Tag: ನಿರ್ಮೋಹಿ ಅಖಾಡ

  • ಶಿಯಾ ಮತ್ತು ನಿರ್ಮೋಹಿ ಅಖಾಡ ಸಲ್ಲಿಸಿದ್ದ ಅರ್ಜಿ ವಜಾ – ಸುಪ್ರೀಂ ಆದೇಶದಲ್ಲಿ ಏನಿದೆ?

    ಶಿಯಾ ಮತ್ತು ನಿರ್ಮೋಹಿ ಅಖಾಡ ಸಲ್ಲಿಸಿದ್ದ ಅರ್ಜಿ ವಜಾ – ಸುಪ್ರೀಂ ಆದೇಶದಲ್ಲಿ ಏನಿದೆ?

    ನವದೆಹಲಿ: ಅಯೋಧ್ಯೆ ಪ್ರಕರಣದ ಐತಿಹಾಸಿಕ ತೀರ್ಪು ಪ್ರಕಟಗೊಂಡಿದ್ದು ಸುಪ್ರೀಂ ಕೋರ್ಟ್ ಕೇಂದ್ರ ಶಿಯಾ ವಕ್ಫ್ ಬೋರ್ಡ್ ಮತ್ತು ನಿರ್ಮೋಹಿ ಅಖಾಡ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

    1946 ರಲ್ಲಿ ಫೈಜಾಬಾದ್ ನ್ಯಾಯಾಲಯ 1992ರ ಡಿ.6ರಂದು ಧ್ವಂಸಗೊಂಡ ಮಸೀದಿಯು ಸುನ್ನಿ ಪಂಗಡಕ್ಕೆ ಸೇರಿದ್ದ ಜಾಗ ಎಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಶಿಯಾ ವಕ್ಫ್ ಬೋರ್ಡ್ ಈ ಮಸೀದಿಯನ್ನು ಮೊಘಲ್ ದೊರೆ ಬಾಬರ್ ಕಟ್ಟಿಲ್ಲ. ಬಾಬರ್ ಕಮಾಂಡರ್ ಮಿರ್ ಬಾಖ್ವಿ ಕಟ್ಟಿದ್ದಾನೆ. ಈತ ಶಿಯಾ ಪಂಗಡಕ್ಕೆ ಸೇರಿದ ವ್ಯಕ್ತಿ. ಹೀಗಾಗಿ ಈ ವಿವಾದಿತ ಜಾಗ ನಮ್ಮದು ಎಂದು ಹೇಳಿ 2017ರಲ್ಲಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಸರ್ವೋಚ್ಚ, ಆದ್ರೆ ದೋಷಾತೀತ: ಓವೈಸಿ

    ಸುಪ್ರೀಂ ಆದೇಶದಲ್ಲಿ ಏನಿದೆ?
    ಶಿಯಾ ವಕ್ಫ್ ಬೋರ್ಡ್ 1946 ರಲ್ಲಿ ಫೈಜಾಬಾದ್ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದೆ. 24,964 ದಿನಗಳ ಬಳಿಕ ಸಲ್ಲಿಕೆಯಾದ ಬಳಿಕ ಅರ್ಜಿ ಸಲ್ಲಿಕೆಯಾಗಿದೆ. ಇಷ್ಟೊಂದು ದಿನ ವಿಳಂಬ ಮಾಡಿದ್ದು ಯಾಕೆ ಎನ್ನುವುದಕ್ಕೆ ಶಿಯಾ ವಕ್ಫ್ ಬೋರ್ಡ್ ಕಾರಣ ನೀಡಿಲ್ಲ. ಹೀಗಾಗಿ ಈ ಅರ್ಜಿಯನ್ನು ವಜಾಗೊಳಿಸಲಾಗುತ್ತದೆ. ಇದನ್ನೂ ಓದಿ: ಅಯೋಧ್ಯೆ ತೀರ್ಪು ಸಮಾಧಾನ ತಂದಿಲ್ಲ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

