Tag: ನಿರ್ಬಂಧ

  • ಕಾಳನಿಗೂ, ಕಾವೇರಿಗೂ ಎಲ್ಲಿಯ ಎತ್ತಣದ ಸಂಬಂಧ? ಪ್ರಕಾಶ್ ರೈ ಜಸ್ಟ್ ಆಸ್ಕಿಂಗ್!

    ಕಾಳನಿಗೂ, ಕಾವೇರಿಗೂ ಎಲ್ಲಿಯ ಎತ್ತಣದ ಸಂಬಂಧ? ಪ್ರಕಾಶ್ ರೈ ಜಸ್ಟ್ ಆಸ್ಕಿಂಗ್!

    ಬೆಂಗಳೂರು: ತಮಿಳು ನಟ ರಜಿನಿಕಾಂತ್ ಅಭಿನಯನದ ಕಾಳಾ ಚಿತ್ರ ಪ್ರದರ್ಶನಕ್ಕೆ ಕನ್ನಡ ಸಂಘಟನೆಗಳು ನಿರ್ಬಂಧ ಹಾಕಿವೆ. ಈ ಕುರಿತು ನಟ ಪ್ರಕಾಶ್ ರೈ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಾವೇರಿ ಮಂಡಳಿ ಸ್ಥಾಪಿಸುವ ಕುರಿತು ನಟ ರಜಿನಿಕಾಂತ್ ತಮಿಳುನಾಡಿನ ಪರವಾಗಿ ಹೇಳಿಕೆ ನೀಡಿದ್ದರು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಕಾಳಾ ಚಿತ್ರವನ್ನು ಕರ್ನಾಟಕದಲ್ಲಿ ಪ್ರದರ್ಶನ ಮಾಡದಂತೆ ಕನ್ನಡ ಸಂಘಟನೆಗಳು ನಿರ್ಬಂಧ ವಿಧಿಸಿವೆ.

    ಈ ಕುರಿತಂತೆ ನಟ ಪ್ರಕಾಶ್ ರೈ ತಮ್ಮ ಟ್ವಿಟ್ಟರ್ ನಲ್ಲಿ, ಕಾಳಾ ಚಿತ್ರ ಏನು? ಕಾವೇರಿ ಗಲಾಟೆಗೂ ಇದಕ್ಕೆ ಏನು ಸಂಬಂಧ? ಕಾಳಾ ಚಿತ್ರವನ್ನೇ ಏಕೆ ಗುರಿಯಾಗಿಸುತ್ತಿದ್ದಾರೆ?. ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಗಳು ರಾಜ್ಯದಲ್ಲಿ ಕೆಲವರಿಗೆ ಕಾನೂನನ್ನು ಉಲ್ಲಂಘಿಸಲು ಅಧಿಕಾರ ನೀಡುತ್ತಿದೆ. ಪದ್ಮಾವತ್ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಬಿಜೆಪಿ ಇದೆ ರೀತಿ ಮಾಡಿತ್ತು. ಈ ವಿಚಾರವನ್ನು ಜನಸಾಮಾನ್ಯರಿಗೆ ಬಿಡಿ, ಅವರೇ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

    ನಾವು ಕೇವಲ ನಟನೊಬ್ಬನ ಹೇಳಿಕೆಯನ್ನೇ ತೆಗೆದುಕೊಂಡು ಚಿತ್ರ ನಿರ್ಬಂಧಕ್ಕೆ ಯೋಚಿಸಬಾರದು. ಒಂದು ಚಿತ್ರ ನಿರ್ಮಾಣಕ್ಕೆ ನೂರಾರು ತಂತ್ರಜ್ಞರು, ಸಹಕಲಾವಿದರು, ಸಾವಿರಾರು ಕಾರ್ಮಿಕರು ಶ್ರಮವಹಿಸಿ ಸಿನಿಮಾ ನಿರ್ಮಾಣ ಮಾಡುತ್ತಾರೆ. ಅಲ್ಲದೇ ನಿರ್ಮಾಪಕರು ಚಿತ್ರಕ್ಕೆ ಕೋಟ್ಯಾಂತರ ರೂಪಾಯಿ ಹಣ ಹೂಡಿರುತ್ತಾರೆ. ಪ್ರದರ್ಶನಕ್ಕೆ ತಡೆ ನೀಡಿದಾಗ ನಿರ್ಮಾಪಕರ ಗತಿ ಏನು? ಹಂಚಿಕೆದಾರರು, ಥೀಯೇಟರ್ ಮಾಲೀಕರನ್ನು ನಂಬಿ ದುಡಿಯುವ ಅನೇಕ ಕಾರ್ಮಿಕರ ಗತಿ ಏನು? ನಾವು ಅದರ ಕುರಿತು ಯೋಚನೆ ಮಾಡಬೇಕಾಗುತ್ತದೆ ಎಂದು ಹೇಳಿದರು.

