆಗೆ ತಂದು ಬೆಳೆಸುತ್ತಿದ್ದಾರೆ.

    ಕಳೆದ 15 ವರ್ಷಗಳಿಂದ ಮರಗಳನ್ನ ಶಿಫ್ಟಿಂಗ್ ಮಾಡಿರುವ ಇವರು, ಮರ ಕಡಿದರೆ ಆ ಮರ ಬೆಳೆಸಲು 30 ವರ್ಷಗಳು ಬೇಕು. ಅದರ ಬದಲಿಗೆ ಆ ಮರವನ್ನ ಸ್ಥಳಾಂತರಿಸಿ ಬೆಳೆಸಬಹುದು ಅನ್ನೋದು ಅಸ್ಲಂ ಅವರ ಮಾತು. ಅಸ್ಲಂ ಅವರ ಈ ಕಾರ್ಯ ಸುತ್ತಮುತ್ತಲ ಗ್ರಾಮಗಳಲ್ಲೂ ಸುದ್ದಿಯಾಗಿದೆ. ಪಕ್ಷಿಗಳನ್ನ ಉಳಿಸಿ ಬೆಳೆಸುವುದರ ಜೊತೆಗೆ ಮರಗಳ ರಕ್ಷಕರೂ ಆಗಿರುವ ಆಂಜನೇಯ ನಗರದ ಅಸ್ಲಂ ಕಾರ್ಯ ಶ್ಲಾಘನೀಯ.

    https://www.youtube.com/watch?v=J5ZEILMnN8o

  • ಗುಬ್ಬಚ್ಚಿಗಾಗಿ ಮನೆ ಮೀಸಲು, ಹತ್ತಾರು ಪ್ರಭೇದದ ಪಕ್ಷಿಗಳಿಗೆ ಆಶ್ರಯದಾತರಾಗಿರೋ ಸಲಾವುದ್ದೀನ್

    ಗುಬ್ಬಚ್ಚಿಗಾಗಿ ಮನೆ ಮೀಸಲು, ಹತ್ತಾರು ಪ್ರಭೇದದ ಪಕ್ಷಿಗಳಿಗೆ ಆಶ್ರಯದಾತರಾಗಿರೋ ಸಲಾವುದ್ದೀನ್

    ರಾಯಚೂರು: ನಾಗರೀಕತೆ ಬೆಳೆದಂತೆ ಮನುಷ್ಯನ ಜೊತೆ ಜೊತೆಗೆ ಬದುಕುತ್ತಿದ್ದ ಪಕ್ಷಿ, ಪ್ರಾಣಿಗಳು ದೂರವಾಗತ್ತಲೇ ಇವೆ. ಹೀಗೇ ದೂರವಾದವುಗಳಲ್ಲಿ ಗುಬ್ಬಚ್ಚಿ ಸಂತತಿ ಪ್ರಮುಖ. ಆದ್ರೆ ರಾಯಚೂರಿನ ಇವತ್ತಿನ ಪಬ್ಲಿಕ್ ಹೀರೋ ತಮ್ಮ ಮನೆಯನ್ನೇ ಪಕ್ಷಿಗಳ ಆಶ್ರಯತಾಣ ಮಾಡಿದ್ದಾರೆ.

    ಜಿಲ್ಲೆಯ ಮಾನ್ವಿ ಪಟ್ಟಣದ ಕ್ಲಾಸ್ ಒನ್ ಸಿವಿಲ್ ಕಾಂಟ್ರಾಕ್ಟರ್ ಸಲಾವುದ್ದಿನ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಕಳೆದ ನಾಲ್ಕುವರೆ ವರ್ಷದಿಂದ ತಮ್ಮ ಮನೆಯನ್ನೇ ಪಕ್ಷಿಗಳಿಗಾಗಿ ಮೀಸಲಿಟ್ಟಿದ್ದಾರೆ.

    ಗೋಡೆ, ಛಾವಣಿಯಲ್ಲಿ ಬಿದಿರು, ಟೈರ್, ಮಡಿಕೆ, ಪೈಪ್‍ಗಳ ಮೂಲಕ ಮನೆಯಲ್ಲೇ ಪಕ್ಷಿಗಳಿಗೆ ಆಹಾರ, ನೀರು ಜೊತೆಗೆ ಆಶ್ರಯ ಸಿಗುವಂತೆ ಮಾಡಿದ್ದಾರೆ. ಗುಬ್ಬಚ್ಚಿ ಸಂತತಿ ರಕ್ಷಣೆಯೇ ನಮ್ಮ ಉದ್ದೇಶ ಎಂದು ಸಲಾವುದ್ದೀನ್ ಹೇಳ್ತಾರೆ.

