Tag: ನಿಸಾರ್‌

  • ಇನ್ನು ಮುಂದೆ ಅರಣ್ಯದಲ್ಲಿ ಮರ ಕಡಿದ್ರೂ ಗೊತ್ತಾಗುತ್ತೆ – ನಿಸಾರ್‌ ಉಡಾವಣೆ ಯಶಸ್ವಿ

    ಇನ್ನು ಮುಂದೆ ಅರಣ್ಯದಲ್ಲಿ ಮರ ಕಡಿದ್ರೂ ಗೊತ್ತಾಗುತ್ತೆ – ನಿಸಾರ್‌ ಉಡಾವಣೆ ಯಶಸ್ವಿ

    – ಇಸ್ರೋ, ನಾಸಾ ಜಂಟಿಯಾಗಿ ಅಭಿವೃದ್ಧಿ ಪಡಿಸಿದ ಉಪಗ್ರಹ
    – ಜಿಎಸ್‌ಎಲ್‌ವಿ- ಎಫ್‌16 ರಾಕೆಟ್‌ ಮೂಲಕ ಉಡಾವಣೆ

    ಶ್ರೀಹರಿಕೋಟ: ಮೊದಲ ಬಾರಿಗೆ ಇಸ್ರೊ (ISRO) ಮತ್ತು ಅಮೆರಿಕದ ನಾಸಾ (NASA) ಜಂಟಿಯಾಗಿ ಅಭಿವೃದ್ಧಿಪಡಿಸಿದ ಭೂಮಿ ಸಮೀಕ್ಷೆಯ ಸಿಂಥೆಟಿಕ್‌ ಅಪರ್ಚರ್ ರೇಡಾರ್ ಉಪಗ್ರಹ ಉಡಾವಣೆ ಯಶಸ್ವಿಯಾಗಿದೆ.

    ಇಂದು ಸಂಜೆ 5:40ಕ್ಕೆ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರಿಂದ ಜಿಎಸ್‌ಎಲ್‌ವಿ- ಎಫ್‌16 ರಾಕೆಟ್‌ ಮೂಲಕ ನಾಸಾ-ಇಸ್ರೋ ಸಿಂಥೆಟಿಕ್‌ ಅಪರ್ಚರ್ ರೇಡಾರ್ (NISAR) ಉಡಾವಣೆ ಮಾಡಲಾಯಿತು. ಉಪಗ್ರಹ ಯಶಸ್ವಿಯಾಗಿ ಕಕ್ಷೆಗೆ ತಲುಪುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮಹತ್ವದ ಮೈಲಿಗಲ್ಲು ನಿರ್ಮಿಸಿದೆ.

    2,392 ಕೆಜಿ ತೂಕದ ಮತ್ತು ಡ್ಯುಯಲ್-ಫ್ರೀಕ್ವೆನ್ಸಿ ರೇಡಾರ್‌ ವ್ಯವಸ್ಥೆಗಳಿಂದ (L-ಬ್ಯಾಂಡ್ ಮತ್ತು S-ಬ್ಯಾಂಡ್) ಚಾಲಿತವಾಗಿರುವ NISAR ಉಪಗ್ರಹ ವಿಪತ್ತುಗಳು, ಹವಾಮಾನ ಬದಲಾವಣೆಗಳು ಮತ್ತು ಪರಿಸರ ಬದಲಾವಣೆಗಳ ಕುರಿತು ನೈಜ-ಸಮಯದ ಡೇಟಾವನ್ನು ನೀಡಲಿದೆ. ಎಲ್ಲಾ ಹವಮಾನದಲ್ಲಿ ಹಗಲು ಮತ್ತು ರಾತ್ರಿಯ ವೇಳೆ ಹೆಚ್ಚಿನ ರೆಸಲ್ಯೂಶನ್ ಇರುವ ಚಿತ್ರವನ್ನು ಸೆರೆ ಹಿಡಿಯಲಿದೆ.