    ನಿರ್ಮೋಹಿ ಅಖಾಡದ ಅರ್ಜಿ ವಜಾಗೊಂಡಿದ್ದು ಯಾಕೆ?
    ಸುಪ್ರೀಂ ಕೋರ್ಟ್ ಈ ವೇಳೆ ನಿರ್ಮೋಹಿ ಅಖಾಡದ ಅರ್ಜಿಯನ್ನು ವಜಾಗೊಳಿಸಿದೆ. ದೇವಾಲಯದಲ್ಲಿ ಪೂಜೆ ಮಾಡುತ್ತಿದ್ದ ಮಾತ್ರಕ್ಕೆ ಆಸ್ತಿಯಲ್ಲಿ ಹಕ್ಕು ನೀಡಲು ಸಾಧ್ಯವಿಲ್ಲ. ಆಸ್ತಿಯ ಹಕ್ಕು ಪೂರ್ಣವಾಗಿ ರಾಮ್ ಲಲ್ಲಾಗೆ ಸೇರುತ್ತದೆ. ಆದರೆ ಅವರ ವಾದವನ್ನು ಪರಿಗಣಿಸಿ ನಿರ್ಮೋಹಿ ಅಖಾಡಕ್ಕೆ ದೇವಾಲಯದ ಟ್ರಸ್ಟ್‍ನಲ್ಲಿ ಸ್ಥಾನ ಸಿಗಬೇಕು ಎಂದು ಆದೇಶದಲ್ಲಿ ತಿಳಿಸಿದೆ.

    ನಿರ್ಮೋಹಿ ಅಖಾಡ ವಾದ ಏನಿತ್ತು?
    ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ 1934ರಿಂದ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿರಲಿಲ್ಲ. ಅರ್ಚಕರಿಗೆ ದೇವರ ಭೂಮಿಯ ಮೇಲೆ ಹಕ್ಕಿರುತ್ತದೆ. ಹಿಂದೂ ಸಂಪ್ರದಾಯದಲ್ಲಿ ದೇವಸ್ಥಾನದ ಆಸ್ತಿ ದೇವರ ಹೆಸರಲ್ಲಿದ್ದರೂ ಅದರ ನಿರ್ವಹಣೆ ಅರ್ಚಕರದ್ದು. ವಂಶಪಾರಂಪರ್ಯ ಆಸ್ತಿಗಳ ಮೇಲೆ ಹಕ್ಕಿರುವಂತೆ ದೇವಸ್ಥಾನದ ಭೂಮಿ ಮೇಲೂ ಅವರಿಗೆ ಹಕ್ಕಿರುತ್ತದೆ ಎಂದು ಹೇಳಿತ್ತು. ನಮ್ಮ ಮೂಲ ವಾದ ಭೂಮಿ ಒಡೆತನ, ನಿರ್ವಹಣೆಯ ಹಕ್ಕಿಗೆ ಸಂಬಂಧಿಸಿದ್ದು. 1850ರಿಂದಲೇ ನಾವು ಈ ಭೂಮಿಯ ಮೇಲೆ ಹಕ್ಕು ಹೊಂದಿದ್ದೇವೆ. ಸೀತಾ ರಸೋಯಿ(ಮೊದಲ ಬಾರಿಗೆ ಸೀತೆ ಅಡುಗೆ ಮಾಡಿದ್ದ ಸ್ಥಳ,ಕುಟುಂಬ ಸದಸ್ಯರಿಗಾಗಿ ಸಿಹಿ ಅಡುಗೆ ತಯಾರಿಸಿದ್ದ ಸೀತೆ), ರಾಮ್ ಭಂಡಾರ್(ಭಗವಾನ್ ಶ್ರೀರಾಮನ ಭೋಜನ ಗೃಹ, ಸೀತಾ ರಸೋಯಿಯಲ್ಲಿ ಅಡುಗೆ ಮಾಡಿ ಇಲ್ಲಿ ಭೋಜನ), ರಾಮ್ ಚಬೂತರ್(ಶ್ರೀರಾಮ ಹುಟ್ಟಿದ ಸ್ಥಳ, ಇದೇ ಜಾಗದಲ್ಲಿ ಶ್ರೀರಾಮ ಬೆಳೆದ ಜಾಗ) ನಮ್ಮ ಹಿಡಿತದಲ್ಲೇ ಇತ್ತು. ಅಲ್ಲದೇ ಈ ಮೂರು ಜಾಗಗಳ ಮೇಲೆ ಯಾವುದೇ ವ್ಯಾಜ್ಯಗಳು ಇರಲಿಲ್ಲ ಎಂದು ವಾದಿಸಿತ್ತು.