    ಚಿತ್ರ ನಿರ್ಬಂಧ ಮಾಡದೇ ಪ್ರದರ್ಶನಕ್ಕೆ ಅವಕಾಶ ಕೊಡಬೇಕು, ಜನರೇ ಚಿತ್ರ ನೋಡದೆ ಇದ್ದಾಗ ಅವರ ವಿರೋಧ ಸ್ಪಷ್ಟವಾಗುತ್ತದೆ. ಈ ರೀತಿ ಹೋರಾಟ ನಡೆಸದೆ ಯಾರೋ ಕೆಲವರು ಕನ್ನಡಿಗರಿಗೆ ಏನು ಬೇಕು, ಬೇಡ ಎಂದು ನಿರ್ಧಾರಕ್ಕೆ ಬರುವುದು ಯಾವ ನ್ಯಾಯ? ಇದು ಜನಸಾಮಾನ್ಯರ ಹೋರಾಟವಾಗಿಲ್ಲ. ಕೇವಲ ತಮ್ಮ ಸ್ವಾರ್ಥಕ್ಕಾಗಿ ಹೋರಾಟಗಳನ್ನು ಮಾಡುತ್ತಾ, ಗಲಾಟೆ, ದೊಂಬಿ, ಆಸ್ತಿ-ಪಾಸ್ತಿಗಳನ್ನು ನಷ್ಟಮಾಡಿ ಜನಸಾಮಾನ್ಯರಿಗೆ ತೊಂದರೆ ಕೊಡುತ್ತಿದ್ದಾರೆಯೇ ಹೊರತು ಸಮಸ್ಯೆಗಳಿಗೆ ಪರಿಹಾರ ಮಾಡುವ ನಿರ್ಧಾರಕ್ಕೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಹಿರಿಯ ಅಧಿಕಾರಿಗಳು, ತಜ್ಞರು ಸಮಸ್ಯೆ ಬಗೆಹರಿಸುವ ಕುರಿತು ನಿರ್ಧಾರ ಕೈಗೊಳ್ಳಬೇಕು, ಆದರೆ ರಾಜಕೀಯ ಕಾರಣಗಳು, ಒತ್ತಡಗಳಿಗೆ ಮಣಿದು ಅವರೇ ಮೌನವಹಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಸ್ವಾರ್ಥಕ್ಕಾಗಿ ಇದನ್ನು ಬಳಸಿಕೊಳ್ಳುತ್ತಿರುವುದು ವಿಷಾದದ ಸಂಗತಿಯಾಗಿದೆ ಅಂತಾ ಹೇಳಿದ್ದಾರೆ.

    ಈ ನನ್ನ ಹೇಳಿಕೆಯನ್ನು ಕೆಲವರು ವಿರೋಧಿಸಿ ನನ್ನನ್ನು ಕನ್ನಡ ದ್ರೋಹಿ ಎಂದು ಪಟ್ಟಕಟ್ಟಿದ್ರೂ ಆಶ್ಚರ್ಯಪಡಬೇಕಾಗಿಲ್ಲ. ಇತ್ತೀಚೆಗೆ ಪ್ರಶ್ನಿಸಿದ್ದಕ್ಕೆ ಕೆಲವರು ನನ್ನನ್ನು ದೇಶದ್ರೋಹಿ ಎಂದು ಪಟ್ಟಕಟ್ಟಿದ್ದರು. ಏನೇ ಆದರೂ ನಾನು ಏನು ಹೇಳಬೇಕೋ ಅದನ್ನೇ ಹೇಳಿಯೇ ತಿರುತ್ತೇನೆ. ಉಳಿದದ್ದು ನಿಮ್ಮ ವಿವೇಚನಕೆಗೆ ಬಿಟ್ಟಿದ್ದು ಎಂದು ಬರೆದುಕೊಂಡಿದ್ದಾರೆ.

  • ರೇಪಿಸ್ಟ್ ಬಾಬಾನಿಗೆ ಈಗ ದಿನಕ್ಕೆ 20 ರೂ. ಕೂಲಿ!

    ರೇಪಿಸ್ಟ್ ಬಾಬಾನಿಗೆ ಈಗ ದಿನಕ್ಕೆ 20 ರೂ. ಕೂಲಿ!