     

    ಎಲ್‌–ಬ್ಯಾಂಡ್ ಅನ್ನು ನಾಸಾ ತಯಾರಿಸಿದ್ದರೆ ಎಸ್‌–ಬ್ಯಾಂಡ್‌ ಅನ್ನು ಇಸ್ರೊ ತಯಾರಿಸಿದೆ. ಎಸ್‌–ಬ್ಯಾಂಡ್‌ ಅನ್ನು ಸಿಂಥೆಟಿಕ್‌ ಅಪರ್ಚರ್ ರೇಡಾರ್‌ನಲ್ಲಿ ಅಳವಡಿಸಲಾಗುತ್ತದೆ. ಇದರಿಂದ ಭೂಮಿಗೆ ಸಂಬಂಧಿಸಿದಂತೆ ದತ್ತಾಂಶ ಸಂಗ್ರಹ ಸಾಧ್ಯವಾಗಲಿದೆ.

    13,000 ಕೋಟಿ ವೆಚ್ಚ:
    ಇನ್ನೂ ನಿಸಾರ್‌ ಭೂಸರ್ವೇಕ್ಷಣಾ ಉಪಗ್ರಹಕ್ಕೆ 13,000 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ವಿಶ್ವದ ಅತ್ಯಂತ ದುಬಾರಿ ಕಣ್ಗಾವಲು ಉಪಗ್ರಹವಾಗಿ ಗುರುತಿಸಿಕೊಂಡಿದೆ. ಅಲ್ಲದೇ ನಿಸಾರ್‌ ಉಪಗ್ರಹವು ಒಂದು ಬಾರಿಗೆ 242 ಕಿಮೀ ಭೂವಿಸ್ತೀರ್ಣವನ್ನು ನೋಡುವ ಸಾಮರ್ಥ್ಯ ಹೊಂದಿದೆ. 97 ನಿಮಿಷಕ್ಕೆ ಭೂಮಿಗೆ ಒಂದು ಸುತ್ತು ಬರಲಿದೆ. ಮುಖ್ಯವಾಗಿ ನಿಸಾರ್‌ ಉಪಗ್ರಹವು ಕಳುಹಿಸುವ ಎಲ್ಲ ಮಾಹಿತಿಗಳು ಹಾಗೂ ದತ್ತಾಂಶಗಳನ್ನು ಉಚಿತವಾಗಿ ಎಲ್ಲಾ ದೇಶಗಳು ಅಧ್ಯಯನಕ್ಕೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದನ್ನೂ ಓದಿ: ಭಾರತದ ಮೇಲೆ ಟ್ರಂಪ್‌ ತೆರಿಗೆ ಸಮರ : ಆ.1 ರಿಂದಲೇ 25% ಸುಂಕ

     

    ಉಪಹ್ರಹದಿಂದ ಏನು ಲಾಭ?
    ಅರಣ್ಯ ಮತ್ತು ಜೀವವೈವಿಧ್ಯ ಸಂರಕ್ಷಣೆ: ದಟ್ಟವಾದ ಸಸ್ಯವರ್ಗವನ್ನು ಭೇದಿಸುವ ಸಾಮರ್ಥ್ಯವನ್ನು NISAR ಹೊಂದಿರುವುದು ವಿಶೇಷ. ಅರಣ್ಯನಾಶ, ಅರಣ್ಯದಲ್ಲಿ ಆಗುವ ಬದಲಾವಣೆಯನ್ನು ನಕ್ಷೆ ಮಾಡುವಲ್ಲಿ ಪ್ರಬಲ ಸಾಧನವಾಗಿ ಬಳಕೆಯಾಗಲಿದೆ. ಅಕ್ರಮ ಮರ ಕಡಿಯುವಿಕೆಯನ್ನು ಪತ್ತೆಹಚ್ಚಲು, ಅಳಿವಿನಂಚಿನಲ್ಲಿರುವ ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ಡೇಟಾವನ್ನು ಬಳಸಬಹುದು.