    ಮನೆಗೆ ನಿತ್ಯ ಅತಿಥಿಗಳಾಗಿ ಗುಬ್ಬಚ್ಚಿ, ಮೈನಾ, ದೊಡ್ಡ ಮೈನಾ, ಹಳದಿ ಗುಬ್ಬಿ, ರಾಬಿನ್, ಬೆಳವ, ಬುಲ್ ಬುಲ್ ಪಕ್ಷಿಗಳು ಬರುತ್ತವೆ. ಸಲಾವುದ್ದೀನ್‍ರ ಮನೆ ಬಳಿ ಯಾವಾಗಲು ಹಕ್ಕಿಗಳ ಚಿಲಿಪಿಲಿ ಇರುತ್ತದೆ.

    ಸಲಾವುದ್ದೀನ್ ಅವರ ಕಾರ್ಯಕ್ಕೆ ಪತ್ನಿ, ಮಕ್ಕಳು ಸಾಥ್ ನೀಡಿದ್ದಾರೆ. ಕಾಂಕ್ರಿಟ್ ಕಾಡಿನ ಮಧ್ಯೆ ಮತ್ತೆ ಹಕ್ಕಿಗಳ ನಿನಾದ ಕೇಳುವಂತೆ ಮಾಡ್ತಿದ್ದಾರೆ ನಮ್ಮ ಪಬ್ಲಿಕ್ ಹೀರೋ.

    https://www.youtube.com/watch?v=NwLGZRYzLIQ

  • ಪಕ್ಷಿಗಳಿಗೆ ನೀರುಣಿಸಿ ಪಬ್ಲಿಕ್ ಹೀರೋ ಆಗಿದ್ದ ಕಮಲಾಕರ್‍ಗೆ ಕ್ಯಾನ್ಸರ್- ಔಷಧಿ ವೆಚ್ಚಕ್ಕಾಗಿ ಕೇಳ್ತಿದ್ದಾರೆ ಸಹಾಯ

    ಪಕ್ಷಿಗಳಿಗೆ ನೀರುಣಿಸಿ ಪಬ್ಲಿಕ್ ಹೀರೋ ಆಗಿದ್ದ ಕಮಲಾಕರ್‍ಗೆ ಕ್ಯಾನ್ಸರ್- ಔಷಧಿ ವೆಚ್ಚಕ್ಕಾಗಿ ಕೇಳ್ತಿದ್ದಾರೆ ಸಹಾಯ

    ಕಲಬುರಗಿ: ಬಾನಾಡಿಗಳ ಪ್ರೇಮಿ ಅಂತಾ ಪ್ರಖ್ಯಾತಿ ಪಡೆದು ಪಬ್ಲಿಕ್ ಹೀರೋ ಆಗಿದ್ದ ಕಲಬುರಗಿಯ ಕಮಲಾಕರ್ ಪಂಚಾಳ ಇದೀಗ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರಿಗೆ ಪ್ರತಿ ತಿಂಗಳು ಸುಮಾರು 5 ಸಾವಿರ ರೂಪಾಯಿಯ ಔಷಧಿ ಬೇಕಾಗಿದೆ. ಆದರೆ ಆರ್ಥಿಕ ಸಮಸ್ಯೆಯಿಂದ ಔಷಧಿ ಖರೀದಿಸಲು ಇದೀಗ ನೇರವಿಗಾಗಿ ಕಾಯುತ್ತಿದ್ದಾರೆ.

    ಚಿಂಚೋಳಿ ತಾಲೂಕಿನ ಐನಾಪುರ ಗ್ರಾಮದ ನಿವಾಸಿಯಾಗಿದ್ದಾರೆ ಕಮಲಾಕರ ಪಂಚಾಳ ಪಕ್ಷಿಗಳಿಗಾಗಿ ಮುಚ್ಚಳದ ಮೂಲಕ ನೀರು ಮತ್ತು ಆಹಾರ ಹಾಕುವ ಮೂಲಕ ಪಬ್ಲಿಕ್ ಹೀರೋ ಆಗಿದ್ದರು.