    2010ರಲ್ಲಿ ಅಲಹಾಬಾದ್ ಕೋರ್ಟ್ 2.77 ಎಕರೆಗಳ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಜಾಗವನ್ನು ಮೂರು ಭಾಗಗಳಾಗಿ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರಾ, ರಾಮ್‍ಲಲ್ಲಾಗೆ ಸಮಾನ ಹಂಚಿಕೆ ಮಾಡಿ ಆದೇಶಿಸಿತ್ತು.

  • ಅಯೋಧ್ಯೆ ವಿವಾದಿತ ಜಾಗಕ್ಕೆ ಹಕ್ಕು ಪ್ರತಿಪಾದಿಸಿದ ನಿರ್ಮೋಹಿ ಅಖಾಡ

    ಅಯೋಧ್ಯೆ ವಿವಾದಿತ ಜಾಗಕ್ಕೆ ಹಕ್ಕು ಪ್ರತಿಪಾದಿಸಿದ ನಿರ್ಮೋಹಿ ಅಖಾಡ

    ನವದೆಹಲಿ: ಅಯೋಧ್ಯೆಯ ವಿವಾದಿತ ಪ್ರದೇಶದ ಮೇಲೆ ಸಂಪೂರ್ಣ ಹಕ್ಕನ್ನು ಪ್ರತಿಪಾದಿಸಿರುವ ನಿರ್ಮೋಹಿ ಅಖಾಡ ವಿವಾದಿತ ಸ್ಥಳಕ್ಕೆ ಸಂಬಂಧ ಸುಪ್ರೀಂಕೋರ್ಟ್ ಗೆ ಮಹತ್ವದ ಮಾಹಿತಿ ನೀಡಿದೆ.

    1934 ರಲ್ಲಿ ಮುಸ್ಲಿಮರು ಬಾಬ್ರಿ ಮಸೀದಿಯ ಜಾಗದಲ್ಲಿ ಪ್ರತಿದಿನ 5 ಬಾರಿ ನಮಾಜ್ ಮಾಡುವುದನ್ನು ಬಿಟ್ಟಿದ್ದರು. 1949ರ ಡಿಸೆಂಬರ್ ವೇಳೆಗೆ ಶುಕ್ರವಾರದ ಪ್ರಾರ್ಥನೆಯನ್ನೂ ಬಿಟ್ಟು, ಆ ಜಾಗ ಪರಿತ್ಯಕ್ತವಾಗಿತ್ತು ಎಂದು ತಿಳಿಸಿದೆ.

    ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರಿದ್ದ ಸಾಂವಿಧಾನಿಕ ಪೀಠಕ್ಕೆ ಮಾಹಿತಿ ಸಲ್ಲಿಸಿರುವ ನಿರ್ಮೋಹಿ ಅಖಾಡ, ವಿವಾದಿತ ಪ್ರದೇಶದ ಮೇಲೆ ತನ್ನ ಹಕ್ಕನ್ನು 1934ರಲ್ಲೇ ಪ್ರತಿಪಾದಿಸಿದ್ದಾಗಿಯೂ, ಆ ನಂತರ 1961ರಲ್ಲಿ ಸುನ್ನಿ ವಕ್ಫ್ ಬೋರ್ಡ್ ಆ ಜಾಗದ ಮೇಲೆ ಹಕ್ಕು ಮಂಡಿಸಿತ್ತು. 1949ರ ಡಿಸೆಂಬರ್ 22-23 ರಂದು ರಾತ್ರಿ ಮಸೀದಿಯಲ್ಲಿ ರಾಮನ ವಿಗ್ರಹಗಳನ್ನು ಸ್ಥಾಪಿಸಲಾಯಿತು ಎಂದು ಹೇಳಿದೆ.