    ವಿಪತ್ತು ನಿರ್ವಹಣೆ: ಭೂಕಂಪಗಳು, ಭೂಕುಸಿತಗಳು, ಪ್ರವಾಹಗಳು, ಜ್ವಾಲಾಮುಖಿ ಚಟುವಟಿಕೆಗಳು ಮತ್ತು ಇತರ ನೈಸರ್ಗಿಕ ವಿಕೋಪಗಳ ಬಗ್ಗೆ NISAR ರಿಯಲ್‌ ಟೈಂ ಡೇಟಾವನ್ನು ಒದಗಿಸಲಿದೆ.ಅಧಿಕಾರಿಗಳು ಈ ಡೇಟಾವನ್ನು ಬಳಸಿಕೊಂಡು ಹಾನಿಯನ್ನು ನಕ್ಷೆ ಮಾಡಲು, ವಿಪತ್ತಿನ ಪ್ರಗತಿಯನ್ನು ಪತ್ತೆಹಚ್ಚಲು ಸಹಕಾರಿಯಾಗಲಿದೆ. ಇದನ್ನೂ ಓದಿ: ಉಗ್ರರ ಸಂಹಾರಕ್ಕೆ ಭಾರತೀಯ ಸೇನೆಗೆ ನೆರವಾಗಿದ್ದು ಬೆಂಗಳೂರಿನ ʻಇಸ್ರೋʼ

    ಹವಾಮಾನ ಮೇಲ್ವಿಚಾರಣೆ: ಉಪಗ್ರಹವು ಹಿಮನದಿ ಕರಗುವಿಕೆ, ಸಮುದ್ರ ಮಟ್ಟ ಏರಿಕೆ, ಮಣ್ಣಿನ ತೇವಾಂಶ ಟ್ರ್ಯಾಕ್ ಮಾಡುತ್ತದೆ.  ವಿಜ್ಞಾನಿಗಳಿಗೆ ಜಾಗತಿಕ ತಾಪಮಾನ ಏರಿಕೆಯ ವೇಗ ಮತ್ತು ಅದರ ಪ್ರಾದೇಶಿಕ ಪರಿಣಾಮಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

    ಕೃಷಿ ಮುನ್ಸೂಚನೆ: NISAR ಬೆಳೆ ಬೆಳವಣಿಗೆ, ಮಣ್ಣಿನ ಸ್ಥಳಾಂತರ, ನೀರಾವರಿ ಮಟ್ಟಗಳು ಮತ್ತು ಭೂ ಬಳಕೆಯ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಬಹುದು. ಇದು ಸರ್ಕಾರಗಳು ಇಳುವರಿಯನ್ನು ಊಹಿಸಲು, ನೀರಿನ ಬಳಕೆಯನ್ನು ನಿರ್ವಹಿಸಲು ಮತ್ತು ಬರ ಬರಬಹುದಾ? ಇಲ್ಲವೋ ಎಂಬುದನ್ನು ಮೊದಲೇ ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ.

    ನಗರ ಮತ್ತು ಮೂಲಸೌಕರ್ಯ ಯೋಜನೆ: ವಿಶೇಷವಾಗಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಭೂ ಕುಸಿತ ಮತ್ತು ರಚನಾತ್ಮಕ ಬದಲಾವಣೆಗಳ ಮಾಹಿತಿ ಸಿಗಲಿದೆ. ಅಣೆಕಟ್ಟುಗಳು, ರಸ್ತೆಗಳು, ಸೇತುವೆಗಳು ಮತ್ತು ಕಟ್ಟಡಗಳ ಮೇಲ್ವಿಚಾರಣೆಯಲ್ಲಿ ಉಪಗ್ರಹ ಸಹಾಯ ಮಾಡಲಿದೆ.

  • ಬಾಹ್ಯಾಕಾಶದಲ್ಲಿ ಮತ್ತೊಂದು ಸಾಧನೆಗೆ ನಾಸಾ-ಇಸ್ರೋ ಸಜ್ಜು: ಮುಂದಿನ ವರ್ಷ ‘NISAR’ ಉಪಗ್ರಹ ಉಡಾವಣೆ – ಏನಿದು ನಿಸಾರ್‌?

