Tag: ನೌಕರರ ಸಂಘ

  • ಕೆಲಸದಿಂದ ವಜಾ ಮಾಡಲಿ, ನಾವು ಹೆದರುವುದಿಲ್ಲ, ಮುಷ್ಕರ ನಡೆಯುತ್ತೆ: ಷಡಕ್ಷರಿ

    ಕೆಲಸದಿಂದ ವಜಾ ಮಾಡಲಿ, ನಾವು ಹೆದರುವುದಿಲ್ಲ, ಮುಷ್ಕರ ನಡೆಯುತ್ತೆ: ಷಡಕ್ಷರಿ

    ಬೆಂಗಳೂರು: ನಮ್ಮನ್ನು ಅಮಾನತು ಮಾಡಲಿ, ಕೆಲಸದಿಂದ ವಜಾ ಮಾಡಲಿ, ಎಸ್ಮಾ ಜಾರಿಗೆ ತರಲಿ, ಆದರೆ ನಾವು ಯಾವುದಕ್ಕೂ ಹೆದರುವುದಿಲ್ಲ, ಮುಷ್ಕರ ನಡೆಯುತ್ತದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ (Shadakshari) ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ನೌಕರರ (Government Employees) ಹೋರಾಟಕ್ಕೆ 40 ಸಂಘಟನೆಗಳ ಬೆಂಬಲ ನೀಡಿದೆ. ಬುಧವಾರದಿಂದ ಎಲ್ಲಾ ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ. ಸರ್ಕಾರದ ಯಾವುದೇ ಭರವಸೆಗಳಿಗೆ ಬಗ್ಗಲ್ಲ. ಅಧಿಕೃತ ಆದೇಶದೊಂದಿಗೆ ಬರದ ಹೊರತು ಪ್ರತಿಭಟನೆ ಕೈ ಬಿಡಲ್ಲ. ಸಿಎಂ ನಮ್ಮ ಜೊತೆ ಈಗ ಮಾತನಾಡಿಲ್ಲ. ಆದರೆ ಬಜೆಟ್ ವೇಳೆ ಪದಾಧಿಕಾರಿಗಳು ಹೋದಾಗ ಜಾರಿ ಮಾಡುತ್ತೇವೆ ಎಂದು ಹೇಳಿದ್ದರು ಅಷ್ಟೇ. ಆ ಬಳಿಕ ಅವರು ನಮಗೆ ಮನವರಿಕೆ ಮಾಡಿಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಮುಷ್ಕರ ಮಾಡುತ್ತೇವೆ ಎಂದು ತಿಳಿಸಿದರು.

    ಸಂಬಳದಲ್ಲಿ ರಾಜ್ಯ 30ನೇ ಸ್ಥಾನ: 2022ರಿಂದ ನೋಡುತ್ತಿದ್ದೇವೆ, ಯಾವುದೇ ಸಮಸ್ಯೆ ಬಗೆಹರಿಸಿಲ್ಲ. ಸಿಎಂ ಗಮನಕ್ಕೂ ತಂದೇ ಹೋರಾಟಕ್ಕೆ ಇಳಿಯುತ್ತಿದ್ದೇವೆ. ಸಮಿತಿ ರಚನೆ ಮಾಡಿ 4 ತಿಂಗಳಾಗಿದೆ. ವೇತನ ಆಯೋಗ ರಚನೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮ ಆಗಿಲ್ಲ. ಎಲ್ಲಾ ರೀತಿ ಯೋಚನೆ ಮಾಡಿ ನಿರ್ಧಾರ ಕೈಗೊಂಡಿದ್ದೇವೆ. ಪಾಠ ಮಾಡಿದವರು ಪರೀಕ್ಷೆ ಮಾಡಲ್ವಾ? ಎಲ್ಲಾ ರೀತಿಯ ಕೆಲಸ ಆಗುತ್ತಿದೆ. ವೈದ್ಯರು ಕೂಡ ಜೊತೆಯಲ್ಲಿದ್ದಾರೆ. ಟ್ಯಾಕ್ಸ್ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಆದರೆ ಸಂಬಳದಲ್ಲಿ 30ನೇ ಸ್ಥಾನದಲ್ಲಿದ್ದೇವೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಯಾವುದೇ ಇತರೆ ಕೆಲಸ ಇರುವುದಿಲ್ಲ. ಸರ್ಕಾರದ ಬಗ್ಗೆ ನನಗೆ ಗೌರವ ಇದೆ. ಯಡಿಯೂರಪ್ಪ ಅವರ ಬಗ್ಗೆ ಗೌರವ ಇದೆ. ಅವರು 7ನೇ ವೇತನ ಜಾರಿಗೆ ಸರ್ಕಾರವನ್ನು ಒತ್ತಾಯಿಸಿದ್ದರು ಎಂದು ಹೇಳಿದರು.