    ಯಾವ ಜಾಗದಲ್ಲಿ ನಿತ್ಯ ಪ್ರಾರ್ಥನೆ ನಡೆಯುವುದಿಲ್ಲವೋ ಅದನ್ನು ಮಸೀದಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಅಲ್ಲಿ ನಮಾಜ್ ನಡೆಯುತ್ತಿರಲಿಲ್ಲ ಅಂತಲೂ ನಿರ್ಮೋಹಿ ಅಖಾಡಾದ ಪರ ವಕೀಲ ಸುಶೀಲ್ ಜೈನ್ ವಾದಿಸಿದ್ದಾರೆ. ಈ ಮಧ್ಯೆ, ಅಯೋಧ್ಯೆ ವಿಚಾರಣೆಯ ನೇರ ಪ್ರಸಾರ ಅಥವಾ ಧ್ವನಿ ಪ್ರಸಾರಕ್ಕೆ ಅವಕಾಶ ಇಲ್ಲ ಅಂತ ಸುಪ್ರೀಂಕೋರ್ಟ್ ಹೇಳಿದೆ.

  • ಅಯೋಧ್ಯೆ ಸಂಧಾನ: ಯಾರು ಏನು ಹೇಳಿದ್ರು?

    ಅಯೋಧ್ಯೆ ಸಂಧಾನ: ಯಾರು ಏನು ಹೇಳಿದ್ರು?

    -ಅಯೋಧ್ಯೆಯಲ್ಲಿ ರಾಮ ಮಂದಿರವೇ ಆಗ್ಬೇಕು: ಉಮಾ ಭಾರತಿ

    ನವದೆಹಲಿ: ಅಯೋಧ್ಯೆ ವಿವಾದವನ್ನು ಸಂಧಾನದ ಮೂಲಕವೇ ಬಗೆಹರಿಸಿಕೊಳ್ಳಿ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಆಗಬೇಕೆ ಹೊರತು ಬೇರೆ ಧಾರ್ಮಿಕ ಕೇಂದ್ರಗಳು ಆಗಬಾರದು ಎಂದು ಕೇಂದ್ರ ಸಚಿವೆ ಉಮಾ ಭಾರತಿ ಹೇಳಿದ್ದಾರೆ.

    ನಾವು ನ್ಯಾಯಾಲಯವನ್ನು ಗೌರವಿಸುತ್ತೇವೆ. ಇದರ ಜೊತೆಗೆ ನಾವು ರಾಮನ ಭಕ್ತರೂ ಹೌದು. ವೆಟಿಕನ್ ಸಿಟಿಯಲ್ಲಿ ಮಸೀದಿ ನಿರ್ಮಾಣ ಆಗಲ್ಲ. ಮಕ್ಕಾ-ಮದೀನಾದಲ್ಲಿ ದೇವಾಲಯ ನಿರ್ಮಿಸಲು ಅವಕಾಶವಿಲ್ಲ. ಅದರಂತೆಯೇ ರಾಮಜನ್ಮಭೂಮಿಯಲ್ಲಿ ಬೇರೆ ಧಾರ್ಮಿಕ ಕೇಂದ್ರ ನಿರ್ಮಿಸಲು ಸಾಧ್ಯವಿಲ್ಲ ಎಂದು ಉಮಾ ಭಾರತಿ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