    ಬಾಹ್ಯಾಕಾಶದಲ್ಲಿ ಮತ್ತೊಂದು ಸಾಧನೆಗೆ ನಾಸಾ-ಇಸ್ರೋ ಸಜ್ಜು: ಮುಂದಿನ ವರ್ಷ ‘NISAR’ ಉಪಗ್ರಹ ಉಡಾವಣೆ – ಏನಿದು ನಿಸಾರ್‌?

    ಚಂದ್ರಯಾನ-3 ಸಕ್ಸಸ್ (Chandrayaan-3) ಹಾಗೂ ಸೂರ್ಯಯಾನ (Aditya L-1) ಯಶಸ್ವಿ ಉಡಾವಣೆ ಮಾಡಿದ ಭಾರತದ ಕಡೆ ಈಗ ಇಡೀ ಜಗತ್ತು ನೋಡುತ್ತಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆಗೆ ವಿಜ್ಞಾನ ಲೋಕ ಮೆಚ್ಚುಗೆ ವ್ಯಕ್ತಪಡಿಸಿದೆ. ಅಲ್ಲದೇ ಸ್ಪೇಸ್ (ಬಾಹ್ಯಾಕಾಶ) ವಲಯದಲ್ಲಿ ಹೊಸ ಅನ್ವೇಷಣೆಗಳಿಗಾಗಿ ಭಾರತದ ಜೊತೆ ಕೆಲಸ ಮಾಡಲು ಬೇರೆ ದೇಶಗಳ ವಿಜ್ಞಾನ ಸಂಸ್ಥೆಗಳು ಮುಂದೆ ಬರುತ್ತಿವೆ. ಅದರ ಮೊದಲ ಹೆಜ್ಜೆಯಾಗಿ ಇಸ್ರೋ ಜೊತೆ ಅಮೆರಿಕದ ನಾಸಾ ಕೈ ಜೋಡಿಸಿದೆ. ಈ ಎರಡೂ ಸಂಸ್ಥೆಗಳ ಕನಸಿನ ಕೂಸೇ ‘ನಿಸಾರ್’.

    ಹೌದು, ನಾಸಾ-ಇಸ್ರೋ (NASA-ISRO) ಜಂಟಿಯಾಗಿ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ‘ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರೆಡಾರ್ (NISAR) ಉಪಗ್ರಹ ಮುಂದಿನ ವರ್ಷ ಅಂದರೆ, 2024 ಕ್ಕೆ ಉಡಾವಣೆಯಾಗಲಿದೆ. ಅದಕ್ಕೆ ಬೇಕಾದ ಎಲ್ಲಾ ತಯಾರಿ ಹಾಗೂ ಪರೀಕ್ಷೆಗಳನ್ನು ನಾಸಾ ಮತ್ತು ಇಸ್ರೋ ನಡೆಸುತ್ತಿವೆ. ಹಾಗಾದರೆ ಏನಿದು ಉಪಗ್ರಹ? ಇದರ ಉಡಾವಣೆ ಉದ್ದೇಶವೇನು? ಇದರಿಂದಾಗಬಹುದಾದ ಪ್ರಯೋಜನ ಏನು ಎಂಬ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ. ಇದನ್ನೂ ಓದಿ: PublicTV Explainer: ‘ಸೋಷಿಯಲ್‌’ನಲ್ಲಿ ಬೆತ್ತಲಾದ ‘ಡೀಪ್‌ಫೇಕ್’; ಏನಿದು ತಂತ್ರಜ್ಞಾನ? ಇದರ ಆಳ ಎಷ್ಟು? ಅಪರಾಧಕ್ಕೆ ಶಿಕ್ಷೆ ಏನು?

