Tag: ನೇಪಾಳ

  • ಇದು GEN-Z ಯುಗ – ಈ ಜನರೇಷನ್‌ ಬಗ್ಗೆ ನಿಮಗೆಷ್ಟು ಗೊತ್ತು?

    ಇದು GEN-Z ಯುಗ – ಈ ಜನರೇಷನ್‌ ಬಗ್ಗೆ ನಿಮಗೆಷ್ಟು ಗೊತ್ತು?

    ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವ ಒಂದು ಪದವೆಂದರೆ ಅದು GEN-Z. ಎಲ್ಲರ ಬಾಯಲ್ಲಿಯೂ ಅದೊಂದೇ. ದೈನಂದಿನ ಜೀವನದಲ್ಲಿ, ದಿನನಿತ್ಯದ ಕ್ರಿಯೆಗಳಲ್ಲಿ, ತಂತ್ರಜ್ಞಾನದಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಎಲ್ಲೆಡೆಯೂ ಅದರ ಧ್ಯಾನವೇ ಎಂದರೆ ತಪ್ಪಾಗಲಿಕ್ಕಿಲ್ಲ. ಈಗಿನ ಪ್ರಸ್ತುತ ಜಗತ್ತಿನಲ್ಲಿ ತಮ್ಮ ಕೌಶಲ್ಯ ಹಾಗೂ ಇನ್ನಿತರ ಕ್ರಿಯೆಗಳ ಮೂಲಕ ಇಂದಿನ ಯುವಕರು GEN-Z ಎಂಬ ಹೊಸ ಯುಗವನ್ನು ಸೃಷ್ಟಿಸಿದ್ದಾರೆ. 

    ಹೌದು, ಏನಿದು GEN-Z? ಇಂದಿನ ಪೀಳಿಗೆಗೂ GEN-Z ಗೂ ಏನು ಸಂಬಂಧ? ಎಂದು ಹಲವರಲ್ಲಿ ಈ ಪ್ರಶ್ನೆ ಮೂಡಿದ್ದು ನೂರಕ್ಕೂ ನೂರರಷ್ಟು ಸತ್ಯ. ಸರಳ ಪದದಲ್ಲಿ ಹೇಳುವುದಾದರೆ GEN-Z ಎಂದರೆ ಇಂದಿನ ಪ್ರಸ್ತುತ ಜಗತ್ತು ಎನ್ನಬಹುದು.    ವಿವರವಾಗಿ ಏನಿದು GEN-Z? ಎನ್ನುವ ಎಲ್ಲ ಪ್ರಶ್ನೆಗಳಿಗೂ ವಿವರವಾದ ಮಾಹಿತಿ ಇಲ್ಲಿದೆ. 

    ಏನಿದು GEN-Z?

    ಪ್ರಾರಂಭದಿಂದಲೂ ಭೂಮಿ ಉಗಮವಾದಾಗಿನಿಂದ ಒಂದೊಂದು ಆಗಿ ಹೊಸತಾದ ಸೃಷ್ಟಿಗಳಾಗುತ್ತಿವೆ. ದಿನಕ್ಕೊಂದು ಹೊಸ ಹೊಸ ಆವಿಷ್ಕಾರಗಳು ಆಗುತ್ತಿವೆ. ಹೀಗಿರುವಾಗ ಹೊಸ ಸಂಶೋಧನೆ ಹಾಗೂ ಹೊಸ ಹೊಸ ಕಲ್ಪನೆಗಳಿಗೆ ಇಂದಿನ ಯುವಕರ ಪಾತ್ರವೂ ಕೂಡ ಇದೆ. ಅದೇ ರೀತಿ ಕ್ರಿ.ಶ ಪ್ರಾರಂಭವಾದಾಗಿನಿಂದ ಇತಿಹಾಸವನ್ನು ನಾವು ನೋಡುತ್ತಾ ಬಂದರೆ ಹೊಸತನವನ್ನು ಕಾಣಬಹುದು. ಇನ್ನು ಸ್ವತಂತ್ರ ಪೂರ್ವ ಭಾರತಕ್ಕೂ ಹಾಗೂ ಸ್ವಾತಂತ್ರೋತ್ತರ ಭಾರತಕ್ಕೂ ತುಂಬಾ ವ್ಯತ್ಯಾಸವಿದೆ. ಇದೆಲ್ಲದಕ್ಕೂ ಆ ಕಾಲದ ಅಥವಾ ಆ ಯುಗದ ಜನರ, ಅಂದಿನ ಯುವಕರ ಪಾತ್ರ ಪ್ರಮುಖವಾದದ್ದು. ಅದರಂತೆ 1997ರ ಮಧ್ಯದಿಂದ 2012ರ ಮೊದಲ ಭಾಗದವರೆಗೆ ಜನಿಸಿದ ಮಕ್ಕಳನ್ನು ನಾವು GEN-Z ಯುಗದವರು ಎಂದು ಕರೆಯಲಾಗುತ್ತದೆ. ಈ ಯುಗದಲ್ಲಿ ಹುಟ್ಟಿದ ಮಕ್ಕಳು ಜಗತ್ತಿನಲ್ಲಿ ಪ್ರಾರಂಭವಾದ ಕೌತುಕ ಮೂಡಿಸುವ ತಾಂತ್ರಿಕ ಯುಗದೊಂದಿಗೆ ಬೆಳೆದವರು. ಅದಲ್ಲದೆ ಈ ಮಕ್ಕಳು ಹೊಸ ಹೊಸ ಸಂಸ್ಕೃತಿ ಹಾಗೂ ವಿಭಿನ್ನ ಕಲೆಯನ್ನು ತಮ್ಮೊಂದಿಗೆ ಬೆಳೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಯುಗದ ಮಕ್ಕಳನ್ನು GEN-Z ಎಂದು ಕರೆಯುತ್ತಾರೆ. 

    GEN-Z ಯುಗದ ವಿಭಿನ್ನತೆಯೇನು? 

    • ಯಾವಾಗ ಭೂಮಿಯ ಮೇಲೆ ಇಂಟರ್ನೆಟ್ ಪ್ರಾರಂಭವಾಯಿತು ಅದೇ ಸಮಯದೊಂದಿಗೆ ಜನಿಸಿದ ಮಕ್ಕಳೇ ಇವರು. 
    • ಅದಲ್ಲದೆ ಡಿಜಿಟಲ್ ಯುಗ ಸೇರಿದಂತೆ ಇನ್ನಿತರ ಬದಲಾವಣೆಗಳೊಂದಿಗೆ ಈ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಂಡರು.
    • 1990ಕ್ಕು ಮುನ್ನ ಮೊಬೈಲ್ ಎನ್ನುವುದು ಒಂದು ವಸ್ತುವಾಗಿತ್ತು. ಆದರೆ ಇದರ ನಂತರ ಇಂಟರ್ನೆಟ್ ಪ್ರಾರಂಭವಾದಂತೆ ಮೊಬೈಲ್ ಎಂಬುದು ಜೀವನದ ಒಂದು ಅವಿಭಾಜ್ಯ ಅಂಗವಾಗಿ ಬದಲಾಗಲು ಪ್ರಾರಂಭವಾಯಿತು. 
    • ಈ GEN-Z ಯುಗವು ಇಂಟರ್ನೆಟ್, ಸೋಶಿಯಲ್ ಮೀಡಿಯಾ ಮತ್ತು ಮೊಬೈಲ್ ಜ್ಞಾನದೊಂದಿಗೆ ಬೆಳೆದು ಬಂದ ಮೊದಲ ಪೀಳಿಗೆ ಇದಾಗಿದೆ.
    • ಈ ಪೀಳಿಗೆ ವರ್ಚುಯಲ್ ಹಾಗೂ ಆಫ್ಲೈನ್ ಅನುಭವಗಳನ್ನ ಪಡೆದುಕೊಳ್ಳುತ್ತಾ ಬೆಳೆದ ಯುಗ ಇದಾಗಿದೆ. ಅತ್ಯಂತ ವೈವಿಧ್ಯಮಯ ಯುಗ ಎಂದರೆ ತಪ್ಪಾಗಲಿಕ್ಕಿಲ್ಲ. 
    • ಈ ಯುಗದಲ್ಲಿ ಪ್ರಾರಂಭವಾದ ಪ್ರತಿಯೊಂದು ತಂತ್ರಜ್ಞಾನ ಸಮಾಜಕ್ಕೆ ಹೆಚ್ಚಿನ ಲಾಭವನ್ನು ಕೊಡುತ್ತಲೇ ಬರುತ್ತದೆ. 
    • 1997 ರಿಂದ 2012ರ ಮಧ್ಯದಲ್ಲಿ ಜನಿಸಿದ 13 ರಿಂದ 28 ವರ್ಷದ ಒಳಗಿನವರನ್ನು ಈ GEN-Z ಗೆ ಸೇರಿಸಲಾಗುತ್ತದೆ. 
    • ಇನ್ನು GEN-Z ಸಮಯದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಬಂದ ನಂತರ ಇದರ ಬಳಕೆ ಹೆಚ್ಚಾಗಿ ಪ್ರಾರಂಭವಾಯಿತು. ಮೊಬೈಲ್, ಸಾಮಾಜಿಕ ಮಾಧ್ಯಮ ಹಾಗೂ ಅಂತರ್ಜಾಲದ ಪ್ರಭಾವ ಜನರ ಮೇಲೆ ಹೆಚ್ಚಾಗಲು ಪ್ರಾರಂಭಿಸಿತು.  

    GEN-Zಗೂ ಮುನ್ನ ಇದೇ ರೀತಿ ಹಲವು ಯುಗಗಳೆಂದು ಗುರುತಿಸಲಾಗಿತ್ತು. 