    ರಾಜ್ಯದಲ್ಲಿ 10 ಲಕ್ಷ ನೌಕರರು ಒಟ್ಟಾಗಿದ್ದೇವೆ. ಎಲ್ಲರೂ ನನಗೆ ಜವಾಬ್ದಾರಿ ನೀಡಿದ್ದಾರೆ. ಮುಷ್ಕರ ಮಾಡುವುದು ನಿಶ್ಚಿತವಾಗಿದ್ದು, ಎಲ್ಲಾ ಇಲಾಖೆಯ ಸಂಘಟನೆಯೂ ಒಟ್ಟಿಗೆ ಸೇರಿದ್ದೇವೆ. 27 ವರ್ಷದ ಬಳಿಕ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡುತ್ತಿದ್ದೇವೆ. ಎಸ್ಮಾ ಮಾಡಿದರೆ ಸ್ವಾಗತ ಮಾಡುತ್ತೇವೆ. ಶಿಕ್ಷಕರು, ಬಿಬಿಎಂಪಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಆದರೆ ನೌಕರರ ಮನಸ್ಥಿತಿ ವಿರುದ್ಧವಾಗಿ ನಾವು ಹೋಗಲ್ಲ. ಕಡಿಮೆ ವೇತನ ತೆಗೆದುಕೊಳ್ಳುತ್ತಿದ್ದೇವೆ. ಇದರಿಂದಾಗಿ ಯಾವ ತ್ಯಾಗಕ್ಕೂ ಕೂಡ ಸಿದ್ಧರಿದ್ದೇವೆ. ಅಮಾನತು, ವಜಾ ಸೇರಿದಂತೆ ಯಾವುದೇ ಕ್ರಮ ತೆಗೆದುಕೊಂಡರೂ ನಾವು ಸಿದ್ಧರಾಗಿದ್ದೇವೆ ಎಂದು ಎಚ್ಚರಿಕೆ ನೀಡಿದರು.

    ಉಪರಾಷ್ಟ್ರಪತಿ ಕಾರ್ಯಕ್ರಮಕ್ಕಷ್ಟೇ ಅವಕಾಶ: 12 ಸಾವಿರ ಕೋಟಿ ಹೆಚ್ಚುವರಿ ಹಣ ಬೇಕಾಗಲಿದೆ. ವೇತನ ಹೆಚ್ಚಳ ಉಳಿತಾಯದ ಹಣದ ಮೂಲಕ ಭರ್ತಿ ಮಾಡಬಹುದು. ನಾಗರಿಕರು ನಮ್ಮ ಹೋರಾಟಕ್ಕೆ ಸಹಕಾರ ನೀಡಬೇಕು ಎಂದ ಅವರು, ನಾಳೆ ಉಪರಾಷ್ಟ್ರಪತಿ ಕಾರ್ಯಕ್ರಮಕ್ಕೆ ಮಾತ್ರ ಚಾಲಕರನ್ನು ನೀಡುತ್ತೇವೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಯಾವ ನೌಕರರು ಹೋಗಲ್ಲ. ಲಿಖಿತ ಭರವಸೆಗೆ ನಾವು ರಾಜಿಯಾಗುವುದಿಲ್ಲ. ಸರ್ಕಾರಿ ಆದೇಶ ಆದರೆ ಮಾತ್ರ ನಾವು ಕೆಲಸಕ್ಕೆ ಹಾಜರಾಗುತ್ತೇವೆ ಎಂದರು.