    ಏನಿದು ನಿಸಾರ್ ಉಪಗ್ರಹ?
    ಅಮೆರಿಕ ಮತ್ತು ಭಾರತದ ಬಾಂಧವ್ಯವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಡಲಾಗಿದೆ. 2014 ರಲ್ಲಿ ನಾಸಾ ಮತ್ತು ಇಸ್ರೋ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಅದರನ್ವಯ ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರೆಡಾರ್ (ನಿಸಾರ್) ಅನ್ನು ನಿರ್ಮಿಸಲಾಯಿತು. ಮಾರ್ಚ್ ತಿಂಗಳಲ್ಲೇ ಈ ಉಪಗ್ರಹವು ಬೆಂಗಳೂರಿಗೆ ಬಂದಿಳಿದಿದೆ. ಅಮೆರಿಕನ್ ವಾಯುಪಡೆಯ ಸಿ-17 ಸಾರಿಗೆ ವಿಮಾನವು, ಕ್ಯಾಲಿಫೋರ್ನಿಯಾದಿಂದ ಹೊರಟು ಬೆಂಗಳೂರಿಗೆ ಈ ಉಪಗ್ರಹವನ್ನು ಹೊತ್ತು ತಂದಿತ್ತು. ಭಾರತ ಮತ್ತು ಅಮೆರಿಕದ ಬಾಹ್ಯಾಕಾಶ ಸಂಸ್ಥೆಗಳು ಮೊಟ್ಟಮೊದಲ ಬಾರಿಗೆ ಜಂಟಿಯಾಗಿ ಈ ಕಾರ್ಯಕ್ರಮವನ್ನು ರೂಪಿಸಿವೆ. ಈ ಯೋಜನೆಯು ವಿಶ್ವದ ಅತ್ಯಂತ ದುಬಾರಿ ‘ಭೂಮಿಯ ಇಮೇಜಿಂಗ್ ಉಪಗ್ರಹ’ಗಳಲ್ಲಿ ಒಂದಾಗಿದೆ.

    ನಿಸಾರ್ ಉಡಾವಣೆ ಯಾಕೆ?
    ಮನುಕುಲದ ಆಶ್ರಯ ತಾಣ ಭೂಮಿ. ಈ ಭೂಮಿಯಲ್ಲಿ ಯಾವಾಗ, ಏನೇನಾಗುತ್ತದೆ ಎಂಬುದನ್ನು ಪ್ರತಿಯೊಬ್ಬರು ಅರಿಯುವುದು ಮುಖ್ಯ. ಹವಾಮಾನ ಬದಲಾವಣೆ ಜೀವಸಂಕುಲದ ಮೇಲೆ ಅಪಾರ ಪರಿಣಾಮ ಬೀರಿದೆ. ಇದನ್ನು ಅರ್ಥಮಾಡಿಕೊಳ್ಳಲು ಭೂಮಿಯ ಮೇಲ್ಮೈ ಹೇಗೆ ಬದಲಾಗುತ್ತಿದೆ ಎಂಬುದನ್ನು ತಿಳಿಯುವುದು ಮುಖ್ಯ. ಈ ವಿಚಾರವನ್ನು ಮನಗಂಡು ‘ನಿಸಾರ್’ ಉಪಗ್ರಹ ಉಡಾವಣೆಗೆ ಇಸ್ರೋ-ನಾಸಾ ಸಂಸ್ಥೆಗಳು ಮುಂದಾಗಿವೆ. ಭೂ ಮೇಲ್ಮೈ ಬದಲಾವಣೆ, ಕರಗುವ ಮಂಜುಗಡ್ಡೆ, ಅರಣ್ಯ, ಭೂಕಂಪ, ಜ್ವಾಲಾಮುಖಿ ಎಲ್ಲವೂ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದರ ಬಗ್ಗೆ ಪ್ರತಿಯೊಬ್ಬರಿಗೂ ನಿಖರ ಮಾಹಿತಿ ಒದಗಿಸುವುದು ಈ ಉಪಗ್ರಹ ಉಡಾವಣೆಯ ಮುಖ್ಯ ಉದ್ದೇಶವಾಗಿದೆ. ಇದನ್ನೂ ಓದಿ: PublicTV Explainer: ಉಗುರಿಗೆ ಹೆದರಿದ ‘ಹೀರೋಸ್‌’; ವನ್ಯಜೀವಿ ಸಂರಕ್ಷಣಾ ಕಾಯ್ದೆ ಏನು ಹೇಳುತ್ತೆ? – ಅಪರಾಧಕ್ಕೆ ಶಿಕ್ಷೆ ಏನು?