    • The Greatest Generation 1901-1927 : ಈ ಪೀಳಿಗೆಯು ಎರಡನೇ ಮಹಾಯುದ್ಧದ ಸಮಯದಲ್ಲಿ ಪ್ರಬುದ್ಧವಾಯಿತು. ಈ ಸಮಯದಲ್ಲಿ ತಮ್ಮ ಕೆಲಸ ಹಾಗೂ ತ್ಯಾಗದಿಂದಲೇ ಹೆಸರುವಾಸಿಯಾಗಿದ್ದಾರೆ. 
    • The Silent Generation 1928-1945:  Greatest Generation ಪೀಳಿಗೆಯ ನೆರಳಿನಲ್ಲಿ ಬೆಳೆದ ಈ ಯುಗವು ಯುದ್ಧದ ಸಮಯದಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಿಸಿತು. 
    • Baby Boomers 1946-1964: ಎರಡನೇ ಮಹಾಯುದ್ಧದ ನಂತರ ಸಂಭವಿಸಿದ “ಬೇಬಿ ಬೂಮ್” ನಿಂದ ಈ ಪೀಳಿಗೆಗೆ ಈ ಹೆಸರು ಬಂದಿದೆ. ಬೂಮರ್‌ಗಳು 1960 ಮತ್ತು 70ರ ದಶಕದ ಸಾಮಾಜಿಕ ಮತ್ತು ರಾಜಕೀಯ ಚಳುವಳಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, 
    • Generation X 1965-1980: ಒಂದೇ ಕುಟುಂಬದಲ್ಲಿ ಇಬ್ಬರು ಆದಾಯ ಪಡೆಯುವವರು ಹಾಗೂ  ತಾಯಿ ಅಥವಾ ತಂದೆ ಮಾತ್ರ ಇರುವ ಕುಟುಂಬದಲ್ಲಿ ಕೆಲವು ಮಕ್ಕಳು ಅಗತ್ಯ ಮೀರಿ ಕಾಳಜಿಯಲ್ಲಿ  ಬೆಳೆದವು. ಹೀಗಾಗಿ ಜೆನ್ X ಎಂದು ಕರೆದರು. ಇದೇ ಯುಗದಲ್ಲಿ ಕಂಪ್ಯೂಟರ್‌ ಹಾಗೂ ತಂತ್ರಜ್ಞಾನದ ಉದಯವಾಯಿತು.
    • Millennials 1981-1996: ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮದ ಬೆಳವಣಿಗೆಯೊಂದಿಗೆ ಬೆಳೆದ ಮೊದಲ ಪೀಳಿಗೆ. 
    • Generation Z  1997-2012:1997ರ ಮಧ್ಯದಿಂದ 2012ರ ಮೊದಲ ಭಾಗದವರೆಗೆ ಜನಿಸಿದ ಮಕ್ಕಳನ್ನು ನಾವು GEN-Z ಯುಗದವರು ಎಂದು ಕರೆಯಲಾಗುತ್ತದೆ. ಈ ಯುಗದಲ್ಲಿ ಹುಟ್ಟಿದ ಮಕ್ಕಳು ಜಗತ್ತಿನಲ್ಲಿ ಪ್ರಾರಂಭವಾದ ಕೌತುಕ ಮೂಡಿಸುವ ತಾಂತ್ರಿಕ ಯುಗದೊಂದಿಗೆ ಬೆಳೆದವರು. ಅದಲ್ಲದೆ ಈ ಮಕ್ಕಳು ಹೊಸ ಹೊಸ ಸಂಸ್ಕೃತಿ ಹಾಗೂ ವಿಭಿನ್ನ ಕಲೆಯನ್ನು ತಮ್ಮೊಂದಿಗೆ ಬೆಳೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಯುಗದ ಮಕ್ಕಳನ್ನು GEN-Z ಎಂದು ಕರೆಯುತ್ತಾರೆ. 
    • Generation Alpha 2013-2024: GEN-Z ಪ್ರಾರಂಭವಾದಂತೆ 2012ರ ನಂತರ ಅಂದರೆ 2013 ರಿಂದ 2020 ರ ವರೆಗೆ ಜನಿಸಿದ ಮಕ್ಕಳನ್ನು ಈ ಯುಗಕ್ಕೆ ಸೇರಿಸಲಾಗುತ್ತದೆ. GEN-Z ಯುಗವನ್ನು ಸಂಪೂರ್ಣವಾಗಿ ಅನುಸರಿಸಿಕೊಂಡು ಬಂದ ಯುಗವನ್ನು GEN- ALPHA ಎಂದು ಕರೆಯಲಾಗುತ್ತದೆ. ಈ ಯುಗದಲ್ಲಿ ಕೃತಕ ಬುದ್ಧಿಮತ್ತೆಯನ್ನು ತಮ್ಮ ದೈನಂದಿನ ಜೀವನದ ಭಾಗವನ್ನಾಗಿಸಿಕೊಂಡು ಡಿಜಿಟಲ್‌ ಜಗತ್ತಿನಲ್ಲಿ ಮುಂದುವರೆಯುತ್ತಿದ್ದಾರೆ.
    • Generation Beta 2025-2039: ಇದು ಮುಂದಿನ ಪೀಳಿಗೆಯಾಗಿದ್ದು, ಇವರನ್ನು ಜೆನ್‌ Z ನ ಮಕ್ಕಳು ಎನ್ನುತ್ತಾರೆ. 

    GEN-Zಗೂ ನೇಪಾಳ ದಂಗೆಗೂ ಸಂಬಂಧವೇನು?

    ಇತ್ತೀಚಿಗೆ ನೇಪಾಳದಲ್ಲಿ ಯುವಜನರ ದಂಗೆ ಭುಗಿಲೆದ್ದಿತ್ತು. ಹೌದು ನೇಪಾಳ ಸರ್ಕಾರವು ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳನ್ನು ಬಂದ್ ಮಾಡಿದ ಪರಿಣಾಮ ದೊಡ್ಡಮಟ್ಟದ ದಂಗೆ ಪ್ರಾರಂಭವಾಗಿತ್ತು. ಈ ಸಮಯದಲ್ಲಿ ಅಲ್ಲಿನ ಯುವಕರು ವಿಪರೀತಮಟ್ಟಕ್ಕೆ ಹೋಗಿ ಆಕ್ರೋಶ ಹೊರಹಾಕಿದರು. ಈ ವೇಳೆ ಈ ದಂಗೆಗೆ ನಿಂತ ಆ ಯುವಪೀಳಿಗೆ GEN-Z ಯುಗಕ್ಕೆ ಸೇರಿದ್ದು. 

    ನೇಪಾಳ ಸರ್ಕಾರ ದೇಶದಲ್ಲಿ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳನ್ನು ನಿಯಂತ್ರಣಕ್ಕೆ ತರುವ ದೃಷ್ಟಿಯಿಂದ ಕೆಲವು ನಿಯಮಗಳನ್ನ ಜಾರಿ ಮಾಡಿತು. Social networks use management directive 2023ರ ಅಡಿಯಲ್ಲಿ ಸ್ಥಳೀಯವಾಗಿರಲಿ ಅಥವಾ ಬೇರೆ ದೇಶದ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಆಗಿರಲಿ. ಇದೆಲ್ಲವನ್ನ ನಿಯಂತ್ರಣಕ್ಕೆ ತರುವ ದೃಷ್ಟಿಯಿಂದ  ನೇಪಾಳದ ಸಂವಾದ, ಮಾಧ್ಯಮ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನಿರ್ಧರಿಸಿತ್ತು. ಈ ಸಚಿವಾಲಯದ ಅಡಿಯಲ್ಲಿ ಪ್ಲಾಟ್ ಫಾರ್ಮ್ ಗಳು ನೋಂದಣಿ ಮಾಡಿಸಿಕೊಳ್ಳಬೇಕಿತ್ತು. ಈ ನೋಂದಣಿಗಾಗಿ ಒಂದು ಸೀಮಿತ ಅವಧಿಯನ್ನು ನೀಡಿತ್ತು. ಒಂದು ವೇಳೆ ನೋಂದಣಿ ಮಾಡಿಕೊಳ್ಳದಿದ್ದರೆ ಫ್ಲಾಟ್ ಫಾರ್ಮ್ ಗಳನ್ನು ನಿರ್ಬಂಧ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆ ನಿಯಮಗಳನ್ನು ಪಾಲಿಸಿದ ಪ್ಲಾಟ್ ಫಾರ್ಮ್ ಗಳನ್ನು ಮುಕ್ತಾಯ ದಿನಾಂಕದ ಬಳಿಕ ನಿರ್ಬಂಧಿಸಿತ್ತು. ಅದರಂತೆ ನೇಪಾಳದಲ್ಲಿ ಸೆಪ್ಟಂಬರ್ 4ರಂದು ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಪ್, ಯೂಟ್ಯೂಬ್, X ಸೇರಿದಂತೆ 26 ಸಾಮಾಜಿಕ ಮಾಧ್ಯಮ ಆಪ್ ಹಾಗೂ ಸೈಟ್ಗಳ ಮೇಲೆ ನಿರ್ಬಂಧ ಹೇರಿತ್ತು. 

    ನಿರ್ಬಂಧದ ಬೆನ್ನಲ್ಲೇ ಈ GEN-Z ಯುವಕರು ಪ್ರತಿಭಟನೆಗಿಳಿದರು. ಯುವಕರ ಮೇಲಿನ ವಾಕ್ ಸ್ವಾತಂತ್ರ್ಯ ಕಸಿದುಕೊಂಡಿತು ಹಾಗೂ ಈ ಮೂಲಕ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಯುವಕರು ಮುಗಿಬಿದ್ದರು. ನೇಪಾಳದ ರಾಜಧಾನಿ ಕಠ್ಮಂಡು ಸೇರಿದಂತೆ ಬೇರೆ ಬೇರೆ ನಗರಗಳಲ್ಲಿ ಆಕ್ರೋಶ ಹೊರಹಾಕಿದರು. 

    ಈ ಪ್ರತಿಭಟನೆಯಲ್ಲಿ 72 ಜನರು ಸಾವನ್ನಪ್ಪಿದರೆ, ಇನ್ನು ಹಲವರು ಗಾಯಗೊಂಡರು. ಈ ಪ್ರತಿಭಟನೆ ಬಳಿಕ ಸೆಪ್ಟೆಂಬರ್ 8-9ರ ನಡುವೆ ನೇಪಾಳ ಸರ್ಕಾರ ತನ್ನ ಸೋಶಿಯಲ್ ಮೀಡಿಯಾ ಬ್ಯಾನ್ ನಿರ್ಧಾರವನ್ನು ಹಿಂತೆಗೆದುಕೊಂಡಿತು. ಅದರಂತೆ ಸದ್ಯ ಬ್ಯಾನ್ ಆಗಿದ್ದ 26 ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ಗಳು ಮತ್ತೆ ಕಾರ್ಯಾರಂಭಿಸಿದವು.

  • ಅಧಿಕಾರದ ಆಸೆಯಿಂದ ಬಂದಿಲ್ಲ, 6 ತಿಂಗಳಿಗಿಂತ ಹೆಚ್ಚು ದಿನ ಇರಲ್ಲ: ನೇಪಾಳ ಪ್ರಧಾನಿ

    ಅಧಿಕಾರದ ಆಸೆಯಿಂದ ಬಂದಿಲ್ಲ, 6 ತಿಂಗಳಿಗಿಂತ ಹೆಚ್ಚು ದಿನ ಇರಲ್ಲ: ನೇಪಾಳ ಪ್ರಧಾನಿ

    ಕಠ್ಮಂಡು: ನಾನು ಅಧಿಕಾರದ ಆಸೆಯಿಂದ ಬಂದಿಲ್ಲ, 6 ತಿಂಗಳಿಗಿಂತ ಹೆಚ್ಚು ದಿನ ಇರಲ್ಲ ಎಂದು ನೇಪಾಳದ ನೂತನ ಹಂಗಾಮಿ ಪ್ರಧಾನಿ ಸುಶೀಲಾ ಕರ್ಕಿ (Sushila Karki) ಹೇಳಿದ್ದಾರೆ.

    ಹಂಗಾಮಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಹೊಸ ಸಂಸತ್ತಿಗೆ ಜವಾಬ್ದಾರಿಯನ್ನು ಹಸ್ತಾಂತರಿಸುತ್ತೇವೆ. ನಿಮ್ಮ ಬೆಂಬಲವಿಲ್ಲದೆ ನಾವು ಯಶಸ್ವಿಯಾಗುವುದಿಲ್ಲ. ಕೆ.ಪಿ.ಶರ್ಮಾ ಓಲಿ (KP Sharma Oli) ಸರ್ಕಾರ ಉರುಳಿಸಿದ ಭ್ರಷ್ಟಾಚಾರದ ವಿರುದ್ಧ ರಾಷ್ಟ್ರವ್ಯಾಪಿ ‘ಜೆನ್-ಝಡ್’ ಪ್ರತಿಭಟನೆಗಳನ್ನು (Gen-Z Protests) ಶ್ಲಾಘಿಸಿದರು. ಅಲ್ಲದೇ ಆಂದೋಲನದ ಸಮಯದಲ್ಲಿ ಕೊಲ್ಲಲ್ಪಟ್ಟವರನ್ನು ‘ಹುತಾತ್ಮರು’ ಎಂದು ಗುರುತಿಸಲಾಗುವುದು ಎಂದು ಕರ್ಕಿ ಹೇಳಿದ್ದಾರೆ. ಪ್ರತಿ ಸಂತ್ರಸ್ತ ಕುಟುಂಬಗಳಿಗೆ 1 ಮಿಲಿಯನ್ ನೇಪಾಳಿ ರೂಪಾಯಿಗಳ ಪರಿಹಾರವನ್ನೂ ಘೋಷಿಸಿದ್ದಾರೆ. ಇದನ್ನೂ ಓದಿ: ಅಸ್ಸಾಂನ ಗುವಾಹಟಿಯಲ್ಲಿ 5.8 ತೀವ್ರತೆಯ ಭೂಕಂಪ – ಉತ್ತರ ಬಂಗಾಳ, ಭೂತಾನ್‌ನಲ್ಲೂ ಕಂಪನ

    ಇನ್ನು, ನೇಪಾಳದಲ್ಲಿ ಸಿಲುಕಿದ್ದ 28 ಕನ್ನಡಿಗರು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ನೇಪಾಳದ ಕರಾಳತೆಯನ್ನು ಕನ್ನಡಿಗರು ಪಬ್ಲಿಕ್ ಟಿವಿ ಮುಂದೆ ಬಿಚ್ಚಿಟ್ಟಿದ್ದಾರೆ. ಒಂದೊಂದು ಕ್ಷಣವೂ ಭಯಾನಕ, ಕಣ್ಣ ಮುಂದೆಯೇ ಸಾವಿನ ಸೂಚನೆಯಿತ್ತು. ಕನ್ನಡಿಗರಿದ್ದ ಬಸ್ಸನ್ನೇ ಕಿತ್ತುಕೊಂಡರು. ನಾಲ್ಕು ಕಿ.ಮೀ ನಡೆದುಕೊಂಡೇ ಬಂದೆವು. ನಡೆದುಕೊಂಡು ಬರುತ್ತಿದ್ದ ದಾರಿಯುದ್ದಕ್ಕೂ ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಂಡು ಬಂದಂತಾಗಿದೆ. ಕನ್ನಡಿಗರಿದ್ದ ಹೊಟೇಲ್‌ಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಲು ಮುಂದಾಗಿದ್ದರು ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವ ಸುಳಿವು ನೀಡಿದ್ರಾ ಸಿಎಂ?

    ಸಂಕಷ್ಟಕ್ಕೆ ಸಿಲುಕಿದಾಗ ನಮ್ಮ ಸರ್ಕಾರದಿಂದಲೇ ಸ್ಪಂದನೆ ಸಿಗಲಿಲ್ಲ. ರಕ್ಷಣೆ ಮಾಡಲಿಲ್ಲ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನೇಕಲ್ ಶಾಸಕ ಶಿವಣ್ಣ, ಸಚಿವ ರಾಮಲಿಂಗಾರೆಡ್ಡಿ ಮಾತ್ರ ಸ್ಪಂದಿಸಿದ್ರು ಎಂದು ಸರ್ಕಾರದ ವಿರುದ್ಧ ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಹಾಸಭೆಯಿಂದ ಗೊಂದಲ ಸೃಷ್ಟಿ: ಬೊಮ್ಮಾಯಿ

  • ನೇಪಾಳ ಹಂಗಾಮಿ ಪ್ರಧಾನಿ ಸುಶೀಲಾ ಕರ್ಕಿಗೆ ಶುಭ ಕೋರಿದ ಪ್ರಧಾನಿ ಮೋದಿ

    ನೇಪಾಳ ಹಂಗಾಮಿ ಪ್ರಧಾನಿ ಸುಶೀಲಾ ಕರ್ಕಿಗೆ ಶುಭ ಕೋರಿದ ಪ್ರಧಾನಿ ಮೋದಿ

    ನವದೆಹಲಿ: ನೇಪಾಳದ (Nepal) ಹಂಗಾಮಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ (Sushila Karki) ಅವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಭ ಕೋರಿದ್ದಾರೆ.

    ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಅಭಿನಂದನೆ ಸಲ್ಲಿಸಿದ ಅವರು, ನೇಪಾಳದ ಮಧ್ಯಂತರ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಗೌರವಾನ್ವಿತ ಸುಶೀಲಾ ಕರ್ಕಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನೇಪಾಳದ ಸಹೋದರ, ಸಹೋದರಿಯರ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಭಾರತ ಸಂಪೂರ್ಣವಾಗಿ ಬದ್ಧವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ನೇಪಾಳಕ್ಕೆ ಮೊದಲ ಮಹಿಳಾ ಪ್ರಧಾನಿ – ಪ್ರಮಾಣವಚನ ಸ್ವೀಕರಿಸಿದ ಸುಶೀಲಾ ಕರ್ಕಿ

    ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ಮಧ್ಯಂತರ ಪ್ರಧಾನಿಯಾಗಿ ಶುಕ್ರವಾರ ರಾತ್ರಿ ಪ್ರಮಾಣ ವಚನ ಸ್ವೀಕರಿಸಿದರು. ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರು ಕರ್ಕಿ ಅವರಿಗೆ ಪ್ರಮಾಣ ವಚನ ಬೋಧಿಸಿದರು.

    ಸಾಮಾಜಿಕ ಜಾಲತಾಣಗಳ ನಿಷೇಧ ಮತ್ತು ಭ್ರಷ್ಟಾಚಾರದ ವಿರುದ್ಧ ನೇಪಾಳ ಜನತೆ ಸಿಡಿದೆದ್ದು ಭಾರೀ ಪ್ರತಿಭಟನೆ ನಡೆಸಿದ್ದರು. ಸರ್ಕಾರಿ ಕಚೇರಿಗಳು, ಸಂಸತ್ ಭವನಕ್ಕೆ ನುಗ್ಗಿ ಧ್ವಂಸಗೊಳಿಸಿದರು. ಸಚಿವರನ್ನು ಹಿಡಿದು ಥಳಿಸಿದರು. ಪ್ರತಿಭಟನೆ ತೀವ್ರತೆ ಅರಿತು ಪ್ರಧಾನಿ ಸ್ಥಾನಕ್ಕೆ ಕೆ.ಪಿ.ಶರ್ಮಾ ಓಲಿ (KP Sharma Oli)  ರಾಜೀನಾಮೆ ನೀಡಿದರು.

  • ನೇಪಾಳದಲ್ಲಿ ಸಿಲುಕಿರುವ ಹುಬ್ಬಳ್ಳಿಯ ಐವರು – ಭಾರತಕ್ಕೆ ಮರಳಲಾಗದೇ ಪರದಾಟ

    ನೇಪಾಳದಲ್ಲಿ ಸಿಲುಕಿರುವ ಹುಬ್ಬಳ್ಳಿಯ ಐವರು – ಭಾರತಕ್ಕೆ ಮರಳಲಾಗದೇ ಪರದಾಟ

    ಹುಬ್ಬಳ್ಳಿ: ನೇಪಾಳಕ್ಕೆ (Nepal) ತೀರ್ಥಯಾತ್ರೆಗೆಂದು ತೆರಳಿದ್ದ ಹುಬ್ಬಳ್ಳಿಯ (Hubballi) ಐವರು ಕಠ್ಮಂಡುವಿನಲ್ಲಿ ಸಿಲುಕಿದ್ದು, ಭಾರತಕ್ಕೆ ಸುರಕ್ಷಿತವಾಗಿ ವಾಪಸಾಗಲು ಆಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ.

    ಹುಬ್ಬಳ್ಳಿ ಕೇಶ್ವಪುರದ ಗಾಡಸನ್ ಅಪಾರ್ಟ್ಮೆಂಟ್ ನಿವಾಸಿಗಳು ಆ.31 ರಂದು ಖಾಸಗಿ ಕಂಪನಿಯ ಟೂರ್ ಪ್ಯಾಕೇಜ್ ಮೂಲಕ ಹುಬ್ಬಳ್ಳಿಯಿಂದ ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋಗಿದ್ದರು. ಬಿಂದುಮಾಧವ ಕುಲಕರ್ಣಿ (70), ಸುಂದರಾ ಕುಲಕರ್ಣಿ (65), ವಿದ್ಯಾ ಜೋಶಿ (65), ನರೇಂದ್ರ ಜೋಶಿ (70) ನೇಪಾಳ ಗಲಭೆಗೂ ಮುನ್ನ ಮಾನಸ ಸರೋವರಕ್ಕೆ ತೆರಳಿದ್ದರು. ಇದನ್ನೂ ಓದಿ: ಪ್ರತಿಭಟನಾಕಾರರಿಂದ ಹೋಟೆಲ್‌ಗೆ ಬೆಂಕಿ – ನೇಪಾಳದಲ್ಲಿ ಭಾರತದ ಮಹಿಳೆ ದುರ್ಮರಣ

    ನರೇಂದ್ರ ಜೋಶಿ ಅವರಿಗೆ ಸರೋವರದ ಸಮೀಪದಲ್ಲಿ ಆಮ್ಲಜನಕದ ಕೊರತೆಯಿಂದ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯನ್ನು ಮಾನಸ ಸರೋವರದ ಬಳಿಯೇ ಮಾಡಿದ್ದ ಉಳಿದವರು, ಅಲ್ಲಿಂದ ಮರು ಪ್ರಯಾಣ ಬೆಳೆಸಿ ಗಲಭೆಗೂ ಮುನ್ನ ನೇಪಾಳದ ಕಠ್ಮಂಡುಗೆ ತಲುಪಿದ್ದರು.

    ಇದೇ ವೇಳೆ ನೇಪಾಳದಲ್ಲಿ ಉಗ್ರ ಹೋರಾಟ ಆರಂಭವಾಗಿತ್ತು. ಹೀಗಾಗಿ, ನೇಪಾಳದಿಂದ ಹೊರಬರಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇವರಿಗೆ ಸಹಾಯ ಮಾಡಲು ಸತೀಶ್ ಕುಲಕರ್ಣಿ ಪುತ್ರ ಸಚಿನ್ ಕುಲಕರ್ಣಿ ನೇಪಾಳಕ್ಕೆ ತೆರಳಿದ್ದರು. ಇದೀಗ ಸಚಿನ್ ಕುಲಕರ್ಣಿ ಸೇರಿ ಐವರು ನೇಪಾಳದಲ್ಲಿ ಸಿಲುಕಿದ್ದಾರೆ.

    ಸದ್ಯ ಕಠ್ಮಂಡುವಿನ ಖಾಸಗಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದು, ಶನಿವಾರ ಬೆಂಗಳೂರಿಗೆ ಬರಲು ಫ್ಲೈಟ್‌ ಟಿಕೆಟ್ ಬುಕ್ ಮಾಡಲಾಗಿದೆ. ಗುರುವಾರ ಇಡೀ ದಿನ ವಿಮಾನ ನಿಲ್ದಾಣದಲ್ಲಿ ಕಾದರೂ, ಭಾರತಕ್ಕೆ ಮರಳಲು ಯಾವುದೇ ವ್ಯವಸ್ಥೆ ಇರಲಿಲ್ಲ. ಸದ್ಯ ಇಲ್ಲಿ ಕರ್ಪ್ಯೂ ಜಾರಿ ಇರುವುದರಿಂದ ಹೊರಬರಲು ಆಗ್ತಿಲ್ಲ. ಶನಿವಾರ ನಾವೇ ಬೆಂಗಳೂರಿಗೆ ಬರ್ತಿದ್ದೇವೆ ಎಂದು ಸತೀಶ್ ಕುಲಕರ್ಣಿ ಅವರು ಮಾಹಿತಿ ನೀಡಿದ್ದಾರೆ.

  • ನೇಪಾಳಕ್ಕೆ ಮೊದಲ ಮಹಿಳಾ ಪ್ರಧಾನಿ – ಪ್ರಮಾಣವಚನ ಸ್ವೀಕರಿಸಿದ ಸುಶೀಲಾ ಕರ್ಕಿ

    ನೇಪಾಳಕ್ಕೆ ಮೊದಲ ಮಹಿಳಾ ಪ್ರಧಾನಿ – ಪ್ರಮಾಣವಚನ ಸ್ವೀಕರಿಸಿದ ಸುಶೀಲಾ ಕರ್ಕಿ

    ಕಠ್ಮಂಡು: ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ಮಧ್ಯಂತರ ಪ್ರಧಾನಿಯಾಗಿ ಶುಕ್ರವಾರ ರಾತ್ರಿ ಪ್ರಮಾಣ ವಚನ ಸ್ವೀಕರಿಸಿದರು.

    ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರು ಕರ್ಕಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಸುಶೀಲಾ ಕರ್ಕಿ ಅವರ ಮಧ್ಯಂತರ ಸಂಪುಟದಲ್ಲಿ ಯಾವುದೇ ಸಚಿವರನ್ನು ಸೇರಿಸಿಕೊಳ್ಳಲಾಗಿಲ್ಲ.

    ಅಧ್ಯಕ್ಷ ರಾಮ್ ಚಂದ್ರ ಪೌಡೆಲ್, ನೇಪಾಳ ಸೇನಾ ಮುಖ್ಯಸ್ಥ ಜನರಲ್ ಅಶೋಕ್ ರಾಜ್ ಸಿಗ್ಡೆಲ್ ಮತ್ತು ವಾರದ ಆರಂಭದಲ್ಲಿ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರ ರಾಜೀನಾಮೆಗೆ ಕಾರಣವಾದ ಜನರೇಷನ್ ಝಡ್ ಪ್ರತಿಭಟನಾ ಚಳವಳಿಯ ಪ್ರತಿನಿಧಿಗಳ ನಡುವಿನ ಒಮ್ಮತದ ನಂತರ ಪ್ರಧಾನಿ ಸ್ಥಾನಕ್ಕೆ ಕರ್ಕಿ ಅವರ ಹೆಸರನ್ನು ಅಂತಿಮಗೊಳಿಸಲಾಗಿತ್ತು.

    ಭ್ರಷ್ಟಾಚಾರ ಮತ್ತು ನಿರುದ್ಯೋಗದಿಂದ ಬೇಸತ್ತ ಯುವ ನೇಪಾಳಿಗಳು ನಡೆಸಿದ ಸಾಮೂಹಿಕ ಪ್ರತಿಭಟನೆಗಳ ನಂತರ ಈ ಬೆಳವಣಿಗೆಗಳು ನಡೆದವು. ಪ್ರತಿಭಟನೆಯಲ್ಲಿ 51 ಮಂದಿ ಮೃತಪಟ್ಟಿದ್ದಾರೆ. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆ.ಪಿ.ಶರ್ಮಾ ಓಲಿ ಅವರನ್ನು ದೇಶ ತೊರೆಯುವಂತೆ ಒತ್ತಾಯ ಕೇಳಿಬಂದಿತ್ತು.

    ಸಾಮಾಜಿಕ ಜಾಲತಾಣಗಳ ನಿಷೇಧ ಮತ್ತು ಭ್ರಷ್ಟಾಚಾರದ ವಿರುದ್ಧ ನೇಪಾಳ ಜನತೆ ಸಿಡಿದೆದ್ದು ಭಾರೀ ಪ್ರತಿಭಟನೆ ನಡೆಸಿದ್ದರು. ಸರ್ಕಾರಿ ಕಚೇರಿಗಳು, ಸಂಸತ್‌ ಭವನಕ್ಕೆ ನುಗ್ಗಿ ಧ್ವಂಸಗೊಳಿಸಿದರು. ಸಚಿವರನ್ನು ಹಿಡಿದು ಥಳಿಸಿದರು. ಪ್ರತಿಭಟನೆ ತೀವ್ರತೆ ಅರಿತು ಪ್ರಧಾನಿ ಸ್ಥಾನಕ್ಕೆ ಕೆ.ಪಿ.ಶರ್ಮಾ ಓಲಿ ರಾಜೀನಾಮೆ ನೀಡಿದರು. ಈಗ ನೇಪಾಳ ಹಿಂಸಾಚಾರವನ್ನು ಸೇನೆ ನಿಯಂತ್ರಣಕ್ಕೆ ತಂದಿದೆ.

    ಮುಂದಿನ ಚುನಾವಣೆ ವರೆಗೆ ಉಸ್ತುವಾರಿ ಸರ್ಕಾರವನ್ನು ಮುನ್ನಡೆಸಲು ಕಾರ್ಕಿ ನೇತೃತ್ವದಲ್ಲಿ ಹಂಗಾಮಿ ಸರ್ಕಾರ ರಚನೆ ಬಗ್ಗೆ ಚರ್ಚೆ ನಡೆದಿತ್ತು. ಕಠ್ಮಂಡು ಮೇಯರ್ ಬಾಲೇಂದ್ರ ಶಾ ಹೆಸರು ಕೂಡ ಕೇಳಿಬಂದಿತ್ತು. ಆದರೆ, ಬಾಲೇಂದ್ರ ಅವರು ಹಂಗಾಮಿ ಪ್ರಧಾನಿ ಹುದ್ದೆಯನ್ನು ವಹಿಸಿಕೊಳ್ಳಲು ಉತ್ಸುಕರಾಗಿರಲಿಲ್ಲ. ಕರ್ಕಿ ಅವರ ಹೆಸರಿಗೆ ತಮ್ಮ ಬೆಂಬಲ ನೀಡಿದ್ದರು.

  • ನೇಪಾಳ ದಂಗೆ | Gen-Z ನಲ್ಲಿ ಬಿರುಕು – ಮಧ್ಯಂತರ ಪ್ರಧಾನಿ ಹುದ್ದೆಗೆ ಸುಶೀಲಾ ಕರ್ಕಿ Vs ಕುಲ್ಮನ್ ನಡ್ವೆ ಫೈಟ್‌

    ನೇಪಾಳ ದಂಗೆ | Gen-Z ನಲ್ಲಿ ಬಿರುಕು – ಮಧ್ಯಂತರ ಪ್ರಧಾನಿ ಹುದ್ದೆಗೆ ಸುಶೀಲಾ ಕರ್ಕಿ Vs ಕುಲ್ಮನ್ ನಡ್ವೆ ಫೈಟ್‌

    – ಭಾರತದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಓದಿದ್ದ ಘಿಸಿಂಗ್‌ಗೆ ಹೆಚ್ಚಿನ ಒಲವು

    ಕಠ್ಮಂಡು: ನೇಪಾಳದಲ್ಲಿ (Nepal) ಭುಗಿಲೆದ್ದ ಯುಜನರ ದಂಗೆ ಇಂದು ಹೊಸ ತಿರುವು ಪಡೆದುಕೊಂಡಿದೆ. ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ನೇಪಾಳದ ಮಧ್ಯಂತರ ಪ್ರಧಾನಿಯಾಗಿ (Interim PrimeMinister) ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಝೆನ್ ಝಡ್ ಪ್ರತಿಭಟನಾ ಗುಂಪು ಇಂದು ಅಧಿಕೃತವಾಗಿ ಘೋಷಿಸಿದೆ. ಪ್ರತಿಭಟನಾಕಾರರ ಇನ್ನೊಂದು ವರ್ಗ ಸುಶೀಲಾ ಕರ್ಕಿ (Sushila Karki) ಅವರ ವಿರುದ್ಧ ತಿರುಗಿಬಿದ್ದಿದೆ.

    ಸಂವಿಧಾನವು ಅವರನ್ನ ಪ್ರಧಾನಿಯಾಗಲು ಅನುಮತಿಸಲ್ಲ ಎಂದು ಅಸಮಾಧಾನ ಹೊರಹಾಕಿದೆ. ಅಲ್ಲದೇ ನೇಪಾಳ ವಿದ್ಯುತ್ ಪ್ರಾಧಿಕಾರದ (NIA) ಮಾಜಿ ಸಿಇಓ ಕುಲ್ಮನ್ ಘಿಸಿಂಗ್ ಅವರ ಹೆಸರನ್ನು ಮಧ್ಯಂತರ ಪ್ರಧಾನಿ ಹುದ್ದೆಗೆ ಸೂಚಿಸಿದೆ. ಹೀಗಾಗಿ ಜೆನ್-ಝಡ್ ಚಳವಳಿಯ ನಾಯಕರ ನಡುವೆ ಬಿರುಕು ಉಂಟಾಗಿದೆ. ಈ ನಡುವೆ ಧರಣ್‌ ನಗರಪಾಲಿಕೆ ಮೇಯರ್ ಹಾರ್ಕ್ ಸಂಪಂಗ್ ಅವರ ಹೆಸರು ಕೂಡ ಮುನ್ನೆಲೆಗೆ ಬಂದಿದೆ. ಇದರ ಹೊರತಾಗಿ ಕಠ್ಮಂಡು ಮೇಯರ್ ಬಾಲೆನ್ ಶಾ ಈ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧನಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನೇಪಾಳದ 18 ಜಿಲ್ಲೆಗಳ ಜೈಲಿನಿಂದ 6 ಸಾವಿರಕ್ಕೂ ಹೆಚ್ಚು ಕೈದಿಗಳು ಪರಾರಿ

    ಕುಲ್ಮನ್ ಘಿಸಿಂಗ್‌ಗೆ ಹೆಚ್ಚಿನ ಒಲವು
    ಪ್ರತಿಭಟನಾ (Gen Z Protesters) ನಿರತ ಯುವಕರ ಒಂದು ಬಣವು, ಬಾಲೆನ್‌ ಶಾ ಪ್ರಧಾನಿ ಹುದ್ದೆಗೆ ಆಸಕ್ತಿ ಹೊಂದಿಲ್ಲ, ಹಾರ್ಕ್‌ ಸಂಪಂಗ್‌ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಲು ಸಾಧ್ಯವಿಲ್ಲ. ಇನ್ನೂ ಸುಶೀಲಾ ಕರ್ಕಿ 70 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಅನರ್ಹರೂ ಆಗಿದ್ದಾರೆ. ಆದ್ದರಿಂದ ಕುಲ್ಮನ್‌ ಅವರನ್ನೇ ಆಯ್ಕೆ ಮಾಡುವುದು ಸೂಕ್ತ ಎಂದು ಹೇಳಿದೆ. ಹೀಗಾಗಿ ಘಿಸಿಂಗ್‌ ಆಯ್ಕೆ ಬಗ್ಗೆ ಆಸಕ್ತಿ ತೋರಿದೆ. ಇದನ್ನೂ ಓದಿ: ನೇಪಾಳ ಹಿಂಸಾಚಾರಕ್ಕೆ ಸ್ಥಗಿತಗೊಂಡಿದ್ದ ಕಠ್ಮಂಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಓಪನ್

    ಪ್ರಧಾನಿ ಹುದ್ದೆಗೆ ಕುಲ್ಮನ್‌ ಹೆಸರು ಬರಲು ಕಾರಣ ಏನು?
    54 ವರ್ಷದ ಘಿಸಿಂಗ್ ನೇಪಾಳದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದ್ದ ʻಲೋಡ್‌ ಶೇಡ್ಡಿಂಗ್‌ ಸಮಸ್ಯೆಗೆ ಅಂತ್ಯ ಹಾಡಿದ್ದರು. ಅಂದು ದೇಶದಲ್ಲಿ ದಿನಕ್ಕೆ 18 ಗಂಟೆಗಳ ಕಾಲ ವಿದ್ಯುತ್‌ ಸಮಸ್ಯೆ ಎದುರಿಸಬೇಕಿತ್ತು. ಈ ಸಮಸ್ಯೆ ಬಗೆಹರಿಸಿದ್ದರಿಂದ ದೇಶಕ್ಕೆ ಹೆಚ್ಚಿನ ಲಾಭವಾಯಿತು. ಕುಲ್ಮನ್‌ ಭಾರತದ ಜಾರ್ಖಂಡ್‌ನ ಜಮ್ಶೆ‌ದ್‌ಪುರದ ಪ್ರಾದೇಶಿಕ ತಂತ್ರಜ್ಞಾನ ಸಂಸ್ಥೆಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದರು ಎಂಬುದು ಗಮನಾರ್ಹ.

    ಇನ್ನೂ ನೇಪಾಳದಲ್ಲಿ ನಡೆಯುತ್ತಿರುವ ಯುವಜನರ ದಂಗೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 31ಕ್ಕೆ ಏರಿದೆ. ಶವಗಳನ್ನು ಇರಿಸಲಾಗಿರುವ ತ್ರಿಭುವನ್ ವಿಶ್ವವಿದ್ಯಾಲಯ ಬೋಧನಾ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಪ್ರಕಾರ ಮೃತಪಟ್ಟ 5 ಪುರುಷರು ಮತ್ತು ಒಬ್ಬ ಮಹಿಳೆಯ ಗುರುತುಗಳು ಇನ್ನೂ ಪತ್ತೆಯಾಗಿಲ್ಲ. ಇದಲ್ಲದೇ ನೇಪಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಂಗಳವಾರ ಮುಚ್ಚಲಾಗಿತ್ತು. ಇದನ್ನೂ ಓದಿ: ʻತುಂಬಾ ಅಪಾಯಕಾರಿʼ ದೂರವಿರಿ – ರಷ್ಯಾ ಸೇನೆ ಸೇರುತ್ತಿರುವ ಭಾರತೀಯರಿಗೆ MEA ವಾರ್ನಿಂಗ್‌

    ನೇಪಾಳದಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವ ಕಾರಣ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ನೇಪಾಳದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದರಿಂದ ನೂರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಸಿಕ್ಕಿಕೊಳ್ಳುವಂತಾಗಿತ್ತು. ಸದ್ಯ ತ್ರಿಭುವನ್ ವಿಮಾನ ನಿಲ್ದಾಣ ಪನರಾರಂಭಗೊಂಡಿದ್ದು, ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಕಂಪನಿಗಳು ನೇಪಾಳದಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಕರೆತರಲು ಹೆಚ್ಚುವರಿ ವಿಮಾನಗಳನ್ನ ವ್ಯವಸ್ಥೆ ಮಾಡಿವೆ.

  • ನೇಪಾಳದಲ್ಲಿ ಸಿಲುಕಿದ್ದಾರೆ ರಾಮನಗರದ 4 ಮಂದಿ ಪ್ರವಾಸಿಗರು

    ನೇಪಾಳದಲ್ಲಿ ಸಿಲುಕಿದ್ದಾರೆ ರಾಮನಗರದ 4 ಮಂದಿ ಪ್ರವಾಸಿಗರು

    – ಬೆಂಗಳೂರಿನ 50 ಜನರ ಜೊತೆ ನೇಪಾಳ ಪ್ರವಾಸ

    ರಾಮನಗರ: ನೇಪಾಳದಲ್ಲಿ (Nepal) ಹಿಂಸಾತ್ಮಕ ಪ್ರತಿಭಟನೆಯ ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪ್ರವಾಸಕ್ಕೆಂದು ತೆರಳಿದ್ದ ರಾಮನಗರದ (Ramanagara) 4 ಮಂದಿ ಪ್ರವಾಸಿಗರು ನೇಪಾಳದಲ್ಲಿ ಸಿಲುಕಿದ್ದಾರೆ.

    ಪ್ರವಾಸಿಗರು ಬೆಂಗಳೂರಿನ 50 ಜನರ ಜೊತೆ ನೇಪಾಳ ಪ್ರವಾಸ ಕೈಗೊಂಡಿದ್ದರು. ನೇಪಾಳದ ಕಠ್ಮಂಡುವಿನ ಹೋಟೆಲ್‌ನಲ್ಲಿ ಕರ್ನಾಟಕದ 50 ಮಂದಿ ಪ್ರವಾಸಿಗರು ಸಿಲುಕಿದ್ದಾರೆ. ಇಂದು ಕಠ್ಮಂಡುವಿನಿಂದ ಜನಕ್ ಪುರ್‌ದ ಡಿಯೊಗರ್ ವಿಮಾನ ನಿಲ್ದಾಣಕ್ಕೆ ಪ್ರವಾಸಿಗರು ಪ್ರಯಾಣಿಸಲಿದ್ದಾರೆ. ಇದನ್ನೂ ಓದಿ: ರಾಮನನ್ನು ವಿರೋಧಿಸಿದ್ದಕ್ಕೆ ಅಧಿಕಾರ ಹೋಯ್ತು: ಭಾರತದ ಮೇಲೆ ಗೂಬೆ ಕೂರಿಸಿದ ನೇಪಾಳದ ಮಾಜಿ ಪ್ರಧಾನಿ

    ಸೆ. 1ರಂದು ಬೆಂಗಳೂರಿನ ಏರ್‌ಪೋರ್ಟ್‌ನಿಂದ ಪ್ರವಾಸಿಗರು ನೇಪಾಳಕ್ಕೆ ಪ್ರಯಾಣ ಬೆಳೆಸಿದ್ದರು. 13 ದಿನಗಳ ಪ್ರವಾಸಕ್ಕೆಂದು ತೆರಳಿದ್ದ ಕನ್ನಡಿಗರು, ಬೆಂಗಳೂರಿಂದ ವಾರಣಾಸಿ, ಅಯೋಧ್ಯೆ ಬಳಿಕ ನೇಪಾಳ ಬಾರ್ಡರ್ ತಲುಪಿದ್ದರು. ನೇಪಾಳದ ಸೋನಾಲಿ ಬಾರ್ಡರ್‌ಗೆ ತಲುಪಿ ಸೆ.8ರಂದು ಪೊಕ್ರಾದಿಂದ ಕಠ್ಮಂಡು ಕಡೆ ಪ್ರಯಾಣ ಬೆಳೆಸಿದ್ದರು. ಇದನ್ನೂ ಓದಿ: ನೇಪಾಳ ಹಿಂಸಾಚಾರಕ್ಕೆ ಸ್ಥಗಿತಗೊಂಡಿದ್ದ ಕಠ್ಮಂಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಓಪನ್

    ಮನೋಕಾಮನಾ ದೇವಿ ದರ್ಶನ ಮುಗಿಸಿ ಹೊರಟಾಗ ಅಲ್ಲಿನ ಗಲಾಟೆ ಬಗ್ಗೆ ಮಾಹಿತಿ ದೊರೆತಿದೆ. ಸದ್ಯ ಕಠ್ಮಂಡುವಿನ ಪ್ರೈಮ್‌ಶೂಟ್ ಹೋಟೆಲ್‌ನಲ್ಲಿ ಕನ್ನಡಿಗರು ವಾಸ್ತವ್ಯ ಹೂಡಿದ್ದಾರೆ. ಕಠ್ಮಂಡುವಿನ ಪಶುಪತಿನಾಥ ದೇವರ ದರ್ಶನ ಪಡೆದು ಹೊರ ಬರುವಾಗ ಗಲಾಟೆ ಆರಂಭವಾಗಿದೆ. ಸೆ.9ರಂದು 11 ಗಂಟೆಗೆ ಗಲಾಟೆ ಆರಂಭವಾಗಿದ್ದು, ಪ್ರವಾಸಿಗರು ಆತಂಕಕ್ಕೆ ಒಳಗಾಗಿದ್ದಾರೆ. ಸದ್ಯ ಪರಿಸ್ಥಿತಿ ಸುಧಾರಿಸುತ್ತಿದ್ದು. ಸೆ.13ರಂದು ಪ್ರವಾಸಿಗರು ವಾಪಸ್ ಆಗಲಿದ್ದಾರೆ. ಇದನ್ನೂ ಓದಿ: ನೇಪಾಳದ 18 ಜಿಲ್ಲೆಗಳ ಜೈಲಿನಿಂದ 6 ಸಾವಿರಕ್ಕೂ ಹೆಚ್ಚು ಕೈದಿಗಳು ಪರಾರಿ

  • ರಾಮನನ್ನು ವಿರೋಧಿಸಿದ್ದಕ್ಕೆ ಅಧಿಕಾರ ಹೋಯ್ತು: ಭಾರತದ ಮೇಲೆ ಗೂಬೆ ಕೂರಿಸಿದ ನೇಪಾಳದ ಮಾಜಿ ಪ್ರಧಾನಿ

    ರಾಮನನ್ನು ವಿರೋಧಿಸಿದ್ದಕ್ಕೆ ಅಧಿಕಾರ ಹೋಯ್ತು: ಭಾರತದ ಮೇಲೆ ಗೂಬೆ ಕೂರಿಸಿದ ನೇಪಾಳದ ಮಾಜಿ ಪ್ರಧಾನಿ

    – ಅಧಿಕಾರದಿಂದ ಇಳಿದ 1 ದಿನದ ಬಳಿಕ ಓಲಿ ಮೊದಲ ಪ್ರತಿಕ್ರಿಯೆ
    – ಪ್ರತಿಭಟನೆಯ ಹಿಂದೆ ಭಾರತದ ಕೈವಾಡದ ಬಗ್ಗೆ ಪರೋಕ್ಷ ಮಾತು

    ಕಠ್ಮಂಡು: ಶ್ರೀರಾಮನನ್ನು (Rama) ವಿರೋಧಿಸಿ ಮಾತನಾಡಿದ್ದಕ್ಕೆ ನನ್ನ ಅಧಿಕಾರ ಹೋಯ್ತು ಎಂದು ನೇಪಾಳದ (Nepal) ಮಾಜಿ ಪ್ರಧಾನಿ ಕೆ.ಪಿ ಶರ್ಮಾ ಓಲಿ (KP Sharma Oli) ಹೇಳಿದ್ದಾರೆ. ಈ ಮೂಲಕ ನೇಪಾಳದ ಪ್ರತಿಭಟನೆಯ ಹಿಂದೆ ಭಾರತದ ಕೈವಾಡವಿದೆ ಎಂದು ಬಿಂಬಿಸುವ ಪ್ರಯತ್ನ ಆರಂಭಿಸಿದ್ದಾರೆ.

    ಯುವಜನತೆಯ ಪ್ರತಿಭಟನೆಯ ಬಳಿಕ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವ ಓಲಿ ಅವರು ಶಿವಪುರದಲ್ಲಿರುವ ಬ್ಯಾರಕ್‌ನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಈ ವೇಳೆ ಪಕ್ಷದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಹಲವು ವಿಚಾರಗಳನ್ನು ತಿಳಿಸಿದ್ದಾರೆ.

    ಪತ್ರದಲ್ಲಿ ಏನಿದೆ?
    ಸ್ವಭಾವತಃ ನಾನು ಸ್ವಲ್ಪ ಹಠಮಾರಿ. ಆ ಹಠಮಾರಿತನ ಇಲ್ಲದಿದ್ದರೆ ಬಹುಶಃ ಈ ಎಲ್ಲಾ ಸವಾಲುಗಳ ನಡುವೆ ನಾನು ಬಹಳ ಹಿಂದೆಯೇ ಅಧಿಕಾರವನ್ನು ಬಿಟ್ಟುಕೊಡುತ್ತಿದ್ದೆ. ಹಠಮಾರಿ ಧೋರಣೆಯಿಂದಾಗಿ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಮಾಧ್ಯಮ ಕಂಪನಿಗಳು ದೇಶದ ನಿಯಮಗಳನ್ನು ಪಾಲಿಸಬೇಕು ಮತ್ತು ಸ್ಥಳೀಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದೆ.

    ಈ ಹಿಂದೆ ಲಿಪುಲೇಖ್, ಕಲಾಪಾನಿ ಮತ್ತು ಲಿಂಪಿಯಾಧುರ ನೇಪಾಳಕ್ಕೆ ಸೇರಿವೆ ಎಂದು ನಾನು ಪ್ರತಿಪಾದಿಸಿದ್ದೆ. ಧರ್ಮಗ್ರಂಥಗಳು ಹೇಳುವಂತೆ ಭಗವಾನ್ ಶ್ರೀರಾಮ ಭಾರತದಲ್ಲಿ ಜನಿಸಿಲ್ಲ. ನೇಪಾಳದಲ್ಲಿ ಜನಿಸಿದನೆಂದು ನಾನು ಸಮರ್ಥಿಸಿಕೊಂಡಿದ್ದೆ. ಈ ನಿಲುವುಗಳಲ್ಲಿ ನಾನು ರಾಜಿ ಮಾಡಿಕೊಂಡಿದ್ದರೆ ನಾನು ಅನೇಕ ಸುಲಭ ಮಾರ್ಗಗಳನ್ನು ಆರಿಸಿಕೊಳ್ಳಬಹುದಿತ್ತು. ಲಿಂಪಿಯಾಧುರ ಸೇರಿದಂತೆ ನೇಪಾಳದ ನಕ್ಷೆಯನ್ನು ವಿಶ್ವಸಂಸ್ಥೆಗೆ ಕಳುಹಿಸದಿದ್ದರೆ ನನ್ನ ಜೀವನವು ತುಂಬಾ ವಿಭಿನ್ನವಾಗಿರುತ್ತಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ನೇಪಾಳದ 18 ಜಿಲ್ಲೆಗಳ ಜೈಲಿನಿಂದ 6 ಸಾವಿರಕ್ಕೂ ಹೆಚ್ಚು ಕೈದಿಗಳು ಪರಾರಿ

    ಭಾರತ ವಿರೋಧಿ ಧೋರಣೆ:
    ಚೀನಾ ಪರವಾಗಿದ್ದ ಕೆ.ಪಿ ಶರ್ಮಾ ಓಲಿ ಬಹಿರಂಗವಾಗಿಯೇ ಭಾರತದ ವಿರುದ್ಧ ಹೇಳಿಕೆ ನೀಡುತ್ತಿದ್ದರು. ಅದರಲ್ಲೂ ರಾಮನ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದರು.

    ರಾಮ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಹುಟ್ಟಿದ್ದಾನೆ ಎಂದು ಭಾರತ ಹೇಳುತ್ತಿರುವ ಕಾರಣ ಸೀತೆ ರಾಜಕುಮಾರ ರಾಮನನ್ನು ವಿವಾಹವಾಗಿದ್ದಾಳೆ ಎಂದು ನಾವು ನಂಬಿದ್ದೇವೆ. ಆದರೆ ನಿಜವಾದ ಅಯೋಧ್ಯೆ ನೇಪಾಳದ ಬಿರ್‌ಗುಂಜ್‌ನ ಪಶ್ಚಿಮ ಭಾಗದಲ್ಲಿರುನ ಥೋರಿ ನಗರದಲ್ಲಿದೆ ಎಂದು ಹೊಸ ಕಥೆ ಕಟ್ಟಿದ್ದರು.

    ಅಯೋಧ್ಯೆ ಹೆಸರಿನ ಗ್ರಾಮ ಬಿರ್‌ಗುಂಜ್‌ನಲ್ಲಿದೆ. ನಾವು ಸಾಂಸ್ಕೃತಿಕವಾಗಿ ಭಾರತದ ದಬ್ಬಾಳಿಕೆಗೆ ಒಳಗಾಗಿದ್ದೇವೆ. ವಾಲ್ಮೀಕಿ ಆಶ್ರಮ ನೇಪಾಳದಲ್ಲಿದಲ್ಲಿದೆ. ರಾಜ ದಶರಥ ಪುತ್ರನನ್ನು ಪಡೆಯಲು ಧಾರ್ಮಿಕ ವಿಧಿಗಳನ್ನು ನೆರವೇರಿಸಿದ್ದು ಇದೇ ರಿಧಿಯಲ್ಲಿ. ಯಾವುದೇ ಸಂಪರ್ಕ ವ್ಯವಸ್ಥೆ ಇಲ್ಲದೇ ಇರುವ ಸಂದರ್ಭದಲ್ಲಿ ರಾಮ ಸೀತೆಯನ್ನು ಮದುವೆಯಾಗಲು ಜನಕಪುರಿಗೆ ಬಂದಿದ್ದು ಹೇಗೆ? ಜನಕಪುರಿ ನೇಪಾಳದಲ್ಲಿರುವಾಗ ಭಾರತದಲ್ಲಿರುವ ಅಯೋಧ್ಯೆಯಿಂದ ರಾಮ ಜನಕಪುರಿಗೆ ಬರುವುದು ಅಸಾಧ್ಯ. ಫೋನ್‌ ಅಥವಾ ಮೊಬೈಲ್‌ ಇಲ್ಲದ ಆ ಸಮಯದಲ್ಲಿ ವಿವಾಹ ಮಾತುಕತೆ ಹೇಗೆ ನಡೆಯಿತು? ರಾಮನಿಗೆ ಜನಕಪುರಿ ಬಗ್ಗೆ ಹೇಗೆ ಗೊತ್ತು ಎಂದು ಪ್ರಶ್ನಿಸಿದ್ದರು.  ಇದನ್ನೂ ಓದಿ: Nepal | 120 ವರ್ಷಗಳಷ್ಟು ಹಳೆಯದಾದ, ಏಷ್ಯಾದ ಅತಿದೊಡ್ಡ ಅರಮನೆ ʻಸಿಂಹ ದರ್ಬಾರ್‌ʼ ಧಗಧಗ

     

    ಕೊರೊನಾ ವೈರಸ್‌ ಚೀನಾದಿಂದಲೇ ವಿಶ್ವಕ್ಕೆ ಹರಡಿದೆ ಎಂಬ ವಿಚಾರ ವಿಶ್ವಕ್ಕೆ ತಿಳಿದಿದ್ದರೂ ಒಲಿ ಭಾರತದಿಂದ ಕೋವಿಡ್‌ 19 ನೇಪಾಳಕ್ಕೆ ಬಂದಿದೆ ಎಂದು ದೂರಿದ್ದರು. ಇದಾದ ಬಳಿಕ ಭಾರತದ ಕಾಲಪಾನಿ, ಲಿಂಪಿಯಾಧುರಾ ಮತ್ತು ಲಿಪುಲೇಖ್ ಪ್ರದೇಶ ತನ್ನದು ಎಂದು ನೇಪಾಳ ಹೇಳಿತ್ತು. ಕೆಪಿ ಶರ್ಮಾ ಓಲಿ ಅವರ ಈ ನಿರ್ಧಾರ ಹಿಂದೆ ಚೀನಾ ಇದೆ ಎನ್ನುವುದು ಗೊತ್ತಿದ್ದರೂ ನೇಪಾಳದ ಹೊಸ ನಕ್ಷೆಯನ್ನು ಅಲ್ಲಿನ ಕ್ಯಾಬಿನೆಟ್ ಅನುಮೋದಿಸಿತ್ತು. ಈ ನಿರ್ಧಾರವನ್ನು ಕೈಗೊಳ್ಳಬೇಡಿ ಎಂದು ಭಾರತ ಸರ್ಕಾರ ಹೇಳಿದ್ದರೂ ನೇಪಾಳ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ವಿವಾದಿತ ನಕ್ಷೆಯನ್ನು ಬಿಡುಗಡೆ ಮಾಡಿ ವಿಶ್ವಸಂಸ್ಥೆಗೆ ಕಳುಹಿಸಿತ್ತು.

    ಮೊದಲಿನಿಂದಲೂ ನೇಪಾಳ ಜೊತೆ ಮಿತೃತ್ವ ಹೊಂದಿದ್ದ ಭಾರತದ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಪಕ್ಷದ ಸದಸ್ಯರೇ ನೇಪಾಳ ಹಾಗೂ ಭಾರತದ ಸಂಬಂಧಕ್ಕೆ ಧಕ್ಕೆ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಪಕ್ಷದ ಸದಸ್ಯರು ರಾಜೀನಾಮೆ ನೀಡುವಂತೆ ಒತ್ತಾಯಿಸಿದಾಗ ಒಲಿ ನನ್ನ ವಿರುದ್ಧ ಭಾರತ ಷಡ್ಯಂತ್ರ ಮಾಡಿದೆ ಎಂದು ದೂರಿದ್ದರು.