    ಬೇಸಿಗೆ ಕಾಲದಲ್ಲಿ ಇಲ್ಲಿನ ಕೆರೆ-ಕಟ್ಟೆಗಳು ಒಣಗಿದ ಪರಿಣಾಮ ಸಾವಿರಾರು ಪಕ್ಷಿಗಳು ನೀರಿಲ್ಲದೆ ಸಾವನಪ್ಪುತ್ತಿದ್ದವು. ಇದನ್ನು ಅರಿತ ಕಮಲಾಕರ ಪಂಚಾಳ ಮರಗಳಿಗೆ ಮುಚ್ಚಳ ಕಟ್ಟಿ ಕಳೆದ 17 ವರ್ಷಗಳಿಂದ ಬಾನಾಡಿಗಳಿಗೆ ನೀರುಣಿಸುತ್ತಿದ್ದಾರೆ. ಇದನ್ನು ತಿಳಿದ ಪಬ್ಲಿಕ್ ಟಿವಿ ಪಂಚಾಳ ಅವರನ್ನು ಪಬ್ಲಿಕ್ ಹೀರೋ ಅಂತಾ ಬಿಗ್ ಬುಲೆಟಿನ್‍ನಲ್ಲಿ ಅವರ ನಿಸ್ವಾರ್ಥ ಸೇವೆ ಕುರಿತು ಮೊದಲ ವರದಿ ಪ್ರಸಾರ ಮಾಡಿತ್ತು. ನಂತರ ಬೆಳಕು ಕಾರ್ಯಕ್ರಮದ ಮೂಲಕ ಅವರಿಗೆ ದಾನಿಗಳಿಂದ ಟಿವಿಎಸ್ ವಾಹನವನ್ನು ನೀಡಲಾಗಿತ್ತು. ಆದ್ರೆ ಇದೀಗ ಅದೇ ಪಂಚಾಳ ಅವರು ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಪರದಾಡುತ್ತಿದ್ದಾರೆ.

    ಸದ್ಯ ಪಂಚಾಳ ಅವರಿಗೆ ಪುತ್ರ ರವೀಂದ್ರ ಕುಮಾರ್, ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಹಂತದ ಚಿಕಿತ್ಸೆಯನ್ನು ಕೊಡಿಸಿದ್ದಾರೆ. ಆದ್ರೆ ಪಂಚಾಳ ಅವರಿಗೆ ಇಂದಿಗೂ ಪ್ರತಿ ತಿಂಗಳು 4 ರಿಂದ 5 ಸಾವಿರ ರೂಪಾಯಿ ಔಷಧಿಗಾಗಿ ಹಣ ಬೇಕಾಗಿದೆ. ಈ ಹಣ ಜೋಡಿಸಲು ಪಂಚಾಳ ಅವರಿಗೆ ತುಂಬಾ ಕಷ್ಟವಾಗುತ್ತಿದ್ದು, ಯಾರಾದ್ರೂ ದಾನಿಗಳು ಸಹಾಯ ಮಾಡಲಿ ಅಂತಾರೆ ಐನಾಪುರ ಗ್ರಾಮದ ಜನ.

    ಪಂಚಾಳ ಹೀಗೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರೂ ಕೂಡ ಇದೀಗ ಮತ್ತೆ ಪಕ್ಷಿಗಳಿಗೆ ನೀರುಣಿಸಲು ಸಿದ್ದರಾಗಿದ್ದಾರೆ. ಹೀಗಾಗಿ ಯಾರಾದ್ರೂ ದಾನಿಗಳು ಮುಂದೆ ಬಂದು ಪಂಚಾಳ ಅವರಿಗೆ ಔಷಧಿಯ ವೆಚ್ಚ ನೀಡಬೇಕಾಗಿದೆ. ಅದೇ ನಿರೀಕ್ಷೆಯಲ್ಲಿ ಇದೀಗ ಪಂಚಾಳ ಮತ್ತೆ ಇದೀಗ ಪಬ್ಲಿಕ್ ಟಿವಿಯ ಮುಖಾಂತರ ದಾನಿಗಳಲ್ಲಿ ವಿನಂತಿಸುತ್ತಿದ್ದಾರೆ.