    ಪಂಚಕುಲ: ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಒಳಪಟ್ಟಿರುವ ಡೇರಾ ಸಚ್ಚಾ ಸೌದ ಮುಖ್ಯಸ್ಥ ಬಾಬಾ ರಾಮ್ ರಹೀಮ್‍ನ ದಿನ ಕೂಲಿ ಕೇವಲ 20 ರೂ. ಮಾತ್ರ.

    ಅಪರಾಧಿ ಬಾಬಾ ಆಶ್ರಮದಲ್ಲಿದ್ದಾಗ ಐಷರಾಮಿ ಜೀವನವನ್ನು ಕಳೆಯುತ್ತಿದ್ದ. ಆದರೆ ಈಗ ಜೈಲಿನಲ್ಲಿ ತೋಟಗಾರಿಕೆ ಕೆಲಸವನ್ನು ಮಾಡುತ್ತಿದ್ದು, ಪ್ರತಿದಿನ ಈ ಕೆಲಸಕ್ಕೆ 20 ರೂ. ದಿನ ಕೂಲಿಯನ್ನು ಪಡೆಯುತ್ತಿದ್ದಾನೆ.

    ಹರಿಯಾಣ ಜೈಲಿನಲ್ಲಿ ಕೌಶಲ್ಯವಿಲ್ಲದ ಉದ್ಯೋಗವನ್ನು ಮಾಡುವವರಿಗೆ ನಿಗಧಿಯಾದ ಕೂಲಿ ಇದಾಗಿದೆ. ಇದಕ್ಕಿಂತ ಹೆಚ್ಚಿನ ಕೂಲಿ ನೀಡುವುದಿಲ್ಲ ಎಂದು ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಜಿಪಿ) ಕೆ.ಪಿ. ಸಿಂಗ್ ತಿಳಿಸಿದ್ದಾರೆ.

    ಬಾಬಾ ಉತ್ತಮ ಉದ್ಯೋಗ ಕೌಶಲ್ಯವನ್ನು ಹೊಂದಿದ್ದಾನೆ. ಆದರೆ ಜೈಲಿನಲ್ಲಿ ಇರುವಾಗ ಅಲ್ಲಿನ ನಿರ್ಬಂಧಗಳನ್ನು ಪಾಲಿಸಬೇಕಾಗುತ್ತದೆ. ಆದ್ದರಿಂದ ಬ್ಯಾರಕ್‍ನ ಬಳಿ ಸಣ್ಣ ಪ್ರದೇಶದ ಭೂಮಿಯಲ್ಲಿ ಪ್ರತಿದಿನ 4 ರಿಂದ 5 ಗಂಟೆ ಕಾಲ ಕಷ್ಟಪಟ್ಟು ಕೆಲಸ ಮಾಡುತ್ತಾನೆ ಎಂದು ಹೇಳಿದರು.

    ಪತ್ರಿಕೆ, ಟಿವಿ ಇಲ್ಲ: ದೂರದರ್ಶನ ಮತ್ತು ಪತ್ರಿಕೆ ಮೂಲಕ ದಿನನಿತ್ಯದ ಸುದ್ದಿಗಳಿಂದ ದೂರವಿಡಲಾಗಿದೆ. ಟಿವಿ, ಪತ್ರಿಕೆ ಪ್ರವೇಶಕ್ಕೆ ಅವಕಾಶವಿರುವ ಸ್ಥಳಗಳಲ್ಲಿ ಬ್ಯಾರಕ್‍ಗಳಿವೆ. ಆದರೆ ಬಾಬಾ ಬ್ಯಾರಕ್‍ಗೆ ಹೋಗಲು ಅನುಮತಿ ಇಲ್ಲ. ಅಷ್ಟೇ ಅಲ್ಲದೆ ಭದ್ರತಾ ಕಾಳಜಿಯ ಮೇರೆಗೆ ಯಾವುದೇ ಫೋನ್ ಕರೆಗಳನ್ನು ಮಾಡಲು ಅನುಮತಿ ನೀಡಿಲ್ಲ.

    ಬ್ಯಾರಕ್‍ಗೆ ಅನುಮತಿ ಇಲ್ಲ: ಆರಂಭದಲ್ಲಿ ಮಾಧ್ಯಮಗಳು ಬಾಬಾನನ್ನು ಏಕಾಂಗಿಯಾಗಿ ಬಂಧಿಸಿದ್ದಾರೆ ಎಂದು ವರದಿ ಮಾಡಿದ್ದರು. ಆದರೆ ಅದನ್ನು ಡಿಜಿಪಿ ಅವರು ನಿರಾಕರಿಸಿ, ಬಾಬಾ ಜೈಲಿನಲ್ಲಿ ಮೂರು ಮಂದಿ ಅಪರಾಧಿಗಳ ಜೊತೆ ಇದ್ದಾನೆ. ಸಾಮಾಜಿಕ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಅವನ ಜೊತೆ ಇರುವ ಕೈದಿಗಳಿಗೆ ಡೇರಾ ಆಶ್ರಮದ ಜೊತೆ ಯಾವುದೇ ರೀತಿಯ ಸಂಬಂಧವಿಲ್ಲವೆಂದು ಖಚಿತ ಪಡಿಸಿಕೊಳ್ಳಲಾಗಿದೆ. ಮೂವರು ಕೈದಿಗಳು ಈಗಾಗಲೇ 10 ವರ್ಷಗಳಿಗಿಂತ ಹೆಚ್ಚಿನ ಕಾಲ ಜೈನಲ್ಲಿದ್ದಾರೆ. ಇದರಲ್ಲಿ 70 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಇದ್ದಾರೆ ಎಂದು ಹೇಳಿದ್ದಾರೆ.

    ಊಟ: ಜೈಲಿನ ಎಲ್ಲ ಕೈದಿಗಳಿಗೆ ನೀಡುವಂತೆ ದಿನಕ್ಕೆ ಗರಿಷ್ಠ 3,175 ಕ್ಯಾಲೋರಿ ಇರುವ ಆಹಾರವನ್ನು ನೀಡಲಾಗುತ್ತದೆ. ಬೆಳಗಿನ ತಿಂಡಿಗೆ ಎರಡು ಬ್ರೆಡ್ ಮತ್ತು 250 ಗ್ರಾಂ ಹಾಲು, ನಂತರ ಟೀ, ಮಧ್ಯಾಹ್ನ ಊಟಕ್ಕೆ 7 ಚಪಾತಿ ಮತ್ತು ತರಕಾರಿ, ಸಂಜೆ ಟೀ ಮತ್ತೆ ರಾತ್ರಿ ಊಟ ನೀಡಲಾಗುತ್ತದೆ.

    ಜೈಲಿನ ಕ್ಯಾಂಟೀನ್‍ನಿಂದ ಹಣ್ಣುಗಳು ಹಾಗೂ ಇತರ ತಿನ್ನುವ ವಸ್ತುಗಳನ್ನು ಹಣ ನೀಡಿ ಖರೀದಿಸಬಹುದು. ಆದರೆ ಕೈಯಲ್ಲಿ ಗರಿಷ್ಟ 5 ಸಾವಿರ ರೂ. ಹಣವನ್ನು ಇಟ್ಟುಕೊಳ್ಳಲು ಮಾತ್ರ ಅವಕಾಶವಿದೆ.

    ಬಾಬಾನನ್ನು ಜೈಲಿನಲ್ಲಿ ಭಗವದ್ಗೀತೆ ಪುಸ್ತಕವನ್ನು ಓದುತ್ತಿದ್ದಾನೆ. ಅವನ ತಾಯಿ ಭೇಟಿಯಾಗಲು ಬಂದಾಗ ಬಹುಶಃ 2 ಪುಸ್ತಕವನ್ನು ನೀಡಿದ್ದಾರೆ. ಅವುಗಳನ್ನು ಪ್ರತಿದಿನ ಓದುತ್ತಾನೆ ಎಂದು ಅಧಿಕಾರಿ ತಿಳಿಸಿದರು.

    ಜೈಲಿಗೆ ಹೊಸದಾಗಿ ಆಗಮಿಸಿದ ಕೈದಿಗಳು ಕಿರುಚಾಡಿ, ಕೂಗಾಡಿ ಅಳುತ್ತಾರೆ. ಆದರೆ ಬಾಬಾ ಇಲ್ಲಿಯವರೆಗೆ ಕೋಪಗೊಳ್ಳದೇ ಜೈಲಿನ ನಿಯಮ ನಿರ್ಬಂಧಗಳಿಗೆ ಅನುಸಾರವಾಗಿ ವರ್ತಿಸುತ್ತಿದ್ದಾನೆ. ಜೈಲಿನಲ್ಲಿ ಕುರ್ತಾ ಪೈಜಾಮ್ ಬಿಟ್ಟು ಬೇರೆ ಯಾವ ಉಡುಪನ್ನು ಧರಿಸುವಂತಿಲ್ಲ. ಕೈದಿ ಬಾಬಾ ನಂಬರ್ 8647 ಎಂದು ಸಿಂಗ್ ಹೇಳಿದರು.