    ಇದೊಂದು ಭೂಮಿ ವಿವಾದವಾಗಿದ್ದು, ಎರಡೂ ಪಾರ್ಟಿಗಳು ಸಂಧಾನ ಮಾಡಿಕೊಂಡರೆ ನ್ಯಾಯಾಲಯ ಸಮ್ಮತಿ ಸೂಚಿಸುತ್ತದೆ. ಅದರಂತೆ ನ್ಯಾಯಾಲಯ ಸಹ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಒಳ್ಳೆಯದು ಆಗಲಿದ್ದು, ಎಲ್ಲರೂ ಸೇರಿ ರಾಮಮಂದಿರವನ್ನು ನಿರ್ಮಾಣ ಮಾಡೋಣ ಎಂದು ಅವರು ಹೇಳಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ನಾವು ನ್ಯಾಯಾಲಯದ ಆದೇಶವನ್ನು ಪ್ರಶ್ನೆ ಮಾಡಲ್ಲ. ಈ ಮೊದಲು ನಡೆದ ಸಂಧಾನಗಳು ಫಲಪ್ರದವಾಗಿರಲಿಲ್ಲ. ಭಗವಾನ್ ರಾಮನ ಮಂದಿರ ನಿರ್ಮಾಣಕ್ಕೆ ವಿಳಂಬ ಮಾಡಬಾರದು ಎಂಬುದು ಭಕ್ತರ ವಾದವಾಗಿದೆ ಎಂದರು.

    ಆಲ್ ಇಂಡಿಯಾ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಮತ್ತು ಬಾಬರಿ ಮಸೀದಿ ಆ್ಯಕ್ಷನ್ ಕಮೀಟಿಯ ಸಂಯೋಜಕ ಜಫರಾಯಬ್ ಜಿಲಾನಿ, ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದು ಎಂಬ ವಾದ ನಮ್ಮದಾಗಿತ್ತು. ನಮ್ಮ ಅಭಿಪ್ರಾಯಗಳನ್ನು ನಾವು ಸಂಧಾನದ ಕಮಿಟಿ ಮುಂದೆಯೇ ಹೇಳುತ್ತೇವೆ. ಹಾಗಾಗಿ ಹೆಚ್ಚು ಮಾತನಾಡಲಾರೆ ಎಂದು ತಿಳಿಸಿದ್ದಾರೆ.

    ಹಿಂದೂ ಮಹಾಸಭಾದ ಮುಖಂಡ ಸ್ವಾಮಿ ಚಕ್ರಪಾಣಿ ಮಾತನಾಡಿ, ಸುಪ್ರೀಂ ಆದೇಶವನ್ನು ಸ್ವಾಗತಿಸುತ್ತೇವೆ. ನಾವು ಸಕಾರಾತ್ಮಕ ಯೋಚನೆಗಳನ್ನು ಹೊಂದಿದ್ದು, ನ್ಯಾಯಾಲಯ ನೇಮಿಸಿದ ಕಮಿಟಿಯಲ್ಲಿ ರವಿಶಂಕರ್ ಗೂರೂಜಿಗಳ ಹೆಸರನ್ನು ನಿರ್ದೇಶನ ಮಾಡಿದ್ದಕ್ಕೆ ಖುಷಿಯಾಗಿದೆ. ಹಿಂದೂ ಮತ್ತು ಮುಸ್ಲಿಮರು ಜೊತೆಯಾಗಿ ಕೆಲಸ ಮಾಡುತ್ತೇವೆ ಎಂಬ ವಿಶ್ವಾಸ ನನಗಿದೆ ಎಂದರು.

    ನಿರ್ಮೋಹಿ ಅಖಾರದ ಮಹಾಂತ ಸೀತಾರಾಮ ದಾಸ್ ಪ್ರತಿಕ್ರಿಯಿಸಿ, ಈ ನಿರ್ಣಯದ ಮೇಲೆ ಯಾವುದೇ ರಾಜಕೀಯ ಪ್ರಭಾವ ಬೀರದರಲಿ ಎಂದು ನ್ಯಾಯಾಲಯ ನಿರ್ದೇಶನ ಮಾಡಿರುವ ಸಮಿತಿಯಲ್ಲಿ ಸಾಂವಿಧಾನಿಕ ಸದಸ್ಯರ ನೇಮಕವಾಗಲಿ ಎಂಬ ಆಶಯ ನಮ್ಮದಿತ್ತು. ಆದರೆ ನ್ಯಾಯಾಲಯ ಶ್ರೀ ರವಿಶಂಕರ್ ಗೂರೂಜಿ ಅವರನ್ನು ನೇಮಿಸಿದ್ದರಿಂದ ಕೆಲವು ತೊಡಕಗಳು ಉಂಟಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv