Tag: ನೆರಳು

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ರಾಯಚೂರು ಜಿಲ್ಲಾಡಳಿತದಿಂದ ಸಾರ್ವಜನಿಕರಿಗೆ ನೆರಳಿನ ವ್ಯವಸ್ಥೆ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ರಾಯಚೂರು ಜಿಲ್ಲಾಡಳಿತದಿಂದ ಸಾರ್ವಜನಿಕರಿಗೆ ನೆರಳಿನ ವ್ಯವಸ್ಥೆ

    ರಾಯಚೂರು: ಬಿಸಿಲನಾಡು ರಾಯಚೂರು (Raichur) ಜನ ಎಂತಹ ಬಿಸಿಲನ್ನೂ ತಡೆದುಕೊಳ್ಳುತ್ತಾರೆ ಅನ್ನೋ ಮಾತಿತ್ತು. ಆದರೆ ಈ ವರ್ಷದ ರಣ ಬಿಸಿಲು ಬಿಸಿಲನಾಡ ಜನರನ್ನೇ ತತ್ತರಿಸುವಂತೆ ಮಾಡಿದೆ. ಹೀಗಾಗಿ ರಾಯಚೂರು ಜನರನ್ನು ಬಿಸಿಲಿನಿಂದ ರಕ್ಷಿಸಬೇಕು ಅಂತ ನಿಮ್ಮ ‘ಪಬ್ಲಿಕ್ ಟಿವಿ’ ವರದಿಯನ್ನು ಪ್ರಸಾರ ಮಾಡಿತ್ತು. ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿರುವ ರಾಯಚೂರು ಜಿಲ್ಲಾಡಳಿತ ಬೈಕ್ ಮೇಲೆ ಓಡಾಡುವ ಜನರಿಗೆ ನೆರಳಿನ (Shelter) ಆಸರೆ ನೀಡುವ ಮೂಲಕ ಉತ್ತಮ ಕ್ರಮಕ್ಕೆ ಮುಂದಾಗಿದೆ.

    ಜಿಲ್ಲೆಯಲ್ಲಿ ದಾಖಲಾಗುತ್ತಿರುವ ಅತ್ಯಧಿಕ ತಾಪಮಾನ ಎಂಥವರಿಗೂ ನರಕ ತೋರಿಸುತ್ತಿದೆ. ಕಳೆದ ಆರೇಳು ವರ್ಷಗಳಲ್ಲೆ ಅತ್ಯಧಿಕ ಗರಿಷ್ಠ ತಾಪಮಾನ 43 ಡಿಗ್ರಿ ಸೆಲ್ಸಿಯಸ್ ಈಗ ದಾಖಲಾಗಿದೆ. ಕಳೆದ ಒಂದು ವಾರದಿಂದ ಸರಾಸರಿ 41 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಮುಂದುವರೆದಿದೆ. ಮುಂದಿನ ದಿನಗಳಲ್ಲಿ ಇನ್ನೂ ಒಂದರಿಂದ ಎರಡು ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಹೆಚ್ಚಳವಾಗಲಿದೆ ಅನ್ನೋ ಮುನ್ಸೂಚನೆಯಿದೆ. ಇದನ್ನೂ ಓದಿ: ಪೋಷಕರೇ ಎಚ್ಚರ ಶುರುವಾಗ್ತಿದೆ ಕಾಲರಾ- ಮಕ್ಕಳ ಆರೋಗ್ಯದ ಕಡೆ ಇರಲಿ ಗಮನ

    ಹೀಗಾಗಿ ನಿಮ್ಮ ಪಬ್ಲಿಕ್ ಟಿವಿ ರಾಯಚೂರು ಜನರನ್ನು ಬಿಸಿಲಿನಿಂದ ರಕ್ಷಿಸಲು ಸಾರ್ವಜನಿಕ ಸ್ಥಳಗಳು, ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನೆರಳು, ಕುಡಿಯುವ ನೀರಿನ ವ್ಯವಸ್ಥೆಯ ಅವಶ್ಯಕತೆ ಕುರಿತು ವರದಿ ಪ್ರಸಾರ ಮಾಡಿತ್ತು. ವರದಿಗೆ ಸ್ಪಂದಿಸಿರುವ ರಾಯಚೂರು ಜಿಲ್ಲಾಡಳಿತ ಟ್ರಾಫಿಕ್ ಸಿಗ್ನಲ್ ಇರುವ ವೃತ್ತಗಳಲ್ಲಿ ನೆರಳಿನ ವ್ಯವಸ್ಥೆಯನ್ನು ಕಲ್ಪಿಸಿದೆ. ಇದನ್ನೂ ಓದಿ: ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ವಿರುದ್ದ ಪ್ರಕರಣ ದಾಖಲು!

