Tag: ಪಂಪ್ ಸೆಟ್

  • ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡದೇ ಶುಲ್ಕ ವಿಧಿಸಿದ ಸರ್ಕಾರ – ರೈತರು ಕಂಗಾಲು

    ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡದೇ ಶುಲ್ಕ ವಿಧಿಸಿದ ಸರ್ಕಾರ – ರೈತರು ಕಂಗಾಲು

    ಮಡಿಕೇರಿ: ರಾಜ್ಯದಲ್ಲಿ ಕಾಫಿ, ಟೀ ಮತ್ತು ರಬ್ಬರ್ ಬೆಳೆಗೆ ಬಿಟ್ಟರೆ ಉಳಿದ ಎಲ್ಲಾ ವಾಣಿಜ್ಯ ಬೆಳೆಗಳಿಗೂ 10 ಹೆಚ್‌ಪಿವರೆಗಿನ ಪಂಪ್ ಸೆಟ್‌ಗಳಿಗೆ ಸರ್ಕಾರ ಉಚಿತ ವಿದ್ಯುತ್ ನೀಡುತ್ತದೆ. ಆದರೆ ಎಲ್ಲಾ ಜಿಲ್ಲೆಗಳಲ್ಲಿ ರೈತರಿಗೆ 10 ಹೆಚ್‌ಪಿವರೆಗಿನ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುತ್ತಿರುವ ಸರ್ಕಾರ ಕೊಡಗಿನ ರೈತರಿಗೆ ಶುಲ್ಕ ವಿಧಿಸಿ ಕಂಗಾಲಾಗುವಂತೆ ಮಾಡಿದೆ.

    ಕಳೆದ ನಾಲ್ಕು ವರ್ಷಗಳಿಂದ ಕೊಡಗಿನಲ್ಲಿ ಆದ ಭಾರೀ ಮಳೆಗೆ ಕಾಫಿ ಬೆಳೆ ಸಂಪೂರ್ಣ ನಷ್ಟವಾಗಿದೆ. ನೂರಾರು ರೈತರ ಕಾಫಿ ತೋಟಗಳೇ ಭೂಕುಸಿತದಲ್ಲಿ ಕೊಚ್ಚಿ ಹೋಗಿವೆ. ಇದರಿಂದ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಇದು ಒಂದೆಡೆಯಾದರೆ ಮತ್ತೊಂದೆಡೆ ಕಾಫಿ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇದರ ಜೊತೆಗೆ ಉತ್ಪಾದನಾ ವೆಚ್ಚ ತೀವ್ರವಾಗಿ ಹೆಚ್ಚಳವಾಗಿದ್ದು ಕಾಫಿ ಬೆಳೆಯಿಂದ ಲಾಭ ಪಡೆಯುವುದೇ ಕಷ್ಟಕರ ಎನ್ನುವ ಸ್ಥಿತಿ ಇದೆ. ಇದನ್ನೂ ಓದಿ: ಭಾರತದ ಎಲ್ಲಾ ವಯಸ್ಕರಿಗೂ ಬೂಸ್ಟರ್ ಡೋಸ್ – ಸರ್ಕಾರ ಚಿಂತನೆ

    ಈಗಾಗಲೇ ರಾಜ್ಯದಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಮಾವು, ಕಬ್ಬು ಮುಂತಾದ ಬೆಳೆಗಳಿಗೆ ರೈತರು ಉಪಯೋಗಿಸುತ್ತಿರುವ 10 ಹೆಚ್‌ಪಿ ಪಂಪ್ ಸೆಟ್‌ಗಳಿಗೆ ಸರ್ಕಾರದಿಂದ ಉಚಿತವಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಆದರೆ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಾಫಿ ಬೆಳೆಗಾರರು ಉಪಯೋಗಿಸುತ್ತಿರುವ ಪಂಪ್ ಸೆಟ್‌ಗಳಿಗೆ ವಿದ್ಯುತ್ ಶುಲ್ಕವನ್ನು ಪಾವತಿ ಮಾಡುವಂತೆ ಇಲಾಖೆ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ.

    ಒಂದು ವೇಳೆ ಶುಲ್ಕ ಕಟ್ಟದೇ ಹೋದಲ್ಲಿ ನೂರಾರು ರೈತರ ಪಂಪ್ ಸೆಟ್‌ಗೆ ಬಳಸುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತಿದ್ದಾರೆ. ಇದರಿಂದ ನೊಂದ ಕೊಡಗಿನ ನೂರಾರು ರೈತರು ವಿದ್ಯುತ್ ಇಲಾಖೆ ಮುಂಭಾಗದಲ್ಲಿ 10 ಹೆಚ್‌ಪಿ ವರೆಗಿನ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವಂತೆ ಆಗ್ರಹಿಸಿ ಹೋರಾಟ ಆರಂಭಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮುಂದಿನ 2 ದಿನ ಗುಡುಗು ಸಹಿತ ಮಳೆ