    ಕಾಲಕಾಲಕ್ಕೆ ಭೂ ಮೇಲ್ಮೈನ ಹವಾಮಾನ ಬದಲಾವಣೆ ಯಾವ ಪ್ರಮಾಣದಲ್ಲಾಗುತ್ತದೆ. ಇದರಿಂದ ಜೀವ ಸಂಕುಲದ ಮೇಲೆ ಆಗುತ್ತಿರುವ ಹಾಗೂ ಮುಂದಾಗಬಹುದಾದ ಪರಿಣಾಮಗಳ ಕುರಿತು ಪೂರಕ ಮಾಹಿತಿ ಒದಗಿಸಲು ನಿಸಾರ್ ಉಡಾವಣಾ ಯೋಜನೆ ಸಹಕಾರಿಯಾಗಲಿದೆ. ಜೊತೆಗೆ ಹಿಮ ಪರ್ವತ, ನದಿ ಪಾತ್ರಗಳಲ್ಲಿ ಬದಲಾವಣೆ ಬಗ್ಗೆಯೂ ಡೇಟಾ ಸಂಗ್ರಹಿಸಿ ಉಪಗ್ರಹ ಒದಗಿಸುತ್ತದೆ. ಭೂಕಂಪ ಸೇರಿದಂತೆ ಅನೇಕ ಪ್ರಕೃತಿ ವಿಕೋಪಗಳಿಗೆ ಸಂಬಂಧಿಸಿದಂತೆ ಉಪಯುಕ್ತ ಮಾಹಿತಿಗಳು ಇದರಿಂದ ಸಿಗಲಿದೆ. ಮುಂದಿನ ದಿನಗಳಲ್ಲಿ ಸಂಭವನೀಯ ಪ್ರಕೃತಿ ವಿಕೋಪಗಳಿಗೆ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳಿಗೆ ಇದರಿಂದ ಸಿಗುವ ಮಾಹಿತಿ ನೆರವಾಗಲಿದೆ.

    ಉಪಗ್ರಹ ಕಾರ್ಯವೇನು?
    ನಿಸಾರ್ ಉಪಗ್ರಹ ಭೂಮಿಯ ಕೆಳಹಂತದ ಕಕ್ಷೆಯಲ್ಲಿ ನೆಲೆ ನಿಂತು ಭೂಮಿಯನ್ನು ಗಮನಿಸುತ್ತದೆ. ಇಡೀ ಭೂಮಿಯ ನಕ್ಷೆಯನ್ನು 12 ದಿನಗಳಲ್ಲಿ ರೂಪಿಸಿ, ಭೂ ವ್ಯವಸ್ಥೆ, ಹಿಮ ಪ್ರದೇಶ, ಸಸ್ಯ ಸಂಪತ್ತು, ಸಮುದ್ರದ ನೀರಿನ ಮಟ್ಟ ಏರಿಕೆ, ಅಂತರ್ಜಲ ಎಲ್ಲಾ ಬಗೆಯ ನೈಸರ್ಗಿಕ ದುರಂತಗಳ ನಿಯಮಿತ ದತ್ತಾಂಶವನ್ನು ಪ್ರಾದೇಶಿಕವಾಗಿ ಮತ್ತು ತಾತ್ಕಾಲಿಕವಾಗಿ ಒದಗಿಸುವ ಕಾರ್ಯ ನಿರ್ವಹಿಸುತ್ತದೆ. ಇದನ್ನೂ ಓದಿ: PublicTV Explainer: ಚಂದ್ರ, ಸೂರ್ಯಯಾನ ಆಯ್ತು.. ಈಗ ಶುಕ್ರನ ಮೇಲೆ ಇಸ್ರೋ ಕಣ್ಣು – ಶುಕ್ರಯಾನ ಯಾವಾಗ?

    ಈ ಉಪಗ್ರಹವು ಮೂರು ವರ್ಷ ಕಾರ್ಯನಿರ್ವಹಿಸಲಿದೆ. ಭೂಭಾಗ, ಹಿಮ ಆವೃತ ಪ್ರದೇಶಗಳ ಮೇಲ್ಮೈಯ ಬದಲಾವಣೆಗಳನ್ನು 12 ದಿನಗಳಿಗೊಮ್ಮೆ ಸಮೀಕ್ಷೆ ಮಾಡಲಿದೆ. ಉಪಗ್ರಹ ಕಾರ್ಯಾರಂಭ ಮಾಡಿದ 90 ದಿನಗಳ ಬಳಿಕ ಸಮೀಕ್ಷೆಯನ್ನು ಆರಂಭಿಸುತ್ತದೆ. ನಿಸಾರ್ ವರ್ಷವಿಡೀ ಹಗಲು-ರಾತ್ರಿ ಡೇಟಾವನ್ನು ಸಂಗ್ರಹಿಸುತ್ತದೆ. ಸಂಶ್ಲೇಷಿತ ದ್ಯುತಿರಂಧ್ರ ರೆಡಾರ್ ಅತ್ಯಾಧುನಿಕ ಸಾಧನವಾಗಿದ್ದು, ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ.

    ಏನಿದು ಎಲ್-ಬ್ಯಾಂಡ್, ಎಸ್-ಬ್ಯಾಂಡ್?
    ಎಸ್‌ಯುವಿ ಗಾತ್ರದ ಉಪಗ್ರಹವು ಸುಮಾರು 2,800 ಕೆಜಿ ಭಾರವಿದೆ. ಎಲ್ ಮತ್ತು ಎಸ್-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರೆಡಾರ್ ಉಪಕರಣಗಳನ್ನು ಇದು ಒಳಗೊಂಡಿದೆ. ನಾಸಾ ಪ್ರಕಾರ, ಎಲ್-ಬ್ಯಾಂಡ್ 24 ಸೆಂ.ಮೀ ತರಂಗಾಂತರದಲ್ಲಿ ಕಾರ್ಯ ನಿರ್ವಹಿಸುತ್ತದೆ. ಎಲ್-ಬ್ಯಾಂಡ್ ತರಂಗಾಂತರಗಳನ್ನು ಜಿಪಿಎಸ್ ಘಟಕಗಳಿಗೆ ಬಳಸಲಾಗುತ್ತದೆ. ಮೋಡ, ಮಂಜು, ಮಳೆ, ಬಿರುಗಾಳಿ, ಮಳೆಯನ್ನೂ ಭೇದಿಸಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ರೆಡಾರ್ ಸಿಗ್ನಲ್‌ಗಳು ದಟ್ಟ ಅರಣ್ಯದಲ್ಲೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಅದೇ ರೀತಿ ಎಸ್-ಬ್ಯಾಂಡ್ 12 ಸೆ.ಮೀ ಕಡಿಮೆ ತರಂಗಾಂತರದಲ್ಲಿ ಕಾರ್ಯ ನಿರ್ವಹಿಸುತ್ತದೆ. ಬಾಹ್ಯಾಕಾಶ ನೌಕೆ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದೊಂದಿಗೆ ಸಂವಹನ ನಡೆಸಲು ನಾಸಾ ಬಳಸುತ್ತದೆ. ಇದು ಮೋಡಗಳನ್ನು ಭೇದಿಸಿ ಅಧ್ಯಯನ ನಡೆಸುವ ಸಾಮರ್ಥ್ಯ ಹೊಂದಿದೆ. ಇದನ್ನೂ ಓದಿ: PublicTV Explainer: ನೀಲಿ ಆರ್ಥಿಕತೆ ಎಂದರೇನು? – ಭಾರತದಲ್ಲಿ ಹೇಗೆ ಕೆಲಸ ಮಾಡುತ್ತಿದೆ; ಕರ್ನಾಟಕದಲ್ಲಿ ನಿರೀಕ್ಷೆ ಏನು?

    ರೆಡಾರ್ ಪ್ರತಿಫಲಕ ಆಂಟೆನಾ, ನಿಯೋಜಿಸಬಹುದಾದ ಬೂಮ್, ವಿಜ್ಞಾನ ದತ್ತಾಂಶಕ್ಕಾಗಿ ಹೈ-ರೇಟ್ ಕಮ್ಯುನಿಕೇಷನ್ ಸಬ್‌ಸಿಸ್ಟಮ್, ಜಿಪಿಎಸ್ ರಿಸೀವರ್ಸ್, ಘನ-ಸ್ಥಿತಿಯ ರೆಕಾರ್ಡರ್ ಮತ್ತು ಪೇಲೋಡ್ ಡೇಟಾ ಸಬ್‌ಸಿಸ್ಟಮ್ ಉಪಕರಣಗಳನ್ನು ನಾಸಾ ಒದಗಿಸಿದೆ. ಎಸ್-ಬ್ಯಾಂಡ್ ರಾಡಾರ್, ಉಡಾವಣಾ ವಾಹನ ಮತ್ತು ಸಂಬಂಧಿತ ಉಡಾವಣಾ ಸೇವೆಗಳನ್ನು ಇಸ್ರೋ ಒದಗಿಸಿದೆ.

    2024ಕ್ಕೆ ಲಾಂಚ್?
    ಜಿಎಸ್‌ಎಲ್‌ವಿ ರಾಕೆಟ್ ಮೂಲಕ ಶ್ರೀಹರಿಕೋಟದಿಂದ ಉಡಾವಣೆಗೊಳ್ಳಲಿದೆ. ಈ ಉಪಗ್ರಹವು 2024ರ ಮೊದಲ ಮೂರು ತಿಂಗಳ ಒಳಗಾಗಿ ಉಪಗ್ರಹ ಉಡಾವಣೆಯಾಗುವ ಸಾಧ್ಯತೆ ಇದೆ. ಈ ಯೋಜನೆಗೆ ಅಂದಾಜು 13,500 ಕೋಟಿ ರೂ. ವೆಚ್ಚ ಮಾಡಲಾಗಿದೆ. ಉಪಗ್ರಹ ಉಡಾವಣೆಗೂ ಮುನ್ನ ಕೆಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಕಂಪನವೂ ಸೇರಿ ಕೆಲವು ಪರೀಕ್ಷೆಗಳು ನಡೆಯುತ್ತದೆ. ಈಗಾಗಲೇ ಕಂಪನ ಪರೀಕ್ಷೆ ನಡೆದಿದ್ದು, ಕಾರ್ಯಕ್ಷಮತೆ ಪರೀಕ್ಷೆ ನಡೆಯಬೇಕಿದೆ. ಸಿಸ್ಟಮ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಬ್ಯಾಟರಿ ಮತ್ತು ಸಿಮ್ಯುಲೇಶನ್ ಪರೀಕ್ಷೆಗಳು ನಡೆಯಲಿವೆ. ನಿಸಾರ್ ಯೋಜನೆಯು ಈ ಹಿಂದೆ ನಡೆಸಿರುವ ಎಲ್ಲಾ ಕಾರ್ಯಾಚರಣೆಗಳಿಗಿಂತ ಉತ್ತಮದ್ದಾಗಿದೆ ಎನ್ನುತ್ತಾರೆ ನಾಸಾ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ನಿರ್ದೇಶಕಿ ಡಾ. ಲೌರಿ ಲೆಶಿನ್. ಇದನ್ನೂ ಓದಿ: PublicTV Explainer: ಭಾರತೀಯ ವಿಜ್ಞಾನಿಗಳಿಂದ ‘ಏಲಿಯನ್‌ ಗ್ರಹ’ ಪತ್ತೆ – ಇಲ್ಲಿ ಅನ್ಯಗ್ರಹ ಜೀವಿಗಳು ಇವೆಯೇ?