    ನಗರದ ಬಸವೇಶ್ವರ ವೃತ್ತದಲ್ಲಿ ನಾಲ್ಕು ಕಡೆ, ಗಂಜ್ ವೃತ್ತದಲ್ಲಿ ಎರಡು ಕಡೆಗಳಲ್ಲಿ ನೆರಳಿನ ಶೆಡ್ ನಿರ್ಮಿಸಲು ಜಿಲ್ಲಾಡಳಿತ ಮುಂದಾಗಿದೆ. ಅಲ್ಲದೆ ನರೆಗಾ ಕಾಮಗಾರಿ ನಡೆಯುವ ಸ್ಥಳಗಳಲ್ಲಿ, ಕಟ್ಟಡ ಕಾಮಗಾರಿಗಳು ನಡೆಯುವ ಸ್ಥಳದಲ್ಲೂ ನೆರಳು, ನೀರಿನ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಖಾಸಗಿ ಬಸ್ ಪಲ್ಟಿ- ಮೂವರ ದುರ್ಮರಣ, 38 ಮಂದಿಗೆ ಗಾಯ

    ಒಟ್ಟಲ್ಲಿ ರಾಯಚೂರು ಜನರಿಗೆ ದಿನ ಬೆಳಗಾದರೆ ಬಿಸಿಲಿನ ಭಯ ಕಾಡುತ್ತಿದೆ. ಬೆಳಗ್ಗೆ 11 ಗಂಟೆಯಿಂದ ಸಂಜೆ 4:30 ವರೆಗೂ ಬಿಸಿಲು ತನ್ನ ರುದ್ರ ನರ್ತನ ತೋರುತ್ತಿದೆ. ಹೀಗಾಗಿ ವೈದ್ಯರು ಹಾಗೂ ಜಿಲ್ಲಾಡಳಿತ ಅದಷ್ಟು ಬಿಸಿಲಿನಿಂದ ದೂರ ಇರಲು ಜಿಲ್ಲೆಯ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಇದನ್ನೂ ಓದಿ: ಮುಂಜಾನೆ ಬೆಂಗಳೂರಿನ ಟೈಯರ್ ಗೋಡೌನ್‍ನಲ್ಲಿ ಅಗ್ನಿ ಅವಘಡ

  • ಕಾರವಾರದಲ್ಲಿ ಶೂನ್ಯ ನೆರಳಿನ ಕೌತುಕ- ಬಿಸಿಲಿನಲ್ಲಿ ನಿಂತರೂ ನೆರಳು ಮಾಯ

    ಕಾರವಾರದಲ್ಲಿ ಶೂನ್ಯ ನೆರಳಿನ ಕೌತುಕ- ಬಿಸಿಲಿನಲ್ಲಿ ನಿಂತರೂ ನೆರಳು ಮಾಯ

    ಕಾರವಾರ: ಯಾರು ನಮ್ಮನ್ನು ಹಿಂಬಾಲಿಸುತ್ತಾರೋ ಇಲ್ಲವೊ, ಆದರೆ ನೆರಳು ಮಾತ್ರ ನಮ್ಮನ್ನು ಹಿಂಬಾಲಿಸುತ್ತದೆ ಎನ್ನುತ್ತೇವೆ. ಹೀಗಿರುವಾಗ ಆ ನೆರಳೇ ಮಾಯವಾದರೆ ಹೇಗೆ ಎಂಬ ಪ್ರಶ್ನೆ ಹಲವು ಬಾರಿ ಕಾಡುತ್ತದೆ. ನಗರದಲ್ಲಿ ಅಂತಹ ಅದ್ಭುತವೊಂದು ನಡೆದಿದ್ದು, ಶೂನ್ಯ ನೆರಳಿನ ವಿಜ್ಞಾನದ ಕೌತುಕ ಕಂಡುಬಂತು.

    ನಗರದ ಕೋಡಿಬಾಗದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಕಂಬವೊಂದನ್ನು ಬಿಸಿಲಿನಲ್ಲಿ ಇಟ್ಟು ಇದನ್ನು ಪತ್ತೆ ಹಚ್ಚಲಾಯಿತು. ಇಲ್ಲಿ ಅವುಗಳ ನೆರಳು ಅಕ್ಕಪಕ್ಕ ಎಲ್ಲೂ ಬೀಳಲಿಲ್ಲ. ಸಾಮಾನ್ಯವಾಗಿ ಶೂನ್ಯ ನೆರಳಿನ ದಿನದಂದು ನೆರಳು ಅಕ್ಕಪಕ್ಕದಲ್ಲಿ ಎಲ್ಲೂ ಕಾಣಿಸದು.

    ಕರ್ಕಾಟಕ ವೃತ್ತದ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವೆ ಇರುವ ಪ್ರದೇಶಗಳಲ್ಲಿ ವರ್ಷದಲ್ಲಿ ಎರಡು ಬಾರಿ ಶೂನ್ಯ ನೆರಳಿನ ದಿನ ಕಾಣಬಹುದಾಗಿದೆ. ಸೂರ್ಯನು ಉತ್ತರಾಯಣದಿಂದ ದಕ್ಷಿಣಾಯನಕ್ಕೆ ಹಾಗೂ ದಕ್ಷಿಣಾಯದಿಂದ ಉತ್ತರಾಯಣಕ್ಕೆ ಹಾದು ಹೋಗುವ ವೇಳೆ ಮಾತ್ರ ಈ ಅಪರೂಪದ ವಿದ್ಯಮಾನ ನಡೆಯುತ್ತದೆ. ಇಂದು ಸೂರ್ಯ ನಡು ನೆತ್ತಿಯ ಮೇಲಿದ್ದರಿಂದ (ಮಧ್ಯಾಹ್ನ 12.31ರಿಂದ 12.33ರ ನಡುವೆ) ಯಾವುದೇ ವಸ್ತುವಿನ ನೆರಳು ಅಕ್ಕ ಪಕ್ಕ ಬೀಳಲಿಲ್ಲ.

    ಶೂನ್ಯ ನೆರಳಿನ ಸಮಯ ಪ್ರದೇಶದಿಂದ ಪ್ರದೇಶಕ್ಕೆ ಕೆಲ ನಿಮಿಷಗಳ ವ್ಯತ್ಯಾಸವನ್ನು ಹೊಂದಿದೆ. ಈ ಬಾರಿ ಕಾರವಾರ, ಯಲ್ಲಾಪುರ, ಹಾವೇರಿ ಹಾಗೂ ಆಂಧ್ರ ಪ್ರದೇಶದ ಕೆಲ ಭಾಗಗಳಲ್ಲಿ ಮಾತ್ರ ಈ ವಿಜ್ಞಾನದ ಕೌತುಕ ಕಂಡುಬಂದಿದೆ.

    ಪ್ರತಿ ವರ್ಷ ಈ ವಿಶೇಷ ಕೌತುಕವನ್ನು ವಿದ್ಯಾರ್ಥಿಗಳು ಕೂಡ ವೀಕ್ಷಿಸುತ್ತಿದ್ದರು. ಆದರೆ ಈ ಬಾರಿ ಕೊರೊನಾದಿಂದಾಗಿ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ವೀಕ್ಷಿಸಲು ಸೂಚಿಸಲಾಗಿದೆ. ನಾವು ಇಲ್ಲಿ ಕಲೆ ಹಾಕಿದ ಮಾಹಿತಿಯನ್ನು ಬೆಂಗಳೂರಿನ ಜವಹರಲಾಲ್ ನೆಹರು ಕೇಂದ್ರಕ್ಕೆ ಕಳುಹಿಸುವುದಾಗಿ ಕಾರವಾರ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯೂರೇಟರ್ ಸಂಜೀವ್ ದೇಶಪಾಂಡೆ ತಿಳಿಸಿದರು.

    ವರ್ಷದಲ್ಲಿ ಎರಡು ಬಾರಿ ಈ ಶೂನ್ಯ ನೆರಳಿನ ದಿನ ಬರುತ್ತದೆ. ಇಂತಹ ಪ್ರಕೃತಿ ವಿಸ್ಮಯ ಎಲ್ಲ ಭಾಗದಲ್ಲೂ ಕಾಣಸಿಗುವುದಿಲ್ಲ. ಅಂತದರಲ್ಲಿ ಕಾರವಾರದಲ್ಲಿ ಇಂದು ಕಂಡಿದ್ದು ವಿಜ್ಞಾನಿಗಳಿಗೆ ಸೂರ್ಯ ಹಾಗೂ ಭೂಮಿಯ ಮತ್ತಷ್ಟು ಅಧ್ಯಯನಕ್ಕೆ ಸಹಕಾರಿಯಾಯಿತು.