  • ನೇಪಾಳ ಹಿಂಸಾಚಾರಕ್ಕೆ ಸ್ಥಗಿತಗೊಂಡಿದ್ದ ಕಠ್ಮಂಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಓಪನ್

    ನೇಪಾಳ ಹಿಂಸಾಚಾರಕ್ಕೆ ಸ್ಥಗಿತಗೊಂಡಿದ್ದ ಕಠ್ಮಂಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಓಪನ್

    ಕಠ್ಮಂಡು: ನೇಪಾಳದಲ್ಲಿ (Nepal) ಹಿಂಸಾತ್ಮಕ ಪ್ರತಿಭಟನೆಯು ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ ಕಠ್ಮಂಡುವಿನ (Kathmandu) ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು (Tribhuvan International Airport) ಬುಧವಾರ ಮತ್ತೆ ತೆರಯಲಾಗಿದೆ.

    ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭದ್ರತಾ ಸಮಿತಿ ಸಭೆಯ ನಿರ್ಧಾರಕ್ಕೆ ಅನುಗುಣವಾಗಿ ಪ್ರತಿಕೂಲ ಪರಿಸ್ಥಿತಿಗಳಿಂದಾಗಿ ಸ್ಥಗಿತಗೊಳಿಸಲಾದ ವಿಮಾನಯಾನ ಸೇವೆಗಳನ್ನು ಈಗ ತೆರೆಯಲಾಗಿದೆ. ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು ವಿಮಾನದ ಮಾಹಿತಿಗಾಗಿ ತಮ್ಮ ವಿಮಾನಯಾನ ಕಂಪನಿಗಳನ್ನು ಸಂಪರ್ಕಿಸಿ. ಅಲ್ಲದೇ ಅಧಿಕೃತ ವಿಮಾನಯಾನದ ಟಿಕೆಟ್‌ಗಳು ಮತ್ತು ಅಗತ್ಯ ದಾಖಲೆಗಳನ್ನು ತರುವಂತೆ ವಿನಂತಿಸಲಾಗಿದೆ ಎಂದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ. ಇದನ್ನೂ ಓದಿ: ನೇಪಾಳದ 18 ಜಿಲ್ಲೆಗಳ ಜೈಲಿನಿಂದ 6 ಸಾವಿರಕ್ಕೂ ಹೆಚ್ಚು ಕೈದಿಗಳು ಪರಾರಿ

    ಹಿಂಸಾತ್ಮಕ ಪ್ರತಿಭಟನೆಗೆ ತ್ರಿಭುವನ್ ಏರ್‌ಪೋರ್ಟ್ ಅನ್ನು ಬಂದ್ ಮಾಡಿದ್ದರಿಂದ ದೆಹಲಿಯಿಂದ ತೆರಳಬೇಕಿದ್ದ ಏರ್ ಇಂಡಿಯಾ, ಇಂಡಿಗೋ ಹಾಗೂ ನೇಪಾಳ ಏರ್‌ಲೈನ್ಸ್ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು. ಇದನ್ನೂ ಓದಿ: Nepal | 120 ವರ್ಷಗಳಷ್ಟು ಹಳೆಯದಾದ, ಏಷ್ಯಾದ ಅತಿದೊಡ್ಡ ಅರಮನೆ ʻಸಿಂಹ ದರ್ಬಾರ್‌ʼ ಧಗಧಗ

    ನೇಪಾಳದಲ್ಲಿ ಸೋಶಿಯಲ್ ಮೀಡಿಯಾಗಳನ್ನು ನಿಷೇಧಿಸಿದ್ದರಿಂದ ಅಲ್ಲಿನ ಜನರು ಬೀದಿಗಿಳಿದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ 19ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ನೇಪಾಳ ಸೇನೆಯು ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಶಕ್ಕೆ ಪಡೆದಿತ್ತು.

    ಪ್ರತಿಭಟನಾಕಾರರು ರೊಚ್ಚಿಗೆದ್ದು ರಾಜಕೀಯ ನಾಯಕರ ಮನೆಗಳನ್ನು ಸುಟ್ಟುಹಾಕಿದ ಬೆನ್ನಲ್ಲೇ ಸೇನೆಯು ಸರ್ಕಾರದ ಸಚಿವಾಲಯ ಕಟ್ಟಡ `ಸಿಂಹ ದರ್ಬಾರ್’ (Singha Durbar) ಅನ್ನು ತನ್ನ ನಿಯಂತ್ರಣಕ್ಕೆ ಪಡೆದಿತ್ತು. ಸೇನೆಯು ಮಧ್ಯೆ ಪ್ರವೇಶಿಸಿದ ಬೆನ್ನಲ್ಲೇ ಇದೀಗ ನೇಪಾಳ ಸಹಜ ಸ್ಥಿತಿಗೆ ಮರಳಿದೆ.

  • ನೇಪಾಳದ 18 ಜಿಲ್ಲೆಗಳ ಜೈಲಿನಿಂದ 6 ಸಾವಿರಕ್ಕೂ ಹೆಚ್ಚು ಕೈದಿಗಳು ಪರಾರಿ

    ನೇಪಾಳದ 18 ಜಿಲ್ಲೆಗಳ ಜೈಲಿನಿಂದ 6 ಸಾವಿರಕ್ಕೂ ಹೆಚ್ಚು ಕೈದಿಗಳು ಪರಾರಿ

    ಕಠ್ಮಂಡು: ಸಾಮಾಜಿಕ ಮಾಧ್ಯಮ ನಿಷೇಧ ಖಂಡಿಸಿ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ, ನೇಪಾಳದ (Nepal Protest) ವಿವಿಧ ಜೈಲುಗಳಿಂದ ಕೈದಿಗಳು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

    18 ಜಿಲ್ಲೆಗಳಲ್ಲಿ 6,000 ಕ್ಕೂ ಹೆಚ್ಚು ಕೈದಿಗಳು ಜೈಲುಗಳಿಂದ ಪರಾರಿಯಾಗಿದ್ದಾರೆ. ಅನೇಕ ಸ್ಥಳಗಳಲ್ಲಿ ಕೈದಿಗಳು ಜೈಲಿನ ಬಾಗಿಲುಗಳನ್ನು ಮುರಿದಿದ್ದಾರೆ. ಕೆಲವು ಸ್ಥಳಗಳಲ್ಲಿ ಅವರು ಹೊರಬರಲು ಗೋಡೆಗಳನ್ನು ನೆಲಸಮಗೊಳಿಸಿದ್ದಾರೆ. ಇದನ್ನೂ ಓದಿ: Nepal | 120 ವರ್ಷಗಳಷ್ಟು ಹಳೆಯದಾದ, ಏಷ್ಯಾದ ಅತಿದೊಡ್ಡ ಅರಮನೆ ʻಸಿಂಹ ದರ್ಬಾರ್‌ʼ ಧಗಧಗ

    ಈ ಘಟನೆಯು ದೇಶದಲ್ಲಿ ಈಗಾಗಲೇ ತಲೆದೋರಿರುವ ಅವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದರಿಂದಾಗಿ ಅಧಿಕಾರಿಗಳು ನಿಯಂತ್ರಣ ಪಡೆಯಲು ಹೆಣಗಾಡುತ್ತಿದ್ದಾರೆ.

    ಶೀತಲ್ ನಿವಾಸ್ ಎಂದೇ ಹೆಸರಾಗಿರುವ ರಾಷ್ಟ್ರಪತಿ ಭವನವನ್ನು ನೇಪಾಳ ಸೇನೆ ವಶಪಡಿಸಿಕೊಂಡಿದೆ. ಭ್ರಷ್ಟಾಚಾರ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಪ್ರತಿಭಟನಾಕಾರರು ರಾಷ್ಟ್ರಪತಿ ಭವನವನ್ನು ಹಾನಿಗೊಳಿಸಿ ಬೆಂಕಿ ಹಚ್ಚಿದರು. ಬಳಿಕ ನೇಪಾಳ ಸೇನೆಯು ಅದನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಜನರ ಪ್ರತಿಭಟನೆಯು ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ. ಸರ್ಕಾರಿ ಆಸ್ತಿಯ ಮೇಲಿನ ದಾಳಿಯ ಘಟನೆಗಳು ದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿವೆ. ಸರ್ಕಾರಿ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳು ಈಗ ಪ್ರದೇಶವನ್ನು ಸುತ್ತುವರೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: ನೇಪಾಳ ಧಗ ಧಗ – ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವಂತೆ ಸಿಎಂ ಸೂಚನೆ

    ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ನೇಪಾಳಗಂಜ್‌ನಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಆದಾಗ್ಯೂ, ತುರ್ತು ಸೇವೆಗಳು ಮುಂದುವರಿಯಲಿದ್ದು, ಅಗತ್ಯ ಕೆಲಸಗಳಿಗಾಗಿ ಪ್ರಯಾಣಿಸುವವರನ್ನು ತಡೆಯಲಾಗುತ್ತಿಲ್ಲ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಭಾರತೀಯ ಭದ್ರತಾ ಪಡೆಗಳು ನೇಪಾಳಿ ಸೇನೆಯೊಂದಿಗೆ ಸಂಪರ್ಕದಲ್ಲಿವೆ ಎಂದು ವರದಿಯಾಗಿದೆ.