    40% ವೇತನ ಹೆಚ್ಚಳಕ್ಕೆ ಒತ್ತಾಯ: ಇತ್ತೀಚಿನ ಸರ್ಕಾರಿ ನೌಕರರ ಸಂಘದ ಸಮಸ್ಯೆ ನಾಗರಿಕರಿಗೆ ಗೊತ್ತಾಗಿದೆ. ಶೇ. 40ರಷ್ಟು ವೇತನ ಹೆಚ್ಚಳ ಆಗಬೇಕು. ಎನ್‍ಪಿಎಸ್, ಒಪಿಎಸ್ ಆಗಬೇಕು. ಯಾವುದೇ ಕಾರಣಕ್ಕೂ ಹೋರಾಟ ಹಿಂಪಡೆಯಲ್ಲ ಅಂತ ಹೇಳಿದ್ದೇವೆ. 5 ರಾಜ್ಯಗಳ ಮಾದರಿಯಂತೆ ಎನ್‍ಪಿಎಸ್ ರದ್ದು ಮಾಡಿ, ಒಪಿಎಸ್ ಮಾಡಿ ಅಂತಾ ಆ ಬಗ್ಗೆ ಸಿಎಂ ಮಾತೇ ಆಡುತ್ತಿಲ್ಲ. ಈ ಬಗ್ಗೆ ಸರ್ಕಾರದಿಂದ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು. ಇದನ್ನೂ ಓದಿ: ಪಾನ್‌ಕಾರ್ಡ್ ಅಪ್ಡೇಟ್ ಮಾಡ್ಬೇಕು ಅಂತಾ ಕರೆ – ಲಿಂಕ್ ಒತ್ತಿದ ಪೊಲೀಸಪ್ಪನ 73 ಸಾವಿರ ಗುಳುಂ!

    ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತು ಬಳಕೆ ಬೆಲೆ ಹೆಚ್ಚಳ ಆಗಿದೆ. ಸರ್ಕಾರಿ ನೌಕರರ ಬಗ್ಗೆ ಮೃದು ಧೋರಣೆ ಇದೆಯಾ ಗೊತ್ತಿಲ್ಲ. ರಾಜ್ಯದ ಸರ್ಕಾರಿ ನೌಕರರಿಗೆ 12 ಸಾವಿರ ಕೋಟಿ ಖರ್ಚಾಗಲಿದೆ. ನಮಗೆ ಹೆಚ್ಚುವರಿ 16% ಪರ್ಸೆಂಟ್ ಮಾತ್ರ ವೆಚ್ಚ ಹೆಚ್ಚಾಗಲಿದೆ. ನಮಗೆ ಹೆಚ್ಚುವರಿ ಟ್ಯಾಕ್ಸ್ ಕಲೆಕ್ಟ್ ಮಾಡುವ ಜವಾಬ್ದಾರಿ ನೀಡಲಿ. ದುಡಿಯುವ ಸಮಯ ಹೆಚ್ಚಳ ಮಾಡಲಿ. ಎಲ್ಲದಕ್ಕೂ ನಾವು ಸಿದ್ಧರಾಗಿದ್ದೇವೆ ಎಂದು ಖಡಕ್ಕಾಗಿ ತಿಳಿಸಿದರು. ಇದನ್ನೂ ಓದಿ: ಹೆಚ್ಚುತ್ತಿರುವ ತಾಪಮಾನ, ಮಾರ್ಚ್‌ನಿಂದ ಮೇವರೆಗೂ ಹೈ ಅಲರ್ಟ್ 

  • ಬಿಬಿಎಂಪಿಯಲ್ಲಿ ರಾತ್ರೋ ರಾತ್ರಿ ದೇವರ ಪ್ರತಿಷ್ಠಾಪನೆ!

    ಬಿಬಿಎಂಪಿಯಲ್ಲಿ ರಾತ್ರೋ ರಾತ್ರಿ ದೇವರ ಪ್ರತಿಷ್ಠಾಪನೆ!

    ಬೆಂಗಳೂರು: ಬಿಬಿಎಂಪಿಯಲ್ಲಿ ರಾತ್ರೋ ರಾತ್ರಿ ದೇವರ ಪ್ರತಿಷ್ಠಾಪನೆ ನಡೆದಿದೆ. ನಿವೃತ್ತ ನೌಕರರ ಕಟ್ಟಡ ನಿರ್ಮಾಣಕ್ಕೆ ಬ್ರೇಕ್ ಹಾಕುವ ಸಲುವಾಗಿಯೇ ಅಭಯ ಆಂಜನೇಯ ಉದ್ಭವಿಸಿದ್ದಾನೆ.

    ನಿವೃತ್ತ ನೌಕರರ ಭವನ ನಿರ್ಮಾಣ ತಡೆಗಟ್ಟಲು ಹಾಲಿ ನೌಕರರ ಸಂಘ ಕಸರತ್ತು ನಡೆಸಿದೆ. ಥೇಟ್ ಸಿನಿಮಾ ಸ್ಟೈಲ್ ನಲ್ಲಿ ಹನುಮನ ವಿಗ್ರಹ ಪ್ರತಿಷ್ಠಾಪಿಸಿ ಹೊಸ ಭವನ ನಿರ್ಮಾಣಕ್ಕೆ ಕಲ್ಲು ಹಾಕುವ ಪ್ರಯತ್ನವನ್ನು ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತೇಶ್‍ ಮಾಡುತ್ತಾ ಇದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಬಿಬಿಎಂಪಿ ಜಾಗದಲ್ಲಿ ನಿವೃತ್ತ ನೌಕರರ ಭವನ ನಿರ್ಮಾಣ ಮಾಡುವುದಕ್ಕೆ ಬಿಬಿಎಂಪಿ ಕೌನ್ಸಿಲ್ ಅನುಮತಿ ಕೊಟ್ಟಿದೆ. ಅಷ್ಟೇ ಅಲ್ಲದೇ 2018-19ನೇ ಸಾಲಿನ ಬಿಬಿಎಂಪಿ ಬಜೆಟ್ ನಲ್ಲಿ 40 ಲಕ್ಷ ಅನುದಾನ ಸಹ ನೀಡಲಾಗಿದೆ. ಆದರೆ ಅಮೃತೇಶ್‍ ಗೆ ನಿವೃತ್ತ ನೌಕರರ ಮೇಲೆ ಅದೇನ್ ಸಿಟ್ಟೋ ಏನೋ, ನಿವೃತ್ತ ಬಿಬಿಎಂಪಿ ನೌಕರರ ಭವನ ನಿರ್ಮಾಣಕ್ಕೆ ಅವಕಾಶ ನೀಡದಂತೆ ಆಯುಕ್ತರು ಹಾಗೂ ಮೇಯರ್‍ಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    ಅಮೃತೇಶ್ ಮನವಿಗೆ ಕಿಮ್ಮತ್ತು ಸಿಕ್ಕಿರಲಿಲ್ಲ. ಹೀಗಾಗಿ ದಿಢೀರ್ ಎಂದು ಹನುಮನ ವಿಗ್ರಹ ಪ್ರತಿಷ್ಠಾಪಿಸಿರುವ ಅವರು, ಅದಕ್ಕೆ ನಿತ್ಯ ಪೂಜೆ ಬೇರೆ ಮಾಡುತ್ತಾ ಇದ್ದಾರೆ. ಇದೀಗ ಇದಕ್ಕೆ ವ್ಯಾಪಕ ವಿರೋಧ ಕೂಡ ವ್ಯಕ್ತವಾಗುತ್ತಿದೆ.