    ಉಚಿತ ವಿದ್ಯುತ್ ನೀಡುವಂತೆ ಮುಖ್ಯಮಂತ್ರಿಗಳಿಗೂ ಕೊಡಗಿನ ಕಾಫಿ ಬೆಳೆಗಾರರು ಮನವಿ ಮಾಡಿದ್ದರು. ಅದಕ್ಕೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಅದರೆ ಜಿಲ್ಲೆಯ ಚೆಸ್ಕಾಂ ಅಧಿಕಾರಿಗಳು ಮಾತ್ರ ಉಚಿತ ವಿದ್ಯುತ್ ನೀಡುತ್ತಿಲ್ಲ. ಬದಲಾಗಿ ವಿದ್ಯುತ್ ಬಾಕಿ ಇದೆ ಎಂದು ಮೀಟರ್ ಬೋರ್ಡ್ ಅನ್ನೇ ಕಿತ್ತುಕೊಂಡು ಹೋಗಿ, ಸಂಪರ್ಕ ಕಡಿತ ಮಾಡುತ್ತಿದ್ದಾರೆ.

    ಕೊಡಗಿನಲ್ಲಿ ಸಾಕಷ್ಟು ಮಳೆಯಾಗುವುದರಿಂದ ಮಳೆಗಾಲದಲ್ಲಿ ಪಂಪ್ ಸೆಟ್ ಉಪಯೋಗಿಸುವುದೇ ಇಲ್ಲ. ಬೇಸಿಗೆಯಲ್ಲೇ ಕಾಫಿ ಹೂವು ಆಗುವುದರಿಂದ ಆ ಸಮಯಕ್ಕೆ ಅಗತ್ಯದಷ್ಟು ನೀರುಣಿಸಲೇ ಬೇಕು. ಇಲ್ಲದಿದ್ದರೆ ಕಾಫಿ ಹೂವು ಸಂಪೂರ್ಣ ಉದುರಿ ಇಡೀ ವರ್ಷದ ಬೆಳೆ ಹಾಳಾಗುತ್ತದೆ. ಆದ್ದರಿಂದ ಸರ್ಕಾರ ಕೊಡಗಿನ 10 ಹೆಚ್‌ಪಿ ವರೆಗಿನ ಪಂಪ್ ಸೆಟ್ ಬಳಸುವ ರೈತರಿಗೆ ಕೇವಲ ಎರಡು ತಿಂಗಳು ಮಾತ್ರವೇ ಉಚಿತ ವಿದ್ಯುತ್ ನೀಡಿದರೆ ಸಾಕು ಎಂದು ಆಗ್ರಹಿಸುತ್ತಿದ್ದಾರೆ.

    ಒಟ್ಟಿನಲ್ಲಿ ಈಗಾಗಲೇ ಕೊಡಗಿನ ಕಾಫಿ ಬೆಳೆಗಾರರು ಮುಖ್ಯಮಂತ್ರಿಗಳನ್ನು ಖುದ್ದು ಭೇಟಿಯಾಗಿ ಮನವಿ ಸಲ್ಲಿಸಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮಡಿಕೇರಿ ಚೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ಇನ್ನಾದರೂ ಸರ್ಕಾರ, ಸಂಬಂಧಿಸಿದ ಇಲಾಖೆ ಎಚ್ಚೆತ್ತುಕೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.

  • ಪಂಪ್ ಸೆಟ್ ಕಳ್ಳನಿಗೆ ಗ್ರಾಮಸ್ಥರಿಂದ ಧರ್ಮದೇಟು

    ಪಂಪ್ ಸೆಟ್ ಕಳ್ಳನಿಗೆ ಗ್ರಾಮಸ್ಥರಿಂದ ಧರ್ಮದೇಟು

    ಚಿಕ್ಕೋಡಿ(ಬೆಳಗಾವಿ): ಕಳೆದ ಹಲವಾರು ದಿನಗಳಿಂದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ರೈತರ ಜಮೀನುಗಳಲ್ಲಿ ಮತ್ತು ನದಿ ತೀರದಲ್ಲಿ ಪಂಪಸೆಟ್ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಗ್ರಾಮದ ಜನರೇ ಹಿಡಿದು ಧರ್ಮದ ಏಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಆರೋಪಿಯನ್ನು ರವಿ ಗೊಲ್ಲರ ಎಂದು ಗುರುತಿಸಲಾಗಿದ್ದು ಇನ್ನೋರ್ವ ಕಳ್ಳ ಪರಾರಿಯಾಗಿದ್ದಾನೆ. ಅಥಣಿ ತಾಲೂಕಿನ ದೇವರಡ್ಡೇರಹಟ್ಟಿ ಗ್ರಾಮದಲ್ಲಿ ಅಗ್ರಾಣಿ ಹಳದಲ್ಲಿ ಅಳವಡಿಸಿದ್ದ ಪಂಪಸೆಟ್ ಕಳ್ಳತನ ಮಾಡಿ ಹೊತ್ತೊಯ್ಯುವ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಕಳ್ಳನಿಗೆ ಜನರೆ ಭರ್ಜರಿ ಗೂಸಾ ನೀಡಿದ್ದು, ಒಂದು ಪಂಪಸೆಟ್ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ:  ಧಾರಾವಾಹಿ ಖ್ಯಾತಿಯ ನಟಿ ಚೈತ್ರಾ ರೈ ಸೀಮಂತ

    ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅಥಣಿ ಪಿಎಸ್‍ಐ ಕುಮಾರ ಹಾಡಕಾರ ಮತ್ತು ಸಿಬ್ಬಂದಿ ಕಳ್ಳನನ್ನು ವಶಕ್ಕೆ ಪಡೆದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಜಮೀನುಗಳಲ್ಲಿ ಅಳವಡಿಸಿದ್ದ ಪಂಪಸೆಟ್‍ಗಳಿಗೆ ಕನ್ನ ಹಾಕಿ ಅರ್ಧ ಬೆಲೆಗೆ ಮಾರುವ ತಂಡ ಅಥಣಿ ತಾಲೂಕಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಆರೋಪಗಳು ಹಲವು ದಿನಗಳಿಂದ ಕೇಳಿಬರುತ್ತಿದ್ದು, ಇಂದು ಒಬ್ಬ ವ್ಯಕ್ತಿ ಜನರ ಕೈಗೆ ಸಿಕ್ಕಿ ಬಿದ್ದಿರುವದರಿಂದ ಈ ಬಗ್ಗೆ ವಿಶೇಷ ಕಾಳಜಿವಹಿಸಿ ತನಿಖೆ ನಡೆಸಿ ನೊಂದ ರೈತರಿಗೆ ನ್ಯಾಯ ಕೊಡಿಸಬೇಕು ಎಂದು ದೇವರಡ್ಡೇರಹಟ್ಟಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ತಮ್ಮನ ಎದುರೇ ಭೀಮಾ ನದಿಯಲ್ಲಿ ಕೊಚ್ಚಿ ಹೋದ ಅಣ್ಣ

    ತಮ್ಮನ ಎದುರೇ ಭೀಮಾ ನದಿಯಲ್ಲಿ ಕೊಚ್ಚಿ ಹೋದ ಅಣ್ಣ

    ಯಾದಗಿರಿ: ತಮ್ಮನ ಎದುರೇ ಭೀಮಾ ನದಿ ಪ್ರವಾಹಕ್ಕೆ ಅಣ್ಣ ಕೊಚ್ಚಿ ಹೋಗಿರುವ ಮನಕಲಕುವ ಘಟನೆ ಯಾದಗಿರಿ ತಾಲೂಕಿನ ಕೌಳೂರ ಗ್ರಾಮದ ಭೀಮಾ ನದಿಯಲ್ಲಿ ನಡೆದಿದೆ.

    ಕೊಚ್ಚಿಹೋದ ಅಣ್ಣನನ್ನು 24 ವರ್ಷದ ರೆಡ್ಡಿ ಚಂದ್ರಪ್ಪ ಡೊಂಗೇರ್ ಎಂದು ಗುರುತಿಸಲಾಗಿದೆ. ಭೀಮಾ ನದಿ ತೀರದಲ್ಲಿ ಅಣ್ಣ ತಮ್ಮ ಸೇರಿಕೊಂಡು ಪಂಪ್ ಸೆಟ್ ತೆಗೆಯುವಾಗ ಈ ದುರ್ಘಟನೆ ಸಂಭವಿಸಿದೆ.

    ನದಿಗೆ ಬಿಡಲಾಗಿದ್ದ ಪಂಪ್ ಸೆಟ್ ತೆಗೆಯಲು ಹೋದ ಚಂದ್ರಪ್ಪ ಡೊಂಗೇರ್ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಈ ವೇಳೆ ಜೊತೆಯಲ್ಲೇ ಇದ್ದ ತಮ್ಮ ಬಸವರಾಜ ಅಣ್ಣನಿಗೆ ಹಗ್ಗ ಹಾಕಿ ನದಿಯಿಂದ ಎಳೆದುಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಆದರೆ ನದಿಯೂ ರಭಸದಿಂದ ಹರಿಯುತ್ತಿರುವ ಕಾರಣ ಎಳೆದುಕೊಳ್ಳಲು ಆಗಿಲ್ಲ. ಈ ಸಂಬಂಧ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.